ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2: ದಿ ರಿವೇಂಜ್’ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಗಳಿಸಿವೆ. ‘ಧುರಂಧರ್ 2’ ಅಬ್ಬರ ಇನ್ನೂ ಮುಂದುವರಿದಿದೆ. ಹೀಗಿರುವಾಗಲೇ ಈ ಫ್ರಾಂಚೈಸಿಯಿಂದ ಮತ್ತೊಂದು ಬಿಗ್ ಅಪ್ಡೇಟ್ ಹೊರಬಿದ್ದಿದೆ. ಈ ಹಿಂದೆ ‘ಧುರಂಧರ್ 2’ ಬಂದಾಗ ಈ ಕಥೆ ಇಲ್ಲಿಗೆ ಮುಗಿಯಿತು ಎಂದೇ ಭಾವಿಸಲಾಗಿತ್ತು. ಆದರೆ, ಈಗ ಚಿತ್ರತಂಡ ನೀಡಿರುವ ಸುಳಿವು ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.
ಜಿಯೋ ಸ್ಟುಡಿಯೋಸ್ನ ಸಹ-ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ‘ಧುರಂಧರ್ 3’ ಬರುವ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ‘ಧುರಂಧರ್ ಸರಣಿ ಇಲ್ಲಿಗೆ ಮುಗಿದಿಲ್ಲ. ಈ ವರ್ಷದ ಅಂತ್ಯದ ವೇಳೆಗೆ ನಾವು ಪ್ರೇಕ್ಷಕರಿಗೆ ಒಂದು ದೊಡ್ಡ ಸರ್ಪ್ರೈಸ್ ನೀಡಲಿದ್ದೇವೆ. ಸದ್ಯಕ್ಕೆ ನಾವು ಏನನ್ನೋ ಸಿದ್ಧಪಡಿಸುತ್ತಿದ್ದೇವೆ’ ಎಂದು ಹೇಳುವ ಮೂಲಕ ಮೂರನೇ ಭಾಗದ ಸುಳಿವು ನೀಡಿದ್ದಾರೆ.
ಈ ಹೇಳಿಕೆಯ ಬೆನ್ನಲ್ಲೇ ರಣವೀರ್ ಸಿಂಗ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ. ‘ಧುರಂಧರ್ 3’ ಶೀಘ್ರದಲ್ಲೇ ಸೆಟ್ಟೇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೊಸ ಸ್ಪೈ ಕಥೆ ಮೂಲಕ ನಿರ್ದೇಶಕರು ಬರುತ್ತಾರಾ ಎನ್ನುವ ಪ್ರಶ್ನೆಯೂ ಇದೆ.
ಗೊಂದಲ ಮೂಡಿಸಿದ ರಾಕೇಶ್ ಬೇಡಿ ಹೇಳಿಕೆ
ಒಂದೆಡೆ ನಿರ್ಮಾಪಕರು ಹೊಸ ಸರ್ಪ್ರೈಸ್ ಎಂದಿದ್ದರೆ, ಮತ್ತೊಂದೆಡೆ ಇದೇ ಚಿತ್ರದಲ್ಲಿ ಜಮೀಲ್ ಜಮಾಲಿ ಪಾತ್ರ ಮಾಡಿದ್ದ ಹಿರಿಯ ನಟ ರಾಕೇಶ್ ಬೇಡಿ ಅವರು ಮಾತ್ರ ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ‘ಮೂರನೇ ಭಾಗ ಬರಲಿದೆ ಎಂದು ನನಗೆ ಅನ್ನಿಸುತ್ತಿಲ್ಲ. ಧುರಂಧರ್ ಒಂದು ದೊಡ್ಡ ಫ್ರಾಂಚೈಸಿ, ಅದನ್ನು ಬೇರೆ ನಟರೊಂದಿಗೆ ಯಾವಾಗ ಬೇಕಾದರೂ ಮಾಡಬಹುದು. ಆದರೆ ಈ ಕಥೆ ಮುಗಿದಿದೆ’ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಧುರಂಧರ್ 2’ ವಿವಾದ ಸುಖಾಂತ್ಯ; ಆದಿತ್ಯ ಧರ್ ಬಳಿ ಕ್ಷಮೆ ಕೇಳಿದ ಸಂತೋಷ್ ಕುಮಾರ್
ಇದೇ ವೇಳೆ ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರ ಪತ್ನಿ ಹಾಗೂ ನಟಿ ಯಾಮಿ ಗೌತಮ್ ಅವರು ತಮ್ಮ ಪತಿಯ ಬಗ್ಗೆ ಮಾತನಾಡಿದ್ದಾರೆ. ‘ಸಿನಿಮಾ ಇಷ್ಟೊಂದು ದೊಡ್ಡ ಯಶಸ್ಸು ಕಂಡರೂ ನಿರ್ದೇಶk ಆದಿತ್ಯ ಸ್ವಲ್ಪವೂ ಬದಲಾಗಿಲ್ಲ. ಸೋಲು-ಗೆಲುವು ಎರಡನ್ನೂ ಅವರು ಸಮಾನವಾಗಿ ಸ್ವೀಕರಿಸುತ್ತಾರೆ. ಅವರು ಅತ್ಯಂತ ವಿನಮ್ರ ವ್ಯಕ್ತಿ. ಒಳ್ಳೆ ಕೆಲಸ ಮಾಡುವವರಿಗೆ ದೇವರಿಂದ ಒಳ್ಳೆ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಅವರ ಯಶಸ್ಸೇ ಸಾಕ್ಷಿ’ ಎಂದು ಯಾಮಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.