‘ಪೆದ್ದಿ’ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದುಬಿಟ್ಟಿದ್ದರು ಶಿವಣ್ಣ: ಕಾರಣ?

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಭಾರಿ ಬಜೆಟ್​ನ ಸಿನಿಮಾ ಇದಾಗಿದ್ದು, ರಾಮ್ ಚರಣ್ ಸೇರಿದಂತೆ ಇಡೀ ಚಿತ್ರತಂಡ ದೇಶದಾದ್ಯಂತ ಸಂಚರಿಸಿ ಸಿನಿಮಾದ ಪ್ರಚಾರ ಮಾಡುತ್ತಿದೆ. ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ಪ್ರಮುಖವಾದ ಪಾತ್ರ ಮಾಡಿದ್ದಾರೆ. ಶಿವಣ್ಣನ ಪಾತ್ರದ ಬಗ್ಗೆ ಮಾತನಾಡಿದ್ದ ರಾಮ್ ಚರಣ್ ಅದೊಂದು ಅದ್ಭುತವಾದ ಪಾತ್ರ, ಶಿವಣ್ಣ ಅದಕ್ಕೆ ಅತ್ಯಂತ ಸೂಕ್ತ ವ್ಯಕ್ತಿ ಎಂದಿದ್ದರು. ಆದರೆ ಶಿವರಾಜ್ ಕುಮಾರ್ ಅವರು ‘ಪೆದ್ದಿ’ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದುಬಿಟ್ಟಿದ್ದರಂತೆ. ಕಾರಣವೇನು?

‘ಪೆದ್ದಿ’ ಸಿನಿಮಾದ ಆಫರ್ ಮೊದಲು ಬಂದಾಗ ಶಿವಣ್ಣ ಖುಷಿಯಿಂದಲೇ ಒಪ್ಪಿಕೊಂಡಿದ್ದರು. ಆದರೆ ಆಫರ್ ಬಂದ ಕೆಲ ದಿನಗಳಲ್ಲಿಯೇ ಶಿವಣ್ಣನಿಗೆ ಅನಾರೋಗ್ಯ ಕಾಡಲು ಶುರುವಾಯ್ತು. ಈ ಬಗ್ಗೆ ಚೆನ್ನೈನಲ್ಲಿ ಮಾತನಾಡಿರುವ ಶಿವರಾಜ್ ಕುಮಾರ್, ‘ನನಗೆ ಮೊದಲು ಬುಚ್ಚಿಬಾಬು ಕತೆ ಹೇಳಿದಾಗ ಬಹಳ ಇಷ್ಟವಾಯ್ತು. ಅದೇ ದಿನ ನಾನು ರಾಮ್ ಚರಣ್ ಜೊತೆ ಸಹ ಮಾತನಾಡಿ, ಸಿನಿಮಾನಲ್ಲಿ ನಟಿಸುವೆನೆಂದು ಸಹ ಹೇಳಿದ್ದೆ. ಆದರೆ ಆ ನಂತರ ನನಗೆ ಕ್ಯಾನ್ಸರ್ ಇರುವುದು ಗೊತ್ತಾಯ್ತು. ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಬೇಕಾಯ್ತು’ ಎಂದಿದ್ದಾರೆ ಶಿವರಾಜ್ ಕುಮಾರ್.

‘ಅಮೆರಿಕದಲ್ಲಿ ಚಿಕಿತ್ಸೆ ತಡವಾಗುತ್ತದೆ, ವಿಶ್ರಾಂತಿಗೆಲ್ಲ ಸಮಯ ಬೇಕಾಗುತ್ತದೆ ಎಂದಾದಾಗ ನಾನು ನಿರ್ದೇಶಕ ಬುಚ್ಚಿಬಾಬು ಬಳಿ ಮಾತನಾಡಿದೆ, ಕಷ್ಟವಾಗುತ್ತದೆ ನಾನು ನಟಿಸುವುದಿಲ್ಲ, ನೀವು ಬೇರೆಯವರನ್ನು ನೋಡಿಕೊಳ್ಳಿ ಎಂದೆ. ಆದರೆ ಬುಚ್ಚಿಬಾಬು ಒಪ್ಪಲಿಲ್ಲ, ನಾವು ನಿಮಗಾಗಿ ಕಾಯುತ್ತೇವೆ. ನಮಗೆ ನೀವೇ ಬೇಕು ಎಂದರು. ಮಾತ್ರವಲ್ಲದೆ ನನಗಾಗಿ ಅವರು ಬಹಳ ಸಮಯ ಕಾದರು ಸಹ. ಇದಕ್ಕೆ ನಾನು ಬುಚ್ಚಿಬಾಬು ಸನಾ ಅವರಿಗೆ ಆಭಾರಿ ಆಗಿದ್ದೇನೆ’ ಎಂದಿದ್ದಾರೆ ಶಿವಣ್ಣ. 2024 ರಲ್ಲಿ ಶಿವರಾಜ್ ಕುಮಾರ್ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಯ್ತು, ಅಮೆರಿಕದ ಮಿಯಾಮಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯ್ತು. ಬಳಿಕ ಅವರು ಸಂಪೂರ್ಣವಾಗಿ ಗುಣವಾದರು.

ಇದನ್ನೂ ಓದಿ:ಚೆನ್ನೈನಲ್ಲಿ ‘ಪೆದ್ದಿ’ ಪ್ರಚಾರಕ್ಕೆ ಬಂದ ರಾಮ್ ಚರಣ್: ವಿಡಿಯೋ

ಶಿವರಾಜ್ ಕುಮಾರ್ ಅವರು ಅಮೆರಿಕದಿಂದ ವಾಪಸ್ಸಾಗಿ ಕೆಲ ವಾರಗಳ ಬಳಿಕ ಬುಚ್ಚಿಬಾಬು ಸನಾ ಶಿವಣ್ಣನ ಮನೆಗೆ ಬಂದು ಮೇಕಪ್ ಟೆಸ್ಟ್ ಮಾಡಿದ್ದರು. ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಶಿವಣ್ಣ ಮೊದಲು ಮೇಕಪ್ ಧರಿಸಿದ್ದು ‘ಪೆದ್ದಿ’ ಸಿನಿಮಾಕ್ಕಾಗಿಯೇ. ಅದಾದ ನಂತರ ಶಿವಣ್ಣ ‘ಪೆದ್ದಿ’ ಸಿನಿಮಾದ ಶೂಟಿಂಗ್​​ನಲ್ಲಿ ಭಾಗಿ ಆದರು. ‘ಪೆದ್ದಿ’ ಸಿನಿಮಾನಲ್ಲಿ ಶಿವಣ್ಣ ಗೌಡನಾಯ್ಡು ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕ ರಾಮ್ ಚರಣ್​​ಗೆ ಕುಸ್ತಿ ಹೇಳಿಕೊಡುವ ಗುರುವಿನ ಪಾತ್ರ ಅವರದ್ದು.

‘ಪೆದ್ದಿ’ ಸಿನಿಮಾನಲ್ಲಿ ಶಿವರಾಜ್ ಕುಮಾರ್, ರಾಮ್ ಚರಣ್ ಜೊತೆಗೆ ಜಾನ್ಹವಿ ಕಪೂರ್ ನಾಯಕಿ. ಬಾಲಿವುಡ್ ನಟ ದಿವ್ಯೇಂದು ವಿಲನ್, ಬಾಲಿವುಡ್ ನಟ ಬೊಮನ್ ಇರಾನಿ, ಜಗಪತಿ ಬಾಬು ಇನ್ನೂ ಹಲವರಿದ್ದಾರೆ. ಶ್ರುತಿ ಹಾಸನ್, ‘ಪೆದ್ದಿ’ ಸಿನಿಮಾದ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಹಣ ಹೂಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *