ಬೆಂಗಳೂರು, ಜೂ.5: ಕರ್ನಾಟಕ ರಾಜಕಾರಣದ ಅತ್ಯಂತ ಪ್ರಭಾವಿ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಹೊರಾಂಗಣದಲ್ಲಿ ಯಾರು ಇಲ್ಲದೆ ಒಬ್ಬಂಟಿಯಾಗಿ ಓಡಾಡುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸದಾ ಬೆಂಬಲಿಗರು, ಶಾಸಕರು ಹಾಗೂ ಅಭಿಮಾನಿಗಳಿಂದ ಸುತ್ತುವರೆದಿರುತ್ತಿದ್ದ ನಾಯಕನೊಬ್ಬ, ಅಧಿಕಾರ ಕೈತಪ್ಪಿದ ಬಳಿಕ ಹೀಗೆ ಒಂಟಿಯಾಗಿ ಕಾಣಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ. ವಿಧಾನಸೌಧದ ಕಾರಿಡಾರ್ ಹಾಗೂ ಹೊರಾಂಗಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗಂಭೀರ ಆಲೋಚನೆಯಲ್ಲಿ ಮುಳುಗಿ, ಕೈಗಳನ್ನು ಹಿಂದೆ ಕಟ್ಟಿಕೊಂಡು ಒಬ್ಬರೇ ನಡೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿದೆ. ಸಾಮಾನ್ಯವಾಗಿ ಮುಖ್ಯಮಂತ್ರಿಯಾಗಿದ್ದಾಗ ಅಥವಾ ಅಧಿಕಾರದಲ್ಲಿದ್ದಾಗ ಅವರ ಹಿಂದೆ ನೂರಾರು ಜನರ ದಂಡೇ ಇರುತ್ತಿತ್ತು. ಆದರೆ, ಪ್ರಸ್ತುತ ರಾಜಕೀಯ ಬದಲಾವಣೆಗಳ ನಂತರ ಅವರು ಈ ರೀತಿ ಒಂಟಿಯಾಗಿ ಓಡಾಡುತ್ತಿರುವುದನ್ನು ಕಂಡು ನೆಟ್ಟಿಗರು “ಅಧಿಕಾರ ಹೋದ ಮೇಲೆ ರಾಜಕಾರಣಿಗಳು ಒಬ್ಬಂಟಿಯಾಗುವುದು ಸಹಜ” ಎಂದು ವಿಶ್ಲೇಷಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಎಕ್ಸ್ (ಟ್ವಿಟರ್), ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ಗಳಲ್ಲಿ ಈ ವಿಡಿಯೋ ಶೇರ್ ಆಗುತ್ತಿದ್ದು, ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಸಿದ್ದರಾಮಯ್ಯ ಅವರ ವಿರೋಧಿಗಳು “ಅಧಿಕಾರ ಕಳೆದುಕೊಂಡ ನಂತರ ಲೀಡರ್ ಒಬ್ಬಂಟಿಯಾಗಿದ್ದಾರೆ” ಎಂದು ಲೇವಡಿ ಮಾಡುತ್ತಿದ್ದರೆ, ಅವರ ಅಭಿಮಾನಿಗಳು “ಅವರು ಒಬ್ಬಂಟಿಯಾಗಿಲ್ಲ, ಅವರ ಹಿಂದೆ ಕೋಟ್ಯಂತರ ಜನರಿದ್ದಾರೆ. ಅವರು ಸದಾ ಜನರ ನಾಯಕ” ಎಂದು ಬೆಂಬಲವಾಗಿ ಕಮೆಂಟ್ ಮಾಡುತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ