ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನದಿಂದ ಗುಂಡಿನ ದಾಳಿ; 30 ಜನ ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ – Kannada News

ನವದೆಹಲಿ, ಜೂನ್ 9: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿರುವ ಹಣದುಬ್ಬರ, ಗಗನಕ್ಕೇರಿರುವ ವಿದ್ಯುತ್ ಬಿಲ್‌ಗಳು, ಗೋಧಿ ಹಿಟ್ಟಿನ ಬೆಲೆ ಏರಿಕೆ ಹಾಗೂ ಸರ್ಕಾರದ ಅಸಮರ್ಪಕ ನೀತಿಗಳ ವಿರುದ್ಧ ಸಾರ್ವಜನಿಕರು ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ. ‘ಅವಮಿ ಆಕ್ಷನ್ ಕಮಿಟಿ’ ನೇತೃತ್ವದಲ್ಲಿ ಮುಜಾಫರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಜನಾಂದೋಲನ ತೀವ್ರಗೊಂಡಿದೆ. ಈ ವೇಳೆ ಪ್ರತಿಭಟನಾಕಾರರು ಪಾಕಿಸ್ತಾನಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ

ರಾವಲ್ಕೋಟ್‌ನಲ್ಲಿ ಜನರು ಬೆಳಿಗ್ಗೆಯಿಂದಲೇ ಎಲ್ಲಾ ಪ್ರಮುಖ ರಸ್ತೆಗಳನ್ನು ನಿರ್ಬಂಧಿಸುತ್ತಿದ್ದಾರೆ. ಪ್ರತಿಭಟನಾಕಾರರು ಭಿಂಬರ್‌ನಿಂದ ರಾವಲ್ಕೋಟ್ ಕಡೆಗೆ ಮುನ್ನಡೆಯದಂತೆ ತಡೆಯಲು ಪಾಕಿಸ್ತಾನಿ ಪೊಲೀಸರು, ಸೇನೆ ಮತ್ತು ರೇಂಜರ್‌ಗಳು ತಡೆದರು. ಪ್ರತಿಭಟನಾಕಾರರ ಮೇಲೆ ನೇರವಾಗಿ ಗುಂಡು ಹಾರಿಸುವುದರ ಜೊತೆಗೆ, ಅಶ್ರುವಾಯು ಬಳಸಲಾಯಿತು. ಅತ್ಯಂತ ಅಪಾಯಕಾರಿ ಪೆಲೆಟ್ ಗನ್‌ಗಳನ್ನು ಸಹ ಬಳಸಿದ್ದರಿಂದ 7 ಜನರು ಗಂಭೀರವಾಗಿ ಗಾಯಗೊಂಡರು. ಪಲಾಂದ್ರಿ ಮತ್ತು ಸುಧಾನೋತಿಯಂತಹ ಪ್ರದೇಶಗಳಲ್ಲಿ, ಜನರು ಕೈಯಲ್ಲಿ ಕೋಲುಗಳನ್ನು ಹಿಡಿದು ಪಾಕಿಸ್ತಾನಿ ಪಡೆಗಳನ್ನು ಎದುರಿಸಿದರು. ಪ್ರತಿಭಟನೆಗಳಿಂದಾಗಿ ಪಿಒಕೆಯಾದ್ಯಂತ ಮಾರುಕಟ್ಟೆಗಳು ಮತ್ತು ವ್ಯಾಪಾರ ಸಂಸ್ಥೆಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟವು.

ಇದನ್ನೂ ಓದಿ: ಪಹಲ್ಗಾಮ್ ದಾಳಿ ತನಿಖೆಯಲ್ಲಿ ಮಹತ್ವದ ಸುಳಿವು: ಉಗ್ರರು ಬಳಸಿದ್ದ ಫೋನ್​ಗೆ ಪಾಕಿಸ್ತಾನ ಬ್ಯಾಂಕ್​ ಲಿಂಕ್

ಈ ವೇಳೆ ಭದ್ರತಾ ಪಡೆಗಳು ನಡೆಸಿದ ಲಘು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮತ್ತು ಪ್ಲಾಸ್ಟಿಕ್ ಹಾಗೂ ಜೀವಂತ ಗುಂಡುಗಳ ದಾಳಿಯಿಂದಾಗಿ 200ಕ್ಕೂ ಹೆಚ್ಚು ಪ್ರತಿಭಟನಾಕಾರರು ತೀವ್ರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಈ ಘಟನೆಯ ನಂತರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪ್ರಮುಖ ನಗರಗಳಲ್ಲಿ ಕರ್ಫ್ಯೂ ಪರಿಸ್ಥಿತಿ ಇದೆ.

ಹಿಂಸಾಚಾರದ ವೀಡಿಯೊಗಳು ಮತ್ತು ಮಾಹಿತಿಗಳು ಹರಡದಂತೆ ತಡೆಯಲು ಪಾಕಿಸ್ತಾನ ಸರ್ಕಾರವು ಇಡೀ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪಾಕಿಸ್ತಾನ ಸರ್ಕಾರವು ಪ್ರತಿಭಟನೆಯನ್ನು ಹತ್ತಿಕ್ಕಲು ಹೆಚ್ಚುವರಿ ಸೇನಾ ಪಡೆಗಳನ್ನು ನಿಯೋಜಿಸಿದೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಪಾಕಿಸ್ತಾನಿ ಪಡೆಗಳು ನಡೆಸಿರುವ ಈ ಭೀಕರ ದಾಳಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆಗೆ ಒಳಗಾಗಿದ್ದು, ಭಾರಿ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂದು ಸ್ಥಳೀಯ ನಾಯಕರು ಆರೋಪಿಸಿದ್ದಾರೆ.

ಪ್ರತಿಭಟನೆಗೆ ಕಾರಣವೇನು?:

ಪಿಒಕೆ ಜನರು ಮುಖ್ಯವಾಗಿ 38 ಬೇಡಿಕೆಗಳ ಈಡೇರಿಕೆಗಾಗಿ ಈ ದೀರ್ಘ ಹೋರಾಟವನ್ನು ನಡೆಸುತ್ತಿದ್ದಾರೆ. ಮುಜಫರಾಬಾದ್‌ನ ನೀಲಂ ಸೇತುವೆಯಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದವು. ಪಾಕಿಸ್ತಾನದ ಭಾಗವಲ್ಲದ ಪಿಒಕೆ ಪ್ರದೇಶದಲ್ಲಿ ಮಂಗಳಾ ಅಣೆಕಟ್ಟಿನಂತಹ ಪ್ರತಿಷ್ಠಿತ ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಅಗ್ಗದ ವಿದ್ಯುತ್ ಮತ್ತು ಸಬ್ಸಿಡಿ ಬೆಲೆಯಲ್ಲಿ ಹಿಟ್ಟು, ಅಕ್ಕಿ ಮತ್ತು ಬೇಳೆಕಾಳುಗಳನ್ನು ಒದಗಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ; ಪಾಕಿಸ್ತಾನ-ಚೀನಾಗೆ ವಿದೇಶಾಂಗ ಸಚಿವಾಲಯ ಚಾಟಿ

ಪಿಒಕೆ ಸಂಸತ್ತಿನಲ್ಲಿರುವ 12 ನಿರಾಶ್ರಿತರ ಸ್ಥಾನಗಳನ್ನು ತಕ್ಷಣ ತೆಗೆದುಹಾಕಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ವಾಸ್ತವವಾಗಿ, ಈ 12 ಸ್ಥಾನಗಳನ್ನು ಭಾರತೀಯ ಕಾಶ್ಮೀರದಿಂದ ವಲಸೆ ಬಂದವರು ಮತ್ತು ಪ್ರಸ್ತುತ ಪಾಕಿಸ್ತಾನದ ವಿವಿಧ ನಗರಗಳಲ್ಲಿ ವಾಸಿಸುತ್ತಿರುವವರಿಗೆ ಮೀಸಲಿಡಲಾಗಿತ್ತು. ಆದರೆ, ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ಇಸ್ಲಾಮಾಬಾದ್ ಮತ್ತು ಕರಾಚಿಯಲ್ಲಿ ಅಡಗಿರುವ ‘ಹಿಜ್ಬುಲ್ ಮುಜಾಹಿದ್ದೀನ್’ ಭಯೋತ್ಪಾದಕರು ಮತ್ತು ಅವರ ಕುಟುಂಬ ಸದಸ್ಯರನ್ನು ಈ 12 ಸ್ಥಾನಗಳಿಗೆ ಆಯ್ಕೆ ಮಾಡುತ್ತಿದೆ.

ಇದರಿಂದಾಗಿ, ಪಿಒಕೆ ಸಂಸತ್ತಿನ ಒಟ್ಟು 45 ಸ್ಥಾನಗಳಲ್ಲಿ 12 ಸ್ಥಾನಗಳು ನೇರವಾಗಿ ಪಾಕಿಸ್ತಾನ ಸೇನೆಯ ಕೈಗೆ ಹೋಗುತ್ತಿವೆ. ಇವುಗಳ ಸಹಾಯದಿಂದ, ಪಾಕಿಸ್ತಾನ ಸೇನೆಯು ಪಿಒಕೆಯ ಸ್ಥಳೀಯ ಜನರ ಇಚ್ಛೆಗೆ ವಿರುದ್ಧವಾಗಿ ತನ್ನ ನೆಚ್ಚಿನ ವ್ಯಕ್ತಿಯನ್ನು ಅಲ್ಲಿ ಪ್ರಧಾನಿಯನ್ನಾಗಿ ಪ್ರತಿಷ್ಠಾಪಿಸುತ್ತಿದೆ ಎಂದು ಇಲ್ಲಿನ ಜನರು ಆರೋಪಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *