ಶಿವಮೊಗ್ಗ, ಜೂ.11: ಜೈಲಿನಲ್ಲಿರುವ ಕೊಲೆ ಆರೋಪಿಯೊಬ್ಬ ತನ್ನ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಸ್ವಂತ ಪತ್ನಿಯ ಮೇಲೆಯೇ ದಾಳಿ ನಡೆಸಲು ಬುರ್ಖಾಧಾರಿ ಗ್ಯಾಂಗ್ ಕಳುಹಿಸಿರುವ ಆಘಾತಕಾರಿ ಘಟನೆ ಶಿವಮೊಗ್ಗದ ಕೆ.ಆರ್. ಪುರಂನಲ್ಲಿ ನಡೆದಿದೆ. ಆದರೆ, ಸ್ಥಳೀಯ ನಾಗರಿಕರ ಸಮಯಪ್ರಜ್ಞೆಯಿಂದಾಗಿ ಬುರ್ಖಾ ಧರಿಸಿ ಬಂದಿದ್ದ ಗ್ಯಾಂಗ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು, ಹಿಗ್ಗಾಮುಗ್ಗಾ ಧರ್ಮದೇಟು ತಿಂದು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕಳೆದ ಒಂದು ವರ್ಷದಿಂದ ಕೊಲೆ ಪ್ರಕರಣವೊಂದರ ವಿಚಾರಣಾಧೀನ ಖೈದಿಯಾಗಿರುವ ವ್ಯಕ್ತಿಯೇ ಈ ಇಡೀ ಷಡ್ಯಂತ್ರದ ಮಾಸ್ಟರ್ ಮೈಂಡ್. ಜೈಲಿನಲ್ಲಿರುವ ತನಗೆ ಐಷಾರಾಮಿ ಜೀವನ ನಡೆಸಲು ಮತ್ತು ಖರ್ಚಿಗೆ ಹಣ ನೀಡುತ್ತಿಲ್ಲ ಹಾಗೂ ತನ್ನನ್ನು ನೋಡಲು ಜೈಲಿಗೆ ಬರುತ್ತಿಲ್ಲ ಎಂಬ ಕಾರಣಕ್ಕೆ ಈತ ಪತ್ನಿ ತಬಸ್ಸುಮ್ ಬಾನು ವಿರುದ್ಧ ತೀವ್ರ ಆಕ್ರೋಶಗೊಂಡಿದ್ದನು. ಪತ್ನಿ ಮತ್ತು ಮಕ್ಕಳು ಜೀವನ ನಡೆಸುವುದೇ ಕಷ್ಟವಾಗಿರುವಾಗ ಪತಿಯ ಈ ಬೇಡಿಕೆಗಳಿಗೆ ಸ್ಪಂದಿಸಿರಲಿಲ್ಲ. ಇದರಿಂದ ಸೇಡು ತೀರಿಸಿಕೊಳ್ಳಲು ಜೈಲಿನಿಂದಲೇ ತನ್ನ ಸಹಚರರಿಗೆ ಪತ್ನಿಗೆ ಹೆದರಿಸಿ, ಮುಗಿಸುವಂತೆ ಸುಪಾರಿ ನೀಡಿದ್ದನು.
ಪತಿಯ ಆದೇಶದಂತೆ ಅಸ್ಲಾಂ (25), ಮಹೇಶ್ (20), ದರ್ಶನ್ (20) ಮತ್ತು ಮುನ್ನಾ (24) ಎಂಬ ನಾಲ್ವರು ಯುವಕರು ತಮ್ಮ ಗುರುತು ಸಿಗದಂತೆ ಸಂಪೂರ್ಣ ಬುರ್ಖಾ ಧರಿಸಿ ಕೆ.ಆರ್. ಪುರಂನಲ್ಲಿರುವ ಮಹಿಳೆಯ ಮನೆ ಬಳಿ ಬಂದಿದ್ದಾರೆ. ಆದರೆ, ಇವರ ವಿಚಿತ್ರ ನಡವಳಿಕೆ ಮತ್ತು ಚಲನವಲನಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳಿಗೆ ತಕ್ಷಣವೇ ಅನುಮಾನ ಬಂದಿದೆ. ತಡಮಾಡದ ಸಾರ್ವಜನಿಕರು ಒಟ್ಟಾಗಿ ನಾಲ್ವರನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಥಳೀಯರು ತಪಾಸಣೆ ನಡೆಸಿದಾಗ ಬುರ್ಖಾ ಒಳಗಿದ್ದ ಗಂಡಸರ ಅಸಲಿ ಮುಖವಾಡ ಬಯಲಾಗಿದೆ. ಇದರಿಂದ ಕೆರಳಿದ ಸಾರ್ವಜನಿಕರು ನಾಲ್ವರಿಗೂ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಗಲಾಟೆಯ ನಡುವೆ ಮುನ್ನಾ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ, ಉಳಿದ ಮೂವರು ಆರೋಪಿಗಳಾದ ಅಸ್ಲಾಂ, ಮಹೇಶ್ ಮತ್ತು ದರ್ಶನ್ನನ್ನು ಹಿಡಿದು ದೊಡ್ಡಪೇಟೆ ಪೊಲೀಸರಿಗೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಅಡ್ಡ ಬಂದ ನಾಗರ ಹಾವು: ಬೈಕ್ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಮಹಿಳೆಯ ಪ್ರಾಣ ಉಳಿದಿದೆ ಎಂದು ಕುಟುಂಬದವರು ಹೇಳಿದ್ದಾರೆ. ಬುರ್ಖಾ ಧರಿಸಿ ಇಂತಹ ಅಪರಾಧ ಕೃತ್ಯಗಳಿಗೆ ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 7:25 pm, Thu, 11 June 26