ತುಮಕೂರು, ಜೂನ್ 22: ಮನೆಗಳ್ಳತನವನ್ನೇ (theft) ಕಾಯಕ ಮಾಡಿಕೊಂಡಿದ್ದ ವ್ಯಕ್ತಿ ಮತ್ತು ಆತನಿಗೆ ಸಾಥ್ ನೀಡಿದ ಪತ್ನಿ ಇದೀಗ ಕುಣಿಗಲ್ ಪೊಲೀಸರ ಅತಿಥಿ ಆಗಿದ್ದಾರೆ. ಮಂಜುನಾಥ ಅಲಿಯಾಸ್ ಕೋಳಿ ಮಂಜ (30) ಮತ್ತು ಅನಿತಾ (30) ಬಂಧಿತ ಆರೋಪಿಗಳು. ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತಿದ್ದರು. ಬಳಿಕ ಬಂದ ಹಣದಲ್ಲಿ ಗೋವಾಗೆ ತೆರಳಿ ದಂಪತಿ ಮೋಜು ಮಸ್ತಿ ಮಾಡುತ್ತಿದ್ದರು. ಸದ್ಯ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಮುಖ್ಯಾಂಶಗಳು
- ಬೆಂಗಳೂರು ಮೂಲದ ದಂಪತಿಯಿಂದ ಮನೆಗಳ್ಳತನ
- ಕುಣಿಗಲ್ನಲ್ಲಿ 30 ಲಕ್ಷ ರೂ ನಗದು ದೋಚಿದ ಖತರ್ನಾಕ್ ಜೋಡಿ
- ಪೊಲೀಸರ ಬಲೆಗೆ ಬಿದ್ದ ಕಳ್ಳ ದಂಪತಿ
ಮಂಜುನಾಥ್ ಹಾಗೂ ಅನಿತಾ ಮೂಲತಃ ಬೆಂಗಳೂರಿನ ರಾಮಚಂದ್ರಪುರದ ನಿವಾಸಿಗಳು. ಈ ದಂಪತಿ ಸಾಮಾನ್ಯರಲ್ಲ, ಇವರ ಅಸಲಿ ಸಂಗತಿ ತಿಳಿದ ಕುಣಿಗಲ್ ಪೊಲೀಸರೇ ಈಗ ಒಂದು ಕ್ಷಣ ದಂಗಾಗಿದ್ದು, ಕಳ್ಳತನ ಕೃತ್ಯವನ್ನೇ ಕಾಯಕ ಮಾಡಿಕೊಂಡ ಇವರ ಗೋವಾ ಶೋಕಿ ಇದೀಗ ಬಯಲಾಗಿದೆ.
ಗೋವಾದಲ್ಲಿ ಕದ್ದ ಬೈಕ್ ಬಳಸಿ ಕುಣಿಗಲ್ನಲ್ಲಿ ಮನೆಗಳ್ಳತನ
ಮಂಜುನಾಥ್ ಅಲಿಯಾಸ್ ಕೋಳಿ ಮಂಜನಿಗೆ ಕಳ್ಳತನವೇ ಕಾಯಕ. ಇತನ ಮೇಲೆ 30ಕ್ಕೂ ಹೆಚ್ಚು ಪ್ರಕರಣಗಳಿವೆ. ಬೀಗ ಹಾಕಿದ ಒಂಟಿ ಮನೆ ಟಾರ್ಗೆಟ್ ಮಾಡುವ ಈತ, ರಾತ್ರಿ ವೇಳೆ ಬಂದು ಕೈಚಳಕ ತೋರಿಸುತ್ತಿದ್ದ. ಇದೇ ರೀತಿ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಪಾಷ ಎಂಬುವವರ ಮನೆಯಲ್ಲಿ ಮೇ 29ರಂದು ಕೈಚಳಕ ತೋರಿಸಿದ್ದ.
30 ಲಕ್ಷ ರೂ ನಗದು ಸಹಿತ ಚಿನ್ನಾಭರಣ ದೋಚಿ ಪರಾರಿ
ಅಂದು ಹಬ್ಬ ಹಿನ್ನಲೆ ಪಾಷ ನೆಲಮಂಗಲದ ಸಂಬಂಧಿಕರ ಮನೆಗೆ ತೆರಳಿದ್ದರು. ಆದರೆ ಈ ವೇಳೆ ಬೀಗ ಮುರಿದು ಎಂಟ್ರಿಕೊಟ್ಟ ಈ ಖದೀಮ, ಸೈಟ್ ಖರೀದಿಗೆಂದು ಇಟ್ಟಿದ್ದ 30 ಲಕ್ಷ ರೂ ನಗದು ಸಹಿತ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಬಳಿಕ ಪಕ್ಕದ ಮನೆಯವರ ಮಾಹಿತಿ ಆಧರಿಸಿ ಪಾಷ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೊನೆಗೂ ಆರೋಪಿ ಅಂದರ್ ಆಗಿದ್ದಾನೆ.
ಗೋವಾದಲ್ಲಿ ಮೋಜು, ಮಸ್ತಿ
ಅಸಲಿಗೆ ಮನೆಗಳ್ಳತನ ಕೃತ್ಯ ಬೆನ್ನತ್ತಿದ ಕುಣಿಗಲ್ ಪೊಲೀಸರಿಗೆ ಆರೋಪಿ ಬಳಸಿದ ಬೈಕ್ ಗೋವಾ ಮೂಲದ್ದು ಅನ್ನೊದು ತಲೆಗೆ ಹುಳ ಬಿಟ್ಟಿತ್ತು. ಕಾರ್ಯಾಚರಣೆ ಆರಂಭಿಸಿ ಸಿಸಿಟಿವಿ ಜಾಡು ಹಿಡಿದ ಪೊಲೀಸರಿಗೆ ಕೊನೆಗೂ ಕೊಳಿ ಮಂಜ ಪತ್ತೆಯಾಗಿದ್ದು, ಈತನ ಕೃತ್ಯಕ್ಕೆ ಸಾಥ್ ನೀಡಿದ್ದ ಪತ್ನಿ ಅನಿತಾ ಸಂಗತಿ ಸಹ ಬಯಲಾಗಿದೆ. ಕದ್ದ ಚಿನ್ನಾಭರಣವನ್ನು ಆಕೆಯ ಮುಖಾಂತರವೇ ಅಡವಿರಿಸಿ ಬಂದ ಹಣದಲ್ಲಿ ದಂಪತಿ ಗೋವಾಗೆ ತೆರಳುತ್ತಿದ್ದರು. ಬಳಿಕ ಅಲ್ಲಿ ಕ್ಯಾಸಿನೋ ಅಂತ ಮೋಜು, ಮಸ್ತಿ ಮಾಡುತ್ತಿದ್ದರು.
ಇದನ್ನೂ ಓದಿ: ಗದಗದಲ್ಲಿ ಬಡ್ಡಿ ಬಕಾಸುರರ ಅಟ್ಟಹಾಸ: 17 ಲಕ್ಷ ರೂ. ಸಾಲ ಕೊಟ್ಟು ರೈತನ 5 ಎಕರೆ ಜಮೀನು ನುಂಗಿದ ರೌಡಿಶೀಟರ್ ಗ್ಯಾಂಗ್
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೊ ಹಾಗೆ ಮನೆಗಳ್ಳತನ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ದಂಪತಿಗೆ ಕುಣಿಗಲ್ ಪೊಲೀಸರು ಇದೀಗ ಶಾಕ್ ನೀಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳ ವಶಕ್ಕೆ ಪಡೆದ ಪೊಲೀಸರು ದಂಪತಿಯ ವಿಚಾರಣೆ ಮುಂದುವರೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.