ಕರ್ನಾಟಕ ಹೈಕೋರ್ಟ್Image Credit source: Getty Images
ಬೆಂಗಳೂರು, ಜೂನ್ 23: ಅಪರೂಪದ ಪ್ರಕರಣವೊಂದರಲ್ಲಿ 23 ವರ್ಷದ ದಿವ್ಯಾಂಗ ಯುವತಿಯ ಗರ್ಭಾಶಯವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಈ ಶಸ್ತ್ರಚಿಕಿತ್ಸೆಯನ್ನು ನಗರದ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಯುವತಿ ದಿನನಿತ್ಯದ ಮೂಲಭೂತ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳುವುದು, ನಿರ್ವಹಿಸುವುದು ಹಾಗೂ ಸ್ವತಂತ್ರವಾಗಿ ಬದುಕುವುದು ಸಾಧ್ಯವಾಗದ ಸ್ಥಿತಿಯಲ್ಲಿರುವುದನ್ನು ಗಮನಿಸಿ ಈ ಸಂಬಂಧ ನ್ಯಾಯಾಲಯ ತೀರ್ಪು ನೀಡಿದೆ.
ಪೋಷಕರ ವಾದ
ಯುವತಿಯ ಮಾಸಿಕ ಋತುಚಕ್ರ ಅನಿಯಮಿತವಾಗಿದ್ದು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗದ ಕಾರಣ ಮರುಮರು ಸೋಂಕುಗಳು, ಜ್ವರ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಪೋಷಕರು ನ್ಯಾಯಾಲಯಕ್ಕೆ ತಿಳಿಸಿದ್ದರು. ತಾವು ವಯೋವೃದ್ಧರಾಗುತ್ತಿದ್ದು, ಮಗಳ ಏಕೈಕ ಆರೈಕೆದಾರರಾಗಿರುವ ಕಾರಣ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಒತ್ತಡ ಹೆಚ್ಚಾಗಿದೆ ಎಂದು ಉಲ್ಲೇಖಿಸಿ ಅವರು ಈ ಸಂಬಂಧ ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: 30 ವರ್ಷ ದಾಟಿದ ಬಳಿಕ ಪ್ರತಿಯೊಬ್ಬ ಮಹಿಳೆಯೂ ತಪ್ಪದೇ ಈ ಅಭ್ಯಾಸಗಳನ್ನು ಪಾಲಿಸಬೇಕು
ಯುವತಿ ಗ್ಲೋಬಲ್ ಡೆವಲಪ್ಮೆಂಟ್ ಡಿಲೆ ಮತ್ತು ಮೊಡರೇಟ್ ಪರ್ಮನೆಂಟ್ ಇಂಟಲೆಕ್ಚುವಲ್ ಆ್ಯಂಡ್ ಡೆವಲಪ್ಮೆಂಟಲ್ ಡಿಸಾಬಿಲಿಟಿ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಯ ಸಾಮಾಜಿಕ ವಯಸ್ಸು ಸುಮಾರು 5 ವರ್ಷ 4 ತಿಂಗಳ ಮಗುವಿನ ಮಟ್ಟದಲ್ಲಿದೆ. ಆಕೆಯ ಐಕ್ಯೂ (IQ) 36 ಆಗಿದ್ದು, ಶೇ.75ರಷ್ಟು ಶಾಶ್ವತ ಅಂಗವೈಕಲ್ಯವಿದೆ. ಜೊತೆಗೆ, ಆಕೆ ಅಪಸ್ಮಾರ (seizures) ಸಮಸ್ಯೆಯನ್ನೂ ಎದುರಿಸುತ್ತಿರುವ ಬಗ್ಗೆ ವೈದ್ಯಕೀಯ ಮಂಡಳಿ ಕೂಡ ವರದಿ ನೀಡಿತ್ತು.
ಹೀಗಾಗಿ ಈ ಸಂಬಂಧ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಆದೇಶ ನೀಡಿದ್ದು, ಈ ಶಸ್ತ್ರಚಿಕಿತ್ಸೆಯನ್ನು ಆರೋಗ್ಯ, ಸ್ವಚ್ಛತೆ, ಘನತೆ, ಸುರಕ್ಷತೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದಲೇ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದು ಜನಸಂಖ್ಯೆ ನಿಯಂತ್ರಣ, ಬಲವಂತದ ಸಂತಾನೋತ್ಪತ್ತಿ ತಡೆ ಅಥವಾ ಅಂಗವೈಕಲ್ಯ ಹೊಂದಿರುವ ವ್ಯಕ್ತಿಯ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶದ ಕ್ರಮವಲ್ಲ. ಬದಲಾಗಿ, ಯುವತಿಯ ಆರೋಗ್ಯ ಮತ್ತು ಕಲ್ಯಾಣದ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾದ ನಿರ್ಧಾರ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.