ಬೆಂಗಳೂರು, ಜೂ.27: ರಾಜ್ಯದಲ್ಲಿ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಮಹತ್ತರ ತಾಂತ್ರಿಕ ಹೆಜ್ಜೆಯನ್ನಿಟ್ಟಿದೆ. ರಾಜ್ಯಾದ್ಯಂತ ಇರುವ ಹೈ ವೋಲ್ಟೇಜ್ (HV) ಮತ್ತು ಎಕ್ಸ್ಟ್ರಾ ಹೈ ವೋಲ್ಟೇಜ್ (EHV) ವಿದ್ಯುತ್ ಪ್ರಸರಣ ಲೈನ್ಗಳ ನಿಖರ ತಪಾಸಣೆಗಾಗಿ ಕೆಪಿಟಿಸಿಎಲ್ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನವನ್ನು (Drone Technology) ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ. ಈ ಹೊಸ ತಂತ್ರಜ್ಞಾನದ ಬಳಕೆಯಿಂದಾಗಿ ರಾಜ್ಯದಲ್ಲಿ ತಾಂತ್ರಿಕ ದೋಷಗಳಿಂದ ಉಂಟಾಗುತ್ತಿದ್ದ ವಿದ್ಯುತ್ ವ್ಯತ್ಯಯಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿದೆ ಎಂದು ನಿಗಮದ ಅಧಿಕೃತ ಪ್ರಕಟಣೆ ತಿಳಿಸಿದೆ.
ಕೆಪಿಟಿಸಿಎಲ್ ಅಧಿಕಾರಿಗಳು ಇದುವರೆಗೆ ಸುಮಾರು 11,000 ವಿದ್ಯುತ್ ಪ್ರಸರಣ ಟವರ್ಗಳನ್ನು ಡ್ರೋನ್ ಮೂಲಕ ಯಶಸ್ವಿಯಾಗಿ ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಬರೋಬ್ಬರಿ 1.5 ಲಕ್ಷಕ್ಕೂ ಹೆಚ್ಚು ತಾಂತ್ರಿಕ ದೋಷಗಳನ್ನು ಮೊದಲೇ ಪತ್ತೆಹಚ್ಚಿ, ಅವುಗಳನ್ನು ಯಶಸ್ವಿಯಾಗಿ ಸರಿಪಡಿಸಲಾಗಿದೆ. ಈ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಪ್ರಸರಣ ವಲಯದ ವಿದ್ಯುತ್ ವ್ಯತ್ಯಯ ಪ್ರಕರಣಗಳ ಸಂಖ್ಯೆ 519 ರಿಂದ ಕೇವಲ 73 ಕ್ಕೆ ಕುಸಿದಿದೆ. ಅಂದರೆ ವಿದ್ಯುತ್ ಕಡಿತದಲ್ಲಿ ಶೇ. 85 ರಷ್ಟು ಬೃಹತ್ ಇಳಿಕೆ ಕಂಡಂತಾಗಿದೆ. ಇದುವರೆಗೆ ಒಟ್ಟು 3,370 ಕಿಲೋಮೀಟರ್ಗಿಂತಲೂ ಹೆಚ್ಚು ಉದ್ದದ ವಿದ್ಯುತ್ ಮಾರ್ಗವನ್ನು ಡ್ರೋನ್ ಮೂಲಕ ಸಮೀಕ್ಷೆ ಮಾಡಲಾಗಿದ್ದು, ಇದರಲ್ಲಿ 2,500 ಕಿ.ಮೀ ಗೂ ಹೆಚ್ಚು 220 KV ಲೈನ್ಗಳು ಮತ್ತು 843 ಕಿ.ಮೀ ಉದ್ದದ 400 KV ಲೈನ್ಗಳು ಸೇರಿವೆ.
ನಮ್ಮ ಗಮನವು ಈಗ ವಿದ್ಯುತ್ ದೋಷ ಸಂಭವಿಸಿದ ನಂತರ ದುರಸ್ತಿ ಮಾಡುವುದಕ್ಕಿಂತ, ದೋಷ ಬರುವ ಮುನ್ನವೇ ಅಪಾಯಗಳನ್ನು ಗುರುತಿಸಿ ತಡೆಯುವುದರ ಕಡೆಗೆ ಬದಲಾಗಿದೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಡ್ರೋನ್ಗಳಲ್ಲಿ ಅಳವಡಿಸಲಾಗಿರುವ ಹೈ-ರೆಸಲ್ಯೂಶನ್ ಕ್ಯಾಮೆರಾಗಳು, ಥರ್ಮಲ್ ಇಮೇಜಿಂಗ್ ಸಿಸ್ಟಮ್ (ಶಾಖ ಪತ್ತೆ ಹಚ್ಚುವಿಕೆ) ಮತ್ತು ಲಿಡಾರ್ ಸೆನ್ಸಾರ್ಗಳು ದಟ್ಟವಾದ ಕಾಡುಗಳು, ಗುಡ್ಡಗಾಡು ಪ್ರದೇಶಗಳು ಹಾಗೂ ಜನನಿಬಿಡ ನಗರ ಪ್ರದೇಶಗಳಲ್ಲಿ ಹಾದುಹೋಗುವ ವಿದ್ಯುತ್ ತಂತಿಗಳು ಮತ್ತು ಇನ್ಸುಲೇಟರ್ಗಳನ್ನು ಅತ್ಯಂತ ಹತ್ತಿರದಿಂದ ಪರಿಶೀಲಿಸುತ್ತವೆ. ಲೂಸ್ ಕನೆಕ್ಷನ್ಗಳಿಂದಾಗಿ ಉಂಟಾಗುವ ಅಸಹಜ ತಾಪಮಾನವನ್ನು ಈ ಥರ್ಮಲ್ ಕ್ಯಾಮೆರಾಗಳು ತಕ್ಷಣವೇ ಪತ್ತೆಹಚ್ಚುತ್ತವೆ. ಈ ದತ್ತಾಂಶಗಳನ್ನು ಕೆಪಿಟಿಸಿಎಲ್ನ ಡಿಜಿಟಲ್ ವ್ಯವಸ್ಥೆಗೆ ಸೇರಿಸಲಾಗುತ್ತಿದ್ದು, ಶೀಘ್ರದಲ್ಲೇ ಬರಲಿರುವ ‘ಡಿಜಿಟಲ್ ಟ್ವಿನ್ ಪ್ಲಾಟ್ಫಾರ್ಮ್’ ಮೂಲಕ ಕೇಂದ್ರ ನಿಯಂತ್ರಣ ಕೊಠಡಿಯಿಂದಲೇ ಇಡೀ ರಾಜ್ಯದ ವಿದ್ಯುತ್ ಜಾಲವನ್ನು ರಿಯಲ್-ಟೈಮ್ನಲ್ಲಿ ಮೇಲ್ವಿಚಾರಣೆ ಮಾಡಬಹುದು.
ಇದನ್ನೂ ಓದಿ: ಕೆಎಸ್ಆರ್ಟಿಸಿ ಭರ್ಜರಿ ಕಾರ್ಯಾಚರಣೆ: ಟಿಕೆಟ್ ಇಲ್ಲದೆ ಪ್ರಯಾಣಿಸಿದವರಿಂದ ಒಂದೇ ತಿಂಗಳಲ್ಲಿ 9 ಲಕ್ಷ ರೂ. ದಂಡ ವಸೂಲಿ
ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಈ ಕುರಿತು ಮಾತನಾಡಿ, “ಕರ್ನಾಟಕದ ಸುಮಾರು 45,000 ಕಿಲೋಮೀಟರ್ ವ್ಯಾಪ್ತಿಯ ವಿಶಾಲವಾದ ವಿದ್ಯುತ್ ಪ್ರಸರಣ ಜಾಲವನ್ನು ಈ ಹಿಂದಿನ ವಿಧಾನಗಳಲ್ಲಿ ಪರಿಶೀಲಿಸುವುದು ಅತ್ಯಂತ ಕಠಿಣ ಮತ್ತು ಸಮಯ ತೆಗೆದುಕೊಳ್ಳುವ ಕೆಲಸವಾಗಿತ್ತು. ಆದರೆ ಥರ್ಮಲ್ ಇಮೇಜಿಂಗ್ ಮತ್ತು ಲಿಡಾರ್ ತಂತ್ರಜ್ಞಾನದ ಡ್ರೋನ್ಗಳ ಮೂಲಕ ನಾವು ಕೇವಲ ಕೆಲವೇ ಗಂಟೆಗಳಲ್ಲಿ 360 ಡಿಗ್ರಿಯ ಸಮಗ್ರ ತಪಾಸಣೆ ನಡೆಸಬಹುದು. ಬರಿಗಣ್ಣಿಗೆ ಕಾಣಿಸದ ಅತ್ಯಂತ ಸಣ್ಣ ದೋಷಗಳನ್ನೂ ಇವು ಪತ್ತೆಹಚ್ಚುತ್ತವೆ. ಈ ತಪಾಸಣೆ ಆಧಾರಿತದಿಂದ ವಿದ್ಯುತ್ ವ್ಯತ್ಯಯದಲ್ಲಿ ಶೇ. 85 ರಷ್ಟು ಇಳಿಕೆ ಸಾಧಿಸಿರುವುದು ಕೆಪಿಟಿಸಿಎಲ್ನ ಡಿಜಿಟಲ್ ರೂಪಾಂತರದ ಹಾದಿಯಲ್ಲಿ ಒಂದು ದೊಡ್ಡ ಮೈಲಿಗಲ್ಲು,” ಎಂದು ಶ್ಲಾಘಿಸಿದ್ದಾರೆ.
ಸುರಕ್ಷತಾ ಜಾಗೃತಿಗೆ ಎಸ್ಕಾಂಗಳ ಪ್ರತಿ ಡಿವಿಷನ್ಗೆ ಸಿಗಲಿದೆ 1 ಲಕ್ಷ ರೂ. ಫಂಡ್
ರಾಜ್ಯದಲ್ಲಿ ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಲ್ಲಿ ವಿದ್ಯುತ್ ಸುರಕ್ಷತೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಇಂಧನ ಇಲಾಖೆಯು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಉದ್ದೇಶಕ್ಕಾಗಿ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ವ್ಯಾಪ್ತಿಯ ಪ್ರತಿ ವಿಭಾಗಕ್ಕೆ ತಲಾ 1 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಿವೆ ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಪ್ರಕಟಿಸಿದ್ದಾರೆ. ವಿದ್ಯುತ್ ಪರಿವೀಕ್ಷಣಾಲಯದ ವತಿಯಿಂದ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಇಂಧನ ಮೂಲವೆಂದರೆ ಅದು ವಿದ್ಯುತ್. ದಿನದಿಂದ ದಿನಕ್ಕೆ ಇದರ ಬಳಕೆ ಅತ್ಯಂತ ವೇಗವಾಗಿ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಸುರಕ್ಷತೆಯ ಬಗೆಗಿನ ಜಾಗೃತಿಯೂ ಸಾರ್ವಜನಿಕರಲ್ಲಿ ಬೆಳೆಯಬೇಕಿದೆ. ನಾವೆಲ್ಲರೂ ಒಟ್ಟಾಗಿ, ಹಂಚಿಕೆಯ ಜವಾಬ್ದಾರಿಯೊಂದಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ,” ಎಂದು ಕರೆ ನೀಡಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ