ಕೋಲಾರ, ಜೂನ್ 29: ಹಳ್ಳಿಗಳಲ್ಲಿ ಇಂದಿಗೂ ಪ್ರಕೃತಿಯ ಮುನ್ಸೂಚನೆಗಳನ್ನ ಕೆಲವು ಹಣ್ಣು, ಗಿಡಮರಗಳ ಫಸಲನ್ನು ನೋಡಿ ಅಂದಾಜಿಸುವ ಪದ್ಧತಿ ಇದೆ. ಅದರಲ್ಲೂ ವಿಶೇಷವಾಗಿ, ಜಂಬು ನೇರಳೆ (Jamun fruit) ಹಣ್ಣಿನ ಫಸಲು ಆ ವರ್ಷದ ಮಳೆ (Rain), ಬೆಳೆ ಮತ್ತು ಬರಗಾಲವನ್ನು ನಿರ್ಧರಿಸುತ್ತದೆ ಎನ್ನುವ ಬಲವಾದ ನಂಬಿಕೆ ಗ್ರಾಮೀಣ ಭಾಗದಲ್ಲಿದೆ. ಸದ್ಯ ಈ ವರ್ಷ ನೇರಳೆ ಹಣ್ಣಿನ ಫಸಲು ಯಥೇಚ್ಛವಾಗಿ ಬಂದಿದ್ದು, ಹೀಗಾಗಿ ಎಲ್ಲೆಡೆ ಬರಗಾಲ ಆವರಿಸುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಎಕರೆಗಟ್ಟಲೆ ಪ್ರದೇಶದಲ್ಲಿ ನೇರಳೆ ಹಣ್ಣು ಕೃಷಿ
ಕೋಲಾರ ಅಂದರೆ ನಮಗೆ ಥಟ್ ಅಂತ ನೆನಪಿಗೆ ಬರುವುದು ಮಾವಿನ ತವರು, ಟೊಮ್ಯಾಟೊ, ರೇಷ್ಮೆ ಹಾಗೂ ಹಾಲು ಉತ್ಪಾದನೆಗೆ ಪ್ರಸಿದ್ಧಿ ಪಡೆದ ಜಿಲ್ಲೆ. ಆದರೆ ಈ ಚಿನ್ನದ ನಾಡಿನಲ್ಲಿ ಪ್ರಸಿದ್ದಿಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ಅದು ನೇರಳೆ ಹಣ್ಣು. ಕೋಲಾರ ಜಿಲ್ಲೆಯಲ್ಲಿ ಕೇವಲ ಬಾರ್ಡರ್ ಕ್ರಾಪ್ ಆಗಿ ಬೆಳೆಯುತ್ತಿದ್ದ ನೇರಳೆ ಹಣ್ಣನ್ನು ಈಗ ರೈತರು ತೋಟಗಳಲ್ಲಿ ಎಕರೆಗಟ್ಟಲೆ ಪ್ರದೇಶದಲ್ಲಿ ಒಣ ಬೇಸಾಯ ವಿಧಾನದಲ್ಲಿ ಬೆಳೆಯಲು ಆರಂಭಿಸಿದ್ದಾರೆ.
ನಿರೀಕ್ಷೆಗೂ ಮೀರಿದ ಆದಾಯ: ರೈತರು ಖುಷ್
ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಸರಿಸುಮಾರು 100 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ನೇರಳೆ ಹಣ್ಣನ್ನು ಬೆಳೆಯಲಾಗಿದೆ. ಈ ನಿಟ್ಟಿನಲ್ಲಿ ನೇರಳೆ ಬೆಳೆದಿರುವ ರೈತರು ಈ ವರ್ಷ ತಾವು ನಿರೀಕ್ಷೆಗೂ ಮೀರಿದ ಹೆಚ್ಚಿನ ಆದಾಯ ಪಡೆಯುವ ಮೂಲಕ ಫುಲ್ ಖುಷಿಯಾಗಿದ್ದಾರೆ. ಅತೀ ಹೆಚ್ಚು ಔಷಧೀಯ ಗುಣ ಹೊಂದಿರುವ ನೇರಳೆ ಹಣ್ಣಿಗೆ ಕೆಜಿಗೆ 200 ರಿಂದ 250 ರೂವರೆಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ: ಆರೆಂಜ್ ಅಲರ್ಟ್ ಘೋಷಣೆ
ಇನ್ನು ಈ ವರ್ಷದ ಮಳೆ, ಬೆಳೆ, ಬರಗಾಲವನ್ನು ನೇರಳೆ ಫಸಲು ನಿರ್ಧಾರ ಮಾಡುತ್ತದೆ ಎಂದು ಹಳ್ಳಿಕಡೆ ಒಂದು ಮಾತಿದೆ. ಆ ಪ್ರಕಾರ ನೇರಳೆ ಫಸಲು ಚೆನ್ನಾಗಿ ಬಂದರೆ, ಆ ವರ್ಷ ಬರಗಾಲ ಬರುತ್ತದೆ ಎಂದು ಹೇಳುತ್ತಾರೆ. ಸದ್ಯ ಜೂನ್ ಆರಂಭದಿಂದ ಮಳೆ, ಹವಾಮಾನ ಮತ್ತು ನೇರಳೆ ಫಸಲನ್ನು ನೋಡಿದರೆ ಈ ವರ್ಷ ಆ ಮಾತು ನಿಜವಾಗುತ್ತಾ ಎನ್ನುವ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ.
ಜೂನ್ ತಿಂಗಳು ಮುಗಿದರೂ ಮುಂಗಾರು ಮಳೆ ಬಾರದೆ ಜಿಲ್ಲೆಯಲ್ಲಿ ಇನ್ನು ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಹಾಗಾಗಿ ಕಾಕತಾಳಿಯವೋ ಇಲ್ಲ, ಗಾದೆ ಮಾತೋ ಗೊತ್ತಿಲ್ಲ. ಆ ಹೇಳಿಕೆಗೂ, ಸದ್ಯದ ಪರಿಸ್ಥಿತಿಗೂ ತಾಳೆಯಾಗುತ್ತಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ ಎಂಬ ಮಾಹಿತಿ ಇದೆ. ಹಾಗಾಗಿ ನೇರಳೆ ಹಣ್ಣು ಈ ಬಾರಿ ಉತ್ತಮ ಫಸಲು ಬಂದಿದೆ.
ರೈತರು ಹೇಳುವುದೇನು?
ಇನ್ನು ಮೊದಲು ನಾವು ಪರಿಸರವನ್ನು ಉಳಿಸಿ ಅರಣ್ಯ ಕೃಷಿ ಮಾಡುವುದನ್ನು ಕಲಿಯಬೇಕು. ಹೆಚ್ಚು ಹೆಚ್ಚಾಗಿ ಮರಗಿಡಗಳನ್ನು ಬೆಳೆಸಿದರೆ ಈ ರೀತಿ ಹವಾಮಾನ ವೈಪರೀತ್ಯವಾಗುವುದನ್ನು ತಪ್ಪಿಸಲು ಸಾಧ್ಯ ಎಂದು ಸಾವಯವ ಕೃಷಿಕರಾದ ಚಂದ್ರಶೇಖರ್ ಅವರ ಮಾತು.
ಇದನ್ನೂ ಓದಿ: ಮಳೆಗಾಲದಲ್ಲಿ ಬರದ ಛಾಯೆ: ಕುರಿಗಳಿಗೆ ಮೇವು, ನೀರು ಸಿಗದೇ ಕುರಿಗಾಹಿಗಳು ಕಂಗಾಲು
ಒಟ್ಟಾರೆ ಇತ್ತೀಚೆಗೆ ಆರೋಗ್ಯ, ಮದುಮೇಹ ಹೀಗೆ ಹಲವು ಕಾರಣಗಳಿಂದ ನೇರಳೆ ಹಣ್ಣಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದ್ದು, ಈ ವರ್ಷ ನಿರೀಕ್ಷೆಗೂ ಮೀರಿದ ಫಸಲು ಕೂಡ ಬಂದಿದೆ. ಅದರಂತೆ ಸದ್ಯದ ಪರಿಸ್ಥಿತಿಯಲ್ಲಿ ಮಳೆ ಕೂಡ ಕೈಕೊಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.