Headlines

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ರಾಜ್ಯಾದ್ಯಂತ 72,000 ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ಭರ್ತಿ, ಕೇವಲ 2 ವಾರಗಳಲ್ಲಿ 15 ಪ್ರಮುಖ ಅಧಿಸೂಚನೆಗಳು ಪ್ರಕಟ – Kannada News | Mega Recruitment Drive: Karnataka Government Announces 72,000 Job Notifications

ಬೆಂಗಳೂರು, ಜು.13: ಸರ್ಕಾರಿ ಕೆಲಸದ ಆಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕೆ ಹಾಗೂ ಸರಿಯಾಗಿ ನೇಮಕಾತಿ ಮಾಡುತ್ತಿಲ್ಲ ಎಂಬ ಗದ್ದಲದ ನಡುವೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,000 ಕ್ಕೂ ಅಧಿಕ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಆದೇಶ ಹೊರಡಿಸಿದ ಕೇವಲ ಎರಡು ವಾರಗಳಲ್ಲೇ, ಸರ್ಕಾರವು ವಿವಿಧ ಇಲಾಖೆಗಳ ಭರ್ತಿಗಾಗಿ ಉದ್ಯೋಗ ಅಧಿಸೂಚನೆಗಳನ್ನು (Job Notifications) ಹೊರಡಿಸುವ ಮೂಲಕ ದಾಖಲೆಯ ನೇಮಕಾತಿ ಅಭಿಯಾನಕ್ಕೆ ಮುಂದಾಗಿದೆ. ಕಳೆದ 15 ದಿನಗಳಲ್ಲಿ ಕೇವಲ ಕೆಇಎ (KEA) ಸೇರಿದಂತೆ ವಿವಿಧ ಮಂಡಳಿಗಳಿಂದ ಕನಿಷ್ಠ 15 ಭಿನ್ನ ನೇಮಕಾತಿ ಪ್ರಕಟಣೆಗಳು ಹೊರಬಿದ್ದಿವೆ.

ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕ-ಯುವತಿಯರನ್ನು ಸೆಳೆಯಲು ಹೊರಡಿಸಿರುವ ಪ್ರಮುಖ ಹುದ್ದೆಗಳ ಅಧಿಸೂಚನೆಯ ಪಟ್ಟಿ ಇಲ್ಲಿದೆ.

ವಸತಿ ಶಾಲೆಗಳ ಶಿಕ್ಷಕರು (320 ಹುದ್ದೆಗಳು): ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ ಮತ್ತು ಇಂದಿರಾ ಗಾಂಧಿ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿನ 320 ಬೋಧಕ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಭೂಮಾಪಕರು / ಲ್ಯಾಂಡ್ ಸರ್ವೇಯರ್ (560 ಹುದ್ದೆಗಳು): ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ (RPC) ಅಡಿಯಲ್ಲಿ 560 ಭೂಮಾಪಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಗ್ರಾಮ ಆಡಳಿತ ಅಧಿಕಾರಿ – VAO (505 ಹುದ್ದೆಗಳು): ಕಂದಾಯ ಇಲಾಖೆಯು 505 ಕಲ್ಯಾಣ ಕರ್ನಾಟಕ (ಹೈದರಾಬಾದ್-ಕರ್ನಾಟಕ) ಕೋಟಾದ 67 ಹುದ್ದೆಗಳು ಸೇರಿದಂತೆ ಒಟ್ಟು 505 ವಿಎಒ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ.

ಅಬಕಾರಿ ಇಲಾಖೆ (1,207 ಹುದ್ದೆಗಳು): ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 1,207 ಅಬಕಾರಿ ಕಾನ್ಸ್‌ಟೇಬಲ್ ಹಾಗೂ ಅಬಕಾರಿ ಉಪನಿರೀಕ್ಷಕರ (ESI) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರಣ್ಯ ವೀಕ್ಷಕರು (750 ಹುದ್ದೆಗಳು): ಅರಣ್ಯ ಇಲಾಖೆಯು ಒಟ್ಟು 750 ಫಾರೆಸ್ಟ್ ಅಬ್ಸರ್ವರ್ ಹುದ್ದೆಗಳ ಭರ್ತಿಗೆ ಮುಂದಾಗಿದೆ.

ಪೊಲೀಸ್ ಕಾನ್ಸ್‌ಟೇಬಲ್ (3,395 ಹುದ್ದೆಗಳು): ಕೆಇಎ ಈಗಾಗಲೇ 3,395 ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ.

ಚುರುಕಾದ ಪ್ರಕ್ರಿಯೆ: ಉಸ್ತುವಾರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇಮಕ

ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾಗದಂತೆ ತಡೆಯಲು ಸರ್ಕಾರವು ಹಿರಿಯ ಐಎಎಸ್ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ. 17 ಪ್ರಮುಖ ಇಲಾಖೆಗಳ ನೇಮಕಾತಿಯನ್ನು ತ್ವರಿತಗೊಳಿಸುವ ಹೊಣೆಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್ ಅವರಿಗೆ ವಹಿಸಲಾಗಿದೆ. ಮತ್ತೊಬ್ಬ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಇನ್ನುಳಿದ 34 ಇಲಾಖೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ನಡೆಸಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ಉದ್ಯೋಗವಕಾಶ; 450 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ 

ವಯೋಮಿತಿ ಸಡಿಲಿಕೆ:

ಮೀಸಲಾತಿ ಮತ್ತು ನ್ಯಾಯಾಲಯಗಳಲ್ಲಿನ ಕಾನೂನು ಹೋರಾಟಗಳಿಂದಾಗಿ 2023 ರಿಂದ ರಾಜ್ಯದಲ್ಲಿ ಸರ್ಕಾರಿ ನೇಮಕಾತಿಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಅಲ್ಲದೆ ಕೋವಿಡ್-19 ಕಾರಣದಿಂದಾಗಿ 2019 ರಿಂದ ಉಂಟಾದ ವಿಳಂಬವನ್ನು ಸರಿದೂಗಿಸಲು ಸರ್ಕಾರವು ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ (Age Relaxation) ನೀಡಿದೆ. ಪ್ರಸ್ತುತ ವಿವಿಧ ಇಲಾಖೆಗಳಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಇವೆ.

ಈ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿ, “2023ರ ಜಂಟಿ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಹಾಗೂ ಮೀಸಲಾತಿ ಗೊಂದಲಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಸರ್ಕಾರದ ಅಧಿಕಾರಾವಧಿ ಮುಗಿಯಲು ಕೇವಲ 2 ವರ್ಷ ಬಾಕಿ ಇರುವುದರಿಂದ ಹಾಗೂ ನಿರುದ್ಯೋಗಿಗಳಿಂದ ತೀವ್ರ ಪ್ರತಿಭಟನೆಗಳು ವ್ಯಕ್ತವಾಗುತ್ತಿರುವುದರಿಂದ ಈ ನೇಮಕಾತಿ ಪ್ರಕ್ರಿಯೆಗೆ ವೇಗ ನೀಡಲಾಗಿದೆ,” ಎಂದು ಒಪ್ಪಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *