ನವದೆಹಲಿ, ಜುಲೈ 29: ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ಗೆ ಅವಮಾನ ಮಾಡುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಮಹತ್ವದ ವಿಧೇಯಕವನ್ನು ರಾಜ್ಯಸಭೆ ಇಂದು ಅಂಗೀಕರಿಸಿದೆ. ರಾಷ್ಟ್ರಗೀತೆಯಾದ ಜನಗಣಮನ ಗೀತೆಗೆ ನೀಡುವ ಗೌರವವನ್ನೇ ವಂದೇ ಮಾತರಂ ಗೀತೆಗೂ ನೀಡಬೇಕೆಂದು ಉಲ್ಲೇಖಿಸಲಾಗಿದೆ. ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ – 2026’ (Prevention of Insults to National Honour (Amendment) Bill, 2026) ಅನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಇಂದು ಬೆಳಗ್ಗೆ ಎರಡು ಬಾರಿ ಕಲಾಪ ಮುಂದೂಡಲ್ಪಟ್ಟ ನಂತರ, ಮಧ್ಯಾಹ್ನದ ಭೋಜನದ ಬಳಿಕ ಸದನ ಸಮಾವೇಶಗೊಳ್ಳುತ್ತಿದ್ದಂತೆ ಉಪಸಭಾಪತಿ ಹರಿವಂಶ್ ಅವರು ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರಿಗೆ ಕಲಾಪದ ಘನತೆಯನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.
ಪರಿಶೀಲನೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿಯಾಗಿದ್ದ ಈ ವಿಧೇಯಕದ ಮೇಲಿನ ಚರ್ಚೆಯನ್ನು ಪೀಠವು ಕೈಗೆತ್ತಿಕೊಳ್ಳುತ್ತಿದ್ದಂತೆ, ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದವು ಮತ್ತು ಘೋಷಣೆಗಳನ್ನು ಕೂಗಿದವು. ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದವರ ಮೇಲಿನ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಕ್ರಿಯಿಸಬೇಕು ಎಂದು ಅವರು ಆಗ್ರಹಿಸಿದರು.
ವಿಪಕ್ಷಗಳ ಪ್ರತಿಭಟನೆಯ ನಡುವೆಯೂ ಉಪಸಭಾಪತಿ ಸದನದ ಕಲಾಪವನ್ನು ಮುಂದುವರಿಸಿದರು. ಚರ್ಚೆಯಲ್ಲಿ ಭಾಗವಹಿಸುವಂತೆ ರಾಜ್ಯಸಭಾ ಸದಸ್ಯರಲ್ಲಿ ವಿನಂತಿಸಿದರು. ಆದರೂ ವಿರೋಧ ಪಕ್ಷಗಳು ತಮ್ಮ ಬೇಡಿಕೆಯನ್ನು ಮುಂದುವರಿಸಿದವು. ನಂತರ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಥಾವಳೆ ಅವರು ಪ್ರಸ್ತಾವಿತ ಮಸೂದೆಯ ಕುರಿತು ಮಾತನಾಡುತ್ತಿದ್ದಾಗ ವಿಪಕ್ಷಗಳ ಸಂಸದರು ಕಲಾಪದಿಂದ ಹೊರನಡೆದರು.
ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೈ, ಕಾಂಗ್ರೆಸ್ ಪಕ್ಷವು ತುಷ್ಟೀಕರಣ ರಾಜಕಾರಣಕ್ಕೆ ಮೊರೆಹೋಗುವ ಮೂಲಕ ದೇಶದ ಗೌರವವಾದ ‘ವಂದೇ ಮಾತರಂ’ ರಾಷ್ಟ್ರಗೀತೆಯನ್ನು ಅವಮಾನಿಸಲು ಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡುವಾಗ ಹಲವು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಕೊನೆಯ ನುಡಿಯಾಗಿ ‘ವಂದೇ ಮಾತರಂ’ ಎಂದು ಹೇಳಿದ್ದ ಹಲವು ನಿದರ್ಶನಗಳನ್ನು ಅವರು ಸ್ಮರಿಸಿದರು.
ವಿಧೇಯಕದ ಪ್ರಮುಖ ಅಂಶಗಳು:
ಪ್ರಸ್ತಾವಿತ ಶಾಸನವು ರಾಷ್ಟ್ರಧ್ವಜ, ಸಂವಿಧಾನ ಮತ್ತು ರಾಷ್ಟ್ರಗೀತೆ ಸೇರಿದಂತೆ ದೇಶದ ರಾಷ್ಟ್ರೀಯ ಸಂಕೇತಗಳಿಗೆ ಅಪಚಾರ ಅಥವಾ ಅಸಮಾಧಾನ ವ್ಯಕ್ತಪಡಿಸುವುದನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಲು ಹೊರಟಿದ್ದು, 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ನಿಬಂಧನೆಯನ್ನು ಹೊಂದಿದೆ. ಜುಲೈ 24ರಂದು ಸದನದಲ್ಲಿ ಮಂಡಿಸಲಾದ ಈ ವಿಧೇಯಕವು ರಾಷ್ಟ್ರಗೀತೆ ‘ಜನ ಗಣ ಮನ’ಗೆ ಇರುವಂತಹುದೇ ಶಾಸನಬದ್ಧ ರಕ್ಷಣೆಯನ್ನು ‘ವಂದೇ ಮಾತರಂ’ಗೂ ನೀಡಲು ಉದ್ದೇಶಿಸಿದೆ. ವಂದೇ ಮಾತರಂ ರಚನೆಯಾಗಿ 150 ವರ್ಷಗಳು ಪೂರೈಸುತ್ತಿರುವುದರ ನಡುವೆಯೇ ಸರ್ಕಾರ ಈ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ