Headlines

ಹೆಚ್‌ಎಂಟಿ ಜಮೀನು ತೆರವುಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಡೆ: ಮರ ಕತ್ತರಿಸದಂತೆ ಹೆಚ್‌ಎಂಟಿಗೂ ಸೂಚನೆ – Kannada News | Bengaluru HMT Land: High Court Bars Govt Acquisition, HMT Not to Cut Trees

ಬೆಂಗಳೂರು, ಜು.30: ರಾಜಧಾನಿ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್‌ಎಂಟಿ ಲಿಮಿಟೆಡ್‌ಗೆ (HMT Limited) ಸೇರಿದ ಜಮೀನನ್ನು ಸ್ವಾಧೀನಪಡಿಸಿಕೊಳ್ಳದಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ತಡೆ ನೀಡಿದೆ. ಅದೇ ಸಮಯದಲ್ಲಿ, ಈ ಜಮೀನಿನಲ್ಲಿ ಈಗಾಗಲೇ ಮೂರನೇ ವ್ಯಕ್ತಿಗಳಿಗೆ ಮಾರಾಟವಾದ ಜಾಗವನ್ನು ಹೊರತುಪಡಿಸಿ, ಉಳಿದ ಜಾಗದಲ್ಲಿ ಯಾವುದೇ ಮರಗಳನ್ನು ಕತ್ತರಿಸಬಾರದು ಎಂದು ಹೆಚ್‌ಎಂಟಿ ಸಂಸ್ಥೆಗೂ ನ್ಯಾಯಾಲಯ ನಿರ್ದೇಶಿಸಿದೆ.

ಬೆಂಗಳೂರು ನಗರದ ಅರಣ್ಯ ಉಪ ಸಂರಕ್ಷಣಾಧಿಕಾರಿ (DCF) ಅವರು ಜೂನ್ 16 ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಹೆಚ್‌ಎಂಟಿ ಲಿಮಿಟೆಡ್ ಮತ್ತು ಹೆಚ್‌ಎಂಟಿ ಮೆಷಿನ್ ಟೂಲ್ಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರಾಜ್ ಗೋವಿಂದರಾಜ್ ಅವರಿದ್ದ ಪೀಠವು ಈ ಮಧ್ಯಂತರ ಆದೇಶ ನೀಡಿದೆ.

ನಗರದ ಹೆಚ್‌ಎಂಟಿ ಒಡೆತನದಲ್ಲಿರುವ 430 ಎಕರೆ 21.853 ಗುಂಟೆ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಜೂನ್ 16 ರಂದು ನೀಡಿದ್ದ ಆದೇಶವನ್ನು ಹೆಚ್‌ಎಂಟಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸಂಸ್ಥೆಯ ಅಧ್ಯಕ್ಷರ ಸೂಚನೆಯಂತೆ ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿರುವ ಹೆಚ್‌ಎಂಟಿ ಪರ ವಕೀಲರು, “ತಮ್ಮ ವಶದಲ್ಲಿರುವ ಉಳಿದ ಜಮೀನನ್ನು ಮಾರಾಟ, ಗುತ್ತಿಗೆ, ಪರವಾನಗಿ ಸೇರಿದಂತೆ ಯಾವುದೇ ರೀತಿಯಲ್ಲೂ ಬೇರೆಯವರಿಗೆ ಹಸ್ತಾಂತರಿಸುವುದಿಲ್ಲ ಹಾಗೂ ಆಸ್ತಿಯ ಸ್ವರೂಪವನ್ನು ಬದಲಾಯಿಸುವುದಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಬೆಂಗಳೂರಿನಲ್ಲಿ 3 ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ ಎಫ್‌ಐಆರ್

ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 64(ಎ) ಅಡಿಯಲ್ಲಿ ಜೂನ್ 15 ರಂದು ಈ ಆದೇಶ ಹೊರಡಿಸಲಾಗಿದ್ದು, ಜುಲೈ 2 ರಂದು ತಮಗೆ ತಲುಪಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಇದೇ ವರ್ಷದ ಜನವರಿ 6 ರಂದೇ ಕಾಯ್ದಿರಿಸಲಾಗಿದ್ದ ಆದೇಶವನ್ನು ಅತ್ಯಂತ ವಿಳಂಬವಾಗಿ ಹೊರಡಿಸಲಾಗಿದ್ದು, ಇದು ದುರುದ್ದೇಶಪೂರಿತವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ನ್ಯಾಯಾಲಯದ ಮುಂದಿನ ವಿಚಾರಣೆ ಅಥವಾ ಮುಂದಿನ ಆದೇಶದವರೆಗೆ ಈ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *