ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳನ್ನು ವಿತರಣೆ ಮಾಡಿ, ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಖ್ಯಾತಿ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಅವರಿಗೆ ಸಲ್ಲುತ್ತದೆ. ಈಗ ಇವರು ತಾವು ನಿರ್ಮಾಪಕರಾಗಿದ್ದು ಹೇಗೆ ಎಂಬ ಕುತೂಹಲಕಾರಿ ಕಥೆಯನ್ನು ಹಂಚಿಕೊಂಡಿದ್ದಾರೆ. ತಾವು ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಬರಲು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರೇ (Vijayalakshmi Darshan) ಮುಖ್ಯ ಕಾರಣ ಎಂದು ಅವರು ತಿಳಿಸಿದ್ದಾರೆ.
ವಿದೇಶಿ ಶೂಟಿಂಗ್ ವೇಳೆ ನಡೆದಿದ್ದೇನು?
ಚಂದನ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜಯಣ್ಣ-ಭೋಗೇಂದ್ರ, ‘ನಾವು ದರ್ಶನ್ ಅವರ ಸಿನಿಮಾಗಳ ಹಾಡುಗಳ ಶೂಟಿಂಗ್ಗಾಗಿ ಆಸ್ಟ್ರೇಲಿಯಾ ಸೇರಿದಂತೆ ವಿವಿಧ ವಿದೇಶಗಳಿಗೆ ಜೊತೆಯಲ್ಲೇ ಹೋಗುತ್ತಿದ್ದೆವು. ‘ಸ್ನೇಹನಾ ಪ್ರೀತಿನಾ’ ಮತ್ತು ‘ಭೂಪತಿ’ ಚಿತ್ರಗಳ ಶೂಟಿಂಗ್ ವೇಳೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮೇಡಂ ನಮಗೆ ನಿರ್ಮಾಪಕರಾಗುವಂತೆ ಸಾಕಷ್ಟು ಒತ್ತಾಯ ಮಾಡಿದರು’ ಎಂದಿದ್ದಾರೆ.
‘ನೀವೇ ಸ್ವತಃ ಹಣ ಹೂಡಿ ಸಿನಿಮಾ ನಿರ್ಮಾಣ ಮಾಡಿ, ಆ ಲಾಭವನ್ನು ನೀವೇ ಪಡೆದುಕೊಳ್ಳಿ, ನಾವೇ ನಿಮಗೆ ಕಾಲ್ಶೀಟ್ ನೀಡುತ್ತೇವೆ ಎಂದು ವಿಜಯಲಕ್ಷ್ಮಿ ಅವರು ಪ್ರೀತಿಯಿಂದ ಫೋರ್ಸ್ ಮಾಡಿದರು. ಅವರ ಆ ಪ್ರೀತಿಯ ಒತ್ತಡದಿಂದಾಗಿಯೇ ನಾವು ನಿರ್ಮಾಪಕರಾಗಲು ನಿರ್ಧರಿಸಿದೆವು’ ಎಂದು ಅವರು ಹಳೆಯ ನೆನಪನ್ನು ಮೆಲಕು ಹಾಕಿದ್ದಾರೆ.
ವಿತರಕರಾಗಿದ್ದ ಜಯಣ್ಣ-ಭೋಗೇಂದ್ರ ಜೋಡಿ ನಿರ್ಮಾಪಕರಾದ ಕಥೆ… ಸತತವಾಗಿ ದರ್ಶನ್ ಅವರ 20 ಚಿತ್ರಗಳನ್ನು ವಿತರಣೆ ಮಾಡಿದ್ದರು… ಆಗ ಆಸ್ತ್ರಿಯಾದಲ್ಲಿ ನಡೆದದ್ದು… #ತಾರಾಂತರಂಗ #Taarantaranga #Tarantaranga #DBoss #Darshan #JayannaBhogendra #ShyamPrasad pic.twitter.com/RvFQwZXwMI
— S Shyam Prasad’s Movie Page (@SSP_Film_Review) August 3, 2026
ಕೃತಜ್ಞತೆಗಾಗಿ ‘ವಿಜಯಲಕ್ಷ್ಮಿ ಪ್ರೆಸೆಂಟ್ಸ್’
ವಿಜಯಲಕ್ಷ್ಮಿ ಅವರ ಈ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ, ‘ಅರ್ಜುನ್’ ಸಿನಿಮಾ ರಿಲೀಸ್ ಮಾಡುವಾಗ ‘ವಿಜಯಲಕ್ಷ್ಮಿ ದರ್ಶನ್ ಪ್ರೆಸೆಂಟ್ಸ್’ ಎಂದು ಹೆಸರನ್ನು ಹಾಕಿದ್ದಾಗಿ ಜಯಣ್ಣ ಅವರು ಹೇಳಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
‘ಆರಂಭದಲ್ಲಿ ಸಿನಿಮಾ ನಿರ್ಮಾಣ ಕ್ಷೇತ್ರದ ಕಷ್ಟ-ನಷ್ಟಗಳು, ರಿಸ್ಕ್ ನಮಗೆ ಗೊತ್ತಿದ್ದರಿಂದ ನಮಗೆ ಪ್ರೊಡ್ಯೂಸರ್ ಆಗುವ ಮನಸ್ಸಿರಲಿಲ್ಲ. ಬರೀ ವಿತರಣೆ ಮತ್ತು ಪ್ರದರ್ಶನದಲ್ಲಷ್ಟೇ ಮುಂದುವರಿಯಬೇಕೆಂದಿದ್ದೆವು. ಆದರೆ ವಿಜಯಲಕ್ಷ್ಮಿ ಮೇಡಂ ಅವರ ಮಾತಿನಿಂದಾಗಿ ಅಡ್ವಾನ್ಸ್ ನೀಡಿ ‘ಅರ್ಜುನ್’ ಸಿನಿಮಾ ಮೂಲಕ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟೆವು. ದೇವರ ದಯೆಯಿಂದ ಅಂದಿನಿಂದ ಇಂದಿನವರೆಗೂ ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ಸಾಗುತ್ತಿದ್ದೇವೆ’ ಎಂದು ಭೋಗೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.