ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗರ ಪಂಚಮಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, 2026 ರಲ್ಲಿ ಆಗಸ್ಟ್ 17 ರಂದು ಸೋಮವಾರ ನಾಗರ ಪಂಚಮಿ ಬಂದಿದೆ. ಕುಟುಂಬದ ಕ್ಷೇಮ, ಅಭಿವೃದ್ಧಿ, ಸಂತಾನ ಭಾಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಭಕ್ತರು ಈ ದಿನ ನಾಗ ದೇವತೆಯನ್ನು ಪೂಜಿಸುತ್ತಾರೆ.
ನಾಗ ಆರಾಧನೆಯ ಆಧ್ಯಾತ್ಮಿಕ ಹಾಗೂ ಪೌರಾಣಿಕ ಹಿನ್ನೆಲೆ:
ಹಿಂದೂ ಸಂಪ್ರದಾಯದಲ್ಲಿ ನಾಗ ದೇವತೆಗೆ ಅತ್ಯಂತ ಪವಿತ್ರ ಸ್ಥಾನವಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ ಹಾವುಗಳು ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದವುಗಳು. ಶಿವನು ವಾಸುಕಿ ನಾಗನನ್ನು ತನ್ನ ಕೊರಳಿನಲ್ಲಿ ಧರಿಸಿರುವುದು ಪ್ರಕೃತಿಯ ಶಕ್ತಿ, ರಕ್ಷಣೆ ಮತ್ತು ಸಮತೋಲನದ ಸಂಕೇತವಾಗಿದೆ. ನಾಗರ ಪಂಚಮಿಯಂದು ಭಕ್ತರು ನಾಗ ದೇವತೆಯ ವಿಗ್ರಹ, ನಾಗಶಿಲೆ ಅಥವಾ ಶಿವಲಿಂಗಕ್ಕೆ ಹಾಲು, ನೀರು, ಅರಿಶಿನ-ಕುಂಕುಮ, ಕುಶ ಹುಲ್ಲು ಮತ್ತು ಹೂವುಗಳನ್ನು ಅರ್ಪಿಸಿ ಪೂಜಿಸುತ್ತಾರೆ. ಹೀಗೆ ಮಾಡುವುದರಿಂದ ನಾಗ ದೇವತೆಯ ಆಶೀರ್ವಾದ ದೊರೆತು, ಕಾಳಸರ್ಪ ದೋಷಗಳು ನಿವಾರಣೆಯಾಗಿ ಕುಟುಂಬದಲ್ಲಿ ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.
ಜೀವಂತ ಹಾವಿಗೆ ಹಾಲು ಕೊಡುವುದು ಶಾಸ್ತ್ರ ಸಮ್ಮತವೇ?
ದೇಶದ ಹಲವು ಭಾಗಗಳಲ್ಲಿ ನಾಗರ ಪಂಚಮಿಯಂದು ಜೀವಂತ ಹಾವುಗಳಿಗೆ ಹಾಲು ಕುಡಿಸುವ ಅಥವಾ ಹಾಲು ಎರೆಯುವ ಪದ್ಧತಿ ಕಂಡುಬರುತ್ತದೆ. ಆದರೆ ಶಾಸ್ತ್ರಗಳು ಮತ್ತು ಪುರಾಣಗಳು ನಾಗದೇವತೆಯ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರೂ, ಜೀವಂತ ಹಾವುಗಳಿಗೆ ಬಲವಂತವಾಗಿ ಹಾಲು ಅರ್ಪಿಸಬೇಕೆಂದು ಎಲ್ಲಿಯೂ ಸ್ಪಷ್ಟ ಸೂಚನೆ ನೀಡಿಲ್ಲ. ವಿದ್ವಾಂಸರ ಪ್ರಕಾರ, ಹಾಲು ಎಂಬುದು ನಾಗಶಿಲೆ, ನಾಗದೇವತೆಯ ಮೂರ್ತಿ ಅಥವಾ ಶಿವಲಿಂಗಕ್ಕೆ ಅರ್ಪಿಸುವ ಭಕ್ತಿಪೂರ್ವಕ ‘ನೈವೇದ್ಯ’ವೇ ಹೊರತು, ಜೀವಂತ ಸರೀಸೃಪಗಳಿಗೆ ನೀಡುವ ಆಹಾರವಲ್ಲ.
ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ
ವಿಜ್ಞಾನ ಏನು ಹೇಳುತ್ತದೆ? ಹಾವುಗಳು ನಿಜಕ್ಕೂ ಹಾಲು ಕುಡಿಯುತ್ತವೆಯೇ?
ವನ್ಯಜೀವಿ ತಜ್ಞರ ಪ್ರಕಾರ ಹಾವುಗಳು ಸ್ವಾಭಾವಿಕವಾಗಿ ಶೀತಲ ರಕ್ತದ, ಮಾಂಸಾಹಾರಿ ಜೀವಿಗಳಾಗಿವೆ. ಅವುಗಳ ನೈಸರ್ಗಿಕ ಆಹಾರ ಪದ್ಧತಿಯಲ್ಲಿ ಹಾಲಿಗೆ ಯಾವುದೇ ಸ್ಥಾನವಿಲ್ಲ ಮತ್ತು ಹಾಲಿನಲ್ಲಿರುವ ಲ್ಯಾಕ್ಟೋಸ್ ಜೀರ್ಣಿಸಿಕೊಳ್ಳುವ ಶಕ್ತಿ ಅವುಗಳಿಗಿರುವುದಿಲ್ಲ. ಹಬ್ಬದ ಸಮಯದಲ್ಲಿ ಹಾವಾಡಿಗರು ಹಾವುಗಳನ್ನು ಹಲವು ದಿನಗಳ ಕಾಲ ನೀರು ನೀಡದೆ ಸೆರೆಯಲ್ಲಿಟ್ಟುರುತ್ತಾರೆ. ತೀವ್ರ ಬಾಯಾರಿಕೆ ಮತ್ತು ಒತ್ತಡದ ಕಾರಣದಿಂದ ಜೀವ ಉಳಿಸಿಕೊಳ್ಳಲು ಹಾವುಗಳು ಎದುರಿಗಿರುವ ಹಾಲನ್ನು ನೀರೆಂದು ಭಾವಿಸಿ ಕುಡಿಯುತ್ತವೆ. ಆದರೆ ಇದು ಅವುಗಳ ಶ್ವಾಸಕೋಶ ಮತ್ತು ಜಠರಕ್ಕೆ ತೀವ್ರ ಹಾನಿಯನ್ನುಂಟುಮಾಡಿ, ಅವುಗಳ ಸಾವಿಗೆ ಕಾರಣವಾಗಬಹುದು.
ಭಕ್ತಿಯ ಜೊತೆಗೆ ಪ್ರಕೃತಿಯ ಸಂರಕ್ಷಣೆಯೂ ಅತ್ಯಗತ್ಯ:
ನಾಗರ ಪಂಚಮಿಯು ಪ್ರಕೃತಿ ಹಾಗೂ ಜೀವರಾಶಿಯನ್ನು ಗೌರವಿಸುವ ಸುಂದರ ಹಬ್ಬವಾಗಿದೆ. ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಜೀವಂತ ಹಾವುಗಳನ್ನು ಹಿಡಿದು ಕಿರುಕುಳ ನೀಡುವುದಾಗಲಿ ಅಥವಾ ಅವುಗಳ ಜೀವಕ್ಕೆ ಅಪಾಯ ತರುವುದಾಗಲಿ ಸರಿಯಾದ ಅಭ್ಯಾಸವಲ್ಲ. ನಾಗದೇವತೆಯ ಸಂಕೇತವಾಗಿ ನಾಗಶಿಲೆ, ಮಣ್ಣಿನ ನಾಗನ ಮೂರ್ತಿ ಅಥವಾ ಶಿವಲಿಂಗಕ್ಕೆ ಹಾಲು ಅರ್ಪಿಸಿ ಪೂಜಿಸುವ ಮೂಲಕ ಧಾರ್ಮಿಕ ಸಂಪ್ರದಾಯವನ್ನೂ ಗೌರವಿಸಬಹುದು ಮತ್ತು ವನ್ಯಜೀವಿಗಳನ್ನು ರಕ್ಷಿಸಿ ಪ್ರಕೃತಿಯ ಸಮತೋಲನವನ್ನೂ ಕಾಯ್ದುಕೊಳ್ಳಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ