ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಮೆಗಾ ಹರಾಜಿಗೂ ಮುನ್ನ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮುಂಬೈ ಇಂಡಿಯನ್ಸ್ (MI) ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬರುವ ಸೀಸನ್ಗಾಗಿ ಬೇರೆ ತಂಡಕ್ಕೆ ಟ್ರೇಡ್ ಮಾಡಲು ತೆರೆಮರೆಯ ಕಸರತ್ತುಗಳು ನಡೆದಿವೆ ಎಂದು ‘ಕ್ರಿಕ್ಬಜ್’ ವರದಿ ಮಾಡಿದೆ. ಕಳೆದ ಸೀಸನ್ನಲ್ಲಿ ಮುಂಬೈ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.
ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೆಳೆದುಕೊಳ್ಳಲು ಯಾವೆಲ್ಲಾ ಫ್ರಾಂಚೈಸಿಗಳು ಏನೇನು ಪ್ಲ್ಯಾನ್ ಮಾಡಿಕೊಂಡಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ:
ಡೆಲ್ಲಿ ಕ್ಯಾಪಿಟಲ್ಸ್ (DC): ಹಾರ್ದಿಕ್-ಅಕ್ಷರ್ ಅದಲು-ಬದಲು?
ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾರ್ದಿಕ್ ಪಾಂಡ್ಯ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ಸ್ಟಾರ್ ಆಲ್-ರೌಂಡರ್ ಅಕ್ಷರ್ ಪಟೇಲ್ ಅವರನ್ನು ಮುಂಬೈಗೆ ನೀಡಿ, ಪ್ರತಿಯಾಗಿ ಹಾರ್ದಿಕ್ ಅವರನ್ನು ಪಡೆಯುವ ‘ಸ್ವಾಪ್’ ಆಫರ್ ನೀಡಲು ಮುಂದಾಗಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಒಬ್ಬ ಗುಣಮಟ್ಟದ ಸ್ಪಿನ್ ಆಲ್-ರೌಂಡರ್ ಅಗತ್ಯವಿರುವುದರಿಂದ ಈ ಡೀಲ್ ಕುತೂಹಲ ಮೂಡಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ (KKR): ಸ್ಟಾರ್ ಆಟಗಾರರನ್ನು ಬಿಡಲ್ಲ!
ಹಾರ್ದಿಕ್ ಅವರನ್ನು ತಂಡಕ್ಕೆ ತರಲು ಕೆಕೆಆರ್ ತೀವ್ರ ಆಸಕ್ತಿ ತೋರಿಸಿದೆ. ಆದರೆ, ಪ್ರತಿಯಾಗಿ ತನ್ನ ತಂಡದ ಯಾವುದೇ ಪ್ರಮುಖ ಭಾರತೀಯ ಆಟಗಾರನನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಆಸ್ಟ್ರೇಲಿಯಾದ ಕ್ಯಾಮರೋನ್ ಗ್ರೀನ್ ಅವರನ್ನು ಮುಂಬೈಗೆ ನೀಡಿ ಹಾರ್ದಿಕ್ ಅವರನ್ನು ಪಡೆಯುವ ಆಲೋಚನೆ ಇದೆಯಾದರೂ, ಗ್ರೀನ್ ಅವರ ಆ್ಯಶಸ್ ಸರಣಿಯ ಲಭ್ಯತೆಯ ಮೇಲೆಯೇ ಇದು ನಿರ್ಧಾರವಾಗಲಿದೆ.
ರಾಜಸ್ಥಾನ್ ರಾಯಲ್ಸ್ (RR) ಯಶಸ್ವಿ ಪ್ಲ್ಯಾನ್:
ರಾಜಸ್ಥಾನ್ ರಾಯಲ್ಸ್ ತಂಡ ಹಾರ್ದಿಕ್ ಪಾಂಡ್ಯ ಬದಲಿಗೆ ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಆಸಕ್ತಿ ತೋರಿಸಿದೆ ಎಂದು ವರದಿಯಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ (LSG) ಸ್ವಾಪ್ ಡೀಲ್:
ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಕೋಲಸ್ ಪೂರನ್ ಅವರನ್ನು ನೀಡಿ ಹಾರ್ದಿಕ್ ಪಾಂಡ್ಯರನ್ನು ಖರೀದಿಸಲು ಆಸಕ್ತಿ ಹೊಂದಿದೆ. ಆದರೆ ಈ ಸ್ವಾಪ್ ಡೀಲ್ ಮಾತುಕತೆ ಸದ್ಯ ಆರಂಭಿಕ ಹಂತದಲ್ಲೇ ಇದೆ.
ಚೆನ್ನೈ ಸೂಪರ್ ಕಿಂಗ್ಸ್ (CSK), ಸದ್ಯಕ್ಕಿಲ್ಲ ಆಸಕ್ತಿ!
ಸಿಎಸ್ಕೆ ಸಿಇಒ ಕಾಸಿ ವಿಶ್ವನಾಥನ್ ಅವರ ಪ್ರಕಾರ, ಹಾರ್ದಿಕ್ ಪಾಂಡ್ಯ ಟ್ರೇಡಿಂಗ್ ಬಗ್ಗೆ ತಂಡ ಸದ್ಯಕ್ಕೆ ಯೋಚಿಸುತ್ತಿಲ್ಲ. ಸಿಎಸ್ಕೆ ಸದ್ಯ ತನ್ನ ಹೊಸ ವಿದೇಶಿ ಮುಖ್ಯ ಕೋಚ್ ಮತ್ತು ನಾಯಕತ್ವದ ರಚನೆಯನ್ನು ಅಂತಿಮಗೊಳಿಸುವತ್ತ ಗಮನ ಹರಿಸಿದೆ. ಇದಾಗ್ಯೂ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಲ್ಲ ಎಂದು ಸಿಎಸ್ಕೆ ಎಲ್ಲೂ ಕೂಡ ಕೇಳಿಕೊಂಡಿಲ್ಲ ಎಂಬುದು ಉಲ್ಲೇಖಾರ್ಹ.
ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ ಇತಿಹಾಸದಲ್ಲೇ ಹಾರ್ದಿಕ್ ಪಾಂಡ್ಯ ಅವರ ಈ ಸಂಭಾವ್ಯ ಟ್ರೇಡಿಂಗ್ ಭಾರಿ ಕುತೂಹಲ ಮೂಡಿಸಿದೆ. ಈ ಹೈಪ್ ನಡುವೆ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಪಾಂಡ್ಯ ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.