ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಹಾಗೂ ಹೀರೋ ಚಿಕ್ಕಣ್ಣ ಅವರು ತಮ್ಮ ಬ್ಯಾಚುಲರ್ ಲೈಫ್ಗೆ ಗುಡ್ಬೈ ಹೇಳಲು ಸಜ್ಜಾಗಿದ್ದಾರೆ. ಅವರು ಶೀಘ್ರವೇ ವಿವಾಹ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯನ್ನು ಭೇಟಿಯಾಗಿ ತಮ್ಮ ವಿವಾಹದ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ. ಬಹಳ ಕಷ್ಟಪಟ್ಟು ಚಿತ್ರರಂಗಕ್ಕೆ ಬಂದು ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸಂಪಾದಿಸಿರುವ ಚಿಕ್ಕಣ್ಣ, ‘ರಾಜಾಹುಲಿ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಯಶ್ ಜೊತೆ ಒಟ್ಟಾಗಿ ಅಭಿನಯಿಸಿದ್ದರು. ಇಬ್ಬರ ನಡುವಿನ ಆತ್ಮೀಯತೆ ಮತ್ತು ಸ್ನೇಹ ಈಗಲೂ ಹಾಗೆಯೇ ಮುಂದುವರಿದಿದೆ.
ಇದೇ ಬಾಂಧವ್ಯದಿಂದಾಗಿ ಚಿಕ್ಕಣ್ಣ ಅವರು ವೈಯಕ್ತಿಕವಾಗಿ ತೆರಳಿ ಯಶ್ ಹಾಗೂ ರಾಧಿಕಾ ದಂಪತಿಗೆ ಮದುವೆ ಆಹ್ವಾನ ನೀಡಿದ್ದಾರೆ. ಕೇವಲ ರಾಕಿಂಗ್ ಸ್ಟಾರ್ ದಂಪತಿ ಮಾತ್ರವಲ್ಲದೆ ರಾಜಕೀಯ ಹಾಗೂ ಚಲನಚಿತ್ರ ರಂಗದ ಹಲವು ಗಣ್ಯರಿಗೆ ಚಿಕ್ಕಣ್ಣ ಸೆಲೆಬ್ರಿಟಿಗಳಿಗೆ ಆಮಂತ್ರಣ ಪತ್ರಿಕೆ ತಲುಪಿಸುತ್ತಿದ್ದಾರೆ. ಚಿಕ್ಕಣ್ಣ ಅವರ ವಿವಾಹ ಮಹೋತ್ಸವವು ಮೈಸೂರಿನಲ್ಲಿ ಆಗಸ್ಟ್ 29 ಮತ್ತು 30 ರಂದು ಅದ್ದೂರಿಯಾಗಿ ನೆರವೇರಲಿದ್ದು, ಮದುವೆ ಸಂಭ್ರಮಕ್ಕೆ ತಯಾರಿಗಳು ಭರದಿಂದ ಸಾಗಿವೆ.
ಚಿಕ್ಕಣ್ಣ ಅವರು ಕೈಹಿಡಿಯಲಿರುವ ಹುಡುಗಿಯ ಹೆಸರು ಪಾವನಾ. ಇವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯಾಗಿದ್ದು, ಇದು ಹಿರಿಯರು ನೋಡಿ ನಿಶ್ಚಯಿಸಿರುವ ಮದುವೆಯಾಗಿದೆ. ಸದ್ದಿಲ್ಲದೆ ಮದುವೆ ನಿಶ್ಚಯ ಕಾರ್ಯಕ್ರಮ ಹಾಗೂ ಹೂ ಮುಡಿಸುವ ಶಾಸ್ತ್ರವನ್ನು ಕುಟುಂಬಸ್ಥರು ಪೂರ್ಣಗೊಳಿಸಿದ್ದರು.
ಇದನ್ನೂ ಓದಿ: ಕಾಶಿಯಲ್ಲಿ ಮುಗಿಯಿತು ಚಿಕ್ಕಣ್ಣ ನಟನೆಯ ‘ಲಕ್ಷ್ಮಿಪುತ್ರ’ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್
ಹಿಂದೆ ವಿವಿಧ ಟಾಕ್ ಶೋಗಳು ಹಾಗೂ ವೇದಿಕೆಗಳಲ್ಲಿ ತಮ್ಮ ಮದುವೆ ವಿಷಯ ಪ್ರಸ್ತಾಪವಾದಾಗಲೆಲ್ಲಾ ತಮಾಷೆ ಮಾಡುತ್ತಾ ಹಾರಿಕೆ ಉತ್ತರ ನೀಡುತ್ತಿದ್ದ ಚಿಕ್ಕಣ್ಣ, ಈಗ ಕೊನೆಗೂ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ದೀರ್ಘಕಾಲದ ಬ್ಯಾಚುಲರ್ ಲೈಫ್ಗೆ ವಿದಾಯ ಹೇಳಿ ಹೊಸ ಜೀವನಕ್ಕೆ ಹೆಜ್ಜೆ ಇಡುತ್ತಿರುವ ಚಿಕ್ಕಣ್ಣ ಹಾಗೂ ಪಾವನಾ ಜೋಡಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಮಿತ್ರರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.