ಗದಗ, ಜನವರಿ 12: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯದ ಕೆಲಸದ ವೇಳೆ ಅರ್ಧ ಕೆಜಿ ಚಿನ್ನದ ನಿಧಿ ದೊರೆತ ವಿಚಾರ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಈ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬದ ಪರಿಸ್ಥಿತಿ ಈಗ ಸಂಕಷ್ಟದಲ್ಲಿದೆ. ನಿಧಿ ಪತ್ತೆಯಾದ ಸ್ಥಳದ ಮಾಲೀಕರಾಗಿರುವ ಮಹಿಳೆಯ ಸಹೋದರ ಗುಡದಪ್ಪ ಮಾತನಾಡಿ, ತಂಗಿ ಗಂಡನನ್ನು ಕಳೆದುಕೊಂಡು ಮನೆಯಿಲ್ಲದೆ ತಮ್ಮೊಂದಿಗೆ ವಾಸಿಸುತ್ತಿದ್ದಾಳೆ. ಕುಟುಂಬಕ್ಕೆ ವಾಸಿಸಲು ಸ್ವಂತ ಮನೆ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾಳೆ ಎಂದರು.
ಗುಡದಪ್ಪ ಪ್ರಕಾರ, ನಿಧಿ ಹಸ್ತಾಂತರ ಮಾಡಿದ ಬಳಿಕವೂ ಅಧಿಕಾರಿಗಳಿಂದ ಯಾವುದೇ ಸ್ಪಷ್ಟವಾದ ಭರವಸೆ ಸಿಕ್ಕಿಲ್ಲ. ಅಧಿಕಾರಿಗಳು ಭೇಟಿ ನೀಡಿದ್ದರೂ ನಂತರ ಹಿರಿಯ ಅಧಿಕಾರಿಗಳು ಅವರ ಕಡೆಗೆ ತಿರುಗಿಯೂ ನೋಡಿಲ್ಲ. ಆರ್ಥಿಕವಾಗಿ ದುರ್ಬಲವಾಗಿರುವ ಆ ಕುಟುಂಬಕ್ಕೆ ಚಿನ್ನದ ಆಸೆ ಇಲ್ಲ. ತಂಗಿ ಮತ್ತು ಅವರ ಮಗನಿಗೆ ಒಂದು ಮನೆ ಮತ್ತು ನಿವೇಶನ ದೊರಕಿಸಿಕೊಡಬೇಕೆಂದು ಸರ್ಕಾರಕ್ಕೆ ಗುಡದಪ್ಪ ಮನವಿ ಮಾಡಿದ್ದಾರೆ.