All posts by nagaraj11081993

ರಾಜ್ಯದ ದೀರ್ಘಾವಧಿ ಸಿಎಂ ಆಗಲಿದ್ದಾರೆ ಸಿದ್ದರಾಮಯ್ಯ: ದೇವರಾಜ ಅರಸು​​ ದಾಖಲೆ ನಾಳೆ ಬ್ರೇಕ್​​ – Kannada News | Siddaramaiah Set to Break Devaraj Urs Record, Becoming Karnataka’s Longest Serving Chief Minister

ಬೆಂಗಳೂರು, ಜನವರಿ 05: ರಾಜ್ಯದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಅವರು ಪಾತ್ರರಾಗಲು ಕೇವಲ ಒಂದೇ ದಿನ ಬಾಕಿ ಇದ್ದು, ದೇವರಾಜ ಅರಸು ದಾಖಲೆಯನ್ನು ನಾಳೆ ಮುರಿಯಲಿದ್ದಾರೆ. 7 ವರ್ಷ 239 ದಿನಗಳ ಕಾಲ ಡಿ. ದೇವರಾಜ ಅರಸು ಕರ್ನಾಟಕದ ಸಿಎಂ‌ ಆಗಿದ್ದ‌ರು. ಸಿದ್ದರಾಮಯ್ಯ ಕೂಡ ಇಂದಿಗೆ 7 ವರ್ಷ 239 ದಿನ ಪೂರೈಸಿದ್ದಾರೆ. ಮೂರನೇ ಸ್ಥಾನದಲ್ಲಿ ಎಸ್​. ನಿಜಲಿಂಗಪ್ಪ ಅವರಿದ್ದು, 7 ವರ್ಷ 175 ದಿನಗಳ ಕಾಲ ಅವರು ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ 4ನೇ ಸ್ಥಾನದಲ್ಲಿ ರಾಮಕೃಷ್ಣ ಹೆಗಡೆ 5 ವರ್ಷ 216 ದಿನ ಮತ್ತು 5 ವರ್ಷ 82 ದಿ‌ನ ಸಿಎಂ ಆಗಿದ್ದ ಬಿ.ಎಸ್​. ಯಡಿಯೂರಪ್ಪ 5ನೇ ಸ್ಥಾನದಲ್ಲಿದ್ದಾರೆ.

ದೇವರಾಜ ಅರಸು ಅವರು ಸತತವಾಗಿ ಏಳೂವರೆ ವರ್ಷ ಅಧಿಕಾರದಲ್ಲಿದ್ದರೆ ಸಿದ್ದರಾಮಯ್ಯ ಮೊದಲ ಅವಧಿ ಪೂರ್ಣಗೊಂಡ ಬಳಿಕ ಮತ್ತೆ ಕಾಂಗ್ರೆಸ್​​ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲ. 2018ರ ವಿಧಾನ ಸಭೆ ಚುನಾವಣೆ ಫಲಿತಾಂಶ ಅತಂತ್ರವಾಗಿದ್ದ ಕಾರಣಕ್ಕೆ ಜೆಡಿಎಸ್​​ ಜೊತೆ ಸೇರಿ ಕಾಂಗ್ರೆಸ್​​ ಮೈತ್ರಿ ಸರ್ಕಾರ ರಚಿಸಿತ್ತು. ಆದರೆ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ 14 ತಿಂಗಳಿಗೇ ಪತನವಾಗಿತ್ತು. ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿಯಿಂದ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕ್ರಮವಾಗಿ ಮುಖ್ಯಮಂತ್ರಿಗಳಾಗಿದ್ದರು. ಅದಾದ ಬಳಿಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್​​ ಸ್ಪಷ್ಟ ಬಹುಮತ ಪಡೆದ ಕಾರಣ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಇದನ್ನೂ ಓದಿ: ಸಭೆಯನ್ನ ನಗೆ ಗಡಲಲ್ಲಿ ತೇಲಿಸಿದ ಸಿಎಂ ಕುರ್ಚಿ ಮಾತು, ಜೋರಾಗಿ ನಕ್ಕ ಡಿಕೆಶಿ

ಬಜೆಟ್​​ ಮಂಡನೆಯಲ್ಲೂ ದಾಖಲೆ

ಲೋಕದಳ, ಜನತಾ ದಳ ಪಕ್ಷಗಳಲ್ಲಿಯೂ ಈ ಹಿಂದೆ ಇದ್ದ ಸಿದ್ದರಾಮಯ್ಯ 2006ರಲ್ಲಿ ಕಾಂಗ್ರೆಸ್​​ ಸೇರಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ವಿಪಕ್ಷ ನಾಯಕನಿಂದ ಹಿಡಿದು ಮುಖ್ಯಮಂತ್ರಿ ಕುರ್ಚಿಯನ್ನೂ ಇದೀಗ ಎರಡನೇ ಬಾರಿ ಏರಿ ಸರ್ಕಾರ ನಡೆಸುತ್ತಿದ್ದಾರೆ. ರಾಜ್ಯ ಬಜೆಟ್ ಮಂಡನೆಯಲ್ಲೂ ಸಿಎಂ ಸಿದ್ದರಾಮಯ್ಯ ದಾಖಲೆ ಬರೆದಿದ್ದು, ಇದುವರೆಗೂ 16 ಬಜೆಟ್ ಮಂಡಿಸಿದ್ದಾರೆ. ಒಟ್ಟು 13 ಬಜೆಟ್​​ ಮಂಡಿಸಿರುವ ರಾಮಕೃಷ್ಣ ಹೆಗಡೆ ಎರಡನೇ ಸ್ಥಾನದಲ್ಲಿದ್ದಾರೆ.

ಶುಭಾಶಯ ಕೋರಿ ಬ್ಯಾನರ್​

ಸಿಎಂ ಸಿದ್ದರಾಮಯ್ಯನವರು ವಿಶಿಷ್ಠ ದಾಖಲೆ ಬರೆಯುತ್ತಿರುವ ಹಿನ್ನೆಲೆ ಅವರ ಅಭಿಮಾನಿಗಳು ಮತ್ತು ಬೆಂಬಲಿಗರಿಂದ ಸಂಭ್ರಮಾಚರಣೆಗೆ ಅದಾಗಲೇ ತಯಾರಿ ನಡೆದಿದೆ. ದೀರ್ಘವಧಿ ಸಿಎಂ ಆಗಿ ದಾಖಲೆ ಬರೆದ ಸಿದ್ದರಾಮಯ್ಯ ಎಂದು ಶುಭಾಶಯ ಕೋರಿರುವ ಪೋಸ್ಟರ್​​ನ ಅಭಿಮಾನಿಗಳು ಮುಖ್ಯಮಂತ್ರಿಗಳ ನಿವಾಸದ ಬಳಿ ಹಾಕಿದ್ದಾರೆ. ಕಾವೇರಿ ನಿವಾಸದ ಎದುರಿಗಿನ ಸರ್ಕಲ್ ಬಳಿ ಬ್ಯಾನರ್​​ ರಾರಾಜಿಸುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:54 am, Mon, 5 January 26

Source link

ಸರಣಿಗೂ ಮುನ್ನ ಟೀಮ್ ಇಂಡಿಯಾಗೆ 15 ದಿನಗಳ ಕ್ಯಾಂಪ್..! – Kannada News | Indian Test captain Shubman Gill has proposed a 15 day camp before each Test series

ಪ್ರತಿ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡದ ಆಟಗಾರರು 15 ದಿನಗಳ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂತಹದೊಂದು ವಿಶೇಷ ಯೋಜನೆಗೆ ಮನವಿ ಮಾಡಿರುವುದು ಟೀಮ್ ಇಂಡಿಯಾದ ನಾಯಕ ಶುಭ್​​ಮನ್ ಗಿಲ್. ಪ್ರತಿ ಟೆಸ್ಟ್ ಸರಣಿಗೂ ಮುನ್ನ ಕ್ಯಾಂಪ್​ ಆಯೋಜಿಸುವಂತೆ ಗಿಲ್ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಭಾರತ ಟೆಸ್ಟ್ ತಂಡದ ನಾಯಕನ ಈ ಮನವಿಗೆ ಬಿಸಿಸಿಐ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ವರದಿಯಾಗಿದೆ.

ಅದರಂತೆ ಮುಂಬರುವ ಟೆಸ್ಟ್ ಸರಣಿಗಳಿಗೂ ಮುನ್ನ ಟೀಮ್ ಇಂಡಿಯಾ 15 ದಿನಗಳ ಅಭ್ಯಾಸ ಶಿಬಿರಗಳನ್ನು ಆಯೋಜಿಸಲಿದೆ. ಈ ಯೋಜನೆಗಳ ಮೂಲಕ ಬಲಿಷ್ಠ ಟೆಸ್ಟ್ ತಂಡವನ್ನು ರೂಪಿಸುವ ಇರಾದೆಯಲ್ಲಿದ್ದಾರೆ ಶುಭ್​ಮನ್ ಗಿಲ್.

ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಗರಡಿಯಲ್ಲಿ ಭಾರತ ತಂಡವು ಏಕದಿನ ಮತ್ತು ಟಿ20 ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಇದಾಗ್ಯೂ ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾ ಪ್ರದರ್ಶನ ಅಷ್ಟಕ್ಕಷ್ಟೇ.

ಅದರಲ್ಲೂ ಇತ್ತೀಚೆಗೆ ನಡೆದ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-0 ಅಂತರದಿಂದ ಸೋಲನುಭವಿಸಿತ್ತು. ಇದಕ್ಕೂ ಮುನ್ನ ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ಹೀನಾಯವಾಗಿ ಭಾರತ ತಂಡ ಸೋಲೊಪ್ಪಿಕೊಂಡಿತ್ತು.

ಅದು ಕೂಡ 93 ವರ್ಷಗಳ ಬಳಿಕ ಎಂಬುದು ಕಟು ವಾಸ್ತವ. ಅಂದರೆ 93 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡವು ತವರಿನಲ್ಲಿ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಸೋತಿರಲಿಲ್ಲ. ಆದರೆ ಗಂಭೀರ್ ಕೋಚ್ ಆದ ಬಳಿಕ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ತವರಿನಲ್ಲಿ ಅವಮಾನಕರ ಸೋಲನುಭವಿಸಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು.

ಅಷ್ಟೇ ಅಲ್ಲದೆ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿರುವುದು ಬರೋಬ್ಬರಿ 408 ರನ್​ಗಳ ಅಂತರದಿಂದ. ಇದು ಭಾರತದ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು. ಅಂದರೆ ಇದಕ್ಕೂ ಮುನ್ನ ಟೀಮ್ ಇಂಡಿಯಾ ಟೆಸ್ಟ್ ಪಂದ್ಯದಲ್ಲಿ 400+ ರನ್​ಗಳ ಅಂತರದಿಂದ ಸೋತೇ ಇರಲಿಲ್ಲ.

ಈ ಸೋಲುಗಳಿಂದ ಭಾರೀ ಮುಖಭಂಗಕ್ಕೆ ಒಳಗಾಗಿರುವ ಟೀಮ್ ಇಂಡಿಯಾ ಇದೀಗ ಟೆಸ್ಟ್ ಕ್ರಿಕೆಟ್​ಗಾಗಿ ಹೊಸ ಯೋಜನೆ ರೂಪಿಸಿದೆ. ಅದರಂತೆ ಭಾರತ ತಂಡದ ಮುಂದಿನ ಟೆಸ್ಟ್ ಸರಣಿಗಳಿಗೂ ಮುನ್ನ 15 ದಿನಗಳ ಕ್ಯಾಂಪ್ ನಡೆಯಲಿದೆ.

ಈ ಅಭ್ಯಾಸ ಶಿಬಿರಗಳ ಮೂಲಕ ಭಾರತ ತಂಡದ ಯೋಜನೆಗಳನ್ನು ರೂಪಿಸಲು ಶುಭ್​ಮನ್ ಗಿಲ್​ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲು ಬಿಸಿಸಿಐ ಸಿದ್ಧವಾಗಿದೆ. ಈ ಮೂಲಕ ಯುವ ಪಡೆಯ ಹೊಸ ಯೋಜನೆಗಳೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಮತ್ತೆ ಪ್ರಭಾವ ಬೀರಲು ಬಿಸಿಸಿಐ ಕೂಡ ಪ್ಲ್ಯಾನ್ ರೂಪಿಸುತ್ತಿದೆ.

Source link

ಇನ್‌ಸ್ಟಾಗ್ರಾಮ್‌ನಲ್ಲಿ 2,000 ಫಾಲೋವರ್ಸ್‌ ಗಳಿಸಿದ ಮಹಿಳೆ: ಕೇಕ್​​ ಕಟ್​​ ಮಾಡಿ ಸಂಭ್ರಮಿಸಿದ ಬಾಸ್ – Kannada News | Viral Video: Bengaluru Boss Hails Employee’s Instagram Milestone Celebration

ಬೆಂಗಳೂರು, ಜ.5: ಬೆಂಗಳೂರಿನ (Bengaluru) ಕಂಪನಿಯೊಂದರಲ್ಲಿ ನಡೆದ ಹೃದಯಸ್ಪರ್ಶಿ ಕ್ಷಣವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​ ಆಗಿದೆ. ಕಾರ್ಪೊರೇಟ್ ಕಂಪನಿಯ ಬಾಸ್​​​ ಒಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಚಿಕ್ಕ ಯಶಸ್ಸನ್ನು ದೊಡ್ಡದಾಗಿ ಆಚರಿಸಿಕೊಂಡಿರುವ ಕ್ಷಣಕ್ಕೆ ಕಂಪನಿಯೊಂದು ಸಾಕ್ಷಿಯಾಗಿದೆ. ಇನ್‌ಸ್ಟಾಗ್ರಾಮ್​​ನಲ್ಲಿ ಫಾಲೋರ್ವಸ್​​ ಹೆಚ್ಚು ಪಡೆದ ಸಹೋದ್ಯೋಗಿಗಾಗಿ ಈ ವಿಶೇಷ ದಿನವನ್ನು ಉತ್ತಮವಾಗಿ ಆಚರಣೆ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಐಶ್ವರ್ಯ ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 2 ಸಾವಿರ ಫಾಲೋವರ್ಸ್​ಗಳನ್ನು ಪಡೆದುಕೊಂಡದ್ದಕ್ಕಾಗಿ ಕಂಪನಿ ಇದನ್ನು ಸಂಭ್ರಮಿಸಿದೆ.

ಐಶ್ವರ್ಯ ಈ ವಿಡಿಯೋದಲ್ಲಿ ಬಾಸ್​​ ಇರುವ ರೂಮ್​​​​ಗೆ ಹೋಗುವುದನ್ನು ಕಾಣಬಹುದು, ಜತೆಗೆ ಇತರ ಸಹದ್ಯೋಗಿಗಳು ಕೂಡ ಅಲ್ಲಿ ಇದ್ದರು. ಮೊದಲಿಗೆ ಐಶ್ವರ್ಯ ಅವರಿಗೆ ಇಲ್ಲಿ ಏನಾಗುತ್ತಿದೆ ಎಂಬುದು ಅರ್ಥ ಆಗಿಲ್ಲ. ಬಾಸ್​​ ರೂಮ್​​​ನಲ್ಲಿ ಇದ್ದ ಬೋರ್ಡ್​​ನ್ನು ನೋಡಿ ಅಚ್ಚರಿಯಿಂದ ನಗುತ್ತಾರೆ. ಜತೆಗೆ ಮೇಜಿನ ಮೇಲೆ ಇರಿಸಲಾದ ಕೇಕ್ ಅನ್ನು ಗಮನಿಸುತ್ತಾರೆ. ಈ ಕೇಕ್​​ನಲ್ಲಿ “2k ಅನುಯಾಯಿಗಳಿಗೆ ಶುಭಾಶಯಗಳು. ಅಭಿನಂದನೆಗಳು ಐಶು” ಎಂದು ಬರೆದಿದ್ದಾರೆ. ನಂತರ ಐಶ್ವರ್ಯ ತನ್ನ ಬಾಸ್ ಮತ್ತು ತಂಡದ ಸದಸ್ಯರೊಂದಿಗೆ ಕೇಕ್​​ನ್ನು ಕತ್ತರಿಸುತ್ತಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಐಶ್ವರ್ಯ ತನ್ನ ವೃತ್ತಿಪರ ಪ್ರಯಾಣ ಮತ್ತು ಅದರಲ್ಲಿ ತನ್ನ ಬಾಸ್ ವಹಿಸಿದ ಜವಾಬ್ದಾರಿಯನ್ನು ಉತ್ತಮ ನಿಭಾಯಿಸಿದ್ದಾರೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ನನ್ನ ಕಾರ್ಪೊರೇಟ್ ಪ್ರಯಾಣದಲ್ಲಿ ನಾನು ನಿಜವಾಗಿಯೂ ಅದೃಷ್ಟಶಾಲಿ ಎಂದು ಈ ಪೋಸ್ಟ್​​ನಲ್ಲಿ ಹೇಳಿದ್ದಾರೆ. ಒಬ್ಬ ಉತ್ತಮ ಬಾಸ್ ಹೊಸ ವಿಷಯಗಳನ್ನು ಪ್ರಯತ್ನಿಸಲು ನಮ್ಮನ್ನು ಪ್ರೇರೇಪಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ. ನಮ್ಮ ಬಾಸ್​​ ನಮಗೆ ಅಗತ್ಯವಿರುವ ಬೆಂಬಲವನ್ನು ನೀಡುತ್ತಾರೆ ಮತ್ತು ಬೆಳೆಯಲು ಪುಶ್ ನೀಡುತ್ತಾರೆ. ಅವರ ಈ ಬೆಂಬಲ ಇನ್ನಷ್ಟು ಕಲಿಯಲು, ವೃತ್ತಿಪರವಾಗಿ ಬೆಳೆಯಲು ಮತ್ತು ಹೊಸ ಅವಕಾಶಗಳು ಮತ್ತು ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡಿದೆ.

ಇದನ್ನೂ ಓದಿ: ಬೆಂಗಳೂರಿನ ಸಂಚಾರ ಉಲ್ಲಂಘನೆ ಗುರುತಿಸಲು ಹೆಲ್ಮೆಟ್​​ನ್ನು ಟ್ರಾಫಿಕ್ ಪೊಲೀಸ್ ಸಾಧನವಾಗಿ ಪರಿವರ್ತಿಸಿದ ಟೆಕ್ಕಿ

ಇನ್ನು ಈ ವಿಡಿಯೋವನ್ನು ನೋಡಿ ಅನೇಕ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಬಾಸ್ ಮತ್ತು ಕೆಲಸದ ಸ್ಥಳದ ಸಂಸ್ಕೃತಿಯನ್ನು ಅನೇಕರು ಶ್ಲಾಘಿಸಿದ್ದಾರೆ. ಬಾಸ್​​ಗಳ ಒತ್ತಡದ ನಡುವೆ ಇಂತಹ ಕೆಲಸದ ಬೆಳವಣಿಗೆಯನ್ನು ಪೋತ್ಸಾಹಿಸುವುದು ಉತ್ತಮ ಎಂದು ಇನ್ನೊಬ್ಬರು ಹೇಳಿದ್ದಾರೆ. ಇದು ತುಂಬಾ ಹೃದಯಸ್ಪರ್ಶಿಯಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನನಗೆ ಈ ಕ್ಲಿಪ್ ನಿಜವಾಗಿಯೂ ಇಷ್ಟವಾಯಿತು, ಪ್ರತಿಯೊಬ್ಬರೂ ಅವರಂತಹ ಬಾಸ್ ಅನ್ನು ಬಯಸುತ್ತಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾರಕ್ಕೆ ಎರಡು ರಜೆಗೆ ಆಗ್ರಹ: ಬ್ಯಾಂಕ್ ಉದ್ಯೋಗಿಗಳಿಂದ ಜ. 27ರಂದು ರಾಷ್ಟ್ರವ್ಯಾಪಿ ಮುಷ್ಕರ – Kannada News | Bank employees decide nation wide strike on January 27th, demanding 5 day work week

ನವದೆಹಲಿ, ಜನವರಿ 5: ವಾರದ ಕಾರ್ಯದಿನಗಳನ್ನು ಐದಕ್ಕೆ ಮಿತಿಗೊಳಿಸಬೇಕೆಂದು (5 day work wek) ಆಗ್ರಹಿಸಿ ಬ್ಯಾಂಕ್ ಉದ್ಯೋಗಿಗಳು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಬ್ಯಾಂಕ್ ಉದ್ಯೋಗಿಗಳ ವಿವಿಧ ಒಕ್ಕೂಟಗಳ ವೇದಿಕೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್​ಬಿಯು) ಜನವರಿ 27ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿರುವುದಾಗಿ ಘೋಷಿಸಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾಒಕ್ಕೂಟ (ಎಐಬಿಒಸಿ) ಈ ನಿರ್ಧಾರವನ್ನು ತಿಳಿಸಿ ಜನವರಿ 4ರಂದು ಸುತ್ತೋಲೆ ಹೊರಡಿಸಿದೆ.

ಬ್ಯಾಂಕುಗಳಲ್ಲಿ ಈಗ ಭಾನುವಾರದ ಜೊತೆಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರದ ರಜೆಗಳಿವೆ. ಆದರೆ, ವಾರದ ಅಷ್ಟೂ ಶನಿವಾರ ಮತ್ತು ಭಾನುವಾರಗಳು ವಾರದ ರಜೆಯಾಗಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳು ಮಾಡುತ್ತಿರುವ ಆಗ್ರಹವಾಗಿದೆ.

ಬಹಳ ದಿನಗಳಿಂದಲೂ ಈ ಬೇಡಿಕೆ ಇದೆ. 2024ರ ಮಾರ್ಚ್​ನಲ್ಲಿ ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆ ಸಂಬಂಧ ಬ್ಯಾಂಕ್ ಉದ್ಯೋಗಿಗಳ ಯೂನಿಯನ್​ಗಳು ಹಾಗೂ ಭಾರತೀಯ ಬ್ಯಾಂಕುಗಳ ಸಂಘಟನೆಯಾದ ಐಬಿಎ ನಡುವೆ ನಡೆದ ರಾಜಿಯ ವೇಳೆ ವಾರದ ರಜೆ ವಿಚಾರದ ಬಗ್ಗೆ ಸಮ್ಮತಿ ಕೊಡಲಾಗಿತ್ತು. ಆದರೆ, ಸರ್ಕಾರದಿಂದ ಇನ್ನೂ ಕೂಡ ತೀರ್ಮಾನ ಬಂದಿಲ್ಲ ಎನ್ನುವುದು ಬ್ಯಾಂಕ್ ಉದ್ಯೋಗಿಗಳ ಆಕ್ರೋಶವಾಗಿದೆ.

ಇದನ್ನೂ ಓದಿ: 2025ರಲ್ಲಿ 22,830 ಕೋಟಿ ಯುಪಿಐ ಟ್ರಾನ್ಸಾಕ್ಷನ್; ಡಿಸೆಂಬರ್​ನಲ್ಲಿ 2,160 ಕೋಟಿ ವಹಿವಾಟು

‘ಬ್ಯಾಂಕ್ ಯೂನಿಯನ್​ಗಳ ಮನವಿಗೆ ಸರ್ಕಾರ ಕಿವಿಗೊಡದ ಹಿನ್ನೆಲೆಯಲ್ಲಿ 2026ರ ಜನವರಿ 27ರಂದು ಎಲ್ಲಾ ಬ್ಯಾಂಕುಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಡಲು ನಿರ್ಧರಿಸಲಾಗಿದೆ. ಈ ಮುಷ್ಕರವನ್ನು ಯಶಸ್ವಿಗೊಳಿಸಿ’ ಎಂದು ಸುತ್ತೋಲೆಯಲ್ಲಿ ಮನವಿ ಮಾಡಲಾಗಿದೆ.

ದಿನಕ್ಕೆ ಹೆಚ್ಚು ಹೊತ್ತು ಕೆಲಸ ಮಾಡಲು ಸಿದ್ಧ

ಈ ಹಿಂದೆ ನಡೆದ ಸಂಧಾನದ ವೇಳೆ ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ ಎರಡು ದಿನ ವೀಕಾಫ್ ಕೊಡುವುದಕ್ಕೆ ಬದಲಾಗಿ, ಉದ್ಯೋಗಿಗಳು ದಿನದಲ್ಲಿ 40 ನಿಮಿಷಗಳಷ್ಟು ಹೆಚ್ಚು ಅವಧಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಅದಕ್ಕೆ ಯೂನಿಯನ್​ಗಳೂ ಒಪ್ಪಿದ್ದವು. ಬ್ಯಾಂಕ್ ಉದ್ಯೋಗಿಗಳ ವಾರದ ಕೆಲಸದಲ್ಲಿ ಕಡಿಮೆ ಆಗದ ರೀತಿಯಲ್ಲಿ ರಜೆ ಸಂಖ್ಯೆ ಹೆಚ್ಚಿಸುವ ಸೂತ್ರ ಅದಾಗಿತ್ತು.

ಇದನ್ನೂ ಓದಿ: ಎಟಿಎಂಗಳಲ್ಲಿ ಮಾರ್ಚ್ ನಂತರ 500 ರೂ ನೋಟು ಸಿಗಲ್ವಾ? ಸರ್ಕಾರದ ಸ್ಪಷ್ಟನೆ ಇದು

ವಿವಿಧ ಸರ್ಕಾರಿ ಕಚೇರಿಗಳಲ್ಲಿ ವಾರಕ್ಕೆ ಎರಡು ದಿನ ರಜೆ ಇದೆ. ಆರ್​ಬಿಐ, ಎಲ್​​ಐಸಿ, ಷೇರು ವಿನಿಮಯ ಕೇಂದ್ರ ಹೀಗೆ ಅನೇಕ ಕಡೆ ವಾರಕ್ಕೆ ಎರಡು ವೀಕಾಫ್​ಗಳಿವೆ. ಅದರಂತೆ ತಮಗೂ ಎರಡು ದಿನ ರಜೆ ಕೊಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಆಗ್ರಹವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

2020 Delhi Riots: ದೆಹಲಿ ಗಲಭೆ ಪ್ರಕರಣ, ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಜಾಮೀನು ಅರ್ಜಿ ವಜಾ – Kannada News | Delhi Riots 2020: Supreme Court Rejects Bail Pleas of Umar Khalid and Sharjeel Imam

ನವದೆಹಲಿ, ಜನವರಿ 05: ದೆಹಲಿಯಲ್ಲಿ 2020ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರ ಜಾಮೀನು ಅರ್ಜಿಗಳನ್ನು ಸುಪ್ರೀಂಕೋರ್ಟ್​ ಇಂದು ವಜಾಗೊಳಿಸಿದೆ.  ಡಿಸೆಂಬರ್ 10 ರಂದು, ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಎಸ್.ವಿ. ರಾಜು ಮತ್ತು ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ, ಸಿದ್ಧಾರ್ಥ ದವೆ, ಸಲ್ಮಾನ್ ಖುರ್ಷಿದ್ ಮತ್ತು ಸಿದ್ಧಾರ್ಥ್ ಲೂಥ್ರಾ ಅವರ ವಾದಗಳನ್ನು ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿತ್ತು.

ಮಾಹಿತಿ ಶೀಘ್ರ ಅಪ್​ಡೇಟ್ ಆಗಲಿದೆ

Source link

ದಾಖಲೆಯ ಶತಕದೊಂದಿಗೆ ವಿಶ್ವ ದಾಖಲೆಯತ್ತ ಮುನ್ನುಗ್ಗಿದ ಜೋ ರೂಟ್ – Kannada News | Joe Root goes level with Ricky Ponting on 41 Test hundreds

ಆ್ಯಶಸ್ ಸರಣಿಯ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಜೋ ರೂಟ್ ಭರ್ಜರಿ ಶತಕ ಸಿಡಿಸಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 57 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟರ್ ಗಳು ಪೆವಿಲಿಯನ್ ಗೆ ಮರಳಿದ್ದರು.

ಈ ಹಂತದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್, ಹ್ಯಾರಿ ಬ್ರೂಕ್ ಜೊತೆಗೂಡಿ ಇನಿಂಗ್ಸ್ ಕಟ್ಟಿದರು. ಪರಿಣಾಮ 5ನೇ ವಿಕೆಟ್‌ಗೆ 169 ರನ್ ಗಳ ಜೊತೆಯಾಟ ಮೂಡಿಬಂತು.

ಇದರ ನಡುವೆ 97 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ 84 ರನ್ ಬಾರಿಸಿದ ಹ್ಯಾರಿ ಬ್ರೂಕ್ ಔಟಾದರು. ಇದಾಗ್ಯೂ ಮತ್ತೊಂದೆಡೆ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದ ಜೋ ರೂಟ್ ಆಕರ್ಷಕ ಶತಕ ಪೂರೈಸಿದರು.

ಈ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.

  • ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 51 ಶತಕ ಬಾರಿಸಿದ್ದಾರೆ.
  • ಸೌತ್ ಆಫ್ರಿಕಾದ ಜಾಕ್ಸ್ ಕಾಲಿಸ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಒಟ್ಟು 45 ಸೆಂಚುರಿ ಸಿಡಿಸಿದ್ದಾರೆ.
  • ಜೋ ರೂಟ್ 41 ಟೆಸ್ಟ್ ಶತಕಗಳೊಂದಿಗೆ ಇದೀಗ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ 242 ಎಸೆತಗಳನ್ನು ಎದುರಿಸಿದ ಜೋ ರೂಟ್ 15 ಫೋರ್ ಗಳೊಂದಿಗೆ ಒಟ್ಟು 160 ರನ್ ಕಲೆಹಾಕಿದರು. 160 ರನ್ ಗಳೊಂದಿಗೆ ಟೆಸ್ಟ್ ಕ್ರಿಕೆಟ್ ನ ರನ್ ಸಂಖ್ಯೆಯನ್ನು 13937 ಕ್ಕೇರಿಸಿದ್ದಾರೆ.

ಇದನ್ನೂ ಓದಿ: ಟಿ೨೦ ಕ್ರಿಕೆಟ್‌ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಿಸಿದ ಸ್ಪೇನ್

ಜೋ ರೂಟ್ ಇನ್ನು 1984 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್. ಸಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 15921 ರನ್ ಗಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ಆಲೌಟ್:

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಜೋ ರೂಟ್ ಅವರ ಶತಕದ ನೆರವಿನೊಂದಿಗೆ ಒಟ್ಟು 384 ರನ್ ಗಳಿಸಿ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಪರ ಮೈಕೆಲ್ ನೇಸರ್ 4 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ ಹಾಗೂ ಸ್ಕಾಟ್ ಬೋಲ್ಯಾಂಡ್ ತಲಾ 2 ವಿಕೆಟ್ ಕಬಳಿಸಿದ್ದಾರೆ.

Published On – 11:26 am, Mon, 5 January 26

Source link

‘ಜನ ನಾಯಗನ್’ ತಂಡದಿಂದ ಇದೆಂಥಾ ತಪ್ಪು; ಟ್ರೋಲಿಗರಿಗೆ ಆಹಾರವಾದ ನಿರ್ದೇಶಕ – Kannada News | Jana Nayagan: Vijay’s Last Film Faces AI and Remake Row Post Trailer

ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಿ ‘ಜನ ನಾಯಗನ್’ (Jana Nayagan) ಮೂಡಿ ಬರುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ, ಯಾವಾಗ ಚಿತ್ರದ ಟ್ರೇಲರ್ ಬಿಡುಗಡೆ ಆಯಿತೋ ಅಲ್ಲಿಂದ ಸಿನಿಮಾಗೆ ಹಿನ್ನಡೆ ಉಂಟಾಗುತ್ತಿದೆ. ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಇದು ಎಂಬುದು ಟ್ರೇಲರ್ ನೋಡಿದವರಿಗೆ ಸ್ಪಷ್ವವಾಗಿದೆ. ಇದರ ಜೊತೆಗೆ ಎಐ ಚಿತ್ರ ಟ್ರೇಲರ್​​ನಲ್ಲಿ ಬಳಕೆ ಮಾಡಲಾಗಿದೆ. ಇದಕ್ಕೆ ಅನೇಕರು ಕೋಪ ಹೊರಹಾಕಿದ್ದಾರೆ.

‘ಜನ ನಾಯಗನ್’ ಇದು ದಳಪತಿ ವಿಜಯ್ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ. ಇದು ಅವರ ಕೊನೆಯ ಚಿತ್ರ ಕೂಡ ಹೌದು. ಹೀಗಾಗಿ, ಸಹಜವಾಗಿಯೇ ನಿರೀಕ್ಷೆ ಇದೆ. ಸಿನಿಮಾಗೆ ಹೈಪ್ ಸಿಗಬೇಕು ಎಂದರೆ ಚಿತ್ರದ ಟ್ರೇಲರ್ ಬಿಡುಗಡೆ ಆಗಬೇಕು. ಆದರೆ, ‘ಜನ ನಾಯಗನ್’ ವಿಷಯದಲ್ಲಿ ಅದು ಉಲ್ಟಾ ಆಗಿದೆ. ಟ್ರೇಲರ್ ರಿಲೀಸ್ ಬಳಿಕ ಚಿತ್ರಕ್ಕೆ ನೆಗೆಟಿವ್ ಕಮೆಂಟ್ ಹೆಚ್ಚಿದೆ.

‘ಜನ ನಾಯಗನ್’ ಚಿತ್ರ ‘ಭಗವಂತ ಕೇಸರಿ’ಯ ರಿಮೇಕ್ ಎಂದು ಹೇಳಲಾಗುತ್ತಾ ಬರುತ್ತಿತ್ತು. ಆದರೆ, ತಂಡ ಇದನ್ನು ಒಪ್ಪಿಲ್ಲ. ಈಗ ಸಿನಿಮಾದ ಟ್ರೇಲರ್ ನೋಡಿದ ಬಳಿಕ ಇದು ಸ್ಪಷ್ಟವಾಗಿದೆ. ಇದರ ಜೊತೆಗೆ ಒಂದು ಶಾಟ್​​ನ ಜೆಮಿನಿ ಎಐ ಬಳಸಿ ರಚಿಸಲಾಗಿದೆ. ದುರಂತ ಎಂದರೆ ಜೆಮಿನಿ ಎಐ ಲೋಗೋನ ತೆಗೆಯಲು ತಂಡದವರು ಮರೆತಿದ್ದಾರೆ.

ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ನೂರಾರು ಕೋಟಿ ರೂಪಾಯಿ ಹಾಕಿ ಮಾಡೋ ಸಿನಿಮಾದಲ್ಲಿ ಈ ರೀತಿಯ ತಪ್ಪುಗಳು ಆದರೆ ಪ್ರೇಕ್ಷಕರಿಗೆ ಅದು ಕೋಪ ತರಿಸುತ್ತದೆ. ಇನ್ನು ಕೆಲವು ಶಾಟ್​​ಗಳಿಗೆ ನಿರ್ದೇಶಕ ‘ಎಐ’ ಮೊರೆ ಹೋಗುತ್ತಾನೆ ಎಂದಾದರೆ ಅಸಲಿ ಸಿನಿಮಾದ ಮಜ ಹೇಗೆ ಸಿಗೋಕೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಜನ ನಾಯಗನ್’ ಟ್ರೈಲರ್ ಬಿಡುಗಡೆ: ರೀಮೇಕಾ? ಸ್ವಮೇಕಾ?

ಎಚ್​. ವಿನೋದ್ ಅವರು ‘ಜನ ನಾಯಗನ್’ ನಿರ್ದೇಶನ ಮಾಡಿದ್ದಾರೆ. ಅವರು ರಿಮೇಕ್ ಮಾಡೋದ್ರಲ್ಲಿ ಎತ್ತಿದ ಕೈ. ಈ ಮೊದಲು ಕೂಡ ಅವರು ರಿಮೇಕ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದು ಇದೆ. ಆದರೆ, ಅವರು ಕಥೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಆದರೆ, ಇಲ್ಲಿ ಆ ರೀತಿ ಮಾಡಿಲ್ಲ ಎನ್ನಲಾಗುತ್ತಿದೆ. ಕೆವಿಎನ್​ ಸಂಸ್ಥೆ ನಿರ್ಮಾಣದ ಈ ಚಿತ್ರ ಜನವರಿ 14ರಂದು ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:13 am, Mon, 5 January 26

Source link

ಇಡೀ ಇಂದೋರ್​ಗೆ ನೀರು ಪೂರೈಸುತ್ತಿದ್ದ ಟ್ಯಾಂಕಿನಲ್ಲಿತ್ತು ವ್ಯಕ್ತಿಯ ಶವ, 30 ವರ್ಷಗಳ ಹಿಂದೆ ಏನಾಗಿತ್ತು? – Kannada News | Indore’s Bhagirathpura Recalls a Disturbing Water Tank Tragedy After 30 Years

ಇಂದೋರ್, ಜನವರಿ 05: ಇಂದೋರ್​ನಲ್ಲಿ ಚರಂಡಿ ನೀರು( Sewage Water) ಕುಡಿಯುವ ನೀರಿನ ಜತೆ ಮಿಶ್ರಣವಾಗಿ ಹಲವು ಜನರ ಜೀವಕ್ಕೆ ಕುತ್ತು ತಂದಿದೆ. ಆದರೆ ಭಾಗೀರಥಪುರದಲ್ಲಿ ಈ ರೀತಿಯ ದುರಂತ ಹೊಸದೇನಲ್ಲ. ಇಂದೋರ್​ 30 ವರ್ಷಗಳ ಹಿಂದೆ ನಡೆದಿರುವ ಘಟನೆಯನ್ನು ಅಲ್ಲಿನ ಜನತೆ ನೆನಪಿಸಿಕೊಂಡಿದ್ದಾರೆ. ಸುಭಾಷ್ ಚೌಕ್ ಟ್ಯಾಂಕ್‌ನಲ್ಲಿ ಕೊಳೆತ ಶವವೊಂದು ಪತ್ತೆಯಾಗಿತ್ತು. ಸಾವಿರಾರು ಜನರು ಆ ಟ್ಯಾಂಕಿನ ನೀರನ್ನೇ ಕುಡಿದಿದ್ದರು.

ಪಶ್ಚಿಮ ಇಂದೋರ್‌ನ ಸಾವಿರಾರು ಮನೆಗಳಿಗೆ ವಾರಗಳವರೆಗೆ ನೀರು ಪೂರೈಸುತ್ತಿದ್ದ ಟ್ಯಾಂಕ್‌ನೊಳಗೆ ಮಾನವ ಅಸ್ಥಿಪಂಜರ ಪತ್ತೆಯಾಗಿತ್ತು. ಜನರು ಅನಾರೋಗ್ಯಕ್ಕೆ ಒಳಗಾಗುತ್ತಲೇ ಇದ್ದರು. ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದರು. ಆದರೆ ನೀರಿನ ಟ್ಯಾಂಕಿನಲ್ಲಿ ಕೊಳೆತ ಶವವಿರಬಹುದು ಎನ್ನುವ ಸಣ್ಣ ಕಲ್ಪನೆಯೂ ಜನರಿಗಿರಲಿಲ್ಲ.

ನಲ್ಲಿಗಳಲ್ಲಿ ವಾಸನೆ ಬರಲು ಶುರುವಾಗಿತ್ತು ಆಗ ಟ್ಯಾಂಕ್ ತೆರೆದು ನೋಡಿದಾಗ ಅಲ್ಲಿದ್ದ ಅಸ್ಥಪಂಜರ ಕಂಡು ಜನರು ಗಾಬರಿಗೊಂಡಿದ್ದರು.ಮುನ್ಸಿಪಲ್ ಕಾರ್ಪೊರೇಷನ್ ಕಾಂಗ್ರೆಸ್ ಪಕ್ಷದ ನಿಯಂತ್ರಣದಲ್ಲಿತ್ತು ಮತ್ತು ಮಧುಕರ್ ವರ್ಮಾ ಮೇಯರ್ ಆಗಿದ್ದರು. ಇಂದಿನ ಪರಿಸ್ಥಿತಿಯೂ ಅಷ್ಟೇ ಗಂಭೀರವಾಗಿದೆ.ಭಾಗೀರಥಪುರದ ಇತ್ತೀಚಿನ ಅಂಕಿಅಂಶಗಳು ಆತಂಕಕಾರಿಯಾಗಿವೆ.

ಮತ್ತಷ್ಟು ಓದಿ: ಇಂದೋರ್: ಚರಂಡಿ ನೀರಿನ ಜತೆ ಮಿಶ್ರಣವಾಗಿದ್ದ ನೀರು ಕುಡಿದು 3 ಮಂದಿ ಸಾವು, ಹಲವರ ಸ್ಥಿತಿ ಗಂಭೀರ

ಕಲುಷಿತ ಕುಡಿಯುವ ನೀರಿನಿಂದಾಗಿ ಭಗೀರಥಪುರದಲ್ಲಿ ಅತಿಸಾರ ಹರಡುವಿಕೆಯಿಂದಾಗಿ, 142 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ 11 ಜನರು ಐಸಿಯುನಲ್ಲಿದ್ದಾರೆ. ಏತನ್ಮಧ್ಯೆ, ಸೋಂಕಿನ ಮೂಲ ತಿಳಿದುಬಂದಿಲ್ಲ. ಭಾಗೀರಥಪುರದಲ್ಲಿ 9,000 ಕ್ಕೂ ಹೆಚ್ಚು ಜನರ ತಪಾಸಣೆಯ ಸಮಯದಲ್ಲಿ 20 ಹೊಸ ಪ್ರಕರಣಗಳು ಕಂಡುಬಂದಿವೆ.

ಭಾಗೀರಥಪುರದಲ್ಲಿ ನಡೆಯುತ್ತಿರುವ ಸಮೀಕ್ಷೆಯ ಸಮಯದಲ್ಲಿ ಆರೋಗ್ಯ ತಂಡಗಳು 2,354 ಮನೆಗಳಿಂದ 9,416 ಜನರನ್ನು ಪರೀಕ್ಷಿಸಿವೆ. ಅಲ್ಲಿ ಆರು ಜನರು ಕಲುಷಿತ ನೀರಿನಿಂದ ಸಾವನ್ನಪ್ಪಿದ್ದಾರೆ ಮತ್ತು 20 ಹೊಸ ಪ್ರಕರಣಗಳನ್ನು ಗುರುತಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಸಾಂಕ್ರಾಮಿಕ ರೋಗ ಹರಡಿದ ನಂತರ 398 ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಪೈಕಿ 256 ಜನರನ್ನು ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ 142 ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇದರಲ್ಲಿ 11 ಮಂದಿ ಐಸಿಯುನಲ್ಲಿದ್ದಾರೆ ಎಂದು ಅವರು ಹೇಳಿದರು.

ಆರೋಗ್ಯ ಬಿಕ್ಕಟ್ಟಿನ ಬಗ್ಗೆ ತನಿಖೆ ನಡೆಸಲು ಕೋಲ್ಕತ್ತಾದ ರಾಷ್ಟ್ರೀಯ ಬ್ಯಾಕ್ಟೀರಿಯಾ ಸೋಂಕು ಸಂಶೋಧನಾ ಸಂಸ್ಥೆಯ (NIRBI) ತಂಡವು ಇಂದೋರ್‌ಗೆ ಆಗಮಿಸಿದೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಮಾಧವ ಪ್ರಸಾದ್ ಹಸಾನಿ ಹೇಳಿದ್ದಾರೆ. ಆಡಳಿತವು ಇದುವರೆಗೆ ಆರು ಸಾವುಗಳನ್ನು ದೃಢಪಡಿಸಿದೆ. ಆರು ತಿಂಗಳ ಮಗು ಸೇರಿದಂತೆ 16 ಜನರು ಅತಿಸಾರದಿಂದ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

US threat: ರಷ್ಯನ್ ತೈಲ ಖರೀದಿ- ಭಾರತದ ಮೇಲೆ ಮತ್ತೆ ಟ್ಯಾರಿಫ್ ಬೆದರಿಕೆ ಹಾಕಿದ ಟ್ರಂಪ್ – Kannada News | US president Donald Trump threatens more tariffs against India on Russian oil matter

ವಾಷಿಂಗ್ಟನ್, ಜನವರಿ 5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಭಾರತದ ಮೇಲೆ ಬೆದರಿಕೆ ಹಾಕುವುದನ್ನು ಇನ್ನೂ ನಿಲ್ಲಿಸಿಲ್ಲ. ರಷ್ಯನ್ ತೈಲ ಆಮದನ್ನು ಭಾರತ ಮುಂದುವರಿಸುತ್ತಿರುವುದು ಅಮೆರಿಕ ಅಧ್ಯಕ್ಷರಿಗೆ ಕಿರಿಕಿರಿ ತಂದಂತಿದೆ. ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಬೈಟ್​ನಲ್ಲಿ ಅವರು ರಷ್ಯನ್ ತೈಲ ಖರೀದಿ ಸಂಬಂಧ ಭಾರತದ ಮೇಲೆ ಟ್ಯಾರಿಫ್ (US Tariffs) ಅನ್ನು ಮತ್ತಷ್ಟು ಹೆಚ್ಚಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ.

ಭಾರತದ ಮೇಲೆ ಅಮೆರಿಕ ಈಗಾಗಲೇ ಶೇ. 50ರಷ್ಟು ಆಮದು ಸುಂಕ ಹಾಕುತ್ತಿದೆ. ಇನ್ನೂ ಹೆಚ್ಚಿನ ಮಟ್ಟದ ಟ್ಯಾರಿಫ್ ಹಾಕುವುದಾಗಿ ಟ್ರಂಪ್ ಬೆದರಿಕೆ ಹಾಕುತ್ತಿದ್ದಾರೆ. ತನ್ನನ್ನು ಖುಷಿ ಪಡಿಸದಿದ್ದರೆ ಟ್ಯಾರಿಫ್ ಬರೆ ಹಾಕಬೇಕಾದೀತು ಎಂದು ಎಚ್ಚರಿಕೆ ಕೊಡುತ್ತಿದ್ದಾರೆ.

ಇದನ್ನೂ ಓದಿ: ತೈಲಸಮೃದ್ಧ ವೆನಿಜುವೆಲಾ ಮೇಲೆ ಅಮೆರಿಕ ದಾಳಿ; ಭಾರತಕ್ಕೆ ಎಷ್ಟು ನಷ್ಟ?

‘ಅವರು ನನ್ನನ್ನು ಖುಷಿಪಡಿಸಲು ಬಯಸುತ್ತಾರೆ. ಪಿಎಂ ಮೋದಿ ಬಹಳ ಒಳ್ಳೆಯ ಮನುಷ್ಯ, ಒಳ್ಳೆಯ ವ್ಯಕ್ತಿ. ನಾನು ಖುಷಿಯಾಗಿಲ್ಲ ಅಂತ ಅವರಿಗೆ ಗೊತ್ತು. ನನ್ನನ್ನು ಸಂತೋಷವಾಗಿ ಇಡುವುದು ಮುಖ್ಯ. ಅವರು ವ್ಯಾಪಾರ ಮಾಡುತ್ತಾರೆ. ನಾವು ಅವರ ಮೇಲೆ ಬಹಳ ಬೇಗ ಟ್ಯಾರಿಫ ಹೆಚ್ಚಿಸಬಲ್ಲೆವು..’ ಎಂದು ಟ್ರಂಪ್ ಹೇಳಿರುವ ಆಡಿಯೋ ತುಣಕನ್ನು ಎಎನ್​ಐ ಸುದ್ದಿ ಸಂಸ್ಥೆ ತನ್ನ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

ಟ್ರಂಪ್ ಮಾತನಾಡಿರುವ ಆಡಿಯೋ

ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕೆ ಅಮೆರಿಕವು ರಷ್ಯಾ ಮೇಲೆ ನಿಷೇಧ ಕ್ರಮ ತೆಗೆದುಕೊಂಡಿದೆ. ರಷ್ಯದ ಆರ್ಥಿಕತೆ ಉಳಿಯಲು ಅದರ ತೈಲವೂ ಪ್ರಮುಖ ಆಧಾರವಾಗಿದೆ. ರಷ್ಯನ್ ತೈಲವನ್ನು ಯಾರೂ ಖರೀದಿ ಮಾಡಬಾರದೆಂದು ಅಂತಾರಾಷ್ಟ್ರೀಯ ಸಮುದಾಯವನ್ನು ಅಮೆರಿಕ ಒತ್ತಾಯಿಸುತ್ತಾ ಬಂದಿದೆ. ಆದರೆ, ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಸಿಗುವುದರಿಂದ ಭಾರತ ಆ ಅವಕಾಶ ಬಳಸಿಕೊಳ್ಳುತ್ತಿದೆ. ಚೀನಾ ಮತ್ತು ಭಾರತವು ರಷ್ಯಾದಿಂದ ಅತಿಹೆಚ್ಚು ತೈಲ ಖರೀದಿಸುತ್ತಿರುವ ಎರಡು ರಾಷ್ಟ್ರಗಳು.

ಇದನ್ನೂ ಓದಿ: ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ

ಕಳೆದ ವರ್ಷ ಟ್ರಂಪ್ ಅಧಿಕಾರಕ್ಕೆ ಬಂದಾಗ ಎಲ್ಲಾ ದೇಶಗಳ ಮೇಲೂ ಪ್ರತಿಸುಂಕ ಹಾಕಿದರು. ಭಾರತದ ಮೇಲೆ ಶೇ. 25ರಷ್ಟು ಪ್ರತಿಸುಂಕ ಹಾಕಿದರು. ನಂತರ, ರಷ್ಯನ್ ತೈಲ ಖರೀದಿಸುತ್ತಿರುವ ಕಾರಣವೊಡ್ಡಿ ಹೆಚ್ಚುವರಿ ಶೇ. 25ರಷ್ಟು ಟ್ಯಾರಿಫ್ ಹಾಕಿದ್ದಾರೆ. ಅಲ್ಲಿಗೆ ಭಾರತದ ಸರುಕುಗಳ ಮೇಲೆ ಅಮೆರಿಕ ಹಾಕುತ್ತಿರುವ ಟ್ಯಾರಿಫ್ ಶೇ. 50ರಷ್ಟಾಗಿದೆ. ಇದನ್ನೂ ಮೀರಿಸಿ ಇನ್ನೂ ಹೆಚ್ಚಿನ ಟ್ಯಾರಿಫ್ ಹಾಕುವುದಾಗಿ ಟ್ರಂಪ್ ಈಗ ಬೆದರಿಕೆ ಹಾಕುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 10:57 am, Mon, 5 January 26

Source link

ಧಾರವಾಡ ಬಸ್ ಡಿಪೋದಲ್ಲಿ ಹನುಮಾನ್ ಗುಡಿ ನಿರ್ಮಿಸಿದ ಮುಸ್ಲಿಂ ವ್ಯಕ್ತಿ! ಸಹೋದರತ್ವ, ಗೌರವದ ಸಂಕೇತ ಎಂದ ಲಾಲ್ ಸಾಬ್ – Kannada News | Muslim Man Builds Hanuman Temple at Dharwad Bus Depot, Symbol of Brotherhood and Mutual Respect

ಹನುಮಾನ್ ಗುಡಿ ಎದುರು ಲಾಲ್ ಸಾಬ್Image Credit source: The New Indian Express

ಧಾರವಾಡ, ಜನವರಿ 5: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (NWKSRTC) ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಮುಸ್ಲಿಂ ಕಾನ್‌ಸ್ಟೆಬಲ್ ಒಬ್ಬರು ಧಾರವಾಡದ ಬಸ್ ಡಿಪೋ ಆವರಣದಲ್ಲಿ ಹನುಮಂತನ ಗುಡಿ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ. ಹನುಮಾನ ಗುಡಿ ನಿರ್ಮಾಣವು ಕಳೆದ ವರ್ಷ ಪೂರ್ಣಗೊಂಡಿದ್ದರೂ ಇತ್ತೀಚೆಗೆ ಬೆಳಕಿಗೆ ಬಂದಿದೆ. ಲಾಲ್ ಸಾಬ್ ರಸಲ್​ಸಾಬ್ ಬೂದಿಹಾಳ (60) ತಮ್ಮ ಸಮುದಾಯದ ಮುಖಂಡರು ಮತ್ತು ನಿಗಮದ ಉನ್ನತ ಅಧಿಕಾರಿಗಳ ವಿರೋಧದ ಹೊರತಾಗಿಯೂ ಹನುಮಾನ ಗುಡಿ ನಿರ್ಮಾಣ ಕೈಗೆತ್ತಿಕೊಂಡಿದ್ದರು. ಅವರು ಸ್ವಂತ ಹಣ ಮತ್ತು ಇಲಾಖೆಯಲ್ಲಿರುವ ಸಹೋದ್ಯೋಗಿಗಳ ನೆರವಿನಿಂದ ಗುಡಿ ನಿರ್ಮಾಣಕ್ಕೆ ಹಣ ಹೊಂದಿಸಿದ್ದರು.

ಗುಡಿ ನಿರ್ಮಾಣ ವಿಚಾರದಲ್ಲಿ ನಿಗಮದ ಭದ್ರತಾ ಮತ್ತು ವಿಜಿಲೆನ್ಸ್ ವಿಭಾಗದ ನೌಕರರು ಮತ್ತು ಅಧಿಕಾರಿಗಳ ನಡುವೆ ಘರ್ಷಣೆಗಳು ನಡೆದಿದ್ದವು ಎಂದು ರಸಲ್​ಸಾಬ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಗುಡಿಯಲ್ಲಿ ಪ್ರತಿಷ್ಠಾಪಿಸಲು ತರಲಾದ ವಿಗ್ರಹವನ್ನು ಹೊಸ ಡಿಪೋ ಆವರಣದಲ್ಲಿ ಇರಿಸಲಾಗಿತ್ತು.

ಹನುಮಾನ ಗುಡಿ ಬಗ್ಗೆ ಲಾಲ್ ಸಾಬ್ ರಸಲ್​ಸಾಬ್ ಹೇಳಿದ್ದೇನು?

‘ಹೊಸ ಡಿಪೋದಲ್ಲಿ ಕರ್ತವ್ಯದಲ್ಲಿದ್ದಾಗ, ವಾಹನ ಪಾರ್ಕಿಂಗ್ ಸ್ಥಳದಲ್ಲಿ ವಿಗ್ರಹ ಬಿದ್ದಿರುವುದನ್ನು ನೋಡಿದೆ. ದೇವರ ಮೂರ್ತಿಯನ್ನು ಕೆಟ್ಟದಾಗಿ ನಡೆಸಿಕೊಂಡ ರೀತಿ ನನಗೆ ನೋವುಂಟು ಮಾಡಿತು ಮತ್ತು ಗುಡಿ ನಿರ್ಮಿಸಲು ನಿರ್ಧರಿಸಿದೆ. ಅನೇಕ ಜನರು ವಿರೋಧಿಸಿದರು. ಆದರೆ ನಾನು ಹಿಂದೆ ಸರಿಯಲಿಲ್ಲ. ಇದು ಕೇವಲ ಹನುಮಾನ ಗುಡಿಯಲ್ಲ, ಇದು ಇತರ ಧರ್ಮಗಳ ಕಡೆಗೆ ಸಹೋದರತ್ವ ಮತ್ತು ಗೌರವದ ಸಂಕೇತವಾಗಿದೆ’ ಎಂದು ಲಾಲ್ ಸಾಬ್ ರಸಲ್​ಸಾಬ್ ಬೂದಿಹಾಳ ತಿಳಿಸಿದ್ದಾರೆ.

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉದ್ಯೋಗಿಗಳು ಹೇಳಿದ್ದೇನು?

ಗುಡಿ ನಿರ್ಮಾಣದ ಆರಂಭಿಕ ಹಂತದಲ್ಲಿ ಕೆಲವು ಉದ್ಯೋಗಿಗಳು ಕೈಜೋಡಿಸಿದ್ದರು. ಆದರೆ ವಿಜಿಲೆನ್ಸ್ ತಂಡದಿಂದ ಅಮಾನತುಗೊಳಿಸುವ ಬೆದರಿಕೆ ಬಂದ ನಂತರ ಅವರೆಲ್ಲ ಹಿಂದೆ ಸರಿದಿದ್ದರು ಎಂದು ಡಿಪೋದ ಒಬ್ಬರು ಉದ್ಯೋಗಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಆದಾಗ್ಯೂ, ಲಾಲ್‌ಸಾಬ್ ಎಂದಿಗೂ ಹಿಂದೆ ಸರಿಯಲಿಲ್ಲ. ಅವರಿಗೆ ಅವರ ಸಮುದಾಯದವರಿಂದಲೇ ಬೆದರಿಕೆಗಳು ಬಂದಿದ್ದವು. ಆದರೆ ದೃಢನಿಶ್ಚಯದ ಬಲ ಮತ್ತು ಹನುಮಂತನ ಆಶೀರ್ವಾದವು ಅವರು ಗುರಿ ತಲುಪಲು ಸಹಾಯ ಮಾಡಿತು ಎಂದು ಉದ್ಯೋಗಿ ಹೇಳಿದ್ದಾರೆ.

ಇದನ್ನೂ ಓದಿ: ಮರ್ಯಾದೆಗೇಡು ಹತ್ಯೆ ತಡೆಗೆ ವಿಶೇಷ ಕಾನೂನು: ಸಿದ್ದರಾಮಯ್ಯ ಅಧಿಕೃತ ಘೋಷಣೆ

ಲಾಲ್ ಸಾಬ್ ಒಬ್ಬ ನಿಷ್ಠಾವಂತ ವ್ಯಕ್ತಿ ಮತ್ತು ಅವರ ವಿರೋಧಿಗಳು ಗುಡಿ ನಿರ್ಮಾಣವನ್ನು ನಿಲ್ಲಿಸುವಲ್ಲಿ ವಿಫಲರಾದರು. ಒಂದು ಹಂತದ ನಂತರ, ಮುಸ್ಲಿಂ ಸಮುದಾಯದ ಬಹುಪಾಲು ಉದ್ಯೋಗಿಗಳೇ ಅವರನ್ನು ಬೆಂಬಲಿಸಿದರು ನಿಗಮದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link