All posts by nagaraj11081993

Chanakya Niti: ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬಾರದು – Kannada News | Chanakya Niti: Chanakya says one should not help such people

ಸಹಾಯ (Help) ಎಂದು ಬೇಡಿ ಬಂದವರಿಗೆ ಉಪಕಾರ ಮಾಡುವುದು ಮಾನವನ ಸಹಜ ಗುಣ. ಪ್ರತಿಯೊಬ್ಬರೂ ಸಹ ತಮ್ಮವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯವನ್ನು ಮಾಡುತ್ತಲೇ ಇರುತ್ತಾರೆ. ಆದರೆ ಈ ರೀತಿ ಎಲ್ಲರಿಗೂ ಸಹಾಯ ಮಾಡುವುದು ಸರಿಯಲ್ಲ, ಇದರಿಂದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಹೌದು ಒಂದು ಜನರಿಗೆ ಸಹಾಯ ಮಾಡಿದರೆ ಅದರಿಂದ ಒಳ್ಳೆಯದಕ್ಕಿಂದ ಕೆಟ್ಟದಾಗುವುದೇ ಹೆಚ್ಚಂತೆ. ಹಾಗಿದ್ರೆ ಯಾರಿಗೆಲ್ಲಾ ಸಹಾಯ ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

ಇಂತಹ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ:

ಸಹಾಯ ಮಾಡದವರಿಗೆ ಸಹಾಯ ಮಾಡಬೇಡಿ: ನೀವು ಮೊದಲು ಮಾಡಿದ ಸಹಾಯವನ್ನು ಹಗುರವಾಗಿ ಪರಿಗಣಿಸುವ, ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಸಹಾಯ ಮಾಡದೆ ಕಟುವಾಗಿ ವರ್ತಿಸಿದವರಿಗೆ ನೀವು ಎಂದಿಗೂ ಸಹಾಯ ಮಾಡಬೇಡಿ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಇಂತಹ ಜನರು ನಿಮ್ಮ ಸಹಾಯವನ್ನು ಗೌರವಿಸುವುದಿಲ್ಲ ಜೊತೆಗೆ ಇಂತಹವರಿಂದ ನೀವು ಬರೀ ನಿರಾಶೆಯನ್ನೇ ಅನುಭವಿಸುತ್ತೀರಿ. ಹಾಗಾಗಿ ಈ ರೀತಿಯ ಜನರಿಗೆ ಸಹಾಯ ಮಾಡುವ ತಪ್ಪನ್ನು ಮಾಡಬೇಡಿ.

ಪದೇ ಪದೇ ತಪ್ಪುಗಳನ್ನು ಮಾಡುವ ಜನರು: ಆಚಾರ್ಯ ಚಾಣಕ್ಯ ಹೇಳುವಂತೆ ಕೆಲವು ಜನರು ತಮ್ಮ ತಪ್ಪುಗಳಿಂದ ಕಲಿಯುವುದಿಲ್ಲ, ಬದಲಿಗೆ ಅವುಗಳನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಲೇ ಇರುತ್ತಾರೆ. ಅಂತಹ ಜನರು ಯಾವಾಗಲೂ ಇತರರಿಂದ ಸಹಾಯವನ್ನು ನಿರೀಕ್ಷಿಸುತ್ತಾರೆ. ನೀವು ಅಂತಹ ವ್ಯಕ್ತಿಗೆ ಸಹಾಯ ಮಾಡಿದಾಗ, ಅವರ ಸಮಸ್ಯೆ ಬಗೆಹರಿಯುತ್ತದೆ, ಆದರೆ ಅವರು ಸುಧಾರಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ. ನೀವು ಪ್ರತಿ ಬಾರಿಯೂ ಅವರಿಗೆ ಸಹಾಯ ಮಾಡಿದರೆ ನಿಮ್ಮ ಸಮಯ, ಶಕ್ತಿ ವ್ಯರ್ಥವಾಗುವುದಲ್ಲದೆ, ನಿಮ್ಮ ಮಾನಸಿಕ ಶಾಂತಿಯೂ ಹಾಳಾಗುತ್ತದೆ.

ಸ್ವಾರ್ಥಿ ಜನರು: ಆಚಾರ್ಯ ಚಾಣಕ್ಯರ ಪ್ರಕಾರ, ಸ್ವಾರ್ಥಿಗಳು ಸಂಬಂಧಗಳನ್ನು ಭಾವನೆಗಳ ಆಧಾರದ ಮೇಲೆ ನೋಡುವುದಿಲ್ಲ, ಬದಲಿಗೆ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಉಪಯೋಗಿಸುತ್ತಾರೆ ಮತ್ತು ತಮ್ಮ ಕಾರ್ಯ ಸಾಧಿಸಿದ ನಂತರ ನಿಮ್ಮನ್ನು ದೂರವಿಡುತ್ತಾರೆ. ಇಂತಹ ಸ್ವಾರ್ಥಿಗಳಿಗೆ ಸಹಾಯ ಮಾಡುವುದರಿಂದ ನಿಮ್ಮ ಭಾವನೆಗಳಿಗೆ ಪೆಟ್ಟಾಗುತ್ತದೆ. ಆದ್ದರಿಂದ ಇಂತಹ ಸ್ವಾರ್ಥ ಮನೋಭಾವದವರಿಗೆ ಸಹಾಯವನ್ನು ಮಾಡಬೇಡಿ.

ಇದನ್ನೂ ಓದಿ: ಶ್ರೀಮಂತಿಕೆಯನ್ನು ಗಳಿಸಬೇಕೆಂದರೆ ಮೊದಲು ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ನಕಾರಾತ್ಮಕವಾಗಿ ಯೋಚಿಸುವ ಜನರು: ಚಾಣಕ್ಯ ನೀತಿಯ ಪ್ರಕಾರ, ನಕಾರಾತ್ಮಕ ಚಿಂತನೆಯುಳ್ಳ ಜನರು ಪ್ರತಿಯೊಂದು ಸನ್ನಿವೇಶದಲ್ಲೂ ನ್ಯೂನತೆಗಳು ಮತ್ತು ಸಮಸ್ಯೆಗಳನ್ನು ಮಾತ್ರ ನೋಡುತ್ತಾರೆ. ನೀವು ಅವರಿಗೆ ಎಷ್ಟೇ ಸಹಾಯ ಮಾಡಿದರೂ ಅವರು ಎಂದಿಗೂ ತೃಪ್ತರಾಗಲು ಸಾಧ್ಯವಿಲ್ಲ. ಜೊತೆಗೆ ನೀವು ಅವರಿಗೆ ಸಹಾಯ ಮಾಡಿದ್ದೀರೆಂದು ಕೃತಜ್ಞತೆಯನ್ನೂ ತೋರುವುದಿಲ್ಲ.  ಅಂತಹ ಜನರಿಗೆ ಸಹಾಯ ಮಾಡುವುದರಿಂದ ನಿಮ್ಮ ಮಾನಸಿಕ ಶಾಂತಿ ಸಂಪೂರ್ಣವಾಗಿ ನಾಶವಾಗುತ್ತದೆ, ನಿಮ್ಮ ಆತ್ಮವಿಶ್ವಾಸವೇ ಕಡಿಮೆಯಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಮೋಸಗಾರರು: ಚಾಣಕ್ಯನ ಪ್ರಕಾರ, ಸುಳ್ಳು ಹೇಳುವ ಮತ್ತು ಮೋಸ ಮಾಡುವ ಜನರಿಂದ ಒಬ್ಬರು ದೂರವಿದ್ದಷ್ಟೂ ಒಳ್ಳೆಯದು. ಅಂತಹ ಜನರು ತಮ್ಮ ಅಗತ್ಯಗಳಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಅಂತಹವರಿಗೆ ಸಹಾಯ ಮಾಡುವುದರಿಂದ ನಿಮಗೆ ಅಪಾಯ ಹೆಚ್ಚು. ಇದಲ್ಲದೆ ಕೆಟ್ಟ ಚಟವನ್ನು ಹೊಂದಿರುವ, ದುರಾಸೆ ಮನೋಭಾವದ ಜನರಿಗೂ ಸಹಾಯ ಮಾಡಬಾರದು ಎಂದಿದ್ದಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಂದ್ರ ಗ್ರಹಣದಂದು ಭಕ್ತರಿಗೆ ಮಂತ್ರಾಲಯ ರಾಯರ ದರ್ಶನ ಇರುತ್ತಾ? ಇಲ್ಲಿದೆ ಮಾಹಿತಿ – Kannada News | Lunar Eclipse: Mantralaya Raghavendra Swamy Mutt Open for Darshan to devotees

ರಾಯಚೂರು, ಮಾರ್ಚ್​ 02: ನಾಳೆ ಖಗ್ರಾಸ್ ಚಂದ್ರಗ್ರಹಣ ಹಿನ್ನೆಲೆ ದೇವಸ್ಥಾನಗಳ ಬಾಗಿಲು ಬಂದ್ ಆಗಲಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಆದರೆ ಮಂತ್ರಾಲಯ ರಾಯರ ಮಠದಲ್ಲಿ (Mantralaya Raghavendra Swamy Mutt) ಮಾತ್ರ ಎಂದಿನಂತೆ ಗ್ರಹಣವದ ವೇಳೆಯೂ ಭಕ್ತರಿಗೆ ರಾಯರ ದರ್ಶನಕ್ಕೆ ಅವಕಾಶ ಇದೆ. ಧಾರ್ಮಿಕ ಸೇವೆಗಳು, ಪ್ರಸಾದ ಸೇವೆ ಇರಲ್ಲ. ಅಷ್ಟೇ ಅಲ್ಲ, ರಾಯರಿಗೂ ವಿಶೇಷ ಅಲಂಕಾರಗಳು ಇರಲ್ಲ, ಕೇವಲ ಜಲಾಭಿಷೇಕ ಮಾತ್ರ ಇರತ್ತೆ.

ಧಾರ್ಮಿಕ ಸೇವೆಗಳು ಮಾತ್ರ ಸ್ಥಗಿತ

ಸಾಮಾನ್ಯವಾಗಿ ಗ್ರಹಣಗಳು ಗೋಚರಿಸುವ ವೇಳೆ ಧಾರ್ಮಿಕ ಕೇಂದ್ರಗಳಲ್ಲಿ ದೇವಸ್ಥಾನಗಳ ಬಾಗಿಲುಗಳನ್ನ ಹಾಕಿ, ಗ್ರಹಣದ ಸಂದರ್ಭದಲ್ಲಿ ಕೆಲ ಧಾರ್ಮಿಕ ಪದ್ದತಿಗಳನ್ನ ಅನುಸರಿಸಲಾಗತ್ತೆ. ಆದರೆ ಈ ವರ್ಷದ ಮೊದಲ ಖಗ್ರಾಸ್ ಚಂದ್ರಗ್ರಹಣದ ಹಿನ್ನೆಲೆ, ಮಂತ್ರಾಲಯದ ರಾಯರ ಮಠದಲ್ಲಿ ಯಾವುದೇ ನಿರ್ಬಂಧಗಳಿಲ್ಲ. ರಾಯರ ಭಕ್ತರು ಎಂದಿನಂತೆ ಶ್ರೀ ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆಯಲು ಮುಕ್ತ ಅವಕಾಶ ಇದೆ.

ಇದನ್ನೂ ಓದಿ: Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ಇಲ್ಲಿದೆ ನೋಡಿ

ಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆ ರಾಯರ ಮಠಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ನಾಳೆ ಗ್ರಹಣ ಇರುವ ಹಿನ್ನೆಲೆ ಸೂರ್ಯೋದಯದಿಂದ ಗ್ರಹಣ ಮುಕ್ತಾಯದವರೆಗೆ ಶ್ರೀ ಮಠದಲ್ಲಿ ಎಂದಿನಂತೆ ಭಕ್ತರಿಗೆ ರಾಯರ ದರ್ಶನ ಲಭ್ಯವಿರುತ್ತದೆ.

ಗ್ರಹಣದ ವೇಳೆ ರಾಯರ ಮಠದಲ್ಲಿ ಏನಿರತ್ತೆ, ಏನಿರಲ್ಲ?

  • ವಿಶೇಷ ಪೂಜೆಗಳು, ಸೇವೆಗಳು ಮತ್ತು ಪ್ರಸಾದದ ವ್ಯವಸ್ಥೆ ಇರಲ್ಲ
  • ರಾಯರ ಮೂಲಬೃಂದಾವನಕ್ಕೆ ಅಲಂಕಾರ ಇರಲ್ಲ, ಕೇವಲ ಜಲಾಭಿಷೇಕ ಮಾತ್ರ ನಡೆಯಲಿದೆ.
  • ಮಠದ ನಿಗದಿತ ಸಮಯದ ಅವಧಿಯಂತೆ ದರ್ಶನಕ್ಕೆ ಅವಕಾಶ ಇರುತ್ತದೆ.
  • ಭಕ್ತರಿಗೆ ತೀರ್ಥ ಪ್ರಸಾದ ಮಾತ್ರ ವಿತರಿಸಲಾಗುತ್ತದೆ.

ಮಂತ್ರಾಲಯ ವಿದ್ಯಾಪೀಠದ ಪ್ರಾಂಶುಪಾಲ ವಾದಿರಾಜಾಚಾರ್ಯ ಹೇಳಿದ್ದಿಷ್ಟು 

ಇತ್ತ ಚಂದ್ರಗ್ರಹಣ ಬಗ್ಗೆ ಮಂತ್ರಾಲಯ ವಿದ್ಯಾಪೀಠದ ಪ್ರಾಂಶುಪಾಲ ವಾದಿರಾಜಾಚಾರ್ಯ ಟಿವಿ9ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ದೇವಸ್ಥಾನಗಳಲ್ಲಿ ಬಾಗಿಲು ಹಾಕಲಾಗತ್ತೆ, ರಾಯರ ಮಠದಲ್ಲಿ ಆ ರೀತಿ ಬಾಗಿಲು ಹಾಕುವ ಪದ್ದತಿ ಇಲ್ಲ. ಭಕ್ತರಿಗೆ ರಾಯರ ದರ್ಶನಕ್ಕೆ ಮುಕ್ತವಾದ ಅವಕಾಶ ಇದೆ ಅಂತ ಹೇಳಿದ್ದಾರೆ.

ಸಾಮಾನ್ಯವಾಗಿ ದೇವತಾ ಸನ್ನಿವೇಶಗಳಲ್ಲಿ ಇರುವ ದೇವಸ್ಥಾನಗಳಲ್ಲಿ ಗ್ರಹಣದ ವೇಳೆ ಬಾಗಿಲು ಹಾಕುವ ಪದ್ಧತಿ ಇದೆ. ಆದರೆ ಇಲ್ಲಿ ರಾಯರು ಯತಿಗಳು, ಅವರು ಈ ಸನ್ನಿಧಿಯಲ್ಲಿ ನೆಲೆಸಿದ್ದಾರೆ ಎಂಬ ಭಕ್ತರ ನಂಬಿಕೆ ಇದೆ. ಸುಮಾರು 350ಕ್ಕೂ ಹೆಚ್ಚು ವರ್ಷಗಳಾದರೂ ರಾಯರು ದೇಹ ತ್ಯಜಿಸಿಲ್ಲ, ಸಾಧನೆಗಾಗಿ ಅಭಿವ್ಯಕ್ತರಾಗಿದ್ದಾರೆ ಎಂಬ ಭಕ್ತಿ ಪರಂಪರೆ ಇದೆ. ಹೀಗಾಗಿ ಇಲ್ಲಿ ಬಾಗಿಲನ್ನ ಹಾಕುವ ಪದ್ದತಿ ಇಲ್ಲ ಅಂತ ವಾದಿರಾಜಾಚಾರ್ಯರು ಮಾಹಿತಿ ಬಂದಿಲ್ಲ.

ಗ್ರಸ್ತೋದಯ ಚಂದ್ರಗ್ರಹಣ ಎಂದರೇನು ಗೊತ್ತಾ?

ಇದಷ್ಟೇ ಅಲ್ಲ, ಗ್ರಹಣದ ಸಮಯದ ಬಗ್ಗೆ ಕೂಡ ವಾದಿರಾಜಾಚಾರ್ಯರು ಪ್ರತಿಕ್ರಿಯಿಸಿದ್ದು, ಗ್ರಹಣ ವಿಶೇಷತೆ, ಅದರ ಅವಧಿ, ಆ ವೇಳೆ ಮಾಡಬೇಕಾದ ಕಾರ್ಯಗಳ ಬಗ್ಗೆಯೂ ತಿಳಿಸಿದ್ದಾರೆ. ಪೂರ್ಣಗ್ರಾಸ ಗ್ರಸ್ತೋದಯ ಚಂದ್ರಗ್ರಹಣ ಎಂದರೆ ಚಂದ್ರ ಹುಟ್ಟಿದ ಸಮಯದಲ್ಲಿ ಗ್ರಹಣದ ಆರಂಭವಾಗುವುದು. ಸಾಮಾನ್ಯವಾಗಿ, ಚಂದ್ರಗ್ರಹಣವು ಚಂದ್ರ ಉದಯದ ನಂತರ ಸಿದ್ಧವಾಗುತ್ತದೆ, ಆದರೆ ಈ ಬಾರಿಗೆ ಚಂದ್ರ ಉದಯದ ಜೊತೆ ಗ್ರಹಣವು ಸಂಭವಿಸಲಿದೆ ಎಂದರು.

ಗ್ರಹಣದ ಸಮಯದಲ್ಲಿ ತಂತ್ರಪ್ರಕಾರವಾಗಿ, 6:26ರ ಸಮಯದಲ್ಲಿ ಚಂದ್ರೋದಯವಾಗುತ್ತದೆ. ಮತ್ತು 6:26 ರಿಂದ 6:47 ರವರೆಗೆ ಗ್ರಹಣದ ಅವಧಿ ಇರುತ್ತದೆ. ಈ ಅವಧಿಯಲ್ಲಿ ಕಣ್ಣಿಗೆ ದೃಶ್ಯವಾಗುವ ಗ್ರಹಣವನ್ನು ನೀವು ಅನುಭವಿಸಬಹುದು ಅಂತ ತಿಳಿಸಿದ್ದಾರೆ. ಅಲ್ಲದೇ ಗ್ರಹಣದ ಅನುಷ್ಠಾನವನ್ನು ಈ ಸಮಯದಲ್ಲಿ ಮಾತ್ರ ಮಾಡುವುದಾದ್ದರಿಂದ, 6:26 ರಿಂದ 6:47 ರವರೆಗೆ 21 ನಿಮಿಷಗಳ ಅವಧಿಯಲ್ಲೇ ಅನುಷ್ಠಾನವನ್ನು ಮಾಡುವುದು ಶ್ರೇಯಕರಾಗುತ್ತದೆ ಎಂದು ವಾದಿರಾಜಾಚಾರ್ಯರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Lunar Eclipse: ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!

ಬರೀ ಇದಷ್ಟೇ ಅಲ್ಲ, ರಾಯರ ಮಠದಲ್ಲಿ ನಾಳೆ ಗ್ರಹಣದ ವೇಳೆ ವಿಶೇಷ ಹೋಮ-ಹವನಗಳು ನಡೆಯಲಿದ್ದು, ಅದರಲ್ಲಿ ಭಕ್ತರು ಮುಕ್ತವಾಗಿ ಭಾಗವಹಿಸಲು ಅವಕಾಶವೂ ಇದೆ. ಇತ್ತ ಗ್ರಹಣದ ಬಳಿಕ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿ ರಾಯರ ದರ್ಶನ ಪಡೆಯುವ ವಾಡಿಕೆಯೂ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೈವಕ್ಕೆ ಅವಮಾನ ಮಾಡಿದ ಕೇಸ್: ಮಾರ್ಚ್ 9ರ ತನಕ ರಣವೀರ್ ಸಿಂಗ್ ನಿರಾಳ – Kannada News | Ranveer Singh gets relief till March 9 in Kantara Chapter 1 Daiva controversy

‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದ ಬಗ್ಗೆ ಮಾತನಾಡುವಾಗ ನಟ ರಣವೀರ್ ಸಿಂಗ್ ಅವರು ದೈವಕ್ಕೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿದ್ದರು. ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಆ ಪ್ರಕರಣದಲ್ಲಿ ಮಾರ್ಚ್ 9ರವರೆಗೂ ರಣವೀರ್ ಸಿಂಗ್ ಅವರಿಗೆ ರಿಲೀಫ್ ಸಿಕ್ಕಿದೆ. ಕೇಸ್ ರದ್ದು ಕೋರಿ ರಣವೀರ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆದಿದೆ. ಯುದ್ಧದಿಂದಾಗಿ ರಣವೀರ್ ಸಿಂಗ್ (Ranveer Singh) ಪರ ವಕೀಲರು ಇಂಗ್ಲೆಂಡ್‌ನಲ್ಲೇ ಉಳಿದಿದ್ದಾರೆ.

ವಿಮಾನವಿಲ್ಲದೇ ಭಾರತಕ್ಕೆ ವಾಪಸಾಗುತ್ತಿಲ್ಲವೆಂದು ಸಜನ್ ಪೂವಯ್ಯ ಹೇಳಿದ್ದಾರೆ. ‘ರಣವೀರ್ ಸಿಂಗ್‌ಗೆ ನೋಟಿಸ್ ನೀಡಿದ್ದೇವೆ, ಸಮಯ ಕೇಳಿದ್ದಾರೆ’ ಎಂದು ಸರ್ಕಾರದ ಪರ ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್ ಹೇಳಿಕೆ ನೀಡಿದ್ದಾರೆ. ಪೊಲೀಸರು ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಈ ಮೊದಲು ನೀಡಿದ್ದ ಆದೇಶವನ್ನು ಮಾರ್ಚ್ 9ರವರೆಗೆ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ.

ಏನಿದು ವಿವಾದ?
ಕಳೆದ ವರ್ಷ ನಡೆದ ಗೋವಾ ಚಲನಚಿತ್ರೋತ್ಸವದಲ್ಲಿ ರಣವೀರ್ ಸಿಂಗ್, ರಿಷಬ್ ಶೆಟ್ಟಿ ಮುಂತಾದವರು ಭಾಗಿಯಾಗಿದ್ದರು. ವೇದಿಕೆಯಲ್ಲಿ ಮಾತನಾಡುವಾಗ ರಣವೀರ್ ಸಿಂಗ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿನ ರಿಷಬ್ ಶೆಟ್ಟಿಯ ನಟನೆಯನ್ನು ಹೊಗಳಿದರು. ಮಾತಿನ ಭರದಲ್ಲಿ ಅವರು ದೈವದ ಅನುಕರಣೆ ಮಾಡಿ ತೋರಿಸಿದರು.

ರಣವೀರ್ ಸಿಂಗ್ ಅವರು ದೈವದ ಅನುಕರಣೆ ಮಾಡಿದ್ದು ಆಕ್ಷೇಪಾರ್ಹವಾಗಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಖಂಡಿಸಿದರು. ದೈವವನ್ನು ನಂಬುವ ಜನರ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಿದೆ ಎಂದು ಆರೋಪಿಸಿ ರಣವೀರ್ ಸಿಂಗ್ ವಿರುದ್ಧ ಕೇಸ್ ದಾಖಲಿಸಲಾಯಿತು. ಈ ಕೇಸ್​ ಕೈ ಬಿಡುವಂತೆ ರಣವೀರ್ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಟಾಕ್ಸಿಕ್ Vs ಧುರಂದರ್ 2: ಅಡ್ವಾನ್ಸ್ ಬುಕಿಂಗ್​ನಲ್ಲಿ ಮುನ್ನಡೆ ಸಾಧಿಸಿದ ರಣವೀರ್ ಸಿಂಗ್ ಸಿನಿಮಾ

2025ರ ಡಿಸೆಂಬರ್ ತಿಂಗಳಲ್ಲಿ ರಣವೀರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಯಿತು. ಹೈಗ್ರೌಂಡ್ಸ್ ಪೊಲೀಸರು ಎಫ್​ಐಆರ್ ದಾಖಲು ಮಾಡಿದರು. ಆ ಪ್ರಕರಣವನ್ನು ಕೈ ಬಿಡುವಂತೆ ಮನವಿ ಮಾಡಿರುವ ರಣವೀರ್ ಸಿಂಗ್ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಸದ್ಯಕ್ಕೆ ಮಾರ್ಚ್ 9ರವರೆಗೂ ಅವರಿಗೆ ರಿಲೀಫ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಧ್ಯಪ್ರಾಚ್ಯ ಯುದ್ಧಕ್ಕೆ ಗಡಗಡ ನಡುಗಿದ ಪಾಕಿಸ್ತಾನದ ಷೇರುಪೇಟೆ; ಒಂದೇ ದಿನ 15,000 ಅಂಕಗಳು ಪತನ; ಶೇ. 9ರಷ್ಟು ಸಂಪತ್ತು ನಷ್ಟ – Kannada News | Middle east crisis effect, Pakistan stock market down by 9pc in a single session

ಇಸ್ಲಾಮಾಬಾದ್, ಮಾರ್ಚ್ 2: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಜಾಗತಿಕವಾಗಿ ಎಲ್ಲಾ ಷೇರು ಮಾರುಕಟ್ಟೆಗಳನ್ನು ಅಲುಗಾಡಿಸುತ್ತಿದೆ. ಭಾರತದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ತತ್ತರಿಸಿವೆ. ಶೇ. 1-2ರಷ್ಟು ಕುಸಿತ ಕಂಡಿವೆ. ಆದರೆ, ಪಾಕಿಸ್ತಾನದ ಷೇರು ಮಾರುಕಟ್ಟೆ (Pakistan Stock Market) ಅತಿ ಹೆಚ್ಚು ಕರಡಿ ಕುಣಿತ ಕಂಡಿದೆ. ಇಂದು ಸೋಮವಾರದ ವಹಿವಾಟಿನಲ್ಲಿ ಪಾಕಿಸ್ತಾನ ಷೇರು ವಿನಿಮಯ ಕೇಂದ್ರದ ಕೆಎಸ್​ಇ-100 ಇಂಡೆಕ್ಸ್ (KSE-100 index) ಶೇ. 9ರಷ್ಟು ಕುಸಿತ ಕಂಡಿದೆ., ಕೆಎಸ್​ಇ-30 ಇಂಡೆಕ್ಸ್ ಕೂಡ ಕೆಳಗಿನ ಸರ್ಕ್ಯುಟ್ ಮಿತಿ ಮುಟ್ಟಿದೆ.

ಪಾಕಿಸ್ತಾನದ ಷೇರು ಮಾರುಕಟ್ಟೆ ಬಹಳ ಅಸ್ತಿರತೆಯಿಂದ ಕೂಡಿದೆ. ಇಲ್ಲಿ ಲಿಸ್ಟ್ ಆಗಿರುವ ಷೇರುಗಳ ಸಂಖ್ಯೆ ಕಡಿಮೆ ಇರುವುದರಿಂದ ವೊಲಾಟಾಲಿಟಿ ಅಥವಾ ಪ್ರಕ್ಷುಬ್ದತೆ ಅಥವಾ ಕುಲುಕಾಟ ತೀವ್ರವಾಗಿರುತ್ತದೆ.

ಇದನ್ನೂ ಓದಿ: ಜನವರಿವರೆಗೂ ಭಾರತದ ಒಟ್ಟಾರೆ ರಫ್ತು 720 ಬಿಲಿಯನ್ ಡಾಲರ್; ಹಿಂದಿನ ವರ್ಷದಕ್ಕಿಂತ ಶೇ. 6.15 ಹೆಚ್ಚಳ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಇಸ್ರೇಲ್, ಅಮೆರಿಕ, ಇರಾನ್ ಮಧ್ಯೆ ಮಾತ್ರ ಸೀಮಿತವಾಗಿಲ್ಲ. ಕೊಲ್ಲಿ ದೇಶಗಳನ್ನೂ ಇರಾನ್ ಗುರಿ ಮಾಡಿ ದಾಳಿ ಮಾಡುತ್ತಿರುವುದು ಪಾಕಿಸ್ತಾನೀಯರಿಗೆ ಅನಿರೀಕ್ಷಿತ ಬೆಳವಣಿಗೆ ಎನಿಸಿದೆ. ಪಾಕಿಸ್ತಾನದ ಹೆಚ್ಚಿನ ವ್ಯಾಪಾರ ವಹಿವಾಟು ಗಲ್ಫ್ ದೇಶಗಳೊಂದಿಗೆ ಇರುವುದರಿಂದ ಅಲ್ಲಿಯ ಬಿಕ್ಕಟ್ಟು ಈ ದೇಶಕ್ಕೆ ಅತಿಹೆಚ್ಚು ಬಾಧೆ ಉಂಟುಂ ಮಾಡುವ ವಿಚಾರ.

ಕುಸಿತದ ತೀವ್ರತೆಯಿಂದ ಟ್ರೇಡಿಂಗೇ ಬಂದ್

ಪಾಕಿಸ್ತಾನದ ಬ್ಯಾಂಕ್​ಗಳು, ಇಂಧನ ಸಂಸ್ಥೆಗಳು, ಸಿಮೆಂಟ್, ರಸಗೊಬ್ಬರ, ಆಟೊಮೊಬೈಲ್ ಅಸೆಂಬ್ಲಿಂಗ್, ವಿದ್ಯುತ್ ಕಂಪನಿಗಳ ಷೇರುಗಳಿಗೆ ಸೋಮವಾರ ತೀವ್ರ ಹಿನ್ನಡೆಯಾಗಿದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?

ಕೆಎಸ್​ಇ-100 ಮತ್ತು ಕೆಎಸ್​ಇ-30 ಸೂಚ್ಯಂಕಗಳಲ್ಲಿ ಕುಸಿತ ಬಹಳ ತೀವ್ರವಾಗಿತ್ತು. ಹೂಡಿಕೆದಾರರು ಮನಬಂದಂತೆ ಷೇರುಗಳನ್ನು ಮಾರುತ್ತಿರುವ ಟ್ರೆಂಡ್ ಗೋಚರಿಸುತ್ತಿದ್ದಂತೆಯೇ ಟ್ರೇಡಿಂಗ್ ಅನ್ನೇ ನಿಲ್ಲಿಸಲಾಯಿತು. ಟ್ರೇಡಿಂಗ್ ಮುಂದುವರಿದಿದ್ದೇ ಆದಲ್ಲಿ ಪಾಕಿಸ್ತಾನದ ಷೇರು ಮಾರುಕಟ್ಟೆಯ ಕುಸಿತ ಇನ್ನಷ್ಟು ತೀವ್ರವಾಗಿರುತ್ತಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಗೋಪುರದ ಮೇಲೆ ಇರಾನ್ ದಾಳಿ – Kannada News | Bahrain skyscrapers tower on fire after Iran strike

ಬಹ್ರೇನ್, ಮಾರ್ಚ್ 2: ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ಸೌಲಭ್ಯಗಳು ಮತ್ತು ವಸತಿ ಗೋಪುರಗಳ ಮೇಲೆ ಇರಾನ್ (Iran Attack) ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಇದು ಮನಾಮದಲ್ಲಿರುವ ಅಮೆರಿಕದ ನೌಕಾಪಡೆಯ 5ನೇ ಪ್ರಧಾನ ಕಚೇರಿಯ ಬಳಿ ಅಪ್ಪಳಿಸಿತು. ಇರಾನಿನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದವು. ಈ ಸಂಘರ್ಷಕ್ಕೆ ನೇರ ಸಂಪರ್ಕ ಹೊಂದಿಲ್ಲದ ಬಹ್ರೇನ್ ಮೇಲೆ ಇರಾನ್ ದಾಳಿ ನಡೆಸಿದೆ. ಇಲ್ಲಿ ಅಮೆರಿಕದ ವಾಯುನೆಲೆ ಇರುವುದರಿಂದ ಇರಾನ್ ಅಟ್ಯಾಕ್ ಮಾಡಿದೆ. ಈ ದಾಳಿಯಿಂದ ಬಹ್ರೇನ್​ನ ಗಗನಚುಂಬಿ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇರಾನ್ ತನ್ನ ವಿರುದ್ಧದ ಮಿಲಿಟರಿ ದಾಳಿಗಳನ್ನು ಬೆಂಬಲಿಸುವ ದೇಶಗಳಲ್ಲಿನ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತ್ತು. ಇದು ಬಹ್ರೇನ್ ಮತ್ತು ಇತರ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿಗಳಿಗೆ ಕಾರಣವಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್ – Kannada News | Congress MLA satish sail Angry On His Party Minister Mankal Vaidya In KDP Meeting at Karwar

ಕಾರವಾರ, (ಮಾರ್ಚ್ 02): ಕಾಂಗ್ರೆಸ್ ಶಾಸಕರು ಹಾಗೂ ಸಚಿವ ನಡುವೆ ಹೊಂದಾಣಿಕೆ ಇಲ್ಲ. ಈ ಸಂಬಂಧ ಶಾಸಕರೇ ಕೆಲ ಸಚಿವರ ಮೇಲೆ ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದರು. ಸಚಿವರು ಕೈಗೆ ಸಿಗಲ್ಲ. ಫೋನ್ ಮಾಡಿದ್ರೆ ರಿಸಿವ್ ಮಾಡಲ್ಲ ಅಂತೆಲ್ಲಾ ಆರೋಪಗಳನ್ನು ಮಾಡಿದ್ದಾರೆ. ಇದರ ಬೆನ್ನಲ್ಲೇ ಇದಕ್ಕೆ ಪೂರಕವೆಂಬಂತೆ ಉತ್ತರ ಕನ್ನಡ ಜಿಲ್ಲಾ ಕೆಡಿಪಿ ಸಭೆಯಲ್ಲಿ ಸಚಿವ ಮಾಂಕಾಳ್ ವೈದ್ಯ ವಿರುದ್ಧದವೇ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗರಂ ಆಗಿದ್ದು, ಕೋಪಗೊಂಡು ಕೆಡಿಪಿ ಸಭೆಯಿಂದಲೇ ಹೊರ ನಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ

ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್‌ (gas) ಒಲೆಯಲ್ಲಿಯೇ ಅಡುಗೆ ಮಾಡೋದು. ಈ ಗ್ಯಾಸ್‌ ಒಲೆ ಮತ್ತು ಗ್ಯಾಸ್ ಸಿಲಿಂಡರ್‌ ಅಡುಗೆ ಮನೆಯ ಅತ್ಯಗತ್ಯ ವಸ್ತು ಅಂತಾನೇ ಹೇಳಬಹುದು. ಈ ಸಿಲಿಂಡರ್‌ಗಳಲ್ಲಿ ಗ್ಯಾಸ್‌ ಎಷ್ಟು ಮುಗಿಯುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಾಗದ ಕಾರಣ ಗ್ಯಾಸ್‌ ಯಾವಾಗ ಖಾಲಿಯಾಗುತ್ತೆ ಅನ್ನೋದನ್ನು ಅಂದಾಜಿಸುವುದೇ ಹಲವರಿಗೆ ಕಷ್ಟದ ಕೆಲಸ. ಗ್ಯಾಸ್‌ ತನ್ನಿಂದ ತಾನಾಗಿ ಆಫ್‌ ಆದಾಗಲೇ ಗ್ಯಾಸ್‌ ಮುಗಿದಿದೆ ಎನ್ನುವುದು ತಿಳಿಯುವುದು. ಹೀಗೆ ಅರ್ಜೆಂಟ್‌ ಅಡುಗೆ ಮಾಡುವ ಸಂದರ್ಭದಲ್ಲಿ ಅರ್ಧದಲ್ಲಿಯೇ ಎಲ್.ಪಿ.ಜಿ ಗ್ಯಾಸ್‌ ಸಿಲಿಂಡಿರ್‌ ಖಾಲಿಯಾಗಿ ಹಲವರು ಫಜೀತಿಗೆ ಸಿಲುಕುತ್ತಿರುತ್ತಾರೆ. ಹೀಗಿರುವಾಗ ಈ ಸಿಂಪಲ್‌ ಟ್ರಿಕ್ಸ್‌ ಪಾಲಿಸುವ ಮೂಲಕ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್‌ ಖಾಲಿಯಾಗಿದೆ ಎಂಬುದನ್ನು ನಿಮಿಷಗಳಲ್ಲಿ ಕಂಡುಹಿಡಿಯಬಹುದು.

ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂದು ಕಂಡುಹಿಡಿಯುವುದು ಹೇಗೆ?

ನಿಮ್ಮ ಗ್ಯಾಸ್ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನು ನಿರ್ಧರಿಸಲು ನೀವು  ಸರಳ ತಂತ್ರವನ್ನು ಬಳಸಬಹುದು. ಈ ತಂತ್ರವನ್ನು salve_6717 ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ಮೊದಲು, ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಹಿಂಡಿ ತೆಗೆಯಿರಿ. ಒದ್ದೆಯಾದ ಬಟ್ಟೆಯಿಂದ ಸಿಲಿಂಡರ್ ಅನ್ನು ಚೆನ್ನಾಗಿ ಒದ್ದೆ ಮಾಡಿ, ಎರಡು ನಿಮಿಷ ಕಾಯಿರಿ. ಸಿಲಿಂಡರ್‌ನಲ್ಲಿ ಎಷ್ಟು ಭಾಗ ಒಣಗಿರುತ್ತದೆಯೋ ಅಷ್ಟು ಗ್ಯಾಸ್‌ ಖಾಲಿಯಾಗಿದೆ ಎಂದರ್ಥ. ಸಿಲಿಂಡರ್‌ನಿಂದ ನೀರು ಒಣಗಿದ್ದರೆ, ಯಾವುದೇ ಗ್ಯಾಸ್ ಉಳಿದಿಲ್ಲ ಎಂದರ್ಥ. ಗ್ಯಾಸ್ ತಂಪಾಗಿರುವುದರಿಂದ, ಸಿಲಿಂಡರ್‌ನಲ್ಲಿ ಗ್ಯಾಸ್‌ ಇರುವಷ್ಟು ಭಾಗ  ಒದ್ದೆಯಾಗಿ ಕಾಣುತ್ತದೆ, ಖಾಲಿ ಜಾಗ ಬೇಗನೆ ಒಣಗುತ್ತದೆ.

ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ನಿಮ್ಮ ಮನೆಯಂಗಳಕ್ಕೆ ಹಾವುಗಳು ಬರಬಾರದೆಂದರೆ, ಗಿಡವನ್ನು ನೆಡಿ

ಸಿಲಿಂಡರ್‌ನಲ್ಲಿ ಎಷ್ಟು ಅನಿಲ ಉಳಿದಿದೆ ಎಂದು ತಿಳಿಯಲಿರುವ ಬೇರೆ ಮಾರ್ಗಗಳು:

  • ಸಿಲಿಂಡರ್‌ನಲ್ಲಿ ಗ್ಯಾಸ್ ಮಟ್ಟವನ್ನು ಪರಿಶೀಲಿಸಲು ಸುಲಭ ಮತ್ತು ಜನಪ್ರಿಯ ಮಾರ್ಗವೆಂದರೆ ನೀರು. ಒಂದು ಗ್ಲಾಸ್ ಅಥವಾ ಮಗ್‌ನಲ್ಲಿ ನೀರಿನಿಂದ ತುಂಬಿಸಿ. ಈ ನೀರನ್ನು ಸಿಲಿಂಡರ್‌ನ ಮೇಲಿನಿಂದ ಕೆಳಕ್ಕೆ ನಿಧಾನವಾಗಿ ಸುರಿಯಿರಿ. ನಂತರ, ನಿಮ್ಮ ಕೈಯಿಂದ ಸಿಲಿಂಡರ್ ಅನ್ನು ಮೇಲಿನಿಂದ ಕೆಳಕ್ಕೆ ಸ್ಪರ್ಶಿಸಿ. ಸಿಲಿಂಡರ್ ತಂಪಾಗಿರುವ ಜಾಗದಷ್ಟು ಗ್ಯಾಸ್‌ ಇದೆ ಎಂದರ್ಥ.
  • ಸಿಲಿಂಡರ್ ಅನ್ನು ತೂಕ ಮಾಡುವ ಮೂಲಕ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನು ನೀವು ಪರೀಕ್ಷಿಸಬಹುದು. ಸಿಲಿಂಡರ್‌ನ ಒಟ್ಟು ತೂಕ ಮತ್ತು ಖಾಲಿ ತೂಕವನ್ನು ಸಿಲಿಂಡರ್‌ನಲ್ಲಿ ಮುದ್ರಿಸಲಾಗುತ್ತದೆ. ಎಷ್ಟು ಅನಿಲ ಉಳಿದಿದೆ ಎಂಬುದನ್ನು ನಿರ್ಧರಿಸಲು, ಒಟ್ಟು ತೂಕದಿಂದ ಖಾಲಿ ತೂಕವನ್ನು ಕಳೆಯಿರಿ. ಉದಾಹರಣೆಗೆ, ಒಟ್ಟು ತೂಕ5 ಕೆಜಿ ಮತ್ತು ಖಾಲಿ ತೂಕ 15.5 ಕೆಜಿ ಆಗಿದ್ದರೆ, ನಿಮ್ಮ ಸಿಲಿಂಡರ್‌ನಲ್ಲಿ ಸರಿಸುಮಾರು 13 ಕೆಜಿ ಅನಿಲ ಉಳಿದಿದೆ ಎಂದರ್ಥ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನವರಿವರೆಗೂ ಭಾರತದ ಒಟ್ಟಾರೆ ರಫ್ತು 720 ಬಿಲಿಯನ್ ಡಾಲರ್; ಹಿಂದಿನ ವರ್ಷದಕ್ಕಿಂತ ಶೇ. 6.15 ಹೆಚ್ಚಳ – Kannada News | India’s overall exports in 10 months of this fy increase by over 6pc, says data

ನವದೆಹಲಿ, ಮಾರ್ಚ್ 2: ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಭಾರತದ ರಫ್ತು (India’s exports) ಆರೋಗ್ಯಕರ ವೇಗದಲ್ಲಿ ಸಾಗಿದೆ. ಏಪ್ರಿಲ್​ನಿಂದ ಜನವರಿವರೆಗೆ ಸರಕು ಮತ್ತು ಸೇವೆಗಳ ಒಟ್ಟಾರೆ ರಫ್ತು 720.76 ಬಿಲಿಯನ್ ಡಾಲರ್ ಮುಟ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 679.02 ಬಿಲಿಯನ್ ಡಾಲರ್ ರಫ್ತು ನಡೆದಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ. 6.15ರಷ್ಟು ರಫ್ತು ಹೆಚ್ಚಳ ಆಗಿದೆ.

ಜಾಗತಿಕ ಅನಿಶ್ಚಿತ ರಾಜಕೀಯ ಮತ್ತು ಆರ್ಥಿಕ ವಾತಾವರಣದಲ್ಲೂ ಭಾರತ ಪ್ರಬಲ ವ್ಯಾಪಾರ ಮುನ್ನಡೆ ಹೊಂದಿರುವುದು ಅದರ ನೀತಿ ಮತ್ತು ಆತ್ಮವಿಶ್ವಾಸ ಅಂಶಗಳು ಕಾರಣ ಎನಿಸಿವೆ.

ಏಪ್ರಿಲ್​ನಿಂದ ಜನವರಿವರೆಗೆ ಭಾರತದ ರಫ್ತು ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸರ್ವಿಸ್ ಸೆಕ್ಟರ್. ಈ ಅವಧಿಯಲ್ಲಿ ಭಾರತದಿಂದ ಸರ್ವಿಸ್ ರಫ್ತು 354.15 ಬಿಲಿಯನ್ ಡಾಲರ್ ಇದೆ. ಕಳೆದ ವರ್ಷ 320.28 ಬಿಲಿಯನ್ ಡಾಲರ್ ಇತ್ತು. ಈ ವರ್ಷ ಅದು ಶೇ. 10.57ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?

ಸರ್ವಿಸ್ ಟ್ರೇಡ್​ನಲ್ಲಿ ಭಾರತ ಸರ್​ಪ್ಲಸ್ ಹೊಂದಿದೆ. ಅಂದರೆ ಆಮದಿಗಿಂತ ರಫ್ತು ಹೆಚ್ಚಿದೆ. 2024-25ರ ಒಂದು ಹಣಕಾಸು ವರ್ಷದಲ್ಲಿ 387.5 ಬಿಲಿಯನ್ ಡಾಲರ್ ಮೊತ್ತದ ಸರ್ವಿಸ್ ರಫ್ತು ಆಗಿತ್ತು. ಅದು ಈವರೆಗಿನ ಅತಿಹೆಚ್ಚು ರಫ್ತು ಮೊತ್ತ ಎನಿಸಿದೆ. ಆ ವರ್ಷ ಟ್ರೇಡ್ ಸರ್​ಪ್ಲಅಸ್ ಬರೋಬ್ಬರಿ 188.8 ಬಿಲಿಯನ್ ಡಾಲರ್ ದಾಖಲಾಗಿತ್ತು. ಅಂದರೆ, ಆಮದಿಗಿಂತ ರಫ್ತು 188.8 ಬಿಲಿಯನ್ ಡಾಲರ್ ಹೆಚ್ಚು ಇದೆ.

ಈ ಹಣಕಾಸು ವರ್ಷದಲ್ಲಿ ಸರ್ವಿಸ್ ರಫ್ತು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಫೆಬ್ರುವರಿ ಮತ್ತು ಮಾರ್ಚ್ ತಿಂಗಳು ಬಾಕಿ ಇದ್ದು, 2024-25ರ 387.5 ಬಿಲಿಯನ್ ಡಾಲರ್ ರಫ್ತು ದಾಖಲೆಯ್ನು ಮುರಿಯಲು 34 ಬಿಲಿಯನ್ ಡಾಲರ್ ಮಾತ್ರವೇ ಬೇಕು.

ಸರಕುಗಳ ರಫ್ತು ಸಾಧಾರಣ ಏರಿಕೆ ಕಂಡಿದೆ. ಆದರೆ, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ರಫ್ತು ವೇಗವಾಗಿ ಹೆಚ್ಚಿದೆ. ಫಾರ್ಮಾ, ಎಂಜಿನಿಯರಿಂಗ್ ಸರಕು, ಪೆಟ್ರೋಲಿಯಂ, ಜವಳಿ, ಆಟೊಮೊಬೈಲ್ ರಫ್ತುಗಳೂ ಕೂಡ ಉತ್ತಮ ಪ್ರಗತಿ ಕಂಡಿವೆ.

ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್​ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚುತ್ತೆ ಗೊತ್ತಾ?

ಕಳೆದ ಮೂರು ವರ್ಷದಲ್ಲಿ ಭಾರತವು ಒಂಬತ್ತು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. 38 ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಇದೆ. ಈ ದೇಶಗಳ ಜಿಡಿಪಿ ಒಟ್ಟುಗೂಡಿಸಿದರೆ ಜಾಗತಿಕವಾಗಿ ಜಿಡಿಪಿಯ ಶೇ. 70ರಷ್ಟಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​ – Kannada News | US confirms its 3 fighter jets shot down says Kuwait did it mistakenly video is here

ಕುವೈತ್, ಮಾರ್ಚ್ 2: ಕುವೈತ್ ತನ್ನ ವ್ಯಾಪ್ತಿಯೊಳಗೆ ಬಂದ ಅಮೆರಿಕದ 3 ಫೈಟರ್​ ಜೆಟ್​​ಗಳನ್ನು ಹೊಡೆದುರುಳಿಸಿದೆ. ಅಮೆರಿಕದ (US Attack) ಬೆಂಬಲಿತ ದೇಶವಾಗಿರುವ ಕುವೈತ್ ಮಿಸ್ ಆಗಿ ಈ ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದೆ ಎಂದು ಯುಎಸ್​ ಖಚಿತಪಡಿಸಿದೆ. ಪ್ರತಿ ವಿಮಾನದಲ್ಲಿದ್ದ ಎಲ್ಲ ಏರ್‌ಕ್ರೂ ಸದಸ್ಯರು ಸುರಕ್ಷಿತವಾಗಿ ಹೊರಹಾರಲ್ಪಟ್ಟಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕುವೈತ್ ಮಿಸ್ಟೇಕ್ ಆಗಿ ನಮ್ಮ ಜೆಟ್​​ಗಳ ಮೇಲೆ ದಾಳಿ ನಡೆಸಿದೆ ಎಂದು ಅಮೆರಿಕ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ದುಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಸಿದ್ದರಾಮಯ್ಯ ಆಗ್ರಹ: ಪ್ರಧಾನಿ ಮೋದಿಗೆ ಬರೆದ 2 ಪುಟಗಳ ಪತ್ರದಲ್ಲಿರೋದೇನು? – Kannada News | Siddaramaiah Demands Safe Return of Indians from Middle East; Letter to PM Modi

ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರImage Credit source: Google

ಬೆಂಗಳೂರು, ಮಾರ್ಚ್​​ 02: ಮಧ್ಯಪ್ರಾಚ್ಯದ ದೇಶಗಳಲ್ಲಿ ಯುದ್ಧ ಹಿನ್ನೆಲೆ ದುಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಎರಡು ಪುಟಗಳ ಪತ್ರ ಬರೆದಿದ್ದಾರೆ. ಮಧ್ಯಪ್ರಾಚ್ಯ ಭಾಗದಲ್ಲಿ ನೆಲೆಸಿರುವ ಕನ್ನಡಿಗರು ಮತ್ತು ಭಾರತೀಯರ ಬಗ್ಗೆ ಸಿಎಂ ಆತಂಕ ವ್ಯಕ್ತಪಡಿಸಿದ್ದು, ಅನೇಕ ದೇಶಗಳು ತಮ್ಮ ವಾಯುಮಾರ್ಗವನ್ನು ಬಂದ್ ಮಾಡಿರುವುದರಿಂದ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ದುಬೈನಂತಹ ಪ್ರಮುಖ ಸ್ಥಳಗಳಲ್ಲಿ ಸಾವಿರಾರು ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಅವರ ರಕ್ಷಣೆಗೆ ಕೂಡಲೇ ಮುಂದಾಗಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಪ್ರಧಾನಿಗೆ ಸಿಎಂ ಬರೆದ ಪತ್ರದಲ್ಲೇನಿದೆ?

ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಹಾಗೂ ಅದರ ಪರಿಣಾಮವಾಗಿ ಆ ಪ್ರದೇಶಗಳಲ್ಲಿ ವಾಸಿಸುವ, ಉದ್ಯೋಗದಲ್ಲಿರುವ, ವಿದ್ಯಾಭ್ಯಾಸ ಮಾಡುತ್ತಿರುವ ಹಾಗೂ ಪ್ರಯಾಣಕ್ಕೆಂದು ತೆರಳಿರುವ ಕನ್ನಡಿಗರು ಸೇರಿದಂತೆ ಭಾರತೀಯ ಪ್ರಜೆಗಳ ಮೇಲೆ ಉಂಟಾಗುತ್ತಿರುವ ಪರಿಣಾಮ ಕುರಿತು ನಾನು ಗಂಭೀರ ಆತಂಕ ವ್ಯಕ್ತಪಡಿಸುತ್ತೇನೆ.

ಇದನ್ನೂ ಓದಿ: ಮಧ್ಯ ಪ್ರಾಚ್ಯದಲ್ಲಿ ಯುದ್ಧ; ಪರದೇಶದಲ್ಲಿ ಸಿಲುಕಿ ಕನ್ನಡಿಗರ ಪರದಾಟ, ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ

ನಾಗರಿಕ ವಿಮಾನಯಾನ ಸಚಿವಾಲಯದಿಂದ ಇತ್ತೀಚೆಗೆ ಹೊರಡಿಸಲಾದ ಸೂಚನೆಗಳ ಪ್ರಕಾರ, ಪಶ್ಚಿಮ ಏಷ್ಯಾದ ಅನೇಕ ದೇಶಗಳು ತಮ್ಮ ವಾಯುಪ್ರದೇಶದಲ್ಲಿ ನಿರ್ಬಂಧಗಳು ಮತ್ತು NOTAM ಪ್ರಕಟಿಸಿರುವುದರಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಯುಎಇ (ದುಬೈ) ಸೇರಿದಂತೆ ಅನೇಕ ಕಡೆ ಕನ್ನಡಿಗರು ಸೇರಿದಂತೆ ಹಲವಾರು ಭಾರತೀಯರು ಸಿಲುಕಿಕೊಂಡಿದ್ದಾರೆ. ಪ್ರಸ್ತುತದ ಘಟನೆಗಳಿಂದಾಗಿ ಅನಿಶ್ಚಿತತೆ ಮತ್ತು ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳ ಕಚೇರಿಯಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ತುರ್ತು ಸಮನ್ವಯ ಸಾಧಿಸಿ ಕನ್ನಡಿಗರು ಸೇರಿದಂತೆ ಭಾರತೀಯರ ಸುರಕ್ಷತೆ ಹಾಗೂ ಅಗತ್ಯವಿದ್ದರೆ ಸ್ವದೇಶಕ್ಕೆ ಮರಳಿಸುವ ಕ್ರಮಗಳ ಕುರಿತು ಮನವಿ ಮಾಡಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯಕ್ಕೂ ವಿಮಾನಯಾನ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಸಹಾಯಕ್ಕೆ ವಿನಂತಿಸಲಾಗಿದೆ.

ಪರಿಸ್ಥಿತಿಯ ಗಂಭೀರತೆ ಮತ್ತು ಅಸ್ಥಿರತೆಯನ್ನು ಮನಗಂಡು, ಕನ್ನಡಿಗರು ಸೇರಿದಂತೆ ಭಾರತೀಯ ಪ್ರಜೆಗಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಪ್ರಭಾವಿತ ಪ್ರದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ವಾಣಿಜ್ಯ ದೂತಾವಾಸಗಳ ಮೂಲಕ ನಿರಂತರ ಮೇಲ್ವಿಚಾರಣೆ, ರಕ್ಷಣಾ ಕ್ರಮಗಳು ಮತ್ತು ಮಾರ್ಗದರ್ಶನ ಒದಗಿಸಬೇಕು. ಅಗತ್ಯವಿದ್ದಲ್ಲಿ ಆದ್ಯತೆ ಆಧಾರದ ಮೇಲೆ ವಿಶೇಷ ವಿಮಾನಗಳ ಮೂಲಕ ಸುರಕ್ಷಿತ ಹಾಗೂ ಸಮಯೋಚಿತವಾಗಿ ನಾಗರಿಕರನ್ನು ವಾಪಸು ಕರೆತರಲು ಸಿದ್ಧತೆ ಮಾಡಿಕೊಳ್ಳಬೇಕು.ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ, ರಾಜ್ಯ ಸರ್ಕಾರಗಳು ಮತ್ತು ವಿಮಾನಯಾನ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲು ಅಂತರ್-ಸಚಿವಾಲಯ ಕಾರ್ಯಪಡೆ ರಚನೆ ಆಗಬೇಕು. ಸಿಲುಕಿರುವ ಕನ್ನಡಿಗರು ಸೇರಿದಂತೆ ಭಾರತೀಯರ ನೋಂದಣಿ, ಟ್ರ್ಯಾಕಿಂಗ್ ಹಾಗೂ ಕುಟುಂಬಗಳಿಗೆ ತಕ್ಷಣದ ಮಾಹಿತಿ ನೀಡಲು ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆ ರೂಪಿಸುವುದು ಸೇರಿದಂತೆ ವಿಮಾನಯಾನ ಸಂಸ್ಥೆಗಳ ಹೆಚ್ಚುವರಿ ಶುಲ್ಕ ಮನ್ನಾ ಮಾಡುವುದು ಹಾಗೂ ಅಗತ್ಯವಿದ್ದಲ್ಲಿ ಮಾನವೀಯ ನೆರವು ಒದಗಿಸುವಂತೆ ಸೂಚನೆ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:24 pm, Mon, 2 March 26

Source link