All posts by nagaraj11081993

ಪ್ರೇಮ್ ಬರೆದ ‘ಕೆಡಿ’ ಹಾಡಿನ ಅಶ್ಲೀಲ ಸಾಹಿತ್ಯಕ್ಕೆ ಜನರ ಆಕ್ರೋಶ; ಸೆಲೆಬ್ರಿಟಿಗಳೂ ಗರಂ

ಪ್ರೇಮ್ ಬರೆದ ‘ಕೆಡಿ’ ಹಾಡಿನ ಅಶ್ಲೀಲ ಸಾಹಿತ್ಯಕ್ಕೆ ಜನರ ಆಕ್ರೋಶ; ಸೆಲೆಬ್ರಿಟಿಗಳೂ ಗರಂ

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಕೆಡಿ’ ಕೂಡ ಇದೆ. ಧ್ರುವ ಸರ್ಜಾ ನಟನೆಯ ಈ ಸಿನಿಮಾಗೆ ಜೋಗಿ ಪ್ರೇಮ್ (Jogi Prem) ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ಕಲಾವಿದರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಇತ್ತೀಚೆಗೆ ಈ ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ನೋರಾ ಫತೇಹಿ (Nora Fatehi) ಅವರು ಡ್ಯಾನ್ಸ್ ಮಾಡಿದ್ದಾರೆ. ಆದ್ದರಿಂದ ದೊಡ್ಡ ಮಟ್ಟದ ಪ್ರಚಾರ ಸಿಕ್ಕಿದೆ. ಆದರೆ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ (Vulgar Lyrics) ಇದೆ ಎಂಬ ಕಾರಣಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಹಾಡಿಗೆ ಕನ್ನಡದಲ್ಲಿ ಸ್ವತಃ ನಿರ್ದೇಶಕ ಪ್ರೇಮ್ ಅವರು ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯಾ ರಂಗರಾಜನ್ ಅವರು ಹಾಡಿದ್ದಾರೆ. ಹಿಂದಿ ವರ್ಷನ್​ಗೆ ರಖೀಬ್ ಆಲಂ ಅವರು ಸಾಹಿತ್ಯ ಬರೆದಿದ್ದು, ಮಂಗ್ಲಿ ಧ್ವನಿ ನೀಡಿದ್ದಾರೆ. ಈ ಹಾಡಿನ ಸಾಹಿತ್ಯದಲ್ಲಿ ಮದ್ಯಪಾನದ ಬಗ್ಗೆ ಹೇಳಲಾಗಿದ್ದರೂ ಕೂಡ ಡಬಲ್ ಮೀನಿಂಗ್ ಇದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಜನರಿಂದ ಈ ಹಾಡಿಗೆ ನೆಗೆಟಿವ್ ಕಮೆಂಟ್​ಗಳು ಬಂದಿವೆ.

‘ಇಷ್ಟು ಕಳಪೆ ಸಾಹಿತ್ಯದ ಹಾಡು ನಿರ್ದೇಶಕ ಪ್ರೇಮ್ ಅವರ ಸಿನಿಮಾದಲ್ಲಿ ಇರುತ್ತದೆ ಅಂದುಕೊಂಡಿರಲಿಲ್ಲ. ಬೇಡುವನು ವರವನ್ನು ಕೊಡೆ ತಾಯಿ ಜನ್ಮವನು ಎಂಬಂತಹ ಉತ್ತಮ ಹಾಡು ಬರೆದ ಪ್ರೇಮ್ ಅವರಿಂದ ಇಷ್ಟು ಕಳಪೆ ಮಟ್ಟದ ಸಾಹಿತ್ಯ ಬಂದಿರುವುದು ಇದೇ ಮೊದಲು. ಪ್ರೇಮ್ ಅವರೇ, ನಿಮ್ಮ ಮೇಲೆ ಗೌರವ ಇದೆ. ಆದರೆ ಕನ್ನಡಕ್ಕೆ ಇಂಥ ಹಾಡು ಬೇಡ’ ಎಂಬಿತ್ಯಾದಿಯಾಗಿ ಪ್ರೇಕ್ಷಕರು ಕಮೆಂಟ್ ಮಾಡಿದ್ದಾರೆ.

ಇನ್ನು, ಹಿಂದಿಯಲ್ಲಿ ಹಾಡು ಕೇಳಿದ ಪ್ರೇಕ್ಷಕರು ಕೂಡ ಗರಂ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಈ ಹಾಡಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ, ಖ್ಯಾತ ಗಾಯಕ ಅರ್ಮಾನ್ ಮಲಿಕ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ನೇರವಾಗಿ ಟೀಕೆ ಮಾಡಿದ್ದಾರೆ.

‘ನನ್ನ ಟೈಮ್​ಲೈನ್​​ನಲ್ಲಿ ಈ ಹಾಡಿನ ತುಣುಕು ಕಾಣಿಸಿತು. ನಾನು ಸರಿಯಾಗಿ ಕೇಳಿಸಿಕೊಂಡಿದ್ದೇನೋ ಇಲ್ಲವೋ ಎಂಬುದನ್ನು ಖಚಿತ ಮಾಡಿಕೊಳ್ಳಲು ಎರಡು ಬಾರಿ ಪ್ಲೇ ಮಾಡಬೇಕಾಯಿತು. ಗೀತರಚನಕಾರರು ಇಷ್ಟು ಕೀಳು ಮಟ್ಟಕ್ಕೆ ಇಳಿದಿದ್ದನ್ನು ನೋಡಲು ಬೇಸರ ಆಗುತ್ತದೆ’ ಎಂದು ಅರ್ಮಾನ್ ಮಲಿಕ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಅಸಭ್ಯ ಸಾಹಿತ್ಯಕ್ಕೆ ವಿರೋಧ: ಕ್ಷಮೆ ಕೇಳಿ ರಾತ್ರೋರಾತ್ರಿ ಸಾಂಗ್ ಡಿಲೀಟ್ ಮಾಡಿದ ಬಾದ್​ಶಾ

ಅರ್ಮಾನ್ ಮಲಿಕ್ ಅವರ ಪೋಸ್ಟ್​​ಗೆ ಕಮೆಂಟ್ ಮಾಡಿರುವ ಅನೇಕರು ಸಹಮತ ಸೂಚಿಸಿದ್ದಾರೆ. ಹಾಡಿನ ಸಾಹಿತ್ಯ ತುಂಬಾ ಅಶ್ಲೀಲವಾಗಿದೆ. ಚಿತ್ರರಂಗದವರೇ ಇದರ ವಿರುದ್ಧ ಧ್ವನಿ ಎತ್ತಿರುವುದು ಸಮಾಧಾನಕರ ಸಂಗತಿ ಎಂದು ಜನರು ಕಮೆಂಟ್ ಮಾಡಿದ್ದಾರೆ. ಇಂಥ ಸಾಹಿತ್ಯವನ್ನು ಯಾರು ಒಪ್ಪುತ್ತಾರೆ? ಗಾಯಕರು ಇಂಥದ್ದನ್ನು ಹಾಡನು ಹೇಗೆ ಒಪ್ಪಿಕೊಳ್ಳುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳು ಜನರಿಂದ ಬಂದಿದೆ.

‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು:

‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ವಿರುದ್ಧ ಮಹಿಳಾ ಸಂಘಗಳು ಧ್ವನಿ ಎತ್ತುವ ಸಾಧ್ಯತೆ ಹೆಚ್ಚಿದೆ. ಇದರಿಂದ ಚಿತ್ರತಂಡಕ್ಕೆ ತೊಂದರೆ ಆಗಬಹುದು. ಕೆಲವೇ ದಿನಗಳ ಹಿಂದೆ ಖ್ಯಾತ ರ‍್ಯಾಪ್ ಸಿಂಗರ್ ಬಾದ್​ಶಾ ಅವರು ಹರಿಯಾಣ್ವಿ ಭಾಷೆಯ ‘ಟಟೀರಿ’ ಹಾಡಿನಲ್ಲಿ ಇದೇ ರೀತಿಯ ಅಶ್ಲೀಲ ಸಾಹಿತ್ಯ ಬಳಸಿದ್ದರು. ಅದರಿಂದಾಗಿ ಅವರಿಗೆ ಮಹಿಳಾ ಆಯೋಗ ನೋಟೀಸ್ ನೀಡಿತು. ವಿರೋಧ ವ್ಯಕ್ತವಾದ ಬಳಿಕ ಬಾದ್​ಶಾ ಅವರು ಆ ಹಾಡನ್ನು ಡಿಲೀಟ್ ಮಾಡಬೇಕಾಯಿತು. ಆ ಘಟನೆಯ ಬೆನ್ನಲ್ಲೇ ‘ಸರ್ಸೆ ನಿನ್ನ ಸರ್ಸೆ’ ರೀತಿಯ ಕಳಪೆ ಸಾಹಿತ್ಯ ಇರುವ ಹಾಡು ಬಿಡುಗಡೆ ಆಗಿದ್ದು, ಜನಾಕ್ರೋಶ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ಸೇರಿದ ಭಾರತದ ಎಲ್‌ಪಿಜಿ ಟ್ಯಾಂಕರ್

ಅಹಮದಾಬಾದ್, ಮಾರ್ಚ್ 16: ಎಲ್‌ಪಿಜಿ ಸಾಗಿಸುವ ಎರಡು ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಇರಾನಿನ ಅಧಿಕಾರಿಗಳು ಹಾರ್ಮುಜ್ ಜಲಸಂಧಿಯನ್ನು (Strait of Hormuz) ದಾಟಲು ಅನುಮತಿ ನೀಡಿದ್ದರು. ಅವುಗಳಲ್ಲಿ ಒಂದು ಶಿವಾಲಿಕ್, ಇನ್ನೊಂದು ಹಡಗು ನಂದಾ ದೇವಿ. ಹಾರ್ಮುಜ್ ಜಲಸಂಧಿ ದಾಟಿರುವ ಶಿವಾಲಿಕ್ ಹಡಗು ಎಲ್​ಪಿಜಿಯನ್ನು ಹೊತ್ತು ಗುಜರಾತ್​​ನ ಮುಂದ್ರಾ ಬಂದರನ್ನು ತಲುಪಿದೆ. ನಂದಾ ದೇವಿ ಹಡಗು ನಾಳೆ ಕಾಂಡ್ಲಾ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ. ಈ ಹಡಗುಗಳು ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತೊಯ್ದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹಾರ್ಮುಜ್ ಜಲಸಂಧಿಯಲ್ಲಿ ಯುದ್ಧನೌಕೆ ನಿಯೋಜನೆ ಕುರಿತು ಅಮೆರಿಕದೊಂದಿಗೆ ಮಾತುಕತೆ ನಡೆದಿಲ್ಲ; ಭಾರತ ಸ್ಪಷ್ಟನೆ

ನವದೆಹಲಿ, ಮಾರ್ಚ್ 16: ತೈಲ ಟ್ಯಾಂಕರ್‌ಗಳ ಸುರಕ್ಷಿತ ಸಾಗಾಟವನ್ನು ಖಚಿತಪಡಿಸಿಕೊಳ್ಳಲು ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ನೌಕಾ ಹಡಗುಗಳ ನಿಯೋಜನೆಯ ಕುರಿತು ಅಮೆರಿಕದೊಂದಿಗೆ ಯಾವುದೇ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಜಗತ್ತಿನ ಪ್ರಮುಖ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತ ಮತ್ತು ಮುಕ್ತವಾಗಿಡಲು ಈ ಪ್ರದೇಶಕ್ಕೆ ಯುದ್ಧನೌಕೆಗಳನ್ನು ಕಳುಹಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಹಲವಾರು ದೇಶಗಳನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಾನು ಈ ವಿಚಾರದಲ್ಲಿ ಅಮೆರಿಕದೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಖಚಿತಪಡಿಸಿದೆ.

ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಸಾಗಾಟದಲ್ಲಿ ಇರಾನ್ ಹಸ್ತಕ್ಷೇಪಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅನೇಕ ದೇಶಗಳು ತೊಡಗಿಸಿಕೊಂಡಿದ್ದರೂ ಭಾರತವು ಈ ವಿಷಯದ ಕುರಿತು ಅಮೆರಿಕದೊಂದಿಗೆ ಯಾವುದೇ ಚರ್ಚೆಗಳನ್ನು ನಡೆಸಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ರಕ್ಷಣೆಗೆ ಬರಲು ಭಾರತವೂ ಸೇರಿ ಹಲವು ರಾಷ್ಟ್ರಗಳಿಗೆ ಅಮೆರಿಕ ಮನವಿ

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಿಗ್ಬಂಧನ ವಿಧಿಸಿದ ನಂತರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಭಾರತೀಯ ಹಡಗುಗಳ ಚಲನವಲನದ ಕುರಿತು ಅಪ್​ಡೇಟ್ ನೀಡಿದೆ. ಸಚಿವಾಲಯದ ಪ್ರಕಾರ, ಪರಿಸ್ಥಿತಿ ನಿಯಂತ್ರಣದಲ್ಲಿದೆ, ಸರಕು ಕಾರ್ಯಾಚರಣೆಗಳು ಸರಾಗವಾಗಿ ಮುಂದುವರೆದಿವೆ. ಭಾರತದ ಎಲ್ಲಾ ನಾವಿಕರು ಸುರಕ್ಷಿತವಾಗಿದ್ದಾರೆ, ಕಳೆದ 24 ಗಂಟೆಗಳಲ್ಲಿ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಸಂಚರಿಸುವ ಹಡಗುಗಳಲ್ಲಿ ಭಾರತೀಯ ಹಡಗು ಶಿವಾಲಿಕ್ ಯಶಸ್ವಿಯಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿ ಮುಂದ್ರಾ ಬಂದರನ್ನು ತಲುಪಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಕಚ್ಚಾ ತೈಲ ಸರಕುಗಳೊಂದಿಗೆ ಹೊರಟ ಜಗ್ ಲಾಡ್ಕಿ ಎಂಬ ಮತ್ತೊಂದು ಹಡಗು ಭಾರತದ ಕಡೆಗೆ ಸುರಕ್ಷಿತವಾಗಿ ಆಗಮಿಸುತ್ತಿದೆ. ಅದು ನಾಳೆ ಮುಂದ್ರಾ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಇರಾನ್​ನ ಕರಾವಳಿ ಮೇಲೆ ಬಾಂಬ್ ಹಾಕುತ್ತೇನೆ; ಹಾರ್ಮುಜ್ ಜಲಸಂಧಿಯನ್ನು ತೆರೆಯುವ ಶಪಥ ಮಾಡಿದ ಟ್ರಂಪ್

ಪ್ರಧಾನಿ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್, ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಇರಾನ್ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ ನಡುವಿನ ಫೋನ್ ಕರೆಗಳ ನಂತರ ಶನಿವಾರ ಮುಂಜಾನೆ 92,712 ಮೆಟ್ರಿಕ್ ಟನ್ ಎಲ್‌ಪಿಜಿಯೊಂದಿಗೆ 2 ಭಾರತೀಯ ಧ್ವಜ ಹೊಂದಿರುವ ಎಲ್‌ಪಿಜಿ ವಾಹಕಗಳಾದ ಶಿವಾಲಿಕ್ ಮತ್ತು ನಂದಾ ದೇವಿ ಹಾರ್ಮುಜ್ ಜಲಸಂಧಿಯನ್ನು ದಾಟಿದ್ದವು. ಹೀಗಾಗಿ, ಸದ್ಯಕ್ಕಂತೂ ಭಾರತಕ್ಕೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್​ನಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ ಬೈ ಎಲೆಕ್ಷನ್: ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿಗೆ ಟಿಕೆಟ್, ಬಿಜೆಪಿಯಲ್ಲಿ ಸಂಚಲನ

ದಾವಣಗೆರೆ, (ಮಾರ್ಚ್ 16): ಬಾಗಲಕೋಟೆ  (Bagalkote) ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ  (Davanagere South By Election) ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೀಗ ಅಭ್ಯರ್ಥಿಗಳ ಟಿಕೆಟ್ ಗೆ ಜಟಾಪಟಿ ನಡೆಯುತ್ತಿದೆ. ಹೌದು.. ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress)​​ ಎರಡೂ ಪಕ್ಷಗಳಲ್ಲಿಯೂ ಉಪ ಚುನಾವಣೆ ಟಿಕೆಟ್​​ ಆಕಾಂಕ್ಷಿಗಳ ಕಾದಾಟ ಜೋರಾಗಿದೆ. ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿರೋದು, ಬೈ ಎಲೆಕ್ಷನ್​​ ಅಖಾಡವನ್ನು ಮತ್ತಷ್ಟು ರಂಗೇರಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್​​ ಹಂಚಿಕೆ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್​​ ಎರಡೂ ಪಕ್ಷಗಳಿಗೆ ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ. ಬಿ.ಜಿ. ಅಜಯ್ ಕುಮಾರ್, ಯಶವಂತ್ ರಾವ್ ಜಾಧವ್, ದೇವರಮನೆ ಶಿವಕುಮಾರ್, ಶ್ರೀನಿವಾಸ್ ದಾಸ್ ಕರಿಯಪ್ಪ, ರಾಜನಹಳ್ಳಿ ಶಿವಕುಮಾರ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಆಕಾಂಕ್ಷಿಗಳಾಗಿದ್ದಾರೆ. ಆದರೆ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿನ ವರ್ಷಗಳ ಅಸಮಾಧಾನ ಈಗ ಮೂರನೇಯವರಿಗೆ ಲಾಭ ತಂದು ಕೊಡುವ ರೀತಿಯಲ್ಲಿ ಅಖಾಡ ಸಿದ್ಧವಾಗುತ್ತಿದೆ.

ಇಬ್ಬರ ಕಿತ್ತಾಟ 3ನೇ ವ್ಯಕ್ತಿಗೆ ಟಿಕೆಟ್?

2023ರ ಪರಾಜಿತ ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್ ಪರ ಮಾಜಿ ಸಚಿವ ಎಂ.ಪಿ‌. ರೇಣುಕಾಚಾರ್ಯ ಟೀಮ್ ಬೆಂಬಲ ವ್ಯಕ್ತಪಡಿಸಿದ್ದರೆ, ಯಶವಂತರಾವ್ ಜಾಧವ್ ಪರ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಟೀಮ್ ಬೆಂಬಲ ಸೂಚಿಸಿದೆ. ಹೀಗಾಗಿ ಎರಡೂ ಬಣಗಳ ಕುಸ್ತಿಗೆ ಬ್ರೇಕ್ ಹಾಕಲು ಪ್ರಯತ್ನ ಪಟ್ಟು ಸುಸ್ತಾಗಿರುವ ಬಿಜೆಪಿ ನಾಯಕತ್ವ ಈಗ 2024ರ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಬಗ್ಗೆಯೂ ಚಿಂತನೆ ನಡೆಸಿದೆ. ಎರಡೂ ಬಣಗಳ ಕಿತ್ತಾಟಕ್ಕೆ ಬ್ರೇಕ್ ಹಾಕಲು ವಿನಯ್ ಕುಮಾರ್ ಗೆ ಟಿಕೆಟ್ ನೀಡುವ ಬಗ್ಗೆಯೂ ಗಂಭೀರ ಚಿಂತನೆಯಲ್ಲಿದ್ದು, ಈಗಾಗಲೇ ವಿನಯಕುಮಾರ್ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ದೆಹಲಿ ಮಟ್ಟದ ನಾಯಕರು ಮುಗಿಸಿದ್ದಾರೆ.

ಇದನ್ನೂ ನೋಡಿ: ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಬಿಜೆಪಿ ಮಿತ್ರ ಜೆಡಿಎಸ್ ಮುಖಂಡ

ದಾವಣಗೆರೆ ದಕ್ಷಿಣದಲ್ಲಿ ಜಾತಿ ಸಮೀಕರಣಕ್ಕೆ ಆಗ್ರಹ

ವಿಧಾನ ಪರಿಷತ್ ಪದವಿಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮೂರೂ ಟಿಕೆಟ್ ಲಿಂಗಾಯತರಿಗೆ ಘೋಷಣೆ ಮತ್ತು ಬಾಗಲಕೋಟೆ ಉಪಚುನಾವಣೆಗೆ ಲಿಂಗಾಯತ ಸಮುದಾಯದ ವೀರಣ್ಣ ಚರಂತಿಮಠಗೆ ಟಿಕೆಟ್ ಖಚಿತವಾಗಿರುವ ಕಾರಣ ದಾವಣಗೆರೆ ದಕ್ಷಿಣದಲ್ಲಿ ಜಾತಿ ಸಮೀಕರಣಕ್ಕೆ ಆಗ್ರಹ ರಾಜ್ಯ ಬಿಜೆಪಿಯಲ್ಲಿ ವ್ಯಕ್ತವಾಗಿದೆ. ಜಾತಿ ಸಮೀಕರಣ ಮಾಡುವಂತೆ ಬಿಜೆಪಿ ಕೋರ್ ಕಮಿಟಿ ಸದಸ್ಯರು ಆಗ್ರಹಿಸಿದ್ದು, ಹೀಗಾಗಿ ಕುರುಬ ಸಮುದಾಯಕ್ಕೆ ಸೇರಿದ ವಿನಯಕುಮಾರ್ ಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ.

ಇನ್ನು ಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿ ಟಿಕೆಟ್ ಗಾಗಿ ಆಕಾಂಕ್ಷಿಗಳು ಅಲರ್ಟ್ ಆಗಿದ್ದು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಪರಾಜಿತ ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್ ಸೇರಿದಂತೆ ಮೂರ್ನಾಲ್ಕು ಜ‌ನ ದೆಹಲಿಯತ್ತ ತೆರಳಿದ್ದಾರೆ. ವರಿಷ್ಠರನ್ನು ಭೇಟಿ ಮಾಡಿ ಟಿಕೆಟ್ ಗಾಗಿ ರೇಣುಕಾಚಾರ್ಯ ಟೀಮ್ ಪ್ರಯತ್ನ ನಡೆಸಲು ಮುಂದಾಗಿದೆ.

ಕಾಂಗ್ರೆಸ್ ಗೆ ದಾವಣಗೆರೆ ದಕ್ಷಿಣ ಚಾಲೆಂಜ್

ಇದೇ ವೇಳೆ ಆಡಳಿತ ಪಕ್ಷ ಕಾಂಗ್ರೆಸ್ ಗೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯೇ ಚಾಲೆಂಜ್ ಆಗಿ ಪರಿಣಮಿಸಿದೆ. ಶಾಮನೂರು ಕುಟುಂಬ ವರ್ಸಸ್ ಮುಸ್ಲಿಂ ಸಮುದಾಯದ ಫೈಟ್ ಎಂಬಂತಾಗಿದ್ದು, ತಮ್ಮ ಕುಟುಂಬಸ್ಥರಲ್ಲೇ ಒಬ್ಬರಿಗೆ ಟಿಕೆಟ್ ಬೇಕು ಅಂತ ಶಾಮನೂರು ಕುಟುಂಬ ಪಟ್ಟು ಹಿಡಿದಿದೆ. ಇತ್ತ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಬೇಕು ಎಂದು ಪಟ್ಟು ಕೂಡಾ ಜೋರಾಗಿದ್ದು, ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಾಗುತ್ತಲೇ ಇದೆ.

ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪುತ್ರ ಸಮರ್ಥ್ ಶಾಮನೂರು, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಖಾಲಿದ್ ಪೈಲ್ವಾನ್, ಮುಜಿಮಲ್ ಹುಸೇನ್, ಸಾಧಿಕ್ ಪೈಲ್ವಾನ್, ಆಯೋಬ್ ಪೈಲ್ವಾನ್ ಮತ್ತು ಶಿವಗಂಗಾ ಶ್ರೀನಿವಾಸ್ ಸೇರಿದಂತೆ ಆಕಾಂಕ್ಷಿಗಳ ಪಟ್ಟಿ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡದಿದೆ.

ಮಾರ್ಚ್ 23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅಭ್ಯರ್ಥಿ ಆಯ್ಕೆಗೆ ಕೇವಲ ಎಂಟು ದಿನಗಳು ಮಾತ್ರ ಬಾಕಿ ಉಳಿದಿವೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಅಗುವವರೆಗೂ ಬಿಜೆಪಿ ತನ್ನ ಅಭ್ಯರ್ಥಿ ಘೋಷಣೆ ಮಾಡದೇ ಇರಲು ತೀರ್ಮಾನಿಸಿದೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೇಹದ ತುಂಬ 18 ಗಾಯ; 4 ವರ್ಷದ ಮಗುವನ್ನು ಹೊಡೆದು, ಕ್ರೂರವಾಗಿ ಸುಟ್ಟು ಕೊಂದ ತಂದೆ, ಮಲತಾಯಿ

ಲಕ್ನೋ, ಮಾರ್ಚ್ 16: ಪ್ರತಿಯೊಬ್ಬ ಗಂಡಸಿಗೂ ತಾನು ತಂದೆಯಾಗುವ ಕ್ಷಣ ಬಹಳ ವಿಶೇಷವಾಗಿರುತ್ತದೆ. ಅಪ್ಪ ತನಗೆಷ್ಟೇ ಕಷ್ಟ ಬಂದರೂ ಮಗುವಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತಾನೆ. ಮಗುವಿನ ಭವಿಷ್ಯಕ್ಕಾಗಿ ಯಾವ ತ್ಯಾಗ ಮಾಡಲು ಬೇಕಾದರೂ ಸಿದ್ಧವಾಗಿರುತ್ತಾನೆ. ಆದರೆ, ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಬಹಳ ಆತಂಕಕಾರಿಯಾದುದು. 4 ವರ್ಷದ ತನ್ನ ಸ್ವಂತ ಮಗುವಿಗೆ ಬೆಲ್ಟ್​ನಿಂದ ಹೊಡೆದು, ಬೆಂಕಿ ಹಚ್ಚಿ ಸುಟ್ಟು ಕೊಲೆ (Child Killed in Lucknow) ಮಾಡಿರುವ ಘಟನೆ ಆಘಾತ ಮೂಡಿಸಿದೆ. ಆ ಪುಟ್ಟ ಮಗುವಿನ ಪಾಲಿಗೆ ಹೆತ್ತ ಅಪ್ಪ ಮತ್ತು ಮಲತಾಯಿಯೇ ರಾಕ್ಷಸರಾಗಿದ್ದಾರೆ.

ಲಕ್ನೋದ ಚೌಕ್ ಪ್ರದೇಶದಲ್ಲಿ ತನ್ನ 4 ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಆ ಮಗುವಿನ ತಂದೆ ಮತ್ತು ಆತನ ಎರಡನೇ ಪತ್ನಿಯನ್ನು ಬಂಧಿಸಲಾಗಿದೆ. ಮಗುವಿನ ತಾಯಿಯ ಅಜ್ಜಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳಾದ ಭೀಷ್ಮ ಖರ್ಬಂದ (35) ಮತ್ತು ಅವನ ಪತ್ನಿ ರಾಗಿಣಿ ಖರ್ಬಂದ (30) ಅವರನ್ನು ಬಂಧಿಸಲಾಗಿದೆ. ಉನ್ನಾವೋದ ಸುಧಾ ಕಶ್ಯಪ್ ಅವರು ಮಾರ್ಚ್ 12ರಂದು ತಮ್ಮ ಮೊಮ್ಮಗ ಅರ್ನವ್​ನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು.

ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಎಸೆದು ಹೋದ ಪಾಪಿಗಳು

“ನಾವು ಲಜ್‌ಪತ್ ನಗರದಲ್ಲಿರುವ ಮನೆಗೆ ತಲುಪಿದಾಗ ಮಗುವಿನ ಶವವನ್ನು ವರಾಂಡಾದಲ್ಲಿ ಇಡಲಾಗಿತ್ತು. ತಪಾಸಣೆ ನಡೆಸಿದಾಗ ಮಗುವಿನ ದೇಹದಾದ್ಯಂತ ಹಲವಾರು ಗಾಯದ ಗುರುತುಗಳು ಮತ್ತು ನೀಲಿ ಗುರುತು ಕಂಡುಬಂದವು, ಇದು ಮಗುವನ್ನು ಕ್ರೂರವಾಗಿ ಥಳಿಸಿರುವುದನ್ನು ಸೂಚಿಸುತ್ತದೆ. ಮಗುವಿನ ಪಾದಗಳ ಮೇಲೆ ಸುಟ್ಟ ಗುರುತುಗಳು ಸಹ ಇದ್ದವು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊರಕೆ, ಅಡುಗೆಮನೆಯ ಚಾಕು, ಬೆಲ್ಟ್ ಮತ್ತು ಹಗ್ಗ ಸೇರಿದಂತೆ ಅಪರಾಧದಲ್ಲಿ ಬಳಸಲಾಗಿದೆ ಎನ್ನಲಾದ ಹಲವಾರು ವಸ್ತುಗಳನ್ನು ಪೊಲೀಸ್ ತಂಡ ವಶಪಡಿಸಿಕೊಂಡಿದೆ.

ಮಗುವಿನ ತಾಯಿ ಅನಾರೋಗ್ಯದಿಂದ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅದಾದ ನಂತರ ಭೀಷ್ಮ ಮತ್ತೊಂದು ಮದುವೆಯಾಗಿದ್ದರು. ಭೀಷ್ಮ ಮತ್ತು ರಾಗಿಣಿ ಆಸ್ತಿಯ ದುರಾಸೆಯಿಂದ 4 ವರ್ಷದ ಮಗುವನ್ನು ಕೊಂದಿದ್ದಾರೆ ಎಂದು ಆ ಮಗುವಿನ ಅಜ್ಜಿ ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ, ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತಂದೆಯನ್ನು ಕೊಂದು, ತನ್ನ ಮಣಿಕಟ್ಟನ್ನೇ ಕೊಯ್ದುಕೊಂಡ ವ್ಯಕ್ತಿ

ತಂದೆ ಮತ್ತು ಮಲತಾಯಿ ಹುಡುಗನನ್ನು ಪದೇ ಪದೇ ಹೊಡೆಯುತ್ತಿದ್ದರು ಎಂದು ಅಕ್ಕಪಕ್ಕದವರು ಹೇಳಿದ್ದಾರೆ. ಮಗುವಿಗೆ ವಿದ್ಯುತ್ ಶಾಕ್ ನೀಡಲಾಗಿದ್ದು, ಆಗಾಗ ಕಠಿಣವಾದ ಶಿಕ್ಷೆ ವಿಧಿಸಲಾಗುತ್ತಿತ್ತು ಎನ್ನಲಾಗಿದೆ. ಆ ಮಗುವಿನ ದೇಹದ ಮೇಲೆ ಸುಮಾರು 18 ಗಾಯದ ಗುರುತುಗಳು ಗೋಚರಿಸಿವೆ ಎಂದು ಮಗುವಿನ ತಾಯಿಯ ಕಡೆಯ ಕುಟುಂಬ ಆರೋಪಿಸಿದೆ.

ಅರ್ನವ್​ನ ತಾಯಿಯ ಮರಣದ ನಂತರ ಆ ಹುಡುಗ ತನ್ನ ತಾಯಿಯ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದ. ಆದರೆ, ಸುಮಾರು 6 ತಿಂಗಳ ಹಿಂದೆ ಅವನ ತಂದೆ ನ್ಯಾಯಾಲಯದ ಆದೇಶದ ನಂತರ ಅವನನ್ನು ವಶಕ್ಕೆ ಪಡೆದರು. ಮನೆಯಲ್ಲಿ ಆತನ ತಂದೆ ಸದಾ ಮಗುವನ್ನು ಹೊಡೆಯುತ್ತಿದ್ದರು. ಮಗುವನ್ನು ಹೊರಗೆ ಆಟವಾಡಲು ಕೂಡ ಬಿಡುತ್ತಿರಲಿಲ್ಲ, ಯಾರ ಮನೆಗೂ ಕಳುಹಿಸುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ.

ಬಂಧಿತ ದಂಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅತಿಯಾಗಿ ಕೂದಲು ಉದುರುತ್ತಿದೆಯೇ? ಹಾಗಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ ಇದು ಈ ರೋಗದ ಸೂಚನೆಯಾಗಿರಬಹುದು

ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಕೂದಲು ಉದುರುವ ಸಮಸ್ಯೆಯನ್ನು (Hair Loss) ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿದಿನ ಸುಮಾರು 50 ರಿಂದ 100 ಕೂದಲುಗಳು ಉದುರುವುದು ಸಹಜವೆಂದು ತಜ್ಞರು ಹೇಳುತ್ತಾರೆ, ಏಕೆಂದರೆ ಹಳೆಯ ಕೂದಲುಗಳ ಬದಲಿಗೆ ಹೊಸ ಕೂದಲುಗಳು ಬೆಳೆಯುತ್ತಿರುತ್ತವೆ. ಆದರೆ ಇದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕೂದಲು ಉದುರುತ್ತಿದ್ದರೆ ಅಥವಾ ಕೂದಲು ಒದ್ದೆ ಇದ್ದು ಅದನ್ನು ಓರೆಸುವಾಗ ಮತ್ತು ತಲೆ ತೊಳೆಯುವಾಗ ಕೈ ಮುಷ್ಟಿಗಿಂತ ಹೆಚ್ಚು ಕೂದಲು ಉದುರುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಇದು ಕೆಲವೊಮ್ಮೆ ದೇಹದ ಒಳಗಿನ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಹಾಗಾದರೆ ಈ ರೀತಿಯಾದಾಗ ಏನು ಮಾಡಬೇಕು, ಇದು ಯಾವ ಆರೋಗ್ಯ ಸಮಸ್ಯೆಯ ಲಕ್ಷಣ ಎಂಬುದನ್ನು ತಿಳಿದುಕೊಳ್ಳಿ.

ನಿರಂತರವಾಗಿ ಕೂದಲು ಉದುರುವ ಸಮಸ್ಯೆಯೊಂದಿಗೆ ಕೂದಲು ತೆಳ್ಳಗಾಗುವುದು, ಕೂದಲಿನ ಬುಡ ದುರ್ಬಲವಾಗುವುದು, ತಲೆಯ ಚರ್ಮ ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು ಅಥವಾ ಕೂದಲಿನ ದಟ್ಟತೆ ಕಡಿಮೆಯಾಗುವುದು ಮುಂತಾದ ಲಕ್ಷಣಗಳು ಕಾಣಿಸಬಹುದು. ಈ ಸಮಸ್ಯೆ ದೀರ್ಘಕಾಲ ಮುಂದುವರಿದರೆ ಕಾರಣವನ್ನು ತಿಳಿದು ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.

ಯಾವ ಆರೋಗ್ಯ ಸಮಸ್ಯೆಗಳ ಸೂಚನೆ?

ಚರ್ಮರೋಗ ತಜ್ಞರಾದ ಡಾ. ಸೌಮ್ಯ ಸಚ್ದೇವಾ ಅವರ ಪ್ರಕಾರ, ಮಹಿಳೆಯರಲ್ಲಿ ಹೆಚ್ಚು ಕೂದಲು ಉದುರುವುದು ಹಲವು ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರಬಹುದು. ಥೈರಾಯ್ಡ್ ಸಮಸ್ಯೆ ಇದ್ದರೆ ದೇಹದ ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾಗುತ್ತದೆ. ಇದರಿಂದ ಕೂದಲಿನ ಬೇರುಗಳು ದುರ್ಬಲವಾಗುತ್ತವೆ ಮತ್ತು ಕೂದಲು ವೇಗವಾಗಿ ಉದುರುವ ಸಾಧ್ಯತೆ ಹೆಚ್ಚುತ್ತದೆ. ಇದರ ಜೊತೆಗೆ ದೇಹದಲ್ಲಿ ಐರನ್ ಕೊರತೆ ಅಥವಾ ಅನಿಮಿಯಾ ಇದ್ದರೂ ಕೂದಲಿಗೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ. ಪರಿಣಾಮವಾಗಿ ಕೂದಲು ದುರ್ಬಲವಾಗಿ ಉದುರುತ್ತದೆ. ಹಾರ್ಮೋನ್ ಅಸಮತೋಲನ, ವಿಶೇಷವಾಗಿ ಪಿಸಿಓಎಸ್ (PCOS) ಸಮಸ್ಯೆಯಿರುವ ಮಹಿಳೆಯರಲ್ಲಿಯೂ ಕೂದಲು ಉದುರುವ ಸಮಸ್ಯೆ ಕಾಣಿಸಬಹುದು. ದೀರ್ಘಕಾಲದ ಮಾನಸಿಕ ಒತ್ತಡವೂ ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಇದನ್ನೂ ಓದಿ: ತಲೆಸ್ನಾನದ ಸಂದರ್ಭದಲ್ಲಿ ಮಾಡುವ ಈ ತಪ್ಪುಗಳು ಸಹ ಕೂದಲು ಉದುರಲು ಮುಖ್ಯ ಕಾರಣ

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

ಹಾರ್ಮೋನ್ ಅಸಮತೋಲನ ಇರುವವರು, ದೇಹದಲ್ಲಿ ಐರನ್ ಅಥವಾ ಪ್ರೋಟೀನ್ ಕೊರತೆ ಇರುವವರು ಹಾಗೂ ಹೆಚ್ಚು ಮಾನಸಿಕ ಒತ್ತಡ ಅನುಭವಿಸುವವರು ಕೂದಲು ಉದುರುವ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸಬಹುದು. ಜೊತೆಗೆ ಹೆಚ್ಚು ರಾಸಾಯನಿಕ ಇರುವ ಹೇರ್ ಪ್ರಾಡಕ್ಟ್‌ಗಳ ಬಳಕೆ, ಪದೇ ಪದೇ ಹೇರ್ ಸ್ಟೈಲಿಂಗ್ ಮಾಡುವುದು ಅಥವಾ ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟುವುದು ಕೂಡ ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ.

ಹೇಗೆ ತಡೆಗಟ್ಟಬಹುದು?

ಕೂದಲು ಉದುರುವ ಸಮಸ್ಯೆಯನ್ನು ತಡೆಯಲು ಸಮತೋಲನಯುತ ಹಾಗೂ ಪೌಷ್ಟಿಕ ಆಹಾರ ಸೇವಿಸುವುದು ಅಗತ್ಯ. ವಿಶೇಷವಾಗಿ ಐರನ್, ಪ್ರೋಟೀನ್ ಮತ್ತು ವಿಟಮಿನ್‌ಗಳಿರುವ ಆಹಾರವನ್ನು ಸೇವಿಸಬೇಕು. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು, ಸಾಕಷ್ಟು ನಿದ್ರೆ ಮಾಡುವುದು ಮತ್ತು ಕೂದಲಿನ ಸರಿಯಾದ ಆರೈಕೆ ಮಾಡುವುದು ಮುಖ್ಯ. ಕೂದಲು ಉದುರುವಿಕೆ ಹೆಚ್ಚು ಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ

ತನುಷ್ ಶಿವಣ್ಣ ನಟನೆಯ ‘ಬಾಸ್’ ಸಿನಿಮಾಗೆ (Boss Movie) ವಿ. ಲವ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಕಥೆಗೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಸಾಮ್ಯತೆ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಚಿತ್ರಕ್ಕೆ ಸೆನ್ಸಾರ್ ನೀಡಬಾರದು ಎಂದು ದರ್ಶನ್ (Darshan) ಪರ ವಕೀಲರು ನೋಟಿಸ್ ನೀಡಿದ್ದಾರೆ. ಆ ಬಗ್ಗೆ ನಿರ್ದೇಶಕ ಲವ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೆ ಯಾವುದೇ ನೋಟಿಸ್ ಬಂದಿಲ್ಲ. 3-4 ಜನರು ನನಗೆ ಬೆದರಿಕೆ ಕರೆ ಮಾಡಿದ್ದಾರೆ. ನಾನು ಅದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ದರ್ಶನ್ ಅವರ ರಿಯಲ್ ಸ್ಟೋರಿ ಇಟ್ಟುಕೊಂಡು ನಾವು ಸಿನಿಮಾ ಮಾಡಿಲ್ಲ. ರೇಣುಕಾಸ್ವಾಮಿ ಘಟನೆ ಕೂಡ ಈ ಸಿನಿಮಾದಲ್ಲಿ ಇಲ್ಲ. ಕಾಕತಾಳೀಯವಾಗಿ ಹೋಲಿಕೆ ಆಗಿರಬಹುದು ಅಷ್ಟೇ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ಆ ಘಟನೆ ಇಟ್ಟುಕೊಂಡು ನಾವು ಸಿನಿಮಾ ಮಾಡೋಕೆ ಆಗಲ್ಲ. ವಕೀಲನಾಗಿ ನನಗೆ ಅದು ಗೊತ್ತು. ನಮಗೆ ನೋಟಿಸ್ ಬಂದರೆ ಅದಕ್ಕೆ ಉತ್ತರ ನೀಡುತ್ತೇವೆ’ ಎಂದು ಲವ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Chanakya Niti: ಮದುವೆಯ ನಂತರವೂ ಪುರುಷರು ಪರ ಸ್ತ್ರೀಯರತ್ತ ಆಕರ್ಷಿತರಾಗುವುದೇಕೆ?

ವಿವಾಹೇತರ ಸಂಬಂಧ ( affair) ತಪ್ಪು ಎಂದು ಗೊತ್ತಿದ್ದರೂ ಸಹ ಇಂದಿಗೂ ಅದೆಷ್ಟೋ ವಿವಾಹಿತ ಮಹಿಳೆಯರು, ವಿವಾಹಿತ ಪುರುಷರು ವಿವಾಹೇತರ ಸಂಬಂಧಗಳನ್ನು  ಹೊಂದಿದ್ದಾರೆ. ಹೌದು ಮದುವೆಯಾಗಿ ಚಂದದ ಹೆಂಡತಿ ಇದ್ದರೂ ಸಹ ಕೆಲವು ಪುರುಷರು ಪರ ಸ್ತ್ರೀಯರತ್ತ ಆಕರ್ಷಿತರಾಗುತ್ತಾರೆ. ಈ ರೀತಿ ವಿವಾಹಿತ ಪುರುಷರು ಇತರ ಮಹಿಳೆಯರನ್ನು ಇಷ್ಟಪಡುವುದರ ಹಿಂದೆ ನಿರ್ದಿಷ್ಟ ಕಾರಣಗಳಿವೆ ಎಂದಿದ್ದಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಚಾಣಕ್ಯರ ಪ್ರಕಾರ ಪುರುಷರು ವಿವಾಹೇತರ ಸಂಬಂಧವನ್ನು ಹೊಂದುವುದೇಕೆ, ಇತರ ಮಹಿಳೆಯರತ್ತ ಆಕರ್ಷಿತರಾವುಗುದೇಕೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ವಿವಾಹಿತ ಪುರುಷರು ಇತರ ಮಹಿಳೆಯರತ್ತ ಆಕರ್ಷಿತರಾಗುವುದೇಕೆ?

ಹೊಸತನದ ಗೀಳು: ಪುರುಷರ ಮನಸ್ಸು ಯಾವಾಗಲೂ ತನ್ನಲ್ಲಿಲ್ಲದದ್ದಕ್ಕಾಗಿ ಹಾತೊರೆಯುತ್ತಿರುತ್ತದೆ. ಹೊಸ ಪರಿಚಯ ಮತ್ತು ಹೊಸ ಮಾತುಗಳು ಆಸಕ್ತಿದಾಯಕವಾಗಿ ಕಾಣುತ್ತವೆ. ಅವರು ಹೆಂಡ್ತಿಯನ್ನು ಪ್ರತಿದಿನ ನೋಡುವ ಕಾರಣ  ಹೆಂಡತಿಯ ವಿಶೇಷ ಲಕ್ಷಣಗಳು ಸಹ ಅವರಿಗೆ ತುಂಬಾ ಸಾಮಾನ್ಯವೆಂದು ತೋರುತ್ತದೆ. ಅದೇ ಅವರಿಗೆ ಪರಿಚಯವಿಲ್ಲದ ಹೊಸ ಮಹಿಳೆಯಾಗಿದ್ದರೆ, ಅದು ಅವರಿಗೆ ತುಂಬಾ ರೋಮಾಂಚನಕಾರಿಯಾಗಿ ತೋರುತ್ತದೆ. ಈ ಕಾರಣದಿಂದಲೇ ವಿವಾಹಿತ ಪುರುಷರು ಮಹಿಳೆಯರತ್ತ ಆಕರ್ಷಿತರಾಗುವುದು.

ಚಿಕ್ಕ ವಯಸ್ಸಿನಲ್ಲಿಯೇ ಮದುವೆ: ಅನೇಕ ಹುಡುಗರು ಕುಟುಂಬದ ಒತ್ತಡದಿಂದಾಗಿ ಸರಿಯಾದ ಪ್ರಬುದ್ಧತೆಯನ್ನು ತಲುಪುವ ಮೊದಲೇ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುತ್ತಾರೆ. ಆ ಸಮಯದಲ್ಲಿ, ಅವರಿಗೆ ತಮ್ಮ ವೃತ್ತಿ ಮತ್ತು ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ಇರುವುದಿಲ್ಲ. ಅವರು ಬೆಳೆದಂತೆ, ಅವರ ಆಲೋಚನೆಗಳು ಮತ್ತು ಆಸೆಗಳು ಸಂಪೂರ್ಣವಾಗಿ ಬದಲಾಗುತ್ತಾ ಹೋಗುತ್ತವೆ. ಹೆಂಡತಿಯ ಮೇಲಿನ ಪ್ರೀತಿಯೂ ಕಡಿಮೆಯಾಗುತ್ತದೆ. ತಮ್ಮ ಮನಸ್ಥಿತಿಗೆ ಹೊಂದಾಣಿಕೆಯಾಗುವ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಮಗುವಾದ ಬಳಿಕ ಆಗುವ ಬದಲಾವಣೆ: ಮಕ್ಕಳಾದ ಬಳಿಕ ಸ್ವಾಭಾವಿಕವಾಗಿ, ತಾಯಿ ತನ್ನ ಎಲ್ಲಾ ಸಮಯ ಮತ್ತು ಪ್ರೀತಿಯನ್ನು ತನ್ನ ಮಗುವಿಗೆ ನೀಡುತ್ತಾಳೆ. ಇದರಿಂದ ಗಂಡನಾದವನಿಗೆ ತನ್ನ ಹೆಂಡತಿ ನಿಜವಾಗಿಯೂ ತನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಅನಿಸಲು ಪ್ರಾರಂಭಿಸುತ್ತದೆ. ಈ ಒಂಟಿತನವು ಅವನನ್ನು ಬಾಹ್ಯ ಆಕರ್ಷಣೆಗಳ ಕಡೆಗೆ ಎಳೆಯುತ್ತದೆ. ಆ ಸಮಯದಲ್ಲಿ, ಪರ ಸ್ತ್ರೀ ತನ್ನೊಂದಿಗೆ ಸ್ವಲ್ಪ ಪ್ರೀತಿ ಮತ್ತು ಕಾಳಜಿಯಿಂದ ಮಾತನಾಡಿದರೆ, ಅವನು ಸುಲಭವಾಗಿ ಆಕೆಯ ಕಡೆಗೆ ಆಕರ್ಷಿತನಾಗುತ್ತಾನೆ ಎಂದು ಚಾಣಕ್ಯ ಹೇಳಿದ್ದಾರೆ.

ದೈಹಿಕ ಅಂತರ:  ಪತಿ-ಪತ್ನಿಯ ಸಂಬಂಧಕ್ಕೆ ದೈಹಿಕ ಅನ್ಯೋನ್ಯತೆಯು ಬಹಳ ಮುಖ್ಯ ಎನ್ನುತ್ತಾರೆ ಚಾಣಕ್ಯ. ಈ ಅಡಿಪಾಯ ದುರ್ಬಲಗೊಂಡರೆ, ಸಂಬಂಧವು ಕ್ರಮೇಣ ಹದಗೆಡುತ್ತದೆ. ಅನೇಕ ದಂಪತಿಗಳು ತಮ್ಮ ಸಂಗಾತಿಯೊಂದಿಗೆ ತಮ್ಮ ಆಸೆಗಳನ್ನು ಬಹಿರಂಗವಾಗಿ ಚರ್ಚಿಸಲು ನಾಚಿಕೆಪಡುತ್ತಾರೆ. ಇದು ಇಬ್ಬರ ನಡುವಿನ ಅಂತರವನ್ನು ಹೆಚ್ಚಿಸುತ್ತದೆ. ಆ ಅಂತರದಿಂದಾಗಿ, ಗಂಡಂದಿರು ಅತೃಪ್ತರಾಗುತ್ತಾರೆ ಮತ್ತು ಆ ದೈಹಿಕ ಆನಂದವನ್ನು ಹೊರಗೆ ಹುಡುಕಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ: ಜೀವನದಲ್ಲಿ ಹಣದ ಕೊರತೆ ಎದುರಾಗಬಾರದೆಂದರೆ ಚಾಣಕ್ಯರು ಹೇಳಿರುವ ಮಾತುಗಳನ್ನು ಪಾಲಿಸಿ

ಈ ಸಮಸ್ಯೆಗಳಿಗೆ ಚಾಣಕ್ಯರ ಪರಿಹಾರಗಳೇನು?

  • ದಂಪತಿಗಳ ನಡುವೆ ಸ್ಪಷ್ಟವಾದ ಸಂವಹನವಿದ್ದರೆ, ಯಾವುದೇ ದೊಡ್ಡ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಹಾಗಾಗಿ ಪತಿ ಪತ್ನಿಯರು ಪ್ರತಿಯೊಂದು ವಿಷಯದ ಬಗ್ಗೆಯೂ ಮುಕ್ತವಾಗಿ ಮಾತನಾಡಬೇಕು.
  • ಒಂದು ಸಣ್ಣ ಅಪ್ಪುಗೆ ಮತ್ತು ಪ್ರೀತಿಯ ಮಾತು ಅವರ ಬಾಂಧವ್ಯವನ್ನು ಶಾಶ್ವತವಾಗಿ ತಾಜಾವಾಗಿರಿಸುತ್ತದೆ.
  • ಕೋಪದಿಂದ ದೂರ ಹೋಗುವ ಬದಲು, ಕುಳಿತು ಶಾಂತವಾಗಿ ಮಾತನಾಡುವುದು ನಿರ್ಣಾಯಕ ಪರಿಹಾರವನ್ನು ನೀಡುತ್ತದೆ. ಸಮಸ್ಯೆಗಳು ಉದ್ಭವಿಸಿದಾಗ, ಅಹಂಕಾರದಿಂದ ದೂರ ಸರಿಯದೆ ಪರಸ್ಪರ ಅರ್ಥಮಾಡಿಕೊಂಡರೆ, ಸಂಬಂಧದಲ್ಲಿ ಅಂತರ ಬೆಳೆಯುವುದಿಲ್ಲ.
  • ಒಂದು ಸಸ್ಯಕ್ಕೆ ಪ್ರತಿದಿನ ನೀರು ಹಾಕಿ ಬೆಳೆಸುವಂತೆ, ದಾಂಪತ್ಯ ಜೀವನಕ್ಕೆ ಪ್ರತಿದಿನ ಪ್ರೀತಿಯನ್ನು ಧಾರೆಯೆರೆದರೆ ಮಾತ್ರ ಗಂಡ ಹೆಂಡತಿಯ ಬಾಂಧವ್ಯ ಶಾಶ್ವತವಾಗಿ ಹಸಿರಾಗಿರುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಕಣಕ್ಕೆ

ನವದೆಹಲಿ, ಮಾರ್ಚ್ 16: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ (West Bengal Assembly Elections) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಜೆಪಿ ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವು 4 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಚುನಾವಣೆಗೆ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ಒಂದು ದಿನದ ನಂತರ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು 2 ಹಂತಗಳಲ್ಲಿ ನಡೆಯಲಿವೆ. ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಚುನಾವಣೆಗಳು ನಡೆಯಲಿವೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಅಸ್ಸಾಂ, ಕೇರಳ, ಪುದುಚೇರಿ ಮತ್ತು ತಮಿಳುನಾಡಿನ ಮತಗಳ ಎಣಿಕೆಯೊಂದಿಗೆ ಮೇ 4ರಂದು ನಡೆಯಲಿದೆ.

2021ರಲ್ಲಿ ನಡೆದ 8 ಹಂತದ ಚುನಾವಣೆಗಳಿಗೆ ಹೋಲಿಸಿದರೆ ಈ ವರ್ಷದ ಅಂದರೆ 2026ರ ಪಶ್ಚಿಮ ಬಂಗಾಳ ಚುನಾವಣೆ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಕೇವಲ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಘೋಷಿಸಿದೆ. ಇದಕ್ಕೆ ಕಾರಣವನ್ನೂ ನೀಡಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್, ಚುನಾವಣಾ ಆಯೋಗ ಸಾಕಷ್ಟು ಚರ್ಚೆ ನಡೆಸಿ ಮತದಾನದ ಹಂತಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಎಲ್ಲರ ಅನುಕೂಲಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ, ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ ಶಪಥ

ಬಿಜೆಪಿ ಇಂದು ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ 2 ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಒಂದು ನಂದಿಗ್ರಾಮ ಮತ್ತು ಭವಾನಿಪುರ. ಭವಾನಿಪುರ ಸ್ಥಾನದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸುವುದರಿಂದ ಸುವೇಂದು ಅಧಿಕಾರಿ ಸಿಎಂ ಎದುರಾಳಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಸುವೇಂದು ಅಧಿಕಾರಿ ಪ್ರಸ್ತುತ ನಂದಿಗ್ರಾಮದ ಬಿಜೆಪಿ ಶಾಸಕರಾಗಿದ್ದಾರೆ. 2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ನಂದಿಗ್ರಾಮ ಸ್ಥಾನದಿಂದ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿ ಅವರನ್ನು ಸುಮಾರು 2,000 ಮತಗಳಿಂದ ಸೋಲಿಸಿದ್ದರು.

ಇದನ್ನೂ ಓದಿ: ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಶಕ್ತಿ ಮೀರಿ ಪ್ರಯತ್ನ; ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಇದಾದ ನಂತರ ಮಮತಾ ಬ್ಯಾನರ್ಜಿ ಭವಾನಿಪುರ ಸ್ಥಾನದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಇಂದು ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಪ್ರಮುಖ ಹೆಸರುಗಳೆಂದರೆ, ದಿಲೀಪ್ ಘೋಷ್ (ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ)- ಖರಗ್‌ಪುರ ಸದರ್ ಕ್ಷೇತ್ರ, ಅಗ್ನಿಮಿತ್ರ ಪಾಲ್ (ಫ್ಯಾಷನ್ ಡಿಸೈನರ್)- ಅಸನ್ಸೋಲ್ ದಕ್ಷಿಣ ಕ್ಷೇತ್ರ, ಸುವೇಂದು ಅಧಿಕಾರಿ- ನಂದಿಗ್ರಾಮ ಮತ್ತು ಭವಾನಿಪುರ ಕ್ಷೇತ್ರ, ಅಶೋಕ್ ದಿಂಡಾ (ಭಾರತದ ಮಾಜಿ ಕ್ರಿಕೆಟಿಗ)- ಮೊಯ್ನಾ ಕ್ಷೇತ್ರ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇಲಾಧಿಕಾರಿ ಕಿರುಕುಳ ಆರೋಪ: ಕೃಷಿ ಇಲಾಖೆ ಗುತ್ತಿಗೆ ನೌಕರ ಆತ್ಮಹತ್ಯೆ

ಬಳ್ಳಾರಿ, (ಮಾರ್ಚ್ 16): ಮೇಲಾಧಿಕಾರಿಯ ಮಾನಸಿಕ ಕಿರುಕುಳ ಹಿನ್ನೆಲೆ ಕೃಷಿ ಇಲಾಖೆಯ ( agriculture department) ಗುತ್ತಿಗೆ ನೌಕರ ಆತ್ಮಹತ್ಯೆಗೆ (Suicide)  ಶರಣಾಗಿರುವ ಘಟನೆ ಬಳ್ಳಾರಿ (Bellary) ಜಿಲ್ಲೆಯ ಸಂಡೂರು ತಾಲೂಕಿನ‌ ಗೌರಿಪುರದಲ್ಲಿ ನಡೆದಿದೆ. ಜಿ.ಎನ್. ರಾಜು ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆ ನೌಕರ. ಸಂಡೂರು ಕೃಷಿ ಇಲಾಖೆಯ ತಾಲೂಕು (AO) ಅಧಿಕಾರಿ ರಾಘವೇಂದ್ರ ಅವರ ವಿರುದ್ದ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಮೂರು ಪುಟಗಳ ಡೆತ್‌ನೋಟ್‌ನಲ್ಲಿ ಸಾವಿನ ಕಾರಣ ಬರೆದಿರುವ ಗುತ್ತಿಗೆ ನೌಕರ ರಾಜು ಅವರು ಕೃಷಿ ಇಲಾಖೆಯ ಅಧಿಕಾರಿ ರಾಘವೇಂದ್ರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಸಂಡೂರು ಕೃಷಿ ಇಲಾಖೆ ಅಧಿಕಾರಿ ರಾಘವೇಂದ್ರ ಅವರು ರಾಜು ಅವರಿಗೆ ಕೆಲಸಕ್ಕೆ ಸೇರಿದ ದಿನದಿಂದಲೇ ಮಾನಸಿಕ ಕಿರುಕುಳ ನೀಡುತ್ತಿದ್ರು. ಕಚೇರಿಯಲ್ಲಿನ ಕಿರುಕುಳದ ಬಗ್ಗೆ ಮೃತ ರಾಜು ಪತ್ನಿ ಪ್ರೇಮಾ ಅವರ ಮುಂದೆ ಹೇಳಿಕೊಂಡಿದ್ದರು, ದಿನ ನಿತ್ಯ ಕೆಲಸಕ್ಕೆ ಹೋದ್ರು ರಾಘವೇಂದ್ರ ಅವರು ತನ್ನನ್ನು ಮಾತನಾಡಿಸುತ್ತಿರಲಿಲ್ಲ. ಯಾವುದೇ ಕೆಲಸ ಮಾಡು ಅಂತ ಹೇಳುತ್ತಿರಲಿಲ್ಲ. ಕಳೆದ ನಾಲ್ಕು ತಿಂಗಳುಗಳಿಂದ ಸಂಬಳ ಸಹ ಬಂದಿರಲಿಲ್ಲವಂತೆ. ಹಿರಿಯ ಅಧಿಕಾರಿಗಳು ಹೇಳಿದ್ರು ನನ್ನ ಗಂಡನಿಗೆ ಸಂಬಳ ಕೊಡದೇ ಕಿರುಕುಳ ನೀಡುತ್ತಿದ್ದರು ಎಂದು ಮೃತ ರಾಜು ಪತ್ನಿ ಪ್ರೇಮಾ ಅವರು ಅರೋಪಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: 11 ತಿಂಗಳಿಂದ ಸಂಬಳವಿಲ್ಲ, ಸಾಲಗಾರರ ಕಾಟ; ಡೆತ್‌ನೋಟ್‌ ಬರೆದಿಟ್ಟು ಗ್ರಾ ಪಂ ನೀರುಗಂಟಿ ಆತ್ಮಹತ್ಯೆ

ನೀರುಗಂಟಿ ಆತ್ಮಹತ್ಯೆ

ಚಿಕ್ಕಮಗಳೂರು: ಡೆತ್‌ನೋಟ್ ಬರೆದಿಟ್ಟು ಗ್ರಾಮ ಪಂಚಾಯಿತಿಯ ನೀರುಗಂಟಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಮಕ್ಕಿ ಗ್ರಾಮದಲ್ಲಿ ನಡೆದಿದೆ. ಆಣೂರು ಗ್ರಾಮ ಪಂಚಾಯಿತಿಯ ನೀರುಗಂಟಿ ರಮೇಶ್(47) ನೇಣಿಗೆ ಶರಣಾದ ವ್ಯಕ್ತಿ. 11 ತಿಂಗಳಿಂದ ಸಂಬಳ ನೀಡಿಲ್ಲ, ಸಾಲಗಾರರ ಕಾಟ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆತ್‌ನೋಟ್‌ನಲ್ಲಿ ಏನಿದೆ?

ನಾನು ತುಂಬಾ ವರ್ಷದಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನನಗೆ 11 ತಿಂಗಳ ವೇತನ ಕೊಟ್ಟಿಲ್ಲ ಹಾಗೂ ಸಂಘದವರು ಮನೆಗೆ ಬಂದು ಹಣ ಕಟ್ಟುವಂತೆ ನನಗೆ ಮತ್ತು ನಮ್ಮ ಮನೆಯವರಿಗೆ ತೊಂದರೆ ಕೊಡುತ್ತಿದ್ದಾರೆ. ಹಾಗಾಗಿ ನನಗೆ ತುಂಬಾ ಮನಸ್ಸಿಗೆ ಬೇಜಾರಾಗಿದೆ. ಫೈನಾನ್ಸ್‌ನಲ್ಲಿ ಸಾಲ ಮಾಡಿರುವೆ, ಸಂಬಳ ನೀಡದಿದ್ದಕ್ಕೆ ಸಾಲಕಟ್ಟಲು ಆಗುತ್ತಿಲ್ಲ. RBL, SKS, ಗ್ರಾಮಿಣಕೂಟ, ಮುತ್ತೂಟ್ ಫೈನಾನ್ಸ್‌ ಸಿಬ್ಬಂದಿ ಮನೆಗೆ ಬಂದು ಮನೆಯವರಿಗೂ ಕಿರುಕುಳ ನೀಡುತ್ತಿದ್ದಾರೆ. ಇನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲೂ ಕೆಲವರು ಕೆಲಸ ಮಾಡಲು ಬಿಡುತ್ತಿಲ್ಲವೆಂದು ಅವರ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link