All posts by nagaraj11081993

ನೈಸ್ ರೋಡ್ ಬನ್ನೇರುಘಟ್ಟ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಚಿರತೆ ಸಾವು

ನೈಸ್ ರೋಡ್ ಬನ್ನೇರುಘಟ್ಟ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಚಿರತೆ ಸಾವು

ಆನೇಕಲ್, ಮಾರ್ಚ್ 15: ಆನೇಕಲ್ ತಾಲೂಕಿನ ಬನ್ನೇರುಘಟ್ಟ ನೈಸ್ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆಯೊಂದು ಸಾವನ್ನಪ್ಪಿದೆ. ಈ ಘಟನೆ ಶನಿವಾರ ಮಧ್ಯರಾತ್ರಿ ಸುಮಾರು ಒಂದು ಗಂಟೆ ವೇಳೆಗೆ ನಡೆದಿರುವುದು ತಿಳಿದುಬಂದಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಗಂಭೀರವಾಗಿ ಗಾಯಗೊಂಡು, ರಸ್ತೆಯ ಕೆಳಭಾಗಕ್ಕೆ ಬಿದ್ದಿತ್ತು. ಸ್ಥಳದಲ್ಲೇ ಚಿರತೆ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದು ಸುಮಾರು ಮೂರು ವರ್ಷದ ಹೆಣ್ಣು ಚಿರತೆ ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಕಗ್ಗಲೀಪುರ ಅರಣ್ಯ ವಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತ ಚಿರತೆಯನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಯ ಕಚೇರಿಗೆ ಸಾಗಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Horoscope: ವಾರ ಭವಿಷ್ಯ; ಈ ರಾಶಿಗೆ ಈ ವಾರ ಆದಾಯದಲ್ಲಿ ಏರಿಕೆ, ಉದ್ಯೋಗದಲ್ಲಿ ಪ್ರಗತಿ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು ಮಾರ್ಚ್ 16 ರಿಂದ ಮಾರ್ಚ್ 22 ರವರೆಗಿನ ವಾರಭವಿಷ್ಯವನ್ನು ಇಲ್ಲಿ ವಿವರಿಸಿದ್ದಾರೆ. ಈ ವಾರವು ಹೊಸ ವರ್ಷವಾದ ಪರಾಭವನಾಮ ಸಂವತ್ಸರದ ಪ್ರಾರಂಭಕ್ಕೆ ಸಾಕ್ಷಿಯಾಗಲಿದ್ದು, ಇದು ಮಾರ್ಚ್ 19 ರಂದು ಚಾಂದ್ರಮಾನ ಯುಗಾದಿಯೊಂದಿಗೆ ಆರಂಭವಾಗಲಿದೆ. ವಸಂತ ನವರಾತ್ರಿಗಳು ಹಾಗೂ ವಿಶ್ವ ಜಲ ದಿನದಂತಹ ಹಲವಾರು ವಿಶೇಷ ಪರ್ವ ದಿನಗಳ ಮಹತ್ವವನ್ನು ಗುರೂಜಿ ತಿಳಿಸಿದ್ದಾರೆ.

ಈ ವಾರದಲ್ಲಿ ಪ್ರಮುಖ ಗ್ರಹಗಳಾದ ರವಿ, ಶನಿ, ಶುಕ್ರ ಮೀನ ರಾಶಿಯಲ್ಲಿ ಸಂಚರಿಸಿದರೆ, ಗುರು ಮಿಥುನ ರಾಶಿಯಲ್ಲಿ ಇರುತ್ತದೆ. ಕೇತು ಸಿಂಹ ರಾಶಿಯಲ್ಲಿ, ಕುಜ, ಬುಧ ಮತ್ತು ರಾಹು ಕುಂಭ ರಾಶಿಯಲ್ಲಿ ಸಾಗುತ್ತಿವೆ. ಈ ಗ್ರಹಗಳ ಸ್ಥಿತಿಯು ದ್ವಾದಶ ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಲಿವೆ. ಪ್ರತಿಯೊಂದು ರಾಶಿಯವರಿಗೆ ಆರ್ಥಿಕ ಪ್ರಗತಿ, ಆರೋಗ್ಯ, ಉದ್ಯೋಗದಲ್ಲಿನ ಬದಲಾವಣೆಗಳು, ಕುಟುಂಬ ಸಂಬಂಧಗಳು, ಪ್ರಯಾಣ ಮತ್ತು ಹೂಡಿಕೆಗಳ ಕುರಿತು ಮಾಹಿತಿ ನೀಡಲಾಗಿದೆ. ಜೊತೆಗೆ, ಪ್ರತಿಯೊಂದು ರಾಶಿಯವರಿಗೆ ಅದೃಷ್ಟ ಸಂಖ್ಯೆಗಳು, ಬಣ್ಣಗಳು ಮತ್ತು ಪೂಜಿಸಬೇಕಾದ ದೇವತೆಗಳು ಹಾಗೂ ಮಂತ್ರೋಪಚಾರಗಳ ಬಗ್ಗೆಯೂ ಸಲಹೆ ನೀಡಲಾಗಿದೆ. ಈ ವಾರದಲ್ಲಿ ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವ ಎಲ್ಲರಿಗೂ ಶುಭ ಹಾರೈಕೆಗಳನ್ನು ಗುರೂಜಿ ಸಲ್ಲಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುಡಿದ ಮತ್ತಿನಲ್ಲಿ ತಂದೆಯನ್ನು ಕೊಂದು, ತನ್ನ ಮಣಿಕಟ್ಟನ್ನೇ ಕೊಯ್ದುಕೊಂಡ ವ್ಯಕ್ತಿ

ಮೀರತ್, ಮಾರ್ಚ್​ 15: ಕುಡಿದ ಮತ್ತಲ್ಲಿ ತಂದೆಯನ್ನು ಕೊಂದಿದ್ದಲ್ಲದೇ ತನ್ನ ಮಣಿಕಟ್ಟನ್ನೇ ವ್ಯಕ್ತಿ ಕೊಯ್ದುಕೊಂಡಿರುವ ಘಟನೆ ಉತ್ತರ ಪ್ರದೇಶದ ಮೀರತ್​​ನಲ್ಲಿ ನಡೆದಿದೆ. ಸಿವಿಲ್ ಲೈನ್ಸ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಇಟ್ಟಿಗೆಯಿಂದ ತಂದೆಯ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಪೊಲೀಸರ ಪ್ರಕಾರ, ದಾಳಿಯ ನಂತರ ಆರೋಪಿಯು ಚಾಕುವಿನಿಂದ ತನ್ನ ಮಣಿಕಟ್ಟನ್ನು  ತಾನೇ ಕೊಯ್ದುಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದಾಗ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ತಂದೆ ಮತ್ತು ಮಗ ಒಟ್ಟಿಗೆ ಮದ್ಯಪಾನ ಮಾಡುತ್ತಿದ್ದಾಗ ಅವರ ನಡುವೆ ವಾಗ್ವಾದ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿವಾದವು ಶೀಘ್ರದಲ್ಲೇ ಹಿಂಸಾತ್ಮಕ ಜಗಳಕ್ಕೆ ಕಾರಣವಾಯಿತು. ಈ ಜಗಳದಲ್ಲಿ, ಮಗ ಇಟ್ಟಿಗೆಯನ್ನು ಎತ್ತಿಕೊಂಡು ತಂದೆಯ ತಲೆ ಮತ್ತು ದೇಹದ ಮೇಲೆ ಪದೇ ಪದೇ ಹೊಡೆದಿದ್ದಾನೆ, ಇದರಿಂದಾಗಿ ಮಾರಣಾಂತಿಕ ಗಾಯಗಳಾಗಿದ್ದವು.ಮೃತನನ್ನು ಬಿಹಾರದ ಮೋತಿಹಾರಿ ಮೂಲದ ರಾಜೇಶ್ ಎಂದು ಗುರುತಿಸಲಾಗಿದೆ.

ಅವರು ತಮ್ಮ ಹಿರಿಯ ಮಗ ಅಮನ್ ಅವರೊಂದಿಗೆ ಮೀರತ್‌ನ ಜೈಲ್ ಚುಂಗಿ ಪ್ರದೇಶದಲ್ಲಿ ಸುಮಾರು 20 ವರ್ಷಗಳಿಂದ ವಾಸಿಸುತ್ತಿದ್ದರು. ಇಬ್ಬರೂ ಸ್ಕ್ರ್ಯಾಪ್ ವ್ಯಾಪಾರದಲ್ಲಿ ತೊಡಗಿದ್ದರು ಮತ್ತು ಸ್ಥಳೀಯ ಪುರಸಭೆಯ ಎರಡು ಅಂಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಮತ್ತಷ್ಟು ಓದಿ: ಪಾರ್ಟಿಗೆಂದು ಹೋದವ ಸಿಕ್ಕಿದ್ದು ಶವವಾಗಿ: ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ಯಾರು?

ರಾಜೇಶ್ ಅವರ ಪತ್ನಿ ಅನಿತಾ ಮತ್ತು ಅವರ ಇತರ ಮಕ್ಕಳಾದ ಮಗ ಅಂಕಿತ್ ಮತ್ತು ಹೆಣ್ಣುಮಕ್ಕಳಾದ ಖುಷಿ ಮತ್ತು ಜೂಲಿ ಬಿಹಾರದಲ್ಲಿ ವಾಸಿಸುತ್ತಿದ್ದಾರೆ. ರಾಜೇಶ್ ಮತ್ತು ಅಮನ್ ಇಬ್ಬರೂ ಮದ್ಯದ ಚಟ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಸಾತ್ಮಕ ಘರ್ಷಣೆ ಮತ್ತು ದಾಳಿಯ ಬಗ್ಗೆ ತಿಳಿದ ನಂತರ ಪ್ರದೇಶದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ತಲುಪಿ ಅಮನ್ ನನ್ನು ವಶಕ್ಕೆ ಪಡೆದರು. ರಾಜೇಶ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಘಟನೆಯ ಬಗ್ಗೆ ಪೊಲೀಸರಿಗೆ ಮಧ್ಯರಾತ್ರಿ 12.30 ರ ಸುಮಾರಿಗೆ ಮಾಹಿತಿ ಸಿಕ್ಕಿತು ಎಂದು ಮೀರತ್ ನಗರ ಎಸ್‌ಪಿ ಆಯುಷ್ ವಿಕ್ರಮ್ ತಿಳಿಸಿದ್ದಾರೆ. ಜೈಲ್ ಚುಂಗಿ ಬಳಿ ಮದ್ಯ ಸೇವಿಸಿದ ನಂತರ ತಂದೆ ಮತ್ತು ಮಗ ರಾಜೇಶ್ ಮತ್ತು ಅಮನ್ ನಡುವೆ ಜಗಳ ನಡೆದಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಗಲಾಟೆಯ ಸಮಯದಲ್ಲಿ, ಅಮನ್ ರಾಜೇಶ್ ತಲೆಗೆ ಹಲ್ಲೆ ನಡೆಸಿದ್ದಾರೆ.

ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಆರೋಪಿ ಅಮನ್ ನನ್ನು ವಶಕ್ಕೆ ಪಡೆಯಲಾಗಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

ನವದೆಹಲಿ, ಮಾರ್ಚ್ 15: ಸರ್ಕಾರವು ಎಲ್​ಪಿಜಿ ಪೂರೈಕೆಯಲ್ಲಿ ತೊಂದರೆ ಆಗಿಲ್ಲ ಎಂದು ಹೇಳುತ್ತಿದ್ದರೂ ಗ್ಯಾಸ್ ಸಿಲಿಂಡರ್ (LPG cylinder) ಸಿಗುವುದು ತಡವಾಗುತ್ತಿರುವುದು ಹೌದು. ಜನರೂ ಕೂಡ ಎಂದಿಗಿಂತ ಹೆಚ್ಚು ಬೇಗ ಎಲ್​ಪಿಜಿ ಗ್ಯಾಸ್ ಬುಕಿಂಗ್ ಮಾಡುತ್ತಿರುವುದೂ ಹೌದು. ಇದೇ ವೇಳೆ, ಎಲ್​ಪಿಜಿ ಪೂರೈಕೆ ಮತ್ತು ವಿತರಣೆ ನಿಯಂತ್ರಣ ಆದೇಶದಲ್ಲಿ (LPG supply and distribution order) ಸರ್ಕಾರ ಬದಲಾವಣೆ ಮಾಡಿದೆ. ಪೈಪ್ಡ್ ಗ್ಯಾಸ್ ಅಥವಾ ಪಿಎನ್​ಜಿ (PNG- Piped Natural Gas) ಸೌಲಭ್ಯ ಹೊಂದಿರುವ ಜನರಿಗೆ ಎಲ್​ಪಿಜಿ ಸಿಗದಂತೆ ಕಾನೂನು ಬದಲಾಯಿಸಲಾಗಿದೆ.

ಇದರಂತೆ ಪಿಎನ್​ಜಿ ಸಂಪರ್ಕ ಇರುವ ಮನೆಗಳಿಗೆ ಹೊಸ ಎಲ್​ಪಿಜಿ ಸಂಪರ್ಕ ಸಿಗೋದಿಲ್ಲ. ಈಗಾಗಲೇ ಎಲ್​ಪಿಜಿ ಕೆನೆಕ್ಷನ್ ಹೊಂದಿರುವ ಪಿಎನ್​ಜಿ ಗ್ರಾಹಕರಿಗೆ ಎಲ್​ಪಿಜಿ ಸಿಲಿಂಡರ್ ಪೂರೈಕೆ ಸಿಗೋದಿಲ್ಲ. ಸದ್ಯ ಪಿಎನ್​ಜಿ ಮತ್ತು ಎಲ್​ಪಿಜಿ ಎರಡೂ ಸಂಪರ್ಕ ಹೊಂದಿರುವ ಕುಟುಂಬಗಳು ತಮ್ಮ ಎಲ್​ಪಿಜಿ ಸೌಲಭ್ಯವನ್ನು ಬಿಟ್ಟುಕೊಡಬೇಕಾಗುತ್ತದೆ.

ಇದನ್ನೂ ಓದಿ: ಗ್ಯಾಸ್​ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?

ಭಾರತದಲ್ಲಿ ಒಂದೂವರೆ ಕೋಟಿಗೂ ಅಧಿಕ ಮನೆಗಳು ಪೈಪ್ಡ್ ನ್ಯಾಚುರಲ್ ಗ್ಯಾಸ್ ಅಥವಾ ಪಿಎನ್​ಜಿ ಕನೆಕ್ಷನ್ ಹೊಂದಿವೆ. ಸದ್ಯದ ತೈಲ ಬಿಕ್ಕಟ್ಟಿನಲ್ಲಿ ಸರ್ಕಾರವು ಗೃಹಬಳಕೆಯ ಪಿಎನ್​ಜಿ ಸಂಪರ್ಕಗಳಿಗೆ ಪೂರೈಕೆ ಮಾಡಲು ಮೊದಲ ಆದ್ಯತೆ ಕೊಡುತ್ತಿದೆ. ಹೀಗಾಗಿ, ಪಿಎನ್​ಜಿ ಗ್ರಾಹಕರು ಗ್ಯಾಸ್ ಕೊರತೆ ಬಗ್ಗೆ ಹೆಚ್ಚು ಕಳವಳಪಡುವ ಅವಶ್ಯಕತೆ ಇಲ್ಲ.

ಸದ್ಯ ಪಿಎನ್​ಜಿ ದರಗಳು ಪ್ರತೀ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಪಿಎನ್​ಜಿ ಗ್ಯಾಸ್​ಗೆ 45 ರೂನಿಂದ 60 ರೂವರೆಗೂ ಇವೆ. ಜಿಎಐಎಲ್​ನ ಪಿಎನ್​ಜಿ ದರ ಬೆಂಗಳೂರಿನಲ್ಲಿ ಒಂದು ಎಸ್​ಸಿಎಂಗೆ 52 ರೂ ಇದೆ. ಒಂದು ಎಸ್​ಸಿಎಂ ಎಂದರೆ ಅಂದಾಜು 800 ಗ್ರಾಮ್ ಇರುತ್ತದೆ. ವಿದ್ಯುತ್ ದರದ ರೀತಿ ಪಿಎನ್​ಜಿ ಕನೆಕ್ಷನ್​ನಲ್ಲಿ ನೀವು ಬಳಸುವ ಗ್ಯಾಸ್ ಪ್ರಮಾಣದ ಮೇಲೆ ಬಿಲ್ ಬರುತ್ತದೆ.

ಸರ್ಕಾರ ಸದ್ಯ ಎಲ್​ಪಿಜಿ ಗ್ರಾಹಕರನ್ನು ಪಿಎನ್​ಜಿ ಸಂಪರ್ಕಕ್ಕೆ ವರ್ಗವಾಗುವಂತೆ ಮನವೊಲಿಸುವ ಕೆಲಸ ಮಾಡುತ್ತಿದೆ. ಸದ್ಯ ಎಲ್ಲಾ ನಗರ ಮತ್ತು ಪ್ರದೇಶಗಳಲ್ಲಿ ಪಿಎನ್​ಜಿ ನೆಟ್ವರ್ಕ್ ಇಲ್ಲ. ನೀವಿರುವ ಪ್ರದೇಶದಲ್ಲಿ ಪಿಎನ್​ಜಿ ಸಂಪರ್ಕ ಲಭ್ಯ ಇದ್ದರೆ ಅದನ್ನು ಹೊಂದುವುದು ಉತ್ತಮ. ಸರ್ಕಾರವು ಇಂಥ 60 ಲಕ್ಷ ಮನೆಗಳನ್ನು ಗುರುತಿಸಿದ್ದು, ಅವು ಪಿಎನ್​ಜಿ ಸಂರ್ಪಕ ಪಡೆಯಲು ಅವಕಾಶ ಇರುತ್ತದೆ.

ಇದನ್ನೂ ಓದಿ: LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂಪಾಯಿಗೆ ಏರಿಕೆ?

ಭಾರತದಲ್ಲಿ ಸದ್ಯ 32 ಕೋಟಿಗೂ ಅಧಿಕ ಎಲ್​ಪಿಜಿ ಗ್ರಾಹಕರಿದ್ದಾರೆ. ಭಾರತಕ್ಕೆ ಬೇಕಅದ ಶೇ. 60ರಷ್ಟು ಎಲ್​ಪಿಜಿಯನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಈ ಆಮದಿತ ಎಲ್​ಪಿಜಿಯಲ್ಲಿ ಶೇ. 90ರಷ್ಟವು ಈಗ ಯುದ್ಧವಾಗುತ್ತಿರುವ ಗಲ್ಫ್ ರಾಷ್ಟ್ರಗಳಿಂದ ಬರಬೇಕು. ಹೀಗಾಗಿ, ಎಲ್​ಪಿಜಿ ಪೂರೈಕೆ ಭಾರತದಲ್ಲಿ ವ್ಯತ್ಯಯ ಆಗಿರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರು ರಾಜಮಾತೆಗೂ ವಿಕ್ಟೋರಿಯಾಗೂ ಇದೆ ನಂಟು! ಅರಮನೆ ಅಗ್ನಿದುರಂತ ಹುಟ್ಟುಹಾಕಿದ ಆಸ್ಪತ್ರೆಯ ರೋಚಕ ಇತಿಹಾಸ ಇಲ್ಲಿದೆ

ಮೈಸೂರು, ಬೆಂಗಳೂರು, ಮಾರ್ಚ್ 15: ವಿವಾದಿತ ನಿರ್ಧಾರಗಳನ್ನು ತೆಗೆದುಕೊಂಡು ನಂತರ ಕಣ್ಣೊರೆಸುವ ನಾಟಕವಾಡುವುದು ಸರ್ಕಾರ ಮಟ್ಟದಲ್ಲಿ ನಡೆಯುತ್ತಲೇ ಇರುತ್ತದೆ. ಇದಕ್ಕೆ ಈಗ ಮತ್ತೊಂದು ಹೊಸ ಸೇರ್ಪಡೆ ಕರ್ನಾಟಕ ರಾಜಧಾನಿ ಬೆಂಗಳೂರಿನ (Bangalore) ಬಡ ಮಧ್ಯಮ ವರ್ಗದವರ ಪಾಲಿನ ಕಾಮಧೇನುವಾಗಿರುವ ವಿಕ್ಟೋರಿಯಾ ಸರ್ಕಾರಿ (Victoria Hospital) ಆಸ್ಪತ್ರೆ. ಹೌದು, ಶತಮಾನಗಳ ಇತಿಹಾಸದ ಆಸ್ಪತ್ರೆ ಹೆಸರು ಬದಲಾಯಿಸಲು ರಾಜ್ಯ ಸರ್ಕಾರ ಮುಂದಾಗಿದೆ. 2026ರ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ವಿಕ್ಟೋರಿಯಾ ಆಸ್ಪತ್ರೆಯನ್ನು ಶಾಂತವೇರಿ ಗೋಪಾಲಗೌಡ ಆಸ್ಪತ್ರೆ’ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದಾರೆ.

ಶಾಂತವೇರಿ ಗೋಪಾಲಗೌಡರು ಕರ್ನಾಟಕದ ಮಹಾನ್ ಸಮಾಜವಾದಿ ನಾಯಕರು. ದೀನ ದಲಿತರ ಹಕ್ಕಿಗಾಗಿ ಹೋರಾಡಿದ ಮಹಾನ್ ವ್ಯಕ್ತಿ. ಅದರ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಅಂತಹ ಮಹಾನ್ ನಾಯಕರ ಹೆಸರಿಡುವುದರ ಬಗ್ಗೆ ಯಾರ ತಕರಾರು ಸಹ ಇಲ್ಲ. ಆದರೆ ಜನರಲ್ಲಿ ಈಗ ಕೇಳಿಬರುತ್ತಿರುವ ಪ್ರಶ್ನೆ ಒಂದೇ, ಹೊಸ ಹೆಸರಿಗಾಗಿ ಹಳೆಯ ಇತಿಹಾಸವನ್ನೇ ಅಳಿಸಬೇಕೇ ? ಇದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಅಂದಹಾಗೆ ವಿಕ್ಟೋರಿಯಾ ಆಸ್ಪತ್ರೆಗೂ ಮೈಸೂರು ರಾಜಮನೆತನಕ್ಕೂ ನಂಟಿದೆ. ಅಷ್ಟೇ ಅಲ್ಲದೆ, ಒಂದು ಅಗ್ನಿದುರಂತವೇ ವಿಕ್ಟೋರಿಯಾ ಆಸ್ಪತ್ರೆ ನಿರ್ಮಾಣಕ್ಕೆ ಕಾರಣವಾಯಿತು ಎಂದರೆ ನಂಬಲೇಬೇಕು.

ವಿಕ್ಟೋರಿಯ ಆಸ್ಪತ್ರೆ ರೂವಾರಿ ಕೆಂಪನಂಜಮ್ಮಣ್ಣಿ

ಕೆಂಪನಂಜಮ್ಮಣ್ಣಿ ಮೈಸೂರು ರಾಜಮಾತೆ. ಪತಿಯನ್ನು ಕಳೆದುಕೊಂಡ ಬಳಿಕ ಅಪ್ರಾಪ್ತ ವಯಸ್ಸಿನ ಐವರು ಮಕ್ಕಳ ಪಾಲನೆ, ಪೋಷಣೆ ಜೊತೆಗೆ ರಾಜ್ಯಭಾರವನ್ನು ಹೊತ್ತು ಯಶಸ್ವಿಯಾಗಿ ಮುನ್ನಡೆಸಿದ ದಿಟ್ಟ ಮಹಿಳೆ. ಮಗನಿಗೆ ಪಟ್ಟಾಭಿಷೇಕ ಮಾಡುವವರೆಗೂ ನಿರಂತರವಾಗಿ ಮನೆವಾರ್ತೆ, ಆಡಳಿತಗಳನ್ನು ಒಟ್ಟಿಗೇ ನಿಭಾಯಿಸಿದ ರಾಜತಂತ್ರಜ್ಞೆ. ಮಕ್ಕಳ ಜೊತೆ ಜೊತೆಗೆ ರಾಜ್ಯದ ಜನತೆಯನ್ನೂ ಮಕ್ಕಳೆಂದು ಸಾಕಿ ಸಲುಹಿದ ಮಾತೆ. ಆಧುನಿಕ ಮೈಸೂರು ಚರಿತ್ರೆಯಲ್ಲಿ ವೈವಿಧ್ಯಮಯ ಅಧ್ಯಾಯ. ಪುತ್ರ ವಾತ್ಸಲ್ಯ ಮತ್ತು ಪ್ರಜಾವಾತ್ಸಲ್ಯವೆರಡೂ ಏಕಕಾಲಕ್ಕೆ ಮೇಲೈಸಿ ಸನ್ನಿಧಾನ ಪದಕ್ಕೆ ಗೌರವ ತಂದುಕೊಟ್ಟವರು. ಇದೇ ಕಾರಣಕ್ಕೆ, ಮಹಾರಾಣಿ ಕೆಂಪನಂಜಮ್ಮಣ್ಣಿ ಎಂಬ ಹೆಸರಿಗಿಂತಲೂ ಎಲ್ಲರಿಗೂ ವಾಣಿ ವಿಲಾಸ ಸನ್ನಿಧಾನ ಎಂಬ ಹೆಸರು ಗೌರವಯುತವಾಗಿತ್ತು. 31ರ ಹರೆಯದ ಚಾಮರಾಜ ಒಡೆಯ‌ರ್ ಡಿಪ್ತಿರಿಯಾದಿಂದ ಮೃತಪಟ್ಟಾಗ, ಮಹಾರಾಣಿಗೆ ಕೇವಲ 26 ವರ್ಷ ವಯಸ್ಸು. ಅದು ದಿಢೀರ್ ಆಘಾತ. ಆದರೂ ಕುಗ್ಗದೆ ಜಗ್ಗದೆ ಬಗ್ಗದೆ ಸವಾಲುಗಳನ್ನು ಎದುರಿಸಿ. ಸಮಸ್ಯೆಗಳನ್ನು ಮೆಟ್ಟಿ ಯದುವಂಶವನ್ನು ಅಜರಾಮರವನ್ನಾಗಿಸಿದ ಮಹಾತಾಯಿ.

ವಿಕ್ಟೋರಿಯಾ ಆಸ್ಪತ್ರೆ…

ಬೆಂಗಳೂರಿನ ಹೃದಯಭಾಗದಲ್ಲಿ ನಿಂತಿರುವ ಒಂದು ದೊಡ್ಡ ಕಟ್ಟಡ. ಇದು ಕೇವಲ ಆಸ್ಪತ್ರೆಯಲ್ಲ. ಅದು ನೂರಾರು ವರ್ಷಗಳ ನೆನಪುಗಳನ್ನು ಹೊತ್ತ ಮನೆ. ಅದು ಸಾವಿರಾರು ಜೀವಗಳನ್ನು ಉಳಿಸಿದ ಪವಿತ್ರ ಸ್ಥಳ. ಅದುವೆ ವಿಕ್ಟೋರಿಯಾ ಆಸ್ಪತ್ರೆ. ಈ ಹೆಸರು ಇನ್ನು ನೆನಪು ಮಾತ್ರ. ವಿಕ್ಟೋರಿಯಾ ಹೆಸರು ಕೆಲವೇ ದಿನಗಳಲ್ಲಿ ಬದಲಾಗುತ್ತಿದೆ. ರಾಜ್ಯ ಸರ್ಕಾರ ವಿಕ್ಟೋರಿಯಾ ಹೆಸರು ಬದಲಾಯಿಸಲು ಎಲ್ಲಾ ತಯಾರಿ ನಡೆಸಿದೆ. ಈ ಆಸ್ಪತ್ರೆಯ ಹೆಸರನ್ನು ಬದಲಿಸುವುದು ಅಂದರೆ ಕೇವಲ ಒಂದು ಫಲಕ ಬದಲಿಸುವುದಲ್ಲ ಬದಲಿಗೆ ಒಂದು ಇತಿಹಾಸದ ಪುಟವನ್ನೇ ಮುಚ್ಚುವುದಾಗಿದೆ.

ಅರಮನೆಯ ಅಗ್ನಿದುರಂತ ಹುಟ್ಟಿಸಿದ ಮಹಾ ಸೇವೆ!

ಈ ವಿಕ್ಟೋರಿಯಾ ಆಸ್ಪತ್ರೆಯ ಹುಟ್ಟಿನ ಕಥನವೇ ಅದ್ಬುತ, ರೋಚಕ. ಅದು 1897ರ ಫೆಬ್ರವರಿ 28. ಮೈಸೂರು ಗಂಧದ ಅರಮನೆಯಲ್ಲಿ ಮದುವೆಯ ಸಂಭ್ರಮ. ರಾಜಕುಮಾರಿ ಜಯಲಕ್ಷ್ಮಮ್ಮಣ್ಣಿಯವರ ವಿವಾಹದ ಸಂಭ್ರಮದಲ್ಲಿ ಅರಮನೆ ಕಂಗೊಳಿಸುತ್ತಿತ್ತು. ಸಂಗೀತ, ನಗು, ಸಂತೋಷ ಎಲ್ಲೆಡೆ ಹರಡಿತ್ತು. ಆದರೆ ಕ್ಷಣಮಾತ್ರದಲ್ಲಿ ಎಲ್ಲವೂ ಬದಲಾಗಿಬಿಟ್ಟಿತು. ವಿವಾಹ ಮಂಟಪದ ತೆರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿತು‌. ಕಣ್ಣು ಮುಚ್ಚುವಷ್ಟರಲ್ಲಿ ಬೆಂಕಿ ಅರಮನೆಯ ದೊಡ್ಡ ಭಾಗವನ್ನೇ ಆವರಿಸಿತು. ಎರಡು ದಿನಗಳ ಕಾಲ ಅಗ್ನಿ ತನ್ನ ರೌದ್ರ ತಾಂಡವವಾಡಿತು. ಸುಮಾರು 30 ಸಾವಿರ ಚದರ ಅಡಿ ಅರಮನೆ ಬೆಂಕಿಯಲ್ಲಿ ಬೆಂದು ಭಸ್ಮವಾಯಿತು. ಅಷ್ಟೊಂದು ಅಗ್ನಿ ಅನಾಹುತವಾದರೂ ಅದೃಷ್ಟವಶಾತ್ ಅಪಾರ ಸಾವು ನೋವು ಸಂಭವಿಸಲಿಲ್ಲ. ಆದರೆ ಅರಮನೆಯ ಒಂದು ಹಿರಿಯ ಜೀವ ತನ್ನ ಜೀವವನ್ನೇ ಬಲಿ ನೀಡಿ ಇತಿಹಾಸದ ಸೃಷ್ಟಿಗೆ ಕಾರಣವಾದಳು. ಆಕೆಯೇ ಅರಮನೆಯ ಪರಿಚಾರಿಕೆ ಹೊನ್ನವ್ವೆ. ಆಕೆ ಸಾಮಾನ್ಯ ಮಹಿಳೆ. ಆದರೆ ಆಕೆಯ ಹೃದಯ ಅಸಾಮಾನ್ಯ. ಯದುವಂಶದ ಬಗ್ಗೆ ಇದ್ದ ಗೌರವ ಅಪಾರ. ರಾಜ ಮನೆತನದವರಿಗೂ ಆಕೆಯನ್ನು ಕಂಡರೇ ಅದೇನೂ ವಿಶೇಷ ಪ್ರೀತಿ, ಅಕ್ಕರೆ, ಮಮಕಾರ. ಹೊನ್ನವ್ವೆ ಸಾಹಸಿ. ಅಗ್ನಿ ಜ್ವಾಲೆಗಳು ರುದ್ರ ನರ್ತನವಾಡುತ್ತಿದ್ದ ವೇಳೆ ಆ ಅಗ್ನಿಯ ನಡುವೆ ನಿಂತು ವಧು ವರರನ್ನು ರಕ್ಷಿಸಿದವಳು. ಅರಮನೆಯ ಅಮೂಲ್ಯ ಆಭರಣಗಳನ್ನು ಉಳಿಸಿದವಳು. ಎಲ್ಲಕ್ಕಿಂತ ಹೆಚ್ಚಾಗಿ ಯದುವಂಶ ಕುಲದೇವತೆ ತಾಯಿ ಚಾಮುಂಡೇಶ್ವರಿಯ ಪಚ್ಚೆ ವಿಗ್ರಹವಿದ್ದ ಸಂದೂಕವನ್ನೂ ಕಾಪಾಡಿದವಳು. ಆದರೆ ಎಲ್ಲವನ್ನೂ ರಕ್ಷಿಸಿದ ಹಿರಿಯ ಜೀವ ಮಾತ್ರ ಉಳಿಯಲಿಲ್ಲ. ಇದೆಲ್ಲವನ್ನೂ ರಕ್ಷಿಸುವ ಅಷ್ಟರಲ್ಲಾಗಲೇ ಹೊನ್ನವ್ವೆಯ ದೇಹಕ್ಕೆ ಬೆಂಕಿ ತಗುಲಿತ್ತು. ತೀವ್ರ ಗಾಯಗಳಿಂದ ನರಳುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಜೀವನ್ಮರಣ ಹೋರಾಟ ನಡೆಸಿದ ಮಹಾತಾಯಿ ಕೊನೆಗೆ ಮೌನವಾಗಿ ಈ ಲೋಕವನ್ನೇ ತೊರೆದಳು. ಆ ಸಮಯದಲ್ಲಿ ಪ್ರಖ್ಯಾತ ವೈದ್ಯರಾಗಿದ್ದ ಮೆಗ್ಗಾನ್ ರಾಜಮಾತೆಗೆ ಒಂದು ಮಾತು ಹೇಳಿದರು. ಅದೇನೆಂದರೆ, ‘‘ಇನ್ನಷ್ಟು ಉತ್ತಮ ವೈದ್ಯಕೀಯ ಸೌಲಭ್ಯಗಳಿದ್ದರೆ ಈ ತಾಯಿಯ ಜೀವವನ್ನು ಉಳಿಸಬಹುದಿತ್ತು’’. ಆ ಮಾತು ರಾಜಮಾತೆ ಕೆಂಪನಂಜಮ್ಮಣಿ ಹೃದಯವನ್ನು ಕದಡಿತು.

ಕೆಂಪನಂಜಮ್ಮಣ್ಣಿ ಮಾತೃ ಹೃದಯದಾಕೆ. ಅವರ ಮನಸು ಸದಾ ಪ್ರಜೆಗಳ ಹಿತ ಸಮಾಜಮುಖಿ ಚಿಂತನೆ ಕಡೆಗೆ ತುಡಿಯುತಿತ್ತು. ಅದಕ್ಕೆ ಸಾಕ್ಷಿ ಗುಡ್ಡೆಯಾಗಿ ನಮ್ಮ ಮೈಸೂರಿನಲ್ಲಿ ಅನೇಕಾನೇಕ ಕುರುಹುಗಳು ಶತ ಶತಮಾನ ಕಳೆದರು ಜೀವಂತವಾಗಿವೆ. ಹೊನ್ನವ್ವೆಯ ಸಾವು ರಾಜಮಾತೆಯ ಮನದಲ್ಲಿ ಒಂದು ಸಂಕಲ್ಪ ಹುಟ್ಟಿ ಹಾಕಿತು. ಮುಂದೆಂದೂ ನಮ್ಮ ಪ್ರಜೆಗಳು ಚಿಕಿತ್ಸೆ ಇಲ್ಲದೆ ಸಾಯಬಾರದು. ಯಾವಾಗ ರಾಜಮಾತೆ ಧೃಡ ನಿರ್ಧಾರ ಮಾಡಿದರೋ ಅಲ್ಲಿಗೆ ರಾಜ್ಯದ ಮಹಾನ್ ಆಸ್ಪತ್ರೆಯೊಂದಕ್ಕೆ ನಾಂದಿ ಶುರುವಾಯಿತು.

ವಿಕ್ಟೋರಿಯಾ ಹೆಸರಿಗಿದೆ ರೋಚಕ ಇತಿಹಾಸ

ಹೌದು, ವಿಕ್ಟೋರಿಯಾ ಹೆಸರು ಸುಖಾಸುಮ್ಮನೆ ಬಂದಿದ್ದಲ್ಲ. ಅದರ ಹಿಂದೆ ನಮ್ಮ ಮೈಸೂರು ಸಾಮ್ರಾಜ್ಯದ ಮಹಿಳೆಯರ ಬುದ್ದಿ ಚಾತುರ್ಯದ ಇತಿಹಾಸವಿದೆ. ಸರ್ವಕಾಲಕ್ಕೂ ‘‘ಹೆಣ್ಮಕ್ಳೇ ಸ್ಟ್ರಾಂಗು ಗುರು’’ ಎಂಬುದಕ್ಕೆ ಸಾಕ್ಷಿಭೂತವಾಗಿದೆ‌. ನಮ್ಮ ಮನೆಯ ಹೆಣ್ಣು ಮಕ್ಕಳ ಬುದ್ದಿಶಕ್ತಿ ದೂರದೃಷ್ಟಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ರಾಜಮಾತೆ ಕೆಂಪನಂಜಮ್ಮಣ್ಣಿ ಬ್ರಿಟಿಷರಂತಹ ಬ್ರಿಟಿಷರನ್ನೇ ಮಂಕಾಗಿಸಿ ಚಾಣಾಕ್ಷತನದಿಂದ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದು ಸ್ವಾಮಿ ಕಾರ್ಯ ಸ್ವಕಾರ್ಯ ಮಾಡಿಕೊಂಡು ಬಿಟ್ಟರು. ಅದರ ರೋಚಕ ಕಥೆ ಎಲ್ಲರಿಗೂ ಸ್ಪೂರ್ತಿ. ಹೊನ್ನವ್ವೆ ದಾರುಣ ಸಾವಿನ ನಂತರ ರಾಜಮಾತೆ ಆಸ್ಪತ್ರೆ ಕಟ್ಟಿಸುವ ಸಂಕಲ್ಪ ಮಾಡಿ ಅದಕ್ಕೆ ಬೇಕಾದ ಸಂಪನ್ಮೂಲವನ್ನು ಕ್ರೋಢೀಕರಿಸಲು ಆರಂಭಿಸಿದರು. ಆದರೆ ಅದು ಸಂಕಲ್ಪ ಮಾಡಿದಷ್ಟು ಸುಲಭವಾಗಿರಲಿಲ್ಲ. ಹೇಳಿ ಕೇಳಿ ಮೈಸೂರು ಸಂಸ್ಥಾನ ಬ್ರಿಟಿಷರ ಅಡಿಯಲ್ಲಿತ್ತು. ಕಡ್ಡಿ ಅಲ್ಲಾಡಬೇಕಾದರೂ ಅವರ ಅನುಮತಿ ಬೇಕಿತ್ತು. ಹೀಗಿರುವಾಗಲೇ ಮತ್ತೊಂದು ಸವಾಲು ಮೈಸೂರು ಅರಸರಿಗೆ ಎದುರಾಯ್ತು. ಅದೇ ಬ್ರಿಟಿಷ್ ರಾಣಿ ವಿಕ್ಟೋರಿಯಾ ಅವರ 60ನೇ ವರ್ಷದ ಹುಟ್ಟುಹಬ್ಬ‌.

ಅಧಿನಾಯಕಿ ವಿಕ್ಟೋರಿಯಾ ಅವರ ಹುಟ್ಟುಹಬ್ಬವನ್ನು ಭಾರತ ಎಲ್ಲಾ ಸಾಮ್ರಾಜ್ಯದವರು ಅದ್ದೂರಿಯಾಗಿ ಆಚರಿಸಬೇಕು ಅಂತಾ ಬ್ರಿಟಿಷ್ ಕಂಪನಿ ಕಟ್ಟಪ್ಪಣೆ ಮಾಡಿತು. ಅಷ್ಟೇ ಅಲ್ಲ ಎಲ್ಲರೂ ತಮ್ಮ ಶಕ್ತಿಗೂ ಮೀರಿ ವಿಕ್ಟೋರಿಯಾ ರಾಣಿಗೆ ಅತ್ಯಮೂಲ್ಯ ಉಡುಗೊರೆ ನೀಡಲೇಬೇಕೆಂಬ ಆದೇಶವನ್ನು ಹೊರಡಿಸಲಾಯ್ತು. ಮೊದಲೇ ಆಸ್ಪತ್ರೆ ನಿರ್ಮಾಣಕ್ಕೆ ಹರಸಾಹಸಪಡುತ್ತಿದ್ದ ರಾಜಮಾತೆಗೆ ಇದೊಂದು ರೀತಿ ಸಂದಿಗ್ಧ ಪರಿಸ್ಥಿತಿ. ಆರಂಭದಲ್ಲಿ ರಾಜಮಾತೆಗೆ ದಿಕ್ಕೇ ತೋಚದಂತಾಯ್ತು. ಆದರೂ ಧೃತಿಗೆಡದ ರಾಜಮಾತೆ ಸಮಯೋಚಿತವಾದ ಉಪಾಯ ಮಾಡಿದರು. ಅದುವೇ ಬ್ರಿಟಿಷ್ ರಾಣಿ ಹುಟ್ಟುಹಬ್ಬಕ್ಕೆ ಉಚಿತ ಸರ್ಕಾರಿ ಆಸ್ಪತ್ರೆಯನ್ನೇ ಉಡುಗೊರೆಯಾಗಿ ಕೊಡುವುದಾಗಿ ಘೋಷಣೆ ಮಾಡಿದರು. ರಾಜಮಾತೆಯ ಈ ಕೊಡುಗೆ ವಿಶ್ವದ ಅತ್ಯುತ್ತಮ ಉಡುಗೊರೆಯಾಗಿ ಹೊರಹೊಮ್ಮಿತು. ಬ್ರಿಟಿಷರಂತೂ ರಾಜಮಾತೆಯನ್ನು ಹಾಡಿ ಹೊಗಳಿ ಅವರ ಕೊಡುಗೆಯನ್ನು ಮನದುಂಬಿ ಸ್ಮರಿಸಿದರು. ಈ ಮೂಲಕ ರಾಜಮಾತೆ ತಮ್ಮ ಬುದ್ದಿ ಚಾತುರ್ಯದಿಂದ ಶತಮಾನಗಳೇ ಕಳೆದರು ಸಮಾಜಕ್ಕೆ ಉಪಯೋಗವಾಗುವ ಮಹತ್ವದ ಆಸ್ಪತ್ರೆಯನ್ನೂ ನೀಡಿದರು.

ಅದು 1897ರ ಜೂನ್ 22ರಂದು ಸರಿ ಸುಮಾರು 129 ವರ್ಷದ ಹಿಂದೆ 7 ಲಕ್ಷ ರೂಪಾಯಿ ವೆಚ್ಚದಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುವ ಒಂದು ಬೃಹತ್ ಸಾರ್ವಜನಿಕ ಆಸ್ಪತ್ರೆಯ ಅಡಿಗಲ್ಲು ಇಡಲಾಯಿತು. ಅದು ಕೇವಲ ಕಟ್ಟಡವಾಗಿ ಅಲ್ಲ. ಅದು ಮಾನವೀಯತೆಯ ಸ್ಮಾರಕವಾಗಿ ರೂಪುಗೊಳ್ಳಬೇಕಿತ್ತು. ಮೂರು ವರ್ಷಗಳ ನಂತರ 1900ರ ಡಿಸೆಂಬರ್ 3 ರಂದು ಭಾರತದ ವೈಸ್ ರಾಯ್ ಲಾರ್ಡ್ ಕರ್ಜನ್ ಅದನ್ನು ಉದ್ಘಾಟಿಸಿದರು. ಆ ದಿನದಿಂದ ವಿಕ್ಟೋರಿಯ ಆಸ್ಪತ್ರೆ ಸಾವಿರಾರು ಬಡವರ ಆನಾರೋಗ್ಯಕ್ಕೆ ಸಂಜೀವಿನಿ ಆಗಿದೆ. ಲಕ್ಷಾಂತರ ಬಡ ಜೀವಗಳಿಗೆ ಜೀವನಾಡಿಯಾಗಿದೆ. ಈ ಆಸ್ಪತ್ರೆಯಲ್ಲಿ ಬಡವರು, ರೈತರು, ಕಾರ್ಮಿಕರು, ಅನಾಥರು, ನಿರ್ಗತಿಕರು ಅಷ್ಟೇ ಅಲ್ಲ ಗೊತ್ತು ಗುರಿಯಿಲ್ಲದವರ ನೋವಿಗೂ ಇಲ್ಲಿ ಔಷಧ ಸಿಕ್ಕಿದೆ. ಅವರ ಕಣ್ಣೀರಿಗೆ ಪರಿಹಾರ ಸಿಕ್ಕಿದೆ. ಎಷ್ಟೋ ತಾಯಂದಿರು ಇಲ್ಲಿ ಹೊಸ ಜೀವಕ್ಕೆ ಜನ್ಮ ನೀಡಿದ್ದಾರೆ. ಎಷ್ಟೋ ಮಕ್ಕಳಿಗೆ ಇಲ್ಲಿ ಬದುಕಿನ ಮೊದಲ ಉಸಿರು ದೊರಕಿದೆ. ಇದು ಬೆಂಗಳೂರಿನ ಜನರ ನಾಡಿಮಿಡಿತ, ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿರುವ ನೆನಪುಗಳ ಭಾಗ.

ಇದನ್ನೂ ಓದಿ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಇನ್ಮುಂದೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ !

ಒಟ್ಟಿನಲ್ಲಿ, ಶತಮಾನಗಳ ಕಾಲ ಜನರ ನೆನಪಿನಲ್ಲಿ ಉಳಿದಿರುವ ವಿಕ್ಟೋರಿಯಾ ಆಸ್ಪತ್ರೆ ಎಂಬ ಹೆಸರು ಕೇವಲ ಫಲಕದಲ್ಲಿರುವ ಅಕ್ಷರಗಳಲ್ಲ. ಅದು ಜನರ ಹೃದಯದಲ್ಲಿ ಬರೆಯಲ್ಪಟ್ಟಿರುವ ಇತಿಹಾಸ. ಹೆಸರು ಬದಲಾಗಬಹುದು, ಫಲಕಗಳು ಹೊಸದಾಗಬಹುದು. ಆದರೆ ಈ ಆಸ್ಪತ್ರೆಯ ಗೋಡೆಗಳಲ್ಲಿ ಉಳಿದಿರುವ ಸಾವಿರಾರು ಜೀವಗಳ ಕಥೆಗಳು ಎಂದಿಗೂ ಬದಲಾಗುವುದಿಲ್ಲ. ಏಕೆಂದರೆ, ಆಸ್ಪತ್ರೆಗಳು ಕೇವಲ ಕಟ್ಟಡಗಳಲ್ಲ!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Spiritual Benefits: ದುಷ್ಟಶಕ್ತಿ ಮತ್ತು ಮಾಟಮಂತ್ರದಿಂದ ನಿಮ್ಮನ್ನು ರಕ್ಷಿಸಲು ಈ ಒಂದು ವಸ್ತು ಮನೆಯಲ್ಲಿಡಿ

ಇಂದಿನ ಧಾವಂತದ ಬದುಕಿನಲ್ಲಿ ಮಾನಸಿಕ ನೆಮ್ಮದಿಯ ಕೊರತೆ ಮತ್ತು ಕಾರಣವಿಲ್ಲದ ಭಯ ಹಲವರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯ ದೇವರ ಕೋಣೆಯಲ್ಲಿ ರುದ್ರಾಕ್ಷಿಯನ್ನು ಸ್ಥಾಪಿಸುವುದು ಕೇವಲ ಒಂದು ಸಂಪ್ರದಾಯವಲ್ಲ, ಅದು ಜೀವನದ ಸಕಲ ಸಂಕಷ್ಟಗಳಿಗೆ ಒಂದು ಆಧ್ಯಾತ್ಮಿಕ ಪರಿಹಾರವೂ ಹೌದು. ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಉದ್ಭವಿಸಿದ ದಿವ್ಯ ಶಕ್ತಿಯಾಗಿದ್ದು, ಮನೆಯ ಸುತ್ತಲೂ ಒಂದು ಅಜೇಯ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ದೃಷ್ಟಿ ದೋಷ, ಮಾಟ-ಮಂತ್ರದಂತಹ ನಕಾರಾತ್ಮಕ ಪ್ರಭಾವಗಳನ್ನು ತಡೆದು, ಮನೆಯ ಮುಖ್ಯ ದ್ವಾರ ಅಥವಾ ದೇವರ ಕೋಣೆಯಲ್ಲಿ ಸಾನ್ನಿಧ್ಯ ಹೊಂದುವ ಮೂಲಕ ಅಶುಭ ಶಕ್ತಿಗಳು ಒಳಬರದಂತೆ ರಕ್ಷಿಸುತ್ತದೆ.

ಕೇವಲ ರಕ್ಷಣೆಯಷ್ಟೇ ಅಲ್ಲದೆ, ಕುಟುಂಬದ ಸದಸ್ಯರ ನಡುವಿನ ಅಸಮಾಧಾನ ಮತ್ತು ದ್ವೇಷವನ್ನು ನಿವಾರಿಸಿ ಪ್ರೀತಿ-ವಿಶ್ವಾಸವನ್ನು ವೃದ್ಧಿಸುವಲ್ಲಿ ರುದ್ರಾಕ್ಷಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ದೈವಿಕ ಕಂಪನಗಳು ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಸ್ಥಿರತೆಯನ್ನು ನೀಡುತ್ತವೆ, ಇದರಿಂದ ದೈಹಿಕ ಆರೋಗ್ಯವೂ ಸುಧಾರಿಸುತ್ತದೆ. ವಿಶೇಷವಾಗಿ ಏಕ ಮುಖಿ ಅಥವಾ ಪಂಚ ಮುಖಿ ರುದ್ರಾಕ್ಷಿಯನ್ನು ಪೂಜಿಸುವುದರಿಂದ ಆರ್ಥಿಕ ಅಡೆತಡೆಗಳು ದೂರವಾಗಿ ಐಶ್ವರ್ಯ ವೃದ್ಧಿಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದು ಬುದ್ಧಿವಂತಿಕೆಯನ್ನು ಹೆಚ್ಚಿಸಿ ಜ್ಞಾನದ ಹಾದಿಯನ್ನು ಸುಗಮಗೊಳಿಸುತ್ತದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ರುದ್ರಾಕ್ಷಿ ಇರುವ ಮನೆಯಲ್ಲಿ ಸೋಮಾರಿತನ ದೂರವಾಗಿ ಸಕಾರಾತ್ಮಕ ಶಕ್ತಿಯು ನಿರಂತರವಾಗಿ ಹರಿಯುತ್ತದೆ. ಧ್ಯಾನದ ಸಮಯದಲ್ಲಿ ಇದನ್ನು ಹತ್ತಿರದಲ್ಲಿ ಇಟ್ಟುಕೊಳ್ಳುವುದರಿಂದ ಏಕಾಗ್ರತೆಯು ಹತ್ತು ಪಟ್ಟು ಹೆಚ್ಚಾಗುತ್ತದೆ ಎಂಬುದು ಅನುಭವಸ್ಥರ ಮಾತು. ಆದರೆ, ಇದರ ಪೂರ್ಣ ಫಲವನ್ನು ಪಡೆಯಲು ಸರಿಯಾದ ಶುದ್ಧೀಕರಣ ವಿಧಾನ ಅತ್ಯಗತ್ಯ. ಮನೆಯಲ್ಲಿ ಸ್ಥಾಪಿಸುವ ಮೊದಲು ರುದ್ರಾಕ್ಷಿಯನ್ನು ಗಂಗಾಜಲದಿಂದ ಶುದ್ಧೀಕರಿಸಿ, ಪ್ರತಿದಿನ ಧೂಪ-ದೀಪಗಳಿಂದ ಪೂಜಿಸುವುದರಿಂದ ಇಡೀ ಮನೆಯ ವಾತಾವರಣವು ದೈವಿಕ ಕಂಪನಗಳಿಂದ ತುಂಬಿರುತ್ತದೆ. ಈ ಸರಳ ಆಧ್ಯಾತ್ಮಿಕ ಕ್ರಮವು ನಿಮ್ಮ ಜೀವನದಲ್ಲಿ ನೆಮ್ಮದಿ, ಆರೋಗ್ಯ ಮತ್ತು ಆರ್ಥಿಕ ಪ್ರಗತಿಯ ಹೊಸ ಬಾಗಿಲುಗಳನ್ನು ತೆರೆಯಬಲ್ಲದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು: ಗೂಡ್ಸ್ ರೈಲು ಕಾಲೇಜು ಬಸ್​​ಗೆ ಡಿಕ್ಕಿ, 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಚೆನ್ನೈ, ಮಾರ್ಚ್​ 15: ಗೂಡ್ಸ್​ ರೈಲು(Train) ಎಂಜಿನಿಯರಿಂಗ್ ಕಾಲೇಜು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಅಧಿಕ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ವಿದ್ಯಾರ್ಥಿಗಳನ್ನು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಸೆಂಥಿಲ್ ಬಾಲಾಜಿ ಭೇಟಿ ನೀಡಿದ್ದಾರೆ.

ಮಾತನಾಡಿದ ಅವರು, ಶನಿವಾರ ಸಂಜೆ ಈ ಪ್ರದೇಶದ ವೀರರಕ್ಕಿಯಂ ಮತ್ತು ಪಾಲಯಂ ನಡುವಿನ ಮಾನವರಹಿತ ರೈಲ್ವೆ ಕ್ರಾಸಿಂಗ್ ಮೂಲಕ ಬಸ್ ಚಲಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಹೇಳಿದರು. ನಂತರ ಸರಕು ರೈಲು ಹಿಂದಿನಿಂದ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದರು.

ಸುಮಾರು 25 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಇಬ್ಬರು ವಿದ್ಯಾರ್ಥಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅವರಲ್ಲಿ 23 ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
23 ಜನರಲ್ಲಿ ಮೂವರು ಚೇತರಿಸಿಕೊಂಡಿದ್ದಾರೆ ಮತ್ತು ಪ್ರಥಮ ಚಿಕಿತ್ಸೆ ಪಡೆದ ನಂತರ ಮನೆಗೆ ತೆರಳಿದ್ದಾರೆ.

ಮತ್ತಷ್ಟು ಓದಿ: ಮಿರ್ಜಾಪುರದಲ್ಲಿ ರೈಲ್ವೆ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ, ನಾಲ್ವರು ಸಾವು

ಉಳಿದವರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ ಎಂದು ಡಿಎಂಕೆ ನಾಯಕರು ತಿಳಿಸಿದ್ದಾರೆ.ಈ ಘಟನೆ ಖಾಸಗಿ ರೈಲ್ವೆ ಮಾರ್ಗದಲ್ಲಿ ನಡೆದಿದೆಯೇ ಹೊರತು ದಕ್ಷಿಣ ರೈಲ್ವೆಯ ವ್ಯಾಪ್ತಿಯಲ್ಲಿ ಅಲ್ಲ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ವೀರರಕ್ಕಿಯಂ ಮತ್ತು ಪಾಲಯಂ ನಡುವಿನ ಈ ಕ್ರಾಸಿಂಗ್ ಚೆಟ್ಟಿನಾಡ್ ಸಿಮೆಂಟ್ಸ್‌ನ ಒಡೆತನದಲ್ಲಿದೆ ಮತ್ತು ಅದರ ಕ್ಲಿಂಕರ್ ಚಲನೆಯನ್ನು ನಿರ್ವಹಿಸುತ್ತದೆ ಎಂದು ಅದು ಹೇಳಿದೆ. ಈ ಮಾರ್ಗವು ಕೆಲವು ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ಹೊಂದಿದೆ ಎಂದು ಅದು ಹೇಳಿದೆ.

Source link

ಮಂಡ್ಯದಲ್ಲಿ ಮುಂದುವರಿದ ಜೆಡಿಎಸ್-ಬಿಜೆಪಿ ಮೈತ್ರಿ ಮುನಿಸು; ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ಬಿಜೆಪಿ ನಾಯಕರ ಫೋಟೋಗೆ ಇಲ್ಲ ಸ್ಥಾನ!

ಮಂಡ್ಯ, ಮಾರ್ಚ್​ 15: ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಮುನಿಸು ಮುಂದುವರಿದಿದೆ. ಇತ್ತೀಚೆಗೆ ನಡೆದ ‘ಖೇಲೋ ಇಂಡಿಯಾ ವೈಬ್ರೆಂಟ್ ಮಂಡ್ಯ’ ಕಾರ್ಯಕ್ರಮವು ಮೈತ್ರಿ ಪಕ್ಷಗಳ ನಡುವಿನ ಬಿರುಕನ್ನು ಮತ್ತಷ್ಟು ಎತ್ತಿ ತೋರಿಸಿದೆ. ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫೋಟೋ ಹೊರತುಪಡಿಸಿ ರಾಜ್ಯ ಬಿಜೆಪಿ ನಾಯಕರ ಯಾವುದೇ ಫೋಟೋಗಳನ್ನು ಹಾಕಿರಲಿಲ್ಲ.

ಈ ನಡೆ ಸ್ಥಳೀಯ ಬಿಜೆಪಿ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜೆಡಿಎಸ್ ಮುಖಂಡರು ರಾಜ್ಯ ಬಿಜೆಪಿ ನಾಯಕರನ್ನು ತಮ್ಮ ಫ್ಲೆಕ್ಸ್​ಗಳಿಂದ ಹೊರಗಿಟ್ಟಿರುವುದು, ಮೈತ್ರಿ ಒಳಗೆ ಭಿನ್ನಾಭಿಪ್ರಾಯಗಳನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ ಎನ್ನಲಾಗುತ್ತಿದೆ. ಜೆಡಿಎಸ್ ನಾಯಕರ ಈ ನಡೆಯಿಂದ ಮಂಡ್ಯದ ಬಿಜೆಪಿ ಮುಖಂಡರು ಸಹ ಜೆಡಿಎಸ್ ನಾಯಕರ ವಿರುದ್ಧ ಮುನಿಸುಗೊಂಡಿದ್ದಾರೆ. ಈ ಘಟನೆಯು ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: 6.5 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡೆ; ಟ್ರಾಫಿಕ್ ಸಮಸ್ಯೆ ವಿವರಿಸಿದ ಬೆಂಗಳೂರಿಗ

ಬೆಂಗಳೂರು, ಮಾರ್ಚ್ 15:ಮುಂಬೈ, ಚೆನ್ನೈ ಹಾಗೂ ಬೆಂಗಳೂರಿನಂತಹ (Bengaluru) ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯ. ಅದರಲ್ಲೂ ಈ ಬೆಂಗಳೂರಿನಲ್ಲಿ ಬೆಳಗ್ಗೆ ಸಂಜೆಯಾದರಂತೂ ಟ್ರಾಫಿಕ್‌ನಿಂದ ರಸ್ತೆಗಳು ಬ್ಲಾಕ್ ಆಗುತ್ತದೆ. ಪೀಕ್‌ ಟೈಮ್‌ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಿರುತ್ತದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಆಫೀಸಿಗೆ ಹೋಗುವ ವೇಳೆ ಟ್ರಾಫಿಕ್‌ನಲ್ಲಿ ಸಿಲುಕಿದ್ದಾರೆ. ಈ ವ್ಯಕ್ತಿ 6.5 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡೆ ಎಂದು ನಗರದ ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ. ನಗರದಲ್ಲಿನ ದೈನಂದಿನ ಸಂಚಾರ ತೊಂದರೆಗಳನ್ನು ಈ ವಿಡಿಯೋ ಎತ್ತಿ ತೋರಿಸಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಸಮಸ್ಯೆ ಹೊಸದೇನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಂಕಜ್ ಹುರಿಯಾ (pankaj.huria.1209) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಂಡ ವಿಡಿಯೋಗೆ ಇದು ಬೆಂಗಳೂರಿನ ವಾಸ್ತವ ಎಂದು ಶೀರ್ಷಿಕೆ ನೀಡಲಾಗಿದೆ. ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾಗ ತಮ್ಮ ಈ ಪ್ರಯಾಣವನ್ನು ದಾಖಲಿಸುವ ವಿಡಿಯೋ ಮಾಡಿದ್ದಾರೆ. ಬೆಳಿಗ್ಗೆ 9.15 ಕ್ಕೆ ಮನೆಯಿಂದ ಹೊರಟು ಕೇವಲ 6.5 ಕಿಲೋಮೀಟರ್ ದೂರದಲ್ಲಿರುವ ತನ್ನ ಕಚೇರಿಗೆ ಹೋದೆನು ಎಂದು ವಿವರಿಸಿದ್ದಾರೆ. ಆದರೆ, ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಕಳೆದ ನಂತರವೂ, ಭಾರೀ ದಟ್ಟಣೆಯಂತೂ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಅವರು ತಮ್ಮ ಕಾರಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಗೂಗಲ್ ನಕ್ಷೆಗಳಲ್ಲಿ ತೋರಿಸುವುದನ್ನು ಕಾಣಬಹುದು. ಈ ನ್ಯಾವಿಗೇಷನ್ ಪರದೆಯು ಇನ್ನೂ ಸುಮಾರು 4.4 ಕಿಲೋಮೀಟರ್ ಪ್ರಯಾಣಿಸಬೇಕಾಗಿರುವುದನ್ನು ತೋರಿಸಿದೆ.

ಇದನ್ನೂ ಓದಿ: ಭಾರತದಲ್ಲಿ ನೆಲೆಸುವ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕೆನಡಿಯನ್ ವ್ಯಕ್ತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಬೆಂಗಳೂರಿನಲ್ಲಿರುವ ಟ್ರಾಫಿಕ್ ನಲ್ಲಿ ಸಿಲುಕಿ ಒದ್ದಾಡುವುದು ಅನಿವಾರ್ಯ ಎಂದಿದ್ದಾರೆ. ಇನ್ನೊಬ್ಬರು, ಇಲ್ಲಿನ ನೆಲೆಸಿರುವ ಅನೇಕರ ಪರಿಸ್ಥಿತಿ ಹೇಳಲಾಗದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ದೆಹಲಿಯಲ್ಲೂ ಇದೇ ಪರಿಸ್ಥಿತಿ. ಇಷ್ಟೇ ದೂರವನ್ನು ಕ್ರಮಿಸಲು 45 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ತಂದೆ ಜೀವ ಉಳಿಸಲು ಲಿವರ್ ದಾನ ಮಾಡಿದ ಪುತ್ರಿ; ಆಸ್ಪತ್ರೆ ಬಿಲ್ ಭರಿಸಲಾಗದೆ ಸಂಕಷ್ಟದಲ್ಲಿ ತಂದೆ-ಮಗಳು!

ದಾವಣಗೆರೆ, ಮಾರ್ಚ್​ 15: ಜಿಲ್ಲೆಯ ಆಹಾರ ಇಲಾಖೆಯ ಶಿರಸ್ತೆದಾರ ಅಜ್ಜಪ್ಪ ಅವರ ಕುಟುಂಬ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ತಂದೆಯ ಜೀವ ಉಳಿಸಲು ಪುತ್ರಿಯೊಬ್ಬಳು ಲಿವರ್ ದಾನ (Organ Donation) ಮಾಡಿದರೂ, ಚಿಕಿತ್ಸಾ ವೆಚ್ಚ ಹೆಚ್ಚಾಗಿ ಕುಟುಂಬ ಆತಂಕದಲ್ಲಿದೆ. ಅಜ್ಜಪ್ಪ ಅವರು ಅಂಗಾಂಗ ವೈಫಲ್ಯದಿಂದ ಗಂಭೀರವಾಗಿ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ, ಅವರ ಪುತ್ರಿ ಚಂದನಾ ತಮ್ಮ ಲಿವರ್‌ನ ಒಂದು ಭಾಗವನ್ನು ದಾನ ಮಾಡಿದ್ದರು. ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಚಂದನಾ ತಂದೆಯ ಜೀವ ಉಳಿಸಲು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

ಕೈಕೊಟ್ಟ ಸಂಜೀವಿನಿ ಯೋಜನೆ

ಕಳೆದ ತಿಂಗಳು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ಅಜ್ಜಪ್ಪರನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಆರಂಭದಲ್ಲಿ ಸುಮಾರು 30 ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಕುಟುಂಬ ನಿರೀಕ್ಷಿಸಿತ್ತು. ಆದರೆ ಚಿಕಿತ್ಸೆ ಹಾಗೂ ಇತರೆ ವೆಚ್ಚಗಳನ್ನು ಸೇರಿಸಿ ಆಸ್ಪತ್ರೆಯ ಬಿಲ್ ಸುಮಾರು 57 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.

ಇದನ್ನೂ ಓದಿ ದಾವಣಗೆರೆ ಬೈ ಎಲೆಕ್ಷನ್: ಬಿಜೆಪಿ ಮನೆಯೊಂದು 3 ಬಾಗಿಲು, ಕಾಂಗ್ರೆಸ್​​​​ ಮನೆಯೊಂದು ಎರಡು ಬಾಗಿಲು

ಆರೋಗ್ಯ ಸಂಜೀವಿನಿ ಯೋಜನೆ ಅನ್ವಯವಾಗುವುದಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಒಂದು ಲಕ್ಷ ರೂಪಾಯಿ ವೈಯಕ್ತಿಕ ಸಹಾಯ ನೀಡಿದ್ದಾರೆ. ಸಾರ್ವಜನಿಕರು ಸಹಾಯ ಮಾಡುವಂತೆ ಕುಟುಂಬ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link