ಮೇಘನಾ ರಾಜ್ ಮಗ ರಾಯನ್ ಹಾಗೂ ತಮ್ಮ ಕುಟುಂಬದ ಜೊತೆ ವೆಕೇಶನ್ ತೆರಳಿದ್ದಾರೆ. ಈ ಸಂದರ್ಭದ ಫೋಟೋ ಹಂಚಿಕೊಂಡಿದ್ದು, ಅವು ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಮೇಘನಾ ರಾಜ್ ಅವರ ಮಗ ರಾಯನ್ ಓದುವುದರಲ್ಲಿ ತೊಡಗಿಕೊಂಡಿದ್ದಾನೆ. ಈಗ ಸಮ್ಮರ್ ವೆಕೇಶನ್ ಶುರುವಾಗಿದೆ. ಹೀಗಾಗಿ, ಮಗನ ಜೊತೆ ಮೇಘನಾ ಪ್ರವಾಸ ತೆರಳಿದ್ದಾರೆ. ಈ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮೇಘನಾ ರಾಜ್ ಅವರಿಗೆ ಈಗ ಮಗನೇ ಪ್ರಪಂಚ. ಚಿರಂಜೀವಿ ಸರ್ಜಾ ನಿಧನ ಹೊಂದುವಾಗ ಮೇಘನಾ ರಾಜ್ ಪ್ರೆಗ್ನೆಂಟ್ ಆಗಿದ್ದರು. ಚಿರುನ ಕಳೆದುಕೊಂಡು ದುಃಖದಲ್ಲಿ ಕೈ ತೊಳೆದರು. ಆ ಬಳಿಕ ಅವರ ಬದುಕು ನಿಧಾನವಾಗಿ ಬದಲಾಗುತ್ತಾ ಬಂತು.
ಮೇಘನಾ ರಾಜ್ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು, ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರ ಸಂಪೂರ್ಣ ಗಮನ ಮಗನ ಸಾಕುವುದರ ಮೇಲೆಯೇ ಇದೆ.
ಮೇಘನಾ ರಾಜ್ ತಂದೆ ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಶಾಯಿ ಅವರು ಕೂಡ ಮೇಘನಾ ಬೆಂಬಲಕ್ಕೆ ನಿಂತಿದ್ದಾರೆ. ಅವರು ಮಗಳು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ.
ಪಾಕಿಸ್ತಾನದ ವೇಗಿ ನಸೀಮ್ ಶಾ (Naseem Shah) ಅವರಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (PCB) ಸುಮಾರು 2 ಕೋಟಿ ರೂಪಾಯಿ (PKR) ಭಾರಿ ದಂಡ ವಿಧಿಸಿದೆ. ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲೇ ಇದು ಒಬ್ಬ ಆಟಗಾರನಿಗೆ ವಿಧಿಸಲಾದ ಅತಿ ದೊಡ್ಡ ಮೊತ್ತದ ದಂಡ ಎಂಬುದು ವಿಶೇಷ.
ದಂಡ ವಿಧಿಸಲು ಕಾರಣವೇನು?
ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಝ್ ಅವರನ್ನು ಟೀಕಿಸಿ ನಸೀಮ್ ಶಾ ಅವರ ಎಕ್ಸ್ (ಟ್ವಿಟರ್) ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು.
ಪಾಕಿಸ್ತಾನ್ ಸೂಪರ್ ಲೀಗ್ನ (PSL 2026) ಪಂದ್ಯವೊಂದರ ವೇಳೆ ಮರಿಯಮ್ ನವಾಝ್ ಅವರಿಗೆ ನೀಡಲಾಗಿದ್ದ ವಿಶೇಷ ಗೌರವವನ್ನು ಪ್ರಶ್ನಿಸಿ, “ಅವರನ್ನು ಲಾರ್ಡ್ಸ್ ಮೈದಾನದ ರಾಣಿಯಂತೆ ಏಕೆ ನಡೆಸಿಕೊಳ್ಳಲಾಗುತ್ತಿದೆ?” ಎಂದು ವ್ಯಂಗ್ಯವಾಡಿದ್ದರು.
ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಈ ಪೋಸ್ಟ್ ವಿವಾದಕ್ಕೆ ಕಾರಣಗಾಗುತ್ತಿದ್ದಂತೆ ನಸೀಮ್ ಶಾ ಅದನ್ನು ಡಿಲೀಟ್ ಮಾಡಿದ್ದರು. ಅಲ್ಲದೆ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಎಂದು ಅವರು ಸ್ಪಷ್ಟನೆ ನೀಡಿದ್ದರು.
ಪಿಸಿಬಿ ಕ್ರಮ:
ನಸೀಮ್ ಶಾ ಅವರ ‘ಹ್ಯಾಕಿಂಗ್’ ವಾದವನ್ನು ತಳ್ಳಿಹಾಕಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿ, ಇದು ಕೇಂದ್ರ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಿದೆ.
ಅಲ್ಲದೆ ಯುವ ವೇಗಿಯನ್ನು ಎರಡು ವರ್ಷಗಳ ಕಾಲ ನಿಷೇಧಿಸುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಹಸ್ತಕ್ಷೇಪದಿಂದಾಗಿ ಕೇವಲ ಆರ್ಥಿಕ ದಂಡಕ್ಕೆ ಸೀಮಿತಗೊಳಿಸಲಾಯಿತು.
ಅದರಂತೆ ಇದೀಗ ನಸೀಮ್ ಶಾಗೆ ಬರೋಬ್ಬರಿ 2 ಕೋಟಿ ರೂ. (PKR) ದಂಡ ವಿಧಿಸಲಾಗಿದೆ. ಇನ್ನು ತಾನು ಮಾಡಿರುವ ಪ್ರಮಾದಕ್ಕೆ ಪಾಕ್ ವೇಗಿ, ಮಂಡಳಿಯ ಮುಂದೆ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಮ್ಯಾನೇಜರ್ಗೆ ಗೇಟ್ ಪಾಸ್:
ಈ ಘಟನೆಯ ನಂತರ ನಸೀಮ್ ಶಾ ಅವರು ತಮ್ಮ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಅನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಪಿಸಿಬಿ ಕೂಡ ಆ ಮ್ಯಾನೇಜರ್ ಅನ್ನು ಕಪ್ಪುಪಟ್ಟಿಗೆ ಸೇರಿಸಿದೆ.
ಸದ್ಯ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ತೊಡಗಿಸಿಕೊಂಡಿರುವ ನಸೀಮ್ ಶಾ ರಾವಲ್ಪಿಂಡಿಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಪಿಂಡಿಸ್ ಫ್ರಾಂಚೈಸಿ ಪರ ಕಣಕ್ಕಿಳಿಯುತ್ತಿರುವ ನಸೀಮ್ಗೆ ಈ ಬಾರಿ ಸಿಗುವ ವೇತನ 8.65 ಕೋಟಿ ರೂ. (PKR). ಇದರಲ್ಲಿ ಇದೀಗ 2 ಕೋಟಿ ರೂ. ದಂಡ ಪಾವತಿಸಬೇಕಾಗಿ ಬಂದಿದೆ.
ದೇವನಹಳ್ಳಿ,ಮಾ.31: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೊರವಲಯದ ಹೊಸಕೋಟೆ-ದಾಬಸ್ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಮಂಗಳವಾರ (ಮಾ.31) ನಡೆದಿದೆ. ಕಾರು ಹೆದ್ದಾರಿಯಲ್ಲಿ ವೇ ಗವಾಗಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಕಾರಿನ ಚಾಲಕ ಮತ್ತು ಪ್ರಯಾಣಿಕರು ಹೆದ್ದಾರಿ ಮಧ್ಯೆಯೇ ಕಾರನ್ನು ನಿಲ್ಲಿಸಿ ಕೆಳಗಿಳಿದಿದ್ದಾರೆ. ಅವರು ಇಳಿಯುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಕಾರಿನಾದ್ಯಂತ ಆವರಿಸಿದ್ದು, ನೋಡ ನೋಡುತ್ತಿದ್ದಂತೆ ಇಡೀ ಕಾರು ಬೆಂಕಿಗಾಹುತಿಯಾಗಿದೆ. ಇನ್ನು ಇದನ್ನು ಗಮನಿಸಿದ ಕಾರು ಚಾಲಕ ಕೆಳಗಿಳಿದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಬೆಂಗಳೂರು, ಮಾರ್ಚ್ 31: ಕೌಟುಂಬಿಕ ಕಲಹದ ಹಿನ್ನೆಲೆ ತೆಲಂಗಾಣ ಮೂಲದ ಯುವ ಐಟಿ ದಂಪತಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪತಿಯ ಆತ್ಮಹತ್ಯೆ ನಂತರ ಪತ್ನಿ ಸಹ 17ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ.
ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ದಂಪತಿ
ತೆಲಂಗಾಣದ ಸಿದ್ದಿಪೇಟ ಮೂಲದ 32 ವರ್ಷದ ಭಾನು ಚಂದರ್ ರೆಡ್ಡಿ ಕುಂಟಾ ತಮ್ಮ ನಿವಾಸದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಬಿಬಿ ಶಾಜಿಯಾ ಸಿರಾಜ್ (31) ಪತಿಯ ಶವವನ್ನು ಕಂಡು ಆಘಾತಕ್ಕೊಳಗಾಗಿ ಅಪಾರ್ಟ್ಮೆಂಟ್ನ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದಂಪತಿ ಖಾಸಗಿ ಕಂಪನಿಗಳಲ್ಲಿ ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದರು. ದಂಪತಿಯ ನಡುವೆ ಆಗಾಗ್ಗೆ ಕಲಹಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ. ಇತ್ತೀಚೆಗೆ ಕೂಡ ಇಬ್ಬರ ನಡುವೆ ಜಗಳ ನಡೆದಿದ್ದು, ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.
ಪೋಸ್ಟ್ಮಾರ್ಟಂ ವರದಿ ಬಂದ ಮೇಲೆ ಕಾರಣ ಬಯಲು
ಸೋಮವಾರ ಪತ್ನಿ ಮನೆಯಲ್ಲಿ ಇಲ್ಲದ ವೇಳೆ ಭಾನು ಚಂದ್ರ ರೆಡ್ಡಿ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ನಂತರ ಮನೆಗೆ ಬಂದ ಶಾಜಿಯಾ ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿದ್ದು, ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಕಾರಣ ಭದ್ರತಾ ಸಿಬ್ಬಂದಿ ಹಾಗೂ ನೆರೆಹೊರೆಯವರ ಸಹಾಯ ಕೇಳಿದ್ದಾರೆ.
ಬಾಗಿಲು ಬಲವಂತವಾಗಿ ತೆರೆಯುತ್ತಿದ್ದಂತೆ ಭಾನು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ದೃಶ್ಯದಿಂದ ಬೆಚ್ಚಿಬಿದ್ದ ಶಾಜಿಯಾ ಕೆಲವೇ ನಿಮಿಷಗಳಲ್ಲಿ ಅದೇ ಅಪಾರ್ಟ್ಮೆಂಟ್ನ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕುಟುಂಬದವರ ದೂರಿನ ಆಧಾರದ ಮೇಲೆ ಎರಡು ಪ್ರತ್ಯೇಕ ಅಸಹಜ ಸಾವು ಪ್ರಕರಣಗಳನ್ನು ದಾಖಲಿಸಲಾಗಿದೆ. ದಂಪತಿಯ ಸಾವಿಗೆ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಂಪತಿಯ ಸಾವಿಗೆ ನಿಖರ ಕಾರಣ ಏನು ಎಂಬುದು ಪೋಸ್ಟ್ಮಾರ್ಟಂ ವರದಿ ಬಳಿಕ ತಿಳಿಯಲಿದೆ.
ಹಬ್ಬ ಹರಿದಿನಗಳನ್ನು ಎಲ್ಲರೂ ಸಂಭ್ರಮಿಸುವವರೇ. ಈ ಹಿಂದೂ ಧರ್ಮದಲ್ಲಿ ವರ್ಷಪೂರ್ತಿ ವಿವಿಧ ಹಬ್ಬಗಳು (festivals), ಆಚರಣೆಗಳಿವೆ. ಏಪ್ರಿಲ್ ತಿಂಗಳಲ್ಲಿ ಹಲವು ಹಬ್ಬಗಳಿವೆ. ನಾವೀಗ ವರ್ಷದ ಮೂರನೇ ತಿಂಗಳಾದ ಮಾರ್ಚ್ ಕಳೆದು ಏಪ್ರಿಲ್ ತಿಂಗಳಿಗೆ ಕಾಲಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೂ ಮುನ್ನ ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳು, ವ್ರತಾಚರಣೆಗಳ ಬಗ್ಗೆ ನೀವು ತಿಳಿದುಕೊಳ್ಳಿ.
ಏಪ್ರಿಲ್ ತಿಂಗಳಲ್ಲಿ ಆಚರಿಸುವ ಹಬ್ಬಗಳ ಪಟ್ಟಿ ಇಲ್ಲಿದೆ;
ಏಪ್ರಿಲ್ 02 – ಹನುಮಜಯಂತಿ
ಏಪ್ರಿಲ್ 02 – ಪೂರ್ಣಿಮಾ
ಏಪ್ರಿಲ್ 03- ಗುಡ್ ಫ್ರೈಡೇ
ಏಪ್ರಿಲ್ 03- ಚೈತ್ರ ಕೃಷ್ಣ ಪಕ್ಷ
ಏಪ್ರಿಲ್ 04 – ಈಸ್ಟರ್ ಶನಿವಾರ
ಏಪ್ರಿಲ್ 05 – ಸಂಕಷ್ಟಹರ ಚತುರ್ಥಿ
ಏಪ್ರಿಲ್ 11 – ವೃಷಭ ಜಯಂತಿ
ಏಪ್ರಿಲ್ 13 – ವಲ್ಲಭಾಚಾರ್ಯ ಜಯಂತಿ
ಏಪ್ರಿಲ್ 13 – ಸರ್ವೈಕಾದಶಿ ವರೂಥಿನಿ
ಏಪ್ರಿಲ್ 14 – ಮೇಷ ಸಂಕ್ರಮಣ
ಏಪ್ರಿಲ್ 15 – ಸೌರಯುಗಾದಿ (ವಿಷು)
ಏಪ್ರಿಲ್ 15 – ಪ್ರದೋಷ
ಏಪ್ರಿಲ್ 15 – ಮಾಸ ಶಿವರಾತ್ರಿ
ಏಪ್ರಿಲ್ 17 – ಅಮಾವಾಸ್ಯಾ
ಏಪ್ರಿಲ್ 18 – ವೈಶಾಖ ಶುಕ್ಲಪಕ್ಷ
ಏಪ್ರಿಲ್ 19 – ಪರಶುರಾಮ ಜಯಂತಿ
ಏಪ್ರಿಲ್ 20 – ಬಸವೇಶ್ವರ ಜಯಂತಿ
ಏಪ್ರಿಲ್ 20 – ಅಕ್ಷಯ ತೃತೀಯ
ಏಪ್ರಿಲ್ 21- ಶಂಕರಾಚಾರ್ಯ ಜಯಂತಿ
ಏಪ್ರಿಲ್ 21 – ವಿಜಯ ಧ್ವಜಾಚಾರ್ಯ ಪುಣ್ಯತಿಥಿ
ಏಪ್ರಿಲ್ 22 – ರಾಮಾನುಜಾಚಾರ್ಯ ಜಯಂತಿ
ಏಪ್ರಿಲ್ 23 – ಗಂಗೋತ್ಪತ್ತಿ
ಏಪ್ರಿಲ್ 27 – ಮಹಾನಕ್ಷತ್ರ ಭರಣಿ
ಏಪ್ರಿಲ್ 27 – ಸರ್ವೈಕಾದಶಿ ಮೋಹಿನಿ
ಏಪ್ರಿಲ್ 28 – ವೇದ ವ್ಯಾಸ ಜಯಂತಿ
ಏಪ್ರಿಲ್ 28 – ಪ್ರದೋಷ
ಏಪ್ರಿಲ್ 30 – ನರಸಿಂಹ ಜಯಂತಿ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಸೋಲನುಭವಿಸಿದೆ. ಆದರೆ ಇದು ಅಂತಿಂಥ ಸೋಲಲ್ಲ. ಬದಲಾಗಿ 19 ವರ್ಷಗಳ ಕಂಡಂತಹ ಅತ್ಯಂತ ಹೀನಾಯ ಸೋಲು.
ಗುವಾಹಟಿಯ ಬರ್ಸಪಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಆರ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್ಗಳಲ್ಲಿ 127 ರನ್ಗಳಿಸಿ ಆಲೌಟ್ ಆಯಿತು.
ಈ ಸುಲಭ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ದಾಂಡಿಗ ವೈಭವ್ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಕೇವಲ 12.1 ಓವರ್ಗಳಲ್ಲಿ 128 ರನ್ಗಳಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಅಂದರೆ ರಾಜಸ್ಥಾನ್ ರಾಯಲ್ಸ್ ತಂಡವು ಬರೋಬ್ಬರಿ 47 ಎಸೆತಗಳನ್ನು ಬಾಕಿಯಿರಿಸಿ ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ವಿಶೇಷ ಎಂದರೆ ಐಪಿಎಲ್ ಇತಿಹಾಸದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಒಮ್ಮೆಯೂ ಇಷ್ಟೊಂದು ಬಾಲ್ಗಳ ಅಂತರದಿಂದ ಸೋತಿರಲಿಲ್ಲ.
ಇದಕ್ಕೂ ಮುನ್ನ 2012 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 21 ಎಸೆತಗಳ ಅಂತರದಿಂದ ಸೋತಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂತ್ಯಂತ ಹೀನಾಯ 'ಆರಂಭಿಕ ' ಸೋಲಾಗಿತ್ತು. ಇದೀಗ ಮೊದಲ ಪಂದ್ಯದಲ್ಲೇ ಸಿಎಸ್ಕೆ ತಂಡವನ್ನು 12.1 ಓವರ್ಗಳಲ್ಲಿ ಬಗ್ಗು ಬಡಿದು ರಾಜಸ್ಥಾನ್ ರಾಯಲ್ಸ್ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಸಿಎಸ್ಕೆ ತಂಡವನ್ನು ಮೊದಲ ಮ್ಯಾಚ್ನಲ್ಲಿ ಅತ್ಯಂತ ಹೀನಾಯವಾಗಿ ಸೋಲಿಸಿದ ಹೆಗ್ಗಳಿಕೆಯನ್ನು ಆರ್ಆರ್ ಪಡೆ ತನ್ನದಾಗಿಸಿಕೊಂಡಿದೆ.
ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ಅಧಿಕೃತ ಅಧಿಸೂಚನೆಯ ಮೂಲಕ ವಿವಿಧ ಉದ್ಯೋಗಾವಕಾಶಗಳನ್ನು ಘೋಷಿಸಿದೆ. ರಾಜ್ಯದ ಚಾಮರಾಜನಗರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲು ಒಟ್ಟು 18 ಕ್ಷೇತ್ರ ತನಿಖಾಧಿಕಾರಿ (Field Investigator) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸುವುದು ಅಗತ್ಯ. ಏಕೆಂದರೆ ಇಂದೇ (ಮಾರ್ಚ್ 31) ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆಯ ಮಾನದಂಡಗಳ ಪ್ರಕಾರ ಆಕರ್ಷಕ ವೇತನವನ್ನು ನೀಡಲಾಗುವುದು. ವಯೋಮಿತಿಯಲ್ಲಿನ ಸಡಿಲಿಕೆಯು ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ನ ನಿಯಮಾವಳಿಗಳಿಗೆ ಅನುಗುಣವಾಗಿರಲಿದೆ. ವಿಶೇಷವೆಂದರೆ, ಈ ನೇಮಕಾತಿ ಪ್ರಕ್ರಿಯೆಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ, ಇದು ಎಲ್ಲಾ ವರ್ಗದ ಅರ್ಹ ಅಭ್ಯರ್ಥಿಗಳಿಗೆ ಮುಕ್ತವಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ.
ನೇಮಕಾತಿ ಪ್ರಕ್ರಿಯೆಯು ಪ್ರಮುಖವಾಗಿ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ. ಆಸಕ್ತರು ಮೊದಲು ಅಧಿಕೃತ ಅಧಿಸೂಚನೆಯನ್ನು ಕೂಲಂಕಷವಾಗಿ ಓದಿ, ತಾವು ಅರ್ಹತಾ ಮಾನದಂಡಗಳನ್ನು ಪೂರೈಸುತ್ತೇವೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
ಅರ್ಜಿ ಸಲ್ಲಿಸಲು ಇಚ್ಛಿಸುವವರು ಕೆಎಚ್ಪಿಟಿ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಲಿಂಕ್ ಮೂಲಕ ಆನ್ಲೈನ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ, ಸ್ಕ್ಯಾನ್ ಮಾಡಿದ ದಾಖಲೆಗಳು ಮತ್ತು ಇತ್ತೀಚಿನ ಫೋಟೋವನ್ನು ಅಪ್ಲೋಡ್ ಮಾಡುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಅರ್ಜಿ ಸಲ್ಲಿಸಿದ ನಂತರ, ಮುಂದಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ಸ್ವೀಕೃತಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳುವುದು ಸೂಕ್ತ. ನೆನಪಿಡಿ, ಇಂದೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ, ಹಾಗಾಗಿ ವಿಳಂಬ ಮಾಡದೆ ತಕ್ಷಣವೇ ಅರ್ಜಿ ಸಲ್ಲಿಸಿ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಂಗಳೂರು, ಮಾರ್ಚ್ 31: ಮದುವೆಯಾದ ಒಂದೇ ತಿಂಗಳಿಗೆ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಕಾರ್ಕಳದಲ್ಲಿ ನಡೆದಿತ್ತು. ಈ ಪ್ರಕರಣಕ್ಕೀಗ ಸ್ಫೋಟಕ ತಿರುವು ಸಿಕ್ಕಿದ್ದು ಪತ್ನಿ ಸೌಮ್ಯಾಳ ನವರಂಗಿ ಆಟವೇ ಸುದೀಪ್ ಸಾವಿಗೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿಯ ಸರಣಿ ಮ್ಯಾರೇಜ್ ಕಹಾನಿ ಬಯಲಾಗಿತ್ತು. ಹೀಗಾಗಿ ಮದುವೆಯಾದ ಒಂದು ತಿಂಗಳ ಬಳಿಕ ತನ್ನ ತಂದೆ-ತಾಯಿ ಮನೆಗೆ ಬಂದಿದ್ದ ಸುದೀಪ್ ಪತ್ನಿ ಹಣ ಒಡವೆ ಕಿತ್ತುಕೊಂಡಿದ್ದಾಳೆ, ತುಂಬಾ ಟಾರ್ಚರ್ ಕೊಡುತ್ತಿದ್ದಾಳೆ ಎಂದು ಅಲವತ್ತುಕೊಂಡಿದ್ದರು ಎನ್ನಲಾಗಿದೆ.
ಪತಿ ಸುದೀಪ್ ತನ್ನ ತಂದೆ-ತಾಯಿ ಬಳಿ ಬಂದಿರುವ ವಿಷಯ ತಿಳಿದ ಸೌಮ್ಯಾ ಸ್ಕೂಟಿಯಲ್ಲೇ ನೂರು ಕಿಲೋಮೀಟರ್ ಪ್ರಯಾಣ ಮಾಡಿ ಬಂದಿದ್ದಳು. ನೆಲ್ಯಾಡಿಯಲ್ಲಿ ತಾಯಿ ಜೊತೆ ಕಾರಿನಲ್ಲಿ ತರೆಳುತ್ತಿದ್ದ ಸುದೀಪ್ರನ್ನು ಅಡ್ಡಗಟ್ಟಿ, ಗ್ರಾಮಸ್ಥರ ಎದುರು ಗಲಾಟೆ ಮಾಡಿದ್ದಳು ಬಳಿಕ ಪತಿ ಕಾರು ಹತ್ತಿದ್ದ ಈಕೆ ಅರ್ಧ ದಾರಿಯಲ್ಲೇ ತಾಯಿಯನ್ನು ಇಳಿಸುವಂತೆ ಹಿಂಸಿಸಿದ್ದಳು. ಆಕೆಯ ಕಾಟ ತಾಳಲಾರದೆ ಸುದೀಪ್ ರಾತ್ರಿ ವೇಳೆ ತಾಯಿಯನ್ನು ರಸ್ತೆಯಲ್ಲಿ ಇಳಿಸಿ ಪತ್ನಿ ಮನೆಗೆ ತೆರಳಿದ್ದರು. ಈ ವಿಚಾರವಾಗಿ ಅವರು ಬಹಳ ನೊಂದಿದ್ದರು ಎಂಬ ವಿಚಾರವೀಗ ಬಯಲಾಗಿದೆ.
ಇನ್ನು ಸಾಮಾಜಿಕ ಜಾಲತಾಣದ ಮೂಲಕ ಸುದೀಪ್ಗೆ ಸೌಮ್ಯಾ ಪರಿಚಯ ಆಗಿತ್ತು. ಇವರಿಬ್ಬರೂ ಮದುವೆಯ ಬಗ್ಗೆ ನಿರ್ಧರಿಸಿದಾಗ ಅವಸರ ಮಾಡಬೇಡ. ತಾಳ್ಮೆಯಿಂದಿರು, ಎಲ್ಲಾ ವಿಚಾರಿಸಿ ಮದುವೆ ಮಾಡುತ್ತೇವೆ ಎಂದು ಪೋಷಕರು ಹೇಳಿದ್ದರು. ಹೀಗಿದ್ದರೂ ಆತುರಕ್ಕೆ ಬಿದ್ದ ಸುದೀಪ್ ಪೋಷಕರಿಗೆ ತಿಳಿಸದೆ ಫೆ.16ಕ್ಕೆ ದೇವಸ್ಥಾನದಲ್ಲಿ ಮದುವೆಯಾಗಿದ್ದರೆ, ಫೆ.17ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್ ಪೋಷಕರು, ಆಕೆಗೆ ಇದು ಮೂರನೇ ಮದುವೆ ಅಂತಾ ನಮಗೆ ಗೊತ್ತಿರಲಿಲ್ಲ. ಮಾ.16ಕ್ಕೆ ಮಗ ಮನೆಗೆ ಬಂದು ಆಕೆಯ ಟಾರ್ಚರ್ ಬಗ್ಗೆ ಹೇಳಿಕೊಂಡಿದ್ದ. ಮಾ.17ಕ್ಕೆ ನೆಲ್ಯಾಡಿಯಲ್ಲಿ ಬಂದು ಗಲಾಟೆ ಮಾಡಿ ಸುದೀಪ್ನ ಆಕೆ ಕರೆದುಕೊಂಡು ಹೋಗಿದ್ದಳು. ಬಳಿಕ ಅಲ್ಲಿ ಏನಾಯ್ತು ಗೊತ್ತಿಲ್ಲ. ಮಾ.22ಕ್ಕೆ ಆತ ಆಸ್ಪತ್ರೆಯಲ್ಲಿರೋದು ನಮಗೆ ತಿಳಿಯಿತು. ಆಸ್ಪತ್ರೆಗೆ ಹೋಗಿ ಕೇಳಿದಾಗ ಫುಡ್ ಪಾಯಿಸನ್, ಜಾಂಡೀಸ್ ಅಂತಾ ಕತೆ ಹೇಳಿದ್ರು. ಇದ್ರಲ್ಲಿ ಕೊಲೆ ಸಂಶಯ ಇರೋದ್ರಿಂದ ಉನ್ನತ ಮಟ್ಟದ ತನಿಖೆ ಆಗಬೇಕು ಎಂದವರು ಕಣ್ಣೀರು ಹಾಕಿದ್ದಾರೆ.
ಇನ್ನು ಸೌಮ್ಯ ಶೆಟ್ಟಿಯ ವಿಷವರ್ತುಲದಲ್ಲಿ ಸಿಲುಕಿ ಹೈರಾಣಾಗಿ ಹೊರಬಂದಿದ್ದ ಕಲಾವಿದ, ದೈವದ ಆರಾಧಕ ವೇಣು ಶೆಟ್ಟಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆಕೆಯಿಂದ ಬಹಳ ಟಾರ್ಚರ್ ಅನುಭವಿಸಿ ಊರು ಬಿಟ್ಟು ಹೋಗಿದ್ದೆ. ಆಕೆಯ ಜೊತೆಗಿನ ಮದುವೆ ಕ್ಯಾನ್ಸಲ್ ಮಾಡಿದ್ರಿಂದ ಇನ್ನಿಲ್ಲದ ರೀತಿಯಲ್ಲಿ ಕಿರುಕುಳ ಅನುಭವಿಸಿದ್ದು, ಜೀವನದಲ್ಲಿ ಮದುವೆಯೇ ಬೇಡ ಎಂದು ನಿರ್ಧರಿಸಿದ್ದೇನೆ. ಸೈಕಾಲಜಿ ಓದಿದ್ದರೂ ಆಕೆಯ ಕಾಟಕ್ಕೆ ಮಾನಸಿಕವಾಗಿ ಕುಗ್ಗಿದ್ದೆ ಎಂದು ಹೇಳುವ ಮೂಲಕ ಸೌಮ್ಯಾಳ ನಿಜ ರೂಪವನ್ನು ಬಿಚ್ಚಿಟ್ಟಿದ್ದಾರೆ.
ಮುಜಾಫರ್ನಗರ, ಮಾರ್ಚ್ 31: ಮುಜಾಫರ್ನಗರದಲ್ಲಿ ನಡೆದ ಅಪಘಾತವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಮರಳು ತುಂಬಿದ್ದ ಟ್ರಕ್ ಒಂದು ಅಣ್ಣ ತಂಗಿ ಹೋಗುತ್ತಿದ್ದ ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ, ಸವಾರ ನಿಯಂತ್ರಣ ತಪ್ಪಿ ತಂಗಿ ಜತೆ ನಡು ರಸ್ತೆಗೆ ಬಿದ್ದಿದ್ದಾರೆ. ಆಗ ಟ್ರಕ್ ಬೈಕ್ ಮೇಲೆ ಹರಿದಿದೆ. ಅವರಿಬ್ಬರು ಬೈಕ್ ಬಿಟ್ಟು ರಸ್ತೆಗೆ ಬಿದ್ದ ಪರಿಣಾಮ ಸ್ವಲ್ಪದರಲ್ಲೇ ಅಪಘಾತ ತಪ್ಪಿದೆ. ಕೆಲವು ದಿನಗಳ ಹಿಂದೆ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ 58 ರಲ್ಲಿ ನ್ಯೂ ಮಂಡಿ ಕೊತ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಸಹರಾನ್ಪುರದಿಂದ ಬರುತ್ತಿದ್ದ ನಿಯಂತ್ರಣ ತಪ್ಪಿದ ಟ್ರಕ್ ಎರಡು ವಾಹನಗಳಿಗೆ ಡಿಕ್ಕಿ ಹೊಡೆದು ನಂತರ ಬೈಕ್ ಮೇಲೆ ಹರಿದಿತ್ತು.
ದಳಪತಿ ವಿಜಯ್ (Thalapathy Vijay) ಭಾರತದ ಹಾಲಿ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ದೇಶದ ನಾನಾ ರಾಜ್ಯಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ದಳಪತಿ ವಿಜಯ್ ಹೊಂದಿದ್ದಾರೆ. ವಿಜಯ್ ಅವರ ಸಿನಿಮಾಗಳು ನೂರಾರು ಕೋಟಿ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮಾಡುತ್ತವೆ. ಇದರ ಜೊತೆಗೆ ವಿಜಯ್, ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂದು ಸಹ ಹೇಳಲಾಗುತ್ತಿತ್ತು. ಆದರೆ ಇದೀಗ ದಳಪತಿ ವಿಜಯ್ ಚುನಾವಣೆಗೆ ಸ್ಪರ್ಧಿಸಿದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರದಲ್ಲಿ ತಮ್ಮ ಆಸ್ತಿ ವಿವರವನ್ನು ಸಹ ಘೋಷಣೆ ಮಾಡಿದ್ದಾರೆ. ಈ ಆಸ್ತಿ ವಿವರ ನೋಡಿದರೆ ದಳಪತಿ ವಿಜಯ್ ಬಗ್ಗೆ ಹೇಳಲಾಗಿದ್ದ ದೊಡ್ಡ ಸುಳ್ಳೊಂದು ಬಹಿರಂಗವಾಗಿದೆ.
ವಿಜಯ್ ಅವರು ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂಬ ಸುದ್ದಿ ಹರಡಲಾಗಿತ್ತು, ಅವರ ಅಭಿಮಾನಿಗಳು ಇದಕ್ಕೆ ಭಾರಿ ಪ್ರಚಾರ ನೀಡಿದ್ದರು. ಆದರೆ ಈಗ ವಿಜಯ್ ಅವರ ಆಸ್ತಿ ವಿವರ ನೋಡಿದರೆ ಇದು ಸುಳ್ಳು ಎಂಬುದು ಸ್ಪಷ್ಟವಾಗುತ್ತಿದೆ. ವಿಜಯ್ ಅವರು ಪ್ರತಿ ಸಿನಿಮಾಕ್ಕೆ 200 ರಿಂದ 250 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಸುದ್ದಿಯಾಗಿತ್ತು. ಈಗ ಅವರ ಕೊನೆಯ ಸಿನಿಮಾ ಆಗಿರುವ, ಇನ್ನೂ ಬಿಡುಗಡೆ ಆಗದ ‘ಜನ ನಾಯಗನ್’ ಸಿನಿಮಾಕ್ಕೆ 275 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ ವಿಜಯ್ ಅವರ ಆಸ್ತಿ ವಿವರ ನೋಡಿದರೆ ಇದೆಲ್ಲ ಸುಳ್ಳು ಎಂದು ತಿಳಿದು ಬರುತ್ತಿದೆ.
ದಳಪತಿ ವಿಜಯ್ ಅವರು ನಾಮಪತ್ರದಲ್ಲಿ ಐದು ವರ್ಷಗಳ ವಾರ್ಷಿಕ ಆದಾಯ, ಆಸ್ತಿಗಳ ಮಾಹಿತಿಯನ್ನು ನೀಡಿದ್ದಾರೆ. ಇದರಲ್ಲಿ 2021-22ರ ಆರ್ಥಿಕ ವರ್ಷದಲ್ಲಿ ಮಾತ್ರವೇ ವಿಜಯ್ ಅವರು 237 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದ್ದಾರೆ. ಅದರ ಹೊರತಾಗಿ ಇನ್ನುಳಿದ ಹಣಕಾಸು ವರ್ಷಗಳಲ್ಲಿ ವಿಜಯ್ ಅವರ ವಾರ್ಷಿಕ ಗಳಿಕೆ 200 ಕೋಟಿ ಸಹ ದಾಟಿಲ್ಲ. ವಿಜಯ್ ಅವರು ಕಳೆದ ಹಣಕಾಸು ವರ್ಷ ಅಂದರೆ 2024-25 ರಲ್ಲಿ 184 ಕೋಟಿ ಗಳಿಸಿದ್ದಾರೆ, 2023-24ರಲ್ಲಿ 105 ಕೋಟಿ ಗಳಿಕೆ ಮಾಡಿದ್ದಾರೆ. 2022-23 ರಲ್ಲಿ 198 ಕೋಟಿ ಗಳಿಸಿದ್ದಾರೆ. 2021-22 ರಲ್ಲಿ 237 ಕೋಟಿ ಮತ್ತು ಕೋವಿಡ್ ಸಮಯವಾದ 2020-21 ರಲ್ಲಿ ಕೇವಲ 8 ಕೋಟಿ ಗಳಿಕೆ ಮಾಡಿದ್ದಾರೆ.
ವಿಜಯ್ ಅವರು ಪ್ರತಿ ಸಿನಿಮಾಕ್ಕೆ 200 ಕೋಟಿ ಪಡೆಯುತ್ತಾರೆ ಎನ್ನಲಾಗಿತ್ತು. ಆದರೆ ಅವರ ಆಸ್ತಿ ವಿವರ ನೋಡಿದರೆ ಅದು ಸಳ್ಳೆಂಬುದು ಖಾತ್ರಿ ಆಗುತ್ತಿದೆ. ವಿಜಯ್ ಅವರ ಇತರೆ ಉದ್ಯಮಗಳಿಂದಲೂ ಒಟ್ಟು ಗೂಡಿಯೇ ವಾರ್ಷಿ 200 ಕೋಟಿ ಗಳಿಕೆ ದಾಟಿಲ್ಲ (2021-22ರ ಆರ್ಥಿಕ ವರ್ಷ ಹೊರತುಪಡಿಸಿ).
ವಿಜಯ್ ಅವರು ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷ ಸ್ಥಾಪಿಸಿದ್ದು, ತಮಿಳುನಾಡು ವಿಧಾನಸಭೆ ಚುನಾವಣೆಗೆ ಬಹುತೇಕ ಎಲ್ಲ ಕ್ಷೇತ್ರಗಳಿಂದಲೂ ಸ್ಪರ್ಧಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಸ್ವತಃ ವಿಜಯ್ ಅವರು ತಿರುಚಿ ಈಸ್ಟ್ ಮತ್ತು ಪೆರಂಬೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಭರ್ಜರಿಯಾಗಿ ಚುನಾವಣೆ ಪ್ರಚಾರವನ್ನೂ ಸಹ ಮಾಡುತ್ತಿದ್ದಾರೆ. ಫಲಿತಾಂಶ ಏನಾಗುತ್ತದೆಯೋ ಕಾದು ನೋಡಬೇಕಿದೆ.