All posts by nagaraj11081993

ಎಲೆಕ್ಷನ್​​​ಗೆ 2 ವರ್ಷ ಮೊದಲೇ ಬಿಜೆಪಿ ಅಭ್ಯರ್ಥಿಗಳ ಘೋಷಣೆ: ಬಿಎಸ್​​ವೈ ವಿರುದ್ಧ ಭುಗಿಲೆದ್ದ ಆಕ್ರೋಶ – Kannada News | BJP Leader Angry On BS Yediyurappa For Announced Davanagere Candidate Name For Upcoming Karnataka Assembly Poll

ದಾವಣಗೆರೆ, (ಮಾರ್ಚ್ 03): ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಮತ್ತೆ ಅಸಮಾಧಾನ ಸ್ಫೋಟಕಗೊಂಡಿದೆ. ಈ ಬಾರಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರ ನಡೆಯಿಂದಲೇ ಅಸಮಾಧಾನ ಭುಗಿಲೆದ್ದಿದೆ. ಹೌದು..  ವಿಧಾನಸಭೆ ಚುನಾವಣೆ (Karnataka Assembly Election) ಇನ್ನೂ ಎರಡು ವರ್ಷ ಇರುವಾಗಲೇ ಬಿಎಸ್ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಹೊನ್ನಾಳಿಯಲ್ಲಿ ನಡೆದ ರೇಣುಕಾಚಾರ್ಯ ಜನ್ಮ ದಿನ ಕಾರ್ಯಕ್ರಮದಲ್ಲಿ ಪಕ್ಕದ ಹರಪನಹಳ್ಳಿ ಸೇರಿ ದಾವಣಗೆರೆ (Davanagere) ಜಿಲ್ಲೆಯ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಘೋಷಣೆ ಘೋಷಣೆ ಮಾಡಿದ್ದಾರೆ. ಇದರಿಂದ ಪಕ್ಷೀಯ ಮುಖಂಡರು ಯಡಿಯೂರಪ್ಪ ತಿರುಗಿಬಿದ್ದಿದ್ದು, ಹೊನ್ನಾಳಿಯಲ್ಲಿ ಮಾಡಿದ ಘೋಷಣೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಮೊದಲೇ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟಗಳು ನಡೆಯುತ್ತಿದ್ದು, ಇವುಗಳನ್ನು ಬಗೆರಿಸಬೇಕಾದ ಹಿರಿಯ ನಾಯಕ ಯಡಿಯೂರಪ್ಪನವರೇ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಗಳು ಕೇಳಿಬಂದಿವೆ.

ಕಳೆದ ಲೋಕಸಭೆ ಚುನಾವಣೆಯಿಂದ ದಾವಣಗೆರೆ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಒಂದಾಗುವುದು ಕಷ್ಟದ ಕೆಲಸ ಎಂಬ ಮಾತುಗಳು ಕೇಳಿ ಬರುತ್ತಿದೆ. ಮಾಜಿ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರ ಬಣಗಳನ್ನ ಒಂದು ಮಾಡುವ ಜವಾಬ್ದಾರಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ವಹಿಸಲಾಗಿತ್ತು. ಮೃದು ಸ್ವಭಾವದ ಶೆಟ್ಟರ್ ಹೇಳುವಷ್ಟು ಹೇಳಿ ಮೌನಕ್ಕೆ ಶರಣಾಗಿದ್ದಾರೆ. ಈಗ ಹೊಸ ವಿವಾದ ಅಂದ್ರೆ ಮೊನ್ನೆ ಹೊನ್ನಾಳಿಯಲ್ಲಿ ಮಾಜಿ ಸಿಎಂ ಬಿಎಸ್ ವೈ ಮಾಡಿದ ಮಾತುಗಳು. ಫೆಬ್ರುವರಿ 28 ರಂದು ಹೊನ್ನಾಳಿಯಲ್ಲಿ ನಡೆದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರ 64ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ. ಇದು ಬಿಜೆಪಿಯ ಇನ್ನೊಂದು ಬಣದ ನಿದ್ದೆಗೆಡಿಸಿದೆ.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಫೋನ್​​ ಟ್ಯಾಪಿಂಗ್​​ ಬಿರುಗಾಳಿ: ವಿಪಕ್ಷಗಳ ಮೇಲೆ ಮುಗಿಬಿದ್ದ ಕಾಂಗ್ರೆಸ್​​

ಹಲವು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಬಿಎಸ್​​ವೈ

ಹೊನ್ನಾಳಿಯಲ್ಲಿ ನಡೆದ  ಮಾಜಿ ಶಾಸಕ ರೇಣುಕಾಚಾರ್ಯ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದಾರೆ.  ಹೊನ್ನಾಳಿಗೆ ಎಂಪಿ ರೇಣುಕಾಚಾರ್ಯ, ಚನ್ನಗಿರಿ- ಮಾಡಾಳ್ ವಿರೂಪಾಕ್ಷಪ್ಪ , ಹರಿಹರ-ಚಂದ್ರಶೇಖರ ಪೂಜಾರ, ದಾವಣಗೆರೆ ಉತ್ತರ ಲೋಕಕೆರೆ ನಾಗರಾಜ್, ಜಗಳೂರು ಎಸ್ ವಿ ರಾಮಚಂದ್ರ ಹಾಗೂ ಹರಪನಹಳ್ಳಿ-ಕರುಣಾಕರ ರೆಡ್ಡಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಇದು ಇತರೆ ನಾಯಕರ ಆಕ್ರೊಶಕ್ಕೆ ಕಾರಣವಾಗಿದೆ.

ಬಹಿರಂಗ ಅಸಮಾಧಾನ ಹೊರ ಹಾಕಿದ ಬಿಜೆಪಿ ನಾಯಕ

ಈ ಸಂಬಂಧ ದಾವಣಗೆರೆ ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್‌ ಪಾಟೀಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು. ಇತ್ತೀಚೆಗೆ ಹೊನ್ನಾಳಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ, ಜಿಲ್ಲೆಯ ಹಲವು ಕ್ಷೇತ್ರಗಳ ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಎಂ.ಪಿ. ರೇಣುಕಾಚಾರ್ಯ ಅವರನ್ನು ಸಚಿವರನ್ನಾಗಿ ಮಾಡುವಂತೆ ಕೋರಿದ್ದಾರೆ. ಪಕ್ಷದ ಶಿಷ್ಟಾಚಾರವನ್ನು ಉಲ್ಲಂಘಿಸುವಂತಹ ಹೇಳಿಕೆಯನ್ನು ಯಡಿಯೂರಪ್ಪ ಅವರಿಂದ ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರು ಪಕ್ಷದ ಪ್ರಶ್ನಾತೀತ ನಾಯಕ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದಿರುವ ಅವರ ಬಗ್ಗೆ ಅಪಾರ ಗೌರವವಿದೆ. ಅವರು ಭಾಷಣದಲ್ಲಿ ಆಡಿರುವ ಮಾತುಗಳ ಬಗ್ಗೆ ಮಾತ್ರ ಆಕ್ಷೇಪವಿದೆ. ಇದು ಅವರಿಗೆ ಶೋಭೆ ತರುವುದಿಲ್ಲ. ಪಕ್ಷದ ಕಾರ್ಯಕರ್ತರ ಉತ್ಸಾಹ ಕುಗ್ಗಿಸುವ ಪ್ರಯತ್ನವನ್ನು ಯಡಿಯೂರಪ್ಪ ಅವರು ಮಾಡಬಾರದು’ ಎಂದು ಅಸಮಾಧಾನ ಹೊರಹಾಕಿದರು.

ಬಿಜೆಪಿ ಇತರ ಪಕ್ಷಕ್ಕಿಂತ ಭಿನ್ನ. ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ‌ ಶಿಷ್ಟಾಚಾರವಿದೆ. ಕೇಂದ್ರ ಸಂಸದೀಯ ಮಂಡಳಿಯು ಅಭ್ಯರ್ಥಿ ಆಯ್ಕೆ ಮಾಡುತ್ತದೆ. ಏಕಾಏಕಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಇಂತಹವರನ್ನೇ ಗೆಲ್ಲಿಸುವಂತೆ ಅವರು ಮಾಡಿಕೊಂಡ ಮನವಿ ಸರಿಯಲ್ಲ. ಪಕ್ಷದಿಂದ ಹೊರನಡೆದು ಪ್ರಾದೇಶಿಕ ಪಕ್ಷವೊಂದನ್ನು ಸಂಘಟಿಸುವ ಹುನ್ನಾರ ಅವರಲ್ಲಿ ಇರುವಂತೆ ಕಾಣುತ್ತಿದೆ’ ಎಂದು ದೂರಿದರು.

ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಪ್ರತಿ ಜಿಲ್ಲೆಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ವಿಬಿ-ಜಿರಾಮ್‌ಜಿ ಕುರಿತು ಇತ್ತೀಚೆಗೆ ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪಕ್ಷದ ಶಾಸಕ ಬಿ.ಪಿ. ಹರೀಶ್, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅವರಿಗೆ ಆಹ್ವಾನ ನೀಡಿರಲಿಲ್ಲ. ಗುಂಪುಗಾರಿಕೆ ಮಾಡುವವರ ಜೊತೆ ಸೇರಿದ ವಿಜಯೇಂದ್ರ ಅವರು ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ವರಿಷ್ಠರ ಗಮನಕ್ಕೆ ತರಲು ತೀರ್ಮಾನ

ಬಿಎಸ್ ವೈ ಹೇಳಿಕೆಗೆ ದಾವಣಗೆರೆ ಬಿಜೆಪಿ ಬಿ ಟೀಮ್ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನ ಖಂಡಿಸಿ ಇನ್ನೊಂದು ಬಿಜೆಪಿ ಬಣ ಇದೇ ಮಾರ್ಚ್ 5ರಂದು ಜಿಎಂ ಐಟಿ ಕಾಲೇಜ್ ಅತಿಥಿ ಗೃಹದಲ್ಲಿ ಪ್ರತಿಭಟನಾ ಸಭೆ ಮುಂದಾಗಿದೆ. ಮಾಜಿ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಹಾಲಿ ಶಾಸಕ ಬಿಪಿ ಹರೀಶ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ತಮ್ಮ ವಿಚಾರವನ್ನ ಪಕ್ಷದ ವರಿಷ್ಠರ ಗಮನಕ್ಕೆ ತರಲುಪಿಸಲು ನಿರ್ಧರಿಸಿದೆ. ಇನ್ನು ಪ್ರತಿಭಟನಾ ಸಭೆ ಮಾಡುವ ದಿನವೇ ಜಿಲ್ಲಾ ಬಿಜೆಪಿ ಕಚೇರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಬರುತ್ತಿದ್ದಾರೆ. ಈ ವೇಳೆ ಈ ವಿಚಾರವನ್ನು ಅವರ ಗಮನಕ್ಕೆ ತರಲು ಸಹ ತೀರ್ಮಾನಿಸಿದ್ದಾರೆ.

ರಾಜ್ಯದಲ್ಲಿ ಹೇಗೆ ಬಿಜೆಪಿಯಲ್ಲಿ ಗೊಂದಲಗಳಿವೆ ಅದರಂತೆ ದಾವಣಗೆರೆ ಜಿಲ್ಲೆಯಲ್ಲಿ ಗೊಂದಲಗಳು ಹೆಚ್ಚಾಗಿದ್ದು, ಬಣ ಬಡಿದಾಟುಗಳು ನಡೆದಿವೆ.  ಇನ್ನೊಂದೆಡೆ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಇದರ ನಡುವೆಯೇ ಬಿಜೆಪಿಯಲ್ಲಿ ಈಗ ಹೊಸ ಗೊಂದಲ ಸೃಷ್ಟಿಸಿದ್ದು, ಇದು ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂದು ಕಾದುನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?: ನೆಹರು ತಾರಾಲಯದ ನಿರ್ದೇಶಕರು ಹೇಳಿದ್ದೇನು? – Kannada News | Lunar Eclipse Explained: The Science Behind the Red and Copper Coloured Moon

ಚಂದ್ರ ಗ್ರಹಣದ ವೇಳೆ ಚಂದ್ರನು ಕೆಂಪು ಅಥವಾ ತಾಮ್ರದ ಬಣ್ಣದಲ್ಲಿ ಗೋಚರಿಸುವುದು ಒಂದು ವಿಸ್ಮಯಕಾರಿ ವಿದ್ಯಮಾನ. ಇದನ್ನು ರಕ್ತಚಂದ್ರ ಅಥವಾ ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಭೂಮಿಯ ನೆರಳಿನಲ್ಲಿ ಚಂದ್ರ ಇರುವುದರಿಂದ, ಸಾಮಾನ್ಯವಾಗಿ ಕಪ್ಪಾಗಿ ಕಾಣಿಸಬೇಕು. ಆದರೆ, ಭೂಮಿಯ ವಾತಾವರಣವು ಸೂರ್ಯನ ಬೆಳಕನ್ನು ಚಂದ್ರನ ಮೇಲೆ ವಕ್ರೀಭವನಗೊಳಿಸುತ್ತದೆ. ಸೂರ್ಯನ ಬಿಳಿ ಬೆಳಕಿನಲ್ಲಿರುವ ಏಳು ಬಣ್ಣಗಳಲ್ಲಿ ಕೆಂಪು ಮತ್ತು ಹಳದಿ ಮಿಶ್ರಿತ ಬಣ್ಣಗಳು ವಾತಾವರಣದ ಮೂಲಕ ಬಾಗಿ ಚಂದ್ರನ ಮೇಲೆ ಬೀಳುತ್ತವೆ. ಈ ಬೆಳಕು ನಮ್ಮ ಕಣ್ಣುಗಳಿಗೆ ಪ್ರತಿಫಲಿತವಾದಾಗ, ಚಂದ್ರನು ರಕ್ತವರ್ಣದ್ದಾಗಿ ಕಾಣಿಸುತ್ತಾನೆ. ಪ್ರತಿ ಹುಣ್ಣಿಮೆಯ ದಿನ ಚಂದ್ರ ಗ್ರಹಣ ಸಂಭವಿಸುವುದಿಲ್ಲ ಏಕೆಂದರೆ, ಚಂದ್ರನು ಭೂಮಿಯ ಸುತ್ತ ಐದು ಡಿಗ್ರಿ ಕೋನದಲ್ಲಿ ಸುತ್ತುತ್ತಾನೆ. ಇತ್ತೀಚೆಗೆ ಫೆಬ್ರವರಿ 17 ರಂದು ಕಂಕಣ ಸೂರ್ಯಗ್ರಹಣ (ರಿಂಗ್ ಆಫ್ ಫೈರ್) ಸಂಭವಿಸಿತ್ತು. ಅದು ಭಾರತಕ್ಕೆ ಕಾಣಿಸದೆ ಅಂಟಾರ್ಟಿಕಾ ಪ್ರದೇಶದಲ್ಲಿ ಮಾತ್ರ ಸ್ಪಷ್ಟವಾಗಿ ಗೋಚರಿಸಿತ್ತು. ಆದರೆ, ಪ್ರಸ್ತುತ ಸಂಪೂರ್ಣ ಚಂದ್ರ ಗ್ರಹಣವು ಜನರಿಗೆ ಗೋಚರವಾಗಲಿದೆ ಎಂದು ನೆಹರು ತಾರಾಲಯದ ನಿರ್ದೇಶಕ ಗುರ ಪ್ರಸಾದ್ ತಿಳಿಸಿದ್ದಾರೆ.

ವರದಿ: ನಟರಾಜ್ ಮೆಟ್ರೋ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಊರಲ್ಲಿ ಹೋಳಿ ಆಚರಣೆ ಫುಲ್​​ ಡಿಫರೆಂಟ್​​: ಕತ್ತಿ ಹಿಡಿದು ಕಾಮಣ್ಣನ ಕಾಯುತ್ತಾರೆ ಗ್ರಾಮಸ್ಥರು! – Kannada News | Unique Holi in Mulamuttal, Dharwad: Villagers Guard Kamanna with Weapons!

ಧಾರವಾಡ, ಮಾರ್ಚ್​​ 03: ಹೋಳಿ ಹಬ್ಬದ ಆಚರಣೆ ಪ್ರದೇಶಗಳಿಗೆ ಅನುಗುಣವಾಗಿ ಬದಲಾಗೋದು ಎಲ್ಲರಿಗೂ ಗೊತ್ತಿರುವ ವಿಚಾರ. ಧಾರವಾಡದ ಮುಳಮುತ್ತಲ ಗ್ರಾಮ ಗ್ರಾಮದಲ್ಲಿಯೂ ವಿಭಿನ್ನ ರೀತಿಯಲ್ಲಿ ಬಣ್ಣದ ಹಬ್ಬದ ಆಚರಣೆ ನಡೆಯುತ್ತೆ. ಬಣ್ಣದೋಕುಳಿಯ ಬದಲಾಗಿ ತಮ್ಮೂರಿನ ಕಾಮದೇವನ ಮೂರ್ತಿಯನ್ನು ಯಾರಾದರೂ ಕದ್ದೊಯ್ಯಬಾರದು ಎಂದು ಗ್ರಾಮಸ್ಥರೆಲ್ಲ ತಮ್ಮ ತಮ್ಮ ಮನೆಯಲ್ಲಿರೋ ಆಯುಧಗಳೊಂದಿಗೆ ಕಾಮಣ್ಣನ ರಕ್ಷಣೆಗೆ ನಿಲ್ಲೋದು ಇಲ್ಲಿಯ ವಿಶೇಷ.

ಗ್ರಾಮದ ಗರಡಿ ಮನೆಯ ಮುಂಭಾಗದಲ್ಲಿ ಸುಮಾರು 12 ಅಡಿ ಎತ್ತರ ಮಂಟಪವನ್ನ ನಿರ್ಮಿಸಿ, ಸುತ್ತಲೂ ಕಟ್ಟಿಗೆಯ ಭದ್ರತೆಯೊಂದಿಗೆ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಮೂರ್ತಿಯನ್ನು ಯಾರಾದರೂ ಕದಿಯಬಾಹುದೆಂಬ ಕಾರಣಕ್ಕೆ ಗ್ರಾಮಸ್ಥರು ಬಹಳ ಹಿಂದಿನಿಂದಲೂ ಇಂತಹ ಸಂಪ್ರದಾಯವೊಂದನ್ನು ಆಚರಿಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಊರ ಜನರೆಲ್ಲ ಆಯುಧಗಳನ್ನು ಹಿಡಿದು ಈ ರೀತಿ ಕಾವಲು ನಿಲ್ಲುವುದರ ಹಿಂದೆ ಐತಿಹಾಸಿಕ ಕತೆಯೊಂದಿದೆ.

ಇದನ್ನೂ ಓದಿ: ವಿದೇಶದಲ್ಲಿ ಧಾರವಾಡದ ಯುವಕನ ಚಮತ್ಕಾರ; ಇದು ಯೋಗದಿಂದ ಬದುಕೇ ಬದಲಾದ ಕಥೆ

ಹಲವಾರು ವರ್ಷಗಳ ಹಿಂದೆ ಗ್ರಾಮದ ಬುಡ್ಡಪ್ಪ ಕಣವಿ ಅನ್ನೋ ವ್ಯಕ್ತಿ ಅತ್ತಿಗೆಗೆ ಕುಡಿಯಲು ನೀರು ಕೇಳುತ್ತಾನಂತೆ. ಆಕೆ ನೀನು ಅದೇನು ದೊಡ್ಡ ಕಾರ್ಯ ಮಾಡಿ ಬಂದಿದ್ದೀಯಾ ಅಂತಾ ಹೀಯಾಳಿಸುತ್ತಾಳಂತೆ. ಇದರಿಂದ ನೊಂದ ಬುಡ್ಡಪ್ಪ ಪಕ್ಕದ ಅಣ್ಣಿಗೇರಿ ಗ್ರಾಮಕ್ಕೆ ಹೋಗಿ, ಅಲ್ಲಿನ ರಾಜರು ಪ್ರತಿಷ್ಠಾಪಿಸಿದ್ದ ಕಾಮಣ್ಣನ ಮೂರ್ತಿಯ ತಲೆಯನ್ನು ಕತ್ತರಿಸಿಕೊಂಡು ತರುತ್ತಾನೆ. ಬಳಿಕ ತಾನು ಮಾಡಿದ ಸಾಧನೆಯನ್ನ ತೋರಿಸಲು ಗ್ರಾಮದ ಅಗಸಿಯಲ್ಲಿ ಮೂರ್ತಿಯನ್ನಿಟ್ಟು, ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನಂತೆ. ಅಂದು ಕಾಮಣ್ಣನ ಮೂರ್ತಿಯ ತಲೆಯನ್ನು ಮರಳಿ ಪಡೆಯಲು ಆಯುಧ ಸಮೇತ ಬಂದ ಅಣ್ಣಿಗೇರಿ ಗ್ರಾಮಸ್ಥರನ್ನ ಹಿಮ್ಮೆಟ್ಟಿಸಲು ಸ್ಥಳೀಯರು ಆಯುಧಗಳೊಂದಿಗೆ ಹೋರಾಟಕ್ಕೆ ನಿಲ್ಲುತ್ತಾರೆ. ಈ ಗ್ರಾಮಸ್ಥರನ್ನ ನೋಡಿ ಇವರ ಸಹವಾಸವೇ ಬೇಡ ಅಂತಾ ಅಣ್ಣಿಗೇರಿ ಗ್ರಾಮಸ್ಥರು ಮರಳಿ ಹೋಗುತ್ತಾರಂತೆ. ಬಳಿಕ ಗ್ರಾಮದಾದ್ಯಂತ ಬುಡ್ಡಪ್ಪ ಸತ್ತ ಹಿನ್ನೆಲೆಯಲ್ಲಿ ಶೋಕಾಚರಣೆ ನಡೆಯುತ್ತೆ. ಇದೇ ಕಾರಣಕ್ಕೆ ಬಣ್ಣದೋಕುಳಿಯನ್ನೂ ನಿಷೇಧಿಸಲಾಗುತ್ತೆ. ಅಂದು ಅನಿವಾರ್ಯತೆಯಿಂದಾಗಿ ನಡೆದ ಹೋರಾಟ ಇಂದು ಆಚರಣೆಯಾಗಿ ಬದಲಾಗಿದೆ. ಈ ವಿಚಿತ್ರವನ್ನು ನೋಡಲು ಇಂದಿಗೂ ಬೇರೆ ಬೇರೆ ಕಡೆಗಳಿಂದ ಜನರು ಬರುತ್ತಾರೆ. ಹೀಗೆ ಬಂದವರು ಏನಾದರೂ ಬೇಡಿಕೊಂಡರೆ, ಅದು ಸಿಗುತ್ತೆ ಅನ್ನೋ ನಂಬಿಕೆಯೂ ಜನರಲ್ಲಿದೆ.

ಅಷ್ಟೇ ಅಲ್ಲ, ಆರಂಭದ ವರ್ಷಗಳಲ್ಲಿ ಹೋಳಿ ಹಬ್ಬದ ವೇಳೆಯಲ್ಲಿ ಬೇರೆ ಗ್ರಾಮದ ಯಾರಿಗೂ ಕೂಡ ಇಲ್ಲಿಗೆ ಪ್ರವೇಶವೂ ಇರಲಿಲ್ಲ. ಬೇರೆ ಯಾವುದೋ ನೆಪ ಮಾಡಿಕೊಂಡು ಬಂದು, ಮೂರ್ತಿಯನ್ನು ಕದ್ದೊಯ್ದರೆ ಹೇಗೆ ಅನ್ನೋ ಅನುಮಾನವೇ ಇದಕ್ಕೆ ಕಾರಣವಾಗಿತ್ತು. ಆದರೆ ವರ್ಷಗಳು ಉರುಳಿದಂತೆ ಆ ನಿಯಮವನ್ನ ಸಡಿಲಿಸಲಾಗಿದೆ. ಆದರೆ ಅಂದು ಆರಂಭವಾದ ಕಾಮಣ್ಣನನ್ನು ಕಾಯೋ ಕೆಲಸ ಸಾಂಪ್ರದಾಯಿಕ ಆಚರಣೆಯ ರೂಪ ತಳೆದು, ಇವತ್ತಿಗೂ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್? – Kannada News | NPS Swasthya Equity Plus scheme by PFRDA and ICICI PF Management Ltd

ಪೆನ್ಷನ್ ಫಂಡ್ ನಿಯಂತ್ರಕ ಪ್ರಾಧಿಕಾರವಾದ ಪಿಎಫ್​ಆರ್​ಡಿಎ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಪಿಒಸಿ (ಪ್ರೂಫ್ ಆಫ್ ಕಾನ್ಸೆಕ್ಟ್) ಸ್ಕೀಮ್ ಅಡಿಯಲ್ಲಿ ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್ ಸ್ಕೀಮ್ (NPS Swasthya Equity Plus) ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಐಸಿಐಸಿಐ ಪೆನ್ಷನ್ ಫಂಡ್ ಮ್ಯಾನೇಜ್ಮೆಂಟ್ ಫಂಡ್ ಸಹಯೋಗದಲ್ಲಿ ಪಿಎಫ್​ಆರ್​ಡಿಎ ಈ ಸ್ಕೀಮ್ ಅನ್ನು ನಡೆಸುತ್ತದೆ. ಇದು ರಿಟೈರ್ಮೆಂಟ್​ಗೆ ಬೇಕಾದ ದೀರ್ಘಾವಧಿ ಹೂಡಿಕೆ ಮಾಡಲು ಹಾಗೂ ಆರೋಗ್ಯಪಾಲನೆ ವೆಚ್ಚ ಭರಿಸಲು ಅವಕಾಶ ಕೊಡುವ ಹೈಬ್ರಿಡ್ ರಿಟೈರ್ಮೆಂಟ್ ಸ್ಕೀಮ್ ಆಗಿದೆ.

ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್​ನಲ್ಲಿ ಹಣದ ವಿನಿಯೋಗ ಹೇಗೆ?

ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್ ಸ್ಕೀಮ್​ನಲ್ಲಿ ಶೇ. 70ರಿಂದ 100ರಷ್ಟು ಹಣವನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಶೇ. 30ರವರೆಗೆ ಡೆಟ್​ಗಳಲ್ಲಿ, ಹಾಗೂ ಶೇ 10ರವರೆಗಿನ ಫಂಡ್ ಅನ್ನು ಮನಿ ಮಾರ್ಕೆಟ್​ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೂಡಿಕೆದಾರರ ರಿಸ್ಕ್ ಇಚ್ಛೆಗೆ ಅನುಗುಣವಾಗಿ ಹೂಡಿಕೆಗಳ ಹಂಚಿಕೆ ಆಗುತ್ತದೆ.

ಇದನ್ನೂ ಓದಿ: ಮಾರ್ಕೆಟ್ ಟ್ರೆಂಡ್, ಎಕ್ಸ್​ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು

ಉದಾಹರಣೆಗೆ, ಹೂಡಿಕೆದಾರರಿಗೆ ತೀರಾ ಹೆಚ್ಚು ರಿಸ್ಕ್ ಅಗತ್ಯ ಇಲ್ಲ ಎನಿಸಿದಲ್ಲಿ ಈಕ್ವಿಟಿಗಳಲ್ಲಿ ಶೇ. 70, ಡೆಟ್​ಗಳಲ್ಲಿ ಶೇ. 20, ಮನಿ ಮಾರ್ಕೆಟ್​ಗಳಲ್ಲಿ ಶೇ. 10 ಹೂಡಿಕೆ ಮಾಡಬಹುದು. ಅಥವಾ ಈಕ್ವಿಟಿಗಳಲ್ಲಿ ಶೇ. 70, ಡೆಟ್​ಗಳಲ್ಲಿ ಶೇ. 30 ಹೂಡಿಕೆ ಆಗಬಹುದು.

ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಇದ್ದರೆ ನೂರಕ್ಕೆ ನೂರು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದು. ಅಥವಾ ಈಕ್ವಿಟಿಗಳಲ್ಲಿ ಶೇ. 90, ಡೆಟ್​ಗಳಲ್ಲಿ ಶೇ. 10 ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಬದುಕು ನಿರ್ವಹಿಸುವಷ್ಟು ಮಾಸಿಕ ಆದಾಯ ಸೃಷ್ಟಿಸುವುದು ಹೇಗೆ? ಬೆಲೆ ಏರಿಕೆ ಇತ್ಯಾದಿ ಅಂಶಗಳನ್ನೂ ಮರೆಯದಿರಿ; ಇಲ್ಲಿದೆ ಟಿಪ್ಸ್

ಹೆಲ್ತ್​ಕೇರ್ ವೆಚ್ಚಕ್ಕೆ ಹಣ ಹೇಗೆ ಬಳಸುವುದು?

ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್ ಸ್ಕೀಮ್​ನಲ್ಲಿ ನಿಮ್ಮ ಹೂಡಿಕೆ ಹಣ 50,000 ರೂ ದಾಟಿದಾಗ ಭಾಗಶಃವಾಗಿ ಹಣ ವಿತ್​ಡ್ರಾ ಮಾಡಲು ಅರ್ಹರಾಗಬಹುದು. ಶೇ. 25ರಷ್ಟು ಹಣವನ್ನು ಮಾತ್ರ ಹಿಂಪಡೆಯಲು ಅವಕಾಶ ಇರುತ್ತದೆ. ವೈದ್ಯಕೀಯ ವೆಚ್ಚವು ಕಾರ್ಪಸ್​ನ ಶೇ. 70ಕ್ಕಿಂತ ಹೆಚ್ಚು ಇದ್ದಾಗ ಪೂರ್ಣ ಹಣ ಹಿಂಪಡೆಯುವ ಅವಕಾಶವೂ ಇರುತ್ತದೆ. ಆದರೆ, ಅಪೋಲೋ 24/7 ಪ್ಲಾಟ್​ಫಾರ್ಮ್ ಮತ್ತು ಆಯ್ದ ಅಪೋಲೋ ನೆಟ್ವರ್ಕ್ ಫೆಸಿಲಿಟಿಗಳ ಮೂಲಕ ಹೆಲ್ತ್​ಕೇರ್ ಸಂಬಂಧಿತ ವೆಚ್ಚಗಳಿಗೆ ಈ ಸ್ಕೀಮ್​ನ ಹಣ ಬಳಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಹುಡುಗನ ಜತೆ ಸೇರಿ ಹಳೇ ಪ್ರೇಮಿ ಹತ್ಯೆ ಮಾಡಿದ ಕನ್ನಡದ ನಟಿ; ಭೀಕರ ಕೊಲೆ – Kannada News | Kannada actress Bindu aka Urvashi arrested in boyfriend murder case in Bengaluru

ಬೆಳ್ಳಿತೆರೆಯ ಮೇಲೆ ಮಿಂಚುವ ಕನಸು ಕಂಡಿದ್ದ ನಟಿಯೊಬ್ಬಳು, ನಿಜ ಜೀವನದಲ್ಲಿ ಕ್ರೂರ ಕೊಲೆಗಾತಿಯಾಗಿ ಬದಲಾದ ಕಥೆಯಿದು. ಪ್ರೀತಿ, ವಂಚನೆ ಮತ್ತು ರಕ್ತಸಿಕ್ತ ಅಂತ್ಯದ ಈ ಟ್ರಯಾಂಗಲ್ ಲವ್ ಸ್ಟೋರಿ ಈಗ ಇಡೀ ಸ್ಯಾಂಡಲ್‌ವುಡ್ ಬೆಚ್ಚಿಬೀಳುವಂತೆ ಮಾಡಿದೆ. ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ನಟಿ (Kannada Actress) ಬಿಂದು ಅಲಿಯಾಸ್ ಊರ್ವಶಿ, ಈಗ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲು ಪಾಲಾಗಿದ್ದಾಳೆ. ‘ಭಜರಂಗಿ’, ‘ರಂಗೋಲಿ’, ‘ಪೊಲೀಸ್ ಕ್ವಾರ್ಟರ್ಸ್’, ‘ಕಾಲಭೈರವ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಬಿಂಧು (Bindu), ಇತ್ತೀಚೆಗೆ ಬಿಡುಗಡೆಯಾದ ‘ಹಯಗ್ರೀವ’ ಸಿನಿಮಾಗೆ ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಳು. ಆದರೆ ಈ ಬಣ್ಣದ ಲೋಕದ ಹಿಂದೆ ಅಡಗಿದ್ದದ್ದು ಮಾತ್ರ ಭೀಕರ ಅಪರಾಧದ ಕಥೆ.

ಈ ಘಟನೆಯ ಸಂತ್ರಸ್ತ ಮೋಹನ್ ಕೃಷ್ಣ ರಾವ್. ಅಂಜನನಗರದ ನಿವಾಸಿಗಳಾದ ಗಿರಿಜಾಬಾಯಿ ಮತ್ತು ರಾಮರಾವ್ ಅವರ ಮೂರನೇ ಮಗ ಈತ. ಏಳು ವರ್ಷಗಳ ಹಿಂದೆ ಪ್ರೀತಿಸಿದ ಹುಡುಗಿಗಾಗಿ ಮನೆ ಬಿಟ್ಟಿದ್ದ ಮೋಹನ್, ಐದು ವರ್ಷಗಳ ಹಿಂದೆ ಪತ್ನಿಯಿಂದ ದೂರವಾಗಿ ಒಂಟಿಯಾಗಿದ್ದ. ಇತ್ತ ಭದ್ರಾವತಿ ಮೂಲದ ಬಿಂದು ಕೂಡ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಳು. ತಾಯಿಯ ಸಾವು, ತಂದೆಯ ಎರಡನೇ ಮದುವೆ ಹಾಗೂ ಕೋವಿಡ್ ಸಮಯದಲ್ಲಿ ತನ್ನ ಮಗುವನ್ನು ಕಳೆದುಕೊಂಡ ನೋವಿನಲ್ಲಿದ್ದ ಈಕೆಯನ್ನು ಪತಿ ಬಿಟ್ಟು ಹೋಗಿದ್ದ ಎನ್ನಲಾಗಿದೆ.

ಸಿನಿಮಾದಲ್ಲಿ ನಟಿಸುವ ಹಂಬಲದೊಂದಿಗೆ ಬೆಂಗಳೂರಿಗೆ ಬಂದ ಬಿಂದು, ಮಂಜುನಾಥ್ ನಗರದಲ್ಲಿ ಮೋಹನ್ ಮನೆ ಪಕ್ಕದಲ್ಲೇ ವಾಸವಿದ್ದಳು. ಈ ಪರಿಚಯ ಪ್ರೀತಿಗೆ ತಿರುಗಿ, ಇಬ್ಬರೂ ಮದುವೆಯಾಗದಿದ್ದರೂ ದಂಪತಿಗಳಂತೆ ಒಟ್ಟಿಗೆ ವಾಸಿಸಲು ಶುರು ಮಾಡಿದ್ದರು. ಕಳೆದ ಡಿಸೆಂಬರ್‌ನಲ್ಲಿ ಮಹಾಲಕ್ಷ್ಮಿ ಲೇಔಟ್‌ನ ನಟರಾಜ್ ಎಂಬುವವರ ಮನೆಯನ್ನು ಬಾಡಿಗೆಗೆ ಪಡೆದ ಈ ಜೋಡಿ, ನೆಮ್ಮದಿಯಿಂದಲೇ ಸಂಸಾರ ಹೂಡಿದ್ದರು. ಆದರೆ ಕೇವಲ ಎರಡೂವರೆ ತಿಂಗಳ ಹಿಂದೆ ಬಿಂದುವಿನ ಜೀವನಕ್ಕೆ ವಿನಯ್ ಎಂಬಾತನ ಎಂಟ್ರಿಯಾಯಿತು.

ಹೋಟೆಲ್ ಉದ್ಯಮದಲ್ಲಿ ನಷ್ಟ ಅನುಭವಿಸಿ ಕೆಲಸವಿಲ್ಲದೆ ಅಲೆಯುತ್ತಿದ್ದ ವಿನಯ್ ಜೊತೆ ಬಿಂದುವಿಗೆ ಅಕ್ರಮ ಸಂಬಂಧ ಶುರುವಾಯಿತು. ಈ ವಿಚಾರ ಮೋಹನ್ ಗಮನಕ್ಕೆ ಬಂದಾಗ ಮನೆಯಲ್ಲಿ ಪ್ರತಿದಿನ ಜಗಳಗಳು ಆರಂಭವಾದವು. ಈ ಜಗಳವೇ ಮುಂದೆ ಮೋಹನ್ ಪಾಲಿಗೆ ಮೃತ್ಯುವಾಗಿ ಕಾಡಿತು.

ಫೆಬ್ರವರಿ 18ರಂದು ಮೋಹನ್ ಮದ್ಯಪಾನ ಮಾಡಿ ಬಿಂದುವಿನ ಜೊತೆ ಜಗಳವಾಡಿದ್ದ. ಈ ವೇಳೆ ಬಿಂದು ತನ್ನ ಹೊಸ ಪ್ರಿಯಕರ ವಿನಯ್‌ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಳು. ವಿನಯ್ ತನ್ನ ಸ್ನೇಹಿತ ಧನುಷ್ ಎಂಬಾತನನ್ನೂ ಕರೆತಂದಿದ್ದ. ಆರೋಪಿಗಳು ಮೋಹನ್‌ನನ್ನು ಕಟ್ಟಿಹಾಕಿ, ಬಾಯಿಗೆ ಟೇಪ್ ಸುತ್ತಿ ಅಟ್ಟಹಾಸ ಮೆರೆದಿದ್ದರು. ಕ್ರೌರ್ಯದ ಪರಮಾವಧಿ ತೋರಿದ್ದಾರೆ. ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು, ಚಾಕುವಿನಿಂದ ದೇಹದ ಹಲವು ಭಾಗಗಳಿಗೆ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಶವವನ್ನು ನೋಡಿದ ಪೊಲೀಸರೇ ಒಂದು ಕ್ಷಣ ಬೆಚ್ಚಿಬೀಳುವಂತೆ ಆರೋಪಿಗಳು ಕ್ರೌರ್ಯ ಮೆರೆದಿದ್ದರು.

ಇದನ್ನೂ ಓದಿ: ಪತಿಯಿಂದಲೇ ಕೊಲೆಯಾದ ‘ಭಜರಂಗಿ’ ನಟಿ; ಆಸ್ತಿ ಹೊಡೆಯಲು ನಡೆದಿತ್ತು ಪ್ಲ್ಯಾನ್

ಕೊಲೆಯ ನಂತರ ಶವವನ್ನು ಸುಟ್ಟು ಹಾಕಲು ಆರೋಪಿಗಳು ಸಂಚು ರೂಪಿಸಿದ್ದರು. ಆದರೆ ಸ್ಮಶಾನದಲ್ಲಿ ಡೆತ್ ಸರ್ಟಿಫಿಕೇಟ್ ಕೇಳುತ್ತಾರೆ ಎಂಬ ಭಯದಿಂದ ಆ ಪ್ಲಾನ್ ಕೈಬಿಟ್ಟು, ಸಂಜೆ 5 ಗಂಟೆ ಸುಮಾರಿಗೆ ಬಿಂದು ಮತ್ತು ವಿನಯ್ ಕೆ.ಆರ್. ನಗರಕ್ಕೆ ಪರಾರಿಯಾದರು. ಧನುಷ್‌ಗೆ ಸ್ವಲ್ಪ ಹಣ ನೀಡಿ ಬೇರೆಡೆ ಕಳುಹಿಸಿದ್ದರು. ಮೂರು ದಿನಗಳ ನಂತರ ಮನೆಯಿಂದ ದುರ್ನಾತ ಬರಲಾರಂಭಿಸಿದಾಗ ನೆರೆಹೊರೆಯವರು ಮಾಲೀಕರಿಗೆ ಮಾಹಿತಿ ನೀಡಿದರು. ಮಾಲೀಕರ ಮಗ ರವಿಕಿರಣ್ ಪೊಲೀಸರಿಗೆ ದೂರು ನೀಡಿದಾಗ ಈ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂತು.

ತನಿಖೆ ಆರಂಭಿಸಿದ ಪೊಲೀಸರಿಗೆ ಬಿಂದುವನ್ನು ಪತ್ತೆ ಮಾಡುವುದು ಸವಾಲಾಗಿತ್ತು. ಏಕೆಂದರೆ ಆಕೆ ಐದು ಬೇರೆ ಬೇರೆ ಹೆಸರಿನ ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದಳು. ಆದರೆ ತಾಂತ್ರಿಕ ತಂಡದ ಸಹಾಯದಿಂದ ಸಿಡಿಆರ್ (CDR) ಮಾಹಿತಿ ಆಧರಿಸಿ ಕೆ.ಆರ್. ನಗರದಲ್ಲಿದ್ದ ಬಿಂದು ಮತ್ತು ವಿನಯ್‌ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.

ವರದಿ: ಮಂಜುನಾಥ್, ಟಿವಿ9. ಬೆಂಗಳೂರು ಗ್ರಾಮಾಂತರ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಶ್ಚಿಮ ಏಷ್ಯಾ ಉದ್ವಿಗ್ನತೆ: ಭಾರತದಿಂದ ಅಧಿಕೃತ ಹೇಳಿಕೆ ಬಿಡುಗಡೆ; ಗಲ್ಫ್​ನಲ್ಲಿ ಭಾರತೀಯರ ಸುರಕ್ಷತೆ ಕುರಿತು ಕಾಳಜಿ – Kannada News | India’s official statement on West Asia conflict, says safety of Indian citizen is its utmost priority

ನವದೆಹಲಿ, ಮಾರ್ಚ್ 3: ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧದ (Iran war) ಕುರಿತು ಭಾರತ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದೆ. ಇರಾನ್ ಮತ್ತು ಗಲ್ಫ್​ನಲ್ಲಿ ಬಿಕ್ಕಟ್ಟು ಶುರುವಾಗಿರುವುದು ಹಾಗೂ ಅದರಿಂದ ಸಾವು ನೋವುಗಳಾಗಿ ಸಹಜ ಬದುಕು ಅಸ್ತವ್ಯಸ್ತಗೊಳ್ಳುತ್ತಿರುವುದಕ್ಕೆ ಭಾರತ ಆತಂಕ ವ್ಯಕ್ತಪಡಿಸಿದೆ. ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಕೋಟಿ ಸಂಖ್ಯೆಯ ಭಾರತೀಯರ ಸುರಕ್ಷತೆ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದು, ಎಲ್ಲಾ ಕಡೆಗಳಿಂದ ಮಾತುಕತೆಗಳಾಗಿ, ಬಿಕ್ಕಟ್ಟು ಅಂತ್ಯಗೊಳ್ಳುವಂತಾಗಲಿ ಎಂದು ಮನವಿ ಮಾಡಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಈ ಬಿಕ್ಕಟ್ಟಿನ ತೀವ್ರತೆ ಹೆಚ್ಚಾಗಿ, ಇತರ ದೇಶಗಳಿಗೆ ಅದು ಹರಡುವುದನ್ನು ನಾವು ಕಂಡಿದ್ದೇವೆ. ವಿನಾಶ ಮತ್ತು ಸಾವು ಹೆಚ್ಚಿದ್ದು, ಸಹಜ ಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಪ್ರಮುಖ ನೆರೆಯ ದೇಶವಾದ ನಮಗೆ ಈ ಪ್ರದೇಶದ ಭದ್ರತೆ ಮತ್ತು ಸ್ಥಿರತೆ ಮುಖ್ಯವಾಗಿದ್ದು, ಈ ಬೆಳವಣಿಗೆಗಳನ್ನು ಆತಂಕದಿಂದ ಗಮನಿಸುತ್ತಿದ್ದೇವೆ’ ಎಂದು ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್​ ಮೇಲೆ ಇಸ್ರೇಲ್-ಯುಎಸ್​ ದಾಳಿ; ಸಾವಿನ ಸಂಖ್ಯೆ 787ಕ್ಕೆ ಏರಿಕೆ

‘ಗಲ್ಫ್ ಪ್ರದೇಶದಲ್ಲಿ ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಭಾರತೀಯ ಸಂಖ್ಯೆ ಒಂದು ಕೋಟಿ ಹತ್ತಿರ ಇದೆ. ಇವರಿಗೆ ಋಣಾತ್ಮಕವಾಗಿ ಪರಿಣಾಮ ಬೀರುವಂತಹ ಯಾವುದೇ ಘಟನೆಯನ್ನು ಕಣ್ಮುಚ್ಚಿ ನೋಡಿಕೊಂಡಿರಲು ಆಗುವುದಿಲ್ಲ. ನಮ್ಮ ವ್ಯಾಪಾರ ಮತ್ತು ಇಂಧನ ಸರಬರಾಜು ಸರಪಳಿಯೂ ಈ ಭೂಭಾಗದಲ್ಲಿದೆ. ದೊಡ್ಡ ವಿಪತ್ತು ಬಂದರೆ ಭಾರತೀಯ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜಾಗತಿಕ ಕಾರ್ಮಿಕಸಮೂಹದಲ್ಲಿ ಪ್ರಮುಖವೆನಿಸಿರುವ ನಾಗರಿಕರನ್ನು ಹೊಂದಿರುವ ದೇಶವಾಗಿ ಭಾರತವು ಸರಕು ಸಾಗಣೆ ಹಡಗಿನ ಮೇಲಿನ ದಾಳಿಯನ್ನು ಪ್ರಬಲವಾಗಿ ವಿರೋಧಿಸುತ್ತದೆ. ಈಗಾಗಲೇ ಕೆಲ ಭಾರತೀಯ ರಾಷ್ಟ್ರೀಯರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಕಾಣೆಯಾಗಿದ್ದಾರೆ’ ಎಂದು ಭಾರತದ ವತಿಯಿಂದ ಬಿಡುಗಡೆಯಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಂಧಾನ ಮತ್ತು ರಾಜತಾಂತ್ರಿಕ ಮಾತುಕತೆಗಳು ನಡೆಯಬೇಕು. ಈ ಬಿಕ್ಕಟ್ಟು ಬೇಗ ಅಂತ್ಯಗೊಳ್ಳಬೇಕು ಎಂದು ಹಾರೈಸಿರುವ ಭಾರತ, ಸರ್ಕಾರವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ರಾಷ್ಟ್ರೀಯ ಹಿತಾಸಕ್ತಿ ಪ್ರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಇರಾನ್ ಮೇಲೆ 4-5 ವಾರ ದಾಳಿ ಮುಂದುವರೆಯಲಿದೆ; ಟ್ರಂಪ್ ಘೋಷಣೆ

ಬಾಧಿತ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ರಾಜತಾಂತ್ರಿಕ ಕಚೇರಿಗಳು ಭಾರತೀಯ ನಾಗರಿಕರು ಹಾಗೂ ಸಮುದಾಯ ಸಂಘಟನೆಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ. ನಿಯಮಿತವಾಗಿ ನಿರ್ದೇಶನಗಳನ್ನು ನೀಡುತ್ತಿವೆ. ಬಾಧಿತ ನಾಗರಿಕರಿಗೆ ಸಾಧ್ಯವಾದ ನೆರವು ಒದಗಿಸಲಾಗುತ್ತಿದೆ. ಈ ಪ್ರದೇಶದ ಸರ್ಕಾರಗಳು ಹಾಗೂ ಇತರ ಪ್ರಮುಖ ಪಾಲುದಾರರೊಂದಿಗೆ ಸಂಪರ್ಕದಲ್ಲಿರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಅಂಗನವಾಡಿಗೆ ಬಿಡೋಕೆ ಬಂದ ಅಮ್ಮನ ಬಳಿ ಮುದ್ದಾಗಿ ಮಾತನಾಡಿ ಕಳಿಸಿಕೊಟ್ಟ ಕಂದಮ್ಮ – Kannada News | A little boy who sent his mother off to school with a caring word

ಪುಟಾಣಿಗಳೇ (little kids) ಹಾಗೆ, ತುಂಟಾಟ ಮಾಡೋದರಲ್ಲಿ ಎತ್ತಿದ ಕೈ. ಅದಲ್ಲದೇ ಶಾಲೆಗೆ ಹೋಗಲು ವಿಷಯದಲ್ಲಿ ಸ್ವಲ್ಪ ಹಿಂದೇಟು ಹಾಕುತ್ತಾರೆ. ಆದರೆ ಈ ಹೆತ್ತವರು ಪುಲಾಯಿಸಿ ಶಾಲೆಗೆ ಕಳಿಸಿ ಕೊಡುತ್ತಾರೆ. ಆದರೆ ಈ ಪುಟಾಣಿ ಮಾತ್ರ ಶಾಲೆಗೆ (school) ಹೋಗಲ್ಲ ಎಂದು ಹಠ ಮಾಡಿಲ್ಲ. ಶಾಲೆಗೆ ಕಳಿಸಿಕೊಡಲು ಬಂದ ಅಮ್ಮನನ್ನು  ಪುಟಾಣಿಯೊಂದು ಮುದ್ದಾಗಿ ಕಳಿಸಿಕೊಟ್ಟಿದೆ. ಮನೆಗೆ ಹೋಗಿ ನೀನು ಟಿವಿ ನೋಡು ಎನ್ನುವ ಪುಟಾಣಿಯ ಮುದ್ದು ಮಾತು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೆಡಿ ಎಫ್ಎಂ ಕನ್ನಡ (Red FM Kannada) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪುಟಾಣಿಯೊಂದು ಶಾಲೆಗೆ ಬಿಡೋಕೆ ಬಂದ ಅಮ್ಮನ ಬಳಿ ಮುದ್ದು ಮುದ್ದಾಗಿ ಮಾತನಾಡಿದೆ. ಈ ವಿಡಿಯೋದಲ್ಲಿ ಪುಟ್ಟ ಮಗುವು ತನ್ನ ತಾಯಿ ಬಳಿ ಟಾಟಾ ಬೇಗ ಬಾ ಎನ್ನುತ್ತಿರುವುದನ್ನು ಕಾಣಬಹುದು. ಆ ಬಳಿಕ ಮನೆಗೆ ಹೋಗಿ ಟಿವಿ ನೋಡು ಎನ್ನುವುದನ್ನು ನೀವಿಲ್ಲಿ ನೋಡಬಹುದು. ಮತ್ತೆ ಮತ್ತೆ ತನ್ನ ತಾಯಿ ಇರುವಲ್ಲಿಗೆ ಓಡಿ ಬರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮೇಕೆ ಮರಿಯನ್ನು ರಕ್ಷಿಸಲು ಬಾಲಕನಿಗೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಇಳಿಸಿದ್ರು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮುದ್ದು ಕಂದ ಎಂದರೆ, ಮತ್ತೊಬ್ಬರು ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮುದ್ದಾದ ವಿಡಿಯೋ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ: ಗ್ರಾಹಕರಿಲ್ಲದೇ ಹೋಟೆಲ್‌ಗಳು ಖಾಲಿ.. ಖಾಲಿ – Kannada News | Ketugrasta Lunar Eclipse Sparks Traditional Beliefs and Community Impact

ಕೇತುಗ್ರಸ್ತ ಚಂದ್ರಗ್ರಹಣ ಆರಂಭವಾಗಿದ್ದು, ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣಗಳನ್ನು ವೀಕ್ಷಿಸಬಹುದಾಗಿದೆ. ಲಾಸ್ ಏಂಜಲೀಸ್‌ನಲ್ಲಿ ಗೋಚರಿಸುತ್ತಿರುವ ಈ ಗ್ರಹಣ ಭಾರತದಲ್ಲಿ ಕೊನೆಯ 21 ನಿಮಿಷಗಳ ಕಾಲ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಚಂದ್ರನ ಕಾಲು ಭಾಗ ಮಾತ್ರ ಗೋಚರಿಸುತ್ತದೆ, ಉಳಿದ ಭಾಗ ತಾತ್ಕಾಲಿಕವಾಗಿ ನೆರಳಿನಲ್ಲಿ ಆವೃತವಾಗಿರುತ್ತದೆ. ಚಂದ್ರಗ್ರಹಣದ ಬಗ್ಗೆ ವೈಜ್ಞಾನಿಕ ಹಾಗೂ ಧಾರ್ಮಿಕ ನಂಬಿಕೆಗಳು ಭಾರತದಲ್ಲಿ ಮಾತ್ರವಲ್ಲದೆ, ಜಪಾನ್, ಚೀನಾ, ಅಮೆರಿಕಾದಂತಹ ದೇಶಗಳಲ್ಲೂ ಇವೆ. ಈ ಗ್ರಹಣದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನಸಂಚಾರ ಕಡಿಮೆಯಾಗಿ, ಹೋಟೆಲ್‌ಗಳು ಖಾಲಿ ಹೊಡೆದಿವೆ. ಇದು ಗ್ರಹಣದ ಪ್ರಭಾವದಿಂದ ಜನರು ಮನೆಯಿಂದ ಹೊರಬರದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿ, ಶಿವಮೊಗ್ಗದ ಬಲಮುರಿ ಗಣಪತಿ ದೇಗುಲ ಸೇರಿದಂತೆ ಹಲವೆಡೆ ಗ್ರಹಣದ ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆಗಾಗಿ ವಿಶೇಷ ಪೂಜೆಗಳು, ಗಂಗಾ ಪೂಜೆ ಮತ್ತು ಸಂಕಲ್ಪ ಪೂಜೆಗಳು ನಡೆದಿವೆ. ನಂಬಿಕೆಗಳು ಮತ್ತು ವಾಸ್ತವದ ನಡುವಿನ ಸಮತೋಲನವನ್ನು ಕಾಪಾಡುವುದು ಮುಖ್ಯ ಎಂದು ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಸಭಾ ಚುನಾವಣೆಗೆ 9 ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ; ಬಿಹಾರದಿಂದ ಪಕ್ಷದ ಮುಖ್ಯಸ್ಥ ನಿತಿನ್ ನಬಿನ್ ಕಣಕ್ಕೆ – Kannada News | BJP announces 9 candidates List for Rajya Sabha elections fields BJP National President Nitin Nabin from Bihar

ನವದೆಹಲಿ, ಮಾರ್ಚ್ 3: ಬಿಜೆಪಿ ಇಂದು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nitin Nabin) ಅವರನ್ನು ಸಹ ನಾಮನಿರ್ದೇಶನ ಮಾಡಲಾಗಿದೆ. ಬಿಹಾರದಿಂದ ರಾಜ್ಯಸಭಾ ಚುನಾವಣೆಗೆ ನಿತಿನ್ ನಬಿನ್ ಮತ್ತು ಶಿವೇಶ್ ರಾಮ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 5. ಮಾರ್ಚ್ 16ರಂದು ಮತದಾನ ನಡೆಯಲಿದೆ. ಅದೇ ದಿನ ಫಲಿತಾಂಶಗಳನ್ನು ಪ್ರಕಟವಾಗಲಿದೆ.

ಬಿಹಾರದಿಂದ ಬಿಜೆಪಿ ನಿತಿನ್ ನಬಿನ್ ಮತ್ತು ಶಿವೇಶ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ. ಅಸ್ಸಾಂನಲ್ಲಿ ಬಿಜೆಪಿ ತೇರಶ್ ಗೋವಲ್ಲ ಮತ್ತು ಜೋಗೆನ್ ಮೋಹನ್ ಅವರನ್ನು ನಾಮನಿರ್ದೇಶನ ಮಾಡಿದೆ. ಛತ್ತೀಸ್‌ಗಢದಲ್ಲಿ ಲಕ್ಷ್ಮಿ ವರ್ಮಾ ಅವರನ್ನು ತನ್ನ ಅಭ್ಯರ್ಥಿಯಾಗಿ ಹೆಸರಿಸಿದೆ. ಹರಿಯಾಣದಿಂದ ಸಂಜಯ್ ಭಾಟಿಯಾ ಅವರನ್ನು ಆಯ್ಕೆ ಮಾಡಿದೆ. ಒಡಿಶಾದಲ್ಲಿ ಬಿಜೆಪಿ ಸುಜೀತ್ ಕುಮಾರ್ ಜೊತೆಗೆ ರಾಜ್ಯ ಘಟಕದ ಮುಖ್ಯಸ್ಥ ಮನಮೋಹನ್ ಸಮಲ್ ಅವರನ್ನು ನಾಮನಿರ್ದೇಶನ ಮಾಡಿದೆ. ಪಶ್ಚಿಮ ಬಂಗಾಳದಿಂದ ಬಿಜೆಪಿ ರಾಹುಲ್ ಸಿನ್ಹಾ ಅವರನ್ನು ಕಣಕ್ಕಿಳಿಸಿದೆ.

ಇದನ್ನೂ ಓದಿ: ಬಿಹಾರದ ನೂತನ ಮಂತ್ರಿಗಳಿಗೆ ಖಾತೆ ಹಂಚಿಕೆ; ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ

ಬಿಹಾರದ ಐವರು ರಾಜ್ಯಸಭಾ ಸದಸ್ಯರ ಅವಧಿ ಏಪ್ರಿಲ್‌ನಲ್ಲಿ ಕೊನೆಗೊಳ್ಳಲಿದೆ. ಅವರೆಂದರೆ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್, ಪ್ರೇಮಚಂದ್ ಗುಪ್ತಾ, ಕೇಂದ್ರ ಸಚಿವರಾದ ರಾಮನಾಥ್ ಠಾಕೂರ್, ಅಮರೇಂದ್ರ ಧರಿ ಸಿಂಗ್ ಮತ್ತು ಉಪೇಂದ್ರ ಕುಶ್ವಾಹ. ಹರಿವಂಶ್ ನಾರಾಯಣ್ ಸಿಂಗ್ ಮತ್ತು ರಾಮನಾಥ್ ಠಾಕೂರ್ ಅವರು ಜೆಡಿಯು ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರೇಮಚಂದ್ ಗುಪ್ತಾ ಮತ್ತು ಅಮರೇಂದ್ರ ಧಾರಿ ಸಿಂಗ್ ಅವರು ಆರ್‌ಜೆಡಿಯನ್ನು ಪ್ರತಿನಿಧಿಸುತ್ತಿದ್ದಾರೆ. ಉಪೇಂದ್ರ ಕುಶ್ವಾಹ ಅವರು ರಾಷ್ಟ್ರೀಯ ಲೋಕ ಮೋರ್ಚಾವನ್ನು ಪ್ರತಿನಿಧಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯ ರಾಜಕಾರಣದಲ್ಲಿ ಫೋನ್​​ ಟ್ಯಾಪಿಂಗ್​​ ಬಿರುಗಾಳಿ: ವಿಪಕ್ಷಗಳ ಮೇಲೆ ಮುಗಿಬಿದ್ದ ಕಾಂಗ್ರೆಸ್​​ – Kannada News | Karnataka Phone Tapping Row: Congress Vs Opposition on Intelligence Misuse Claims

ರಾಜ್ಯ ರಾಜಕಾರಣದಲ್ಲಿ ಫೋನ್​​ ಟ್ಯಾಪಿಂಗ್​​ ಬಿರುಗಾಳಿImage Credit source: Google

ಬೆಂಗಳೂರು, ಮಾರ್ಚ್​​ 03: ಕಳೆದ ಕೆಲ ತಿಂಗಳುಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿದ್ದ ಕುರ್ಚಿ ಕಾಳಗದ ಮಧ್ಯೆ ಇದೀಗ ಫೋನ್​​ ಟ್ಯಾಪಿಂಗ್​​ ಆರೋಪ ವಿಚಾರ ಬಿರುಗಾಳಿ ಎಬ್ಬಿಸಿದೆ. ಗುಪ್ತಚರ ಇಲಾಖೆಯನ್ನು ಸರ್ಕಾರವು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ರಾಜ್ಯದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಇಲಾಖೆ ಮೂಲಕ ಪಕ್ಷದ ಶಾಸಕರುಗಳು ಮತ್ತು ನಾಯಕರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಡಿಸಿಎಂ ಪರವಾದ ಶಾಸಕರನ್ನು ಗಮನಿಸಲು ಸಿಎಂರಿಂದ ಗುಪ್ತಚರ ಇಲಾಖೆ ಬಳಕೆ ಆಗ್ತಿದೆ. ಯಾರ್ಯಾರು ಡಿಕೆಶಿ ಪರವಾಗಿದ್ದಾರೋ ಅವರ ಚಲನವಲನ ನೋಡಲು ಎಸ್ಪಿ ನೇತೃತ್ವದ ತಂಡವನ್ನೇ ಮಾಡಿದ್ದಾರೆಂದು ವಿಪಕ್ಷಗಳು ಆರೋಪಿಸಿರೋದು ಈಗ ಚರ್ಚೆಗೆ ಗ್ರಾಸವಾಗಿದೆ.

ಗಾದೆ ಮಾತು ಹೇಳಿ ಸಿಎಂ ಕೌಂಟರ್​

ಈ ಬೆನ್ನಲ್ಲೇ ವಿಪಕ್ಷಗಳ ಆರೋಪದ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಕೌಂಟರ್​​ ಕೊಟ್ಟಿರುವ ಸಿಎಂ, ಇದು ತಾ ಕಳ್ಳ ಇತರರ ನಂಬ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ ಎಂದು ಕುಟುಕಿದ್ದಾರೆ. ವಿಪಕ್ಷ ನಾಯಕರು ನನ್ನ, ಡಿಕೆ ನಡುವೆ ಹುಳಿ ಹಿಂಡಲು ಪ್ರಯತ್ನಿಸ್ತಿದ್ದಾರೆ. ನಮ್ಮ ಹಾಗೂ ಡಿಕೆಶಿ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸಿ ಅವರೊಳಗಿನ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧ ಮೇಲೆ ಯಾವ ಪರಿಣಾಮ ಆಗಲ್ಲ. ಆರೋಪ ಮಾಡಿರುವ ಒಬ್ಬರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು. ಇನ್ನೊಬ್ಬರು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದವರು. ಅವರ ಕಾಲದಲ್ಲೂ ಗುಪ್ತಚರ ವಿಭಾಗ ಮುಖ್ಯಮಂತ್ರಿ ಬಳಿ ಇತ್ತು. ಹೀಗಾಗಿ ತಮ್ಮ ಅನುಭವದ ಬಲದಿಂದಲೇ ಈ ಆರೋಪ ಮಾಡಿದಂತೆ ಕಾಣ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ; ಹೆಚ್​​.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ

ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ಏಕ ಕುಟುಂಬದ ಅಧಿಪತ್ಯ ಇರುವ ಜೆಡಿಎಸ್ ಅಲ್ಲ. ನಮ್ಮ ಶಾಸಕರಲ್ಲಿ ಯಾರೂ ನನ್ನ, ಇಲ್ಲವೇ ಡಿಕೆಶಿ ಬೆಂಬಲಿಗರಲ್ಲ. ಎಲ್ಲರೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಪಕ್ಷದ ಶಿಸ್ತಿನ ಚೌಕಟ್ಟಿನೊಳಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಜೊತೆಯಲ್ಲಿ ಊಟ-ತಿಂಡಿ ಮಾಡುವ ಎಲ್ಲ ಸ್ವಾತಂತ್ರ್ಯ ಅವರಿಗೆ ಇದೆ. ಶಾಸಕರು ಏನೇ ಹೇಳಿದರೂ ಹೈಕಮಾಂಡ್ ಆದೇಶಕ್ಕೆ ತಲೆಬಾಗ್ತೇವೆ. ಶಾಸಕರೂ ಸೇರಿ ನಾನು, ಶಿವಕುಮಾರ್​​ ಹೈಕಮಾಂಡ್ ಆದೇಶಕ್ಕೆ ತಲೆಬಾಗ್ತೇವೆ ಎಂದು ತಿಳಿಸಿದ್ದಾರೆ.

ಸರ್ಕಾರ ನಡೆಸೋದು ನಾವು. ನಮಗೆ ಹೆಚ್ಚಿನ ಮಾಹಿತಿ ಇರುತ್ತೆ, ಅವರಿಗಲ್ಲ ಅಂತ ವಿಪಕ್ಷ ನಾಯಕರ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ ಕೂಡ ತಿರುಗೇಟು ಕೊಟ್ಟಿದ್ದಾರೆ. ವಿಪಕ್ಷದವರಿಗೆ ಯಾರು ಹೇಳಿದ್ದು ಗೂಢಚಾರಿಕೆ, ಫೋನ್ ಟ್ಯಾಪಿಂಗ್‌ ಮಾಡ್ತಿದ್ದಾರೆ ಎಂದು? ಅಂತಹ ಬೆಳವಣಿಗೆ ಯಾವುದೂ ನಡೆಯುತ್ತಿಲ್ಲ. ನಮ್ಮ ಗಮನಕ್ಕೆ ಅಧಿಕೃತವಾಗಿ ಆತರಹದ್ದು ಯಾವುದೂ ಇಲ್ಲ. ಪೊಲಿಟಿಕಲ್ ಇಂಟಲಿಜೆನ್ಸ್ ಅನ್ನೋ ಪ್ರತ್ಯೇಕ ವಿಭಾಗವೇ ಇದೆ. ಅದರ ಮೂಲಕ ಸಿಎಂಗೆ ಮಾಹಿತಿ ಸಹಜವಾಗಿ ನಿತ್ಯ ಹೋಗುತ್ತೆ. ನಿರ್ದಿಷ್ಟವಾಗಿ ಯಾವ ಮಾಹಿತಿ ಬೇಕು ಅನ್ನೋದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಹೀಗಿದ್ದರೂ ಈ ವಿಚಾರ ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂದೆ ಇದು ಯಾವ ಸ್ವರೂಪ ಪಡೆಯುತ್ತೆ ಎಂದು ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link