Category Archives: Blog

Your blog category

ಇಂದು 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಸ್ಥಾನಗಳಿಗೆ ಅವಿರೋಧ ಆಯ್ಕೆ; ಮತ್ತಷ್ಟು ಭದ್ರವಾಗಲಿದೆ ಬಿಜೆಪಿ ಸ್ಥಾನ

ಇಂದು 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಸ್ಥಾನಗಳಿಗೆ ಅವಿರೋಧ ಆಯ್ಕೆ; ಮತ್ತಷ್ಟು ಭದ್ರವಾಗಲಿದೆ ಬಿಜೆಪಿ ಸ್ಥಾನ

ನವದೆಹಲಿ, ಮಾರ್ಚ್ 16: ಇಂದು ಸೋಮವಾರ 10 ರಾಜ್ಯಗಳಲ್ಲಿನ 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ (Rajya Sabha polls) ನಡೆಯುತ್ತಿದೆ. ಈ ಪೈಕಿ ಏಳು ರಾಜ್ಯಗಳ 26 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲಿದ್ದಾರೆ. ಉಳಿದ 11 ಅಭ್ಯರ್ಥಿಗಳ ಆಯ್ಕೆಯು ಮತದಾನದ ಮೂಲಕ ನಿರ್ಧಾರ ಆಗಲಿದೆ. ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಆಗಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.

ಚುನಾವಣೆ ಎದುರಿಸುತ್ತಿರುವ 37 ರಾಜ್ಯಸಭಾ ಸ್ಥಾನಗಳು

  • ಮಹಾರಾಷ್ಟ್ರ: 7
  • ತಮಿಳುನಾಡು: 6
  • ಪಶ್ಚಿಮ ಬಂಗಾಳ: 5
  • ಬಿಹಾರ: 5
  • ಒಡಿಶಾ: 4
  • ಅಸ್ಸಾಂ: 3
  • ಛತ್ತೀಸ್​ಗ: 2
  • ಹರ್ಯಾಣ: 2
  • ತೆಲಂಗಾಣ: 2
  • ಹಿಮಾಚಲಪ್ರದೇಶ: 1

ಇದನ್ನೂ ಓದಿ: ಒಡಿಶಾದ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; 10 ರೋಗಿಗಳು ಬಲಿ

ರಾಜ್ಯಸಭೆಯಲ್ಲಿ ಬಿಜೆಪಿ ಬಲ ಹೆಚ್ಚಲಿದೆ

234 ಸದಸ್ಯಬಲದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟ 134 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಬಳಿ 80 ಸದಸ್ಯಬಲ ಇದೆ. ವಿವಿಧ ಮಸೂದೆಗಳ ಅನುಮೋದನೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹೆಚ್ಚಿನ ಸದಸ್ಯಬಲ ಇರುವುದು ಅಗತ್ಯ. ಇವತ್ತಿನ ರಾಜ್ಯಸಭಾ ಚುನಾವಣೆ ಬಳಿಕ ಮೇಲ್ಮನೆಯಲ್ಲಿ ಎನ್​ಡಿಎ ಸದಸ್ಯಬಲ ಮತ್ತಷ್ಟು ಏರಿಕೆ ಆಗಲಿದೆ.

ರಾಜ್ಯಸಭಾ ಚುನಾವಣೆ ಆಗಲಿರುವ 10 ರಾಜ್ಯಗಳಲ್ಲಿ ಏಳು ರಾಜ್ಯಗಳ 26 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಬಹುದು. ಅಲ್ಲಿ ಮತದಾನದ ಅವಶ್ಯಕತೆ ಇರುವುದಿಲ್ಲ. ಶರದ್ ಪವಾರ್, ರಾಮದಾಸ್ ಆಥಾವಳೆ, ತಂಬಿದುರೈ, ಬಾಬುಲ್ ಸುಪ್ರಿಯೋ, ವಿನೋದ್ ತಾವಡೆ, ಅಭಿಷೇಕ್ ಮನು ಸಿಂಘ್ವಿ ಮೊದಲಾದವರು ಅವಿರೋಧವಾಗಿ ರಾಜ್ಯಸಭೆಗೆ ಪ್ರವೇಶ ಮಾಡಲಿದ್ದಾರೆ.

ಒಡಿಶಾ, ಬಿಹಾರ ಮತ್ತು ಹರ್ಯಾಣದಲ್ಲಿ ಪೈಪೋಟಿ

ಒಡಿಶಾ, ಬಿಹಾರ ಮತ್ತು ಹರ್ಯಾಣ ರಾಜ್ಯಗಳಲ್ಲಿನ 11 ರಾಜ್ಯಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯಬಹುದು. ಬಿಹಾರದಲ್ಲಿ ಐದು ಸ್ಥಾನಗಳಿವೆ. ಇದರಲ್ಲಿ ನಾಲ್ಕು ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಜೆಡಿಯುನ ನಿತೀಶ್ ಕುಮಾರ್ ಮತ್ತು ರಾಮನಾಥ್ ಠಾಕೂರ್, ಬಿಜೆಪಿಯ ನಿತಿನ್ ನಬಿನ್ ಮತ್ತು ಶಿವಂ ಕುಮಾರ್ ಗೆಲ್ಲುವ ನಿರೀಕ್ಷೆ ಇದೆ. ಐದನೇ ಸ್ಥಾನಕ್ಕೆ ಎನ್​ಡಿಎನ ಉಪೇಂದ್ರ ಖುಶವಾಹ ಮತ್ತು ವಿಪಕ್ಷಗಳ ಎಡಿ ಸಿಂಗ್ ನಡುವೆ ಪೈಪೋಟಿ ಇರುತ್ತದೆ.

ಇದನ್ನೂ ಓದಿ: ಏಪ್ರಿಲ್ 1ರಿಂದ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಶುಲ್ಕದಲ್ಲಿ ಏರಿಕೆ; ಇಲ್ಲಿದೆ ಹೊಸ ದರ

ಒಡಿಶಾದಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಬಿಜೆಪಿಯ ಇಬ್ಬರು ಮತ್ತು ಬಿಜೆಡಿಯ ಒಬ್ಬರ ಗೆಲುವು ಖಾತ್ರಿ ಇದೆ. ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಇದೆ.

ಹರ್ಯಾಣದಲ್ಲಿ ಎರಡು ಸ್ಥಾನ ಇದೆ. ಬಿಜೆಪಿಯ ಸಂಜಯ್ ಭಾಟಿಯಾ ಗೆಲುವು ಖಾತ್ರಿ ಇದೆ. ಎರಡನೇ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ಪೈಪೋಟಿ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬನ್ನೇರುಘಟ್ಟ ಝೂಗೆ ಹೊಸ ಅತಿಥಿಗಳ ಆಗಮನ: ಇಲ್ಲಿದೆ ವಿಡಿಯೋ

ಆನೇಕಲ್, ಮಾರ್ಚ್ 16: ಬೆಂಗಳೂರಿನ ಸಮೀಪದ ಬನ್ನೇರುಘಟ್ಟ ಮೃಗಾಲಯದಲ್ಲಿ (Bannerghatta Biological Park) ಹೊಸ ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ ನಿರ್ಮಾಣವಾಗಿದೆ. ಉದ್ಯಾನವನದಲ್ಲಿರುವ ಎರಡು ಜೀಬ್ರಾಗಳು ಮರಿಗಳಿಗೆ ಜನ್ಮ ನೀಡಿದ್ದು, ಪ್ರಾಣಿ ಪ್ರಿಯರಲ್ಲಿ ಸಂತೋಷ ಮೂಡಿಸಿದೆ. ಉದ್ಯಾನವನದಲ್ಲಿರುವ ಕೋಕಿಲ ಎಂಬ ಜೀಬ್ರಾ ಹೆಣ್ಣು ಮರಿಗೆ ಜನ್ಮ ನೀಡಿದ್ದು, ಕಾವೇರಿ ಎಂಬ ಮತ್ತೊಂದು ಜೀಬ್ರಾ ಕೂಡ ಹೆಣ್ಣು ಮರಿಗೆ ಜನ್ಮ ನೀಡಿದೆ. ಈ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಜೀಬ್ರಾಗಳ ಸಂಖ್ಯೆ ಇದೀಗ 9ಕ್ಕೆ ಏರಿಕೆಯಾಗಿದೆ.

ಪ್ರಸ್ತುತ ಉದ್ಯಾನವನದಲ್ಲಿರುವ ಜೀಬ್ರಾಗಳಲ್ಲಿ ಹೆಣ್ಣು ಜೀಬ್ರಾಗಳೇ ಹೆಚ್ಚು ಇದ್ದು, ಹೊಸ ಮರಿಗಳ ಆರೋಗ್ಯದ ಮೇಲೂ ಸಿಬ್ಬಂದಿ ವಿಶೇಷ ಕಾಳಜಿ ವಹಿಸಿದ್ದಾರೆ. ಈ ಮರಿಗಳು ಆರೋಗ್ಯವಾಗಿದ್ದು, ತಾಯಿ ಜೀಬ್ರಾಗಳ ಜೊತೆಗೆ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಕೆಲವು ಜೀಬ್ರಾಗಳನ್ನು ಇತರ ಉದ್ಯಾನವನಗಳಿಗೆ ನೀಡುವ ಮೂಲಕ ಬೇರೆ ಅಪರೂಪದ ಪ್ರಾಣಿಗಳನ್ನು ತರಲು ಕೂಡ ಚಿಂತನೆ ನಡೆಸಲಾಗಿದೆ ಎಂದು ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಸೇನ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಈ ಬಾರಿಯ ಐಪಿಎಲ್​ನಲ್ಲಿ RCBಗೆ ‘ಗೋಲ್ಡನ್’ ಗೌರವ!

Source link

ಬೆಂಗಳೂರು: ಪಿಂಕ್ ಲೈನ್ ಮೆಟ್ರೋಗೆ ಬಂತು ನಾಲ್ಕನೇ ರೈಲು, ಮೇನಲ್ಲಿ ಸಂಚಾರ ನಿರೀಕ್ಷೆ

ಬೆಂಗಳೂರು, ಮಾರ್ಚ್ 16: ನಮ್ಮ ಮೆಟ್ರೋ (Namma Metro) ವಿಸ್ತರಣೆಗೆ ಮತ್ತೊಂದು ಹೆಜ್ಜೆ ಇಟ್ಟಿರುವ ಬಿಎಂಆರ್​ಸಿಎಲ್ (BMRCL) ಮೇ ತಿಂಗಳಲ್ಲಿ ಪಿಂಕ್ ಲೈನ್‌ನಲ್ಲಿ ಕಾರ್ಯಾಚರಣೆ ಶುರು ಮಾಡಲು ಸಿದ್ಧತೆ ಶುರುಮಾಡಿದೆ. ಪಿಂಕ್ ಲೈನ್‌ ಮೆಟ್ರೋಗಾಗಿ ನಾಲ್ಕನೇ ರೈಲು ಭಾನುವಾರ ಬಂದಿಳಿದಿದೆ. ಆರು ಕೋಚ್‌ಗಳಿರುವ ಈ ಹೊಸ ರೈಲು ಸೆಟ್‌ ಅನ್ನು ಮಾರ್ಚ್‌ 13ರಂದು ಬಿಇಎಂಎಲ್ ಸಂಸ್ಥೆಯ ನ್ಯೂ ತಿಪ್ಪಸಂದ್ರ ಘಟಕದಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕೊತ್ತನೂರು ಡಿಪೋಗೆ ತರಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈಲನ್ನು ಪ್ರಸ್ತುತ ಕೊತ್ತನೂರು ಡಿಪೋದಲ್ಲಿನ ಇನ್ಸ್‌ಪೆಕ್ಷನ್ ಬೇ ಲೈನ್ (IBL) ಗೆ ಸ್ಥಳಾಂತರಿಸಿ ಅಗತ್ಯ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಪರೀಕ್ಷೆಗಳು ಮತ್ತು ನಿಯಮಾನುಸಾರ ಅನುಮತಿ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ರೈಲು ಸೇವೆಗೆ ಸಿದ್ಧವಾಗಲಿದೆ.

ಪಿಂಕ್ ಲೈನ್‌ನ ಮೊದಲ ರೈಲನ್ನು ಬಿಇಎಂಎಲ್ ಸಂಸ್ಥೆ 2025ರ ಡಿಸೆಂಬರ್‌ 11ರಂದು ಬಿಡುಗಡೆ ಮಾಡಿತ್ತು. ಬಳಿಕ ಫೆಬ್ರವರಿಯಲ್ಲಿ ಇನ್ನೂ ಎರಡು ರೈಲುಗಳನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಿತ್ತು. ಈಗ ನಾಲ್ಕನೇ ರೈಲು ಕೂಡ ಬಂದಿರುವುದರಿಂದ ಪಿಂಕ್ ಲೈನ್ ಸೇವೆ ಆರಂಭದ ಸಿದ್ಧತೆಗಳು ವೇಗ ಪಡೆದುಕೊಂಡಿವೆ.

ಸುಮಾರು 7.5 ಕಿಲೋಮೀಟರ್ ಉದ್ದದ ಕಾಳೇನ ಅಗ್ರಹಾರ – ತಾವರೆಕೆರೆಯ ಪಿಂಕ್ ಲೈನ್ ಮಾರ್ಗದಲ್ಲಿ ಮೇ ತಿಂಗಳಲ್ಲಿ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.

ನೇರಳೆ ಮತ್ತು ಹಸಿರು ಮಾರ್ಗಗಳ ಪ್ರಯಾಣಿಕರಿಗೂ ಗುಡ್ ನ್ಯೂಸ್

ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿನ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಕೂಡ ಕ್ರಮ ಕೈಗೊಳ್ಳಲಾಗಿದೆ. ಕೋಲ್ಕತ್ತಾ ಮೂಲದ ಟಿಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆ ಪರ್ಪಲ್ ಹಾಗೂ ಗ್ರೀನ್ ಲೈನ್‌ಗಳಿಗಾಗಿ ಎರಡನೇ ಡಿಟಿಜಿ ರೈಲು ಸೆಟ್‌ ಅನ್ನು ಕಳುಹಿಸಿದೆ. ಈ ರೈಲಿನ ಮೂರು ಕೋಚ್‌ಗಳನ್ನು ಮಾರ್ಚ್‌ 13ರಂದು ಕಳುಹಿಸಲಾಗಿದ್ದು, ಉಳಿದ ಮೂರು ಕೋಚ್‌ಗಳು ಮರುದಿನ ರಾತ್ರಿ ರವಾನೆಯಾಗಿವೆ. ಈ ರೈಲು ಈ ತಿಂಗಳ ಅಂತ್ಯದೊಳಗೆ ಪೀಣ್ಯಾ ಡಿಪೋ ತಲುಪುವ ಸಾಧ್ಯತೆ ಇದೆ.

ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಮದ್ಯಪ್ರಿಯರಿಗೆ ಶೀಘ್ರವೇ ಗುಡ್​​ನ್ಯೂಸ್​? ಸೀಲ್ಡ್ ಲಿಕ್ಕರ್​​ ಬಾಟಲ್​​ ಸಾಗಾಟಕ್ಕೆ ಅನುಮತಿ?

ಈ ಎರಡು ಹೊಸ ರೈಲುಗಳು ಮೇ–ಜೂನ್ ವೇಳೆಗೆ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಸಂಚಾರ ಶುರು ಮಾಡುವ ನಿರೀಕ್ಷೆ ಇದೆ. ಇದರಿಂದ ಪೀಕ್ ಅವಧಿಯಲ್ಲಿ ಮೆಟ್ರೋದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಒಟ್ಟು 57 ರೈಲುಗಳು ಸಂಚಾರ ಮಾಡುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೀ5 ಅಲ್ಲಿ ಬರ್ತಿದೆ ಹೊಸ ವೆಬ್ ಸರಣಿ; ಡಾಲಿ ನಿರ್ಮಾಣ

ಡಾಲಿ ಧನಂಜಯ್ ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ನಟನೆಯ ಜೊತೆಗೆ ಸಿನಿಮಾ ನಿರ್ಮಾಣ ಕೆಲಸಗಳಲ್ಲೂ ಅವರು ತೊಡಗಿಕೊಂಡಿದ್ದು, ಹೊಸ ಮುಖಗಳಿಗೆ ಮಣೆ ಹಾಕುತ್ತಿದ್ದಾರೆ. ಈಗ ಅವರ ಕಡೆಯಿಂದ ಹೊಸ ಸುದ್ದಿ ಒಂದು ಸಿಗುವ ಸೂಚನೆ ಸಿಕ್ಕಿದೆ. ಜೀ5 ಅಲ್ಲಿ ಕನ್ನಡದ ಹೊಸ ಸರಣಿ ಬರುತ್ತಿದ್ದು, ಇದಕ್ಕೆ ಡಾಲಿ ನಿರ್ಮಾಣ ಇದೆ ಎನ್ನಲಾಗಿದೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಳಗಾವಿ, ಹುಬ್ಬಳ್ಳಿ ಸೇರಿ ಹಲವೆಡೆ ಏರ್ ಕ್ವಾಲಿಟಿ ಸುಧಾರಣೆ!

ಬೆಂಗಳೂರು, ಮಾರ್ಚ್​ 16: ಹಲವಾರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿತ್ತು. ಆದರೆ ಇಂದು ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದಂತಿದೆ. ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150 ದಾಟಿದೆ. ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ತಿಂಗಳು ಪೂರ್ತಿ ಇದೇ ವಾತಾವರಣ ಇರಲಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 158ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಹುಬ್ಬಳ್ಳಿ, ಬೆಳಗಾವಿ ಸೇರಿ ಹಲವೆಡೆ ಏರ್ ಕ್ವಾಲಿಟಿ 100ಕ್ಕಿಂತ ಕಡಿಮೆ ಇದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –158
  • ಮಂಗಳೂರು-150
  • ಮೈಸೂರು –151
  • ಬೆಳಗಾವಿ – 76
  • ಕಲಬುರ್ಗಿ-119
  • ಶಿವಮೊಗ್ಗ – 158
  • ಬಳ್ಳಾರಿ – 178
  • ಹುಬ್ಬಳ್ಳಿ- 97
  • ಉಡುಪಿ –158
  • ವಿಜಯಪುರ –80

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಒಡಿಶಾದ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; 10 ರೋಗಿಗಳು ಬಲಿ

ಕಟಕ್, ಮಾರ್ಚ್ 16: ಒಡಿಶಾದ ಕಟಕ್ ನಗರದಲ್ಲಿರುವ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡವೊಂದು ಸಂಭವಿಸಿದ್ದು, 10 ರೋಗಿಗಳು ಬಲಿಯಾಗಿದ್ದಾರೆ. 11ಕ್ಕೂ ಹೆಚ್ಚು ಆಸ್ಪತ್ರೆ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಎಸ್​ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ (SCB Medical College & Hospital) ಈ ದುರಂತ ಸಂಭವಿಸಿರುವುದು ವರದಿಯಾಗಿದೆ. ಮಧ್ಯರಾತ್ರಿಯ ನಂತರ 2:30ರಿಂದ 3 ಗಂಟೆಯ ಸಮಯದಲ್ಲಿ ಈ ಅಗ್ನಿ ಅಪಘಾತವಾಗಿರುವುದು (Fire Accident) ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿರಬಹುದು ಎಂದು ಸದ್ಯ ಶಂಕಿಸಲಾಗಿದೆ.

ಆಸ್ಪತ್ರೆಯ ಟ್ರಾಮಾ ಕೇರ್ ವಿಭಾಗದ ಐಸಿಯುನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಗಂಭೀರವಾಗಿ ಗಾಯಗೊಂಡಿರುವ ರೋಗಿಗಳು ಈ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಘಟನೆಯಲ್ಲಿ ಐಸಿಯುನಲ್ಲಿದ್ದ 10 ರೋಗಿಗಳು ಬಲಿಯಾಗಿದ್ದಾರೆ. ಅವರನ್ನು ರಕ್ಷಿಸಲು ಯತ್ನಿಸಿದ ಸಿಬ್ಬಂದಿ ಪೈಕಿ 11 ಮಂದಿಗೆ ಗಾಯಗಳಾಗಿವೆ.

ಘಟನೆ ಬಗ್ಗೆ ಎಎನ್​ಐ ಸುದ್ದಿಸಂಸ್ಥೆ ವರದಿ

ಬೆಂಕಿ ಅವಘಡ ಸಂಭವಿಸಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಕೂಡ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಐಸಿಯುನಲ್ಲಿದ್ದ ಇತರ ರೋಗಿಗಳನ್ನು ಆಸ್ಪತ್ರೆಯ ಬೇರೆ ವಾರ್ಡ್​ಗಳಿಗೆ ಶಿಫ್ಟ್ ಮಾಡಲಾಗಿದೆ. ಒಟ್ಟು 23 ರೋಗಿಗಳನ್ನು ಬೇರೆಡೆ ವರ್ಗಾಯಿಸಲಾಗಿದೆ. ಹೀಗೆ ಬೇರೆಡೆ ಸಾಗಿಸುವ ಹಂತದಲ್ಲಿ 7 ಮಂದಿ ರೋಗಿಗಳು ಅಸುನೀಗಿದ್ದಾರೆ. ಮೂರು ರೋಗಿಗಳು ನಂತರ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಏಪ್ರಿಲ್ 1ರಿಂದ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಶುಲ್ಕದಲ್ಲಿ ಏರಿಕೆ; ಇಲ್ಲಿದೆ ಹೊಸ ದರ

ಮೃತರ ಕುಟುಂಬಗಳಿಗೆ 25 ಲಕ್ಷ ರೂ ಪರಿಹಾರ ಘೋಷಣೆ

ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಆರೋಗ್ಯ ಸಚಿವ ಮುಕೇಶ್ ಮಹಾಲಿಂಗ್ ಅವರು ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಮೃತಪಟ್ಟಿರುವ ರೋಗಿಗಳ ಸಂಬಂಧಿಕರಿಗೆ 25 ಲಕ್ಷ ರೂ ಪರಿಹಾರವನ್ನು ಸಿಎಂ ಘೋಷಿಸಿದ್ದಾರೆ. ಹಾಗೆಯೇ, ಗಾಯಗೊಂಡಿರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

550 ಕೋಟಿ ರೂಪಾಯಿ ಒಡತಿ ಆಲಿಯಾ ಭಟ್; ಗಳಿಕೆ ಹೇಗೆ?

ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಕರಣ್ ಜೋಹರ್ ಪರಿಚಯಿಸಿದ ಆಲಿಯಾ ಭಟ್ ಇಂದು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕರಣ್ ಜೋಹರ್ ನಿರ್ದೇಶನದ ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಆಲಿಯಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ನಂತರ ಆಲಿಯಾ ಹಿಂತಿರುಗಿ ನೋಡಿಲ್ಲ. ಇಂದು ಆಲಿಯಾ ಬಾಲಿವುಡ್‌ನ ಪ್ರಸಿದ್ಧ ಮತ್ತು ಜನಪ್ರಿಯ ನಟಿಯರಲ್ಲಿ ಒಬ್ಬರು. ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ನಂತರ, ನಟಿ ‘2 ಸ್ಟೇಟ್ಸ್’, ‘ಹೈವೇ’, ‘ಡಿಯರ್ ಜಿಂದಗಿ’, ‘ರಾಝಿ’, ‘ಗಲ್ಲಿ ಬಾಯ್’ ಮತ್ತು ‘ಗಂಗೂಬಾಯಿ ಕಥಿಯಾವಾಡಿ’ ಮುಂತಾದ ಚಿತ್ರಗಳಲ್ಲಿ ನಟಿಸಿ ಫೇಮಸ್ ಆದರು. ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.

ಆಲಿಯಾ ಬಹಳ ಕಡಿಮೆ ಸಮಯದಲ್ಲಿ ಉದ್ಯಮದಲ್ಲಿ ಹೆಸರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಅವರ ಅಭಿಮಾನಿಗಳ ಸಂಖ್ಯೆಯೂ ಕಡಿಮೆಯಿಲ್ಲ. ಆಲಿಯಾ ಅವರ ಸಂಪತ್ತಿನ ಬಗ್ಗೆ ಹೇಳುವುದಾದರೆ, ನಟಿ 550 ಕೋಟಿ ರೂ ಆಸ್ತಿ ಒಡತಿ. ಆಲಿಯಾ ಚಲನಚಿತ್ರಗಳಿಂದ ಮಾತ್ರವಲ್ಲದೆ ಇತರ ಮಾರ್ಗಗಳಿಂದಲೂ ಕೋಟಿ ಗಳಿಸುತ್ತಾರೆ.

ಆಲಿಯಾ ಒಂದು ಚಿತ್ರಕ್ಕೆ 10 ರಿಂದ 20 ಕೋಟಿ ರೂಪಾಯಿಗಳಷ್ಟು ಸಂಭಾವನೆ ಪಡೆಯುತ್ತಾರೆ… ಆರ್‌ಆರ್‌ಆರ್ ಚಿತ್ರದಲ್ಲಿ ಕೇವಲ 20 ನಿಮಿಷಗಳ ದೃಶ್ಯಕ್ಕೆ ಆಲಿಯಾ 9 ಕೋಟಿ ರೂಪಾಯಿಗಳನ್ನು ಸಂಭಾವನೆ ಪಡೆದಿದ್ದರು… ಇದಲ್ಲದೆ, ಆಲಿಯಾ ವೆಬ್ ಸರಣಿಗಳಲ್ಲಿ ನಟಿಸಿ ಭಾರಿ ಮೊತ್ತದ ಆದಾಯವನ್ನು ಗಳಿಸುತ್ತಾರೆ. ವಿವಿಧ ಜಾಹೀರಾತುಗಳ ಮೂಲಕವೂ ಆಲಿಯಾ ದೊಡ್ಡ ಮೊತ್ತವನ್ನು ಗಳಿಸುತ್ತಾರೆ.

ಆಲಿಯಾ ತನ್ನದೇ ಆದ ಬಟ್ಟೆ ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ. ‘ಎಡ್-ಎ-ಮಮ್ಮಾ’ ಎಂಬುದು ಆಲಿಯಾಳ ಬ್ರ್ಯಾಂಡ್‌ನ ಹೆಸರು. ಆಲಿಯಾಳ ಬಟ್ಟೆ ಬ್ರಾಂಡ್ 2 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಮಾತ್ರ. ಸಾಕಾಷ್ಟು ಆದಾಯವನ್ನು ಇದು ಗಳಿಸುತ್ತದೆ. ಆಲಿಯಾ ಯಾವಾಗಲೂ ತನ್ನ ಬ್ರ್ಯಾಂಡ್ ಬಗ್ಗೆ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: ಆಲಿಯಾ ಭಟ್ ಮೇಲೆ ನಂಬಿಕೆ 215 ಕೋಟಿ ಆಫರ್ ತಿರಸ್ಕರಿಸಿದ ವೈಆರ್​ಎಫ್

ಆಲಿಯಾ ಅವರ ಆಸ್ತಿಗಳ ಬಗ್ಗೆ ಹೇಳುವುದಾದರೆ, ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ, ಆಲಿಯಾ ಅವರಿಗೆ ಕೋಟ್ಯಂತರ ಮೌಲ್ಯದ ಆಸ್ತಿಗಳಿವೆ. ಆಲಿಯಾ ಲಂಡನ್‌ನ ಕೋವೆಂಟ್ ಗಾರ್ಡನ್ ಪ್ರದೇಶದಲ್ಲಿ ಒಂದು ಮನೆಯನ್ನು ಹೊಂದಿದ್ದಾರೆ ಮತ್ತು ಆ ಮನೆಯ ಬೆಲೆ 25 ಕೋಟಿ ರೂ. ಇದಲ್ಲದೆ, ನಟಿ ಮುಂಬೈನ ಬಾಂದ್ರಾದಲ್ಲಿ ಒಂದು ಬಂಗಲೆಯನ್ನು ಹೊಂದಿದ್ದಾರೆ. ಬಂಗಲೆಯ ಬೆಲೆ 32 ಕೋಟಿ ರೂ. ನಟಿ ಬಳಿ ಅನೇಕ ಐಷಾರಾಮಿ ಕಾರುಗಳಿವೆ. ಅವುಗಳಲ್ಲಿ ಆಡಿ Q7, BMW 7 ಸರಣಿ, ರೇಂಜ್ ರೋವರ್ ವೋಗ್, ಮರ್ಸಿಡಿಸ್-ಬೆನ್ಜ್ GLS, ಆಡಿ A6 ಸೇರಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಸಿಸಿಐ ‘ನಮನ್’ ಪ್ರಶಸ್ತಿ ಪಡೆದ ಕ್ರಿಕೆಟಿಗರ ಸಂಪೂರ್ಣ ಪಟ್ಟಿ ಇಲ್ಲಿದೆ

ದೆಹಲಿಯಲ್ಲಿ ಭಾನುವಾರ (ಮಾರ್ಚ್ 15) ನಡೆದ ಸಮಾರಂಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ವಾರ್ಷಿಕ ನಮನ್ ಪ್ರಶಸ್ತಿಗಳನ್ನು ಪ್ರಧಾನ ಮಾಡಿದೆ. ಈ ಸಮಾರಂಭದಲ್ಲಿ ದಿಗ್ಗಜ ರಾಹುಲ್ ದ್ರಾವಿಡ್​ ಅವರಿಗೆ ಪ್ರತಿಷ್ಠಿತ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇನ್ನು ಭಾರತ ಟೆಸ್ಟ್ ತಂಡದ ನಾಯಕ ಶುಭ್​ಮನ್ ಗಿಲ್, ಟೀಮ್ ಇಂಡಿಯಾ ಬ್ಯಾಟರ್​ ಸ್ಮೃತಿ ಮಂಧಾನ ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಕೆಳಗಿನಂತಿದೆ…

2025ರ ನಮನ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:

  1. 2024-25ರ ಅತ್ಯುತ್ತಮ ಮಹಿಳಾ ಆಟಗಾರ್ತಿ (ಜೂನಿಯರ್ – ದೇಶೀಯ) – ಇರಾ ಜಾಧವ್
  2. 2024-25ರ ಅತ್ಯುತ್ತಮ ಮಹಿಳಾ ಕ್ರಿಕೆಟಿಗ (ಸೀನಿಯರ್ – ದೇಶೀಯ ವುಮೆನ್ಸ್ ಒನ್ ಡೇ) – ಶಫಾಲಿ ವರ್ಮಾ
  3. 2024-25ರ ವಿಜಯ್ ಮರ್ಚೆಂಟ್ ಟ್ರೋಫಿಯ ಅತ್ಯುತ್ತಮ ಬೌಲರ್ – (ಎಲೈಟ್ ಗ್ರೂಪ್) – ಯಶ್ವರ್ಧನ್ ಸಿಂಗ್ ಚೌಹಾಣ್
  4. 2024-25ರ ವಿಜಯ್ ಮರ್ಚೆಂಟ್ ಟ್ರೋಫಿಯ ಅತ್ಯುತ್ತಮ ಬೌಲರ್ – (ಪ್ಲೇಟ್ ಗ್ರೂಪ್) – ಕಿಶನ್ ಸರ್ಕಾರ್
  5. 2024-25ರ ವಿಜಯ್ ಮರ್ಚೆಂಟ್ ಟ್ರೋಫಿಯ ಅತ್ಯುತ್ತಮ ಬ್ಯಾಟರ್ – (ಎಲೈಟ್ ಗ್ರೂಪ್) – ಶಾಂತನು ಸಿಂಗ್
  6. 2024-25ರ ವಿಜಯ್ ಮರ್ಚೆಂಟ್ ಟ್ರೋಫಿಯ ಅತ್ಯುತ್ತಮ ಬ್ಯಾಟರ್ – (ಪ್ಲೇಟ್ ಗ್ರೂಪ್) – ಪ್ರೀತಮ್ ರಾಜ್
  7. 2024-25 ರ ಕೂಚ್ ಬೆಹಾರ್ ಟ್ರೋಫಿಯ ಅತ್ಯುತ್ತಮ ಬೌಲರ್​ – (ಎಲೈಟ್ ಗ್ರೂಪ್) – ಹೇಮಚುದೇಷನ್ ಜೆ.
  8. 2024-25 ರ ಕೂಚ್ ಬೆಹಾರ್ ಟ್ರೋಫಿಯ ಅತ್ಯುತ್ತಮ ಬೌಲರ್ – (ಪ್ಲೇಟ್ ಗ್ರೂಪ್) – ಅರ್ಕಾಜಿತ್ ರಾಯ್
  9. 2024-25 ರ ಕೂಚ್ ಬೆಹಾರ್ ಟ್ರೋಫಿಯ ಅತ್ಯುತ್ತಮ ಬ್ಯಾಟರ್ – (ಎಲೈಟ್ ಗ್ರೂಪ್) – ನಿತ್ಯ ಜೆ ಪಾಂಡ್ಯ
  10. 2024-25 ರ ಕೂಚ್ ಬೆಹಾರ್ ಟ್ರೋಫಿಯ ಅತ್ಯುತ್ತಮ ಬ್ಯಾಟರ್ – (ಪ್ಲೇಟ್ ಗ್ರೂಪ್) – ರಾಗವನ್ ರಾಮಮೂರ್ತಿ
  11. 2024-25ರಲ್ಲಿ ಕರ್ನಲ್ ಸಿಕೆ ನಾಯ್ಡು ಟ್ರೋಫಿಯ ಅತ್ಯುತ್ತಮ ಬೌಲರ್ – (ಎಲೈಟ್ ಗ್ರೂಪ್) – ವಿಕಿ ಓಸ್ಟ್ವಾಲ್
  12. 2024-25ರ ಕರ್ನಲ್ ಸಿಕೆ ನಾಯ್ಡು ಟ್ರೋಫಿಯ ಅತ್ಯುತ್ತಮ ಬೌಲರ್ – (ಪ್ಲೇಟ್ ಗ್ರೂಪ್) – ದೀಪ್ ಜ್ಯೋತಿ ಸೈಕಿಯಾ
  13. 2024-25ರ ಕರ್ನಲ್ ಸಿಕೆ ನಾಯ್ಡು ಟ್ರೋಫಿಯ ಅತ್ಯುತ್ತಮ ಬ್ಯಾಟರ್ – (ಎಲೈಟ್ ಗ್ರೂಪ್) – ಮ್ಯಾಕ್ನೀಲ್ ಎಚ್ಎನ್
  14. 2024-25ರಲ್ಲಿ ಕರ್ನಲ್ ಸಿಕೆ ನಾಯ್ಡು ಟ್ರೋಫಿಯ ಅತ್ಯುತ್ತಮ ಬ್ಯಾಟರ್ – (ಪ್ಲೇಟ್ ಗ್ರೂಪ್) – ಆರ್ ಜಶ್ವಂತ್ ಶ್ರೀರಾಮ್
  15. 2024-25ರ ರಣಜಿ ಟ್ರೋಫಿಯ ಅತ್ಯುತ್ತಮ ಬೌಲರ್ – (ಎಲೈಟ್ ಗ್ರೂಪ್) – ಹರ್ಷ್ ದುಬೆ
  16. 2024-25ರ ರಣಜಿ ಟ್ರೋಫಿಯ ಅತ್ಯುತ್ತಮ ಬೌಲರ್ – (ಪ್ಲೇಟ್ ಗ್ರೂಪ್) – ಜಗದೀಶ್ ಸುಚಿತ್
  17. 2024-25ರ ರಣಜಿ ಟ್ರೋಫಿಯ ಅತ್ಯುತ್ತಮ ಬ್ಯಾಟರ್ – (ಎಲೈಟ್ ಗ್ರೂಪ್) – ಯಶ್ ರಾಥೋಡ್
  18. 2024-25ರ ರಣಜಿ ಟ್ರೋಫಿಯ ಅತ್ಯುತ್ತಮ ಬ್ಯಾಟರ್ – (ಪ್ಲೇಟ್ ಗ್ರೂಪ್) – ಸ್ನೇಹಲ್ ಕೌತಂಕರ್
  19. 2024-25ರ ದೇಶೀಯ ಸೀಮಿತ ಓವರ್‌ಗಳ ಟೂರ್ನಿಯ ಅತ್ಯುತ್ತಮ ಆಲ್-ರೌಂಡರ್ – ಆಯುಷ್ ಮ್ಹಾತ್ರೆ
  20. 2024-25ರ ರಣಜಿ ಟ್ರೋಫಿಯ ಅತ್ಯುತ್ತಮ ಆಲ್-ರೌಂಡರ್ – ಹರ್ಷ್ ದುಬೆ
  21. 2024-25ರ ಬಿಸಿಸಿಐ ದೇಶೀಯ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ – ಮುಂಬೈ ಕ್ರಿಕೆಟ್ ಅಸೋಸಿಯೇಷನ್
  22. 2024-25ರ ದೇಶೀಯ ಕ್ರಿಕೆಟ್‌ನ ಅತ್ಯುತ್ತಮ ಅಂಪೈರ್ – ಉಲ್ಹಾಸ್ ಗಾಂಧೆ
  23. 2024-25ರ ಮಹಿಳಾ ಏಕದಿನ ಕ್ರಿಕೆಟ್​ನ ಅತ್ಯುತ್ತಮ ಬೌಲರ್ – ದೀಪ್ತಿ ಶರ್ಮಾ
  24. 2024-25ರ ಮಹಿಳಾ ಏಕದಿನ ಕ್ರಿಕೆಟ್​ನ ಅತ್ಯುತ್ತಮ ಬ್ಯಾಟರ್- ಸ್ಮೃತಿ ಮಂಧಾನ
  25. 2024-25 ರ ಅತ್ಯುತ್ತಮ ಪಾದಾರ್ಪಣೆ  (ಮಹಿಳಾ ತಂಡ) – ಎನ್. ಶ್ರೀ ಚರಣಿ
  26. 2024-25 ರ ಅತ್ಯುತ್ತಮ ಪಾದಾರ್ಪಣೆ – (ಪುರುಷರ ತಂಡ) – ಹರ್ಷಿತ್ ರಾಣಾ
  27. 2024-25ರ ಅತ್ಯುತ್ತಮ ಅಂತರರಾಷ್ಟ್ರೀಯ ಆಟಗಾರ್ತಿ –  – ಸ್ಮೃತಿ ಮಂಧಾನ
  28. 2024-25ರ ಅತ್ಯುತ್ತಮ ಅಂತಾರಾಷ್ಟ್ರೀಯ ಆಟಗಾರ – ಶುಭ್​ಮನ್ ಗಿಲ್
  29. ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ – ರಾಹುಲ್ ದ್ರಾವಿಡ್, ರೋಜರ್ ಬಿನ್ನಿ
  30. ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ – ಮಿಥಾಲಿ ರಾಜ್

 

 

Source link

ಕರ್ನಾಟಕ ಹವಾಮಾನ ವರದಿ: ಬಿಸಿಲ ಬೇಗೆ ಆರಿಸಲು ರಾಜ್ಯದಲ್ಲಿ ತುಂತುರು ಮಳೆಯ ಸಾಧ್ಯತೆ!

ಬೆಂಗಳೂರು, ಮಾರ್ಚ್​ 16: ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಹೆಚ್ಚಾದ ತಾಪಮಾನದೊಂದಿಗೆ ಒಣ ಹವೆ (Weather Forecast) ಆವರಿಸಿತ್ತು. ಆದರೆ ಇಂದು ಕರಾವಳಿ ಸೇರಿದಂತೆ ಹಲವೆಡೆ ಸಾಧಾರಣ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆಯೇ ಮುಂದುವರೆಯಲಿದ್ದು, ಇನ್ನೂ ಕೆಲ ದಿನ ಇದೇ ರೀತಿಯ ಶುಷ್ಕ ವಾತಾವರಣ ಇರಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ತುಂತುರು ಮಳೆ?

ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿಯ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. ಅದರೊಂದಿಗೆ ದಕ್ಷಿಣ ಒಳನಾಡಿನ ಕೊಡಗು, ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಎಲ್ಲೆಲ್ಲಿ ಒಣ ಹವೆ?

ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಚಾಮರಾಜನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಾರ್ಚ್​ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ

ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link