Category Archives: Blog

Your blog category

ಪಾಕಿಸ್ತಾನ ಸ್ಪಿನ್ನರ್ ಅಬ್ರಾರ್ ಖರೀದಿಸಿದ ಕಾವ್ಯಾ ಮಾರನ್​​ಗೆ ಬ್ಯಾನ್ ಬಿಸಿ

ಪಾಕಿಸ್ತಾನ ಸ್ಪಿನ್ನರ್ ಅಬ್ರಾರ್ ಖರೀದಿಸಿದ ಕಾವ್ಯಾ ಮಾರನ್​​ಗೆ ಬ್ಯಾನ್ ಬಿಸಿ

ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್​​​ಗೆ ಬ್ಯಾನ್ ಬಿಸಿ ತಟ್ಟಿದೆ. ದಿ ಹಂಡ್ರೆಡ್ ಲೀಗ್​​​ನಲ್ಲಿ ಕಾವ್ಯಾ ಅವರ ಸನ್​​ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್​ ಅವರನ್ನು ಖರೀದಿ ಮಾಡಿತು. ಆಕ್ಷನ್​ ಅಲ್ಲಿ 2.35 ಕೋಟಿ ರೂಪಾಯಿಯನ್ನು ಕೊಡಲು ಸನ್​​ರೈಸರ್​ಸ್ ಒಪ್ಪಿಕೊಂಡಿತು. ಈ ಬೆನ್ನಲ್ಲೇ ಕಾವ್ಯಾ ಮಾರನ್ ಅವರು ಸಾಕಷ್ಟು ಟೀಕೆ ಎದುರಿಸಿದರು. ಅಷ್ಟೇ ಅಲ್ಲ, ಸನ್​​ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಬ್ಯಾನ್ ಆಗಿದೆ.

ಮಾರ್ಚ್ 12ರ ರಾತ್ರಿ 8.30ಕ್ಕೆ ವೇಳೆಗೆ ಈ ಖರೀದಿ ನಡೆದಿದೆ. ಇಂದು (ಮಾರ್ಚ್ 13) ಮುಂಜಾನೆ ಸನ್​​ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ. ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಸನ್​​ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆಯನ್ನು ರಿಪೋರ್ಟ್ ಮಾಡಿರಬಹುದು ಎಂದು ಊಹಿಸಲಾಗಿದೆ. ಈ ಕಾರಣದಿಂದಲೇ ಸಸ್ಪೆಂಡ್ ಆಗಿರಬಹುದು ಎಂಬುದು ಕೆಲವರ ಊಹೆ.

ಹಂಡ್ರೆಡ್ ಲೀಗ್ಸ್ ಆಕ್ಷನ್ ಅಲ್ಲಿ ಕಾವ್ಯಾ ಮಾರನ್, ತಂಡದ ಕೋಚ್ ಡ್ಯಾನಿಯಲ್ ವಿಟ್ಟೋರಿ ಇದ್ದರು. ಭಾರತ ಒಡೆತನದ ನಾಲ್ಕು ತಂಡಗಳು ಹಂಡ್ರೆಡ್ ಲೀಗ್​​​ನಲ್ಲಿ ಇದ್ದು, ಇವರು ಪಾಕಿಸ್ತಾನ ಆಟಗಾರರನ್ನು ಖರೀದಿಸುತ್ತಾರೆಯೇ ಎಂಬ ಪ್ರಶ್ನೆ ಇತ್ತು. ಕಾವ್ಯಾ ಅವರು ತೆಗೆದುಕೊಂಡ ಒಂದು ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದು ಐಪಿಎಲ್ ತಂಡದ ವರ್ಚಸ್ಸಿನ ಮೇಲೂ ಪರಿಣಾಮ ಬಿರಬಹುದು.

ಸನ್ನರೈಸರ್ಸ್ ಲೀಡ್ಸ್ ಅಬ್ರಾರ್​​ಗೆ ವೆಲ್​​​ಕಮ್ ಎಂದು ಪೋಸ್ಟ್ ಹಾಕಿತ್ತು. ಈ ಪೋಸ್ಟ್ ಸಾಕಷ್ಟು ವೈರಲ್ ಆಯಿತು. ಕಾವ್ಯಾ ಅವರನ್ನು ಬ್ಯಾನ್ ಮಾಡುವಂತೆ ಟ್ವಿಟರ್​​​ನಲ್ಲಿ ಟ್ರೆಂಡ್ ಆಗಿದೆ. ಸನ್ನರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಓಪನ್ ಮಾಡಿದರೆ ‘ಈ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ’ ಎಂಬ ಬರಹ ಕಾಣುತ್ತದೆ.

ಭಾರತದಲ್ಲಿ ಪಾಕಿಸ್ತಾನ ಆಟಗಾರರ ಮೇಲೆ ಸಂಪೂರ್ಣ ಬ್ಯಾನ್ ಹೇರಲಾಗಿದೆ. ಅವರ ಜೊತೆ ಐಸಿಸಿ ಟೂರ್ನಮೆಂಟ್ ಹೊರತುಪಡಿಸಿ ಮತ್ಯಾವುದೇ ಪಂದ್ಯವನ್ನು ಆಡುತ್ತಿಲ್ಲ. ಹೀಗಿರುವಾಗ ಸನ್​ರೈಸರ್ಸ್ ಹೈದರಾಬಾದ್​​ನ ಸೋದರ ಸಂಸ್ಥೆಯಾಗಿರುವ ಸನ್​ರೈಸರ್ಸ್ ಲೀಡ್ಸ್ ಪಾಕ್ ಆಟಗಾರನನ್ನು ಖರೀರಿದಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ಈ ವಿರೋಧದ ಬಳಿಕ ಆಟಗಾರನನ್ನು ಕೈ ಬಿಡಲಾಗುವುದೇ ಎಂಬ ಪ್ರಶ್ನೆ ಮೂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ..

Source link

ಹುಬ್ಬಳ್ಳಿಯಲ್ಲಿ ಆಟೋ ಗ್ಯಾಸ್ ಬಂಕ್ ಬಂದ್: ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ

ಹುಬ್ಬಳ್ಳಿ, ಮಾರ್ಚ್ 13: ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಎಲ್​ಪಿಜಿ ಪೂರೈಕೆ ವ್ಯತ್ಯಯವಾಗಿದ್ದು, ಆಟೋ ಚಾಲಕರಿಗೂ ಇದರ ಬಿಸಿ ತಟ್ಟಿದೆ. ಹುಬ್ಬಳ್ಳಿಯಲ್ಲಿ ಆಟೋ ಎಲ್‌ಪಿಜಿ ಸಿಲಿಂಡರ್ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವೆ ವಾಗ್ವಾದಗಳು ಹೆಚ್ಚಾಗಿವೆ. ಎಲ್‌ಪಿಜಿ ದರ ಹೆಚ್ಚಳದ ಹಿನ್ನೆಲೆಯಲ್ಲಿ ಆಟೋ ಚಾಲಕರು ಪ್ರಯಾಣದ ದರವನ್ನು ಹೆಚ್ಚಿಸಿದ್ದಾರೆ. ಇದರಿಂದ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ. ಚೆನ್ನಮ್ಮ ವೃತ್ತದಿಂದ ಇಂಡಿ ಪಂಪ್‌ಗೆ ಹಿಂದೆ 10 ರೂಪಾಯಿ ಇದ್ದ ದರವನ್ನು ಈಗ 15 ರೂಪಾಯಿಗೆ ಏರಿಸಲಾಗಿದೆ. ಇದಲ್ಲದೆ, ಸಿದ್ಧಾರೂಢ ಮಠಕ್ಕೆ 20 ರೂಪಾಯಿ ಮತ್ತು ಆನಂದ ನಗರಕ್ಕೆ 30 ರೂಪಾಯಿಯಷ್ಟು ದರ ವಿಧಿಸಲಾಗುತ್ತಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಆಟೋ ಚಾಲಕರು ಎಲ್‌ಪಿಜಿ ಬೆಲೆ ಏರಿಕೆಯಾಗಿದ್ದರಿಂದ ಮತ್ತು ನಗರದಲ್ಲಿ ಐದಕ್ಕೂ ಹೆಚ್ಚು ಎಲ್‌ಪಿಜಿ ಬಂಕ್‌ಗಳು ಮುಚ್ಚಿರುವುದರಿಂದ ತಮಗೆ ಪರ್ಯಾಯವಿಲ್ಲ ಎಂದು ಹೇಳುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಮ್ ರಕ್ಷಿತ್ ಬೆನ್ನು ತಟ್ಟಿದ ಲಿಜೆಂಡರಿ ಕೊರಿಯೋಗ್ರಾಫರ್ ವಿನ್ಸೆಂಟ್

‘ಕಿಂಗ್ ಆಫ್ ಪಾಪ್’ ಮೈಖಲ್ ಜಾಕ್ಸನ್ (Michael Jackson), ಇಂದು ಲಿಜೆಂಡರಿ ಎನಿಸಿಕೊಂಡಿರುವ ಎಷ್ಟೋ ಮಂದಿ ಖ್ಯಾತ ಪಾಪ್ ತಾರೆಯವರಿಗೆ, ಡ್ಯಾನ್ಸ್ ಮಾಸ್ಟರ್​​ಗಳಿಗೆ ಗುರು. ಅಂಥಹಾ ಮೈಖಲ್ ಜಾಕ್ಸನ್ ಅವರಿಗಾಗಿ ನೃತ್ಯ ನಿರ್ದೇಶನ ಮಾಡುತ್ತಿದ್ದ ಹಾಲಿವುಡ್​ನ ಲಿಜೆಂಡರಿ ನೃತ್ಯ ನಿರ್ದೇಶಕ ಅಥವಾ ಕೊರಿಯೋಗ್ರಾಫರ್ ಇದೀಗ ಭಾರತದ ಜನಪ್ರಿಯ ಕೊರಿಯೋಗ್ರಾಫರ್ ಪ್ರೇಮ್ ರಕ್ಷಿತ್ ಅವರ ಕೆಲಸ ನೋಡಿ ಮೆಚ್ಚಿ ಕೊಂಡಾಡಿದ್ದಾರೆ. ಅಲ್ಲದೆ, ಅವರನ್ನು ಭೇಟಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

‘ಆರ್​​ಆರ್​​ಆರ್’ ಸಿನಿಮಾದ ‘ನಾಟು-ನಾಟು’ ಹಾಡಿಗೆ ನೃತ್ಯ ನಿರ್ದೇಶನ ಮಾಡಿರುವ ಪ್ರೇಮ್ ರಕ್ಷಿತ್, ಇದೀಗ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆಂಡ್ ಸೈನ್ಸ್ (ಆಸ್ಕರ್ಸ್)ನ ಸದಸ್ಯರಾಗಿದ್ದು, ಇದೇ ಸಂದರ್ಭದಲ್ಲಿ ಲಿಜೆಂಡರಿ ಕೊರಿಯೋಗ್ರಾಫರ್ ಆಗಿರುವ ವಿನ್ಸೆಂಟ್ ಪ್ಯಾಟರ್ಸನ್ ಅವರಿಂದ ವಿಡಿಯೋ ಸಂದೇಶ ಪಡೆದಿದ್ದು, ವಿನ್ಸೆಂಟ್ ಅವರು ಪ್ರೇಮ್ ರಕ್ಷಿತ್ ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ.

ವಿಡಿಯೋನಲ್ಲಿ ಮಾತನಾಡಿರುವ ವಿನ್ಸೆಂಟ್, ‘ನಿಮ್ಮ ಕೆಲವನ್ನು ನಾನು ನೋಡಿದ್ದೀನಿ, ನೀವು ಸಿನಿಮಾಗಳಲ್ಲಿ ಮಾಡುತ್ತಿರುವ ಕೆಲಸವನ್ನು ನಾನು ಗೌರವಿಸುತ್ತೇನೆ, ಇಷ್ಟಪಡುತ್ತೇನೆ. ಅಲ್ಲದೆ, ನೀವು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆಂಡ್ ಸೈನ್ಸ್​​ನ ಸದಸ್ಯ ಆಗಿರುವುದಕ್ಕೆ ನಾನು ಸಂತೋಷಪಡುತ್ತೇನೆ. ಸದ್ಯಕ್ಕೆ ನಾನು ಲಾಸ್ ಏಂಜಲ್ಸ್​ನಲ್ಲಿದ್ದು, ನಿಮ್ಮನ್ನು ಭೇಟಿ ಆಗುವ ಕಾತರದಲ್ಲಿದ್ದೇನೆ. ಭಾರತದ ಯುವ ಡ್ಯಾನ್ಸ್ ಕೊರಿಯೋಗ್ರಾಫರ್​​ಗಳು ನನ್ನ ಮತ್ತು ನಿಮ್ಮ ಕೆಲಸದಿಂದ ಸ್ಪೂರ್ತಿ ಪಡೆಯುತ್ತಾರೆ. ನಮ್ಮಂತೆ ಅವರಿಗೂ ಸಾಧನೆ ಸಾಧ್ಯ ಎಂದು ಅರಿತುಕೊಳ್ಳುತ್ತಾರೆ ಎಂಬುದನ್ನು ನಂಬಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ:ಮೈಖಲ್ ಜಾಕ್ಸನ್ ಕಾಲು ಚೀಲ ಹರಾಜು, ಬೆಲೆ ಎಷ್ಟು ಗೊತ್ತೆ?

ವಿನ್ಸೆಂಟ್ ಅವರು ಹಾಲಿವುಡ್​ನ ಲಿಜೆಂಡರಿ ಕೊರಿಯೋಗ್ರಾಫರ್ ಆಗಿದ್ದಾರೆ. ಮೈಖಲ್ ಜಾಕ್ಸನ್ ಅವರೊಟ್ಟಿಗೆ ಹಲವು ವರ್ಷ ಅವರು ಕೆಲಸ ಮಾಡಿದ್ದರು. ಮೈಖಲ್ ಅವರ ಆಲ್​​ಟೈನ್ ಫೇವರೇಟ್ ಆಗಿರುವ ‘ಸ್ಮೂತ್ ಕ್ರಿಮಿನಲ್’ ಆಲ್ಬಂಗೆ ಕೊರಿಯೋಗ್ರಫಿ ಮಾಡಿದ್ದು ವಿನ್ಸೆಂಟ್. ಅದಕ್ಕೆ ಮುಂಚೆ ಮೈಖಲ್ ಅವರ ‘ಬೀಟ್ ಇಟ್’ ನಲ್ಲಿ ಡ್ಯಾನ್ಸರ್ ಆಗಿದ್ದರು. ‘ಥ್ರಿಲ್ಲರ್’ ಆಲ್ಬಂಗೆ ಸಹಾಯಕ ಡ್ಯಾನ್ಸರ್ ಆಗಿದ್ದರು. ಮೈಖಲ್ ಜಾಖ್ಸನ್ ಮಾತ್ರವೇ ಅಲ್ಲದೆ, ಮಡೋನಾ, ಜಾರ್ಜ್ ಹ್ಯಾರಿಸನ್ ಇನ್ನೂ ಹಲವು ಪಾಪ್ ತಾರೆಯರೊಟ್ಟಿಗೆ ವಿನ್ಸೆಂಟ್ ಕೆಲಸ ಮಾಡಿದ್ದಾರೆ. ಹಲವು ಹಾಲಿವುಡ್ ಸಿನಿಮಾಗಳಿಗೂ ಸಹ ವಿನ್ಸೆಂಟ್ ಕೊರಿಯೋಗ್ರಫಿ ಮಾಡಿದ್ದಾರೆ.

ಇನ್ನು ಪ್ರೇಮ್ ರಕ್ಷಿತ್, ವಿನ್ಸೆಂಟ್ ಅವರ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದು, ವಿನ್ಸೆಂಟ್ ಅವರಿಗೆ ಧನ್ಯವಾದ ಹೇಳಿದ್ದಾರೆ. ತಾವು ಬಾಲ್ಯದಿಂದಲೂ ‘ಸ್ಮೂತ್ ಕ್ರಿಮಿನಲ್’ನ ಅಭಿಮಾನಿ ಆಗಿರುವುದಾಗಿಯೂ ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮ ಈ ಸಾಧನೆಗೆ ತಮ್ಮ ಗುರು ಆಗಿರುವ ರಾಜಮೌಳಿ ಕಾರಣ ಎಂದಿದ್ದಾರೆ. ‘ನಾನೂ ಸಹ ನಿಮ್ಮನ್ನು ಭೇಟಿ ಆಗಲು ಕಾತರನಾಗಿದ್ದೇನೆ’ ಎಂದಿದ್ದಾರೆ ಪ್ರೇಮ್ ರಕ್ಷಿತ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Friday Born Luck: ಶುಕ್ರವಾರ ಜನಿಸಿದವರ ಬಗೆಗಿನ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಪ್ರತಿ ದಿನಕ್ಕೂ ತನ್ನದೇ ಆದ ವಿಶೇಷತೆ ಇರುತ್ತದೆ. ಅದರಲ್ಲಿಯೂ ಶುಕ್ರವಾರ ಹುಟ್ಟಿದವರು ಸಾಕ್ಷಾತ್ ಲಕ್ಷ್ಮಿ ದೇವಿಯ ಅನುಗ್ರಹ ಪಡೆದವರು ಎಂಬ ನಂಬಿಕೆಯಿದೆ. ಶುಕ್ರವಾರ ಜನಿಸಿದ ಪುರುಷ ಮತ್ತು ಮಹಿಳೆಯರ ಸ್ವಭಾವ, ವೃತ್ತಿಜೀವನ ಮತ್ತು ಯಶಸ್ಸಿನ ಸೂತ್ರಗಳ ಬಗ್ಗೆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಅಕ್ಷಯ ಸಂಪತ್ತಿನ ಒಡೆಯರು:

ಶುಕ್ರವಾರ ಜನಿಸಿದವರ ಅತ್ಯಂತ ದೊಡ್ಡ ವಿಶೇಷತೆಯೆಂದರೆ ಅವರ ಆರ್ಥಿಕ ಸ್ಥಿತಿ. ಇವರು ಶ್ರೀಮಂತ ಕುಟುಂಬದಲ್ಲಿ ಜನಿಸದೇ ಇದ್ದರೂ, ತಮ್ಮ ಸ್ವಪ್ರಯತ್ನ ಮತ್ತು ಅದೃಷ್ಟದಿಂದ ಜೀವನದಲ್ಲಿ ಶೇ. 100ರಷ್ಟು ಯಶಸ್ಸನ್ನು ಸಾಧಿಸುತ್ತಾರೆ. ಇವರ ಕೈಯಲ್ಲಿ ಹಣ ಯಾವಾಗಲೂ ಇರುತ್ತದೆ. ಎಷ್ಟೇ ಖರ್ಚು ಮಾಡಿದರೂ ಯಾವುದೋ ಒಂದು ರೂಪದಲ್ಲಿ ಸಂಪತ್ತು ಇವರನ್ನು ಹುಡುಕಿಕೊಂಡು ಬರುತ್ತದೆ. “ಅಕ್ಷಯ ಸಂಪತ್ತು” ಇವರ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ.

ಆಕರ್ಷಕ ವ್ಯಕ್ತಿತ್ವ ಮತ್ತು ವಾಗ್ಮಿಗಳು:

ಇವರು ತಮ್ಮ ಮಾತು ಮತ್ತು ವ್ಯಕ್ತಿತ್ವದಿಂದ ಇತರರನ್ನು ಸುಲಭವಾಗಿ ಆಕರ್ಷಿಸುತ್ತಾರೆ. ಇವರ ಮಾತಿನ ಶೈಲಿ ಎಂತವರನ್ನೂ ಮಂತ್ರಮುಗ್ಧಗೊಳಿಸುವಂತಿರುತ್ತದೆ. ಜೀವನದಲ್ಲಿ ಯಾರೂ ಊಹಿಸದಂತಹ ಅದ್ಭುತ ಸಾಧನೆ ಮಾಡಿ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆಯುವ ಶಕ್ತಿ ಇವರಿಗಿದೆ. ಮತ್ತೊಂದು ವಿಶೇಷವೆಂದರೆ ಇವರಿಗೆ ಶಾಶ್ವತ ಶತ್ರುಗಳಿಲ್ಲ; ತಮ್ಮ ಮೃದು ಮಾತುಗಳಿಂದ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡಿಕೊಳ್ಳುವ ಕಲೆ ಇವರಿಗೆ ಸಿದ್ಧಿಸಿದೆ.

ವೃತ್ತಿ ಮತ್ತು ಯಶಸ್ಸಿನ ಕ್ಷೇತ್ರಗಳು:

ಶುಕ್ರವಾರ ಜನಿಸಿದವರು ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡುತ್ತಾರೆ. ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಇವರು ಮಿಂಚುತ್ತಾರೆ. ಇದಲ್ಲದೇ ಚಲನಚಿತ್ರ, ಟಿವಿ, ನಟನೆ ಮತ್ತು ನಿರ್ದೇಶನದಲ್ಲಿ ಇವರಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ. ಜವಳಿ ಉದ್ಯಮ, ಫ್ಯಾಶನ್ ಡಿಸೈನಿಂಗ್, ಸೌಂದರ್ಯ ವರ್ಧಕಗಳ ವ್ಯಾಪಾರ ಇವರಿಗೆ ಕೈಹಿಡಿಯುತ್ತದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಅದೃಷ್ಟದ ಸಂಖ್ಯೆ, ಬಣ್ಣ ಮತ್ತು ಮಂತ್ರ:

ಜೀವನದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು ಈ ಕೆಳಗಿನ ಅಂಶಗಳನ್ನು ಪಾಲಿಸುವುದು ಸೂಕ್ತ:

  • ಅದೃಷ್ಟ ಸಂಖ್ಯೆಗಳು: 6, 15 ಮತ್ತು 24. ಯಾವುದೇ ಶುಭ ಕಾರ್ಯಗಳನ್ನು ಈ ದಿನಾಂಕಗಳಲ್ಲಿ ಮಾಡಿದರೆ ಯಶಸ್ಸು ಖಚಿತ.
  • ಅದೃಷ್ಟದ ಬಣ್ಣ: ಗುಲಾಬಿ (Pink). ಈ ಬಣ್ಣದ ಬಳಕೆ ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ತುಂಬುತ್ತದೆ.
  • ದೈವ ಭಕ್ತಿ: ರಾಜರಾಜೇಶ್ವರಿ ಅಥವಾ ಲಲಿತಾ ದೇವಿಯನ್ನು ಆರಾಧಿಸುವುದು ಅತ್ಯಂತ ಶುಭದಾಯಕ.
  • ಮಂತ್ರ ಪಠಣೆ: ನಿತ್ಯವೂ “ಓಂ ಘ್ರುಮ್ ಶುಕ್ರಾಯ ನಮಃ” ಮಂತ್ರವನ್ನು ಜಪಿಸುವುದರಿಂದ ಮತ್ತು ಲಲಿತಾ ಸಹಸ್ರನಾಮ ಪಠಿಸುವುದರಿಂದ ಶೀಘ್ರವಾಗಿ ಅದೃಷ್ಟ ಲಭಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಶುಕ್ರವಾರ ಜನಿಸಿದವರ ಜೀವನವು ಚಿನ್ನದಂತೆ ಹೊಳೆಯುತ್ತದೆ. ಅವರು ಅಂದುಕೊಂಡಿದ್ದನ್ನು ಸಾಧಿಸುವ ಛಲ ಮತ್ತು ದೈವಬಲ ಎರಡೂ ಇವರ ಜೊತೆಗಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾದಗಿರಿಯಲ್ಲಿ ಹೋಟೆಲ್​ಗಳ ಮೇಲೆ ದಿಢೀರ್ ದಾಳಿ: ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ

ಯಾದಗಿರಿ, ಮಾರ್ಚ್ 13: ಕರ್ನಾಟಕದ ಯಾದಗಿರಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾರ್ಚ್ 12 ರಂದು ಹೋಟೆಲ್‌ಗಳ ದಿಢೀರ್ ದಾಳಿ ನಡೆಸಿ ವಾಣಿಜ್ಯ ಉದ್ದೇಶಗಳಿಗೆ ಅಕ್ರಮವಾಗಿ ಬಳಸಲಾಗುತ್ತಿದ್ದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಿವಿಧ ಹೋಟೆಲ್ ಮತ್ತು ಆಹಾರ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಒಟ್ಟು 46 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ. ಗೃಹಬಳಕೆಗೆ ಮೀಸಲಾದ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಬಳಸುತ್ತಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಥ ಅಕ್ರಮಗಳ ವಿರುದ್ಧ ಇದೀಗ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಇವಿ ಬೈಕ್ ಸ್ಕ್ಯಾಮ್! ಕೋಟ್ಯಾಂತರ ರೂ. ವಂಚಿಸಿ ಸಿಕ್ಕಿಬಿದ್ರು ಆರೋಪಿಗಳು

ಬೆಂಗಳೂರು, ಮಾರ್ಚ್​ 13: ಇವಿ ಬೈಕ್ (EV Bike) ಮಾರಾಟದ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಕೇಶ್ ಹಾಗೂ ಹನುಮಂತರಾಜು ಬಿಲ್ಕರ್ ಎಂದು ಗುರುತಿಸಲಾಗಿದೆ. ರಾಕೇಶ್​ನನ್ನು ಪೀಣ್ಯಾ ಪೊಲೀಸರು ಬಂಧಿಸಿದ್ದು, ಹನುಮಂತರಾಜು ಬಿಲ್ಕರ್​ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಮೋದಿ ಸ್ಕೀಮ್ ಹೆಸರಿನಲ್ಲಿ ವಂಚನೆ

ಮೋದಿ ಸ್ಕೀಮ್ ಹೆಸರಿನಲ್ಲಿ 3250 ಇವಿ ಬೈಕ್ ಮಾರಾಟ ಮಾಡುವ ನೆಪದಲ್ಲಿ ಸುಮಾರು 35 ಸಾವಿರ ರೂಪಾಯಿ ಮೌಲ್ಯದ ಬೈಕ್‌ಗೆ ಒಂದೂವರೆ ಲಕ್ಷ ರೂಪಾಯಿ ಬಿಲ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು. ಸಬ್ಸಿಡಿ ಸೌಲಭ್ಯ ದೊರೆಯುತ್ತದೆ ಎಂದು ನಂಬಿಸಿ ಕೋಟಿ ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಗ್ರಾಹಕರಿಂದ ಕೇವಲ 20 ಸಾವಿರ ರೂಪಾಯಿ ಡಿಪಾಸಿಟ್ ಪಡೆದು ಅವರ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿತ್ತು. ಬಳಿಕ ಆ ದಾಖಲೆಗಳನ್ನು ಬಳಸಿ ಗ್ರಾಹಕರ ಹೆಸರಿನಲ್ಲಿ ಕೊಟಾಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಸುಮಾರು 1.5 ಲಕ್ಷ ರೂಪಾಯಿ ಸಾಲ ಮಾಡಿಸಲಾಗುತ್ತಿತ್ತು. ಇದೇ ಹಣವನ್ನು ಇವಿ ಶೋರೂಮ್ ಮಾಲೀಕರು ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ ಬಸ್​​​ನಲ್ಲಿ 90 ಲಕ್ಷಕ್ಕೂ ಅಧಿಕ ಮೌಲ್ಯದ, ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ: ಊಟಕ್ಕೆ ನಿಲ್ಲಿಸಿದಾಗ ಕೃತ್ಯ

‘ಆಪ್ಕಿ ಇವಿ’ ಶೋರೂಮ್‌ನ ಮಾಲೀಕರಾದ ರಾಕೇಶ್ ಮತ್ತು ಹನುಮಂತರಾಜು ಈ ವಂಚನೆಯ ಪ್ರಮುಖ ಆರೋಪಿಗಳಾಗಿದ್ದು, ಪ್ರಕರಣದಲ್ಲಿ ಕೊಟಾಕ್ ಮಹೀಂದ್ರಾ ಬ್ಯಾಂಕ್‌ನ ಮ್ಯಾನೇಜರ್ ಸಹ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಾಗಲಗುಂಟೆ ಹಾಗೂ ಪೀಣ್ಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವರದಿ: ಮಂಜುನಾಥ್, ಟಿವಿ9 ಬೆಂಗಳೂರು 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೈದರಾಬಾದ್​​ನಲ್ಲಿ ಸ್ಟುಡಿಯೋ ಪ್ರಾರಂಭಿಸಿದ ನೆಟ್​ಫ್ಲಿಕ್ಸ್: ವಿಶೇಷತೆಯೇನು?

ನೆಟ್​ಫ್ಲಿಕ್ಸ್ (Netflix), ವಿಶ್ವದ ಒಟಿಟಿ ದೈತ್ಯ. ನೆಟ್​​ಫ್ಲಿಕ್ಸ್​​ಗಿಂತಲೂ ಹೆಚ್ಚು ಕಂಟೆಂಟ್ ಹೊಂದಿರುವ, ಹೆಚ್ಚು ಸಬ್​​ಸ್ಕ್ರೈಬರ್​​ಗಳನ್ನು ಹೊಂದಿರುವ ಒಟಿಟಿಗಳು ಇವೆಯಾದರೂ ನೆಟ್​ಫ್ಲಿಕ್ಸ್​​ನಷ್ಟು ಲಾಭದಾಯಕ ಒಟಿಟಿ ಇನ್ಯಾವುದೂ ಸಹ ಇಲ್ಲ. ಇತ್ತೀಚೆಗಷ್ಟೆ ಲಕ್ಷಾಂತರ ಕೋಟಿ ಕೊಟ್ಟು ವಾರ್ನರ್ ಬ್ರದರ್ಸ್ ನಿರ್ಮಾಣ ಸಂಸ್ಥೆಯನ್ನು ಖರೀದಿಸಲು ಮುಂದಾಗಿತ್ತು ನೆಟ್​ಫ್ಲಿಕ್ಸ್. ಈ ಒಟಿಟಿ ದೈತ್ಯ, ಭಾರತದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದು, ಭಾರತದ ಕಂಟೆಂಟ್ ಮೇಲೆ ಸಾವಿರಾರು ಕೋಟಿ ಹೂಡಿಕೆ ಮಾಡಿದೆ. ಅದರಲ್ಲೂ ದಕ್ಷಿಣದ ಸಿನಿಮಾ ರಂಗದ ಮೇಲೆ ಭಾರಿ ಭರವಸೆ ನೆಟ್​​ಫ್ಲಿಕ್ಸ್​ಗೆ ಇದ್ದು, ಇದೀಗ ಹೈದರಾಬಾದ್​​ನಲ್ಲಿ ವಿಶೇಷ ಸ್ಟುಡಿಯೋವನ್ನು ಸಹ ನಿರ್ಮಾಣ ಮಾಡಿದೆ.

ಹೈದರಾಬಾದ್​​ನಲ್ಲಿ ನೆಟ್​​ಫ್ಲಿಕ್ಸ್ ತನ್ನ ಪ್ರತಿಷ್ಠಿತ ‘ಐಲೈನ್ ಸ್ಟೂಡಿಯೋಸ್’ ಸ್ಟುಡಿಯೋ ನಿರ್ಮಾಣ ಮಾಡಿದೆ. ನೆಟ್​ಫ್ಲಿಕ್ಸ್​ ನ ಐದನೇ ಐಲನ್ ಸ್ಟುಡಿಯೋ ಕೇಂದ್ರ ಇದಾಗಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಗುರುವಾರ ಹೈದರಾಬಾದ್‌ನಲ್ಲಿ ನೆಟ್‌ಫ್ಲಿಕ್ಸ್‌ನ ಈ ಪ್ರತಿಷ್ಠಿತ ‘ಐಲೈನ್ ಸ್ಟೂಡಿಯೋಸ್’ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಹೈದರಾಬಾದ್‌ಗೆ ನೆಟ್‌ಫ್ಲಿಕ್ಸ್ ಬಂದಿರುವುದು ಎಂದರೆ ಹಾಲಿವುಡ್ ಹೈದರಾಬಾದ್‌ಗೆ ಬಂದಂತೆ” ಎಂದು ಬಣ್ಣಿಸಿದರು.

ನೆಟ್​​ಫ್ಲಿಕ್ಸ್ ಈ ವರೆಗೆ ಲಾಸ್ ಏಂಜಲೀಸ್, ವ್ಯಾಂಕೋವರ್, ಲಂಡನ್ ಮತ್ತು ಸಿಯೋಲ್ ನಲ್ಲಿ ಮಾತ್ರವೇ ಐಲೈನ್ ಸ್ಟುಡಿಯೋಗಳನ್ನು ಹೊಂದಿತ್ತು. ಇದೀಗ ಹೈದರಾಬಾದ್‌ನಲ್ಲಿ ಆರಂಭವಾಗಿರುವ ಈ ಸ್ಟೂಡಿಯೋ ನೆಟ್‌ಫ್ಲಿಕ್ಸ್‌ನ ವಿಶ್ವದ 5ನೇ ಅತಿದೊಡ್ಡ ವಿಎಫ್‌ಎಕ್ಸ್ (VFX) ಮತ್ತು ವರ್ಚುವಲ್ ಪ್ರೊಡಕ್ಷನ್ ಕೇಂದ್ರವಾಗಿದೆ. ಸುಮಾರು 32,000 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಸ್ಟೂಡಿಯೋ ಅತ್ಯಾಧುನಿಕ ದೃಶ್ಯ ವೈಭವದ ತಂತ್ರಜ್ಞಾನವನ್ನು ಹೊಂದಿದೆ. ಇದು ತೆಲಂಗಾಣದ ಸ್ಥಳೀಯ ಕಲಾವಿದರು ಮತ್ತು ತಾಂತ್ರಿಕ ನುರಿತ ಯುವಕರಿಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಜೊತೆಗೆ ದಕ್ಷಿಣದ ಸಿನಿಮಾ, ವೆಬ್ ಸರಣಿಗಳಿಗೆ ನೆಟ್​​ಫ್ಲಿಕ್ಸ್​ ಇನ್ನಷ್ಟು ಒತ್ತಾಸೆಯನ್ನು ನೀಡಲಿದೆ.

ಇದನ್ನೂ ಓದಿ:ನೆಟ್‌ಫ್ಲಿಕ್ಸ್‌ನ ‘ಘೂಸ್‌ಖೋರ್ ಪಂಡತ್’ ವಿವಾದ: ಟೀಸರ್ ಡಿಲೀಟ್ ಮಾಡಿದ ಚಿತ್ರತಂಡ

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, ನೆಟ್‌ಫ್ಲಿಕ್ಸ್ ಸಂಸ್ಥೆಯು ತನ್ನ ಕಾರ್ಪೊರೇಟ್ ಕಚೇರಿಯನ್ನು ಸರ್ಕಾರ ನಿರ್ಮಿಸುತ್ತಿರುವ ‘ಭಾರತ್ ಫ್ಯೂಚರ್ ಸಿಟಿ’ಗೆ ಸ್ಥಳಾಂತರಿಸುವಂತೆ ಆಹ್ವಾನ ನೀಡಿದ್ದಾರೆ. ಇದಕ್ಕಾಗಿ ಅಗತ್ಯವಿರುವ ಭೂಮಿ ಮತ್ತು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಐಟಿ ಸಚಿವ ಡಿ. ಶ್ರೀಧರ್ ಬಾಬು, ಚಿತ್ರನಟ ರಾಣಾ ದಗ್ಗುಬಾಟಿ, ಐಲೈನ್ ಸ್ಟೂಡಿಯೋಸ್ ಸಿಇಒ ಜೆಫ್ ಶಪಿರೊ ಮತ್ತು ಇತರ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.

ನೆಟ್​ಫ್ಲಿಕ್ಸ್​ ಕಳೆದ ಕೆಲ ವರ್ಷಗಳಿಂದ ತೆಲುಗು ಚಿತ್ರೋದ್ಯಮದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ನೆಟ್​​ಫ್ಲಿಕ್ಸ್​ನ ಸಿಇಒ ಖುದ್ದು ಹೈದರಾಬಾದ್​​ಗೆ ಬಂದು ರಾಜಮೌಳಿ, ಜೂ ಎನ್​​ಟಿಆರ್ ಸೇರಿದಂತೆ ತೆಲುಗು ಚಿತ್ರರಂಗದ ಹಲವು ತಾರೆಯರನ್ನು ಭೇಟಿ ಆಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಣ್ಣದೊಂದು ಮನಸ್ಥಾಪ, ಪತ್ನಿಗೆ ಬೆಂಕಿ ಹಚ್ಚಿ ಕೊಂದ ಗಂಡ

ಕೋಲ್ಕತ್ತಾ, ಮಾರ್ಚ್​ 13: ಸಣ್ಣದೊಂದು ಮನಸ್ಥಾಪಕ್ಕೆ ಪತಿಯೇ ಪತ್ನಿಗೆ ಬೆಂಕಿ ಹಚ್ಚಿ  ಕೊಲೆ(Murder) ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ  ನರ್ಸ್ ಒಬ್ಬರು ಕಾರಿನ ಇಎಂಐ ಪಾವತಿಗೆ ಸಂಬಂಧಿಸಿದ ಜಗಳದಲ್ಲಿ ಪತಿಯ ಕೈಯಿಂದಲೇ ಸಾವನ್ನಪ್ಪಿದ್ದಾರೆ. ಕೂಚ್ ಬೆಹಾರ್‌ನಲ್ಲಿರುವ ಎಂಜೆಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಸೂತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಛಂದಾ ರಾಯ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.

ಛಂದಾ ಮನೆಯಿಂದ ಕೂಗುತ್ತಾ ಹೊರಗೆ ಓಡಿಹೋಗಿದ್ದಳು, ಬೆಂಕಿ ಹೊತ್ತಿಕೊಂಡಿದ್ದರಿಂದ ಆ ಪ್ರದೇಶದಲ್ಲಿ ಜನರು ಭಯಭೀತರಾದರು. ನಿವಾಸಿಗಳು ಆಕೆಯನ್ನು ಎಂಜೆಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಿದ್ದಾರೆ, ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ಘೋಷಿಸಿದ್ದಾರೆ.

ಛಂದಾ ಅವರು ಕಳೆದ ಮೂರುವರೆ ವರ್ಷಗಳಿಂದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಪತಿ ರಂಜಿತ್ ರಾಯ್, ವೃತ್ತಿಯಲ್ಲಿ ಚಾಲಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನ ಸಮಾನ ಮಾಸಿಕ ಕಂತುಗಳ (ಇಎಂಐ) ಪಾವತಿಗೆ ಸಂಬಂಧಿಸಿದಂತೆ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ.

ಮತ್ತಷ್ಟು ಓದಿ: ಮದುವೆಯಾಗಿ 3 ತಿಂಗಳೊಳಗೆ ಪತಿಗೆ ಮುಹೂರ್ತ ಇಟ್ಟ ಪತ್ನಿ: ಪ್ರಿಯಕರನ ಜೊತೆ ಸೇರಿ ಕೊಲೆ

ಪೊಲೀಸ್ ಮೂಲಗಳ ಪ್ರಕಾರ, ರಂಜಿತ್ ಜೀವನ ಸಾಗಿಸಲು ವಾಹನವನ್ನು ಖರೀದಿಸಿದ್ದರು.ಸಾಲ ಮರುಪಾವತಿಗೆ ಸಂಬಂಧಿಸಿದ ವಿವಾದಗಳು ದಂಪತಿ ನಡುವೆ ಪದೇ ಪದೇ ಜಗಳಗಳಿಗೆ ಕಾರಣವೆಂದು ವರದಿಯಾಗಿದೆ.

ದಂಪತಿ ನಡುವಿನ ವಿವಾದಗಳು ಈ ಹಿಂದೆ ಮಹಿಳಾ ಪೊಲೀಸ್ ಠಾಣೆಗೆ ತಲುಪಿದ್ದವು, ಆದರೆ ಆ ಸಮಯದಲ್ಲಿ ಯಾವುದೇ ಔಪಚಾರಿಕ ದೂರು ದಾಖಲಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ರಂಜಿತ್ ಕೂಡ ಸುಟ್ಟ ಗಾಯಗಳಾಗಿದ್ದು, ಪ್ರಸ್ತುತ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮೇಲೆ ನಿಗಾ ಇಡಲಾಗಿದ್ದು, ಅವರ ಸ್ಥಿತಿ ಸ್ಥಿರವಾದ ನಂತರ ಹೇಳಿಕೆಯನ್ನು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ನಿರ್ಧರಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಂಪತಿಯ ಪುತ್ರಿ ಡಾರ್ಜಿಲಿಂಗ್‌ನ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ವಿಚ್ಛೇದನದ ಬಳಿಕ ಹೇಗಿದೆ ಹನ್ಸಿಕಾ ಮನಸ್ಥಿತಿ? ಹೊಸ ಪೋಸ್ಟ್ ಹಾಕಿದ ನಟಿ

ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿದ ಹನ್ಸಿಕಾ ಮೋಟ್ವಾನಿ (Hansika Motwani) ಅವರು ಉದ್ಯಮಿ ಸೊಹೈಲ್ ಖತುರಿಯಾ ಅವರಿಂದ ವಿಚ್ಛೇದನ ಪಡೆದರು. ಮಾರ್ಚ್ 11ರಂದು ಕೋರ್ಟ್ ಇವರಿಗೆ ವಿಚ್ಛೇದನ ನೀಡಿದೆ. ಇಬ್ಬರು ಪರಸ್ಪರ ಸಮ್ಮತಿಸಿ ಬೇರೆ ಆಗಿದ್ದಾರೆ. ಹಾಗಾದರೆ ಡಿವೋರ್ಸ್ ಬಳಿಕ ಹನ್ಸಿಕಾ ಮನಸ್ಥಿತಿ ಹೇಗಿದೆ? ಅದಕ್ಕೆ ಇಲ್ಲಿದೆ ಉತ್ತರ. ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಮನ ಸೆಳೆದಿದೆ.

ಹನ್ಸಿಕಾ ಅವರು ವಿಚ್ಛೇದನದ ಬಳಿಕ ಇನ್​​​ಸ್ಟಾಗ್ರಾಮ್ ಅಲ್ಲಿ ಸ್ಟೋರಿ ಒಂದನ್ನು ಹಾಕಿದ್ದಾರೆ. ‘Chardi Kala always’ ಎಂದು ಅವರು ಬರೆದುಕೊಂಡಿದ್ದಾರೆ. ಇದು ಪಂಜಾಬಿ ನುಡಿಗಟ್ಟಾಗಿದೆ. ಕಷ್ಟದಲ್ಲೂ ಸಹ ಆಶಾವಾದ, ಉನ್ನತ ಮನೋಭಾವವನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ಈ ಸಾಲು ಸೂಚಿಸುತ್ತದೆ.

ಹನ್ಸಿಕಾ ಅವರು 2022ರ ಡಿಸೆಂಬರ್ 4ರಂದು ವಿವಾಹ ಆದರು. ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ಈ ಮುದವೆ ನಡೆಯಿತು. ಈ ಮದುವೆಯ ಫೋಟೋಗಳು ವೈರಲ್ ಆದವು. ಹನ್ಸಿಕಾ ಆತ್ಮೀಯ ಗೆಳತಿಯ ಮಾಜಿ ಪತಿಯನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವು ತಿಂಗಳ ನಂತರ ಅವರ ನಡುವೆ ಕಿತ್ತಾಟ ಪ್ರಾರಂಭವಾದವು. ಅದಾದ ನಂತರ, ಹನ್ಸಿಕಾ ಮತ್ತು ಸೊಹೈಲ್ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ವಿಚ್ಛೇದನದ ನಂತರ ಹನ್ಸಿಕಾ ಸೊಹೈಲ್‌ನಿಂದ ಜೀವನಾಂಶವನ್ನು ಕೇಳಿಲ್ಲ ಎನ್ನಲಾಗಿದೆ.

ಹನ್ಸಿಕಾ ಮತ್ತು ಸೊಹೈಲ್ ಅವರ ಜೀವನದಲ್ಲಿ ಕೆಲವು ವ್ಯತ್ಯಾಸಗಳಿದ್ದವು.ಅವರ ಆಲೋಚನೆಗಳು, ಆದ್ಯತೆಗಳು ಮತ್ತು ಜೀವನಶೈಲಿಗಳು ಪರಸ್ಪರ ಬಹಳ ಭಿನ್ನವಾಗಿವೆ ಎಂದು ಅವರು ಕ್ರಮೇಣ ಅರಿತುಕೊಂಡರು.

ಇದನ್ನೂ ಓದಿ: ಬೆಸ್ಟ್​ಫ್ರೆಂಡ್ ಪತಿಯನ್ನೇ ಮದುವೆ ಆಗಿದ್ದ ಹನ್ಸಿಕಾ; ನಟಿಯ ಸ್ಪಷ್ಟನೆ ಏನಾಗಿತ್ತು?

2024ರಿಂದಲೇ ಹನ್ಸಿಕಾ ಹಾಗೂ ಸೊಹೈಲ್ ಬೇರೆ ಆಗಿ ವಾಸವಾಗಿರಲು ಆರಂಭಿಸಿದರು. ಈ ಕಾರಣದಿಂದ ಮಾನಸಿಕವಾಗಿ ಅವರು ಸಿದ್ಧರಾಗಿದ್ದರು. ಈ ಕಾರಣದಿಂದ ಅವರಿಗೆ ವಿಚ್ಛೇದನ ಅಷ್ಟಾಗಿ ಪರಿಣಾಮ ಬೀರದೇ ಇರಬಹುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

World Sleep Day 2026: ಆಹಾರ, ವ್ಯಾಯಾಮದಷ್ಟೇ ಉತ್ತಮ ನಿದ್ರೆಯೂ ನಮ್ಮ ಆರೋಗ್ಯಕ್ಕೆ ಅತ್ಯಗತ್ಯ

ನಮ್ಮ ಆರೋಗ್ಯಕ್ಕೆ ಊಟ, ನೀರು, ವ್ಯಾಯಾಮ ಎಷ್ಟು ಮುಖ್ಯವೋ ಅದೇ ರೀತಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸರಿಯಾದ ನಿದ್ರೆಯೂ (Sleep) ಅಷ್ಟೇ ಮುಖ್ಯ. ಆದ್ರೆ ಇಂದಿನ ಈ ಸ್ಮಾರ್ಟ್‌ ಫೋನ್‌ ಯುಗದಲ್ಲಿ ಜನ ಸರಿಯಾಗಿ ನಿದ್ರೆ ಮಾಡುತ್ತಿಲ್ಲ, ಇಡೀ ದಿನ ಮೊಬೈಲ್‌ ಫೋನ್‌ ನೋಡುತ್ತಾ ಸಮಯ ಕಳೆಯುತ್ತಾರೆ. ಹೀಗೆ ಸರಿಯಾಗಿ ನಿದ್ರೆ ಮಾಡದಿದ್ದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ನಿದ್ರೆಯ ಮಹತ್ವವನ್ನು ತಿಳಿಸಲು ಮತ್ತು ಉತ್ತಮ ನಿದ್ರೆ ಪಡೆಯುವುದು ಏಕೆ ಮುಖ್ಯ ಎಂಬುದರ ಕುರಿತು ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಶುಕ್ರವಾರದಂದು ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ನಿದ್ರಾ ದಿನದ ಇತಿಹಾಸವೇನು?

ವಿಶ್ವ ನಿದ್ರಾ ದಿನವನ್ನು  ವರ್ಲ್ಡ್ ಸ್ಲೀಪ್ ಸೊಸೈಟಿ ಪ್ರಾರಂಭಿಸಿತು. ಇದನ್ನು ಮೊದಲು 2008 ರಲ್ಲಿ ಆಚರಿಸಲಾಯಿತು. ಸಾಕಷ್ಟು ನಿದ್ರೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಜೀವನದ ಮೇಲೆ ನಿದ್ರಾಹೀನತೆಯ ಋಣಾತ್ಮಕ ಪರಿಣಾಮವನ್ನು ಎತ್ತಿ ತೋರಿಸುವುದು ಮತ್ತು ನಿದ್ರಾಹೀನತೆಯ ನಿರ್ವಹಣೆ ಮತ್ತು ತಡೆಗಟ್ಟುವಿಕೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ವಿಶ್ವ ನಿದ್ರಾ ದಿನದ ಮಹತ್ವವೇನು?

  • ವಿಶ್ವ ನಿದ್ರಾ ದಿನದ ಪ್ರಮುಖ ಉದ್ದೇಶವೆಂದರೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ನಿದ್ರೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು.
  • ನಿದ್ರಾ ಹೀನತೆಯು ಆಯಾಸ, ಕಿರಿಕಿರಿ, ದುರ್ಬಲಗೊಂಡ ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಈ ದಿನದಂದು, ಆರೋಗ್ಯಕರ ಜೀವನಕ್ಕಾಗಿ ಜನರು ಸಾಕಷ್ಟು ನಿದ್ರೆ ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತದೆ.

ಒಳ್ಳೆಯ ನಿದ್ರೆ ಏಕೆ ಮುಖ್ಯ?

ನಿದ್ರೆ ಎಂದರೆ ಕೇವಲ ವಿಶ್ರಾಂತಿ ಪಡೆಯುವುದು ಮಾತ್ರವಲ್ಲ, ಇದು ದೇಹವನ್ನು ಪುನರ್ಭರ್ತಿ ಮಾಡುವ ಒಂದು ರೂಪ. ನಾವು ನಿದ್ರಿಸುವಾಗ, ದೇಹವು ಸ್ನಾಯುಗಳ ದುರಸ್ತಿ, ಮೆದುಳಿನ ವಿಶ್ರಾಂತಿ ಮತ್ತು ಹಾರ್ಮೋನುಗಳ ಸಮತೋಲನದಂತಹ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಸಾಕಷ್ಟು ನಿದ್ರೆ ಪಡೆಯುವುದು ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಉತ್ತಮ ನಿದ್ರೆ ಸ್ಮರಣೆಯನ್ನು ಬಲಪಡಿಸುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಟ 8 ರಿಂದ 9 ಗಂಟೆಗಳ ಉತ್ತಮ ನಿದ್ರೆ ಪಡೆಯುವುದು ತುಂಬಾನೇ ಮುಖ್ಯ.

 ಇದನ್ನೂ ಓದಿ: ಧೂಮಪಾನ ತ್ಯಜಿಸಿ, ಆರೋಗ್ಯಕರ ಜೀವನವನ್ನು ನಡೆಸಿ

ಉತ್ತಮ ನಿದ್ರೆ ಪಡೆಯುವುದು ಹೇಗೆ?

ಮಲಗುವ ಸಮಯವನ್ನು ನಿಗದಿಪಡಿಸಿ: ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ದೇಹದ ಜೈವಿಕ ಗಡಿಯಾರವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಮಲಗುವ ಮುನ್ನ ಮೊಬೈಲ್‌ನಿಂದ ದೂರವಿರಿ: ಮಲಗುವ ಮುನ್ನ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಅಥವಾ ಟಿವಿಗಳ ಬಳಕೆಯನ್ನು ಮಿತಿಗೊಳಿಸಿ. ಅವುಗಳ ನೀಲಿ ಬೆಳಕು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

ಹಗುರವಾದ ಮತ್ತು ಆರೋಗ್ಯಕರ ಊಟವನ್ನು ಸೇವಿಸಿ: ರಾತ್ರಿಯಲ್ಲಿ ಭಾರವಾದ ಅಥವಾ ತುಂಬಾ ಖಾರವಾದ ಆಹಾರವನ್ನು ಸೇವಿಸುವುದರಿಂದ ನಿದ್ರೆ ಕಷ್ಟವಾಗಬಹುದು. ಆದ್ದರಿಂದ, ಹಗುರವಾದ ಆಹಾರವನ್ನು ಸೇವಿಸುವುದು ಉತ್ತಮ.

ಶಾಂತ ಮತ್ತು ಆರಾಮದಾಯಕ ವಾತಾವರಣವನ್ನು ರಚಿಸಿ: ಮಲಗುವ ಮುನ್ನ ಕೋಣೆಯಲ್ಲಿನ ದೀಪಗಳನ್ನು ಮಂದಗೊಳಿಸಿ ಮತ್ತು ಶಾಂತ ವಾತಾವರಣವನ್ನು ಕಾಪಾಡಿಕೊಳ್ಳಿ. ಇದು ಮನಸ್ಸನ್ನು ಶಾಂತಗೊಳಿಸಲು ಮತ್ತು ವೇಗವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ನಿಯಮಿತವಾಗಿ ವ್ಯಾಯಾಮ ಮಾಡಿ: ಪ್ರತಿದಿನ ಲಘು ವ್ಯಾಯಾಮ ಅಥವಾ ಯೋಗ ಮಾಡುವುದರಿಂದ ದೇಹವು ದಣಿದ ಅನುಭವವಾಗುತ್ತದೆ ಮತ್ತು ರಾತ್ರಿಯಲ್ಲಿ ಉತ್ತಮ ನಿದ್ರೆ ಪಡೆಯಲು ಇದು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link