Category Archives: Blog

Your blog category

ಕೇತುವಿನ ಮೇಲಿದೆ ಕುಜನ ದೃಷ್ಟಿ: ಯಾರಿಗೆ ಒಲಿಯಲಿದೆ ಪೂರ್ಣ ರಾಜಯೋಗ? ಯಾರಿಗೆ ಧನಲಾಭ? – Kannada News

ಈ ತಿಂಗಳಲ್ಲಿ ಕೊನೆಯ ಗ್ರಹವಾದ ಕೇತುವು ರವಿ, ಬುಧ, ಶನಿ ಮತ್ತು ಕುಜರ ವಿಶಿಷ್ಟ ಪ್ರಭಾವದಲ್ಲಿ ಇರುವನು. ಮಘಾ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದು ಇದರ ಅಧಿಪತಿ ಕೇತುವೇ ಆಗಿದ್ದಾನೆ. ಕುಜನ ಫಲವನ್ನು ಕೊಡುತ್ತಾನೆ ಎಂಬ ಪ್ರತೀತಿ ಇದೆ‌. ಕುಜನ ದೃಷ್ಟಿ ಈ ಗ್ರಹದ ಮೇಲಿರಲಿದೆ. ಗಣಪತಿಯ ಆರಾಧನೆಯಿಂದ ದೋಷಗಳನ್ನು ಕಡಿಮೆ ಮಾಡಿಕೊಳ್ಳಬಹುದು.

​ಮೇಷ ರಾಶಿ

​ಕುಜನ ದ್ವಾದಶಾಂಶವಿರುವುದರಿಂದ ಧೈರ್ಯ ಹೆಚ್ಚಲಿದೆ. ಶತ್ರುಗಳ ನಾಶ ಹಾಗೂ ದಿಢೀರ್ ಧನಲಾಭವಾಗಲಿದೆ. ರವಿಯ ಪ್ರಭಾವದಿಂದ ಸಮಾಜದಲ್ಲಿ ಗೌರವ ಸಿಗಲಿದ್ದು, ಸರ್ಕಾರಿ ಕೆಲಸಗಳು ಯಶಸ್ವಿಯಾಗಲಿವೆ. ಆದರೆ, ರಕ್ತದೊತ್ತಡ ಮತ್ತು ಕೋಪದ ಮೇಲೆ ನಿಯಂತ್ರಣವಿರಲಿ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಲಿದೆ.

ವೃಷಭ ರಾಶಿ

​ಆಧ್ಯಾತ್ಮಿಕ ಕ್ಷೇತ್ರಕ್ಕೆ ಹೆಜ್ಜೆಯಿಡಲು ಇದು ಸಕಾಲ. ಬುಧನ ನವಾಂಶದಿಂದಾಗಿ ವ್ಯಾಪಾರದಲ್ಲಿ ಚತುರತೆ ಮೂಡಲಿದೆ. ವಿದೇಶ ಪ್ರಯಾಣದ ಯೋಗವಿದ್ದು, ಹಳೆಯ ಸಾಲಗಳಿಂದ ಮುಕ್ತಿ ಸಿಗಲಿದೆ. ಶನಿಯ ತ್ರಿಂಶಾಂಶವು ನಿಧಾನಗತಿಯ ಪ್ರಗತಿ ನೀಡಿದರೂ, ದೀರ್ಘಕಾಲೀನ ಆಸ್ತಿ ಸಂಪಾದನೆಗೆ ಈ ದಶೆ ಶುಭ ತರಲಿದೆ.

ಮಿಥುನ ರಾಶಿ

​ಬುಧನ ನವಾಂಶವು ನಿಮಗೆ ಬುದ್ಧಿವಂತಿಕೆ ಮತ್ತು ಸಂವಹನ ಕಲೆಯನ್ನು ಹೆಚ್ಚಿಸಲಿದೆ. ಉದ್ಯೋಗದಲ್ಲಿ ದೊಡ್ಡ ಬದಲಾವಣೆ ಕಂಡುಬರಲಿದ್ದು, ಆದಾಯದ ಮೂಲಗಳು ಹೆಚ್ಚಲಿವೆ. ಶನಿಯ ಪ್ರಭಾವದಿಂದ ಕಠಿಣ ಪರಿಶ್ರಮ ಅಗತ್ಯವಿರುತ್ತದೆ. ಚರ್ಮದ ಅಲರ್ಜಿ ಮತ್ತು ನರಗಳ ದೌರ್ಬಲ್ಯದ ಬಗ್ಗೆ ಎಚ್ಚರಿಕೆ ಅಗತ್ಯ.

​ಕರ್ಕಾಟಕ ರಾಶಿ

​ರವಿಯ ರಾಶ್ಯಾಧಿಪತ್ಯದ ಪ್ರಭಾವದಿಂದ ಉದ್ಯೋಗದಲ್ಲಿ ಬಡ್ತಿ ಮತ್ತು ಕೀರ್ತಿ ಲಭಿಸಲಿದೆ. ದೈವಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ತೀರ್ಥಯಾತ್ರೆ ಮಾಡುವಿರಿ. ಆರಂಭದಲ್ಲಿ ಕೆಲಸಗಳಲ್ಲಿ ಅಡೆತಡೆಗಳು ಎದುರಾದರೂ, ಅಂತಿಮವಾಗಿ ಉನ್ನತ ಜ್ಞಾನ ಮತ್ತು ಮಾನಸಿಕ ನೆಮ್ಮದಿ ನಿಮ್ಮದಾಗಲಿದೆ. ಆಸ್ತಿ ಖರೀದಿ ಯೋಗವಿದೆ.

ಸಿಂಹ ರಾಶಿ

​ಕೇತು ರವಿಯ ಮನೆ ಮತ್ತು ಹೋರೆಯಲ್ಲೇ ಇರುವುದರಿಂದ ನಿಮಗೆ ಪೂರ್ಣ ರಾಜಯೋಗ ಫಲ ಸಿಗಲಿದೆ. ನಾಯಕತ್ವದ ಗುಣಗಳು ವೃದ್ಧಿಸಲಿವೆ. ತಂದೆಯ ಕಡೆಯಿಂದ ಅಪಾರ ಲಾಭ ಮತ್ತು ಪಿತ್ರಾರ್ಜಿತ ಆಸ್ತಿ ಸಿಗಲಿದೆ. ಕುಜನ ಪ್ರಭಾವದಿಂದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾರಿ ಧನಲಾಭವಾಗಲಿದ್ದು, ಸಮಾಜದಲ್ಲಿ ಉನ್ನತ ಸ್ಥಾನ ಸಿಗಲಿದೆ.

ಕನ್ಯಾ ರಾಶಿ

​ಬುಧನ ನವಾಂಶವು ಹೊಸ ಉದ್ಯಮ ಆರಂಭಿಸಲು ಪ್ರೇರಣೆ ನೀಡಲಿದೆ. ಸಂಶೋಧನೆ ಮತ್ತು ಗೂಢ ಶಾಸ್ತ್ರಗಳಲ್ಲಿ ಆಸಕ್ತಿ ಮೂಡಲಿದೆ. ಶನಿಯ ತ್ರಿಂಶಾಂಶದಿಂದಾಗಿ ಕೋರ್ಟ್ ಕಚೇರಿ ಕಲಾಪಗಳಲ್ಲಿ ಜಯ ಸಿಗಲಿದೆ. ಆರೋಗ್ಯದ ಕಡೆ ಗಮನವಿರಲಿ. ಹಠಾತ್ ಧನಲಾಭದ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ತುಲಾ ರಾಶಿ

​ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ವ್ಯಾಪಾರ ಪಾಲುದಾರಿಕೆಯಲ್ಲಿ ಲಾಭವಾಗಲಿದೆ. ರವಿಯ ಪ್ರಭಾವದಿಂದ ಸಮಾಜದ ಗಣ್ಯರ ಒಡನಾಟ ಸಿಗಲಿದೆ. ಆಧ್ಯಾತ್ಮಿಕ ಸಾಧನೆಗೆ ಈ ದಶೆ ಪೂರಕವಾಗಿದೆ. ಶನಿಯ ಪ್ರಭಾವದಿಂದ ಆಸ್ತಿ ಹೂಡಿಕೆಯಲ್ಲಿ ಯಶಸ್ಸು ಸಿಗಲಿದ್ದು, ಅನಿರೀಕ್ಷಿತ ಮೂಲಗಳಿಂದ ಧನಾಗಮನವಾಗಲಿದೆ.

ವೃಶ್ಚಿಕ ರಾಶಿ

​ಕುಜನ ದ್ವಾದಶಾಂಶವಿರುವುದರಿಂದ ಸಾಹಸ ಪ್ರವೃತ್ತಿ ಹೆಚ್ಚಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭೂತಪೂರ್ವ ಯಶಸ್ಸು ಸಿಗಲಿದೆ. ಸಾಲ ಬಾಧೆಗಳು ತೀರಲಿವೆ. ರವಿಯ ಹೋರೆಯು ಸರ್ಕಾರಿ ವಲಯದಿಂದ ಅಪಾರ ಲಾಭ ತಂದುಕೊಡಲಿದೆ. ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವುದು ಒಳಿತು. ಕೀರ್ತಿ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.

ಧನು ರಾಶಿ

​ಬುದ್ಧಿಮತ್ತೆ ಮತ್ತು ಜ್ಞಾನದ ವಿಕಾಸವಾಗಲಿದೆ. ಸಂತಾನ ಭಾಗ್ಯದ ನಿರೀಕ್ಷೆಯಲ್ಲಿದ್ದವರಿಗೆ ಶುಭ ವಾರ್ತೆ ಸಿಗಲಿದೆ. ಧರ್ಮಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ರವಿಯ ಪ್ರಭಾವದಿಂದಾಗಿ ದೀರ್ಘಕಾಲದ ತೊಂದರೆಗಳು ಮತ್ತು ಕೌಟುಂಬಿಕ ಕಲಹಗಳು ಕೊನೆಗೊಳ್ಳಲಿವೆ. ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣದ ಯೋಗವಿದೆ.

ಮಕರ ರಾಶಿ

​ಶನಿಯ ತ್ರಿಂಶಾಂಶದ ಪ್ರಭಾವದಿಂದ ಕಠಿಣ ಶ್ರಮಕ್ಕೆ ತಕ್ಕ ಉತ್ತಮ ಪ್ರತಿಫಲ ಸಿಗಲಿದೆ. ಭೂಮಿ ಅಥವಾ ವಾಹನ ಖರೀದಿ ಯೋಗವಿದೆ. ಕೌಟುಂಬಿಕವಾಗಿ ವೈರಾಗ್ಯ ಭಾವ ಮೂಡಿದರೂ, ವೃತ್ತಿಜೀವನದಲ್ಲಿ ಸ್ಥಿರತೆ ಇರಲಿದೆ. ಕುಜನ ದ್ವಾದಶಾಂಶವು ರಿಯಲ್ ಎಸ್ಟೇಟ್ ಮತ್ತು ಕೃಷಿ ಭೂಮಿಯಿಂದ ಲಾಭ ತಂದುಕೊಡಲಿದೆ.

ಕುಂಭ ರಾಶಿ

​ನಿಮ್ಮ ಆತ್ಮವಿಶ್ವಾಸ ಮತ್ತು ಪರಾಕ್ರಮ ಹೆಚ್ಚಾಗಲಿದೆ. ಸಹೋದರರೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ದೂರಾಗಲಿವೆ. ಬುಧನ ನವಾಂಶದಿಂದಾಗಿ ಸಣ್ಣ ಪ್ರಯಾಣಗಳು ಲಾಭದಾಯಕವಾಗಿರಲಿವೆ. ರವಿಯ ಪ್ರಭಾವದಿಂದ ಕೀರ್ತಿ ವೃದ್ಧಿಸಲಿದೆ. ಆಧ್ಯಾತ್ಮಿಕ ಚಿಂತನೆಗಳು ನಿಮ್ಮನ್ನು ಸನ್ಮಾರ್ಗದತ್ತ ಮುನ್ನಡೆಸಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ಇದನ್ನೂ ಓದಿ: ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟು ಹಬ್ಬವನ್ನ ಹೇಗೆ ಆಚರಿಸಬೇಕು ಗೊತ್ತಾ?

ಮೀನ ರಾಶಿ

​ಆರ್ಥಿಕವಾಗಿ ಧನಲಾಭ ಮತ್ತು ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗಲಿವೆ. ಮಾತಿನಲ್ಲಿ ಚತುರತೆ ಮೂಡಲಿದ್ದು, ಬುದ್ಧಿವಂತಿಕೆಯಿಂದ ಕಾರ್ಯಸಿದ್ಧಿಯಾಗಲಿದೆ. ರವಿ ಮತ್ತು ಕುಜನ ಪ್ರಭಾವದಿಂದ ಆಸ್ತಿ ವಿವಾದಗಳು ಬಗೆಹರಿಯಲಿವೆ. ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರವಿರಲಿ. ದೈವಿಕ ಅನುಗ್ರಹದಿಂದ ಸರ್ವ ಅಡೆತಡೆಗಳು ದೂರಾಗಿ ಯಶಸ್ಸು ಸಿಗಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದು ಭೇಟಿ, ಹತ್ತಾರು ಬೇಡಿಕೆ: ಪ್ರಧಾನಿ ಮೋದಿ ಮುಂದೆ ಡಿಕೆಶಿ ಇಟ್ಟ ಬೇಡಿಕೆಗಳಾವುವು? ಇಲ್ಲಿದೆ ಪಟ್ಟಿ – Kannada News

ನವದೆಹಲಿ, (ಜೂನ್ 11): ದೆಹಲಿ (New Delhi)ಪ್ರವಾಸದಲ್ಲಿರುವ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಇಂದು (ಜೂನ್ 11) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ್ದಾರೆ. ಮೊದಲ ನೀತಿ ಆಯೋಗದ ಸಭೆಯ ನಂತರ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕರ್ನಾಟಕದ (Karnataka) ಸಾಂಸ್ಕೃತಿಕ ರಾಯಭಾರಿ ಬಸವಣ್ಣ ಅವರ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕದ ಅಭಿವೃದ್ಧಿಯ ಆದ್ಯತೆಗಳಾದ ಮೂಲಸೌಕರ್ಯ, ಹೂಡಿಕೆ, ನಗರ ಸಾರಿಗೆ, ನೀರಾವರಿ, ನಾವೀನ್ಯತೆ ಹಾಗೂ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುವ ಕಲ್ಯಾಣ ಯೋಜನೆಗಳ ಕುರಿತು ಚರ್ಚಿಸಿದ್ದಾರೆ.

ಮುಖ್ಯಾಂಶಗಳು

  • ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
  • ಕರ್ನಾಟಕದ ಅಭಿವೃದ್ಧಿ ಕಾರ್ಯ, ಅನುದಾನ, ಯೋಜನೆಗಳ ಬಗ್ಗೆ ಚರ್ಚೆ
  • ಪ್ರಮುಖ ಯೋಜನೆಗಳಾದ ಮೇಕೆದಾಟು, ಕಳಸಬಂಡೂರಿ, ಭದ್ರಾ ಮೇಲ್ದಂಡೆ, ಕೃಷ್ಣ ಪ್ರಾಜೆಕ್ಟ್​​ಗಳ ಬಗ್ಗೆ ಮಾತುಕತೆ
  • ಇದೇ ವೇಳೆ ವಿವಿಧ ಕಾರ್ಯಗಳಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ ಡಿಕಶಿ

ಮೇಕೆದಾಟು ವಿಚಾರ ಪ್ರಸ್ತಾಪಿಸಿದ ಡಿಕೆಶಿ

ಇನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಡಿಕೆ ಶಿವಕುಮಾರ್ ಅವರು ಪ್ರಮುಖವಾಗಿ ಮೇಕೆದಾಟು ವಿಚಾರ ಪ್ರಸ್ತಾಪ ಮಾಡಿದ್ದು, CWMA ಮತ್ತು CWC ಯೋಜನೆಯ ಬಗ್ಗೆ ನಿರ್ಧಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈಗಾಗಲೇ ಯೋಜನೆ ಮೌಲ್ಯಮಾಪನ ಮಾಡಲು CWC ಗೆ CWMA ಕೇಳಿದೆ. CWC ಮೂಲಕ ಬೇಗ ಅನುಮತಿ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ನೋಡಿ: ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್, ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ?

ರಾಜ್ಯದ ಪ್ರಮುಖ ಯೋಜನೆಗಳ ಬಗ್ಗೆ ಚರ್ಚೆ

ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಬಂದು ಒಂದು ದಶಕ ಕಳೆದಿದೆ. ಆದ್ರೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ. ಕೃಷ್ಣಾ ಯೋಜನೆಯ ಮೇಲೆ ರಾಜ್ಯ ಸರ್ಕಾರ ಬಹಳಷ್ಟು ಹಣ ಖರ್ಚು ಮಾಡಿದೆ. ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಸಹಕಾರ ಕೊಡಬೇಕು. ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಘೋಷಣೆ ಮಾಡಿದ ಹಣ ಬಿಡುಗಡೆ, ಕಳಸಾ ಬಂಡೂರಿ ಯೋಜನೆಗೆ ಬೇಗ ಅನುಮತಿ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಿವಿಧ ಅನುದಾನ ಬಿಡುಗಡೆಗೆ ಮನವಿ

ಗ್ರಾಮಪಂಚಾಯತಿಗಳಿಗೆ 15 ನೇ ಹಣಕಾಸು ಆಯೋಗದ ಅನುದಾನ 2860 ಕೋಟಿ ರೂಪಾಯಿ ಬಿಡುಗಡೆ,
ಬೆಂಗಳೂರು ನಗರ ಅಭಿವೃದ್ಧಿಗೆ 26 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಸರ್ಬಬನ್ ರೈಲ್ವೆ ಮತ್ತು ಬೆಂಗಳೂರು- ಮುಂಬೈ ಹೈಸ್ಪೀಡ್ ರೈಲು ಕಾರಿಡಾರ್ ಗೆ ಅನುದಾನ, ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಅರಣ್ಯ ಇಲಾಖೆ ಅನುಮತಿ, ಕಲ್ಯಾಣ ಕರ್ನಾಟಕ ದ ಅಭಿವೃದ್ಧಿಗೆ 25 ಸಾವಿರ ಕೋಟಿ ಅನುದಾನ ಹಾಗೂ ರಾಯಚೂರಿಗೆ ಏಮ್ಸ್ ನೀಡಿಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ನಿರ್ಮಲಾ ಸೀತರಾಮನ್ ಮುಂದಿಟ್ಟ ಬೇಡಿಕೆಗಳೇನು?

ಇನ್ನು ಡಿಕೆ ಶಿವಕುಮಾರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಅವರನ್ನೂ ಸಹ ಭೇಟಿ ಮಾಡಿದ್ದು, 2023 ರಿಂದ ರಾಜ್ಯವೂ ಕೈಗೊಂಡ ಪ್ರಮುಖ ಆರ್ಥಿಕ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರವೂ 4250 ಕೋಟಿ ನಕಲಿ ವಹಿವಾಟು ಪತ್ತೆ ಹಚ್ಚಿದೆ. ಗುಣಮಟ್ಟದ ಮೂಲಸೌಕರ್ಯ ನಿರ್ಮಿಸಲು ದೀರ್ಘಾವಧಿಯ ಆರ್ಥಿಕ ಬೆಳವಣಿಗೆಗೆ ಬಂಡವಾಳ ಹೆಚ್ಚಿಸಿದೆ. 2025-26 ರಲ್ಲಿ ಹಿಂದಿನ ಹಣಕಾಸು ವರ್ಷಕ್ಕಿಂತ ಶೇಕಡಾ 14% ಬೆಳವಣಿಗೆ ಸಾಧಿಸಿದೆ. ಹೀಗಾಗಿ ಹೆಚ್ಚಿನ ಆರ್ಥಿಕ ಪೂರೈಸಲು ಕೇಂದ್ರ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.

ನಗರಗಳ ಮೂಲಸೌಕರ್ಯ ಅಭಿವೃದ್ಧಿ ,ನೀರಾವರಿ, ರಸ್ತೆಗಳ ಅಭಿವೃದ್ಧಿಗೆ ಐದು ಸಾವಿರ ಕೋಟಿ ರೂ. ನೀಡಬೇಕು. ಬ್ರಾಂಡ್ ಬೆಂಗಳೂರು ಮಾಸ್ಟರ್ ಪ್ಲಾನ್ ನನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಇದಕ್ಕೆ ಯುಐಡಿಎಫ್ ಅಡಿಯಲ್ಲಿ ಐದು ಸಾವಿರ ಕೋಟಿ ಅನುದಾನ, ಗ್ರಾಮೀಣ ರಸ್ತೆಗಳು ಸೇತುವೆಗಳು ನೀರಾವರಿ ಯೋಜನೆ ಗಳಿಗೆ ಆರ್ ಐಡಿಎಫ್ ಅಡಿಯಲ್ಲಿ 2 ಸಾವಿರ ಕೋಟಿ ರೂ., ಗ್ರಾಮೀಣ ಮೂಲಸೌಕರ್ಯಕ್ಕೆ 2026-27 ಹಣಕಾಸು ವರ್ಷಕ್ಕೆ 3500 ಕೋಟಿ ರೂ. ಹಂಚಿಕೆ ಸೇರಿದಂತೆ ಮೋದಿ ಮುಂದಿಟ್ಟ ರಾಜ್ಯದ ಯೋಜನೆಗಳು, ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಒಟ್ಟಿನಲ್ಲಿ ಸಿಎಂ  ಆಗುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಫುಲ್ ಆ್ಯಕ್ಟಿವ್ ಆಗಿದ್ದು, ದೆಹಲಿ ಪ್ರವಾಸದ ವೇಳೆ ಪ್ರಧಾನಿ ಮೋದಿ ಸೇರಿದಂತೆ  ವಿವಿಧ ಖಾತೆಯ ಕೇಂದ್ರ  ಸಚಿವರನ್ನ ಭೇಟಿ ಮಾಡುತ್ತಿದ್ದು, ರಾಜ್ಯದ ಅಭಿವೃದ್ಧಿ, ಯೋಜನೆ, ಅನುದಾನದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:18 pm, Thu, 11 June 26

Source link

‘ಮಹಾನ್ ಕಿಲಾಡಿ’ ರಿಯಾಲಿಟಿ ಶೋ ಆರಂಭಿಸಿದ ಮಿಂಚು: ಏನಿದರ ವಿಶೇಷ? – Kannada News

ಒಂದಷ್ಟು ತಿಂಗಳ ಹಿಂದೆ ನಟಿ ಮಿಂಚು (Minchu) ಅವರು ವಿವಾದದ ಮೂಲಕ ಸುದ್ದಿ ಆಗಿದ್ದರು. ಆದರೆ ಈಗ ಅವರು ಆ ಘಟನೆಗಳಿಂದ ಹೊರಬಂದಿದ್ದಾರೆ. ಸಂಪೂರ್ಣ ಒಳ್ಳೆಯ ಕಾರಣಕ್ಕೆ ಅವರೀಗ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಈ ಮೊದಲು ರಿಯಾಲಿಟಿ ಶೋಗಳ (Reality Show) ಮೂಲಕವೇ ಮಿಂಚು ಅವರು ಗುರುತಿಸಿಕೊಂಡಿದ್ದರು. ಈಗ ಅವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಅದಕ್ಕಾಗಿ ತಾವೇ ಸ್ವತಃ ಒಂದು ಹೊಸ ರಿಯಾಲಿಟಿ ಶೋ ಆರಂಭಿಸುತ್ತಿದ್ದಾರೆ. ಆ ಕಾರ್ಯಕ್ರಮಕ್ಕೆ ‘ಮಹಾನ್ ಕಿಲಾಡಿ’ (Mahan Khiladi) ಎಂದು ಟೈಟಲ್ ಇಡಲಾಗಿದೆ. ಆ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ಕರೆಯಲಾಗಿತ್ತು.

‘ಮಿಂಚು ಎಂಟರ್‌ಟೈನ್​ಮೆಂಟ್ಸ್ ಯೂಟ್ಯೂಬ್’ ಮೂಲಕ ‘ಮಹಾನ್ ಕಿಲಾಡಿ’ ಶೋ ಪ್ರಸಾರವಾಗಲಿದೆ. ಪ್ರಚಾರದ ಮೊದಲ ಹಂತವಾಗಿ ಪೋಸ್ಟರ್, ಟೈಟಲ್ ಸಾಂಗ್ ಹಾಗೂ ಟ್ರೇಲರ್ ಅನಾವರಣ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಟಿ. ಶರವಣ, ಉದ್ಯಮಿ ಡಾ. ಎನ್. ನರಸಿಂಹಮೂರ್ತಿ, ಶ್ರೀಕಾಂತ್, ಡಾ. ಮೋಕ್ಷಗುಂಡಂ ಗುರೂಜಿ, ಭಾರ್ಗವ ಅವರು ಸಾಕ್ಷಿಯಾದರು. ಈ ವೇಳೆ ಮಾತಾಡಿದ ಶರವಣ ಅವರು, ‘ಕಲಾವಿದರಿಗೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದೇನೆ. ಇಂಥವರು ಮುನ್ನೆಲೆಗೆ ಬರಬೇಕು. ನಿಮಗೆ ಸರ್ಕಾರದಿಂದಲೂ ಅನುದಾನ ಬರಲು ಶಿಪಾರಸ್ಸು ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ರಿಯಾಲಿಟಿ ಶೋ ಬಗ್ಗೆ ಮಿಂಚು ಅವರು ಮಾಹಿತಿ ಹಂಚಿಕೊಂಡರು. ‘ಒಂದಷ್ಟು ವಿಷಯಗಳಿಂದ ಅವಕಾಶಗಳು ಇಲ್ಲದೆ ಇರುವಾಗ ಹೊಸತನದೊಂದಿಗೆ ನನ್ನ ಅವಕಾಶವನ್ನು ನಾನೇ ರೂಪಿಸಿಕೊಳ್ಳಬೇಕು. ನಾನು ಕಲಿತದ್ದನ್ನು ಬೇರೆಯವರಿಗೆ ಹೇಳಿಕೊಡಬೇಕು ಎಂಬ ಕಲ್ಪನೆಯನ್ನು ಗೆಳಯ ಪ್ರವೀಣ್ ಗಸ್ತಿಗೆ ಹೇಳಿದಾಗ, ಆತ ಬೆನ್ನಲುಬಾಗಿ ನಿಂತುಕೊಂಡಿದ್ದರಿಂದ ಇಲ್ಲಿಯವರೆಗೂ ಬರಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.

‘ಸಣ್ಣ ಬಜೆಟ್‌ನೊಂದಿಗೆ ಆರಂಭಿಸಿ, ಮುಂದೆ ದೊಡ್ಡದಾಗಿ ಬೆಳೆಯುತ್ತಾ ಹೋಯಿತು. ಅಕ್ಷರ ಸ್ಟುಡಿಯೋದ ಗೌರಿಪ್ರಸಾದ್ ಚಿತ್ರೀಕರಿಸಲು ಅನುವು ಮಾಡಿಕೊಟ್ಟರು. ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಕೊಟ್ಟಾಗ ಕರ್ನಾಟಕದಾದ್ಯಂತ ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಬಂದರು. ಇದರಲ್ಲಿ 3 ಸಲ ಆಡಿಷನ್ ಮಾಡಿ, ಅಂತಿಮವಾಗಿ 22 ಪ್ರತಿಭೆಗಳು ಆಯ್ಕೆಯಾಗಿದ್ದಾರೆ. ಅವರಿಗೆಲ್ಲ 7 ವಾರಗಳ ತರಬೇತಿ ನೀಡಲಾಗಿದೆ’ ಎಂದಿದ್ದಾರೆ ಮಿಂಚು.

ಇದನ್ನೂ ಓದಿ: ಹೊಸ ರಿಯಾಲಿಟಿ ಶೋಗೆ ಜಡ್ಜ್​ ಆಗಿ ಬಂದ ಮೇಘನಾ ರಾಜ್

ಕಿರಣ್‌ಕುಮಾರ್ ಅವರು ಈ ರಿಯಾಲಿಟಿ ಶೋ ನಿರ್ದೇಶನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ದಿಲೀಪ್ ಕುಮಾರ್ ಹೆಚ್.ಆರ್. ಅವರು ಕ್ರಿಯೇಟೀವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಪುಟ್ಟರಾಜು ಡಿಜಿಟಲ್ ಪ್ರಮೋಟರ್ ಆಗಿದ್ದಾರೆ. ಚಿದಂಬರ ಪೂಜಾರಿ ಮೆಂಟರ್ ಆಗಿದ್ದು, ಪಲ್ಲವಿ ಸ್ಕ್ರಿಪ್ಟ್ ರೈಟರ್ ಆಗಿರುತ್ತಾರೆ. ಮಿಂಚು, ಮಹೇಶ್ ಕೃಷ್ಣ, ಪ್ರವೀಣ್ ಗಸ್ತಿ ತೀರ್ಪುಗಾರರಾಗಿರುತ್ತಾರೆ ಎಂಬ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ನೀಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs AFG: ಏಕದಿನ ಪಂದ್ಯದಲ್ಲಿ ‘ಅತ್ಯಂತ ಹಿರಿಯ’ ದಾಖಲೆ ಬರೆಯಲಿದ್ದಾರೆ ರೋಹಿತ್ ಶರ್ಮಾ

Source link

ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ – Kannada News

ಬೆಂಗಳೂರು, ಜೂ.11: ಗೊರಗುಂಟೆಪಾಳ್ಯದ ಟಿಎಂಟಿ ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಗರಬಾವಿ ನಿವಾಸಿಗಳಾದ ದಂಪತಿ ಶಬ್ರಾಜ್ (28) ಮತ್ತು ಶಬ್ರೀನ್ (24) ಸಾವನ್ನಪ್ಪಿದ್ದಾರೆ. ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಿಗ್ಗೆ 11:50ರ ಸುಮಾರಿಗೆ ಗ್ಯಾಸ್ ತುಂಬಿದ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಈ ಅಪಘಾತ ಸಂಭವಿಸಿದೆ. ದಂಪತಿ ಗೊರಗುಂಟೆಪಾಳ್ಯ ಸಿಗ್ನಲ್ ದಾಟಿ ಯಶವಂತಪುರ ಕಡೆಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಗ್ಯಾಸ್ ಲಾರಿ ಚಾಲಕ ಬೊಮ್ಮರಾಜೇಗೌಡ (60) ತನಗೆ ಬ್ರೇಕ್ ಹಿಡಿಯಲಿಲ್ಲ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಇನ್ನೊಂದು ವಾಹನವನ್ನು ತಪ್ಪಿಸಲು ಪ್ರಯತ್ನಿಸುವಾಗ ನಿಯಂತ್ರಣ ಕಳೆದುಕೊಂಡು ದಂಪತಿ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ದಂಪತಿ ಲಾರಿ ಚಕ್ರಗಳ ಅಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಸಂಬಂಧ ಯಶವಂತಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಡಿಸಿಪಿ ಅವರು ಹೇಳಿಕೆ ನೀಡಿದ್ದಾರೆ. ಚಾಲಕ ಮದ್ಯಪಾನ ಮಾಡಿದ್ದನೇ ಎಂಬ ಪ್ರಶ್ನೆಗೆ, ಪೊಲೀಸರು ಕೇವಲ ವಾಸನೆ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ನಿಖರ ಮಾಹಿತಿ ಪಡೆಯಲು ವೈದ್ಯಕೀಯ ಪರೀಕ್ಷೆಗಾಗಿ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಯಶವಂತಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕ ಬೊಮ್ಮರಾಜೇಗೌಡನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Kharg Island: ವೆನೆಜುವೆಲಾ ಬಳಿಕ ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟ ಟ್ರಂಪ್; ಇರಾನ್​ಗೆ ಈ ಸಣ್ಣ ಪ್ರದೇಶವೇಕೆ ಬಹಳ ಮುಖ್ಯ? – Kannada News

ವಾಷಿಂಗ್ಟನ್, ಜೂನ್ 11: ಇರಾನ್ ಜೊತೆಗಿನ ಸಂಘರ್ಷ ಆರಂಭವಾದಾಗಿನಿಂದಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟಿದ್ದಾರೆ. ಖಾರ್ಗ್ ದ್ವೀಪವು (Kharg Island) ಇರಾನ್‌ನ ತೈಲ ವ್ಯಾಪಾರದ ಬೆನ್ನೆಲುಬಾಗಿದ್ದು, ದೇಶದ ಬಹುಪಾಲು ಕಚ್ಚಾ ತೈಲದ ರಫ್ತನ್ನು ಇದೊಂದೇ ದ್ವೀಪ ನಿರ್ವಹಿಸುತ್ತದೆ. ಪ್ರತಿದಿನ ಸುಮಾರು 20 ಲಕ್ಷ (2 ಮಿಲಿಯನ್) ಬ್ಯಾರೆಲ್ ತೈಲವು ಈ ಸಣ್ಣ ಗಲ್ಫ್ ದ್ವೀಪದಿಂದ ಹೊರಹೋಗುತ್ತದೆ. ಅದರಲ್ಲಿ ಬಹುಪಾಲು ಚೀನಾ ದೇಶಕ್ಕೆ ರಫ್ತಾಗುತ್ತದೆ. ಹೀಗಾಗಿ, ಇರಾನ್ ಪಾಲಿಗೆ ಈ ಖಾರ್ಗ್ ದ್ವೀಪ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದರೂ ತಪ್ಪಿಲ್ಲ.

ಪರ್ಷಿಯನ್ ಕೊಲ್ಲಿಯಲ್ಲಿರುವ ಕೇವಲ 20 ಚದರ ಕಿಲೋಮೀಟರ್ ವಿಸ್ತೀರ್ಣದ ಈ ಪುಟ್ಟ ಹವಳದ ದ್ವೀಪ ಇರಾನ್ ದೇಶದ ಆರ್ಥಿಕ ಸಾಮ್ರಾಜ್ಯದ ಅತ್ಯಂತ ನಿರ್ಣಾಯಕ ಕೇಂದ್ರವಾಗಿದೆ. ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ನಿಯಂತ್ರಣ ಸಾಧಿಸಲು ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು ನನ್ನ ಮೊದಲ ಆದ್ಯತೆ ಎಂದು ಹೇಳಿರುವುದು ಈ ದ್ವೀಪದ ಜಾಗತಿಕ ಪ್ರಾಮುಖ್ಯತೆಯನ್ನು ತೋರಿಸುತ್ತದೆ.

ಇರಾನ್‌ನ ಆರ್ಥಿಕ ಜೀವನಾಡಿಯಾಗಿರುವ ಮತ್ತು ದೇಶದ ಶೇ. 90ರಷ್ಟು ಕಚ್ಚಾ ತೈಲ ರಫ್ತನ್ನು ನಿರ್ವಹಿಸುವ ‘ಖಾರ್ಗ್ ದ್ವೀಪ’ವನ್ನು ತನ್ನ ವಶಕ್ಕೆ ಪಡೆಯಲಿದೆ ಎಂದು ಟ್ರಂಪ್ ಹೇಳಿದ್ದಾರೆ. “ಬಹಳ ದೂರವಿಲ್ಲದ ಭವಿಷ್ಯದ ಒಂದು ಹಂತದಲ್ಲಿ, ನಾವು ಖಾರ್ಗ್ ದ್ವೀಪ ಮತ್ತು ಇತರ ತೈಲ ಮೂಲಸೌಕರ್ಯ ಕೇಂದ್ರಗಳನ್ನು ನಮ್ಮ ವಶಕ್ಕೆ ಪಡೆಯಲಿದ್ದೇವೆ. ವೆನೆಜುವೆಲಾದಲ್ಲಿ ನಾವು ಮಾಡಿದಂತೆಯೇ ಅವರ ತೈಲ ಮತ್ತು ಅನಿಲ ಮಾರುಕಟ್ಟೆಗಳ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ದಾಳಿ ಕೊನೆಗೊಳ್ಳಬೇಕು; 3 ಭಾರತೀಯರು ಸಾವನ್ನಪ್ಪಿದ ಒಮಾನ್ ಹಡಗಿನ ಮೇಲಿನ ಅಮೆರಿಕದ ದಾಳಿಗೆ ಭಾರತ ಖಂಡನೆ

ಖಾರ್ಗ್ ದ್ವೀಪದಿಂದ ತೈಲ ಸರಬರಾಜು ನಿಲ್ಲುವ ಮುನ್ಸೂಚನೆ ಹಾಗೂ ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ದಾಖಲೆ ಮಟ್ಟಕ್ಕೆ ಏರತೊಡಗಿವೆ. ಖಾರ್ಗ್ ದ್ವೀಪವು ಇರಾನ್‌ನ ಇಡೀ ತೈಲ ರಫ್ತು ಉದ್ಯಮದ ಕೇಂದ್ರ ಬಿಂದುವಾಗಿದೆ.

ಇರಾನ್ ದೇಶವು ಜಗತ್ತಿಗೆ ರಫ್ತು ಮಾಡುವ ಒಟ್ಟು ಕಚ್ಚಾ ತೈಲದ ಸುಮಾರು ಶೇ. 90ಕ್ಕೂ ಹೆಚ್ಚು ಭಾಗ ಕೇವಲ ಇದೇ ದ್ವೀಪದಲ್ಲಿರುವ ಬೃಹತ್ ತೈಲ ಟರ್ಮಿನಲ್‌ಗಳ ಮೂಲಕವೇ ಹಡಗುಗಳನ್ನು ತಲುಪುತ್ತದೆ. ಈ ದ್ವೀಪದಿಂದ ಪ್ರತಿದಿನ ಸರಾಸರಿ 20 ಲಕ್ಷ (2 ಮಿಲಿಯನ್) ಬ್ಯಾರೆಲ್ ಕಚ್ಚಾ ತೈಲವು ಜಾಗತಿಕ ಮಾರುಕಟ್ಟೆಗೆ ರವಾನೆಯಾಗುತ್ತದೆ. ಪಾಶ್ಚಿಮಾತ್ಯ ದೇಶಗಳು ಇರಾನ್‌ನ ತೈಲ ರಫ್ತಿನ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದರೂ, ಇರಾನ್ ರಹಸ್ಯವಾಗಿ ತೈಲ ಮಾರಾಟ ಮಾಡಲು ಈ ದ್ವೀಪವನ್ನೇ ಬಳಸಿಕೊಳ್ಳುತ್ತದೆ.

ಖಾರ್ಗ್ ದ್ವೀಪದಿಂದ ಹೊರಡುವ ಬಹುಪಾಲು ತೈಲ ಟ್ಯಾಂಕರ್‌ಗಳು ನೇರವಾಗಿ ಚೀನಾ ದೇಶವನ್ನು ತಲುಪುತ್ತವೆ. ಚೀನಾದ ಇಂಧನ ಅಗತ್ಯತೆಯನ್ನು ಪೂರೈಸುವಲ್ಲಿ ಮತ್ತು ಇರಾನ್‌ಗೆ ಹಣದ ಹರಿವು ನಿರಂತರವಾಗಿ ಇರುವಂತೆ ನೋಡಿಕೊಳ್ಳುವಲ್ಲಿ ಈ ದ್ವೀಪದ ಪಾತ್ರ ದೊಡ್ಡದಿದೆ. ಖಾರ್ಗ್ ದ್ವೀಪವು ವಿಶ್ವದ ಅತಿ ದೊಡ್ಡ ಕಡಲ ತೈಲ ಟರ್ಮಿನಲ್‌ಗಳಲ್ಲಿ ಒಂದನ್ನು ಹೊಂದಿದೆ. ಇಡೀ ವಿಶ್ವದಲ್ಲೇ ಅತಿ ದೊಡ್ಡದಾದ ಸೂಪರ್ ಟ್ಯಾಂಕರ್‌ಗಳು ಇಲ್ಲಿಗೆ ಬಂದು ಅತ್ಯಂತ ವೇಗವಾಗಿ ತೈಲವನ್ನು ತುಂಬಿಸಿಕೊಳ್ಳುವಂತಹ ಅತ್ಯಾಧುನಿಕ ‘ಡೀಪ್-ವಾಟರ್’ (ಆಳ ಸಮುದ್ರದ) ಜೆಟ್ಟಿ ಮತ್ತು ಪೈಪ್‌ಲೈನ್ ವ್ಯವಸ್ಥೆಯನ್ನು ಇರಾನ್ ಇಲ್ಲಿ ನಿರ್ಮಿಸಿದೆ.

ಇದನ್ನೂ ಓದಿ: ಒಮಾನ್ ಬಳಿ ಭಾರತೀಯ ಸಿಬ್ಬಂದಿಯಿದ್ದ ಹಡಗಿನ ಮೇಲೆ ದಾಳಿ ನಡೆಸಿದ್ದನ್ನು ಒಪ್ಪಿಕೊಂಡ ಅಮೆರಿಕ

ಅಮೆರಿಕ ಏನಾದರೂ ಖಾರ್ಗ್ ದ್ವೀಪದ ಮೇಲೆ ದಾಳಿ ನಡೆಸಿ ಅಥವಾ ಅದನ್ನು ತನ್ನ ವಶಕ್ಕೆ ಪಡೆದರೆ, ಇರಾನ್‌ನ ಆದಾಯದ ಮೂಲ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ತೈಲ ಹಣವಿಲ್ಲದೆ ಇರಾನ್ ಆರ್ಥಿಕವಾಗಿ ದಿವಾಳಿಯಾಗಲಿದ್ದು, ಅದರ ಮಿಲಿಟರಿ ಶಕ್ತಿ ತನ್ನಷ್ಟಕ್ಕೆ ತಾನೇ ಕುಸಿಯುತ್ತದೆ ಎಂಬುದು ಟ್ರಂಪ್ ಲೆಕ್ಕಾಚಾರ. ವೆನೆಜುವೆಲಾದ ತೈಲ ಮಾರುಕಟ್ಟೆಯನ್ನು ನಿಯಂತ್ರಿಸಿದ ಮಾದರಿಯಲ್ಲೇ ಇರಾನ್‌ನ ತೈಲ ಮತ್ತು ಅನಿಲ ಮಾರುಕಟ್ಟೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದು ಅಮೆರಿಕದ ದೀರ್ಘಕಾಲದ ತಂತ್ರವಾಗಿದೆ.

ಖಾರ್ಗ್ ದ್ವೀಪವನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದರೆ ಅಥವಾ ಇರಾನ್ ಇದಕ್ಕೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಜಾಗತಿಕವಾಗಿ ತೈಲ ಬೆಲೆಗಳು ತೀವ್ರವಾಗಿ ಹೆಚ್ಚಾಗಲಿವೆ. ಇದು ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ (LPG) ಬೆಲೆಗಳ ಮೇಲೆ ನೇರ ಹಾಗೂ ಗಂಭೀರ ಪರಿಣಾಮ ಬೀರಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

BAN vs AUS: ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಸೋಲಿಸಿ ಏಕದಿನ ಸರಣಿ ಗೆದ್ದ ಬಾಂಗ್ಲಾದೇಶ – Kannada News

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ತಂಡಮ, ಬಾಂಗ್ಲಾದೇಶ (Australia vs Bangladesh) ಪ್ರವಾಸ ಮಾಡಿದೆ. ಈಗಾಗಲೇ ಸರಣಿಯ ಎರಡು ಪಂದ್ಯಗಳು ಮುಗಿದಿದ್ದು, ಆತಿಥೇಯ ಬಾಂಗ್ಲಾದೇಶದ ವಿರುದ್ಧ ಎರಡೂ ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಬಾಂಗ್ಲಾದೇಶಕ್ಕೆ ಬರುವ ಮುನ್ನ ಪಾಕಿಸ್ತಾನದಲ್ಲಿ ಏಕದಿನ ಸರಣಿಯನ್ನಾಡಿದ್ದ ಆಸೀಸ್ ಪಡೆ ಅಲ್ಲೂ ಸಹ ಏಕದಿನ ಸರಣಿಯನ್ನು ಸೋತಿತ್ತು. ಇದೀಗ ಬಾಂಗ್ಲಾದೇಶದಲ್ಲೂ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕಳೆದುಕೊಂಡಿದೆ. ಇತ್ತ ಬಾಂಗ್ಲಾದೇಶ ತಂಡ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು ಏಕದಿನ ಸರಣಿಯಲ್ಲಿ ಸೋಲಿಸಿ ಹೊಸ ಇತಿಹಾಸ ನಿರ್ಮಿಸಿದೆ.

ಆಸೀಸ್​ಗೆ ಆರಂಭಿಕ ಆಘಾತ

ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾದ ನಿರ್ಧಾರ ತಪ್ಪು ಎಂಬುದು ಮೊದಲ ಮೂರು ಓವರ್​ಗಳಲ್ಲಿಯೇ ಸಾಭೀತಾಯಿತು. ಬಾಂಗ್ಲಾದೇಶದ ಬೌಲರ್‌ಗಳಾದ ತಸ್ಕಿನ್ ಅಹ್ಮದ್ ಮತ್ತು ಮುಸ್ತಾಫಿಜುರ್ ರೆಹಮಾನ್ ಒಟ್ಟಾಗಿ ಆಸ್ಟ್ರೇಲಿಯಾದ ಮೂವರು ಆಟಗಾರರನ್ನು ಶೂನ್ನಕ್ಕೆ ಔಟ್ ಮಾಡಿದರು. ಆರಂಭಿಕರಾದ ಮ್ಯಾಟ್ ಶಾರ್ಟ್, ಕೂಪರ್ ಕಾನೊಲಿ ಮತ್ತು ಮ್ಯಾಟ್ ರೆನ್‌ಶಾ ತಮ್ಮ ಖಾತೆಗಳನ್ನು ತೆರೆಯಲು ವಿಫಲರಾದರು.

187 ರನ್ ಕಲೆಹಾಕಿದ ಆಸ್ಟ್ರೇಲಿಯಾ

ಅಲ್ಲದೆ 65 ರನ್‌ಗಳ ಒಳಗೆ, ಆಸ್ಟ್ರೇಲಿಯಾ ತಂಡದ ಅರ್ಧದಷ್ಟು ಆಟಗಾರರು ಪೆವಿಲಿಯನ್‌ಗೆ ಮರಳಿದರು. ಆದಾಗ್ಯೂ, ಮಾರ್ನಸ್ ಲಬುಶೇನ್ ಅಜೇಯ 55 ರನ್‌ ಮತ್ತು ಬಾರ್ಟ್ಲೆಟ್ 52 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಲು ಪ್ರಯತ್ನಿಸಿದರು. ಆದರೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ 42 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಲಷ್ಟೇ ಶಕ್ತವಾಯಿತು. ಇತ್ತ ಬಾಂಗ್ಲಾದೇಶ ಪರ ತಸ್ಕಿನ್ ಅಹ್ಮದ್ ಹಾಗೂ ಮುಸ್ತಫಿಜುರ್ ರೆಹಮಾನ್ ತಲಾ 3 ವಿಕೆಟ್ ಪಡೆದರೆ, ತನ್ವೀರ್ ಇಸ್ಲಾಂ 2 ವಿಕೆಟ್ ಪಡೆದರು.

ODI World Cup 2027: ಈ ದಿನದಿಂದ ಆರಂಭವಾಗಲಿದೆ 2027 ರ ಏಕದಿನ ವಿಶ್ವಕಪ್‌; ವೇಳಾಪಟ್ಟಿ ಬಹಿರಂಗ

35 ಓವರ್​ಗಳಲ್ಲಿ ಗುರಿ ಬೆನ್ನಟ್ಟಿದ ಬಾಂಗ್ಲಾ

ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶದ ಇನ್ನಿಂಗ್ಸ್ ಆರಂಭಕ್ಕೂ ಮಳೆ ಅಡ್ಡಿಪಡಿಸಿತು. ಹೀಗಾಗಿ ಗುರಿಯನ್ನು 41 ಓವರ್‌ಗಳಲ್ಲಿ 192 ರನ್‌ಗಳಿಗೆ ನಿಗಧಿಪಡಿಸಲಾಯಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ ಆರಂಭಿಕ ತನ್ಜಿದ್ ಹಸನ್ ರನ್ ಗಳಿಸದೆ ಔಟಾದರು. ಆದಾಗ್ಯೂ, ಸೌಮ್ಯ ಸರ್ಕಾರ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ ತಲಾ 42 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ನಂತರ ಲಿಟ್ಟನ್ ದಾಸ್ 21 ರನ್ ಗಳಿಸಿದರು. ಆ ಬಳಿಕ ಬಂದ ತೌಹಿದ್ ಹೃದಯ್ ಅಜೇಯ 40 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಮೆಹಿದಿ ಹಸನ್ ಮಿರಾಜ್ ಕೂಡ ಅಜೇಯ 22 ರನ್​ಗಳ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಬಾಂಗ್ಲಾದೇಶ 35 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಜಯದ ನಗೆ ಬೀರಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Day Against Child Labour 2026: ಮಕ್ಕಳ ಸುಂದರ ಬಾಲ್ಯ, ಉಜ್ವಲ ಭವಿಷ್ಯವನ್ನು ಕಸಿಯುತ್ತಿದೆ ಬಾಲ ಕಾರ್ಮಿಕ ಪದ್ಧತಿ – Kannada News

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನImage Credit source: Getty Images

ಬಾಲ್ಯವು ಜೀವನದ ಅತ್ಯಂತ ಸ್ಮರಣೀಯ ಘಟ್ಟವಾಗಿದ್ದು, ಪ್ರತಿಯೊಂದು ಮಗುವಿಗೂ ಈ ಬಾಲ್ಯವನ್ನು ಆನಂದಿಸುವ, ಶಾಲೆಗೆ ಹೋಗುವ, ಸ್ನೇಹಿತರ ಜೊತೆ ಸೇರಿ ಆಡುವ ಹಕ್ಕಿದೆ. ಆದರೆ ಬಾಲ ಕಾರ್ಮಿಕ (Child Labour)  ಪದ್ಧತಿ ಎಂದು ಅನಿಷ್ಠ ಪಿಡುಗಿನ ಕಾರಣ ಅದೆಷ್ಟೋ ಮಕ್ಕಳಿಗೆ ತಮ್ಮ ಸುಂದರ ಬಾಲ್ಯವನ್ನು ಸವಿಯುವ ಅವಕಾಶವೇ ಇಲ್ಲದಂತಾಗಿದೆ. ಹೌದು 14 ವರ್ಷದೊಳಗಿನ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಬಾರದು, ಅವರನ್ನು ಶಾಲೆಗೆ ಕಳುಹಿಸಬೇಕು ಎಂಬ ಕಠಿಣ ನಿಯಮವಿದ್ದರೂ, ಇಂದಿಗೂ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಮಕ್ಕಳ ಹಕ್ಕುಗಳನ್ನು ರಕ್ಷಿಸಲು, ಜಾಗತಿಕ ಸಮಸ್ಯೆಯಾಗಿರುವ ಬಾಲ ಕಾರ್ಮಿಕ ಪದ್ಧತಿನ್ನು ನಿರ್ಮೂಲನೆ ಮಾಡಲು ಪ್ರತಿವರ್ಷ ಜೂನ್‌ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಇತಿಹಾಸವೇನು?

ಬಾಲ ಕಾರ್ಮಿಕ ಪದ್ಧತಿಯೆಂಬ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡುವ ಗುರಿಯೊಂದಿಗೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ 2002 ರಲ್ಲಿ   ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಪ್ರಾರಂಭಿಸಿತು. ಅಂದಿನಿಂದ ಪ್ರತಿ ವರ್ಷ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಬಾಲ ಕಾರ್ಮಿಕ ಪದ್ಧತಿಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಮಹತ್ವವೇನು?

  • ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ದೂರವಿಟ್ಟು ಅವರನ್ನು ಶಿಕ್ಷಣದತ್ತ ಸಾಗುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 12 ರಂದು ವಿಶ್ವದಾದ್ಯಂತ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.
  • ಹದಿನಾಲ್ಕು ವರ್ಷದೊಳಗಿನ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಬಾಹಿರ. ಹಾಗಾಗಿ ಬಾಲ ಕಾರ್ಮಿಕ ಪದ್ಧತಿಯಲ್ಲಿ ಸಿಲುಕಿರುವ ಮಕ್ಕಳನ್ನು ರಕ್ಷಿಸಲು ಈ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನವು ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಈ ಕೆಟ್ಟ ವ್ಯವಸ್ಥೆಯಿಂದ ಹೊರಬಂದು ತಮ್ಮ ಹಕ್ಕುಗಳ ಕುರಿತು ಜಾಗೃತಿ ಹೊಂದಿ, ಉತ್ತಮ ನಾಗರಿಕರಾಗಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಉದ್ದೇಶವನ್ನು ಹೊಂದಿದೆ.
  • ಈ ದಿನದಂದು ಮಕ್ಕಳಿಂದ ದುಡಿಸಿಕೊಳ್ಳುವುದರಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳು ಹಾಗೂ ಜಾಥಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ರಕ್ತ ಸಂಬಂಧಕ್ಕೂ ಮಿಗಿಲಾದ ಪವಿತ್ರ ಬಂಧವೇ ಸ್ನೇಹ

ಬಾಲ ಕಾರ್ಮಿಕ ಪದ್ಧತಿಯನ್ನು ನಿಲ್ಲಿಸಲು ನಾವು ಏನು ಮಾಡಬಹುದು?

  • ದೇಶದ ಪ್ರಗತಿಗಾಗಿ ಮತ್ತು ಪ್ರತಿ ಮಗುವಿನ ಉತ್ತಮ ಭವಿಷ್ಯದ ದೃಷ್ಟಿಯಿಂದ, ಬಾಲ ಕಾರ್ಮಿಕ ಪದ್ಧತಿಯನ್ನು ಕಂಡಾಗ ಮೌನವಾಗಿರಬೇಡಿ. ಬದಲಿಗೆ ತಕ್ಷಣವೇ ಪೊಲೀಸ್ ಅಥವಾ ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸಿ.
  • ಬಡ ಮಕ್ಕಳಿಗೆ ಓದಲು ಪ್ರೋತ್ಸಾಹಿಸಿ. ಶಿಕ್ಷಣವು ಆ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಖಚಿತಪಡಿಸುತ್ತದೆ ಎಂದು ಅವರ ಪೋಷಕರಿಗೆ ತಿಳಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಗ್ಲೆಂಡ್​ನಲ್ಲಿ ಮಹಿಳಾ ಟಿ20 ವಿಶ್ವಕಪ್; ಭಾರತದ ಕಾಲಮಾನದ ಪ್ರಕಾರ ಪಂದ್ಯಗಳು ಎಷ್ಟು ಗಂಟೆಗೆ ಆರಂಭ? – Kannada News

10 ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026)​ ಜೂನ್ 12 ರಿಂದ ಜುಲೈ 5 ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆಯಲಿದೆ. 24 ದಿನಗಳ ಈ ಪಂದ್ಯಾವಳಿಯಲ್ಲಿ ಹನ್ನೆರಡು ತಂಡಗಳು ಭಾಗವಹಿಸಲಿದ್ದು, ಒಟ್ಟು 33 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಉದ್ಘಾಟನಾ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಭಾರತ ಜೂನ್ 14 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಬಾರಿ, ಪಂದ್ಯಾವಳಿಯ ಒಟ್ಟು ಬಹುಮಾನದ ಹಣವನ್ನು 83ಕೋಟಿ ರೂ.ಗೆ ಏರಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಇನ್ನು ಈ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವೆನಿಸಿಕೊಂಡಿರುವ ಆಸ್ಟ್ರೇಲಿಯಾ 6 ಬಾರಿ ಚಾಂಪಿಯನ್ ಆಗಿದ್ದರೆ, ಇಂಗ್ಲೆಂಡ್ 3 ಬಾರಿ ಟ್ರೋಫಿ ಎತ್ತಿಹಿಡಿದಿದೆ. ಟೀಂ ಇಂಡಿಯಾ ಒಮ್ಮೆ ಫೈನಲ್ ಆಡಿದೆಯಾದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಇನ್ನು ಪಂದ್ಯಾವಳಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿವರ ಇಲ್ಲಿದೆ.

ಪಂದ್ಯಗಳು ಎಷ್ಟು ಗಂಟೆಗೆ ಆರಂಭವಾಗಲಿವೆ?

ಟಿ20 ವಿಶ್ವಕಪ್ ಪಂದ್ಯಗಳು ಸ್ಥಳೀಯ ಸಮಯದ ಪ್ರಕಾರ, ಪಂದ್ಯಗಳು ಸಂಜೆ 6:30 ಕ್ಕೆ ಪ್ರಾರಂಭವಾಗುತ್ತವೆ. ಆದರೆ ನೀವು ಭಾರತ, ಶ್ರೀಲಂಕಾ ಅಥವಾ ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದರೆ, ಪಂದ್ಯವನ್ನು ವೀಕ್ಷಿಸಲು ನಿದ್ದೆಗೆಡಬೇಕಾಗುತ್ತದೆ. ಏಕೆಂದರೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಸುಮಾರು 4.30 ಗಂಟೆಗಳ ಸಮಯದ ವ್ಯತ್ಯಾಸವಿರುವುದರಿಂದ ಭಾರತದಲ್ಲಿ ರಾತ್ರಿ 11 ಗಂಟೆಯಿಂದ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ. ಇಂಗ್ಲೆಂಡ್‌ನಲ್ಲಿ ಸಂಜೆ 6:30 ಆಗಿದ್ದರೆ, ಭಾರತದಲ್ಲಿ ರಾತ್ರಿ 11 ಗಂಟೆ. ಆದ್ದರಿಂದ, ಇತರ ತಂಡಗಳ ಕೆಲವು ಪಂದ್ಯಗಳು ಭಾರತೀಯ ಸಮಯ ರಾತ್ರಿ 11 ಗಂಟೆಯಿಂದ ಆರಂಭವಾಗುತ್ತವೆ.

ಟಿ20 ವಿಶ್ವಕಪ್​ನಲ್ಲಿ ಭಾರತ- ಪಾಕ್ ನಡುವೆ ಫೈಟ್; ಹೇಗಿದೆ ಮುಖಾಮುಖಿ ದಾಖಲೆ?

ಟೀಂ ಇಂಡಿಯಾ ಪಂದ್ಯಗಳು ಎಷ್ಟು ಗಂಟೆಗೆ ಆರಂಭ?

ಸಮಾಧಾನಕರ ಸುದ್ದಿ ಏನೆಂದರೆ ಟೀಂ ಇಂಡಿಯಾ ಪಂದ್ಯಗಳು ಇಂಗ್ಲೆಂಡ್ ಸಮಯದ ಪ್ರಕಾರ, ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗುತ್ತವೆ. ಅಂದರೆ ಭಾರತದ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತವೆ. ಇದಲ್ಲದೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಸ್ಥಳೀಯ ಸಮಯ ಮಧ್ಯಾಹ್ನಕ್ಕೆ ನಿಗದಿಪಡಿಸಲಾಗಿದೆ, ಆದ್ದರಿಂದ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತವೆ.

ಟೀಂ ಇಂಡಿಯಾ ವೇಳಾಪಟ್ಟಿ

  • 14/06/2026: ಭಾರತ vs ಪಾಕಿಸ್ತಾನ- ಎಡ್ಜ್‌ಬಾಸ್ಟನ್
  • 17/06/2026: ಭಾರತ vs ನೆದರ್‌ಲ್ಯಾಂಡ್ಸ್- ಹೆಡಿಂಗ್ಲಿ
  • 21/06/2026: ದಕ್ಷಿಣ ಆಫ್ರಿಕಾ vs ಭಾರತ- ಓಲ್ಡ್ ಟ್ರಾಫರ್ಡ್ ಮೈದಾನ
  • 25/06/2026- ಭಾರತ vs ಬಾಂಗ್ಲಾದೇಶ- ಓಲ್ಡ್ ಟ್ರಾಫರ್ಡ್ ಮೈದಾನ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:26 pm, Thu, 11 June 26

Source link

ಒಂದೇ ಸಮುದಾಯಕ್ಕೆ ಸೀಮಿತಾವಾಯ್ತಾ ಒಬಿಸಿ ಅನುದಾನ? ಕುರುಬ ಸಮುದಾಯದ 89 ಸಂಸ್ಥೆಗಳಿಗೆ ಬಂಪರ್ – Kannada News

ಬೆಂಗಳೂರು, (ಜೂನ್ 11): ಒಂದು ಸರ್ಕಾರ ಅಧಿಕಾರದಿಂದ ನಿರ್ಗಮಿಸುವ ಅಥವಾ ನಾಯಕತ್ವ ಬದಲಾವಣೆಯಾಗುವ ಸಂಕ್ರಮಣ ಕಾಲದಲ್ಲಿ ಅತ್ಯಂತ ತರಾತುರಿಯಲ್ಲಿ ಕೈಗೊಳ್ಳುವ ನಿರ್ಧಾರಗಳು ಯಾವಾಗಲೂ ಅನುಮಾನದ ಕಣ್ಣೋಟಕ್ಕೆ ಗುರಿಯಾಗುತ್ತವೆ. ಹೌದು..ಹಿಂದುಳಿದ ವರ್ಗಗಳ ಅನುದಾನ (Karnataka Backward Classes fund) ಹಂಚಿಕೆಯಲ್ಲೂ ಬೇಧ ಭಾವ ತಾರತಮ್ಯ ಎಸಗಿದ ಮತ್ತೊಂದು ಮುಖ ಹೊರ ಬಿದ್ದಿದೆ‌. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಪ್ರಮಾಣವಚನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ, ಆರ್ಥಿಕ ಇಲಾಖೆಯ ಮೂಲಕ 155 ವಿವಿಧ ಸಂಸ್ಥೆಗಳಿಗೆ 71.85 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿರುವುದು ಚರ್ಚೆ ಹುಟ್ಟುಹಾಕಿದೆ. ಅಹಿಂದ ವರ್ಗದ ಅಗ್ರಗಣ್ಯ ನಾಯಕ ಎಂದೇ ಕರೆಯಿಸಿಕೊಳ್ಳುವ ಸಿದ್ದರಾಮಯ್ಯ ಸಮಸಮಾಜದ ಮಾತುಗಳನ್ನಾಡುತ್ತಾರೆ. ಹೋದಲ್ಲಿ ಬಂದಲ್ಲಿ ಎಲ್ಲ ವೇದಿಕೆಯಲ್ಲಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಕನಸು ಬಿತ್ತುತ್ತಾರೆ. ಆದರೆ ಅವರು ಬಿತ್ತುತ್ತಿರುವ ಕನಸನ್ನು ಅವರೇ ಸಾಕಾರಗೊಳಿಸುವಲ್ಲಿ ಎಡವಿದರೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಅನುದಾನ ಹಂಚಿಕೆಯಲ್ಲೂ ಬೇಧ ಭಾವ

2026-27ನೇ ಸಾಲಿನ ಬಜೆಟ್​ನಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಭವನಗಳ ನಿರ್ಮಾಣಕ್ಕಾಗಿ 136 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಇದು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಾವಿರಕ್ಕೂ ಹೆಚ್ಚು ಜಾತಿಗಳಿಗೆ ತಲುಪಬೇಕಾದ ಹಕ್ಕು. ಆದರೆ ವಾಸ್ತವದಲ್ಲಿ ನಡೆದಿರುವುದು ಬೇರೆಯೇ. ಬಜೆಟ್​ನಲ್ಲಿ ಮೀಸಲಿಟ್ಟ ಹಣದ ಬರೋಬ್ಬರಿ ಶೇ57ರಷ್ಟು ಪಾಲನ್ನು ಕೇವಲ 3-4 ಸಮುದಾಯಗಳಿಗೆ ಸೀಮಿತಗೊಳಿಸಿರುವುದು ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಡೆದಿರುವ ದೊಡ್ಡ ಎಡವಟ್ಟು.

ಇದನ್ನೂ ನೋಡಿ: ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್, ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ?

ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್​ಗೆ 50 ಲಕ್ಷ ರೂಪಾಯಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆದೇಶದಲ್ಲಿ ಮಂಜೂರಾದ 155 ಸಂಸ್ಥೆಗಳ ಪೈಕಿ 89 ಸಂಸ್ಥೆಗಳು ಕುರುಬ ಸಮುದಾಯಕ್ಕೆ ಸೇರಿರುವುದು ಇಲಾಖೆಯ ತಾರತಮ್ಯ ನೀತಿಗೆ ಹಿಡಿದ ಕನ್ನಡಿಯಾಗಿದೆ. ಇನ್ನು ಟಿ. ನರಸೀಪುರದಂತಹ ಒಂದೇ ತಾಲೂಕಿಗೆ 13 ಸಮುದಾಯ ಭವನಗಳನ್ನು ಮಂಜೂರು ಮಾಡಲಾಗಿದೆ. ಗದಗದಲ್ಲಿರುವ ನಿರ್ದಿಷ್ಟ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್​ಗೆ 50 ಲಕ್ಷ ರೂಪಾಯಿಗಳ ಅನುದಾನ ನೀಡಿರುವುದು ಈ ಹಂಚಿಕೆಯ ಹಿಂದೆ ಕಲ್ಯಾಣದ ದೃಷ್ಟಿಕೋನಕ್ಕಿಂತ ಹೆಚ್ಚಾಗಿ ‘ರಾಜಕೀಯ ಪ್ರೇರಿತ ಕೃಪೆ’ಯಿದೆಯೋ ಎಂಬ ಸಂಶಯವನ್ನು ಬಲಪಡಿಸುತ್ತದೆ.

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸಾವಿರಕ್ಕೂ ಹೆಚ್ಚು ಜಾತಿಗಳಿವೆ. ಕೇವಲ ಪ್ರವರ್ಗ-1ರ ಅಡಿಯಲ್ಲೇ 147 ಜಾತಿಗಳಿರುವಾಗ, ಉಳಿದ ಸಮುದಾಯಗಳ ಪಾಡೇನು? ಮಡಿವಾಳ, ಸವಿತಾ ಸಮಾಜ, ಹೆಳವ ಸೇರಿದಂತೆ ಅನೇಕ ಸಮುದಾಯಗಳು ತಮ್ಮ ಅಸ್ತಿತ್ವ ಮತ್ತು ಅಭಿವೃದ್ಧಿಗಾಗಿ ಹೋರಾಡುತ್ತಿವೆ. ಇವುಗಳಿಗೆ ಸಿಗಬೇಕಾದ ಹಕ್ಕುಗಳು ನಿರ್ದಿಷ್ಟ ಸಮುದಾಯಗಳ ಪಾಲಾಗುತ್ತಿದ್ದರೆ, ಈಡಿಗ, ಕುಂಬಾರ ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳ ಅಭಿವೃದ್ದಿಗೆ ಗಮನ ನೀಡಬೇಕಿದೆ. ಹಿಂದುಳಿದ ವರ್ಗಗಳ ಇಲಾಖೆ ತಾನೇ ರಚಿಸಿಕೊಂಡ ‘ಸಾಮಾಜಿಕ ನ್ಯಾಯದ ತತ್ವ’ಕ್ಕೆ ತಾನೇ ಅಪಚಾರವೆಸಗಿದಂತಲ್ಲವೇ? ಹೀಗಾಗಿ ಎಲ್ಲಾ ಸಮುದಾಯಗಳನ್ನ ಸಮಾನವಾಗಿ ಕಾಣಬೇಕು. ಆದೇಶವನ್ನ ಮರು ಪರಿಶೀಲನೆ ಮಾಡಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರುಶಕ್ತಿ ಪೀಠದ ಪ್ರಣವಾನಂದಸ್ವಾಮೀಜಿ ಒತ್ತಾಯಿಸಿದ್ದಾರೆ.

ಸರಕಾರದ ಅನುದಾನ ಹಂಚಿಕೆಯು ಅರ್ಹತೆ ಮತ್ತು ಅಗತ್ಯತೆಯನ್ನು ಆಧರಿಸಿರಬೇಕೇ ಹೊರತು, ಪ್ರಭಾವ ಮತ್ತು ಜಾತಿಯ ಬಲವನ್ನು ಆಧರಿಸಿರಬಾರದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಇನ್ನು ಮುಂದೆ ಕೇವಲ ಒಂದು ಸಮುದಾಯದ “ಖಜಾನೆ”ಯಾಗದೆ, ಹೆಸರಿನಲ್ಲಿರುವಂತೆ ನಿಜಕ್ಕೂ ಹಿಂದುಳಿದ ಸಮುದಾಯಗಳ ಏಳಿಗೆಗೆ ಕೆಲಸ ಮಾಡಲಿದೆಯೇ? ಅಥವಾ ರಾಜಕೀಯ ಅಧಿಕಾರದ ಆಟಕ್ಕೆ ಇಲಾಖೆಯ ಬಜೆಟ್ ಬಳಕೆ ಆಗುತ್ತದೆಯೇ..? ಈ ತರಾತುರಿಯ ಆದೇಶಗಳ ಹಿಂದಿರುವ ಅಂತರಂಗವನ್ನ ಸರ್ಕಾರವೇ ಬಹಿರಂಗಪಡಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link