Category Archives: Blog

Your blog category

13 ವರ್ಷಗಳ ನಂತರ ಸ್ವಂತ ಮನೆ ಬಿಟ್ಟು ಬೆಂಗಳೂರಿನ ಬಾಡಿಗೆ ಮನೆಗೆ ಬಂದ ಮಹಿಳೆ!: ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಯ್ತು ‘ನಮ್ಮ ಬೆಂಗಳೂರು’ ಜರ್ನಿ – Kannada News

ಬೆಂಗಳೂರು, ಜೂ,2: ದಶಕಗಳ ಕಾಲ ಬದುಕಿದ ಮನೆಯನ್ನು ಬಿಟ್ಟು ಹೊಸ ನಗರಕ್ಕೆ, ಹೊಸ ವಾತಾವರಣಕ್ಕೆ ಸ್ಥಳಾಂತರಗೊಳ್ಳುವುದು ಯಾರಿಗಾದರೂ ಭಾವುಕ ಕ್ಷಣವೇ ಸರಿ. ಇಂತಹದ್ದೇ ಒಂದು ಸನ್ನಿವೇಶವನ್ನು ಎದುರಿಸಿದ ಕರಿಷ್ಮಾ ಕೌಲ್ (Karishma Koul) ಎಂಬ ಮಹಿಳೆ, ಗುರಗಾಂವ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ತಮ್ಮ ಅನುಭವ ಮತ್ತು ಹೊಸ ಬಾಡಿಗೆ ಮನೆಯ ಝಲಕ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಗಮನ ಸೆಳೆದಿದೆ. ಕರಿಷ್ಮಾ ಕೌಲ್ ತಮ್ಮ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ಪ್ರೀತಿಯಿಂದ ನೆಟ್ಟಿಗರನ್ನು ಸ್ವಾಗತಿಸಿದ್ದಾರೆ. “ಹಾಯ್, ಬೆಂಗಳೂರಿನಲ್ಲಿರುವ ನಮ್ಮ ಬಾಡಿಗೆ ಮನೆಗೆ ನಿಮಗೆ ಸ್ವಾಗತ. ಗುರಗಾಂವ್‌ನಲ್ಲಿ ಬರೋಬ್ಬರಿ 13 ವರ್ಷಗಳ ಕಾಲ ವಾಸವಿದ್ದ ನಂತರ, ನಾವು ನಮ್ಮ ಮೊದಲ ಸ್ವಂತ ಮನೆಯನ್ನು ತೊರೆದು ಬೆಂಗಳೂರಿಗೆ ಬರಲು ನಿರ್ಧರಿಸಿದೆವು” ಎಂದು ಹೇಳಿದ್ದಾರೆ.

ಸ್ವಂತ ಮನೆಯಿಂದ ಬಾಡಿಗೆ ಮನೆಗೆ ಬಂದಿದ್ದಕ್ಕಿಂತ, ದೊಡ್ಡ ಜಾಗದಿಂದ ಸಣ್ಣ ಜಾಗಕ್ಕೆ ಹೊಂದಿಕೊಳ್ಳುವುದೇ ತಮಗೆ ಎದುರಾದ ದೊಡ್ಡ ಸವಾಲು ಎಂದು ಅವರು ಬಿಚ್ಚಿಟ್ಟಿದ್ದಾರೆ. “ಸಮಸ್ಯೆ ಸ್ವಂತ ಮನೆಯಿಂದ ಬಾಡಿಗೆ ಮನೆಗೆ ಬಂದಿದ್ದಲ್ಲ, ಬದಲಿಗೆ ಪ್ರತಿ ಮಲಗುವ ಕೋಣೆಯಲ್ಲೂ ವಾರ್ಡ್‌ರೋಬ್‌ಗಳಿದ್ದ ನಮ್ಮ 4 BHK ಮನೆಯಲ್ಲಿದ್ದ ವಸ್ತುಗಳನ್ನು, ಕೇವಲ ಎರಡು ಬೆಡ್‌ರೂಮ್‌ಗಳಲ್ಲಿ ಮಾತ್ರ ವಾರ್ಡ್‌ರೋಬ್‌ಗಳಿರುವ ಈ 3 BHK ಮನೆಗೆ ಹೊಂದಿಸುವುದು ನಮಗೆ ದೊಡ್ಡ ತಲೆನೋವಾಗಿತ್ತು” ಎಂದಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಜಾಗದ ಅಭಾವದಿಂದಾಗಿ ಬೆಂಗಳೂರಿಗೆ ಬರುವ ಮುನ್ನ ತಮ್ಮ ಅನೇಕ ವಸ್ತುಗಳನ್ನು ಅಲ್ಲಿ ಬಿಟ್ಟ ಬರಬೇಕಾಗಿತ್ತು ಎಂದು ಕರಿಷ್ಮಾ ಹೇಳಿದ್ದಾರೆ. “ಹೀಗಾಗಿಯೇ ನಮ್ಮಲ್ಲಿದ್ದ ಹೆಚ್ಚಿನ ವಸ್ತುಗಳನ್ನು ಗುರಗಾಂವ್‌ನಲ್ಲಿದ್ದ ನಮ್ಮ ಮನೆಗೆಲಸದವರಿಗೆ ಮತ್ತು ಸೆಕ್ಯೂರಿಟಿ ವಾಚ್‌ಮ್ಯಾನ್‌ಗೆ ನೀಡಿ ಬಂದೆವು” ಎಂದು ಅವರು ತಿಳಿಸಿದ್ದಾರೆ. ಸ್ಥಳ ಬದಲಾವಣೆಯಾಗಿದ್ದರೂ, ಈ ಹೊಸ ಬಾಡಿಗೆ ಮನೆಯನ್ನು ತಮ್ಮದೇ ಸ್ವಂತ ಮನೆಯಂತೆ ಆತ್ಮೀಯವಾಗಿ ಅಲಂಕರಿಸಲು ಕರಿಷ್ಮಾ ನಿರ್ಧರಿಸಿದ್ದಾರೆ. “ಮನೆ ಸ್ವಂತದ್ದಾಗಿರಲಿ ಅಥವಾ ಬಾಡಿಗೆಯದ್ದಾಗಿರಲಿ, ಅದು ಮನಸ್ಸಿಗೆ ಶಾಂತಿ ನೀಡಬೇಕು ಮತ್ತು ಅದು ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸಬೇಕು ಎಂದು ನಾನು ನಂಬುತ್ತೇನೆ. ಸದ್ಯಕ್ಕೆ ನಮ್ಮ ಡ್ರಾಯಿಂಗ್ ರೂಮ್ (ವರಾಂಡ) ಮಾತ್ರ ಸಿದ್ಧವಾಗಿದೆ, ಉಳಿದ ಕೋಣೆಗಳಲ್ಲಿ ಇನ್ನೂ ಬಾಕ್ಸ್‌ಗಳು ಹಾಗೇ ಇವೆ. ಆದರೂ ಈ ಮನೆ ಇರುವ ರೀತಿ ನನಗೆ ತುಂಬಾ ಸಂತೋಷ ತಂದಿದೆ” ಎಂದು ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಹೈಡ್ರಾಮಾ: ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು ಸತ್ಯ!

ತಮ್ಮ ಪೋಸ್ಟ್​ನಲ್ಲಿ ಬೆಂಗಳೂರಿನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿರುವ ಕರಿಷ್ಮಾ, “ನಮ್ಮ ಬೆಂಗಳೂರು, ನಮ್ಮ ಜೀವನದ ಮುಂದಿನ ತಾಣ. ಭವಿಷ್ಯದಲ್ಲಿ ಏನೆಲ್ಲಾ ಕಾದಿದೆ ಎಂದು ನೋಡಲು, ಇಲ್ಲಿನ ಹೊಸ ಕೆಫೆಗಳಿಗೆ ಭೇಟಿ ನೀಡಲು, ಅದ್ಭುತ ಹವಾಮಾನವನ್ನು ಆನಂದಿಸಲು, ಹೊಸ ಜನರನ್ನು ಭೇಟಿಯಾಗಲು ಮತ್ತು ಹೊಸ ನೆನಪುಗಳನ್ನು ಸೃಷ್ಟಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:52 pm, Tue, 2 June 26

Source link

ಕಿಚನ್‌ ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ತೊಡೆದು ಹಾಕಲು ಈ ಸರಳ ಸಲಹೆಯನ್ನು ಅನುಸರಿಸಿ – Kannada News

ಸಿಂಕ್ (sink) ಅಡುಗೆ ಮನೆಯ ಪ್ರಮುಖ ಭಾಗವಾಗಿದ್ದು, ಪಾತ್ರೆ ತೊಳೆಯಲು, ಆಹಾರ ಪದಾರ್ಥಗಳನ್ನು ತೊಳೆಯಲು, ಕೈ ತೊಳೆಯಲು ಹೀಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಸಿಂಕ್‌ ಉಪಯೋಗಿಸುತ್ತೇವೆ. ಹೀಗಾಗಿ ಸಿಂಕ್‌ನಲ್ಲಿ  ವಿವಿಧ ರೀತಿಯ ಕೊಳಕು, ಪಾಚಿ ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ಸಿಂಕ್‌ನಿಂದ ವಾಸನೆ ಬರಲು ಪ್ರಾರಂಭಿಸುತ್ತದೆ. ಹಾಗಾಗಿ ಹೆಚ್ಚಿನವರು ದುಬಾರಿ ಕ್ಲೀನರ್‌ಗಳನ್ನು ಬಳಸಿ  ಪದೇ ಪದೇ ಸಿಂಕ್‌ ಕ್ಲೀನ್‌ ಮಾಡುತ್ತಿರುತ್ತಾರೆ. ಹೀಗಿದ್ದರೂ ಸಹ ಕೆಲವೊಂದು ಬಾರಿ ಕಿಚನ್‌ ಸಿಂಕ್‌ನಿಂದ ದುರ್ವಾಸನೆ ಬರುತ್ತದೆ. ಹೀಗಿರುವಾಗ ಈ ಕೆಲವೊಂದು ಮನೆಮದ್ದುಗಳ ಸಹಾಯದಿಂದ ಕಿಚನ್‌ ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ಸುಲಭವಾಗಿ ತೊಡೆದುಹಾಕಬಹುದು.

ಕಿಚನ್‌ ಸಿಂಕ್‌ನಿಂದ ಬರುವ ವಾಸನೆಯನ್ನು ತೊಡೆದು ಹಾಕುವುದೇಗೆ?

ಅಡಿಗೆ ಸೋಡಾ : ಅಡುಗೆಮನೆಯ ಸಿಂಕ್‌ನ ವಾಸನೆಯನ್ನು ಹೋಗಲಾಡಿಸಲು ನೀವು ಅಡುಗೆ ಸೋಡಾವನ್ನು ಬಳಸಬಹುದು. ಸಿಂಕ್ ಮೇಲೆ ಅಡಿಗೆ ಸೋಡಾ ಸಿಂಪಡಿಸಿ ಮತ್ತು 5 ನಿಮಿಷಗಳ ನಂತರ ಅದನ್ನು ಸ್ಕ್ರಬ್ ಮಾಡಿ. ಇದು ಸಿಂಕ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

ಅಡಿಗೆ ಸೋಡಾ ಮತ್ತು ವಿನೆಗರ್: ಅಡುಗೆ ಸೋಡಾ ಮತ್ತು ವಿನೆಗರ್  ಸಿಂಕ್‌ ಅನ್ನು ಸ್ವಚ್ಛಗೊಳಿಸುವುದಲ್ಲದೆ ವಾಸನೆಯನ್ನು ಬುಡದಿಂದ ನಿವಾರಿಸುತ್ತದೆ. ಅದಕ್ಕಾಗಿ ಮೊದಲು ಅರ್ಧ ಕಪ್ ಅಡಿಗೆ ಸೋಡಾವನ್ನು ಸಿಂಕ್ ಡ್ರೈನ್‌ಗೆ ಸುರಿಯಿರಿ. 5 ನಿಮಿಷಗಳ ನಂತರ, ಒಂದು ಕಪ್ ಬಿಳಿ ವಿನೆಗರ್ ಕೂಡ ಅದಕ್ಕೆ ಸೇರಿಸಿ ಅದನ್ನು 30 ನಿಮಿಷದಿಂದ 1 ಗಂಟೆಯವರೆಗೆ ಹಾಗೆಯೇ ಬಿಡಿ. ನಂತರ,  ಬಿಸಿ ನೀರನ್ನು ಸುರಿದು ಚೆನ್ನಾಗಿ ಸ್ವಚ್ಛಗೊಳಿಸಿ. ಅಡುಗೆ ಸೋಡಾ ಕೊಳೆಯನ್ನು ಸಡಿಲಗೊಳಿಸುತ್ತದೆ ಮತ್ತು ವಿನೆಗರ್ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದರಿಂದ ವಾಸನೆಯೂ ನಿವಾರಣೆಯಾಗುತ್ತದೆ.

ನಿಂಬೆ ರಸ: ನಿಂಬೆ ರಸವು ಅಡುಗೆಮನೆಯ ಸಿಂಕ್‌ನಿಂದ ವಾಸನೆಯನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ. ಇದಕ್ಕಾಗಿ ಮೊದಲಿಗೆ ನಿಂಬೆ ರಸವನ್ನು ಸಿಂಕ್‌ಗೆ ಸುರಿದು ಬ್ರಷ್ ಅಥವಾ ಸ್ಕ್ರಬ್ಬರ್‌ನಿಂದ ಚೆನ್ನಾಗಿ ಸ್ವಚ್ಛಗೊಳಿಸಿ.

ಇದನ್ನೂ ಓದಿ: ಕೆಲವು ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬೇಡಿ

ನಿಂಬೆ ಸಿಪ್ಪೆ ಮತ್ತು ಅಡಿಗೆ ಸೋಡಾ: ಈ ಎರಡು ವಸ್ತುಗಳು ಸಹ ಸಿಂಕ್‌ನಿಂದ ಬರುವ ವಾಸನೆಯನ್ನು ತೊಡೆದು ಹಾಕುತ್ತದೆ. ಇದಕ್ಕಾಗಿ ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಅದರ ಮೇಲೆ ಸ್ವಲ್ಪ ಅಡಿಗೆ ಸೋಡಾ ಸಿಂಪಡಿಸಿ ಅದರಿಂದ ಸಿಂಕ್‌ ಅನ್ನು ಸ್ಕ್ರಬ್‌ ಮಾಡಿ.  ಇದು ಕೊಳೆಯನ್ನು ತೆಗೆದುಹಾಕುವುದಲ್ಲದೆ, ವಾಸನೆಯನ್ನು ತೆಗೆದುಹಾಕುತ್ತದೆ.

ಉಪ್ಪು: ನಿಮ್ಮ ಅಡುಗೆಮನೆಯ ಸಿಂಕ್‌ನಿಂದ ಬರುವ ವಾಸನೆಯನ್ನು ತೊಡೆದುಹಾಕಲು ನೀವು ಉಪ್ಪನ್ನು ಸಹ ಬಳಸಬಹುದು. ಬೆಚ್ಚಗಿನ ನೀರಿನೊಂದಿಗೆ ಉಪ್ಪನ್ನು ಬೆರೆಸಿ ದ್ರಾವಣವನ್ನು ತಯಾರಿಸಿ ನಂತರ ಅದನ್ನು ಸಿಂಕ್ ಸುತ್ತಲೂ ಹರಡಿ ಸ್ವಚ್ಛಗೊಳಿಸಿ. ಇದು ವಾಸನೆಯನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಗು ಮುಖದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಖಾದರ್,ಸಚಿವ ಸ್ಥಾನ ಫಿಕ್ಸಾ? – Kannada News

ಬೆಂಗಳೂರು, (ಜೂನ್ 02): ಡಿಕೆ ಶಿವಕುಮಾರ್ ಅವರು ನಾಳೆ (ಜೂನ್ 03) ಸಂಜೆ 4.05ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗೇ ಇವರ ಜೊತೆ 10 ರಿಂದ 12 ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸಚಿವರಾಗುವವರು ಯಾರು ಎನ್ನುವುದೇ ನಿಗೂಢವಾಗಿದೆ. ಈ ಬಗ್ಗೆ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿ ಹೈಕಮಾಂಡ್ ನಾಯಕರೊಂದಿಗೆ ಮ್ಯಾರಥಾನ್ ಸಭೆ ನಡೆಸಿದ್ದು, ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗಳ ನಡುವೆ ಸ್ಪೀಕರ್ ಯುಟಿ ಖಾದರ್ ಅವರು ದಿಢೀರ್ ಮಂಗಳೂರಿನಿಂದ ಬೆಂಗಳೂರಿಗೆ ದೌಡಾಯಿಸಿದ್ದು, ಅವರು ಮಂತ್ರಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮುಖ್ಯಾಂಶಗಳು

  • ಮಂಗಳೂರಿನಿಂದ ಕೆಂಪೇಗೌಡ ಏರ್ಪೊಟ್ ಗೆ ಆಗಮಿಸಿದ ಸ್ಪೀಕರ್ ಯುಟಿ ಖಾದರ್
  • ನಗು ಮುಖದಲ್ಲಿ ಏರ್ಪೊಟ್ ಗೆ ಬಂದ ಯುಟಿ ಖಾದರ್ ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ
  • ಸಹಕಾರ ಕೊಟ್ಟ ಕಾರಣ ನಾನು ಡಿನ್ನರ್ ಇಟ್ಟುಕೊಂಡಿದ್ದೇನೆ ಎಂದ ಖಾದರ್.

ಹೌದು…2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಖಾದರ್ ಅವರಿಗೆ ಕೊನೆ ಕ್ಷಣದಲ್ಲಿ ಸ್ಪೀಕರ್ ಹುದ್ದೆ ನೀಡಲಾಗಿತ್ತು. ಆಗಲೇ ಭವಿಷ್ಯದಲ್ಲಿ ಸಚಿವ ಸಂಪುಟ ಪುನಾರಚನೆ ವೇಳೆ ಅವಕಾಶ ನೀಡುವ ಭರವಸೆ ನೀಡಲಾಗಿತ್ತು ಎನ್ನಲಾಗುತ್ತಿದೆ. ಇದೀಗ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿದ್ದು, ಇದರಿಂದ ಖಾದರ್ ಅವರು ನಗು ನಗುತ್ತಲೇ ಇಂದು (ಜೂನ್ 02) ಸಂಜೆ ಮಂಗಳೂರಿನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಮಂತ್ರಿ, ಡಿನ್ನರ್ ಬಗ್ಗೆ ಖಾದರ್ ಹೇಳಿದ್ದೇನು?

ಮಂಗಳೂರಿನಿಂದ ಕೆಂಪೇಗೌಡ ಏರ್ಪೊಟ್ ಗೆ ಆಗಮಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಖಾದರ್, ನನಗೆ ಸಚಿವ ಸ್ಥಾನದ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ. ಸದ್ಯಕ್ಕೆ ನಾನು ಸ್ವೀಕರ್ ಆಗಿ ಇದ್ದೇನೆ. ಬಂದ ತಕ್ಷಣ ಮಾಹಿತಿ ಕೊಡುತ್ತೇನೆ. ಅಧಿಕಾರ ಹುಡಿಕಿಕೊಂಡು‌ ಹೋಗಬಾರದು, ನಮ್ಮನ್ನ ಹುಡುಕಿಕೊಂಡು ಬರಬೇಕು ಎಂದರು.

ಇನ್ನು ಸಿಬ್ಬಂದಿಗಳಿಗೆ ಡಿನ್ನರ್ ಆಯೋಜನೆ ಬಗ್ಗೆ ಮಾತನಾಡಿದ ಅವರು, ಸೌಹಾರ್ದವಾಗಿ ನಾನು ಊಟ ಅರೆಂಜ್ ಮಾಡಿದ್ದೇನೆ. ಮೂರು ವರ್ಷಗಳಿಂದ ನಮ್ಮ ಸಿಬ್ಬಂದಿ ಬೇರೆ ಬೇರೆ ಕೆಲಸಗಳನ್ನ ಅಸೆಂಬ್ಲಿಯಲ್ಲಿ ಮಾಡಿದ್ದಾರೆ. ತಳ ಮಟ್ಟದಿಂದ ಐಪಿಎಸ್ ಆಫೀಸರ್ ನನಗೆ ಸಹಕಾರ ಕೊಟ್ಟಿದ್ದಾರೆ. ಸಹಕಾರ ಕೊಟ್ಟ ಕಾರಣ ಡಿನ್ನರ್ ಇಟ್ಟುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಖಾದರ್​​​​​ಗೆ ಮಂತ್ರಿ ಸ್ಥಾನ ಫಿಕ್ಸ್?

ಖಾದರ್ ಅವರಿಗೆ ಮಂತ್ರಿ ಸ್ಥಾನ ಫಿಕ್ಸ್ ಆಗಿದ್ದರಿಂದಲೇ ಮಂಗಳವಾರ ಸಂಜೆ ವಿಧಾನಸೌಧದ ಸಿಬ್ಬಂದಿಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಭೋಜನ ಕೂಟ ಆಯೋಜನೆ ಮಾಡಿದ್ದಾರೆ ಎನ್ನುವ ಚರ್ಚೆ ನಡೆದಿದೆ. ಒಂದು ವೇಳೆ ಖಾದರ್ ಗೆ ಮಂತ್ರಿ ಸ್ಥಾನ ಖಚಿತವಾದರೆ ಅವರು ಸ್ಪೀಕರ್ ಹುದ್ದೆಗೆ ರಾಜೀನಾಮೆಯನ್ನು ನೀಡಲಿದ್ದಾರೆ. ಬಳಿಕ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಮರಳಿ ಪಡೆದುಕೊಳ್ಳಲಿದ್ದಾರೆ.

ಸ್ಪೀಕರ್ ಯುಟಿ ಖಾದರ್ ಅವರು ಕರ್ನಾಟಕದ ಮೊದಲ ಮುಸ್ಲಿಂ ಸಮುದಾಯದಿಂದ ಈ ಹುದ್ದೆಗೇರಿರುವ ಹೆಗ್ಗಳಿಕೆ ಹೊಂದಿದ್ದಾರೆ. ಈ ಮೊದಲು ಅಂದರೆ ಈ 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಇನ್ನು 2023ರಿಂದ 3 ವರ್ಷಗಳ ಕಾಲ ಸ್ಫೀಕರ್ ಆಗಿ ಸದನವನ್ನು ನಡೆಸಿದ್ದಾರೆ. ಇದೀಗ ಅವರು ಡಿಕೆ ಶಿವಕುಮಾರ್ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಕರ್ನಾಟಕದ ಮ್ತತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:15 pm, Tue, 2 June 26

Source link

ಕೃಷ್ಣಮೃಗ ಬೇಟೆ ಕುರಿತ ‘ಕಾಲಾ ಹಿರನ್’ ಸಿನಿಮಾ ಸಲ್ಮಾನ್ ಖಾನ್ ಬಯೋಪಿಕ್ ಅಲ್ಲ: ನಿರ್ಮಾಪಕರ ಸ್ಪಷ್ಟನೆ – Kannada News

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ 1998ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಪ್ರೇರಿತವಾಗಿದೆ ಎನ್ನಲಾದ ‘ಕಾಲಾ ಹಿರನ್’ (Kala Hiran) ಸಿನಿಮಾ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರದ ವಿರುದ್ಧ ಸಲ್ಮಾನ್ ಖಾನ್ ಅವರ ಕಾನೂನು ತಂಡವು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದೆ. ಈ ನೋಟಿಸ್ ಪ್ರತಿಯನ್ನು ಚಿತ್ರದ ನಿರ್ಮಾಪಕ ಅಮಿತ್ ಜಾನಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾವು ‘ವ್ಯಕ್ತಿತ್ವದ ಹಕ್ಕುಗಳ ಉಲ್ಲಂಘನೆ’ ಎಂದು ಸಲ್ಮಾನ್ ಖಾನ್ (Salman Khan) ಅವರ ತಂಡ ಆರೋಪಿಸಿದೆ. ಅದಕ್ಕೆ ನಿರ್ಮಾಪಕರು ತಿರುಗೇಟು ನೀಡಿದ್ದಾರೆ.

ಈ ಕಾನೂನು ಹೋರಾಟದ ಕುರಿತು ‘ಇಂಡಿಯಾ ಟುಡೇ’ ಜೊತೆ ಮಾತನಾಡಿರುವ ನಿರ್ಮಾಪಕ ಅಮಿತ್ ಜಾನಿ ಅವರು ಸಲ್ಮಾನ್ ಖಾನ್ ಅವರ ಈ ಕಾನೂನು ಕ್ರಮ ಅತ್ಯಂತ ಆತುರದ್ದು ಮತ್ತು ಅನಗತ್ಯ ಎಂದು ಹೇಳಿದ್ದಾರೆ. ‘ಇದು ಸಲ್ಮಾನ್ ಖಾನ್ ಅವರ ಬಯೋಪಿಕ್ ಖಂಡಿತಾ ಅಲ್ಲ. ಈ ಚಿತ್ರವು ಸಾರ್ವಜನಿಕ ವಲಯದಲ್ಲಿರುವ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ವನ್ಯಜೀವಿಗಳನ್ನು ರಕ್ಷಿಸಲು ಬಿಷ್ಣೋಯ್ ಸಮುದಾಯದವರು ನಡೆಸಿದ ಹೋರಾಟ ಮತ್ತು ಇತಿಹಾಸವನ್ನು ನಾವು ತೆರೆಯ ಮೇಲೆ ತರಲು ಪ್ರಯತ್ನಿಸಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಕಾಲಾ ಹಿರನ್ ಚಿತ್ರದಿಂದ ಸದ್ಯಕ್ಕೆ ಕೇವಲ ಪೋಸ್ಟರ್ ಮಾತ್ರ ಬಿಡುಗಡೆಯಾಗಿದೆ. ಸಿನಿಮಾ ಬಗ್ಗೆ ಇನ್ಯಾವ ಮಾಹಿತಿಯೂ ಹೊರಬಿದ್ದಿಲ್ಲ. ಜೂನ್ 20ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಯಾವುದೇ ಚರ್ಚೆ ಮಾಡದೇ ಈ ಹಂತದಲ್ಲೇ ಲೀಗಲ್ ನೋಟಿಸ್ ಕಳುಹಿಸಿರುವುದು ಸರಿಯಲ್ಲ’ ಎಂದು ನಿರ್ಮಾಪಕ ಅಮಿತ್ ಜಾನಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನಿರ್ಮಾಪಕ ಅಮಿತ್ ಜಾನಿ ಸ್ಪಷ್ಟನೆ:

ಚಿತ್ರದಲ್ಲಿ ಸಲ್ಮಾನ್ ಖಾನ್ ಅವರನ್ನು ನೆಗೆಟಿವ್ ಆಗಿ ಬಿಂಬಿಸಿಲ್ಲ ಅಥವಾ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್‌ನನ್ನು ವೈಭವೀಕರಿಸಿಲ್ಲ ಎಂದು ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದ ಘಟನೆಗಳು ಈಗಾಗಲೇ ಸಾರ್ವಜನಿಕವಾಗಿ ಎಲ್ಲರಿಗೂ ತಿಳಿದಿರುವ ವಿಷಯಗಳಾಗಿದ್ದು, ಅದನ್ನು ತೆರೆಯ ಮೇಲೆ ತೋರಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ವಾದಿಸಿದ್ದಾರೆ.

ಇದನ್ನೂ ಓದಿ: ಕೃಷ್ಣಮೃಗ ಬೇಟೆ ಕೇಸ್ ಕುರಿತು ಸಿನಿಮಾ: ಚಿತ್ರತಂಡಕ್ಕೆ ನೋಟಿಸ್ ಕಳಿಸಿದ ಸಲ್ಮಾನ್ ಖಾನ್

ಒಂದು ವೇಳೆ ಈ ವಿಷಯವಾಗಿ ನ್ಯಾಯಾಲಯದಿಂದ ನಮಗೆ ಕರೆ ಬಂದರೆ, ನಾವು ಖಂಡಿತಾ ಕೋರ್ಟ್‌ಗೆ ಹಾಜರಾಗಿ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೇವೆ. ಈ ಹಿಂದಿನ ಪ್ರಕರಣಗಳಲ್ಲೂ ನಾವು ಕಾನೂನು ಪ್ರಕ್ರಿಯೆಯನ್ನು ಗೌರವಿಸಿದ್ದೇವೆ, ಈಗಲೂ ಅದನ್ನೇ ಪಾಲಿಸುತ್ತೇವೆ ಎಂದು ಅಮಿತ್ ಜಾನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಶ್ಮಿಕಾ ಮಂದಣ್ಣರ ಹೊಸ ಸಿನಿಮಾ ಹಿಂದಿ ಸಿನಿಮಾ ಟ್ರೈಲರ್ ರಿಲೀಸ್ – Kannada News

ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ನಟಿಸಿರುವ ತ್ರಿಕೋನ ಪ್ರೇಮಕತೆಯುಳ್ಳ ಹೊಸ ಸಿನಿಮಾ ‘ಕಾಕ್​​ಟೇಲ್ 2’ನ ಟ್ರೈಲರ್ ಇಂದು (ಜೂನ್ 2) ಬಿಡುಗಡೆ ಆಗಿದೆ. 14 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ನಟನೆಯ ‘ಕಾಕ್​​ಟೇಲ್’ ಸಿನಿಮಾದ ಕತಾ ಮಾದರಿಯನ್ನೇ ಇರಿಸಿಕೊಂಡಿರುವ ‘ಕಾಕ್​​ಟೇಲ್ 2’ ಸಿನಿಮಾ ಹೊಸ ಪ್ರೇಕ್ಷಕರಿಗೆ ಮುದವಾಗುವ ರೀತಿಯಲ್ಲಿ ಪ್ರೇಮ ಹಾಗೂ ಗೆಳೆತನದ ಮಹತ್ವ ಸಾರುವ ಉದ್ದೇಶ ಇರಿಸಿಕೊಂಡು ಚಿತ್ರಮಂದಿರಗಳಿಗೆ ಬರುತ್ತಿದೆ.

2012 ರಲ್ಲಿ ಬಿಡುಗಡೆ ಆಗಿದ್ದ ‘ಕಾಕ್​​ಟೇಲ್’ ಸಿನಿಮಾನಲ್ಲಿ ಮಾಡರ್ನ್ ಯುವತಿ, ಸಾಂಪ್ರದಾಯಿಕ ಯುವತಿಯ ನಡುವೆ ಒಬ್ಬಾಕೆಯನ್ನು ನಾಯಕ ಸೈಫ್ ಅಲಿ ಖಾನ್ ಆಯ್ಕೆ ಮಾಡಬೇಕಿತ್ತು. ಈ ಹೊಸ ಕಾಕ್​​ಟೇಲ್​ ನಲ್ಲಿಯೂ ಕತೆ ತುಸು ಹಾಗೆಯೇ ಇದೆ. ಇಲ್ಲಿ ಕೃತಿ ಸನೋನ್ ಮಾಡರ್ನ್ ಹುಡುಗಿ ಅಲಿ ಆಗಿದ್ದರೆ ರಶ್ಮಿಕಾ ಮಂದಣ್ಣ ತುಸು ಸಾಂಪ್ರದಾಯಿಕ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಶಾಹಿದ್ ಕಪೂರ್ ಯಾರೊಟ್ಟಿಗೆ ಮದುವೆ ಆಗಬೇಕು ಎಂದು ಆಯ್ಕೆ ಕೊಳ್ಳಬೇಕಿದೆ.

ಇದನ್ನೂ ಓದಿ:‘ಪುಷ್ಪ’ ತೆರಳಿದ್ದ ಜಾಗಕ್ಕೆ ಹೋದ ನಟಿ ರಶ್ಮಿಕಾ ಮಂದಣ್ಣ

ಸಿನಿಮಾದ ಟ್ರೈಲರ್​​ನಲ್ಲಿ ತೋರಿಸಿರುವಂತೆ ‘ಕಾಕ್​​ಟೇಲ್ 2’ ಸಿನಿಮಾವು ಒಂದೊಳ್ಳೆ ಹಾಸ್ಯಭರಿತ ಪ್ರೇಮಕತೆಯಾಗಿದ್ದು, ಸಿನಿಮಾನಲ್ಲಿ ಹಾಸ್ಯದ ಜೊತೆಗೆ ಎಮೋಷನ್ಸ್ ಸಹ ಇದೆ. ಜೊತೆಗೆ ಒಂದು ಸುಂದರ ಪ್ರಯಾಣವೂ ಇದೆ. ಗೆಳೆತನ ಮತ್ತು ಪ್ರೀತಿಯ ಬಗ್ಗೆ ಸಂದೇಶವನ್ನು ‘ಕಾಕ್​​ಟೇಲ್ 2’ ಸಿನಿಮಾ ಹೊಂದಿದೆ. ಸಿನಿಮಾನಲ್ಲಿ ಕೃತಿ ಸನೋನ್ ಸಖತ್ ಗ್ಲಾಮರಸ್ ಆಗಿ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಕಂಡು ಬರುತ್ತಿದೆ. ಹಾಗೆಯೇ ರಶ್ಮಿಕಾ ಸಹ ತುಸು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಎಮೋಷನಲ್ ದೃಶ್ಯಗಳು ಸಹ ರಶ್ಮಿಕಾ ಅವರಿಗೆ ಇದೆ.

2012ರ ‘ಕಾಕ್​​ಟೇಲ್’ ಸಿನಿಮಾನಲ್ಲಿದ್ದ ಬ್ಲಾಕ್ ಬಸ್ಟರ್ ಹಾಡಾದ ‘ತುಹು ದಿನ್ ಜಲೆ’ ಹಾಡು ‘ಕಾಕ್​​ಟೇಲ್ 2’ ಸಿನಿಮಾನಲ್ಲಿಯೂ ಉಳಿಸಿಕೊಳ್ಳಲಾಗಿದೆ. ಸಿನಿಮಾವನ್ನು ಹೋಮಿ ಅದಾಜಾನಿಯಾ ನಿರ್ದೇಶನ ಮಾಡಿದ್ದಾರೆ. ಲವ್ ರಂಜನ್ ಈ ಸಿನಿಮಾಕ್ಕೆ ಕತೆ ಮತ್ತು ಚಿತ್ರಕತೆ ಬರೆದಿದ್ದಾರೆ. ನಿರ್ಮಾಣ ಮಾಡಿರುವುದು ದಿನೇಶ್ ವಿಜನ್. ಸಿನಿಮಾ ಜೂನ್ 19ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧಾರಾಕಾರ ಮಳೆಗೆ ಹೊಳೆಯಂತಾದ ಬೆಂಗಳೂರಿನ ರಸ್ತೆಗಳು: ಲ್ಯಾಂಡಿಂಗ್​​ ಸಾಧ್ಯವಾಗದೆ ಆಗಸದಲ್ಲೇ ಸುತ್ತಿದ ವಿಮಾನ! – Kannada News

ಮಳೆ ನೀರು ತುಂಬಿ ಹೊಳೆಯಂತಾದ ರಸ್ತೆಗಳುImage Credit source: BTP X Account

ಬೆಂಗಳೂರು, ಜೂನ್​​ 02: ನಗರದ ಹಲವೆಡೆ ಮಳೆ (Rain) ಸುರಿದಿದ್ದು, ಏಕಾಏಕಿ ವರುಣನ ಆಗಮನದಿಂದ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ಕಚೇರಿಗಳಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ದಿಢೀರ್​​ ಸುರಿದ ಮಳೆಗೆ ಪರದಾಟ ನಡೆಸಿದ್ದು, ಬಸ್​​ ನಿಲ್ದಾಣಗಳು ಮತ್ತು ಅಂಗಡಿ ಮುಗಟ್ಟುಗಳ ಬಳಿ ನಿಂತ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡುಬಂದಿವೆ. ಮೆಜೆಸ್ಟಿಕ್, ವಸಂತನಗರ, ಕೆ.ಆರ್.ಸರ್ಕಲ್, ಕೆ.ಆರ್​.ಮಾರ್ಕೆಟ್, ವಿಜಯನಗರ, ಜಯನಗರ, ಬನಶಂಕರಿ, ಕೆಂಗೇರಿ, ನಾಯಂಡಹಳ್ಳಿ, ಬಸವೇಶ್ವರ ನಗರ, ರಾಜಾಜಿನಗರ, ಶಿವಾಜಿನಗರ, ಮಲ್ಲೇಶ್ವರಂ, ಬಸವನಗುಡಿ, ಗಿರಿನಗರ, ಜ್ಞಾನಭಾರತಿ, ಆರ್.ಆರ್.ನಗರ, ಶಾಂತಿನಗರ, ಕೋರಮಂಗಲ, ಹೆಚ್​ಎಸ್​ಆರ್ ಲೇಔಟ್, ಆಡುಗೋಡಿ, ಮಡಿವಾಳ, ಬಿಟಿಎಂ ಲೇಔಟ್, ಹೆಬ್ಬಾಳ, ಕಾಮಾಕ್ಷಿಪಾಳ್ಯ, ಬ್ಯಾಟರಾಯನಪುರ, ಸಹಕಾರನಗರ, ಯಲಹಂಕ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ.

ಮುಖ್ಯಾಂಶಗಳು

  • ಬೆಂಗಳೂರು ನಗರದ ವಿವಿಧೆಡೆ ಗುಡುಗು-ಮಿಂಚು ಸಹಿತ ಅಬ್ಬರಿಸಿದ ವರುಣ
  • ಹಲವೆಡೆ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರ ತೀವ್ರ ಪರದಾಟ
  • ಏರ್​​ಪೋರ್ಟ್​​ನಲ್ಲಿ ಲ್ಯಾಂಡಿಂಗ್​​ ಸಾಧ್ಯವಾಗದೇ ಆಗಸದಲ್ಲೇ ಸುತ್ತಿದ ವಿಮಾನ

ಮಳೆ ನೀರು ತುಂಬಿ ಹೊಳೆಯಂತಾದ ರಸ್ತೆಗಳು

ನಗರದ ಕೆಲವು ಏರಿಯಾಗಳಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಬಾಗ್ಮನೆ ಟೆಕ್​​ ಪಾರ್ಕ್​​, ಮಾರತಹಳ್ಳಿ ಸೇರಿ ಹಲವೆಡೆ ರಸ್ತೆಗಳು ಹೊಳೆಯಂತಾಗಿದ್ದು, ದೇವರಬೀಸನಹಳ್ಳಿ ಮೇಲ್ಸೇತುವೆ ರ್ಯಾಂಪ್‌ನಲ್ಲಿ ನೀರು ನಿಂತಿರುವ ಕಾರಣ ಕಡುಬೀಸನಹಳ್ಳಿಯಿಂದ ಬೆಳ್ಳಂದೂರು ಕಡೆಗೆ ವಾಹನಗಳ ಸಂಚಾರ ಕೂಡ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ: ಇಡೀ ರಾಜ್ಯದಲ್ಲಿಂದು ಭಾರೀ ಮಳೆ! 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಲ್ಯಾಂಡಿಂಗ್​​ ಸಾಧ್ಯವಾಗದೆ ಆಕಾಶದಲ್ಲೇ ಸುತ್ತಿದ ವಿಮಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​ನ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಗುಡುಗು ಸಹಿತ ವರುಣನ ಆರ್ಭಟದ ಹಿನ್ನೆಲೆ ನವದೆಹಲಿಯಿಂದ ಆಗಮಿಸಿದ್ದ ಇಂಡಿಗೋ ಫ್ಲೈಟ್ ಲ್ಯಾಂಡಿಂಗ್​​ ಸಾಧ್ಯವಾಗದೆ ಕೆಲ ಕಾಲ ಆಕಾಶದಲ್ಲೇ ಸುತ್ತಾಡಿದ ಪ್ರಸಂಗವೂ ನಡೆದಿದೆ. ವಿಮಾನ ನಿಲ್ದಾಣದಿಂದ ನಗರದ ಕಡೆ ಆಗಮಿಸಬೇಕಿದ್ದ ಪ್ರಯಾಣಿಕರು ಕೂಡ ಮಳೆಯಿಂದ ತೀವ್ರ ತೊಂದರೆ ಅನುಭವಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಮತಾ ಬ್ಯಾನರ್ಜಿಗೆ ಟಿಎಂಸಿ ನಾಯಕರಿಂದಲೇ ಮುಖಭಂಗ; ಪ್ರತಿಭಟನೆಯಲ್ಲಿ ಕೇವಲ 5 ಶಾಸಕರು, 3 ಸಂಸದರು ಭಾಗಿ! – Kannada News

ಕೊಲ್ಕತ್ತಾ, ಜೂನ್ 2: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಇಂದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. “ಹೋರಾಡುತ್ತೇವೆ ಇಲ್ಲವೇ ಸಾಯುತ್ತೇವೆ” ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಕೇವಲ 5 ಶಾಸಕರು ಮತ್ತು 3 ಸಂಸದರು ಮಾತ್ರ ಹಾಜರಾಗುವ ಮೂಲಕ ಮಮತಾ ಬ್ಯಾನರ್ಜಿಗೆ ಸ್ವಪಕ್ಷದವರಿಂದಲೇ ಭಾರಿ ಮುಖಭಂಗವಾಗಿದೆ.

ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ನೀಡಬೇಕಾದ ಹಣ ಹಾಗೂ ವಿವಿಧ ಯೋಜನೆಗಳ ಅನುದಾನವನ್ನು ತಡೆಹಿಡಿದಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಕೊಲ್ಕತ್ತಾದಲ್ಲಿ ಈ ಪ್ರತಿಭಟನೆಯನ್ನು ಆಯೋಜಿಸಿದ್ದರು. ವೇದಿಕೆಯ ಮೇಲೆ ನಿಂತು “ಬಂಗಾಳದ ಹಕ್ಕುಗಳಿಗಾಗಿ ನಾವು ಸಾಯುವವರೆಗೂ ಹೋರಾಡಲು ಸಿದ್ಧ” ಎಂದು ಮಾಜಿ ಸಿಎಂ ಮಮತಾ ಗುಡುಗಿದ್ದಾರೆ. ಈ ಪ್ರತಿಭಟನೆಯಲ್ಲಿ ಟಿಎಂಸಿ ಪಕ್ಷದ ನೂರಾರು ಶಾಸಕರು ಮತ್ತು ಸಂಸದರ ಪೈಕಿ ಕೇವಲ 5 ಶಾಸಕರು, 3 ಸಂಸದರು ಮಾತ್ರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರತಿಭಟನೆಯ ಇಡೀ ದಿನ ಮಮತಾ ಬ್ಯಾನರ್ಜಿ ಏಕಾಂಗಿಯಾಗಿಯೇ ವೇದಿಕೆಯನ್ನು ನಿಭಾಯಿಸಬೇಕಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿಷ್ಠಿತ ‘ಫೋರ್ಬ್ಸ್ 30 ಅಂಡರ್ 30’ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರಿನ 17 ವರ್ಷದ ದಿವಾ ಉತ್ಕರ್ಷ – Kannada News

ಡಯಾಬಿಟಿಸ್ ಪರೀಕ್ಷೆಯ ಚಿತ್ರImage Credit source: Getty Images

ಬೆಂಗಳೂರು, ಜೂನ್ 2: ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ (NPS) ವಿದ್ಯಾರ್ಥಿನಿಯಾದ 17 ವರ್ಷದ ದಿವಾ ಉತ್ಕರ್ಷ (Divaa Uthkarsha) ಅವರು ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಗಾಗಿ ಫೋರ್ಬ್ಸ್ ಏಷ್ಯಾ ಪಟ್ಟಿಯ ‘ಫೋರ್ಬ್ಸ್ 30 ಅಂಡರ್ 30’ (Forbes 30 Under 30 Asia) ರಕ್ಷಣಾ ಮತ್ತು ವಿಜ್ಞಾನ ವಿಭಾಗದಲ್ಲಿ ದಿವಾ ಅವರು ಸ್ಥಾನ ಪಡೆದಿದ್ದಾರೆ.

ಹೈಸ್ಕೂಲ್ ಇದ್ದಾಗಲೇ ‘ಪ್ರಾಜೆಕ್ಟ್ ಅಮೃತ’ (Project Amrita) ಆರಂಭ

ದಿವಾ ಅವರು ಕೇವಲ 14 ವರ್ಷದವರಿದ್ದಾಗ ತಮ್ಮ ಆಪ್ತ ಸಂಬಂಧಿಯೊಬ್ಬರು ಮಧುಮೇಹ ಮತ್ತು ಮೂತ್ರಪಿಂಡದ (Kidney) ವೈಫಲ್ಯದಿಂದ ಬಳಲುತ್ತಿರುವುದನ್ನು ಕಂಡರು. ಇದು ಅವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತು. ಇದರ ಫಲವಾಗಿ ಅವರು ‘ಪ್ರಾಜೆಕ್ಟ್ ಅಮೃತ’ ಎಂಬ ಲಾಭರಹಿತ ಸಂಸ್ಥೆಯನ್ನು (NGO) ಆರಂಭಿಸಿದರು.

ಈ ಸಂಸ್ಥೆಯ ಮೂಲಕ ದಿವಾ ಅವರು ಭಾರತದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಟೈಪ್-1 ಮಧುಮೇಹ ಮತ್ತು ಮೂತ್ರಪಿಂಡದ ದೀರ್ಘಕಾಲದ ಕಾಯಿಲೆಗಳ (Chronic Kidney Disease) ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುತ್ತಿದ್ದಾರೆ.

ಇದನ್ನೂ ಓದಿ: ಅಗತ್ಯ ಸಂದರ್ಭದಲ್ಲೇ ಹೆಲ್ತ್ ಇನ್ಷೂರೆನ್ಸ್ ಕ್ಯಾಷ್​ಲೆಸ್ ಕೈಕೊಡಬಹುದು; ಇಲ್ಲಿವೆ ಪ್ರಮುಖ ಕಾರಣಗಳು

ಕಡುಬಡತನದಲ್ಲಿರುವ ಮೂತ್ರಪಿಂಡದ ರೋಗಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಡಯಾಲಿಸಿಸ್ (Dialysis) ಚಿಕಿತ್ಸೆ ಕೊಡಿಸಲು ಇವರ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಇದಕ್ಕಾಗಿ ದಿವಾ ಅವರು ಯುವಕರ ತಂಡವನ್ನು ಕಟ್ಟಿಕೊಂಡು ದೊಡ್ಡ ಮಟ್ಟದಲ್ಲಿ ನಿಧಿ ಸಂಗ್ರಹಣೆ (Crowdfunding) ಮಾಡಿದ್ದಾರೆ.

ಫೋರ್ಬ್ಸ್ ಮೆಚ್ಚುಗೆ: ಕೇವಲ ಪಠ್ಯಪುಸ್ತಕದ ಓದಿಗೆ ಸೀಮಿತವಾಗದೆ, ಹದಿಹರೆಯದಲ್ಲೇ ಸಮಾಜದ ಅತ್ಯಂತ ಗಂಭೀರವಾದ ಆರೋಗ್ಯ ಸಮಸ್ಯೆಯೊಂದಕ್ಕೆ ಸ್ಪಂದಿಸಿ, ನೂರಾರು ರೋಗಿಗಳ ಜೀವ ಉಳಿಸಲು ಕಾರಣರಾಗಿರುವ ದಿವಾ ಅವರ ನಾಯಕತ್ವ ಮತ್ತು ಮಾನವೀಯ ಗುಣವನ್ನು ಫೋರ್ಬ್ಸ್ ಜಾಗತಿಕ ಮಟ್ಟದಲ್ಲಿ ಶ್ಲಾಘಿಸಿದೆ.

ಡಯಾಲಿಸಿಸ್ ಮಟ್ಟಕ್ಕೆ ಹೋಗುವುದನ್ನು ತಪ್ಪಿಸುವುದು ಉದ್ದೇಶ

“ನಮ್ಮ ದೇಶದಲ್ಲಿ ಬಡತನದ ಕಾರಣದಿಂದಾಗಿ ಅನೇಕರು ಡಯಾಲಿಸಿಸ್ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಿ ಜೀವ ಕಳೆದುಕೊಳ್ಳುತ್ತಾರೆ. ಇದನ್ನು ತಡೆಯುವುದೇ ನಮ್ಮ ಸಂಸ್ಥೆಯ ಮುಖ್ಯ ಗುರಿ. ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಸಿಕ್ಕಿರುವುದು ನನ್ನ ವೈಯಕ್ತಿಕ ಸಾಧನೆಗಿಂತ ಹೆಚ್ಚಾಗಿ, ನಾವು ಮಾಡುತ್ತಿರುವ ಕೆಲಸಕ್ಕೆ ಸಿಕ್ಕ ಜಾಗತಿಕ ಮಾನ್ಯತೆಯಾಗಿದೆ” ಎಂದು ದಿವಾ ಹೇಳುತ್ತಾರೆ.

ಇದನ್ನೂ ಓದಿ: ಭಾರತ ಈಗ ಗ್ಲೋಬಲ್ ಬ್ಯಾಕ್ ಆಫೀಸ್ ಮಾತ್ರವೇ ಅಲ್ಲ, ವಿಶ್ವದರ್ಜೆ ಪ್ರಾಡಕ್ಟ್ ನೀಡುವ ದೇಶವಾಗಿದೆ: ಪ್ರಸಾದ್ ಷಣ್ಮುಗಂ

ಕೇವಲ 17ನೇ ವಯಸ್ಸಿನಲ್ಲಿ ಇಡೀ ಏಷ್ಯಾ ಖಂಡದಲ್ಲೇ ಅತ್ಯಂತ ಪ್ರಭಾವಶಾಲಿ ಯುವ ಸಾಧಕಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಬೆಂಗಳೂರಿನ ದಿವಾ ಉತ್ಕರ್ಷ ಅವರ ಈ ಪಯಣ ಇಂದಿನ ಯುವ ಪೀಳಿಗೆಗೆ ನಿಜಕ್ಕೂ ದೊಡ್ಡ ಪ್ರೇರಣೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ-ನೇಪಾಳ ಗಡಿ ವಿಷಯದಲ್ಲಿ ಮೂರನೇ ದೇಶದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ; ಭಾರತದ ಖಡಕ್ ಸಂದೇಶ – Kannada News

ನವದೆಹಲಿ, ಜೂನ್ 2: ಭಾರತ ಮತ್ತು ನೇಪಾಳದ (Nepal Border) ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಅತ್ಯಂತ ಕಠಿಣ ನಿಲುವು ತಳೆದಿದೆ. ನೇಪಾಳದ ಪ್ರಧಾನಿಯವರ ಇತ್ತೀಚಿನ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ, “ಎರಡು ದೇಶಗಳ ನಡುವಿನ ಶೇ. 98ರಷ್ಟು ಗಡಿ ಗುರುತಿಸುವಿಕೆ (Demarcation) ಈಗಾಗಲೇ ಯಶಸ್ವಿಯಾಗಿ ಮುಗಿದಿದೆ. ಉಳಿದ ವಿಷಯಗಳನ್ನು ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ಮೂರನೇ ವ್ಯಕ್ತಿ ಅಥವಾ ದೇಶದ ಹಸ್ತಕ್ಷೇಪದ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.

ಈ ಮೂಲಕ ಭಾರತ ಮತ್ತು ನೇಪಾಳ ನಡುವಿನ ಗಡಿ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಭಾರತ ಸರ್ಕಾರವು ಸಂಪೂರ್ಣವಾಗಿ ತಿರಸ್ಕರಿಸಿದೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ನೆರೆಹೊರೆಯ ದೇಶಗಳ ನಡುವಿನ ಗಡಿ ವಿವಾದಗಳು ಕೇವಲ ದ್ವಿಪಕ್ಷೀಯ ಚರ್ಚೆಗಳ ಮೂಲಕವೇ ಇತ್ಯರ್ಥವಾಗಬೇಕು ಎಂಬ ತನ್ನ ದೃಢ ನಿಲುವನ್ನು ಪುನರುಚ್ಚರಿಸಿದೆ.

ಇದನ್ನೂ ಓದಿ: ಆರು ವರ್ಷ ಬಳಿಕ ಲಿಪುಲೇಖ ಪಾಸ್ ಮೂಲಕ ಭಾರತ-ಚೀನಾ ಟ್ರೇಡಿಂಗ್ ಪುನಾರಂಭ; ಆದರೆ, ನೇಪಾಳದಿಂದ ಆಕ್ಷೇಪ ಯಾಕೆ?

ಇತ್ತೀಚೆಗೆ ನೇಪಾಳದ ಪ್ರಧಾನಮಂತ್ರಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಭಾರತ ಮತ್ತು ನೇಪಾಳ ನಡುವಿನ ಬಹುಕಾಲದ ಗಡಿ ವಿವಾದಗಳನ್ನು (ವಿಶೇಷವಾಗಿ ಕಾಲಾಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಪ್ರದೇಶಗಳು) ಇತ್ಯರ್ಥಪಡಿಸಲು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ (ಇಂಗ್ಲೆಂಡ್ ಮತ್ತು ಚೀನಾ)ಯ ಅಗತ್ಯವಿದೆ ಎಂಬ ಹೇಳಿಕೆ ನೀಡಿದ್ದರು. ನೇಪಾಳದ ಈ ಹೇಳಿಕೆಯು ರಾಜತಾಂತ್ರಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ನೇಪಾಳದ ಪ್ರಧಾನಿಯವರ ಈ ಹೇಳಿಕೆಯನ್ನು ಭಾರತವು ನಿರಾಕರಿಸಿದೆ. ಭಾರತದ ವಿದೇಶಾಂಗ ಸಚಿವಾಲಯದ ಮೂಲಗಳ ಪ್ರಕಾರ, ಭಾರತ ಮತ್ತು ನೇಪಾಳ ನಡುವಿನ ಸುಮಾರು 1,751 ಕಿ.ಮೀ. ಉದ್ದದ ಗಡಿಯಲ್ಲಿ ಈಗಾಗಲೇ ಶೇ. 98ರಷ್ಟು ಭಾಗವನ್ನು ಪರಸ್ಪರ ಒಪ್ಪಿಗೆಯೊಂದಿಗೆ ಯಶಸ್ವಿಯಾಗಿ ಗುರುತಿಸಲಾಗಿದೆ ಮತ್ತು ನಕ್ಷೆ ತಯಾರಿಸಲಾಗಿದೆ. ಬಾಕಿ ಉಳಿದಿರುವ ಕೇವಲ ಶೇ. 2ರಷ್ಟು ಗಡಿ ಸಮಸ್ಯೆಯನ್ನು (ವಿವಾದಿತ ಪ್ರದೇಶಗಳು) ಉಭಯ ದೇಶಗಳು ಸ್ಥಾಪಿಸಿರುವ ಜಂಟಿ ತಾಂತ್ರಿಕ ಸಮಿತಿಗಳು ಮತ್ತು ರಾಜತಾಂತ್ರಿಕ ವೇದಿಕೆಗಳ ಮೂಲಕವೇ ಬಗೆಹರಿಸಲಾಗುವುದು.

ಇದನ್ನೂ ಓದಿ: Zojila Tunnel : ಲಡಾಖ್-ಕಾಶ್ಮೀರ ನಡುವೆ ಸರ್ವಋತು ಸಂಪರ್ಕ, ಜೂನ್ 9ರೊಳಗೆ ಝೋಜಿಲಾ ಸುರಂಗದ ಉತ್ಖನನ ಕಾರ್ಯ ಪೂರ್ಣ

ಕಾಶ್ಮೀರದ ವಿಷಯದಲ್ಲಿ ಭಾರತ ಹೇಗೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲವೋ, ಅದೇ ರೀತಿ ನೇಪಾಳದೊಂದಿಗಿನ ಗಡಿ ವಿಷಯದಲ್ಲೂ ಯಾವುದೇ ಮೂರನೇ ದೇಶದ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾರತ ಕಠಿಣ ಸಂದೇಶ ರವಾನಿಸಿದೆ.

ಏನಿದು ಗಡಿ ವಿವಾದ?:

ಭಾರತ ಮತ್ತು ನೇಪಾಳ ನಡುವಿನ ಗಡಿ ವಿವಾದವು 1816ರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ನೇಪಾಳ ರಾಜರ ನಡುವೆ ನಡೆದ ‘ಸುಗೌಲಿ ಒಪ್ಪಂದ’ಕ್ಕೆ (Treaty of Sugauli) ಸಂಬಂಧಿಸಿದ್ದಾಗಿದೆ. ಮಹಾಕಾಳಿ ನದಿಯ ಉಗಮ ಸ್ಥಾನದ ಕುರಿತು ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ನೇಪಾಳವು ಇತ್ತೀಚಿನ ವರ್ಷಗಳಲ್ಲಿ ತನ್ನ ಹೊಸ ನಕ್ಷೆಯಲ್ಲಿ ಭಾರತದ ಉತ್ತರಾಖಂಡಕ್ಕೆ ಸೇರಿದ ಕಾಲಾಪಾನಿ, ಲಿಂಪುಯಾಧುರಾ ಮತ್ತು ಲಿಪುಲೇಖ್ ಪ್ರದೇಶಗಳನ್ನು ತನ್ನದೆಂದು ತೋರಿಸಿಕೊಂಡಿದ್ದರಿಂದ ಉಭಯ ದೇಶಗಳ ನಡುವಿನ ಬಾಂಧವ್ಯದಲ್ಲಿ ಕೊಂಚ ಬಿರುಕು ಮೂಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್ ಪ್ರಮಾಣ ವಚನ ಹಿನ್ನೆಲೆ 90 ಸಾವಿರ ಮನೆಗಳಿಗೆ ‘ಲಾಡು’ ಭಾಗ್ಯ; ಶಾಸಕ ಶ್ರೀನಿವಾಸ್ ಭರ್ಜರಿ ತಯಾರಿ! – Kannada News

ಡಿಕೆ ಶಿವಕುಮಾರ್ ಪ್ರಮಾಣ ವಚನ ಹಿನ್ನೆಲೆ 90 ಸಾವಿರ ಮನೆಗಳಿಗೆ ‘ಲಾಡು’ ಭಾಗ್ಯImage Credit source: Tv9 kannada

ನೆಲಮಂಗಲ, ಜೂ.2: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಐತಿಹಾಸಿಕ ಕ್ಷಣಕ್ಕೆ ಇಡೀ ನೆಲಮಂಗಲ ವಿಧಾನಸಭಾ ಕ್ಷೇತ್ರವೇ ವಧುವಿನಂತೆ ಸಿಂಗಾರಗೊಳ್ಳುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕ್ಷೇತ್ರದ ಪ್ರತಿ ಹಳ್ಳಿಯ ಪ್ರತಿ ಮನೆಯಲ್ಲೂ ಸಂಭ್ರಮ ಮನೆ ಮಾಡಿದ್ದು, ಈ ಐತಿಹಾಸಿಕ ಸಂತಸವನ್ನು ಹಂಚಿಕೊಳ್ಳಲು ಸ್ಥಳೀಯ ಶಾಸಕರಾದ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಅಭೂತಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ.

ಡಿಕೆಶಿ ಅವರು ಮುಖ್ಯಮಂತ್ರಿಯಾಗುತ್ತಿರುವ ಈ ಅದ್ಭುತ ಕ್ಷಣ ನೆನಪಿನಲ್ಲಿರಬೇಕು ಎಂದು ನೆಲಮಂಗಲ ತಾಲೂಕಿನಾದ್ಯಂತ ಇರುವ ಸುಮಾರು 85 ಸಾವಿರದಿಂದ 90 ಸಾವಿರ ಮನೆಗಳಿಗೆ ತಲಾ ಮುಕ್ಕಾಲು ಕೆಜಿಯಷ್ಟು (750 ಗ್ರಾಂ) ಉನ್ನತ ಗುಣಮಟ್ಟದ ಲಾಡುಗಳ ಸಿಹಿ ಬಾಕ್ಸ್ ಅನ್ನು ಉಚಿತವಾಗಿ ವಿತರಿಸಲು ಶಾಸಕರು ನಿರ್ಧರಿಸಿದ್ದಾರೆ. ನಾಳೆ ಬೆಳಗ್ಗೆಯಿಂದಲೇ ಈ ಬೃಹತ್ ಸಿಹಿ ಹಂಚಿಕೆ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ಇದನ್ನೂ ಓದಿ: ಶಾಸಕರ ಗಮನಕ್ಕೆ: ಟ್ಯಾಂಕ್ ಇದೆ, ಬೋರ್‌ವೆಲ್ ಇದೆ.. ಆದ್ರೆ ನೀರಿಲ್ಲ! ಬೆಳ್ತಂಗಡಿಯ ಬೆಳಾಲು ಗ್ರಾಮದ ಜನರಿಗೆ ಕಲುಷಿತ ಗುಂಡಿ ನೀರೇ ಗತಿ

300 ಬಾಣಸಿಗರಿಂದ ಹಗಲಿರುಳು ಸಿದ್ಧತೆ; 10 ಲಕ್ಷ ಲಾಡು ತಯಾರಿ!:

ಈ ಸಿಹಿ ವಿತರಣಾ ಕಾರ್ಯಕ್ಕಾಗಿ ನೆಲಮಂಗಲದಲ್ಲಿ ಬೃಹತ್ ಅಡುಗೆ ಶಾಲೆ ನಿರ್ಮಾಣವಾಗಿದ್ದು, ಸುಮಾರು 250 ರಿಂದ 300 ನುರಿತ ಬಾಣಸಿಗರು (Chefs) ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಇಡೀ ಕ್ಷೇತ್ರಕ್ಕೆ ವಿತರಿಸಲು ಒಟ್ಟಾರೆ 9 ರಿಂದ 10 ಲಕ್ಷ ಲಾಡುಗಳ ಅಗತ್ಯವಿದ್ದು, ಸದ್ಯ ಭರದಲ್ಲಿ ಲಾಡು ತಯಾರಿಕೆ ನಡೆಯುತ್ತಿದೆ.

ಇಲ್ಲಿದೆ ನೋಡಿ ವಿಡಿಯೋ:

ಶಾಸಕರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಮುಖ ಮುಖಂಡರು ಹಾಗೂ ನೂರಾರು ಸಂಖ್ಯೆಯ ಉತ್ಸಾಹಿ ಕಾರ್ಯಕರ್ತರು ಪ್ರತಿ ಗ್ರಾಮದ ಮನೆ ಮನೆಗೆ ತೆರಳಿ ಈ ಸಿಹಿ ಪೊಟ್ಟಣಗಳನ್ನು ಹಸ್ತಾಂತರಿಸಲಿದ್ದಾರೆ. ಕ್ಷೇತ್ರದ ಕೊನೆಯ ಮನೆಗೂ ಸಿಹಿ ತಲುಪುವವರೆಗೂ ಈ ವಿತರಣಾ ಕಾರ್ಯಕ್ರಮವು ನಿರಂತರವಾಗಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಒಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರ ಸಿಎಂ ಪಟ್ಟಾಭಿಷೇಕದ ಖುಷಿ ನೆಲಮಂಗಲದ ಜನರಲ್ಲಿ ನೆನಪಾಗಿರಲಿ ಎಂದು ಈ ಕೆಲಸವನ್ನು ಮಾಡುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link