Category Archives: Blog

Your blog category

Bengaluru Air Quality: ಇಳಿಕೆಯಾಯ್ತು ಮಾಲಿನ್ಯ, ಬೆಂಗಳೂರಿಗರೇ ನಿಮಗಿದೆ ಗುಡ್ ನ್ಯೂಸ್!

ಬೆಂಗಳೂರು, ಜೂನ್ 01: ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ಇತ್ತೀಚಿನ ಮಳೆ ಮತ್ತು ಮುಂಗಾರು ಮಾರುತಗಳ ಪ್ರಭಾವದಿಂದಾಗಿ ಸದ್ಯಕ್ಕೆ ಸ್ಥಿರ ಹಾಗೂ ಆರೋಗ್ಯಕರ ಮಟ್ಟದಲ್ಲಿದೆ. ಜೂನ್ 1ರ ಇಂದಿನ ವರದಿಯ ಪ್ರಕಾರ, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಉತ್ತಮ ಮತ್ತು ಸಮಾಧಾನಕರ ಮಟ್ಟದಲ್ಲಿ ದಾಖಲಾಗಿದೆ.

ಮುಖ್ಯಾಂಶಗಳು

  • ಪ್ರೀ-ಮಾನ್ಸೂನ್ ಮಳೆಯಿಂದಾಗಿ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸುಧಾರಣೆ.
  • ಸಿಲಿಕಾನ್ ಸಿಟಿ ಬೆಂಗಳೂರಿನ ಸರಾಸರಿ AQI 45 ರಿಂದ 65 ದಾಖಲು.
  • ಮೈಸೂರು ಮತ್ತು ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಉತ್ತಮ ಮಟ್ಟದಲ್ಲಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಪ್ರೀ-ಮಾನ್ಸೂನ್ ಮಳೆಯಿಂದಾಗಿ ವಾತಾವರಣದಲ್ಲಿನ ಧೂಳಿನ ಕಣಗಳು ಗಣನೀಯವಾಗಿ ಕಡಿಮೆಯಾಗಿವೆ. ಇಂದಿನ ವರದಿಯ ಪ್ರಕಾರ, ಬೆಂಗಳೂರಿನ ಸರಾಸರಿ AQI 45 ರಿಂದ 65 ರ ಆಸುಪಾಸಿನಲ್ಲಿ ದಾಖಲಾಗಿದೆ. ಇದು ಉತ್ತಮ ಮತ್ತು ಸಾಧಾರಣ ವಾತಾವರಣವನ್ನು ಸೂಚಿಸುತ್ತದೆ.

ನಗರದ ಪ್ರಮುಖ ಪ್ರದೇಶಗಳ ವಿವರ ಹೀಗಿದೆ:

  • ಸಿಲ್ಕ್ ಬೋರ್ಡ್ ಮತ್ತು ಮೆಜೆಸ್ಟಿಕ್: ವಾಹನ ಸಂಚಾರ ದಟ್ಟಣೆ ಹೆಚ್ಚಿರುವ ಈ ಭಾಗಗಳಲ್ಲಿ AQI ಸಲ್ಪ ಮಟ್ಟಿಗೆ ಹೆಚ್ಚಿದ್ದು, 60 – 70 ದಾಖಲಾಗಿದೆ.
  • ಜಯನಗರ ಮತ್ತು ಮಲ್ಲೇಶ್ವರಂ: ಹಸಿರು ಹೆಚ್ಚಿರುವ ಈ ವಲಯಗಳಲ್ಲಿ AQI ಅತ್ಯಂತ ಉತ್ತಮವಾಗಿದ್ದು, 35 – 45 ಮಟ್ಟದಲ್ಲಿದೆ.
  • ಹೂಡಿ ಮತ್ತು ವೈಟ್‌ಫೀಲ್ಡ್: ಐಟಿ ವಲಯದ ಈ ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 50 – 62ರಷ್ಟಿದೆ.

ಕರ್ನಾಟಕದ ಇತರೆ ಪ್ರಮುಖ ನಗರಗಳ AQI ಸ್ಥಿತಿ

ರಾಜ್ಯದ ಇತರೆ ಜಿಲ್ಲಾ ಕೇಂದ್ರಗಳಲ್ಲೂ ಗಾಳಿಯ ಗುಣಮಟ್ಟವು ಶ್ವಾಸಕೋಶದ ಆರೋಗ್ಯಕ್ಕೆ ಪೂರಕವಾಗಿದೆ. ಕೈಗಾರಿಕಾ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಮಾಲಿನ್ಯ ನಿಯಂತ್ರಣದಲ್ಲಿದೆ.

  • ಮೈಸೂರು: 30 – 40
  • ಮಂಗಳೂರು: 35 – 45
  • ಹುಬ್ಬಳ್ಳಿ-ಧಾರವಾಡ: 50 – 60
  • ಕಲಬುರಗಿ: 65 – 75

ಸಾಮಾನ್ಯವಾಗಿ 0-50 ರವರೆಗಿನ AQI ಅನ್ನು ‘ಅತ್ಯಂತ ಉತ್ತಮ’ ಎಂದು ಮತ್ತು 51-100 ರಷ್ಟಿದ್ದರೆ ಅದನ್ನು ‘ಸಮಾಧಾನಕರ’ ಎಂದು ಪರಿಗಣಿಸಲಾಗುತ್ತದೆ. ಸದ್ಯಕ್ಕೆ ಕರ್ನಾಟಕದ ಜನತೆಗೆ ಯಾವುದೇ ವಾಯು ಮಾಲಿನ್ಯದ ಆರೋಗ್ಯ ತುರ್ತು ಪರಿಸ್ಥಿತಿ ಇಲ್ಲವಾಗಿದ್ದು, ಮುಂಜಾನೆಯ ವಾಸಿಗಳಿಗೆ ಹಿತಕರವಾದ ವಾತಾವರಣವಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಟ್‌ಕಾಯಿನ್ ಹಗರಣ: ಮೊಹಮ್ಮದ್ ನಲಪಾಡ್‌ಗೆ ಇಡಿ ಇಕ್ಕಳ, ವಿಚಾರಣೆಗೆ ಹಾಜರಾಗಲು ಕಟ್ಟುನಿಟ್ಟಿನ ಆದೇಶ

ಬಿಟ್‌ಕಾಯಿನ್ ಹಗರಣದಲ್ಲಿ ಮೊಹಮ್ಮದ್ ನಲಪಾಡ್​ಗೆ ಸಂಕಷ್ಟImage Credit source: tv9

ಬೆಂಗಳೂರು, ಜೂನ್ 1: ರಾಜ್ಯದಲ್ಲಿ ಒಂದೆಡೆ ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಪಟ್ಟಾಭಿಷೇಕಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು, ಅವರ ಆಪ್ತ ವಲಯದಲ್ಲಿ ಸಂಭ್ರಮ ಮನೆಮಾಡಿದೆ. ಆದರೆ, ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಂತಿ‌ನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಹಾಗೂ ಯೂತ್ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್‌ಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ಬಹುಕೋಟಿ ಬಿಟ್‌ಕಾಯಿನ್ ಹಗರಣ (Bitcoin Scam) ಮತ್ತು ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನಲಪಾಡ್‌ಗೆ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಿದ್ದು, ಇಂದು (ಜೂನ್ 1) ವಿಚಾರಣೆಗೆ ಹಾಜರಾಗುವಂತೆ ಕಟ್ಟುನಿಟ್ಟಿನ ಬುಲಾವ್ ನೀಡಿದ್ದಾರೆ.

ಮುಖ್ಯಾಂಶಗಳು

  • ಬಿಟ್‌ಕಾಯಿನ್ ಪ್ರಕರಣದ ಕಿಂಗ್‌ಪಿನ್ ಶ್ರೀಕಿ ಜೊತೆಗಿನ ನಂಟಿನ ಹಿನ್ನೆಲೆ, ಮೊಹಮ್ಮದ್ ನಲಪಾಡ್‌ಗೆ 2ನೇ ಬಾರಿಗೆ ಇಡಿ ಸಮನ್ಸ್.
  • ರಾಜಕೀಯ ಕಾರ್ಯಗಳ ನೆಪವೊಡ್ಡಿ ಮೊದಲ ಇಡಿ ವಿಚಾರಣೆಗೆ ಗೈರಾಗಿದ್ದ ನಲಪಾಡ್‌.
  • ಜೂನ್ 1 ರಂದೇ ವಿಚಾರಣೆಗೆ ಹಾಜರಾಗಲು ಕಟಟುನಿಟ್ಟಿನ ಸೂಚನೆ.

ಶ್ರೀಕಿಗೆ ಹೋಟೆಲ್ ರೂಂ ಬುಕಿಂಗ್, ಆರ್ಥಿಕ ನಂಟಿನ ಆರೋಪ

ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಬಿಟ್‌ಕಾಯಿನ್ ಹಗರಣದ ಪ್ರಮುಖ ಸೂತ್ರಧಾರಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಈಗಾಗಲೇ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿರುವ ಇಡಿ ಅಧಿಕಾರಿಗಳು, ಮೊಹಮ್ಮದ್ ನಲಪಾಡ್ ವಿರುದ್ಧ ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಶ್ರೀಕಿ ಜೊತೆ ನಲಪಾಡ್ ನಿರಂತರ ಸಂಪರ್ಕದಲ್ಲಿದ್ದರು ಹಾಗೂ ಆತನ ಅಕ್ರಮ ಚಟುವಟಿಕೆಗಳಿಗೆ ಐಷಾರಾಮಿ ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡಿಕೊಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿಂದೆ ನಲಪಾಡ್, ರಹೀಮ್ ಖಾನ್ ಸೇರಿದಂತೆ ಮೂವರ ನಿವಾಸ ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ಜಂಟಿ ದಾಳಿ ನಡೆಸಿ, ಡಿಜಿಟಲ್ ಪುರಾವೆ ಹಾಗೂ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು.

ಮೊದಲ ನೋಟಿಸ್ ನೀಡಿದಾಗ ರಾಜಕೀಯ ಕೆಲಸಗಳ ಕಾರಣ ನೀಡಿ ನಲಪಾಡ್ ವಿಚಾರಣೆಯಿಂದ ನುಣುಚಿಕೊಂಡಿದ್ದರು. ಆದರೆ, ಈ ಬಾರಿ ಶ್ರೀಕಿ ಜೊತೆಗಿನ ಆರ್ಥಿಕ ವ್ಯವಹಾರಗಳ ಪಕ್ಕಾ ದಾಖಲೆಗಳು ಸಿಕ್ಕಲ್ಲಿ ಇಡಿ ಅಧಿಕಾರಿಗಳು ನಲಪಾಡ್‌ನನ್ನು ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಏನಿದು ಬಿಟ್‌ಕಾಯಿನ್ ಹಗರಣ?

ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದ ಈ ಬಿಟ್‌ಕಾಯಿನ್ ಹಗರಣವು ಸರ್ಕಾರಿ ವೆಬ್‌ಸೈಟ್‌ಗಳು, ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳು ಮತ್ತು ಆನ್‌ಲೈನ್ ಗೇಮಿಂಗ್ ಸೈಟ್‌ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ಡಿಜಿಟಲ್ ಹಣವನ್ನು ಲೂಟಿ ಮಾಡಿದ ಆರೋಪಕ್ಕೆ ಸಂಬಂಧಿಸಿದ್ದಾಗಿದೆ. ಹ್ಯಾಕರ್ ಶ್ರೀಕಿ ವಿವಿಧ ಅಕ್ರಮ ಮಾರ್ಗಗಳ ಮೂಲಕ ಗಳಿಸಿದ್ದ ಬಿಟ್‌ಕಾಯಿನ್‌ಗಳನ್ನು ಮನಿ ಲಾಂಡ್ರಿಂಗ್ ಮಾಡಲು ಸುನೀಶ್ ಹೆಗ್ಡೆ ಮತ್ತು ರಾಬಿನ್ ಖಂಡೇವಾಲ ಸಹಾಯ ಮಾಡಿದ್ದರು. ಇತ್ತೀಚೆಗಷ್ಟೇ ಇಡಿ ಅಧಿಕಾರಿಗಳು ಇವರಿಂದ 47 ಲಕ್ಷ ರೂ. ಮೌಲ್ಯದ ಬಿಟ್‌ಕಾಯಿನ್‌ಗಳನ್ನು ವಶಪಡಿಸಿಕೊಂಡಿದ್ದರು. ಶ್ರೀಕಿಗೆ ರಾಜಕೀಯ ನಾಯಕರ ಪುತ್ರರ ಆಶ್ರಯವಿತ್ತು ಎಂಬ ಆರೋಪದಡಿಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಹಾಗೂ ನಲಪಾಡ್ ನಿವಾಸದ ಮೇಲೆ ದಾಳಿ ನಡೆದಿತ್ತು.

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣಕ್ಕೂ ಶಾಸಕ ಹ್ಯಾರಿಸ್​ಗೂ ಏನು ಸಂಬಂಧ? ಕಾಂಗ್ರೆಸ್ ಶಾಸಕರ, ನಲಪಾಡ್ ಮನೆ ಮೇಲೆ ಇಡಿ ದಾಳಿ ಮಾಡಿದ್ದೇಕೆ?

ಸದ್ಯ ಶ್ರೀಕಿ, ಸುನೀಶ್ ಹಾಗೂ ರಾಬಿನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಇವರ ವಿಚಾರಣೆಯ ಬೆನ್ನಲ್ಲೇ ನಲಪಾಡ್‌ಗೆ ಇಡಿ ಇಕ್ಕಳ ಬಿಗಿಗೊಳಿಸಿದೆ.

ವರದಿ: ವಿಕಾಸ್, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೂನ್ 8ರಿಂದ ಬರಲಿದೆ ‘ಅಗ್ನಿಸಾಕ್ಷಿ’ ಧಾರಾವಾಹಿ; ಪ್ರೋಮೋ ರಿಲೀಸ್

ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಿಗೆ ಒಂದೆಡೆ ಬೇಸರ, ಇನ್ನೊಂದೆಡೆ ಭರ್ಜರಿ ಖುಷಿ ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲವು ವರ್ಷಗಳಿಂದ ಸತತವಾಗಿ ಪ್ರೇಕ್ಷಕರನ್ನು ರಂಜಿಸುತ್ತಾ, ಸಾವಿರಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿದ್ದ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಕೊನೆಗೂ ಮುಕ್ತಾಯದ ಹಂತ ತಲುಪಿದ್ದು, ಈ ವಾರವೇ ತನ್ನ ಸುದೀರ್ಘ ಪಯಣಕ್ಕೆ ಸಂಪೂರ್ಣ ಅಂತ್ಯ ಹಾಡಲಿದೆ. ಆದರೆ, ಈ ಜನಪ್ರಿಯ ಸೀರಿಯಲ್ ಮುಗಿಯುತ್ತಿದ್ದಂತೆಯೇ ಕಿರುತೆರೆಯಲ್ಲಿ ಮತ್ತೊಂದು ಬಿಗ್ ಧಮಾಕಾ ಆರಂಭವಾಗಲಿದ್ದು, ವಾಹಿನಿಯ ಸಾರ್ವಕಾಲಿಕ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದಾದ ‘ಅಗ್ನಿಸಾಕ್ಷಿ’ ಹೊಸ ರೂಪದಲ್ಲಿ ಮರಳಿ ಬರುತ್ತಿದೆ!

ಜೂನ್ 8 ರಿಂದ ‘ಅಗ್ನಿಸಾಕ್ಷಿ’ ಹೊಸ ಅಧ್ಯಾಯ

‘ಭಾಗ್ಯಲಕ್ಷ್ಮಿ’ ಪ್ರಸಾರವಾಗುತ್ತಿದ್ದ ಅದೇ ಸಮಯಕ್ಕೆ, ಅಂದರೆ ಜೂನ್ 8 ರಿಂದ ಪ್ರತಿ ದಿನ ಸಂಜೆ 7 ಗಂಟೆಗೆ ‘ಅಗ್ನಿಸಾಕ್ಷಿ’ ಧಾರಾವಾಹಿ ಪ್ರಸಾರವಾಗಲಿದೆ ಎಂದು ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಗೊತ್ತಾಗಿದೆ.

ಹೊಸ ಪ್ರೋಮೋ ಝಲಕ್ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದರಲ್ಲಿ ನಾಯಕ ಹಾಗೂ ನಾಯಕಿಯ ಪಾತ್ರಗಳು ಸಂಪೂರ್ಣ ಭಿನ್ನವಾಗಿ ಮೂಡಿಬಂದಿವೆ. ಅಗ್ನಿ (ಶಮಂತ್ ಬ್ರೋ ಗೌಡ) ಹೆಸರಿಗೆ ತಕ್ಕಂತೆ ಇವನು ಸುಡುವ ರಾಕ್ಷಸನಂತಿರುವ ಕೋಪಿಷ್ಟ ಸ್ವಭಾವದ ಹುಡುಗ. ತನ್ನ ಅಹಂ ಹಾಗೂ ತನಗಾಗಬೇಕಾದ ಕ್ರೆಡಿಟ್ಸ್ ವಿಷಯದಲ್ಲಿ ಯಾರನ್ನೂ ಬಿಡದ ಸ್ವಭಾವ ಇವನದ್ದು.

ಸಾಕ್ಷಿ ಇವಳು ಅಗ್ನಿಗೆ ತದ್ವಿರುದ್ಧವಾದ ಕ್ಯಾರೆಕ್ಟರ್. ಎಂತಹದೇ ಕಷ್ಟದ ಪರಿಸ್ಥಿತಿ ಎದುರಾದರೂ ಮುಖದಲ್ಲಿ ನಗುನಗುತ್ತಲೇ ಎದುರಿಸುವ ಸಕಾರಾತ್ಮಕ ಗುಣದ ದಿಟ್ಟ ಹೆಣ್ಣುಮಗಳು.

ಇದನ್ನೂ ಓದಿ: ಈ ವಾರ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರ

ಇವರಿಬ್ಬರ ನಡುವೆ ಕದನ ಸೃಷ್ಟಿಸಲು ಮನೆಯವರೇ ಸಂಚು ರೂಪಿಸುತ್ತಿರುವ ದೃಶ್ಯಗಳು ಪ್ರೋಮೋದಲ್ಲಿ ಹೈಲೈಟ್ ಆಗಿವೆ. ‘ಅಗ್ನಿ ಪರೀಕ್ಷೆ ಕೇಳಿದ್ದೀನಿ, ಆದ್ರೆ ಅಗ್ನಿಗೇ ಪರೀಕ್ಷೆನಾ?’ ಎಂಬ ಮಾತುಗಳೊಂದಿಗೆ ಇವರಿಬ್ಬರ ರೋಲರ್ ಕೋಸ್ಟರ್ ಜರ್ನಿ ಮತ್ತು ಲವ್ ಸ್ಟೋರಿ ತೆರೆದುಕೊಳ್ಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇದು ಹೊಸ ಅಧ್ಯಾಯ: 3 ವರ್ಷಗಳಲ್ಲಿ 4 ಟ್ರೋಫಿ ಗೆದ್ದ RCB

Source link

ಈ ವಾರ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರ

ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾದ, ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಸೀರಿಯಲ್ ‘ಭಾಗ್ಯಲಕ್ಷ್ಮೀ’ ಈಗ ತನ್ನ ಸುದೀರ್ಘ ಹಾಗೂ ಯಶಸ್ವಿ ಪಯಣವನ್ನು ಮುಗಿಸಲು ಸಜ್ಜಾಗಿದೆ. ಹೌದು, ಸಾವಿರಕ್ಕೂ ಹೆಚ್ಚು ಸಂಚಿಕೆಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಈ ಧಾರಾವಾಹಿ ಈಗ ಮುಕ್ತಾಯದ ಹಂತಕ್ಕೆ ತಲುಪಿದ್ದು, ಅಂತಿಮ ಸಂಚಿಕೆಗಳು ಪ್ರಸಾರವಾಗುತ್ತಿವೆ.

ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ, ವರ್ಷಗಳಿಂದ ಕರುನಾಡಿನ ಪ್ರೇಕ್ಷಕರ ಹೃದಯ ಆಳಿದ್ದ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಈಗ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ತನ್ನ ಸ್ವಾಭಿಮಾನಕ್ಕಾಗಿ ಏನು ಬೇಕಾದರೂ ಮಾಡುವ ದಿಟ್ಟ ಹೆಣ್ಣುಮಗಳು ‘ಭಾಗ್ಯ’ಳ ಕಥೆ ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ವಾಹಿನಿಯು ಇದರ ಕೊನೆಯ ಸಂಚಿಕೆಗಳ ಪ್ರೋಮೋವನ್ನು ಹಂಚಿಕೊಂಡಿದೆ.

ಹೌದು, ‘ಭಾಗ್ಯಲಕ್ಷ್ಮಿ’ ಧಾರಾವಾಹಿಯು ಕೇವಲ ಒಂದು ಕಥೆಯಾಗಿರದೆ, ಹೆಜ್ಜೆ ಹೆಜ್ಜೆಗೂ ಹೊಸ ದಾಖಲೆ ಬರೆಯುತ್ತಾ 1000ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆದಿತ್ತು. ಇಷ್ಟು ದಿನಗಳ ಕಾಲ ಗೃಹಿಣಿಯರ ಪಾಲಿನ ಸ್ಫೂರ್ತಿಯ ಸೆಲೆಯಾಗಿ, ಸ್ವಾಭಿಮಾನದ ಗಣಿಯಾಗಿ ಮೂಡಿಬಂದಿದ್ದ ಈ ಸೀರಿಯಲ್, ಇದೀಗ ತನ್ನ ‘ಹೆಮ್ಮೆಯ ಕೊನೆಯ ಹೆಜ್ಜೆ’ಯನ್ನು ಇಡುತ್ತಿದೆ.

ಭಾಗ್ಯ ತನ್ನ ಗಂಡನ ಮನೆಯವರ ಮೆಚ್ಚುಗೆಯನ್ನು ಪೂರ್ತಿಯಾಗಿ ಗಳಿಸುತ್ತಾಳಾ? ದಾರಿ ತಪ್ಪಿರುವ ಕನ್ನಿಕಾಳನ್ನು ಕೊನೆಗೂ ಸರಿದಾರಿಗೆ ತರುತ್ತಾಳಾ? ದೂರವಾಗಿದ್ದ ಮಗಳು ಮತ್ತೆ ಹತ್ತಿರವಾಗುತ್ತಾಳಾ? ಮತ್ತು ಕುಸುಮಾಳನ್ನು ಮತ್ತೆ ಮನೆಗೆ ಬರುವಂತೆ ಮಾಡುತ್ತಾಳಾ? ಇದೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ಈ ಅಂತಿಮ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ. ಒಟ್ಟಿನಲ್ಲಿ, ಇಷ್ಟು ದಿನಗಳ ಕಾಲ ವೀಕ್ಷಕರನ್ನು ರಂಜಿಸಿದ ಭಾಗ್ಯಳ ಈ ಸುಂದರ ಪಯಣಕ್ಕೆ ಈಗ ಅರ್ಥಪೂರ್ಣ ಅಂತ್ಯ ಸಿಗುವ ಸಮಯ ಹತ್ತಿರ ಬಂದಿದೆ.

ಇದನ್ನೂ ಓದಿ: ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಮೆಚ್ಚಿದ ಗೌತಮಿ ಜಾದವ್

‘ಭಾಗ್ಯಲಕ್ಷ್ಮಿ’ ಧಾರಾವಾಹಿಯ ಈ ರೋಮಾಂಚಕ ಅಂತಿಮ ಸಂಚಿಕೆಗಳು ಪ್ರತಿ ದಿನ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ಬೆಂಗಳೂರಿನಲ್ಲಿಂದು ವರುಣನ ಆರ್ಭಟ ಜೋರು! 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರಿನಲ್ಲಿಂದು ವರುಣನ ಆರ್ಭಟ ಜೋರು!

ಬೆಂಗಳೂರು, ಜೂನ್ 01: ರಾಜ್ಯದಲ್ಲಿ ಮುಂಗಾರು ಪೂರ್ವ ಮಾರುತಗಳು ಹಾಗೂ ಚಂಡಮಾರುತದ ಸುಳಿಗಾಳಿ ಪ್ರಭಾವ ತೀವ್ರಗೊಂಡಿದ್ದು, ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ವ್ಯಾಪಕ ಮಳೆಯಾಗುವ (Weather) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಾಗಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದ 7 ಪ್ರಮುಖ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಭಾರಿ ಮಳೆಯ ಯೆಲ್ಲೋ ಅಲರ್ಟ್.
  • ಉತ್ತರ ಒಳನಾಡಿನಲ್ಲಿ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆ.
  • ಗುಡುಗು-ಮಿಂಚಿನ ಸಂದರ್ಭದಲ್ಲಿ ಮರ ಮತ್ತು ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಸಾರ್ವಜನಿಕರಿಗೆ ಸೂಚನೆ.

7 ಜಿಲ್ಲೆಗಳಿಗೆ ಭಾರಿ ಮಳೆ ಮುನ್ನೆಚ್ಚರಿಕೆ

ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಸಂಭವವಿದೆ. ಈ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ. ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಈ ಏಳೂ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಜಾರಿಗೊಳಿಸಿದೆ. ಇದಲ್ಲದೆ, ಶಿವಮೊಗ್ಗ ಹಾಗೂ ಮಾಂಡ್ಯ ಜಿಲ್ಲೆಗಳಲ್ಲೂ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಉಳಿದ ಭಾಗಗಳಲ್ಲಿ ಒಣ ಹವಾಮಾನ ಇರಲಿದೆ.

ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳ ಸ್ಥಿತಿ

ಕರಾವಳಿ ತೀರದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರವಾದ ಮಳೆ ಅಥವಾ ಗುಡುಗು ಸಹಿತ ಮಳೆ ಆಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಬಲವಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಹವಾಮಾನ ಮುಂದುವರಿಯಲಿದೆ.

ಸಾರ್ವಜನಿಕರಿಗೆ ಸೂಚನೆ

ಮಳೆ ಹಾಗೂ ಬಲವಾದ ಗಾಳಿ ಬೀಸುವ ಸಮಯದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು. ಪ್ರಮುಖವಾಗಿ ರೈತರು ಮತ್ತು ಸಾರ್ವಜನಿಕರು ಗುಡುಗು-ಮಿಂಚಿನ ಸಂದರ್ಭದಲ್ಲಿ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಹಾಗೂ ಜಾಗರೂಕರಾಗಿರುವಂತೆ ಹವಾಮಾನ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಮಂಡಳಿ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಕ್ಕನ ಮದುವೆ ಒಂದು ದಿನ ಬಾಕಿ ಇರುವಾಗ, ತಂದೆಯ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ಮೊರಾದಾಬಾದ್, ಜೂನ್ 1: ಅಕ್ಕನ ಮದುವೆ ಒಂದು ದಿನ ಬಾಕಿ ಇರುವಾಗ ತಂದೆಯ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಜಿಲ್ಲೆಯ ಕುಂದರ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಕ್‌ಫಜ್‌ಪುರ ಗ್ರಾಮದಲ್ಲಿ ಹಬ್ಬ ಮತ್ತು ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಭೀಕರ ದುರಂತ ಸಂಭವಿಸಿದೆ. ಆರು ಸಹೋದರರಲ್ಲಿ ಕಿರಿಯವನಾದ ಫರತ್ ಅಲಿ (20) ಎಂಬ ಯುವಕ, ತನ್ನ ತಂದೆಯ ಪರವಾನಗಿ ಪಡೆದ (Licensed) ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಂಜಾಬ್‌ನಲ್ಲಿ ಕೆಲಸ ಮಾಡುತ್ತಿದ್ದ ಫರಾತ್, ನಾಲ್ಕು ದಿನಗಳ ಹಿಂದೆಯಷ್ಟೇ ಈದ್ ಹಬ್ಬ ಆಚರಿಸಲು ಮತ್ತು ಇನ್ನೆಂಟು ದಿನಗಳಲ್ಲಿ ನಡೆಯಬೇಕಿದ್ದ ತನ್ನ ಸಹೋದರಿಯ ಮದುವೆಗಾಗಿ ಮನೆಗೆ ಮರಳಿದ್ದ.

ಘಟನೆ ನಡೆದಿದ್ದು ಹೇಗೆ?
ಶನಿವಾರ ರಾತ್ರಿ 9.30ರ ಸುಮಾರಿಗೆ ಫರಾತ್ ತನ್ನ ಕೋಣೆಯಲ್ಲಿದ್ದ ತಂದೆಯ ಬಂದೂಕಿನಿಂದ ಶೂಟ್ ಮಾಡಿಕೊಂಡಿದ್ದಾನೆ. ಗುಂಡಿನ ಶಬ್ದ ಕೇಳಿ ಕುಟುಂಬಸ್ಥರು ಓಡಿಬಂದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದನು. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ.

ವಿಡಿಯೋ ಮಾಡಿ ಆತ್ಮಹತ್ಯೆ?
ಘಟನೆಗೆ ಕೆಲವೇ ಕ್ಷಣಗಳ ಮುನ್ನ ಫರಾತ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ನನ್ನ ಸಾವಿನ ನಂತರ ನನ್ನ ಕುಟುಂಬಕ್ಕೆ ಯಾರೂ ಕಿರುಕುಳ ನೀಡಬಾರದು ಎಂಬ ಸಂದೇಶವಿದೆ ಎನ್ನಲಾಗಿದೆ.

ಮತ್ತಷ್ಟು ಓದಿ: ತನ್ನ ಬಳಿ ಚಿಕಿತ್ಸೆಗೆಂದು ಬಂದಿದ್ದ ಹುಚ್ಚನನ್ನೇ ಪ್ರೀತಿಸಿ ಮದುವೆಯಾಗಿದ್ದ ಮನೋವೈದ್ಯೆ ಆತ್ಮಹತ್ಯೆ

ಪೊಲೀಸ್ ತನಿಖೆ: ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಘಟನೆಗೆ ಬಳಸಲಾದ ಬಂದೂಕು ಮತ್ತು ಮೃತನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಯುವಕ ತೀವ್ರ ಮಾನಸಿಕ ಒತ್ತಡದಲ್ಲಿದ್ದನೇ ಅಥವಾ ಯಾವುದೇ ವೈಯಕ್ತಿಕ ವಿವಾದಗಳನ್ನು ಎದುರಿಸುತ್ತಿದ್ದನೇ ಎಂಬ ಬಗ್ಗೆ ಮತ್ತು ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ತಿಳಿಯಲು ಪೊಲೀಸರು ಡಿಜಿಟಲ್ ಪುರಾವೆಗಳ ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿನಿಮಾ ಸೋತಿದ್ದಕ್ಕೆ ಪ್ರೇಕ್ಷಕರನ್ನು ದೂಷಿಸಿದ ನಯನತಾರಾ ಪತಿ; ಇದು ಸರಿ ಅಲ್ಲ ಎಂದ ಫ್ಯಾನ್ಸ್

ವಿಘ್ನೇಶ್​-ನಯನಾತಾರImage Credit source: Nayanthara Instagram

ತಮಿಳು ನಿರ್ದೇಶಕ, ನಯನತಾರಾ ಪತಿ ವಿಘ್ನೇಶ್ ಶಿವನ್ (Vignesh Shivan) ಆ್ಯಕ್ಷನ್ ಕಟ್ ಹೇಳಿದ್ದ ‘ಲವ್ ಇನ್ಶೂರೆನ್ಸ್ ಕಂಪನಿ’ (LIK) ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಫಲವಾಗಿತ್ತು. ಪ್ರದೀಪ್ ರಂಗನಾಥನ್, ಎಸ್.ಜೆ. ಸೂರ್ಯ ಹಾಗೂ ಕೃತಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರ ದೊಡ್ಡ ಸೋಲು ಕಂಡಿತ್ತು. ಆದರೆ, ಇತ್ತೀಚೆಗಷ್ಟೇ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ವಿಘ್ನೇಶ್ ಹೇಳಿಕೊಂಡಿದ್ದಾರೆ. ಪ್ರೇಕ್ಷಕರು ತಮ್ಮ ಕೈ ಹಿಡಿದಿಲ್ಲ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.

‘ಎಲ್​ಐಕೆ’ ಚಿತ್ರವನ್ನು ಬರೋಬ್ಬರಿ 190 ಕೋಟಿ ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಪ್ರದೀಪ್ ರಂಗನಾಥ್ ಅವರ ಸಿನಿಮಾಗಳಿಗೆ ದೊಡ್ಡ ಗೆಲುವು ಸಿಗುತ್ತಿರುವುದರಿಂದ ಇಷ್ಟು ಹೂಡಿಕೆ ಮಾಡಲಾಗಿತ್ತು. ಆದರೆ ಆನ್‌ಲೈನ್ ನೆಗೆಟಿವಿಟಿ ಹಾಗೂ ಕಳಪೆ ವಿಮರ್ಶೆಗಳ ಕಾರಣದಿಂದಾಗಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೇವಲ 66 ಕೋಟಿ ಮಾತ್ರ ಗಳಿಸಲು ಶಕ್ತವಾಗಿ ಭಾರಿ ನಷ್ಟ ಅನುಭವಿಸಿತ್ತು.

ಒಟಿಟಿಯಲ್ಲಿ ಸಿನಿಮಾ ನೋಡಿದ ಹಲವರು ಚಿತ್ರವನ್ನು ಮೆಚ್ಚಿಕೊಳ್ಳುತ್ತಿರುವುದನ್ನು ಕಂಡು ವಿಘ್ನೇಶ್ ಶಿವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಚಿತ್ರದ ಸೋಲಿನ ಹಿಂದಿನ ಅಸಲಿ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಅಸಮಾಧಾನ ಹೊರಹಾಕಿರುವ ವಿಘ್ನೇಶ್ ಶಿವನ್, ‘ಸಿನಿಮಾ ಒಟಿಟಿಗೆ ಬಂದ ಮೇಲೆ ನನಗೆ ಸಾಕಷ್ಟು ಮೆಸೇಜ್‌ಗಳು ಬರುತ್ತಿವೆ. ಆನ್‌ಲೈನ್‌ನಲ್ಲಿ ಹರಡಿದ್ದ ವಿಪರೀತ ನೆಗೆಟಿವ್ ರಿವ್ಯೂಗಳನ್ನು ನೋಡಿ ನಾವು ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಅವಕಾಶ ಮಿಸ್ ಮಾಡಿಕೊಂಡೆವು ಎಂದು ಜನರು ಹೇಳುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

‘ಕೆಲವು ಸಿನಿಮಾಗಳು ನೆಗೆಟಿವ್ ರಿವ್ಯೂಗಳ ಮಧ್ಯೆಯೂ ಗೆಲ್ಲುತ್ತವೆ. ಆದರೆ ಇನ್ನು ಕೆಲವು ಸಿನಿಮಾಗಳಿಗೆ ಅದು ಸಾಧ್ಯವಾಗುವುದಿಲ್ಲ. ಚಿತ್ರರಂಗದವರಿಂದ ಬೆಂಬಲ ಸಿಗದೇ ಹೋದಾಗ, ಸಾರ್ವಜನಿಕರ ಅಭಿಪ್ರಾಯ ಬದಲಾಗುತ್ತದೆ ಮತ್ತು ಅದು ಚಿತ್ರದ ಭವಿಷ್ಯವನ್ನೇ ಬದಲಾಯಿಸಿಬಿಡುತ್ತದೆ. ಕೇವಲ ತಮ್ಮ ಬುದ್ಧಿವಂತಿಕೆ ಮತ್ತು ಅಹಂ ಪ್ರದರ್ಶಿಸಲು ಬರೆಯುವ ಇಂತಹ ವಿಮರ್ಶೆಗಳು ಚಿತ್ರವನ್ನು ಹತ್ತಿಕ್ಕುವುದಲ್ಲದೆ, ಮಹತ್ವಾಕಾಂಕ್ಷೆಯ ಸಿನಿಮಾ ನಿರ್ದೇಶಕರ ಕನಸುಗಳನ್ನು ಹೊಸಕಿ ಹಾಕುತ್ತವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಸಿನಿಮಾ ಪ್ರದರ್ಶನ ಚೆನ್ನಾಗಿಯೇ ಇತ್ತು. ಆದರೆ ಆ ನಂತರ ದಿಢೀರನೆ ಸಿನಿಮಾದ ಬಗ್ಗೆ ನೆಗೆಟಿವ್ ಟ್ರೆಂಡ್ ಸೃಷ್ಟಿಸಲಾಯಿತು. ಈ ಆಘಾತದಿಂದ ನಾನಿನ್ನೂ ಪೂರ್ತಿಯಾಗಿ ಹೊರಬರಲು ಸಾಧ್ಯವಾಗಿಲ್ಲ. ಸಿನಿಮಾ ಮಾಡುವಾಗ ಮತ್ತು ಅದನ್ನು ರಿಲೀಸ್ ಮಾಡುವಾಗ ಎದುರಿಸಿದ ಕಷ್ಟಗಳ ನಂತರ ಇಂತಹ ಫಲಿತಾಂಶ ಬಂದಿರುವುದು ನಿಜಕ್ಕೂ ನೋವು ತಂದಿದೆ. ಕಷ್ಟಪಟ್ಟು ಮಾಡುವ ತಮಿಳು ಸಿನಿಮಾಗಳಿಗೆ ಪ್ರೇಕ್ಷಕರು ಸ್ವಲ್ಪ ಉದಾರತೆ ತೋರಿಸಬೇಕು’ ಎಂದು ಅವರು ವಿನಂತಿಸಿದ್ದಾರೆ.

ಇದನ್ನೂ ಓದಿ: ವಿವಾಹಕ್ಕೂ ಮೊದಲು ನಯನತಾರಾ-ವಿಘ್ನೇಶ್ ಮಧ್ಯೆ ಆಗಿತ್ತು ಒಪ್ಪಂದ; ಇನ್ನೂ ಇದೆ ಆ ಡೀಲ್

ವಿಘ್ನೇಶ್ ಮಾತನ್ನು ಅನೇಕರು ಟೀಕಿಸಿದ್ದಾರೆ. ಜನರು ಹಣ ಕೊಟ್ಟು ನೋಡಿದ ಮೇಲೆ ಸಿನಿಮಾ ಹೇಗಿದೆ ಎಂಬುದನ್ನು ಹೇಳುವ ಹಕ್ಕು ಇರುತ್ತದೆ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:33 am, Mon, 1 June 26

Source link

ಸಂಭ್ರಮಾಚರಣೆ ಭರದಲ್ಲಿ RCB ಫ್ಯಾನ್ಸ್ ಹುಚ್ಚಾಟ, ಲಾರಿ ಏರಿ ಮೈಮೇಲೆ ಪಟಾಕಿ ಹಾಕೊಂಡು ಮೊಂಡಾಟ: ಲಾಠಿ ಚಾರ್ಜ್

ಸಂಭ್ರಮಾಚರಣೆ ಭರದಲ್ಲಿ RCB ಫ್ಯಾನ್ಸ್ ಹುಚ್ಚಾಟImage Credit source: tv9

ಬೆಂಗಳೂರು, ಜೂನ್ 1: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ ಟಿ20 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (GT) ತಂಡವನ್ನು ಮಣ್ಣುಮುಕ್ಕಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡಿದೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಗರ್ಜನೆ ಹಾಗೂ ರೆಡ್ ಆರ್ಮಿ ಆರ್ಭಟಕ್ಕೆ ಸಿಕ್ಕ ಜಯದ ಬೆನ್ನಲ್ಲೇ ಕರ್ನಾಟಕದಲ್ಲಿ ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಆದರೆ, ಈ ಗೆಲುವಿನ ಸಂಭ್ರಮ ಆಚರಿಸುವ ಭರದಲ್ಲಿ ರಾಜ್ಯದ ಹಲವೆಡೆ ಆರ್‌ಸಿಬಿ ಅಭಿಮಾನಿಗಳು ಅತಿರೇಕದ ವರ್ತನೆ ಹಾಗೂ ಹುಚ್ಚಾಟ ಪ್ರದರ್ಶಿಸಿದ್ದು, ಇವರನ್ನು ಹತೋಟಿಗೆ ತರಲು ಪೊಲೀಸರು ಹಲವು ಕಡೆ ಲಾಠಿ ಬೀಸಬೇಕಾದ ಪ್ರಸಂಗ ಎದುರಾಯಿತು.

ಮುಖ್ಯಾಂಶಗಳು

  • ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಸತತ 2ನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಬೀಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು.
  • ಮಧ್ಯರಾತ್ರಿ ನಡುರಸ್ತೆಯಲ್ಲಿ ಲಾರಿ ಏರಿ, ಮೈಮೇಲೆ ಪಟಾಕಿ ಹಾಕಿಕೊಂಡು ಹುಚ್ಚಾಟ ಮೆರೆದ ಆರ್‌ಸಿಬಿ ಅಭಿಮಾನಿಗಳಿಗೆ ಪೊಲೀಸರಿಂದ ಲಾಠಿ ಏಟು.
  • ರಾಜ್ಯಾದ್ಯಂತ ಹೆಜ್ಜೆ ಹೆಜ್ಜೆಗೂ ಬಿಗಿ ಪೊಲೀಸ್ ಭದ್ರತೆ.

ಬೆಂಗಳೂರಿನಲ್ಲಿ ಪೊಲೀಸ್ ಕಣ್ಗಾವಲು, ಕಬ್ಬನ್ ಪಾರ್ಕ್ ಬಳಿ ಹೈಡ್ರಾಮಾ

ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಆರ್‌ಸಿಬಿ ಅಭಿಮಾನಿಗಳ ದಂಡೇ ನೆರೆದಿತ್ತು. ಪಬ್ ಹಾಗೂ ರೆಸ್ಟೋರೆಂಟ್‌ಗಳಿಗೆ ಬಂದಿದ್ದ ಸಹಸ್ರಾರು ಜನ ರಸ್ತೆಗೆ ಇಳಿದು ಜೈಕಾರ ಹಾಕಿದರು. ಕಬ್ಬನ್ ಪಾರ್ಕ್ ಬಳಿ ಕೆಲವು ಯುವಕರು ಚಲಿಸುತ್ತಿದ್ದ ಕಾರುಗಳ ಸನ್‌ರೂಫ್ ಮೇಲೆ ನಿಂತು ಆರ್‌ಸಿಬಿ ಬಾವುಟ ಪ್ರದರ್ಶಿಸುತ್ತಾ ಸಂಚಾರಕ್ಕೆ ಅಡ್ಡಿಪಡಿಸಿದರು. ಕಳೆದ ಬಾರಿ ಕಪ್ ಗೆದ್ದ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ್ದ ಕಾಲ್ತುಳಿತ ದುರಂತವನ್ನು ನೆನಪಿನಲ್ಲಿಟ್ಟುಕೊಂಡಿದ್ದ ಪೊಲೀಸರು, ಈ ಬಾರಿ ಹೆಜ್ಜೆ ಹೆಜ್ಜೆಗೂ ಭದ್ರತಾ ಬೇಲಿ ಹಾಕಿ ಹದ್ದಿನ ಕಣ್ಣಿಟ್ಟಿದ್ದರು. ಅತಿರೇಕವಾಗಿ ವರ್ತಿಸಿದ ಯುವಕರಿಗೆ ಖಡಕ್ ವಾರ್ನಿಂಗ್ ನೀಡಿ ಮನೆಗೆ ಕಳುಹಿಸಿದರು.

ಉತ್ತರ ಕರ್ನಾಟಕದಲ್ಲಿ ಲಾಠಿ ರುಚಿ ತೋರಿಸಿದ ಪೊಲೀಸರು

ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮೊಂಡಾಟ ಮುಂದುವರಿಸಿದ ಅಭಿಮಾನಿಗಳಿಗೆ ಪೊಲೀಸರು ಸಣ್ಣ ಪ್ರಮಾಣದ ಲಾಠಿ ರುಚಿ ತೋರಿಸಿದರು. ಬೆಳಗಾವಿಯ ಆರ್‌.ಪಿ.ಡಿ ವೃತ್ತದಲ್ಲಿ ನೂರಾರು ಯುವಕರು ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಬಾಗಲಕೋಟೆಯ ವಿದ್ಯಾಗಿರಿ ಇಂಜಿನಿಯರಿಂಗ್ ವೃತ್ತದಲ್ಲಿ ತಡರಾತ್ರಿವರೆಗೂ ರಸ್ತೆ ತಡೆದು ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿಗಳು ಮನೆಗೆ ಹೋಗಲು ನಿರಾಕರಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಬೀದರ್‌ನ ಅಂಬೇಡ್ಕರ್ ವೃತ್ತ ಹಾಗೂ ಕಲಬುರಗಿಯ ಎಸ್‌ವಿಪಿ ವೃತ್ತಗಳಲ್ಲೂ ‘‘ಜೈ ಆರ್‌ಸಿಬಿ’’, ‘‘ಕಿಂಗ್ ಕೊಹ್ಲಿಗೆ ಜೈ’’ ಎಂಬ ಘೋಷಣೆಗಳು ಮಧ್ಯರಾತ್ರಿವರೆಗೂ ಕೇಳಿಬಂತು.

ಹೆದ್ದಾರಿಯಲ್ಲಿ ಲಾರಿಗಳ ಮೇಲೆ ಹತ್ತಿ ಅಭಿಮಾನಿಗಳ ಅತಿರೇಕ


ಸಕ್ಕರೆ ನಾಡು ಮಂಡ್ಯದ ಸಂಜಯ ವೃತ್ತದಲ್ಲಿ ಸೇರಿದ ಅಭಿಮಾನಿಗಳು ಹಳೆಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಲಾರಿಗಳ ಮೇಲೆ ಏರಿ ಮೊಂಡಾಟ ಮೆರೆದರು. ಬಳ್ಳಾರಿಯ ರಾಯಲ್ ಸರ್ಕಲ್ ಬಳಿಯೂ ಇದೇ ರೀತಿಯ ಘಟನೆ ನಡೆದಿದ್ದು, ಸಂಭ್ರಮಾಚರಣೆ ನಡುವೆ ಬಂದ ಲಾರಿಗೆ ಅಡ್ಡ ನಿಂತು ಯುವಕರು ಹುಚ್ಚಾಟ ನಡೆಸಿದರು.

ಇದನ್ನೂ ಓದಿ: ಸತತ 2ನೇ ಟ್ರೋಫಿ; ಸಿಎಸ್​​ಕೆ, ಮುಂಬೈ ದಾಖಲೆ ಸರಿಗಟ್ಟಿದ ಆರ್​ಸಿಬಿ

ಲಾರಿಗೆ ದಾರಿ ಬಿಡದೆ, ಅದರ ಮೇಲಕ್ಕೇರಲು ಯತ್ನಿಸಿದ ಯುವಕರನ್ನು ಪೊಲೀಸರು ಕೆಳಗಿಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರಲ್ಲದೆ, ಸಾರ್ವಜನಿಕರ ಜೀವಕ್ಕೆ ಆಪತ್ತು ತಂದ ಕೆಲವು ಅಭಿಮಾನಿಗಳಿಗೆ ಲಾಠಿ ಏಟಿನ ರುಚಿ ತೋರಿಸಿದರು. ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲೂ ರಸ್ತೆಯಲ್ಲೇ ಪಟಾಕಿ ಸಿಡಿಸುತ್ತಿದ್ದ ಯುವಕರನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:38 am, Mon, 1 June 26

Source link

ಎರಡು ವರ್ಷದ ಮಗುವಿಗೆ ಚಿತ್ರಹಿಂಸೆ ಕೊಟ್ಟು, ಹೊಡೆದು ಚರಂಡಿಗೆ ಎಸೆದ ತಂದೆ

ಲಕ್ನೋ, ಜೂನ್ 1: ಎರಡೂವರೆ ವರ್ಷದ ತನ್ನ ಪುಟ್ಟ ಹೆಣ್ಣುಮಗಳ ಮೇಲೆ ಅತಿಮಾನುಷವಾಗಿ ಹಲ್ಲೆ ನಡೆಸಿ, ರಸ್ತೆ ಬದಿಯ ಚರಂಡಿಗೆ ತಳ್ಳಿ ಕೊಲ್ಲಲು ಯತ್ನಿಸಿದ ತಂದೆಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೋನು ಅಲಿಯಾಸ್ ಯೋಗೇಂದ್ರ ಸಿಂಗ್ (50) ಎಂದು ಗುರುತಿಸಲಾಗಿದೆ. ಶನಿವಾರ ನಡೆದ ಈ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.

ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ವಿಡಿಯೋ
ಮೇ 30 ರಂದು ಮಧ್ಯಾಹ್ನ 2.30 ರ ಸುಮಾರಿಗೆ ಈ ಅತಿಮಾನುಷ ಘಟನೆ ಸಂಭವಿಸಿದೆ. ವೈರಲ್ ಆಗಿರುವ ದೃಶ್ಯಗಳಲ್ಲಿ, ಪಾಪಿ ತಂದೆ ಸಿಂಗ್ ಮಗುವನ್ನು ಕಾಲಿನಿಂದ ಒದ್ದು, ಕೈಯಿಂದ ಗುದ್ದುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಪ್ರಾಣಭಯದಿಂದ ಕಿರುಚುತ್ತಿದ್ದ ಮಗುವನ್ನು ಪದೇ ಪದೇ ರಸ್ತೆ ಬದಿಯ ಚರಂಡಿಗೆ ಎಸೆದು, ಮುಳುಗಿಸಿ ಕೊಲ್ಲಲು ಯತ್ನಿಸುತ್ತಿರುವುದು ಸೆರೆಯಾಗಿತ್ತು.

ಸ್ಥಳೀಯರ ಸಮಯಪ್ರಜ್ಞೆ: ಮಗುವಿನ ಕಿರುಚಾಟ ಕೇಳಿ ಓಡಿಬಂದ ಕೆಲವು ಸ್ಥಳೀಯ ನಿವಾಸಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಆತನ ಕೈಯಿಂದ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ಆರೋಪಿ ಆಕ್ರಮಣಕಾರಿಯಾಗಿ ವರ್ತಿಸಿ ಹತ್ತಿರದ ಮನೆಯ ಬಾಗಿಲನ್ನು ಬಲವಂತವಾಗಿ ಮುರಿಯಲು ಯತ್ನಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ.

ಪೊಲೀಸರ ತಕ್ಷಣದ ಕ್ರಮ
ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ಸುಲ್ತಾನಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ವಿಡಿಯೋ ಸಾಕ್ಷ್ಯ ಹಾಗೂ ಸ್ಥಳೀಯರ ಹೇಳಿಕೆಗಳ ಆಧಾರದ ಮೇಲೆ ಆರೋಪಿ ಯೋಗೇಂದ್ರ ಸಿಂಗ್ ವಿರುದ್ಧ ಕಠಿಣ ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆತನನ್ನು ಜೈಲಿಗಟ್ಟಿದ್ದಾರೆ.

ನ್ಯಾಯಾಂಗ ಬಂಧನ: ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಸದ್ಯ ಮಗು ಸುರಕ್ಷಿತವಾಗಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ತಕ್ಷಣವೇ ಕ್ರಮ ಕೈಗೊಂಡು ಹಂತಕ ತಂದೆಯನ್ನು ಸಲಾಕೆಯ ಹಿಂದೆ ತಳ್ಳಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link