Category Archives: Blog

Your blog category

20 ಓವರ್ ಆಡಿಯೂ ಸೋತ ಟೀಮ್ ಇಂಡಿಯಾ

ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಸೋಲನುಭವಿಸಿದೆ. ಬ್ರಿಸ್ಟಲ್​ನ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕಿ ಷಾರ್ಲೆಟ್ ಡೀನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 165 ರನ್​​ ಕಲೆಹಾಕಿತು.

ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಸ್ಮೃತಿ ಮಂಧಾನ (33) ಹಾಗೂ ಶಫಾಲಿ ವರ್ಮಾ (22) ಉತ್ತಮ ಆರಂಭ ಒದಗಿಸಿದ್ದರು. ಇದಾದ ಬಳಿಕ ಬಂದ ಯಾಸ್ತಿಕಾ ಭಾಟಿಯಾ 33 ರನ್​​ಗಳ ಕೊಡುಗೆ ನೀಡಿದರು. ಇನ್ನು ನಾಯಕಿ ಹರ್ಮನ್​ಪ್ರೀತ್ ಕೌರ್ 28 ರನ್​ ಬಾರಿಸಿದ್ದರು.

ಈ ನಾಲ್ವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಟೀಮ್ ಇಂಡಿಯಾ ದಿಢೀರ್ ಕುಸಿತಕ್ಕೊಳಗಾಯಿತು. ಇದರ ಸಂಪೂರ್ಣ ಲಾಭ ಪಡೆದ ಇಂಗ್ಲೆಂಡ್ ಬೌಲರ್​ಗಳು ರನ್ ಗತಿಯನ್ನು ನಿಯಂತ್ರಿಸಿದರು. ಪರಿಣಾಮ ಟೀಮ್ ಇಂಡಿಯಾ 20 ಓವರ್​ಗಳನ್ನು ಆಡಿದರೂ 9 ವಿಕೆಟ್ ಕಳೆದುಕೊಂಡು 142 ರನ್​ಗಳಿಸಲಷ್ಟೇ ಶಕ್ತರಾದರು.

ಈ ಮೂಲಕ ಇಂಗ್ಲೆಂಡ್ ತಂಡವು 26 ರನ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯು 1-1 ಅಂತರದಿಂದ ಸಮಗೊಂಡಿದ್ದು, ಮೂರನೇ ಟಿ20 ಪಂದ್ಯವು ಸರಣಿ ನಿರ್ಣಾಯಕವಾಗಿ ಮಾರ್ಪಟ್ಟಿದೆ.

 

Source link

ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಅತಿಯಾಗಿ ಆಡಿದ್ದ ರಶ್ಮಿಕಾಗೆ ತಿರುಗೇಟು ಕೊಟ್ಟ ಶಾಹಿದ್ ಕಪೂರ್

ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor), ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ ಅಭಿನಯದ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ (Cocktail 2) ಸಿನಿಮಾ ಜೂನ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ, ಸಿನಿಮಾ ತೆರೆಗೆ ಬರುವ ಮುನ್ನವೇ ಚಿತ್ರದ ಪ್ರಚಾರದ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಒಟ್ಟಿಗೆ ನಿಂತು ಫೋಟೋಗೆ ಪೋಸ್ ನೀಡುವಾಗ ಶಾಹಿದ್ ಕಪೂರ್ ಅವರು ರಶ್ಮಿಕಾ ಮಂದಣ್ಣ (Rashmika Mandanna) ಅವರ ಹೆಗಲ ಮೇಲೆ ಕೈ ಹಾಕಿದ್ದಕ್ಕೆ ದೊಡ್ಡ ಸೀನ್ ಕ್ರಿಯೇಟ್ ಆಗಿತ್ತು. ಹಾವು ಬಿಟ್ಟವರಂತೆ ವರ್ತಿಸಿದ್ದ ರಶ್ಮಿಕಾಗೆ ಈಗ ಶಾಹಿದ್ ಕಪೂರ್ ತಿರುಗೇಟು ನೀಡಿದ್ದಾರೆ.

ಘಟನೆ ವಿವರ: ಇತ್ತೀಚೆಗೆ ಮುಂಬೈನಲ್ಲಿ ನಡೆದ ‘ಕಾಕ್‌ಟೇಲ್ 2’ ಚಿತ್ರದ ಮ್ಯೂಸಿಕ್ ಲಾಂಚ್ ಸಮಾರಂಭದಲ್ಲಿ, ಪಾಪರಾಜಿಗಳಿಗೆ ಫೋಟೋ ನೀಡುವಾಗ ಶಾಹಿದ್ ಕಪೂರ್ ಅವರು ರಶ್ಮಿಕಾ ಹೆಗಲ ಮೇಲೆ ಕೈ ಹಾಕಲು ಹೋಗಿದ್ದರು. ಈ ವೇಳೆ ರಶ್ಮಿಕಾ ತಕ್ಷಣವೇ ಒಂದು ಹೆಜ್ಜೆ ಹಿಂದೆ ಸರಿದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಯಿತು. ‘ಶಾಹಿದ್ ವರ್ತನೆಯಿಂದ ರಶ್ಮಿಕಾ ಅಸಹಜವಾಗಿ ಫೀಲ್ ಮಾಡಿದ್ರು’ ಎಂದು ನೆಟ್ಟಿಗರು ದೊಡ್ಡ ಮಟ್ಟದಲ್ಲಿ ಚರ್ಚೆ ಆರಂಭಿಸಿದ್ದರು. ಆದರೆ ಈ ಬಗ್ಗೆ ಶಾಹಿದ್ ಕಪೂರ್ ಆಗಲಿ, ರಶ್ಮಿಕಾ ಅವರಾಗಲಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಆದರೆ, ಶುಕ್ರವಾರ (ಮೇ 29) ನಡೆದ ಸಿನಿಮಾದ ಮತ್ತೊಂದು ಪ್ರಚಾರದ ಈವೆಂಟ್‌ನಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನನ್ ಅವರು ಮತ್ತೆ ಒಟ್ಟಿಗೆ ಕಾಣಿಸಿಕೊಂಡರು. ಈ ವೇಳೆ ಶಾಹಿದ್ ಕಪೂರ್ ಹಳೇ ವಿವಾದವನ್ನು ನೆನೆದು ವೇದಿಕೆಯಲ್ಲೇ ತಮಾಷೆ ಮಾಡಿದ್ದಾರೆ. ಫೋಟೋಗೆ ಫೋಸ್ ನೀಡುವಾಗ ರಶ್ಮಿಕಾ ಮಂದಣ್ಣ ಹಿಂದೆ ಸರಿದಿದ್ದ ರೀತಿಯನ್ನೇ ಶಾಹಿದ್ ತಮಾಷೆಯಾಗಿ ಅಣಕಿಸಿದ್ದಾರೆ.

ಶಾಹಿದ್ ಕಪೂರ್ ವೈರಲ್ ವಿಡಿಯೋ:

ಶಾಹಿದ್ ಅವರ ಈ ತಮಾಷೆ ನೋಡಿ ಪಕ್ಕದಲ್ಲೇ ಇದ್ದ ಕೃತಿ ಸನೋನ್ ಜೋರಾಗಿ ನಗಲು ಪ್ರಾರಂಭಿಸಿದರು. ರಶ್ಮಿಕಾ ಮಂದಣ್ಣ ಕೂಡ ಇದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಮುಗುಳ್ನಕ್ಕಿದ್ದಾರೆ. ಅಷ್ಟೇ ಅಲ್ಲದೆ, ‘ನಾನು ಆ ಉದ್ದೇಶದಿಂದ ಹಾಗೆ ಮಾಡಿರಲಿಲ್ಲ’ ಎಂದು ರಶ್ಮಿಕಾ ನಗುತ್ತಲೇ ಶಾಹಿದ್‌ಗೆ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಇಬ್ಬರ ನಡುವೆ ಯಾವುದೇ ಅಸಮಾಧಾನ ಇಲ್ಲ ಎಂಬುದು ಜಗಜ್ಜಾಹೀರಾಗಿದೆ.

ಇದನ್ನೂ ಓದಿ: ವೇದಿಕೆ ಮೇಲೆ F ಪದ ಬಳಕೆ ಮಾಡಿದ ರಶ್ಮಿಕಾ ಮಂದಣ್ಣ; ವೇದಿಕೆಯಲ್ಲೇ ಕ್ಷಮೆ ಕೇಳಿದ ನ್ಯಾಷನಲ್ ಕ್ರಶ್

ಪ್ರಚಾರದ ಈವೆಂಟ್‌ನ ಈ ಹೊಸ ವಿಡಿಯೋಗಳು ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ. ಇಬ್ಬರ ನಡುವಿನ ಉತ್ತಮ ಬಾಂಧವ್ಯಕ್ಕೆ ಇದು ಸಾಕ್ಷಿಯಾಗಿದೆ. ಸೋಶಿಯಲ್ ಮೀಡಿಯಾ ವದಂತಿಗಳಿಗೆ ಈ ಜೋಡಿ ನಗುತ್ತಲೇ ಫುಲ್ ಸ್ಟಾಪ್ ಇಟ್ಟಿದೆ. ಅಂದಹಾಗೆ, ‘ಕಾಕ್‌ಟೇಲ್ 2’ ಚಿತ್ರವನ್ನು ಹೋಮಿ ಅದಾಜಾನಿಯಾ ನಿರ್ದೇಶಿಸಿದ್ದಾರೆ. ಇದು 2012ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ನಟನೆಯ ‘ಕಾಕ್‌ಟೇಲ್’ ಚಿತ್ರದ ಸೀಕ್ವೆಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL Final 2026: ಬೆಂಗಳೂರಲ್ಲಿ ಸಂಭ್ರಮಾಚರಣೆಗೆ ಬ್ರೇಕ್​​, ಅಭಿಮಾನಿಗಳಿಗೆ ಪೊಲೀಸರಿಂದ ಖಡಕ್​​ ಎಚ್ಚರಿಕೆ

ಅಭಿಮಾನಿಗಳಿಗೆ ಬೆಂಗಳೂರು ಪೊಲೀಸರಿಂದ ಖಡಕ್​​ ಎಚ್ಚರಿಕೆ

ಬೆಂಗಳೂರು, ಮೇ 31: ಕಳೆದ ವರ್ಷ ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ತಂಡ ಐಪಿಎಲ್​ ಟ್ರೋಫಿ ಗೆದ್ದ ಬಳಿಕ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ವೇಳೆ ದುರಂತ ನಡೆದು 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಆ ಬಳಿಕ ಬೆಂಗಳೂರಿನಲ್ಲಿ ನಡೆದ ಪ್ರತಿಯೊಂದು ಐಪಿಎಲ್​​ ಪಂದ್ಯಕ್ಕೂ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಈ ನಡುವೆ ಇಂದು (ಮೇ 31) ಬೆಂಗಳೂರು ‌ಮತ್ತು ಗುಜರಾತ್ ತಂಡಗಳ ನಡುವೆ ಐಪಿಎಲ್ ಫೈನಲ್ ಪಂದ್ಯ ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದರೂ ಫಲಿತಾಂಶದ ಬಳಿಕ ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಅಲರ್ಟ್​​ ಆಗಿದ್ದಾರೆ. ಅಭಿಮಾನಿಗಳಿಗೆ ಖಡಕ್​​ ಎಚ್ಚರಿಕೆ ನೀಡಿ ಮಾರ್ಗಸೂಚಿ ರಿಲೀಸ್​​ ಮಾಡಿದ್ದಾರೆ.

ಪೊಲೀಸರ ಮಾರ್ಗಸೂಚಿಯಲ್ಲಿ ಏನಿದೆ?

  • ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ
  • ಅನುಮತಿ ಇಲ್ಲದೆ ರಸ್ತೆಗಳಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಸುವಂತಿಲ್ಲ
  • ಪಟಾಕಿ ಸಿಡಿಸಬಾರದು, ಅಪಾಯಕಾರಿ ವಸ್ತುಗಳನ್ನು ಬಳಸಬಾರದು
  • ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಶಾಂತಿ, ಶಿಸ್ತು ಪಾಲಿಸಬೇಕು
  • ಸಂಚಾರ ವಿಭಾಗದ ಪೊಲೀಸರು ನೀಡುವ ಸಲಹೆ ಸೂಚನೆ ಪಾಲಿಸಬೇಕು
  • ಬೈಕ್ ರ್ಯಾಲಿ, ಅತಿವೇಗದ ಚಾಲನೆ, ಸ್ಟಂಟ್, ಹಾರ್ನ್ ಮಾಡುವಂತಿಲ್ಲ
  • ರಸ್ತೆ ತಡೆದು ಸಂಭ್ರಮಾಚರಣೆ ಮಾಡುವಂತಿಲ್ಲವೆಂದು ಪೊಲೀಸರ ಸೂಚನೆ
  • ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸಬಾರದು
  • ಸಾಮಾಜಿಕ ಜಾಲತಾಣದಲ್ಲಿ ಅಶಾಂತಿ ಸೃಷ್ಟಿಸುವ ಪೋಸ್ಟ್ ಹಾಕುವಂತಿಲ್ಲ
  • ಸಾಮಾಜಿಕ ಜಾಲತಾಣದಲ್ಲಿ ದ್ವೇಷಪೂರಿತ ಪೋಸ್ಟ್ ಹಂಚಿಕೊಳ್ಳಬಾರದು
  • ಫಲಿತಾಂಶದ ಹೆಸರಿನಲ್ಲಿ ಬೇರೆ ತಂಡದ ಅಭಿಮಾನಿಗಳನ್ನು ನಿಂದಿಸಬಾರದು

ಇದನ್ನೂ ಓದಿ: ಫೈನಲ್ ಪ್ಲೇಯಿಂಗ್ ಇಲೆವೆನ್; RCB ಮುಂದಿದೆ 2 ಆಯ್ಕೆ

IPL ಫೈನಲ್ ಹಿನ್ನೆಲೆ ನಗರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬೆಂಗಳೂರು ಪೊಲೀಸರು ಈ ಸೂಚನೆಗಳನ್ನು ಪಾಲಿಸುವಂತೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕ್ರೀಡೆಯನ್ನ ಕ್ರೀಡೆಯಾಗಿ ಸ್ವೀಕರಿಸಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಸೂಚಿಸಲಾಗಿದ್ದು, ಇದನ್ನು ಮೀರಿ ಹುಚ್ಚಾಟ ನಡೆಸಿದರೆ ಕಾನೂನು ಕ್ರಮ ಫಿಕ್ಸ್​​ ಎಂಬ ಎಚ್ಚರಿಕೆಯನ್ನೂ ನಗರ ಪೊಲೀಸ್​​ ಆಯುಕ್ತ ಸೀಂಮತ್ ಕುಮಾರ್‌ ಸಿಂಗ್ ನೀಡಿದ್ದಾರೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:53 am, Sun, 31 May 26

Source link

Daily Devotional: ಸಾವಿನ ಕೊನೆ ಗಳಿಗೆಯಲ್ಲಿ ಬಾಯಿಗೆ ಗಂಗಾಜಲ ಯಾಕೆ ಬಿಡ್ತಾರೆ ಗೊತ್ತಾ?

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಾಯುವ ಮುನ್ನ ಕೊನೇ ಗಳಿಗೆಯಲ್ಲಿಗಂಗಾಜಲವನ್ನ ಬಿಡುವುದು ಯಾಕೆ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಹಿಂದೂ ಸನಾತನ ಸಂಪ್ರದಾಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ಅಂತಿಮ ಘಟ್ಟದಲ್ಲಿದ್ದಾಗ, ದೇಹಕ್ಕೆ ತುಳಸಿ ಮತ್ತು ಗಂಗಾಜಲವನ್ನು ಅರ್ಪಿಸುವ ಪ್ರಾಚೀನ ಪದ್ಧತಿಯಿದೆ. ಈ ಸಂಪ್ರದಾಯವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ತುಳಸಿಯನ್ನು ವಿಷ್ಣುಪ್ರಿಯೆ ಎಂದು ಪರಿಗಣಿಸಲಾಗುತ್ತದೆ, ಇದು ಪವಿತ್ರತೆ ಮತ್ತು ವಿಷ್ಣುವಿನ ಪ್ರೀತಿಯ ಸಂಕೇತವಾಗಿದೆ. ಗಂಗಾಜಲವನ್ನು ಪಾಪನಾಶಕ ಮತ್ತು ಕರ್ಮನಾಶಕ ಎಂದು ನಂಬಲಾಗುತ್ತದೆ.

ದೇಹವು ಅಸಹನೀಯ ನೋವಿನಿಂದ ಬಳಲುತ್ತಿರುವಾಗ, ಪ್ರಜ್ಞಾರಹಿತವಾಗಿದ್ದಾಗ ಅಥವಾ ದೇಹಕ್ಕೆ ಯಾವುದೇ ಆಹಾರ ಸೇರದಿದ್ದಾಗ, ಗಂಗಾಜಲವನ್ನು ಮೂರು ಬಾರಿ ಅರ್ಪಿಸಿ ತುಳಸಿಯನ್ನು ನೀಡಲಾಗುತ್ತದೆ. ಈ ಕ್ರಿಯೆಯು ದೇಹದಲ್ಲಿ ಅಂಟಿಕೊಂಡಿರುವ ಪಾಪಗಳು ಮತ್ತು ಕರ್ಮಗಳಿಂದ ಆತ್ಮಕ್ಕೆ ಬಿಡುಗಡೆ ನೀಡುತ್ತದೆ ಎಂದು ನಂಬಲಾಗಿದೆ. ಇದು ದೇಹದ ಶುದ್ಧೀಕರಣಕ್ಕೆ ಸಹಾಯ ಮಾಡಿ, ಆತ್ಮಕ್ಕೆ ಮೋಕ್ಷವನ್ನು ಪಡೆಯಲು ಮತ್ತು ಮುಂದಿನ ಪ್ರಯಾಣಕ್ಕೆ ಸುಗಮ ಮಾರ್ಗವನ್ನು ಒದಗಿಸುತ್ತದೆ. ಗರುಡ ಪುರಾಣದಲ್ಲಿ ಈ ಆಚರಣೆಯ ಕುರಿತು ಉಲ್ಲೇಖವಿದೆ ಎಂದು ಗುರೂಜಿ ತಿಳಿಸಿದ್ದಾರೆ.

Source link

Horoscope Today: ಇಂದು ಈ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 31, ಭಾನುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನದಂದು ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸದ ಗ್ರೀಷ್ಮ ಋತುವಿನಲ್ಲಿ ಬರುವ ಈ ದಿನ ಹುಣ್ಣಿಮೆ ಹಾಗೂ ಅನುರಾಧ ನಕ್ಷತ್ರವನ್ನು ಒಳಗೊಂಡಿದೆ. ಇಂದು ರವಿ ವೃಷಭ ರಾಶಿಯಲ್ಲಿ ಹಾಗೂ ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ಈ ದಿನದ ರಾಹುಕಾಲ ಸಂಜೆ 5:04 ರಿಂದ 6:40 ರವರೆಗೆ ಇದ್ದು, ಶುಭಕಾಲ ಬೆಳಗ್ಗೆ 10:41 ರಿಂದ ಮಧ್ಯಾಹ್ನ 12:17 ರವರೆಗೆ ಇದೆ. ಜೇಷ್ಠ ಮಾಸದ ಹುಣ್ಣಿಮೆಯ ಈ ದಿನ ದೇವತಾರಾಧನೆ ಮತ್ತು ಪ್ರಾರ್ಥನೆಗೆ ಬಹಳ ಪ್ರಾಶಸ್ತ್ಯವನ್ನು ಹೊಂದಿದೆ ಎಂದು ಗುರೂಜಿ ತಿಳಿಸಿದ್ದಾರೆ.

 

 

 

Source link

Horoscope Today 31 May: ಇಂದು ಈ ರಾಶಿಯವರಿಂದ ಬಾರದ ಸಮಯಕ್ಕೆ ವ್ಯಥೆ

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಪರಿಘ, ಕರಣ : ಬವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:12 – 18:48, ಯಮಗಂಡ ಕಾಲ 12:22 – 13:59, ಗುಳಿಕ ಕಾಲ 15:35 – 17:12.

ಮೇಷ ರಾಶಿ: ಏಕಾಗ್ರತೆಗೆ ನಾನಾ ಪ್ರಕಾರದಲ್ಲಿ ಪರೀಕ್ಷೆಗಳು ಆಗಬಹುದು. ನಿಮ್ಮನ್ನು ಹುಡುಕಿಕೊಂಡು ಬಂದವರಿಗೆ ಸ್ವಲ್ಪ ಸಮಯವನ್ನಾದರೂ ಕೊಡಬೇಕಾಗುವುದು. ಹಣಕಾಸು ಪ್ರಗತಿಮಾರ್ಗದಲ್ಲಿದೆ ಆದರೆ ಯೋಚಿಸಿ ವೆಚ್ಚಮಾಡಿ. ಪ್ರೀತಿಯಲ್ಲಿ ನಿಗೂಢತೆಯ ಬದಲಿಗೆ ಸ್ಪಷ್ಟತೆ ಅಗತ್ಯವಿದೆ. ಕಾನೂನು ಸಂಬಂಧಿತ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ಬಹಳಷ್ಟು ಕಾರ್ಯಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ.

ವೃಷಭ ರಾಶಿ: ದೂರಪ್ರಯಾಣ ಸುಖಕರವಾಗಿ ಇರುವುದು.‌ ಧಾರ್ಮಿಕವಾದ ನಂಬಿಕೆಯುಳ್ಳ ನೀವು ತೀರ್ಥಕ್ಷೇತ್ರಗಳೋ ದೇವಾಲಯಕ್ಕೋ ಭೇಟಿ ಕೊಡುವಿರಿ. ಪರರ ಪ್ರಶಂಸೆಯನ್ನು ಹೃದಯದಲ್ಲಿ ಧರಿಸಿ. ಕೆಲಸದ ಮೆಚ್ಚುಗೆಗಳು ಸಂತೋಷವನ್ನು ಉಂಟುಮಾಡುತ್ತವೆ. ಹಣಕಾಸು ವಿಷಯದಲ್ಲಿ ಜಾಗ್ರತೆ ಅಗತ್ಯವಿದೆ. ಕುಟುಂಬದಲ್ಲಿ ಚಿಕ್ಕಪುಟ್ಟ ಮನಸ್ತಾಪ ಉಂಟಾಗಬಹುದು. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು.

ಮಿಥುನ ರಾಶಿ: ಇಂದು ನಿಮಗೆ ಸಾಧ್ಯವಾದ ಕೆಲಸಗಳನ್ನು ಮಾಡಿ. ಆಲಸ್ಯ ಬೇಡ. ಸ್ವಂತ ಭೂಮಿಯನ್ನು ಮಾರುವ ಸ್ಥಿತಿಯು ಎದುರಾದೀತು. ಕೆಟ್ಟ ಅನುಭವಗಳನ್ನು ಆತ್ಮೀಯರ ಜೊತೆ ಹಂಚಿಕೊಳ್ಳುವಿರಿ. ಹಳೆಯ ವಿಷಯಗಳನ್ನು ನೆನೆಸಿಕೊಳ್ಳದೇ ಪ್ರಸ್ತುತದತ್ತ ಗಮನ ಹರಿಸಿ. ಹೂಡಿಕೆಯೊಳಗಿನ ಲಾಭದಿಂದ ಹಣಕಾಸು ಬೆಂಬಲ ಸಿಗಬಹುದು. ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ ನಿಮ್ಮ ಕೆಲಸಗಳು ಅಚ್ಚುಕಟ್ಟಾಗಿ ಇರಬೇಕಿದೆ.

ಕರ್ಕಾಟಕ ರಾಶಿ: ದಾಂಪತ್ಯದಲ್ಲಿ ಉಂಟಾದ ವೈಮನಸ್ಯವನ್ನು ಪ್ರಕಟಗೊಳಿಸಿದೇ ಅಲ್ಲಿಯೇ ಸರಿಮಾಡಿಕೊಳ್ಳಿ. ಮನೆಗೆ ಊಹಿಸಿದ್ದಕ್ಕಿಂತ ಹೆಚ್ಚಿನವರ ಆಗಮನವಾಗಲಿದೆ, ಆತಂಕ ಹೆಚ್ಚುಮಾಡಿಕೊಳ್ಳುವಿರಿ. ಮಾತುಗಳು ಹೊಸ ಅವಕಾಶಗಳನ್ನು ತಂದೀತು. ಕಾನೂನು ಕೆಲಸದಲ್ಲಿ ಎಚ್ಚರಿಕೆ ಇರಲಿ. ಹಣಕಾಸು ಒತ್ತಡದಿಂದ ಚಿಕ್ಕ ಏರುಪೇರು ಆಗಬಹುದು. ಎಲ್ಲರ ಜೊತೆ ಜಗಳವಾಡುತ್ತ ಇರುವುದು ನಿಮಗೆ ಇಷ್ಟವಾಗಬಹುದು. ಆಸ್ತಿಯ ವಿಚಾರದಲ್ಲಿ ಆಸೆಯನ್ನು ಅತಿಯಾಗಿ ಇಟ್ಟುಕೊಳ್ಳುವಿರಿ.

ಸಿಂಹ ರಾಶಿ: ಸಾಮಾಜಿಕ ಕಾರ್ಯದಲ್ಲಿ ನಿಮಗೆ ಆಸಕ್ತಿಯು ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಜಾಣೆ ಅಗತ್ಯ. ಮೌಖಿಕ ವಿಚಾರವನ್ನು ಯಾರೂ ಗಂಭೀರವಾಗಿ ಪರಿಗಣಿಸಲಾರರು. ಸಣ್ಣ ಖರ್ಚು ಕೂಡ ದೊಡ್ಡದಾಗಬಹುದು. ಕುಟುಂಬದವರ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿ. ದೂರದ ಸಂಬಂಧಿಯವರಿಂದ ಸಂವೇದನೆಗಳ ಬದಲಾವಣೆ ಉಂಟಾಗಬಹುದು. ಮೋಹದಿಂದ ಸರಿ ತಪ್ಪುಗಳ ವಿವೇಚನೆ ದೂರಾಗುವುದು. ಯಾರಾದರೂ ನಿಮ್ಮನ್ನು ತೆಗಳಿದರೆ ಅದನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಿ.

ಕನ್ಯಾ ರಾಶಿ: ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದ್ದು, ಕೆಲಸವು ಹಾಳಾಗಬಹುದು. ಖರ್ಚಿಲ್ಲದೇ ಎಲ್ಲ ಓಡಾಟವನ್ನು ಮಾಡುವ ಯೋಚನೆ. ಕೆಲಸದಲ್ಲಿ ನಿಮ್ಮ ಚುರುಕು ಮೆಚ್ಚುಗೆಯನ್ನು ಗಳಿಸಬಹುದು. ಹಳೆಯ ಹೂಡಿಕೆಗಳು ಲಾಭದ ಸಂಕೇತ ತೋರಿಸುತ್ತವೆ. ಮನೆಯ ವಿಷಯದಲ್ಲಿ ಹೆಚ್ಚು ಸಮಯ ಕೊಡಬೇಕಾಗಬಹುದು. ಕೋಪದಿಂದ ಶಾಂತವಾಗಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಬಂಧುಗಳ ಜೊತೆ ಆತ್ಮೀಯ ಒಡನಾಟ ಮಾಡುವಿರಿ.

ತುಲಾ ರಾಶಿ: ನೆರೆ-ಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಿ. ಮೇಲಧಿಕಾರಿಗಳಿಂದ ಕ್ಷಣಕಾಲ ತಪ್ಪಿಸಿಕೊಂಡರೆ ಅಷ್ಟೇ ಸಾಕು. ನಿಮ್ಮ ಕಾರ್ಯಕ್ಕೆ ವಿದೇಶದಿಂದ ಕರೆ ಬರಬಹುದು. ಹೂಡಿಕೆಗೆ ಮೊದಲು ಎಲ್ಲವನ್ನೂ ಅಧ್ಯಯನ ಮಾಡಿ. ಕುಟುಂಬದವರೊಂದಿಗೆ ಕಳೆಯುವ ಸಮಯ ಹೃದಯ ತಣಿಸುತ್ತದೆ. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳಲು ಆಗದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು.

ವೃಶ್ಚಿಕ ರಾಶಿ: ಸಾಲಬಾಧೆ ಎದುರಾಗಲಿದ್ದು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ನಿಮ್ಮ ಹಠವನ್ನು ಮುಂದಿಡುವುದು ಬೇಡ. ಒಂಟಿಯಾಗಿಯೇ ಇರಬೇಕಾಗುವುದು. ಕೆಲಸದಲ್ಲಿ ಅವಕಾಶಗಳು ಸಿಗಬಹುದು ಆದರೆ ತೀರ್ಮಾನದಲ್ಲಿ ತಾಳ್ಮೆ ಅಗತ್ಯ. ಖರ್ಚುಗಳು ನಿಮ್ಮ ಮೇಲೆ ಒತ್ತಡ ತರುತ್ತವೆ. ಮನೆಯ ಅಲಂಕರಣದ ಚಿಂತನೆ ಮೂಡಬಹುದು ಆದರೆ ಮುಂದಕ್ಕೆ ಹಾಕುವುದು ಉತ್ತಮ. ಸಂತಾನದ ಬಗ್ಗೆ ನಿಮಗೆ ಅತಿಯಾದ ಆಸೆಯಾಗುವುದು.

ಧನು ರಾಶಿ: ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬಯಸಿದರೆ ನಕಾರಾತ್ಮಕ ಉತ್ತರವನ್ನು ಕೊಡಬೇಡಿ. ಧೈರ್ಯದಿಂದ ಕೆಲಸದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಮಾತಿನಂತೆ ನಡಿಗೆ ನೂಲಿನಂತೆ ಬಟ್ಟೆ ಇರುವಂತೆ ಇರಬೇಕು. ಹಣಕಾಸು ಸ್ಥಿತಿಯಲ್ಲಿ ಸ್ಥಿರತೆ ಇರುತ್ತದೆ. ಖರ್ಚುಗಳಲ್ಲಿ ನಿಯಂತ್ರಣ ವಹಿಸಿ. ಮನೆಯವರು ನಿಮ್ಮ ಸಮಯ ಮತ್ತು ಪ್ರೀತಿಗೆ ಕಾಯುತ್ತಿದ್ದಾರೆ. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದು ನಿಮಗೆ ಇಷ್ಟವಾಗದು.

ಮಕರ ರಾಶಿ: ಕಾರ್ಯದ ಒತ್ತಡ ನಿಮ್ಮನ್ನು ಇಂದು ಬಂಧಿಸಿ ಇಡಲಿದೆ. ಹೊಸ ವಸ್ತ್ರದ ಖರೀದದಿಯಾಗಲಿದೆ‌. ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡಿದರೂ ಮನಸ್ಸು ಬೇರೆಡೆ ಇರಬಹುದು. ಹಣಕಾಸು ಸ್ಥಿತಿಯಲ್ಲಿ ನಿರ್ವಹಣಾ ಜಾಣ್ಮ ಅಗತ್ಯ. ಕೈ ಮೀರಿದ ಆರೋಗ್ಯವನ್ನು ನಿಯಂತ್ರಣಕ್ಕೆ ತರಲಾಗದು. ಸಹೋದ್ಯೋಗಿಯಿಂದ ಸ್ಪರ್ಧಾತ್ಮಕ ಮನೋಭಾವನೆ ಎದುರಾಗಬಹುದು. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು.

ಕುಂಭ ರಾಶಿ: ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಯಾರ ಮೇಲೂ ದ್ವೇಷವನ್ನು ಸಾಧಿಸಿ ಆಗುವುದೇನಿಲ್ಲ. ಸಮಯ ಹಾಳು ಅಷ್ಟೇ. ಉದ್ಯೋಗದಲ್ಲಿ ಚುರುಕು ಮತ್ತು ಯೋಜನೆ ಮುಖ್ಯ. ಹಣಕಾಸಿನಲ್ಲಿ ಸ್ಥಿರತೆ ಇದ್ದರೂ ಸಾಲ ಅಥವಾ ಸಾಲಕೊಡಿಕೆ ಬೇಡ. ಪ್ರೀತಿಯಲ್ಲಿ ಸಹನಶೀಲತೆಯಿಂದ ಸ್ಪಂದಿಸಿ, ಅತಿವಿಚಾರ ಬೇಡ. ನಿಮ್ಮ ತಂದೆಯ ಜೊತೆ ಸ್ನೇಹದ ಸಂಬಂಧವನ್ನು ಇಟ್ಟುಕೊಳ್ಳುವಿರಿ. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು.

ಮೀನ ರಾಶಿ: ಉದ್ಯೋಗ ಸೃಷ್ಟಿಗೆ ಬೇಕಾದ ಬಂಡವಾಳವು ಸಿಗಲಿದೆ. ಸಾಲ ಪಡೆದವರು ಮರಳಿ ನೀಡಲಿದ್ದಾರೆ. ಹಣಕಾಸು ಸಂಬಂಧಿತ ವಿಷಯಗಳು ನಿಮ್ಮ ಗಮನಕ್ಕೆ ಬರುತ್ತವೆ. ನೀವು ಸೇವಿಸುವ ಔಷಧ ಅಡ್ಡ ಪರಿಣಾಮ ನೀಡಬಹುದು. ತಪ್ಪುಗಳು ನಡೆದಾಗ ನಿಮ್ಮ ಪರವಾದ ಮಾತುಗಳು ಕೇಳಿಸದೇ ಇರಬಹುದು. ಸಾಲಕ್ಕೆ ಏನನ್ನಾದರೂ ಅಡವಿಡಬೇಕಾಗಬಹುದು. ವಾಹನಕ್ಕಾಗಿ ಖರ್ಚು ಮಾಡಬೇಕಾಗುವುದು. ತಿರುಗಾಟದಲ್ಲಿರುವ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರ ವ್ಯಕ್ತಪಡಿಸಬಹುದು.

ಲೋಹಿತ ಹೆಬ್ಬಾರ್-8762924271 (what’s app only)

Source link

ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾನಲ್ಲಿ ನಟ ಶಿವರಾಜ್ ಕುಮಾರ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಾಮ್ ಚರಣ್ ಪಾತ್ರಕ್ಕೆ ಕುಸ್ತಿ ಕಲಿಸುವ ಗುರುವಿನ ಪಾತ್ರ ಶಿವರಾಜ್ ಕುಮಾರ್ ಅವರದ್ದು. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ರಾಮ್ ಚರಣ್, ಶಿವರಾಜ್ ಕುಮಾರ್ ಅವರೊಟ್ಟಿಗೆ ಸೇರಿ ಸಿನಿಮಾ ಪ್ರಚಾರ ಮಾಡಿದರು. ಈ ವೇಳೆ ಅನುಶ್ರೀ ಎದುರು ಸಂದರ್ಶನದಲ್ಲಿ ರಾಮ್ ಚರಣ್ ಅವರು, ಶಿವಣ್ಣನ ರೀತಿ ಮಚ್ಚು ಹಿಡಿದು ಶಿವಣ್ಣನ ಡೈಲಾಗ್ ಸಹ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026 Final: ಫೈನಲ್ ಪಂದ್ಯ ರದ್ದಾದರೆ ಯಾರಿಗೆ ಸಿಗಲಿದೆ ಟ್ರೋಫಿ?

ಐಪಿಎಲ್ 2026 (IPL 2026) ರ ಚಾಂಪಿಯನ್‌ ಪಟ್ಟಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ತಂಡಗಳು ಸೆಣಸಲಿವೆ. ಮೇ 31 ರ ಭಾನುವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈ ಫೈನಲ್ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ಎರಡೂ ತಂಡಗಳು ಸೀಸನ್ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿ, ಚಾಂಪಿಯನ್ ಆಗುವತ್ತ ಅಂತಿಮ ಹೆಜ್ಜೆ ಇಟ್ಟಿವೆ. ಆದರೆ ಫೈನಲ್ ಪಂದ್ಯದ ದಿನದಂದು ಮಳೆ ಬಂದು ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಅಥವಾ ಇತರೆ ಕಾರಣದಿಂದಾಗಿ ಪಂದ್ಯ ನಡೆಯದಿದ್ದರೆ ಯಾವ ತಂಡಕ್ಕೆ ಚಾಂಪಿಯನ್ ಪಟ್ಟ ಸಿಗಲಿದೆ? ಹಾಗೆಯೇ ಫೈನಲ್ ಪಂದ್ಯಕ್ಕೆ ಮೀಸಲು ದಿನವಿದೆಯೇ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ.

ಫೈನಲ್ ಪಂದ್ಯಕ್ಕಿದೆ ಮೀಸಲು ದಿನ

ಐಪಿಎಲ್‌ನಲ್ಲಿ ಲೀಗ್ ಹಂತ ಹಾಗೂ ಪ್ಲೇಆಫ್‌ ಸುತ್ತಿಗೆ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಿರಲಿಲ್ಲ. ಲೀಗ್ ಹಂತದಲ್ಲಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತಿತ್ತು. ಆದರೆ ಪ್ಲೇಆಫ್‌ ಸುತ್ತಿಗೆ ಆ ನಿಯಮ ಅನ್ವಯವಾಗುತ್ತಿರಲಿಲ್ಲ. ಹೀಗಾಗಿ ಪ್ಲೇಆಫ್‌ ಸುತ್ತಿನಲ್ಲಿ ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ ಯಾವ ತಂಡ ಮೇಲಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತಿತ್ತು. ಏಕೆಂದರೆ ಪ್ಲೇಆಫ್‌ಗೂ ಮೀಸಲು ದಿನವನ್ನು ನಿಗದಿಪಡಿಸಿರಲಿಲ್ಲ. ಆದರೆ ಫೈನಲ್ ಪಂದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ. ಏಕೆಂದರೆ ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ.

ಮೀಸಲು ದಿನದಂದು ಪಂದ್ಯ ನಡೆಯದಿದ್ದರೆ?

ಫೈನಲ್ ಪಂದ್ಯವನ್ನು ಮೇ 31 ರಂದೇ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಆದಾಗ್ಯೂ ನಿರಂತರವಾಗಿ ಮಳೆ ಬಂದರೆ, ಓವರ್‌ಗಳನ್ನು ಕಡಿಮೆ ಮಾಡಲಾಗುತ್ತದೆ. ಮಳೆ ಮುಂದುವರಿದರೆ, ಹೆಚ್ಚುವರಿಯಾಗಿ 120 ನಿಮಿಷಗಳನ್ನು ಸಹ ನೀಡಲಾಗುತ್ತದೆ. ಹಾಗೆಯೇ ವಿಜೇತರನ್ನು ನಿರ್ಧರಿಸಲು ಪ್ರತಿ ಇನ್ನಿಂಗ್ಸ್‌ನಲ್ಲಿ ಕನಿಷ್ಠ ಐದು ಓವರ್‌ಗಳನ್ನು ಆಡಲಾಗುತ್ತದೆ. ಅದಾಗ್ಯೂ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ, ಜೂನ್ 1 ರಂದು ಪಂದ್ಯವನ್ನು ನಡೆಸಲಾಗುವುದು. ಏಕೆಂದರೆ ಜೂನ್ 1 ಅನ್ನು ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ.

IPL 2026 Final: ಸತತ 2ನೇ ಬಾರಿಗೆ ಚಾಂಪಿಯನ್; ಮತ್ತೊಂದು ದಾಖಲೆ ಸೃಷ್ಟಿಸುವ ಸನಿಹದಲ್ಲಿ ಆರ್​ಸಿಬಿ

ಜೂನ್ 1 ರಂದು ಸಹ ಮಳೆಯಿಂದಾಗಿ ಪಂದ್ಯ ಆರಂಭವಾಗದಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಅಗ್ರಸ್ಥಾನ ಪಡೆದಿರುತ್ತದೋ ಆ ತಂಡವನ್ನು ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ. ಇದರರ್ಥ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಆರ್​ಸಿಬಿ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇತ್ತ ಎರಡನೇ ಸ್ಥಾನ ಪಡೆದುಕೊಂಡಿದ್ದ ಗುಜರಾತ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯ ಶಿವಕುಮಾರ್..ಚುನಾವಣೆಯಲ್ಲಿ ಸೋಲಬಹುದು, ಸೈದ್ಧಾಂತಿಕವಾಗಿ ಸೋಲಬೇಡಿ: ಡಿಕೆಶಿಗೆ ಸಿದ್ದರಾಮಯ್ಯ ಭಾವುಕ ಪತ್ರ

ಬೆಂಗಳೂರು, (ಮೇ 30): ಡಿಕೆ ಶಿವಕುಮಾರ್ (dk shivakumar) ಅವರು ಇಂದು (ಮೇ 30) ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಜೂನ್ 3 ಸಂಜೆ 4.5ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಸಿದ್ದರಾಮಯ್ಯ (siddaramaiah), ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು ತಿಳಿಸುತ್ತಾ ಭಾವನಾತ್ಮಕ ಪತ್ರವೊಂದು ಬರೆದಿದ್ದು, ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು ಸಂವಿಧಾನದ ಗೌರವವನ್ನು ಕಾಪಾಡಲು 2ನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ಇಡೀ ಶಾಸಕಾಂಗ ಪಕ್ಷ ಮಾತ್ರವಲ್ಲ ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಯಲ್ಲಿರುತ್ತದೆ ಎಂದು ಡಿಕೆಶಿಗೆ ಅಭಯ ನೀಡಿದ್ದಾರೆ.

ಮುಖ್ಯಾಂಶಗಳು

  • ಹೊಸ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಡಿ ಕೆ ಶಿವಕುಮಾರ್
  • ಕರ್ನಾಟಕದ ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್​ಗೆ ಅಭಿನಂದನೆ ತಿಳಿಸಿದ ಸಿದ್ದರಾಮಯ್ಯ
  • ಭಾವನಾತ್ಮ ಪತ್ರದ ಮೂಲಕ ಅಭಿನಂದನೆ ತಿಳಿಸಿದ ಹಂಗಾಮಿ ಸಿಎಂ
  • ಜೊತೆಗೆ ಡಿಕೆ ಶಿವಕುಮಾರ್​​​ಗೆ ಕೆಲ ಸಲಹೆ ಸೂಚನೆಗಳನ್ನ ನೀಡಿದ ಸಿದ್ದರಾಮಯ್ಯ

ಸಿದ್ದರಾಮಯ್ಯನವರ ಪತ್ರದಲ್ಲೇನಿದೆ?

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಂಗಾತಿ ಡಿ.ಕೆ.ಶಿವಕುಮಾರ್ ಅವರಿಗೆ ಹಾರ್ದಿಕವಾದ ಅಭಿನಂದನೆಗಳು.

ಪ್ರಿಯ ಶಿವಕುಮಾರ್, ನಿಮ್ಮಲ್ಲಿರುವ ಅದಮ್ಯವಾದ ಕ್ರಿಯಾಶೀಲತೆ, ಸಂಘಟನಾ ಚಾತುರ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಸಂಶಾಯತೀತ ನಿಷ್ಠೆಯನ್ನು ಒಬ್ಬ ಸಹದ್ಯೋಗಿಯಾಗಿ ನಾನು ಸಮೀಪದಿಂದ ಗಮನಿಸಿದ್ದೇನೆ. ಇವೆಲ್ಲದರ ಸದುಪಯೋಗ ರಾಜ್ಯದ ಜನತೆಗೆ ಆಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುವೆ.ಇಂದು ಕರ್ನಾಟಕ ತಲಾವಾರು ಆದಾಯದಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿರುವುದು ಮಾತ್ರವಲ್ಲ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಲ್ಲಿಯೂ ದೇಶಕ್ಕೆ ಮಾದರಿಯಾಗಿದೆ. ನಾವು ಪ್ರಾರಂಭಿಸಿರುವ ಪ್ರತಿಯೊಂದು ಯೋಜನೆಯನ್ನೂ ಉಳಿದ ರಾಜ್ಯಗಳು ಮಾದರಿಯಾಗಿ ಸ್ವೀಕರಿಸಿ ಅನುಷ‍್ಠಾನಕ್ಕೆ ತರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗಾತಿಯಾಗಿದೆ ಎಂದಿದ್ದಾರೆ.

ಇದನ್ನೂ ನೋಡಿ: ಶಾಸಕಾಂಗ ಸಭೆಯಲ್ಲಿ ಅಚ್ಚರಿ ಬೆಳವಣಿಗೆ, ಒಂದು ಕ್ಷಣ ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ

ಒಟ್ಟು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡಿಗರ ಸೇವೆಯನ್ನು ಮಾಡಲು ಒದಗಿಬಂದಿದ್ದ ಅವಕಾಶವನ್ನು ಬಳಸಿಕೊಂಡು ಕರ್ನಾಟಕವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ಅಭಿವೃದ್ಧಿ ಪಡಿಸಿದ ಹೆಮ್ಮೆ ನನ್ನದಾಗಿದೆ. ಈ ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಅದಕ್ಕೆ ಬೇಕಾಗಿರುವ ಬದ್ದತೆ, ಸಾಮರ್ಥ್ಯ ಮತ್ತು ಮುನ್ನೋಟ ನಿಮ್ಮಲ್ಲಿದೆ ಎನ್ನುವ ನಂಬಿಕೆ ನನ್ನದು.

ಇಡೀ ದೇಶ ಇಂದು ಆರ್ಥಿಕ ಅಭದ್ರತೆಯಲ್ಲಿ ಭೀತಿಗೊಳಗಾಗಿರುವ ಸ್ಥಿತಿಯಲ್ಲಿ ರಾಜ್ಯದ ಜನತೆ ಕೂಡಾ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಸಮರ್ಥ ಆಡಳಿತದ ಮೂಲಕ ಅವರಲ್ಲಿ ಭರವಸೆಯನ್ನು ಹುಟ್ಟಿಸುವ ಜೊತೆಯಲ್ಲಿ ರಾಜ್ಯವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ.

ಚುನಾವಣೆಯಲ್ಲಿ ಸೋಲಬಹುದು, ಸೈದ್ಧಾಂತಿಕವಾಗಿ ಸೋಲಬೇಡಿ

ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಸ್ವಲ್ಪ ಹಿನ್ನಡೆಯಾಗಿದೆ. ನಾವು ಚುನಾವಣೆಯಲ್ಲಿ ಸೋಲಬಹುದು, ಗೆಲ್ಲಬಹುದು. ಆದರೆ ಸೈದ್ಧಾಂತಿಕವಾಗಿ ಎಂದೂ ಸೋಲಬಾರದು. ಒಂದು ರಾಜಕೀಯ ಪಕ್ಷ ಸೈದ್ಧಾಂತಿಕವಾಗಿ ಸೋತರೆ ಆ ಪಕ್ಷ ಚುನಾವಣೆಯನ್ನು ಗೆಲ್ಲಲಾಗದೆ ನಾಶವಾಗುತ್ತದೆ ಎಂದು ನಂಬಿದವನು ನಾನು.

ರಾಜ್ಯದ ಅಭಿವೃದ್ಧಿಯ ಜೊತೆಯಲ್ಲಿ ನಮ್ಮೆಲ್ಲರ ಮಾತೃಸ್ವರೂಪಿಯಾಗಿರುವ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರಳಿ ಸ್ಥಾಪಿಸುವ ಹೊಣೆಗಾರಿಕೆ ಕೂಡಾ ನಮ್ಮೆಲ್ಲರ ಮೇಲಿದೆ. ಕಾಂಗ್ರೆಸ್ ಪಕ್ಷ ಇಂತಹ ಸವಾಲಿನ ಅನೇಕ ಅಗ್ನಿದಿವ್ಯಗಳನ್ನು ಯಶಸ್ವಿಯಾಗಿ ದಾಟಿ ಬಂದಿರುವ ಇತಿಹಾಸ ನಮಗೆಲ್ಲರಿಗೂ ಪ್ರೇರಣೆಯಾಗಲಿ. ನಿಮ್ಮ ನಾಯಕತ್ವ ಬಲ ಈ ಪ್ರಯತ್ನವನ್ನು ಸಫಲಗೊಳಿಸಲಿ.

ಕಾಂಗ್ರೆಸ್ ಪಕ್ಷದ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಸೌಹಾರ್ದ ಭಾರತವನ್ನು ಜಾತಿ-ಧರ್ಮಗಳ ಹೆಸರಲ್ಲಿ ಒಡೆದು ಹಾಕಲಾಗುತ್ತಿದೆ. ಸಂವಿಧಾನವನ್ನೇ ಪ್ರಶ್ನಿಸಲಾಗುತ್ತಿದೆ. ಪ್ರಭುತ್ವವನ್ನು ಪ್ರಶ್ನಿಸುವವರ ದಮನ ಮಾಡಲಾಗುತ್ತಿದೆ. ಗಾಂಧಿಯವರನ್ನು ಕೊಂದವರು ಇಂದು ಗೋಡ್ಸೆಯನ್ನು ಮೆರೆಸಲು ಹೊರಟಿದ್ದಾರೆ.

2ನೇ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿದ್ದೇವೆ

ಸಂವಿಧಾನದ ಆಶಯಗಳಾದ ಸಮಾನತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಮೌಲ್ಯಗಳನ್ನೇ ತನ್ನ ಸಿದ್ಧಾಂತವಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ತಳಮಟ್ಟದಿಂದಲೇ ಗಟ್ಟಿಗೊಳಿಸಲು ಮುಂದಾಗುವುದೇ ದೇಶವನ್ನು ಉಳಿಸಲು ನಮಗೆ ಇರುವ ಏಕೈಕ ಮತ್ತು ಸರಿಯಾದ ದಾರಿಯಾಗಿದೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು ಸಂವಿಧಾನದ ಗೌರವವನ್ನು ಕಾಪಾಡಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ಇಡೀ ಶಾಸಕಾಂಗ ಪಕ್ಷ ಮಾತ್ರವಲ್ಲ ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಯಲ್ಲಿರುತ್ತದೆ.

ನಿಮಗೆ ಸದಾ ಯಶಸ್ಸು ಸಿಗಲಿ ಎಂದು ಡಿಕೆ ಶಿವಕುಮಾರ್​​​ಗೆ ಟ್ಯಾಗ್ ಮಾಡಿದ್ದಾರೆ.

Source link

ಪ್ರಮಾಣವಚನಕ್ಕೂ ಮುನ್ನವೇ ಡಿಕೆ ಶಿವಕುಮಾರ್​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ

ಬೆಂಗಳೂರು, ಮೇ 30: ಕರ್ನಾಟಕದ ಮುಖ್ಯಮಂತ್ರಿ ಆಗಿ ಡಿ.ಕೆ.ಶಿವಕುಮಾರ್ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ನಡೆದ ಸಿಎಲ್​ಪಿ ಸಭೆಯಲ್ಲಿ, ಅಧಿಕೃತವಾಗಿ ಡಿಕೆ ಶಿವಕುಮಾರ್​ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಆಗಿದ್ದಾರೆ. ಜೂನ್ 3 ರಂದು ಅಂದ್ರೆ ಬುಧವಾರ ಸಂಜೆ ಡಿಕೆ ಪದಗ್ರಹಣ ನಡೆಯಲಿದೆ. ಇನ್ನು ಡಿ.ಕೆ. ಶಿವಕುಮಾರ್​ಗೆ ರಾಜ್ಯಪಾಲರು ಸರ್ಕಾರ ರಚಿಸಲು ಅಧಿಕೃತ ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿಯೋಜಿತ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭಾರೀ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರ ನಿವಾಸದ ಮುಖ್ಯದ್ವಾರದಲ್ಲಿ ಪ್ರವೇಶಿಸುವವರಿಗಾಗಿ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿಯೇ ಒಳಗೆ ಬಿಡಲಾಗುತ್ತಿದೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link