Category Archives: Blog

Your blog category

Siddaramaiah Resigns: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ಬೆಂಗಳೂರು, ಮೇ 28: ಹೈಕಮಾಂಡ್​ ಸೂಚನೆಯಂತೆ ಕರ್ನಾಟಕ ಮುಖ್ಯಮಂತ್ರಿ (Chief Minister) ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಕೊನೆಗೂ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜ್ಯಪಾಲರ ಅನುಪಸ್ಥಿತಿಯ ಹಿನ್ನೆಲೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ಸಿಎಂ ಪದತ್ಯಾಗದ ಪತ್ರ ಸಲ್ಲಿಕೆ ಮಾಡಿದ್ದಾರೆ. ಆ ಮೂಲಕ ರಾಜ್ಯ ಕಾಂಗ್ರೆಸ್​​ ಪಾಳಯದಲ್ಲಿ ವರ್ಷಗಳಿಂದಲೂ ಊಹಾಪೋಹಗಳಿಗೆ ಕಾರಣವಾಗಿದ್ದ ನಾಯಕತ್ವ ಬದಲಾವಣೆ ಅಥವಾ ಅಧಿಕಾರ ಹಂಚಿಕೆ ವಿಚಾರಕ್ಕೆ ಅಂತಿಮ ತೆರೆ ಬಿದ್ದಿದೆ.

ಮುಖ್ಯಾಂಶಗಳು

  • ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ
  • ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಕೆ
  • ‘ಕೈ’ ಪಾಳಯದಲ್ಲಿನ ಊಹಾಪೋಹಗಳಿಗೆ ಅಧಿಕೃತವಾಗಿ ತೆರೆ

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿ ಪ್ರಚಂಡ ಬಹುಮತದೊಂದಿಗೆ ಕಾಂಗ್ರೆಸ್​​ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿತ್ತು. ಬಳಿಕ ಡಿ.ಕೆ. ಶಿವಕುಮಾರ್​​ ಅವರ ತೀವ್ರ ಪೈಪೋಟಿಯ ಹೊರತಾಗಿಯೂ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಸಿದ್ದರಾಮಯ್ಯ ಅವರು, ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಮೇ 20ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಸಿಎಂ ರೇಸ್​​ನಲ್ಲಿದ್ದ ಡಿಕೆಶಿ ಅವರಿಗೆ ಡಿಸಿಎಂ ಸ್ಥಾನವನ್ನು ನೀಡಲಾಗಿತ್ತು.

ಇದನ್ನೂ ಓದಿ: ಮುಂದಿನ ಸಿಎಂ ಡಿಕೆ ಶಿವಕುಮಾರ್; ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ

ಸಿದ್ದರಾಮಯ್ಯ ಕಣ್ಣೀರು

ಇಂದು ಬೆಳಿಗ್ಗೆ ಆಯೋಜಿಸಿದ್ದ ಉಪಹಾರಕೂಟದಲ್ಲಿ ಹೈಕಮಾಂಡ್​​ ಸೂಚನೆಯಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಬಗ್ಗೆ ಸಚಿವರಿಗೆ ಖುದ್ದಾಗಿ ಸಿದ್ದರಾಮಯ್ಯ ತಿಳಿಸಿದ್ದರು. ಈ ವೇಳೆ ಭಾವುಕರಾದ ಅವರು ಕಣ್ಣೀರು ಹಾಕಿದ ಪ್ರಸಂಗವೂ ನಡೆದಿತ್ತು. ನಾನು ಮಾಡಿರುವ ಕೆಲಸಗಳ ಬಗ್ಗೆ ನನಗೆ ಸಮಾಧಾನ ಇದೆ. ಎಲ್ಲಾ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಮುಂದೆ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋಗಿ. ಜನರಿಗೆ ಒಳ್ಳೆಯ ಯೋಜನೆಗಳನ್ನು ನೀಡಿ ಎಂದು ಸಿದ್ದರಾಮಯ್ಯ ಈ ವೇಳೆ ಸಲಹೆ ಕೂಡ ನೀಡಿದ್ದರು.

ಕಳೆದ ಒಂದು ವರ್ಷಗಳಿಂದಲೂ ರಾಜ್ಯ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ಪ್ರಹಸನ ನಡೆದುಕೊಂಡೇ ಬಂದಿತ್ತು. ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳ ನಾಯಕರು ಪರಸ್ಪರ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದರು. ಈ ನಡುವೆ ಪಂಚರಾಜ್ಯ ಚುನಾವಣೆ ಬೆನ್ನಲ್ಲೇ ಉಭಯ ನಾಯಕರನ್ನು ದೆಹಲಿಗೆ ಕರೆದಿದ್ದ ಹೈಕಮಾಂಡ್​​ ನಾಯಕರು ಸುದೀರ್ಘ ಸಭೆ ನಡೆಸಿದ್ದರು. ಅಳೆದು ತೂಗಿ ಅಂತಿಮ ನಿರ್ಧಾರಕ್ಕೆ ಬಂದಿದ್ದ ವರಿಷ್ಠರು ಸಿದ್ದರಾಮಯ್ಯನವರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಸಿದ್ದರಾಮಯ್ಯನವರೀಗ ಪದತ್ಯಾಗ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜೀನಾಮೆಗೂ ಮುನ್ನವೇ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿಗಳ ವರ್ಗಾವಣೆ

ಬೆಂಗಳೂರು, (ಮೇ 28): ಕೊನೆಗೂ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನಿಡುವುದಾಗಿ ಘೋಷಿಸಿದ್ದು, ಮುಂದಿನ ಮುಖ್ಯಮುಂತ್ರಿ ಡಿಕೆ ಶಿವಕುಮಾರ್ (DK Shivakumar) ಆಗಲಿದ್ದಾರೆ. ಆದ್ರೆ, ಸಿದ್ದರಾಮಯ್ಯನವರ ಪದತ್ಯಾಗಕ್ಕೂ ಮುನ್ನವೇ ಅವರ ಆಪ್ತ ಅಧಿಕಾರಿಗಳ ಸ್ಥಾನಪಲ್ಲಟವಾಗಿದೆ. ಹೌದು… ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ , ಸಿಎಂ ವಿಶೇಷ ಕರ್ತವ್ಯಾಧಿಕಾರಿ ರಮೇಶ್ ಪಿ.ಕೋನರೆಡ್ಡಿ, ಸಿಎಂ ಜಂಟಿ ಕಾರ್ಯದರ್ಶಿಯಾಗಿದ್ದ ಟಿ.ಎನ್.ಕೃಷ್ಣಮೂರ್ತಿ ಹಾಗೂ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ  ಅವರನ್ನ ವರ್ಗಾವಣೆ ಮಾಡಲಾಗಿದೆ.

ಮುಖ್ಯಾಂಶಗಳು

  • ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ
  • ಪದತ್ಯಾಗಕ್ಕೂ ಮುನ್ನವೇ ಸಿದ್ದರಾಮಯ್ಯ ಆಪ್ತ ಅಧಿಕಾರಿಗಳ ವರ್ಗಾವಣೆ
  • ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಧಿಕಾರಿ ಸೇರಿದಂತೆ ಹಲವ ಅಧಿಕಾರಿಗಳ ವರ್ಗಾ
  • ರಾಜೀನಾಮೆಗೂ ಮುನ್ನವೇ ವಿವಿಧ ಇಲಾಖೆಗಳಿಗೆ ವರ್ಗಾವಣೆ

ವಿವಿಧ ಆಪ್ತ ಅಧಿಕಾರಿಗಳ ವರ್ಗಾವಣೆ

ಸಿಎಂ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿಯಾಗಿದ್ದ ಕೆಎಎಸ್ ಅಧಿಕಾರಿ ಡಾ.ವೆಂಕಟೇಶಯ್ಯ ಅವರನ್ನು ವರ್ಗಾವಣೆ ಕೃಷಿ ಮಾರಾಟ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಇನ್ನು ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ರಮೇಶ್ ಪಿ.ಕೋನರೆಡ್ಡಿ ಅವರನ್ನು ವಿದ್ಯುತ್ ಪ್ರಸರಣ ನಿಗಮದ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಪದತ್ಯಾಗಕ್ಕೂ ಮುನ್ನವೇ ತಮ್ಮ ಆಪ್ತ ಅಧಿಕಾರಿಗಳನ್ನು ಆಯಾ ಕಟ್ಟಿನ ಸ್ಥಳಗಳಿಗೆ ನಿಯುಕ್ತಿಗೊಳಿಸಿದ್ದಾರೆ.

ಸಿಎಂ ಜಂಟಿ ಕಾರ್ಯದರ್ಶಿಯಾಗಿದ್ದ ಟಿ.ಎನ್.ಕೃಷ್ಣಮೂರ್ತಿ ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ-2 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಹಾಗೇ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಅವರನ್ನ ಕ್ರೈಸ್ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ.

ಇದನ್ನೂ ಓದಿ: ಸಿಎಂ ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ, ಮಾಧ್ಯಮ ಸಲಹೆಗಾರರ ನೇಮಕ: ಯಾರ್ಯಾರು? ಇಲ್ಲಿದೆ ವಿವರ

ಯಾವುದೇ ಹೊಸ ಸರ್ಕಾರ ಆಡಳಿತಕ್ಕೆ ಬಂದರೆ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿಸಿಕೊಳ್ಳುವುದು ಸಾಮಾನ್ಯ. ಹೀಗಾಗಿ 2023ರಲ್ಲಿ ಎರಡನೇ ಬಾರಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೆಎಎಸ್ ಅಧಿಕಾರಿ ಡಾ. ವೆಂಕಟೇಶಯ್ಯ ಅವರನ್ನು ಗುತ್ತಿಗೆ ಆಧಾರದ ಮೇಲೆ ಸಿಎಂ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಜೊತೆಗೆ ಕೆಎಎಸ್(ಹಿರಿಯ ಶ್ರೇಣಿ) ಅಧಿಕಾರಿಯಾಗಿರುವ ರಮೇಶ್ ಪಿ.ಕೋನರೆಡ್ಡಿ ಅವರನ್ನು ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸಲಾಗಿತ್ತು.

ಆದ್ರೆ, ಇದೀಗ ಸಿದ್ದರಾಮಯ್ಯನವರು ಪದತ್ಯಾಗ ಮಾಡುವ ಮೊದಲೇ ಅವರ ಆಪ್ತ ಅಧಿಕಾರಿಗಳನ್ನ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿರುವುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:36 pm, Thu, 28 May 26

Source link

ದೇಶದಲ್ಲೇ ಮೊದಲು: AI ಬಳಸಿ ಅನುವಾದಗೊಂಡ ಕನ್ನಡ ಪುಸ್ತಕ ಮೈಸೂರಿನಲ್ಲಿ ಬಿಡುಗಡೆ!

ಬೆಂಗಳೂರು, ಮೇ 28: ಸಂಸ್ಕೃತಿ ಮತ್ತು ತಂತ್ರಜ್ಞಾನದ ಅಪೂರ್ವ ಸಮ್ಮಿಲನಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಾಕ್ಷಿಯಾಗುತ್ತಿದ್ದು, ದೇಶದಲ್ಲೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಹಾಯದೊಂದಿಗೆ ಸಂಪೂರ್ಣವಾಗಿ ಕನ್ನಡಕ್ಕೆ ಅನುವಾದಗೊಂಡಿರುವ ಇತಿಹಾಸ ಆಧಾರಿತ ಕಾದಂಬರಿ (Non-fiction Book) ಬಿಡುಗಡೆಗೆ ಸಜ್ಜಾಗಿದೆ.

ಮುಖ್ಯಾಂಶಗಳು

  • ದೇಶದಲ್ಲೇ ಮೊದಲ ಬಾರಿಗೆ ಎಐ ತಂತ್ರಜ್ಞಾನ ಬಳಸಿ ಕನ್ನಡ ಪುಸ್ತಕ ಅನುವಾದಿಸಲಾಗಿದೆ.
  • ಮೈಸೂರಿನಲ್ಲಿ ಇತಿಹಾಸಕಾರ ವಿಕ್ರಮ್ ಸಂಪತ್ ಬರೆದ ಗೌಹರ್ ಜಾನ್ ಕೃತಿ ಬಿಡುಗಡೆಯಾಗಲಿದೆ.
  • ಸಂಸದ ಯದುವೀರ್ ಒಡೆಯರ್ ಈ ಐತಿಹಾಸಿಕ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಖ್ಯಾತ ಇತಿಹಾಸಕಾರ ವಿಕ್ರಮ್ ಸಂಪತ್ ಆಂಗ್ಲ ಭಾಷೆಯಲ್ಲಿ ಬರೆದಿರುವ ಪ್ರಸಿದ್ಧ ಕೃತಿ ‘ಮೈ ನೇಮ್ ಈಸ್ ಗೌಹರ್ ಜಾನ್: ದಿ ಲೈಫ್ ಅಂಡ್ ಟೈಮ್ಸ್ ಆಫ್ ಎ ಮ್ಯೂಸಿಷಿಯನ್’ (My Name Is Gauhar Jaan: The Life and Times of a Musician) ಪುಸ್ತಕವು ಈಗ ಎಐ ತಂತ್ರಜ್ಞಾನದ ಮೂಲಕ ಕನ್ನಡಕ್ಕೆ ತರ್ಜುಮೆಗೊಂಡಿದೆ. ಈ ಐತಿಹಾಸಿಕ ಪುಸ್ತಕವನ್ನು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ.

ಪ್ರಕಾಶನ ಲೋಕದಲ್ಲಿ ಹೊಸ ಮೈಲಿಗಲ್ಲು

ಬೆಂಗಳೂರು ಮೂಲದ ಸ್ಟಾರ್ಟ್-ಅಪ್ ಸಂಸ್ಥೆಯೊಂದರ ‘ಟ್ರಾನ್ಸ್‌ಲಿಟ್’ (TransLit) ಎಂಬ ಅತ್ಯಾಧುನಿಕ ಎಐ ತಂತ್ರಜ್ಞಾನವನ್ನು ಬಳಸಿ ಈ ಪುಸ್ತಕವನ್ನು ಅನುವಾದಿಸಲಾಗಿದೆ. ತಂತ್ರಜ್ಞಾನವು ಶೇಕಡಾ 80 ರಷ್ಟು ನಿಖರತೆಯೊಂದಿಗೆ ಕೆಲವೇ ವಾರಗಳಲ್ಲಿ ಅನುವಾದ ಕಾರ್ಯ ಮುಗಿಸಿದ್ದು, ನಂತರ ಮನುಷ್ಯರಿಂದ ಕೇವಲ ಪ್ರೂಫ್ ರೀಡಿಂಗ್ ಹಾಗೂ ಎಡಿಟಿಂಗ್ ಮಾಡಿಸಲಾಗಿದೆ. ಸಾಮಾನ್ಯವಾಗಿ ಇಂತಹ ದೊಡ್ಡ ಕೃತಿಯನ್ನು ಭಾಷಾಂತರಿಸಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ, ಆದರೆ ಎಐ ತಂತ್ರಜ್ಞಾನದಿಂದ ಕೇವಲ 3 ರಿಂದ 4 ವಾರಗಳಲ್ಲಿ ಈ ಕೆಲಸ ಪೂರ್ಣಗೊಂಡಿದೆ. ಮೂಲ ಕೃತಿಯ ಸಾಹಿತ್ಯಿಕ ಗುಣಮಟ್ಟ ಹಾಗೂ ಶೈಲಿಯನ್ನು ಇದು ಯಥಾವತ್ತಾಗಿ ಕಾಯ್ದುಕೊಂಡಿದೆ ಎಂದು ಲೇಖಕ ವಿಕ್ರಮ್ ಸಂಪತ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಯಾರು ಈ ಗೌಹರ್ ಜಾನ್?

ಗೌಹರ್ ಜಾನ್ (1873-1930) ಕೋಲ್ಕತ್ತಾದ ಭಾರತೀಯ ಉಪಖಂಡದ ಪ್ರಸಿದ್ಧ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ್ತಿ. 1902 ರಲ್ಲಿ ಗ್ರಾಮೊಫೋನ್‌ನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಧ್ವನಿ ಮುದ್ರಣ ಮಾಡಿದ ಮೊದಲ ಮಹಿಳಾ ಕಲಾವಿದೆ ಎಂಬ ಕೀರ್ತಿ ಇವರದ್ದಾಗಿದೆ. ತಮ್ಮ ಜೀವಿತಾವಧಿಯ ಕೊನೆಯ ದಿನಗಳಲ್ಲಿ ತೀವ್ರ ಕಷ್ಟಗಳನ್ನು ಎದುರಿಸುತ್ತಿದ್ದಾಗ, ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗೌಹರ್ ಜಾನ್ ಅವರನ್ನು ಮೈಸೂರಿಗೆ ರಾಜ್ಯ ಅತಿಥಿಯಾಗಿ ಆಹ್ವಾನಿಸಿ, ಚಾಮುಂಡಿ ವಿಹಾರದ ‘ದಿಲ್ ಖುಷ್’ ಎಂಬ ಕಾಟೇಜ್‌ನಲ್ಲಿ ವಸತಿ ಕಲ್ಪಿಸಿದ್ದರು. ಜೂನ್ 17, 1930 ರಂದು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಅವರು ನಿಧನರಾದರು. ಆಕೆಯ ಇಡೀ ಜೀವನದ ಏಳುಬೀಳುಗಳ ರೋಚಕ ಕಥೆಯನ್ನು ಈ ಪುಸ್ತಕ ಒಳಗೊಂಡಿದೆ. ಮೈಸೂರಿನಲ್ಲೇ ಕೊನೆಯುಸಿರೆಳೆದ ಮಹಾನ್ ಕಲಾವಿದೆಯ ಜೀವನ ಚರಿತ್ರೆ ಇದೀಗ ಆಧುನಿಕ ತಂತ್ರಜ್ಞಾನದ ಮೂಲಕ ಕನ್ನಡದಲ್ಲೇ ಓದುಗರಿಗೆ ಸಿಗುತ್ತಿರುವುದು ವಿಶೇಷವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಕೊನೆಯ ಸಿನಿಮಾ ಆಗಬೇಕಿದ್ದು ‘ಜನ ನಾಯಗನ್’ ಅಲ್ಲ, ಮತ್ಯಾವುದು?

ದಳಪತಿ ವಿಜಯ್ (Thalapathy Vijay) ಈಗ ತಮಿಳುನಾಡಿನ ಸಿಎಂ ಆಗಿದ್ದಾರೆ. ಚುನಾವಣೆಗೆ ಮುಂಚೆ ಅವರ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆ ಆಗಬೇಕಿತ್ತು, ಆದರೆ ಇನ್ನೂ ಅದೂ ಬಿಡುಗಡೆ ಆಗಿಲ್ಲ. ‘ಜನ ನಾಯಗನ್’ ಸಿನಿಮಾದ ಚಿತ್ರೀಕರಣಕ್ಕೆ ಮುಂಚೆಯೇ ವಿಜಯ್ ಅವರು, ‘ಇದು ನನ್ನ ಕೊನೆಯ ಸಿನಿಮಾ’ ಎಂದು ಘೋಷಿಸಿದ್ದರು. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ತಮಿಳು ಚಿತ್ರರಂಗದ ನಿರ್ದೇಶಕ ಅಸಲಿಗೆ ‘ಜನ ನಾಯಗನ್’ ಅಲ್ಲ ವಿಜಯ್ ಅವರ ಕೊನೆಯ ಸಿನಿಮಾ ಆಗಬೇಕಿದ್ದಿದ್ದು ‘ಕರುಪ್ಪು’ ಎಂದಿದ್ದಾರೆ.

ಸೂರ್ಯ ಮತ್ತು ತ್ರಿಷಾ ನಟನೆಯ ‘ಕರುಪ್ಪು’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ತಮಿಳುನಾಡಿನಲ್ಲಿ ಸೂಪರ್ ಹಿಟ್ ಎನಿಸಿಕೊಂಡಿದೆ. ಈಗಾಗಲೇ ಸಿನಿಮಾ 250 ಕೋಟಿ ಗಳಿಸಿದ್ದು, ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಈ ಸಿನಿಮಾ ಅನ್ನು ನಟ ಮತ್ತು ನಿರ್ದೇಶಕ ಎರಡೂ ಆಗಿರುವ ಆರ್​​ಜೆ ಬಾಲಾಜಿ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಬಾಲಾಜಿ, ‘ಅಸಲಿಗೆ ‘ಕರುಪ್ಪು’ ಸಿನಿಮಾ ವಿಜಯ್ ಅವರ ಕೊನೆಯ ಸಿನಿಮಾ ಆಗಬೇಕಿತ್ತು’ ಎಂದಿದ್ದಾರೆ.

ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಆರ್​​ಜೆ ಬಾಲಾಜಿ, ‘ಕರುಪ್ಪು’ ವಿಜಯ್ ಅವರ ಕೊನೆಯ ಸಿನಿಮಾ ಆಗಬೇಕಿತ್ತು. ವಿಜಯ್ ಅವರ ರಾಜಕೀಯ ಎಂಟ್ರಿ ಖಾತ್ರಿ ಆಗಿತ್ತು, ಹಾಗಾಗಿ ಅವರ ಕೊನೆಯ ಸಿನಿಮಾ ಆಗಿ ಯಾವುದು ಸೂಕ್ತ ಎಂಬ ಗೊಂದಲದಲ್ಲಿ ಅವರು ಇದ್ದರು. ನಾನು ಅವರಿಗೆ ‘ಕರುಪ್ಪು’ ಕತೆ ಹೇಳಿದೆ. ಆ ಬಳಿಕ ಎರಡು-ಮೂರು ಬಾರಿ ಭೇಟಿಯಾಗಿ ಕತೆಯ ಬಗ್ಗೆ ಚರ್ಚಿಸಿದೆವು. ಆದರೆ ಅವರಿಗೆ ಚುನಾವಣೆಗೆ ಮುಂಚೆ ‘ಕರುಪ್ಪು’ಗಿಂತಲೂ ‘ಜನ ನಾಯಗನ್’ ಕತೆ ಹೆಚ್ಚು ಸೂಕ್ತ ಎನಿಸಿ ಅವರು ಸಿನಿಮಾ ಕೈಬಿಟ್ಟರು’ ಎಂದಿದ್ದಾರೆ.

ಇದನ್ನೂ ಓದಿ:ರಶ್ಮಿಕಾ ಮಾತ್ರವಲ್ಲ ವಿಜಯ್ ದೇವರಕೊಂಡ ಸಹ ‘ತಾಳಿ’ ಕಟ್ಟಿಕೊಂಡಿದ್ದಾರಾ?

‘ಅವರು ಗೌರವಪೂರ್ವಕವಾಗಿಯೇ ಕತೆಯನ್ನು ಬೇಡ ಎಂದರು. ಇದಕ್ಕೆ ಮುಂಚೆಯೂ ಅವರಿಗೆ ಎರಡು ಕತೆ ಹೇಳಿದ್ದೆ. ಆದರೆ ಅದು ಅವರಿಗೆ ಸೂಟ್ ಆಗಿರಲಿಲ್ಲ. ಆಗಲೂ ಸಹ ಅವರು ಯಾವುದಾದರೂ ಸೂಕ್ತ ಎನಿಸಿದರೆ ಖಂಡಿತ ಒಟ್ಟಿಗೆ ಕೆಲಸ ಮಾಡುವ ಎಂದಿದ್ದರು. ಸಾಕಷ್ಟು ಗೌರವಪೂರ್ವಕವಾಗಿಯೇ ಅವರು ನನ್ನ ಕತೆಗಳನ್ನು ನಿರಾಕರಿಸಿದರಾದರೂ ನನ್ನ ಪ್ರತಿಭೆಯ ಬಗ್ಗೆ ಕ್ರಿಯಾತ್ಮಕತೆ ಬಗ್ಗೆ ಗೌರವ ಇರುವುದಾಗಿಯೂ ಹೇಳಿದ್ದರು’ ಎಂದಿದ್ದಾರೆ ಬಾಲಾಜಿ.

‘ಕರುಪ್ಪು’ ಕತೆಯನ್ನು ವಿಜಯ್ ನಿರಾಕರಿಸಿದ ಬಳಿಕ ನಾನು ಅದೇ ಕತೆಯನ್ನು ಸೂರ್ಯ ಅವರಿಗೆ ಹೇಳಿದೆ. ಸೂರ್ಯ ಅವರಿಗೆ ಕತೆ ಇಷ್ಟವಾಯ್ತು ಆದರೆ ಅವರು ಕೆಲವು ಬದಲಾವಣೆಗಳನ್ನು ಸೂಚಿಸಿದರು. ಆ ಬದಲಾವಣೆಗಳು ಸಿನಿಮಾ ಇನ್ನಷ್ಟು ಉತ್ತಮಗೊಳ್ಳಲು ನೆರವಾದವು. ಕೊನೆಗೆ ಸಿನಿಮಾ ಬಿಡುಗಡೆ ಆಗಿ ಈಗ ಸೂಪರ್ ಹಿಟ್ ಆಗಿದೆ’ ಎಂದಿದ್ದಾರೆ ಬಾಲಾಜಿ. ‘ಕರುಪ್ಪು’ ಸಿನಿಮಾನಲ್ಲಿ ಸೂರ್ಯ ಜೊತೆಗೆ ನಟಿ ತ್ರಿಷಾ ನಾಯಕಿಯಾಗಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಾರುಕಟ್ಟೆ ಕುಸಿದಾಗ ಹೆದರಿಬಿಟ್ಟರೆ ಲಕ್ಷ್ಮೀಕಟಾಕ್ಷ ತಪ್ಪಿ ಹೋದೀತು ಜೋಕೆ..! ಶೆಲ್ಬಿ ಡೇವಿಸ್ ಸಲಹೆ ಕೇಳಿ

ಕಳೆದ ಎರಡು ವರ್ಷದಿಂದ ಭಾರತದ ಷೇರು ಮಾರುಕಟ್ಟೆ (Stock Market) ಸಾಕಷ್ಟು ಏರುಪೇರು, ಏರಿಳಿತಗಳನ್ನು ಕಾಣುತ್ತಾ ಬಂದಿದೆ. ಎರಡು ವರ್ಷದ ಹಿಂದೆ ಯಾರಾದರೂ ಹೂಡಿಕೆ ಆರಂಭಿಸಿದ್ದರೆ ಇವತ್ತು ಅವರ ಗಳಿಕೆ ಮೈನಸ್​ನಲ್ಲಿ ಇರುತ್ತದೆ. ಹೊಸಬರು ಈ ಬೇರ್ ಮಾರ್ಕೆಟ್​ನಿಂದ (Bear Market) ಭ್ರಮನಿರಸನಗೊಂಡು ಮಾರುಕಟ್ಟೆ ಬಿಟ್ಟು ಹೋಗೋ ಸಾಧ್ಯತೆ ಹೆಚ್ಚು. ಆದರೆ, ಅನುಭವಿಗಳಿಗೆ ಮತ್ತು ಪೇಟೆ ವರ್ತನೆ ತಿಳಿದಿರುವವರಿಗೆ ಈ ಕರಡಿ ಘಳಿಗೆಯೇ ಶ್ರೇಷ್ಠವಾಗಿದೆ. ನಿಮ್ಮ ಸಂಪತ್ತು ಹೆಚ್ಚಿಸಲು ಸಾಧ್ಯವಾಗಿಸುತ್ತದೆ ಎಂದು ಬೇರ್ ಮಾರ್ಕೆಟ್. ಈ ಸಂಕಷ್ಟ ಘಟ್ಟದಲ್ಲಿ ಧೃತಿಗೆಟ್ಟರೆ ಒಳ್ಳೆಯ ಅವಕಾಶ ಕಳೆದುಕೊಳ್ಳುತ್ತೀರಿ. ವಾರೆನ್ ಬಫೆಟ್, ಪೀಟರ್ ಲಿಂಚ್ ಅಥವಾ ಚಾರ್ಲಿ ಮುಂಗರ್ ಆಗಿರಲಿ, ಜಗತ್ತಿನ ಬಹುತೇಕ ಎಲ್ಲಾ ದಿಗ್ಗಜ ಹೂಡಿಕೆದಾರರಿಗೆ ಈ ಬೇರ್ ಮಾರ್ಕೆಟ್ ಸುಗ್ಗಿಯ ಕಾಲ..

ಅದೇ ಸಾಲಿಗೆ ಸೇರಿದ ಅಮೆರಿಕದ ಪ್ರಸಿದ್ಧ ಹೂಡಿಕೆದಾರ, ಉದ್ಯಮಿ ಮತ್ತು ಲೋಕೋಪಕಾರಿ ಶೆಲ್ಬಿ ಕಲ್ಲಮ್ ಡೇವಿಸ್ (Shelby Cullom Davis) ಅವರು ಮಾರುಕಟ್ಟೆಯ ಕುಸಿತದ ಬಗ್ಗೆ ಹೂಡಿಕೆದಾರರಿಗೆ ಅತ್ಯಮೂಲ್ಯವಾದ ಆರ್ಥಿಕ ಪಾಠವೊಂದನ್ನು ಹೇಳಿದ್ದಾರೆ. “ನಿಮ್ಮ ಜೀವನದ ಬಹುಪಾಲು ಹಣವನ್ನು ನೀವು ಗಳಿಸುವುದು ಮಾರುಕಟ್ಟೆಯ ಕುಸಿತದ (Bear Market) ಸಮಯದಲ್ಲಿಯೇ. ಆದರೆ ಆ ಸಮಯದಲ್ಲಿ ನಿಮಗದು ಅರಿವಾಗುವುದಿಲ್ಲ ಅಷ್ಟೆ” ಎಂದು ಶೆಲ್ಬಿ ಅನುಭವದ ನುಡಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿಚಿತ್ರ ಕಾರಣ..! ಅನುಭವಿ ಗೂಗಲ್ ಉದ್ಯೋಗಿಯ ಅರ್ಜಿ ತಿರಸ್ಕಾರ; ಕಾಲೇಜು ಗ್ರೇಡ್ ಕಡಿಮೆ ಬಂದಿದ್ದಕ್ಕೆ ರಿಜೆಕ್ಟ್

ಕುಸಿತದ ಮಾರುಕಟ್ಟೆಯಲ್ಲಿ ಹಣ ಗಳಿಸುವುದು ಹೇಗೆ?

ಮಾರುಕಟ್ಟೆಗಳು ತೀವ್ರವಾಗಿ ಕುಸಿಯುತ್ತಿರುವಾಗ ಹೂಡಿಕೆದಾರರು ಪ್ಯಾನಿಕ್ ಆಗಿ ತಮ್ಮ ಷೇರುಗಳನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಆದರೆ, ಶೆಲ್ಬಿ ಡೇವಿಸ್ ಅವರ ಪ್ರಕಾರ, ಇಂತಹ ಕುಸಿತದ ಸಮಯವೇ ನಿಜವಾದ ಅವಕಾಶ.

ರಿಯಾಯಿತಿ ದರದಲ್ಲಿ ಗುಣಮಟ್ಟದ ಷೇರುಗಳು: ಮಾರುಕಟ್ಟೆ ಜಿಗಿತದ (Bull Run) ಸಮಯದಲ್ಲಿ ಗಗನಕ್ಕೇರಿರುವ ಉತ್ತಮ ಕಂಪನಿಗಳ ಮೌಲ್ಯಯುತ ಷೇರುಗಳು, ಬೇರ್ ಮಾರ್ಕೆಟ್‌ನಲ್ಲಿ ಭಾರಿ ರಿಯಾಯಿತಿ ದರದಲ್ಲಿ (ಡಿಸ್ಕೌಂಟ್‌ನಲ್ಲಿ) ಸಿಗುತ್ತವೆ. ಇಂತಹ ಸಮಯದಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ಗರಿಷ್ಠ ಲಾಭ ಗಳಿಸಬಹುದು.

ಅಲ್ಪಾವಧಿಯ ಏರಿಳಿತಗಳಿಗೆ ಹೆದರಿ ಕ್ರಮ ತೆಗೆದುಕೊಳ್ಳುವ ಬದಲು ಭಾವನಾತ್ಮಕ ಶಿಸ್ತು ಹೊಂದಿರುವುದು ಮುಖ್ಯ. ದುರಾಸೆ ಇಲ್ಲದ, ಭಯವೂ ಇಲ್ಲದ ಮನಃಸ್ಥಿತಿಯೊಂದಿಗೆ ದೀರ್ಘಾವಧಿಗೆ ಹೂಡಿಕೆ ಮಾಡಿ ಎಂಬುದು ಶೆಲ್ಬಿ ಕಲ್ಲಂ ಡೇವಿಸ್ ಅವರ ಸಲಹೆ.

ದೀರ್ಘಾವಧಿಯ ಹೂಡಿಕೆಯಲ್ಲಿ ನಷ್ಟದ ಸಾಧ್ಯತೆ ಶೂನ್ಯ

ಇತ್ತೀಚಿನ ‘ಇಟಿ ವೆಲ್ತ್-ಕ್ರಿಸಿಲ್ ಎಸ್‌ಐಪಿ’ (ET Wealth-Crisil SIP) ಅಧ್ಯಯನವು ಕೂಡ ಇದೇ ಸತ್ಯವನ್ನು ಸಾಬೀತುಪಡಿಸಿದೆ. ದೀರ್ಘಾವಧಿಯವರೆಗೆ ಮಾರುಕಟ್ಟೆಯಲ್ಲಿ ಉಳಿಯುವ ಹೂಡಿಕೆದಾರರು ಹಣ ಕಳೆದುಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ನೀವು ಹೂಡಿಕೆ ಮಾಡುವ ಅವಧಿ ಹೆಚ್ಚಾದಂತೆ ನಷ್ಟದ ಸಂಭವನೀಯತೆ ಕಡಿಮೆಯಾಗುತ್ತಾ ಹೋಗುತ್ತದೆ.

ಇದನ್ನೂ ಓದಿ: ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?

ಎಸ್​ಐಪಿ ಹೂಡಿಕೆ ಅವಧಿ ಮತ್ತು ನಷ್ಟ ಸಾಧ್ಯತೆ

  • 1 ವರ್ಷ: ನಷ್ಟ ಸಾಧ್ಯತೆ 22.7%
  • 6 ವರ್ಷಗಳು: ನಷ್ಟ ಸಾಧ್ಯತೆ 2% ಗಿಂತ ಕಡಿಮೆ
  • 10 ವರ್ಷಗಳು: ನಷ್ಟ ಸಾಧ್ಯತೆ 0 (ಶೂನ್ಯ ನಷ್ಟ)

ಷೇರು ಮಾರುಕಟ್ಟೆಯಲ್ಲಿ ಅಲ್ಪಾವಧಿಯ ಮುನ್ಸೂಚನೆಗಳನ್ನು ನಂಬುವುದು “ನಾಣ್ಯವನ್ನು ಟಾಸ್” ಮಾಡಿದಂತೆ. ಆದರೆ 10 ರಿಂದ 20 ವರ್ಷಗಳ ದೀರ್ಘಾವಧಿಯಲ್ಲಿ ಮಾರುಕಟ್ಟೆಯು ಯಾವಾಗಲೂ ಲಾಭದಾಯಕವಾಗಿಯೇ ಇರುತ್ತದೆ ಎಂಬುದನ್ನು ಹೂಡಿಕೆದಾರರು ನೆನಪಿನಲ್ಲಿಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 1:31 pm, Thu, 28 May 26

Source link

Viral Post: ಬೆಂಗಳೂರಿನ ಇಸ್ತ್ರಿ ದರ ಕೇಳಿ ಬೆಚ್ಚಿಬಿದ್ದ ನೋಯ್ಡಾ ನಿವಾಸಿ; ವೈರಲ್ ಆಯ್ತು ಪೋಸ್ಟ್

ಬೆಂಗಳೂರಿನ ಇಸ್ತ್ರಿ ದರ ಕೇಳಿ ಬೆಚ್ಚಿಬಿದ್ದ ನೋಯ್ಡಾ ನಿವಾಸಿImage Credit source: Twitter/@sajithpai

ಬೆಂಗಳೂರು: ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಜೀವನ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮನೆ ಬಾಡಿಗೆ, ದಿನಸಿ, ಪ್ರಯಾಣ ಮಾತ್ರವಲ್ಲದೆ ಸಾಮಾನ್ಯ ಸೇವೆಗಳ ದರವೂ ಜನರನ್ನು ಅಚ್ಚರಿಗೊಳಿಸುತ್ತಿದೆ. ಇದೀಗ ಬೆಂಗಳೂರಿನ ಇಸ್ತ್ರಿ ದರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಚರ್ಚೆ ಭಾರೀ ವೈರಲ್ ಆಗಿದೆ. ನೋಯ್ಡಾದಿಂದ ಇತ್ತೀಚೆಗಷ್ಟೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಶಿಫ್ಟ್ ಆದ ‘ಸಜಿತ್ ಪೈ’ (Sajith Pai) ಎಂಬ ಸಾಹಸೋದ್ಯಮ ಬಂಡವಾಳಶಾಹಿ (Venture Capitalist), ಇಲ್ಲಿನ ಬಟ್ಟೆ ಇಸ್ತ್ರಿ ದರವನ್ನು ನೋಡಿ ದಂಗಾಗಿದ್ದಾರೆ. ಈ ಅನುಭವವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

5 ರಿಂದ ನೇರ 20ರೂ:

ತಮ್ಮ ಪೋಸ್ಟ್‌ನಲ್ಲಿ ಸಜಿತ್ ಪೈ, “ನಾನು ಇದೇ ತಿಂಗಳ ಆರಂಭದಲ್ಲಿ ಬೆಂಗಳೂರಿಗೆ ಬಂದೆ. ಇಲ್ಲಿ ನನಗೆ ಅತಿ ಹೆಚ್ಚು ಶಾಕ್ ನೀಡಿದ ಸಂಗತಿ ಎಂದರೆ ಬಟ್ಟೆ ಇಸ್ತ್ರಿಗೆ ತೆಗೆದುಕೊಳ್ಳುವ ಹಣ” ಎಂದು ಬರೆದಿದ್ದಾರೆ. ಅವರ ಪ್ರಕಾರ, ನೋಯ್ಡಾದಲ್ಲಿ ಪ್ರತಿ ಬಟ್ಟೆಗೆ ಕೇವಲ 5ರೂ. ಕೊಟ್ಟರೆ ಸಾಕಾಗುತ್ತಿತ್ತು. ಆದರೆ ಬೆಂಗಳೂರಿನ ಇಂದಿರಾನಗರ ಪ್ರದೇಶದಲ್ಲಿ ಪ್ರತಿ ಬಟ್ಟೆಗೆ 12 ರಿಂದ 20ರೂ. ವರೆಗೆ ಕೇಳುತ್ತಿರುವುದು ಅವರಿಗೆ ಅಚ್ಚರಿಯಾಗಿದೆ. ಮುಂಬೈನಿಂದ ಬೆಂಗಳೂರಿಗೆ ಬಂದಿರುವ ತಮ್ಮ ಸ್ನೇಹಿತರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಸ್ತ್ರಿ ದರ ಏಕೆ ದುಬಾರಿ?

ಈ ಬೆಲೆ ವ್ಯತ್ಯಾಸಕ್ಕೆ ಕಾರಣವನ್ನೂ ಸಜಿತ್ ಪೈ ವಿವರಿಸಿದ್ದಾರೆ. ಉತ್ತರ ಭಾರತದ ಹಲವೆಡೆ ಇನ್ನೂ ಕಲ್ಲಿದ್ದಲು ಆಧಾರಿತ ಇಸ್ತ್ರಿ ಪೆಟ್ಟಿಗೆಗಳನ್ನು ಬಳಸಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಬಹುತೇಕ ಇಸ್ತ್ರಿ ಅಂಗಡಿಗಳು ಎಲ್‌ಪಿಜಿ (ಗ್ಯಾಸ್) ಚಾಲಿತ ಇಸ್ತ್ರಿಗಳನ್ನು ಬಳಸುತ್ತಿವೆ.

ಉತ್ತರ ಭಾರತದಲ್ಲಿ ಕಲ್ಲಿದ್ದಲು ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಲಭ್ಯವಾಗಬಹುದು. ಆದರೆ ಬೆಂಗಳೂರಿನಲ್ಲಿ ಗ್ಯಾಸ್ ಬೆಲೆ ಏರಿಕೆ, ಕಾರ್ಮಿಕ ವೆಚ್ಚ ಮತ್ತು ನಗರ ಜೀವನದ ಹೆಚ್ಚಿದ ಖರ್ಚು ಇಸ್ತ್ರಿ ದರ ಹೆಚ್ಚಲು ಪ್ರಮುಖ ಕಾರಣಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ಕೊಟ್ಟು ಉಪಚರಿಸುವ ಮಹಿಳೆ

ನೆಟ್ಟಿಗರ ಪ್ರತಿಕ್ರಿಯೆ:

ಸಜಿತ್ ಪೈ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ವಿವಿಧ ನಗರಗಳ ಜನರು ತಮ್ಮ ಊರಿನ ಇಸ್ತ್ರಿ ದರಗಳನ್ನು ಹಂಚಿಕೊಂಡಿದ್ದಾರೆ. ಮುಂಬೈ ಮೂಲದ ಬಳಕೆದಾರರೊಬ್ಬರು, “ಠಾಣೆಯಲ್ಲಿ ಸಾಮಾನ್ಯ ಇಸ್ತ್ರಿಗೆ 7 ಮತ್ತು ಸ್ಟೀಮ್ ಇಸ್ತ್ರಿಗೆ 20ರೂ..ಬೆಂಗಳೂರಿನ ದರ ಕೇಳಿ ನಮಗೂ ಶಾಕ್ ಆಯಿತು” ಎಂದು ಕಾಮೆಂಟ್ ಮಾಡಿದ್ದಾರೆ. ಬೆಂಗಳೂರಿನ ನಿವಾಸಿಯೊಬ್ಬರು, “ಮೊದಲು 10ರೂ. ಇದ್ದ ಇಸ್ತ್ರಿ ದರ, ಗ್ಯಾಸ್ ಸಿಲಿಂಡರ್ ಬೆಲೆ ಏರಿದ ಬಳಿಕ 15 ರಿಂದ 20ರೂ. ಆಯಿತು. ಸಣ್ಣ ಇಂಡೇನ್ ಸಿಲಿಂಡರ್ ಬೆಲೆ ಭಾರೀ ಏರಿಕೆಯಾಗಿದೆ” ಎಂದು ಹೇಳಿದ್ದಾರೆ.

ಮೆಟ್ರೋ ನಗರಗಳ ದುಬಾರಿ ಜೀವನಕ್ಕೆ ಮತ್ತೊಂದು ಉದಾಹರಣೆ:

ಒಟ್ಟಿನಲ್ಲಿ, ಬೆಂಗಳೂರಿನ ಇಸ್ತ್ರಿ ದರದ ಕುರಿತ ಈ ಚರ್ಚೆ ಮೆಟ್ರೋ ನಗರಗಳಲ್ಲಿ ಸಾಮಾನ್ಯ ಸೇವೆಗಳ ವೆಚ್ಚವೂ ಎಷ್ಟು ವೇಗವಾಗಿ ಏರುತ್ತಿದೆ ಎಂಬುದನ್ನು ತೋರಿಸಿದೆ. ಮನೆ ಬಾಡಿಗೆ ಮತ್ತು ಟ್ರಾಫಿಕ್ ಸಮಸ್ಯೆಗಳ ಜೊತೆಗೆ, ಈಗ ದಿನನಿತ್ಯದ ಸಣ್ಣ ಸೇವೆಗಳೂ ಜನರ ಖರ್ಚಿನ ಪಟ್ಟಿಯಲ್ಲಿ ದೊಡ್ಡ ಪಾತ್ರವಹಿಸುತ್ತಿವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಿನ್ನನ್ನು ಇದೇ ನಾಶ ಮಾಡುತ್ತೆ’; ಹನಿ ಸಿಂಗ್ ಬಾಳಲ್ಲಿ ನಿಜವಾಯ್ತು ಶಾರುಖ್ ಭವಿಷ್ಯ

ಖ್ಯಾತ ರಾಪರ್ ಮತ್ತು ಗಾಯಕ ಯೋಯೋ ಹನಿ ಸಿಂಗ್ ಹಾಡುಗಳು ಈಗ ಮೊದಲಿನಷ್ಟು ಹಿಟ್ ಆಗುತ್ತಿಲ್ಲ. ಅವರು ಹಲವು ಸಂದರ್ಶನಗಳನ್ನು ನೀಡುತ್ತಿದ್ದಾರೆ. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ತಾವೆದುರಿಸಿದ ಮಾನಸಿಕ ಆರೋಗ್ಯದ ಸಮಸ್ಯೆಗಳು ಹಾಗೂ ಚಿತ್ರರಂಗದಿಂದ ದಿಢೀರ್ ದೂರ ಸರಿದಿದ್ದರ ಹಿಂದಿನ ಅಸಲಿ ಕಾರಣಗಳನ್ನು ಅವರು ಇತ್ತೀಚೆಗೆ ಬಿಚ್ಚಿಟ್ಟಿದ್ದಾರೆ. ವಿಶೇಷವೆಂದರೆ, ತಾವಾಗಿಯೇ ತಂದುಕೊಂಡ ಈ ಕಷ್ಟದ ದಿನಗಳ ಬಗ್ಗೆ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರು ಮೊದಲೇ ಎಚ್ಚರಿಸಿದ್ದರು ಎಂದು ಹನಿ ಸಿಂಗ್ (Honey Singh) ಹೇಳಿಕೊಂಡಿದ್ದಾರೆ. ಅದರಲ್ಲೂ ಕಿಂಗ್ ಖಾನ್ ಅಂದು ಹೇಳಿದ್ದ ಮಾತುಗಳು ಮುಂದೆ ತಮ್ಮ ಜೀವನದಲ್ಲಿ ಹೇಗೆ ನಿಜವಾದವು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿದ ಹನಿ ಸಿಂಗ್, ‘2013 ಮತ್ತು 2014ರ ಅವಧಿಯಲ್ಲಿ ನಾನು ವೃತ್ತಿಜೀವನದ ಉತ್ತುಂಗದಲ್ಲಿದ್ದೆ. ಆದರೆ ಅದೇ ಸಮಯದಲ್ಲಿ ನನ್ನ ಬುದ್ಧಿ ಕೆಟ್ಟಿತ್ತು. ಅತಿ ಚಿಕ್ಕ ವಯಸ್ಸಿನಲ್ಲೇ ಭಾರಿ ಹಣ, ಯಶಸ್ಸು ಮತ್ತು ಮಿತಿಮೀರಿದ ಜನಪ್ರಿಯತೆ ಸಿಕ್ಕಿದ್ದರಿಂದ ನನ್ನ ನಡುವಳಿಕೆಯೇ ಬದಲಾಗಿಹೋಗಿತ್ತು. ನಾನು ಎಲ್ಲರನ್ನೂ ಗೌರವವಿಲ್ಲದೆ ನಡೆಸಿಕೊಳ್ಳುತ್ತಿದ್ದೆ. ಎಲ್ಲವನ್ನೂ ನಾನೇ ಮಾಡಿದ್ದು ಎಂಬ ಅಹಂಕಾರ ತಲೆಗೇರಿ, ಕೊನೆಗೆ ನನ್ನನ್ನು ನಾನೇ ‘ದೇವರು’ ಎಂದು ಕರೆದುಕೊಳ್ಳಲು ಶುರುಮಾಡಿದ್ದೆ. ಒಳಗಿನಿಂದ ನಾನು ತುಂಬಾ ರಾಕ್ಷಸೀ ಪ್ರವೃತ್ತಿಯ ಮನಸ್ಥಿತಿಗೆ ತಲುಪಿದ್ದೆ. ನನ್ನ ಆ ರೂಪ ನನಗೇ ಇಷ್ಟವಾಗುತ್ತಿರಲಿಲ್ಲ’ ಎಂದು ಹನಿ ಸಿಂಗ್ ತಮ್ಮ ಕರಾಳ ದಿನಗಳನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ಯಶಸ್ಸಿನ ದಿನಗಳಲ್ಲಿ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರಂತಹ ದಿಗ್ಗಜರ ಜೊತೆ ಕೆಲಸ ಮಾಡುವ ಅವಕಾಶ ಹನಿ ಸಿಂಗ್ ಅವರಿಗೆ ಸಿಕ್ಕಿತ್ತು. ‘ಅವರೆಲ್ಲರೂ ಅಷ್ಟೊಂದು ಎತ್ತರಕ್ಕೆ ಬೆಳೆದಿದ್ದರೂ ತುಂಬಾ ಸರಳವಾಗಿದ್ದಾರೆ. ನಾನು ಹೋಗುತ್ತಿದ್ದ ತಪ್ಪು ಹಾದಿ ಮತ್ತು ನನ್ನ ಕೆಟ್ಟ ಲೈಫ್‌ಸ್ಟೈಲ್ ಅನ್ನು ಅವರು ಗಮನಿಸುತ್ತಿದ್ದರು. ಮುಖ್ಯವಾಗಿ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ನನ್ನನ್ನು ಕರೆದು, ನೀನು ಮಾಡುತ್ತಿರುವುದು ತಪ್ಪು, ಇದರಿಂದ ದೂರ ಇರು ಎಂದು ಪದೇ ಪದೇ ಎಚ್ಚರಿಸುತ್ತಿದ್ದರು. ಅದರಲ್ಲೂ ಶಾರುಖ್ ಖಾನ್ ಹಲವು ಬಾರಿ ನನ್ನ ಬಳಿ, ನೀನು ಹೋಗುತ್ತಿರುವ ಈ ಹಾದಿ ನಿನ್ನನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ, ನಿನ್ನನ್ನು ಮುಗಿಸಿ, ಸರ್ವನಾಶ ಮಾಡುತ್ತದೆ ಎಂದು ನೇರವಾಗಿಯೇ ಹೇಳಿದ್ದರು’ ಎಂದು ಹನಿ ಸಿಂಗ್ ಬಹಿರಂಗಪಡಿಸಿದ್ದಾರೆ.

ಅಂದು ಶಾರುಖ್ ಖಾನ್ ಹೇಳಿದ ಮಾತುಗಳು ಮುಂದೆ ಹನಿ ಸಿಂಗ್ ಜೀವನದಲ್ಲಿ ಅಕ್ಷರಶಃ ನಿಜವಾದವು. ತಲೆಗೇರಿದ ಅಹಂಕಾರ ಮತ್ತು ಕೆಟ್ಟ ಅಭ್ಯಾಸಗಳಿಂದಾಗಿ ಹನಿ ಸಿಂಗ್ ಮುಂದೆ ಮಾನಸಿಕ ಕಾಯಿಲೆಗೆ ಒಳಗಾದರು. ಪರಿಣಾಮವಾಗಿ, ಸಿನಿಮಾ ಜಗತ್ತಿನ ನಂಬರ್ ಒನ್ ಸ್ಥಾನದಲ್ಲಿದ್ದಾಗಲೇ ಅವರು ಎಲ್ಲವನ್ನೂ ಕಳೆದುಕೊಂಡು ಚಿತ್ರರಂಗದಿಂದ ಹಲವು ವರ್ಷಗಳ ಕಾಲ ಸಂಪೂರ್ಣವಾಗಿ ಹೊರಗುಳಿಯಬೇಕಾಯಿತು.

ಇದನ್ನೂ ಓದಿ: ಶಾರುಖ್ ಖಾನ್, ಅಕ್ಷಯ್ ಕುಮಾರ್ ನನಗೆ ಎಚ್ಚರಿಕೆ ನೀಡಿದ್ದರು: ಹನಿ ಸಿಂಗ್

ತಮ್ಮ ತಪ್ಪಿನ ಅರಿವಾಗಿ, ಸುದೀರ್ಘ ವರ್ಷಗಳ ಚಿಕಿತ್ಸೆ ಮತ್ತು ಹೋರಾಟದ ನಂತರ ಹನಿ ಸಿಂಗ್ ಈಗ ಮಾನಸಿಕ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಸದ್ಯ ಸಂಗೀತ ಲೋಕಕ್ಕೆ ಭರ್ಜರಿಯಾಗಿ ಕಂಬ್ಯಾಕ್ ಮಾಡಿರುವ ಅವರು ಲೈವ್ ಶೋಗಳನ್ನು ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಹಾಲಿವುಡ್ ಖ್ಯಾತ ನಟಿಗೆ ಪ್ರಭಾಸ್ ಸಿನಿಮಾ ಬಲು ಇಷ್ಟವಂತೆ

ಭಾರತೀಯ ನಟ-ನಟಿಯರು ಹಾಲಿವುಡ್ (Hollywood)​ ಸಿನಿಮಾಗಳಲ್ಲಿ ನಟಿಸಲು, ಹಾಲಿವುಡ್ ಸ್ಟಾರ್​​ಗಳನ್ನು ಭೇಟಿ ಆಗಲು ಉತ್ಸುಕರಾಗಿರುತ್ತಿದ್ದ ಸಮಯ ಇತ್ತು. ಆದರೆ ಈಗ ಸಾಕಷ್ಟು ಬದಲಾಗಿದೆ. ಹಾಲಿವುಡ್​ ಸ್ಟಾರ್ ನಟ-ನಟಿಯರು ಭಾರತೀಯ ಸಿನಿಮಾಗಳತ್ತೆ ಮೆಚ್ಚುಗೆ ಮತ್ತು ಗೌರವದಿಂದ ನೋಡುತ್ತಿದ್ದಾರೆ. ಹಲವು ಹಾಲಿವುಡ್​​ ಸ್ಟಾರ್ ನಟ-ನಟಿಯರು ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಖ್ಯಾತ ಹಾಲಿವುಡ್ ನಟಿಯೊಬ್ಬರು ತಮಗೆ ಪ್ರಭಾಸ್ ಹಾಗೂ ಆಮಿರ್ ಖಾನ್ ಎಂದರೆ ಇಷ್ಟ ಅವರು ನಟಿಸಿರುವ ಸಿನಿಮಾಗಳನ್ನು ತಾವು ಪದೇ ಪದೇ ನೋಡುವುದಾಗಿ ಹೇಳಿಕೊಂಡಿದ್ದಾರೆ.

ಹಾಲಿವುಡ್​​ನ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿರುವ ‘ವೆಡ್​​ನೆಸ್​ ಡೇ’ ಭಾರತದಲ್ಲಿಯೂ ಬಲು ಜನಪ್ರಿಯ. ಈ ವೆಬ್ ಸರಣಿಯ ಮುಖ್ಯ ಪೋಷಕ ಪಾತ್ರದಲ್ಲಿ ನಟಿಸಿರುವ ನಟಿ ಎಮ್ಮಾ ಮೈಯರ್ಸ್​​ ಇದೀಗ ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡಿದ್ದು, ತಮಗೆ ಭಾರತೀಯ ಸಿನಿಮಾಗಳೆಂದರೆ ಬಲು ಇಷ್ಟ ಎಂದಿದ್ದಾರೆ. ಅದರಲ್ಲೂ ತಮಗೆ ಪ್ರಭಾಸ್ ನಟಿಸಿರುವ ‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾಗಳು ಬಹಳ ಇಷ್ಟ, ನನ್ನ ಗೆಳೆಯರಿಗೆ ಅದನ್ನು ನೋಡುವಂತೆ ರೆಕೆಮೆಂಡ್ ಮಾಡುತ್ತಿರುತ್ತೇನೆ’ ಎಂದಿದ್ದಾರೆ.

ತಮ್ಮ ಹೊಸ ಸಿನಿಮಾ ‘ಎ ಮೈನ್‌ಕ್ರಾಫ್ಟ್ ಮೂವಿ’ ಪ್ರಚಾರದ ಸಂದರ್ಭದಲ್ಲಿ ಮಾತನಾಡಿರುವ ಎಮ್ಮಾ, ಅಮೀರ್ ಖಾನ್ ನಟನೆಯ ‘3 ಇಡಿಯಟ್ಸ್’ ಮತ್ತು ಎಸ್‌ಎಸ್‌ ರಾಜಮೌಳಿ ನಿರ್ದೇಶನದ, ಪ್ರಭಾಸ್ ನಟನೆಯ ‘ಬಾಹುಬಲಿ’ ಚಿತ್ರಗಳು ತಮ್ಮ ಆಲ್-ಟೈಮ್ ಫೇವರಿಟ್ ಎಂದು ಅವರು ತಿಳಿಸಿದ್ದಾರೆ. ‘ನಾನು ಬಾಲಿವುಡ್ ಸಿನಿಮಾಗಳ ದೊಡ್ಡ ಅಭಿಮಾನಿ. ನಾನು ಮೊದಲ ಬಾರಿಗೆ ನೋಡಿದ ಭಾರತೀಯ ಸಿನಿಮಾ ‘3 ಇಡಿಯಟ್ಸ್’. ಆ ಚಿತ್ರ ನನಗೆ ಎಷ್ಟು ಇಷ್ಟವಾಯಿತೆಂದರೆ, ಅಲ್ಲಿಂದ ನಾನು ಭಾರತೀಯ ಚಿತ್ರಗಳನ್ನು ಹುಡುಕಿ ನೋಡಲು ಆರಂಭಿಸಿದೆ. ಅದರ ಕಥೆ, ಭಾವನೆಗಳು ಮತ್ತು ಹಾಡುಗಳು ನನ್ನನ್ನು ಸಂಪೂರ್ಣವಾಗಿ ಸೆಳೆದವು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹಾಲಿವುಡ್​​ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಈ ಮಲಯಾಳಿಯ ಬಗ್ಗೆ ನಿಮಗೆ ಗೊತ್ತೆ?

‘ನಾನು ‘ಬಾಹುಬಲಿ’ ಚಿತ್ರವನ್ನೂ ನೋಡಿದ್ದೇನೆ ಮತ್ತು ಅದು ನಿಜಕ್ಕೂ ಅದ್ಭುತವಾಗಿತ್ತು. ಅದರ ಮೇಕಿಂಗ್, ಆಕ್ಷನ್ ದೃಶ್ಯಗಳು ಮತ್ತು ಕಲ್ಪನೆ ಬೆರಗುಗೊಳಿಸುವಂತಿತ್ತು. ಪ್ರಭಾಸ್ ಅವರ ನಟನೆ ನನಗೆ ತುಂಬಾ ಇಷ್ಟವಾಯಿತು’ ಎಂದು ಎಮ್ಮಾ ಮೈಯರ್ಸ್ ಭಾರತೀಯ ಚಿತ್ರರಂಗದ ಮೇಲಿರುವ ತಮ್ಮ ಕ್ರೇಜ್ ಅನ್ನು ಬಿಚ್ಚಿಟ್ಟಿದ್ದಾರೆ.

ಸದ್ಯಕ್ಕೆ ಎಮ್ಮಾ ಮೈಯರ್ಸ್ ಜನಪ್ರಿಯ ವಿಡಿಯೋ ಗೇಮ್ ಆಧಾರಿತ ಲೈವ್-ಆಕ್ಷನ್ ಚಿತ್ರ ‘ಎ ಮೈನ್‌ಕ್ರಾಫ್ಟ್ ಮೂವಿ’ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದರಲ್ಲಿ ಅವರು ಜ್ಯಾಕ್ ಬ್ಲಾಕ್ ಮತ್ತು ಜೇಸನ್ ಮೊಮೊವಾ ಅವರಂತಹ ಪ್ರಮುಖ ಹಾಲಿವುಡ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ಜಗತ್ತಿನಾದ್ಯಂತ ಕೋಟ್ಯಂತರ ವೀಕ್ಷಕರು ಕಾತರದಿಂದ ಕಾಯುತ್ತಿರುವ ‘ವೆಡ್ನೆಸ್‌ಡೇ ಸೀಸನ್ 3’ ರಲ್ಲೂ ಅವರು ಮರಳಿ ಎನಿಡ್ ಸಿಂಕ್ಲೇರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಚಿವರೊಂದಿಗೆ ಉಪಹಾರ ಸಭೆಯಲ್ಲಿ ಸಿಎಂ ಭಾವುಕ: ಕಣ್ಣೀರು ಹಾಕಿದ ಸಿದ್ದರಾಮಯ್ಯ

ಬೆಂಗಳೂರು, ಮೇ 28: ಸಚಿವರೊಂದಿಗಿನ ಉಪಹಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕಣ್ಣೀರಿಟ್ಟಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮತ್ತು ಮುಂದಿನ ಎರಡು ವರ್ಷಗಳ ಕಾಲ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪ್ರಕಟಿಸುವ ವೇಳೆ ಸಿದ್ದರಾಮಯ್ಯ ಭಾವುಕರಾದ ಪ್ರಸಂಗ ನಡೆದಿದೆ. ಈ ಸಂದರ್ಭ ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲಿ ನೀಡಿದ ಜನಪರ ಯೋಜನೆಗಳು ಮತ್ತು ಉತ್ತಮ ಕಾರ್ಯಗಳನ್ನು ಸ್ಮರಿಸಿದ್ದು, ಮುಂಬರುವ ದಿನಗಳಲ್ಲಿ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಂಪೂರ್ಣ ಸಹಕಾರ ನೀಡಿ. ಜನಪರ ಆಡಳಿತವನ್ನು ಮುಂದುವರಿಸಿ ಎಂದು ತಮ್ಮ ಸಚಿವ ಸಂಪುಟದ ಸದಸ್ಯರಿಗೆ ಕರೆ ನೀಡಿದ್ದಾರೆ. ಅಲ್ಲದೆ, ಬಿಜೆಪಿಯ ರಾಜಕಾರಣದ ಬಗ್ಗೆ ಎಚ್ಚರಿಕೆ ವಹಿಸುವಂತೆಯೂ ಸೂಚಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Shakuna Shastra: ಮನೆಯಿಂದ ಹೊರಡುವಾಗ ಶವಯಾತ್ರೆ ಕಂಡರೆ ಹೆದರಬೇಡಿ;ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು ಈ ಶುಭ ಸಂಕೇತ!

ರಸ್ತೆಯಲ್ಲಿ ಶವಯಾತ್ರೆ Image Credit source: Pinterest

ಹುಟ್ಟಿದ ಪ್ರತಿಯೊಬ್ಬ ಜೀವಿಯೂ ಒಂದಲ್ಲ ಒಂದು ದಿನ ಸಾಯಲೇಬೇಕು. ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದಂತೆ 16 ಸಂಸ್ಕಾರಗಳನ್ನು ಹೇಳಲಾಗಿದ್ದು, ಅದರಲ್ಲಿ ಕೊನೆಯದೇ ‘ಅಂತ್ಯ ಸಂಸ್ಕಾರ‘ (ಅಂತಿಮ ಯಾತ್ರೆ). ಸಾಮಾನ್ಯವಾಗಿ ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ಹೋದಾಗ ಅಥವಾ ಪ್ರಯಾಣ ಮಾಡುವಾಗ ರಸ್ತೆಯಲ್ಲಿ ಯಾರದ್ದಾದರೂ ಶವಯಾತ್ರೆ (ಅಂತಿಮಯಾತ್ರೆ) ಸಾಗುತ್ತಿರುವುದನ್ನು ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ ಅನೇಕರ ಮನಸ್ಸಿನಲ್ಲಿ ಒಂದು ರೀತಿಯ ಭಯ ಅಥವಾ ಆತಂಕ ಮೂಡುತ್ತದೆ. ಆದರೆ, ಶಕುನ ಶಾಸ್ತ್ರ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ರಸ್ತೆಯಲ್ಲಿ ಶವಯಾತ್ರೆ ಕಾಣಿಸುವುದು ಅಶುಭವಲ್ಲ, ಬದಲಿಗೆ ಅತ್ಯಂತ ಶುಭ ಸಂಕೇತವಾಗಿದೆ.

ರಸ್ತೆಯಲ್ಲಿ ಶವಯಾತ್ರೆ ಕಂಡರೆ ಯಾವ ರೀತಿಯ ಶುಭ ಫಲಗಳು ಸಿಗುತ್ತವೆ ಮತ್ತು ಆ ಸಮಯದಲ್ಲಿ ನಾವು ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ:

ಅರೆಕ್ಷಣ ನಿಂತು ‘ರಾಮ ನಾಮ’ ಜಪಿಸಿ:

ಧಾರ್ಮಿಕ ನಂಬಿಕೆಗಳ ಪ್ರಕಾರ, ಮರಣದ ನಂತರ ಆತ್ಮವು ಪರಮಾತ್ಮನ ಪಾದಗಳನ್ನು ಸೇರುತ್ತದೆ. ಆದ್ದರಿಂದ ರಸ್ತೆಯಲ್ಲಿ ಶವಯಾತ್ರೆ ಕಾಣಿಸಿಕೊಂಡಾಗ, ಅಲ್ಲಿಯೇ ಎರಡು ನಿಮಿಷಗಳ ಕಾಲ ಶಾಂತವಾಗಿ ನಿಂತು, ಕೈಮುಗಿದು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಬೇಕು. ಮನಸ್ಸಿನಲ್ಲಿಯೇ ‘ರಾಮ ನಾಮ’ ಅಥವಾ ಭಗವಂತನ ನಾಮಸ್ಮರಣೆ ಮಾಡಬೇಕು. ಹೀಗೆ ಮಾಡುವುದರಿಂದ ಮೃತ ಆತ್ಮಕ್ಕೆ ಸದ್ಗತಿ ಸಿಗುವುದಲ್ಲದೆ, ಪ್ರಾರ್ಥಿಸಿದ ವ್ಯಕ್ತಿಗೂ ಅಪಾರ ಪುಣ್ಯ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ನಿಮ್ಮ ಮನದ ಆಸೆಗಳು ಈಡೇರುತ್ತವೆ:

ಜ್ಯೋತಿಷ್ಯ ಮತ್ತು ಶಕುನ ಶಾಸ್ತ್ರದ ಪ್ರಕಾರ, ಮನೆಯಿಂದ ಹೊರಡುವಾಗ ಶವಯಾತ್ರೆ ಎದುರಾದರೆ, ನೀವು ಹಮ್ಮಿಕೊಂಡಿರುವ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗುತ್ತವೆ. ಮೃತ ವ್ಯಕ್ತಿಯು ತನ್ನೊಂದಿಗೆ ನಿಮ್ಮ ಜೀವನದ ಎಲ್ಲಾ ಕಷ್ಟ, ನಷ್ಟ ಮತ್ತು ನಕಾರಾತ್ಮಕ ಶಕ್ತಿಗಳನ್ನು ತೆಗೆದುಕೊಂಡು ಹೋಗುತ್ತಾನೆ ಎಂಬ ನಂಬಿಕೆಯಿದೆ. ಆ ಸಮಯದಲ್ಲಿ ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳು ಶೀಘ್ರದಲ್ಲೇ ನೆರವೇರುತ್ತವೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಮುತ್ತೈದೆಯ (ಸೌಭಾಗ್ಯವತಿ) ಶವಯಾತ್ರೆ ಕಂಡರೆ ಮಹಾ ಲಕ್ಷ್ಮಿಯ ಕೃಪೆ:

ಒಂದು ವೇಳೆ ರಸ್ತೆಯಲ್ಲಿ ಸಾಗುತ್ತಿರುವಾಗ ಯಾವುದೇ ಸುಮಂಗಲಿ ಅಥವಾ ಸೌಭಾಗ್ಯವತಿ ಸ್ತ್ರೀಯ ಅಂತಿಮ ಯಾತ್ರೆ ಕಂಡುಬಂದರೆ, ಅದನ್ನು ಸಾಕ್ಷಾತ್ ಮಹಾಲಕ್ಷ್ಮಿಯ ಆಗಮನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ದೃಶ್ಯ ಕಂಡಾಗ ಮಹಿಳೆಯರು ತಮ್ಮ ಅಖಂಡ ಸೌಭಾಗ್ಯಕ್ಕಾಗಿ ಮತ್ತು ಉತ್ತಮ ಭವಿಷ್ಯಕ್ಕಾಗಿ ಆ ದಿವ್ಯ ಆತ್ಮಕ್ಕೆ ಮನಸ್ಸಿನಲ್ಲಿಯೇ ನಮಸ್ಕರಿಸಬೇಕು. ಸಾಧ್ಯವಾದರೆ, ಅಂತಹ ಸಂದರ್ಭದ ನೆನಪಿಗಾಗಿ ದೇವಸ್ಥಾನಕ್ಕೆ ಸಿಂಧೂರ ಅಥವಾ ಕೆಂಪು ವಸ್ತ್ರವನ್ನು ದಾನ ಮಾಡುವುದು ಅತ್ಯಂತ ಶ್ರೇಯಸ್ಕರ.

ಶವಯಾತ್ರೆ ಕಂಡಾಗ ಪಾಲಿಸಬೇಕಾದ ನಿಯಮಗಳು:

ಶವಯಾತ್ರೆ ಸಾಗುವಾಗ ಜೋರಾಗಿ ಮಾತನಾಡುವುದು, ನಗುವುದು ಅಥವಾ ಅಹಂಕಾರದ ಮಾತುಗಳನ್ನು ಆಡಬಾರದು.
ನೀವು ವಾಹನದಲ್ಲಿದ್ದರೆ, ಅಂತಿಮ ಯಾತ್ರೆಗೆ ದಾರಿ ಮಾಡಿಕೊಟ್ಟು ಗೌರವ ಸೂಚಿಸುವುದು ಧರ್ಮದ ಲಕ್ಷಣವಾಗಿದೆ.

ಆದ್ದರಿಂದ, ಇನ್ಮುಂದೆ ರಸ್ತೆಯಲ್ಲಿ ಶವಯಾತ್ರೆ ಕಂಡರೆ ಭಯ ಪಡಬೇಡಿ. ಅದನ್ನು ಪ್ರಕೃತಿಯ ನಿಯಮವೆಂದು ಸ್ವೀಕರಿಸಿ, ಮೃತ ಆತ್ಮಕ್ಕೆ ಗೌರವ ಸಲ್ಲಿಸಿ ನಿಮ್ಮ ದಿನವನ್ನು ಧನಾತ್ಮಕವಾಗಿ ಆರಂಭಿಸಿ.

(ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಶಕುನ ಶಾಸ್ತ್ರ ಮತ್ತು ಹಿಂದೂ ಧರ್ಮದ ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ.)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link