Category Archives: Blog

Your blog category

ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ – Kannada News | China’s tech Marvel: Chongqing East High Speed Rail Station, a Global Engineering Feat

ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ ವಿಡಿಯೋದ ಸ್ಕ್ರೀನ್​ಶಾಟ್Image Credit source: X user @Ivan_8848

ಬೀಜಿಂಗ್, ಮೇ 25: ಚೀನಾ ದೇಶವು ಮೂಲಸೌಕರ್ಯ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಜಗತ್ತೇ ಮೂಗಿನ ಮೇಲೆ ಬೆರಳಿಡುವಂತಹ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ನೈಋತ್ಯ ಚೀನಾದ ಚಾಂಗ್‌ಕಿಂಗ್ (Chongqing) ನಗರದಲ್ಲಿ ವಿಶ್ವದ ಅತ್ಯಂತ ದೊಡ್ಡ ಹೈ-ಸ್ಪೀಡ್ ರೈಲ್ವೆ ನಿಲ್ದಾಣವಾದ ‘ಚಾಂಗ್‌ಕಿಂಗ್ ಈಸ್ಟ್ ರೈಲ್ವೆ ಸ್ಟೇಷನ್’ (Chongqing East Railway Station ನಿರ್ಮಾಣ ಕಾರ್ಯವನ್ನು ಕೇವಲ 38 ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗಿದೆ. ಭೌಗೋಳಿಕವಾಗಿ ಅತ್ಯಂತ ಕಠಿಣವಾಗಿದ್ದ ಪರ್ವತ ಶ್ರೇಣಿಯ ಮೇಲೆ ರೋಬೋಟ್‌ಗಳ ಸೈನ್ಯ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಈ ಬೃಹತ್ ನಿಲ್ದಾಣವನ್ನು ಕಟ್ಟಿರುವುದು ಜಾಗತಿಕ ಇಂಜಿನಿಯರ್‌ಗಳನ್ನು ಬೆರಗುಗೊಳಿಸಿದೆ.

ಪರ್ವತವನ್ನೇ ಸವರಿ ಸಮತಟ್ಟು ಮಾಡಿದ ಇಂಜಿನಿಯರಿಂಗ್ ಅದ್ಭುತ

ಸಾಮಾನ್ಯವಾಗಿ ಇಂತಹ ಬೃಹತ್ ನಿಲ್ದಾಣಗಳನ್ನು ಬಯಲು ಸೀಮೆ ಅಥವಾ ಸಮತಟ್ಟಾದ ಭೂಮಿಯ ಮೇಲೆ ನಿರ್ಮಿಸಲಾಗುತ್ತದೆ. ಆದರೆ, ಚಾಂಗ್‌ಕಿಂಗ್‌ನ ಕಡಿದಾದ ಬೆಟ್ಟಗಳು ಮತ್ತು ಕಣಿವೆಗಳ ನಡುವೆ ಈ ನಿಲ್ದಾಣವನ್ನು ನಿರ್ಮಿಸಲಾಗಿದೆ. ಇಂಜಿನಿಯರ್‌ಗಳು ಮೊದಲು ಇಡೀ ಪರ್ವತ ಪ್ರದೇಶವನ್ನು 3D ಮ್ಯಾಪಿಂಗ್ ತಂತ್ರಜ್ಞಾನದ ಮೂಲಕ ಪರಿಶೀಲಿಸಿ, ನಿಯಂತ್ರಿತ ಸ್ಫೋಟಗಳ (Controlled blasting) ಮೂಲಕ ಬಂಡೆಗಳನ್ನು ಸವರಿ, ಬೆಟ್ಟವನ್ನು ಸಮತಟ್ಟು ಮಾಡಿ ಈ ಬೃಹತ್ ಯೋಜನೆಗೆ ಅಡಿಪಾಯ ಹಾಕಿದರು.

ಈ ಯೋಜನೆಯು ಇಷ್ಟು ವೇಗವಾಗಿ ಮುಗಿಯಲು ಮಾನವ ಶ್ರಮದ ಜೊತೆಗೆ ಚೀನಾ ಬಳಸಿದ ಅತ್ಯಾಧುನಿಕ ತಂತ್ರಜ್ಞಾನವೂ ಕಾರಣ ಎಂದು ಹೇಳಿಕೊಳ್ಳಲಾಗಿದೆ. ಲೇಸರ್ ಗೈಡೆಡ್ ಕಾಂಕ್ರೀಟ್ ರೋಬೋಟ್​ಗಳು, ಗ್ಲಾಸ್ ರೋಬೊಟ್​​ಗಳು, ವೆಲ್ಡಿಂಗ್ ರೋಬೋಟ್​ಗಳನ್ನು ಬಳಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಸಾಯಿಬಾಬಾ ಸನ್ನಿಧಿಯಲ್ಲಿ ರಾಕೆಟ್ ಲಾಂಚರ್, ಡ್ರೋನ್ ಫ್ಯಾಕ್ಟರಿಗಳು; ಶಸ್ತ್ರಾಸ್ತ್ರ ರಫ್ತಿನಲ್ಲಿ ಭಾರತ ನಂ. 1 ಆಗಲಿದೆ ಎಂದ ರಾಜನಾಥ್

5G ಮತ್ತು AI ತಂತ್ರಜ್ಞಾನ ಹೊಂದಿದ ಲೇಸರ್ ಗೈಡೆಡ್ ಕಾಂಕ್ರೀಟ್ ರೋಬೋಟ್‌ಗಳು ಕಾಂಕ್ರೀಟ್ ಮೇಲ್ಮೈಯನ್ನು ಅತ್ಯಂತ ನಿಖರವಾಗಿ ಸಮತಟ್ಟು ಮಾಡಿದವು. ಇವು ಮನುಷ್ಯರಿಗಿಂತ 3 ಪಟ್ಟು ವೇಗವಾಗಿ ಕೆಲಸ ಮಾಡಿ ಶೇ. 40 ರಷ್ಟು ಕಾರ್ಮಿಕ ವೆಚ್ಚವನ್ನು ಉಳಿಸಿವೆ.

ಭಾರೀ ತೂಕದ ಗ್ಲಾಸ್ ರೋಬೋಟ್‌ಗಳು ಸುಮಾರು 800 ಕೆಜಿ ತೂಕದ ಬೃಹತ್ ಗ್ಲಾಸ್ ಪ್ಯಾನಲ್‌ಗಳನ್ನು ಎತ್ತಿ ನಿಖರವಾದ ಜಾಗದಲ್ಲಿ ಜೋಡಿಸುವ ಕೆಲಸವನ್ನು ಮಾಡಿದವು. ಇದರಿಂದ ಅಪಘಾತಗಳ ಭಯ ಶೇ. 90 ರಷ್ಟು ಕಡಿಮೆಯಾಯಿತು.

ವೆಲ್ಡಿಂಗ್ ರೋಬೋಟ್‌ಗಳು ಹಾಗೂ ದಿನದ 24 ಗಂಟೆಯೂ ನಿರ್ಮಾಣದ ಪ್ರಗತಿಯನ್ನು ಕಣ್ಣಿಟ್ಟು ನೋಡುವ ಕಾವಲು ರೋಬೋಟ್‌ಗಳನ್ನು ಇಲ್ಲಿ ಬಳಸಲಾಗಿತ್ತು.

ದೈತ್ಯಾಕಾರದ ವಿಸ್ತೀರ್ಣ ಮತ್ತು ಸಾಮರ್ಥ್ಯ

ಸುಮಾರು $7.8 ಬಿಲಿಯನ್ (ಅಂದಾಜು ₹64,000 ಕೋಟಿಗೂ ಅಧಿಕ) ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ನಿಲ್ದಾಣವು ಬರೋಬ್ಬರಿ 12 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. (ಇದು ಸುಮಾರು 100 ಕ್ಕೂ ಹೆಚ್ಚು ಫುಟ್‌ಬಾಲ್ ಮೈದಾನಗಳಿಗೆ ಸಮಾನ).

ಈ ನಿಲ್ದಾಣದಲ್ಲಿ ಒಟ್ಟು 29 ಪ್ಲಾಟ್‌ಫಾರ್ಮ್‌ಗಳು ಮತ್ತು 15 ರೈಲ್ವೆ ಟ್ರ್ಯಾಕ್​ಗಳಿವೆ. ಅತ್ಯಂತ ಜನದಟ್ಟಣೆ ಇರುವ ಸಮಯದಲ್ಲಿ ಗಂಟೆಗೆ ಸುಮಾರು 16,000 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಬೃಹತ್ ನಿಲ್ದಾಣವು ಒಟ್ಟು 8 ಅಂತಸ್ತುಗಳನ್ನು ಒಳಗೊಂಡಿದೆ.

ಈ ಯೋಜನೆಯ ಉತ್ತುಂಗದ ಸಮಯದಲ್ಲಿ ಸುಮಾರು 40,000 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಿಲ್ದಾಣದ ಒಟ್ಟು ನಿರ್ಮಾಣಕ್ಕೆ 20 ಲಕ್ಷ ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಮತ್ತು 3.66 ಲಕ್ಷ ಟನ್ ಉಕ್ಕನ್ನು ಬಳಸಲಾಗಿದೆ.

ಇದನ್ನೂ ಓದಿ: ವಾಯುಸೇನೆಗೆ ಭರ್ಜರಿ ಬಲ; ಫ್ರಾನ್ಸ್​ನಿಂದ ಇನ್ನೂ 114 ರಫೇಲ್ ಜೆಟ್ ಖರೀದಿಗೆ ಸಜ್ಜು; 90 ವಿಮಾನಗಳು ಭಾರತದಲ್ಲೇ ಜೋಡಣೆ

ಇಲ್ಲಿನ ಮತ್ತೊಂದು ರೋಮಾಂಚನಕಾರಿ ಇಂಜಿನಿಯರಿಂಗ್ ಸಾಹಸವೆಂದರೆ ಅದರ ಮೇಲ್ಛಾವಣಿ (Roof). 16,500 ಟನ್ ತೂಕದ ದೈತ್ಯ ಸ್ಟೀಲ್ ರೂಫ್ ಅನ್ನು ಮೊದಲು ನೆಲದ ಮೇಲೆ ಜೋಡಿಸಿ, ನಂತರ ಹೈಡ್ರಾಲಿಕ್ ತಂತ್ರಜ್ಞಾನದ ಮೂಲಕ 57 ಮೀಟರ್ ಎತ್ತರಕ್ಕೆ ಎತ್ತಿ ಬಿಗಿಯಲಾಗಿದೆ. ಇದು ಭೂಕಂಪ ನಿರೋಧಕ ಸಾಮರ್ಥ್ಯವನ್ನು ಹೊಂದಿದೆ.

ಚೀನಾದ ಆರ್ಥಿಕತೆಗೆ ಹೆಬ್ಬಾಗಿಲು

ಈ ‘ಚಾಂಗ್‌ಕಿಂಗ್ ಈಸ್ಟ್ ರೈಲ್ವೆ ಸ್ಟೇಷನ್’ ಕೇವಲ ರೈಲು ನಿಲ್ದಾಣವಾಗಿರದೆ, ಅದರ ಒಳಗಡೆಯೇ ಹೋಟೆಲ್‌ಗಳು, ಶಾಪಿಂಗ್ ಮಾಲ್‌ಗಳು ಮತ್ತು ಕಚೇರಿಗಳನ್ನು ಒಳಗೊಂಡ ಒಂದು ‘ವರ್ಟಿಕಲ್ ಸಿಟಿ’ (ಲಂಬ ನಗರ) ತರಹ ವಿನ್ಯಾಸಗೊಳಿಸಲಾಗಿದೆ. ಇದು ಚೀನಾದ ಬುಲೆಟ್ ರೈಲು ಜಾಲದ ಪ್ರಮುಖ ಕೇಂದ್ರವಾಗಲಿದ್ದು, ಬೀಜಿಂಗ್, ಶಾಂಘೈ, ಗುವಾಂಗ್‌ಝೌ ಸೇರಿದಂತೆ ದೇಶದ 14 ಪ್ರಮುಖ ನಗರಗಳಿಗೆ ಗಂಟೆಗೆ 350 ಕಿಮೀ ವೇಗದ ರೈಲು ಸಂಪರ್ಕವನ್ನು ಕಲ್ಪಿಸಲಿದೆ.

ಕಠಿಣ ಹವಾಮಾನ ಮತ್ತು 40 ಡಿಗ್ರಿ ಸೆಲ್ಸಿಯಸ್ ತಾಪಮಾನದ ನಡುವೆಯೂ, ಚೀನಾ ಸರ್ಕಾರವು ರೋಬೋಟಿಕ್ಸ್ ಮತ್ತು AI ತಂತ್ರಜ್ಞಾನದ ನೆರವಿನಿಂದ ಕೇವಲ 38 ತಿಂಗಳಲ್ಲಿ ಜಗತ್ತಿನ ಅತಿ ದೊಡ್ಡ ರೈಲು ನಿಲ್ದಾಣವನ್ನು ಬೆಟ್ಟದ ಮೇಲೆ ಕಟ್ಟಿ ಮುಗಿಸಿರುವುದು ಆಧುನಿಕ ಇಂಜಿನಿಯರಿಂಗ್ ಇತಿಹಾಸದಲ್ಲೇ ಒಂದು ಅದ್ಭುತ ದಾಖಲೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:56 pm, Mon, 25 May 26

Source link

ಚೀನಾದ ಜನರು ಜಿರಳೆಗಳನ್ನು ತಿನ್ನೋದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ? – Kannada News | Why do Chinese people like to eat cockroaches?

ಪ್ರತಿಯೊಂದು ದೇಶವೂ ತನ್ನದೇ ಆದ ಆಹಾರ ಪದ್ಧತಿಗಳನ್ನು ಪಳಗೊಂಡಿದೆ. ಆದರೆ ಚೀನಾ (China) ತನ್ನ ವಿಚಿತ್ರ ಆಹಾರ ಪದ್ಧತಿಯ ಕಾರಣದಿಂದಲೇ ವಿಶ್ವ ಪ್ರಸಿದ್ಧವಾಗಿದೆ. ಇಲ್ಲಿನ ಜನ ಹಾವಿನ ಸೂಪ್‌, ಬಾವಲಿ ಸೂಪ್, ನಾಯಿ ಮಾಂಸ, ಜೇಡ ಎಲ್ಲವನ್ನೂ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಅದೇ ರೀತಿ ಜಿರಳೆಗಳನ್ನು ಸಹ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಜಿರಳೆಗಳನ್ನು ಕಂಡರೆ ಹೊಡೆದು ಸಾಯಿಸುತ್ತೇವೆ. ಚೀನಾದ ಜನ ಮಾತ್ರ ಇದೇ ಜಿರಳೆಯಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಅಷ್ಟಕ್ಕೂ ಚೀನಿಯರು ಜಿರಳೆಗಳನ್ನು ತಿನ್ನೋದೇಕೆ, ಈ ಕುರಿತ ಆಸಕ್ತಿದಾಯಕ ಮಾಹಿತಿಯಲ್ಲಿ ತಿಳಿಯಿರಿ.

ಚೀನಾದ ಜನ ಜಿರಳೆಗಳನ್ನು ಏಕೆ ತಿನ್ನುತ್ತಾರೆ?

ಚೀನಾದಲ್ಲಿ ಜಿರಳೆ ಇತ್ಯಾದಿ ಕೀಟಗಳನ್ನು ಪ್ರೋಟೀನ್‌, ಪೋಷಕಾಂಶಗಳ ಉತ್ತಮ ಮತ್ತು ಅಗ್ಗದ ಮೂಲವೆಂದು ಪರಿಗಣಿಸಲಾಗಿರುವುದರಿಂದ, ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುತ್ತದೆ ಮತ್ತು ವಿವಿಧ ಭಕ್ಷ್ಯಗಳನ್ನು ತಯಾರಿಸಿ ತಿನ್ನಲಾಗುತ್ತದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಚೀನಾದ ಕ್ಸಿಚಾಂಗ್‌ನಲ್ಲಿರುವ ಒಂದು ಔಷಧ ಕಂಪನಿಯು ಒಂದು ದೊಡ್ಡ ಕಟ್ಟಡದಲ್ಲಿ ವಾರ್ಷಿಕವಾಗಿ ಸುಮಾರು 6 ಬಿಲಿಯನ್ ಜಿರಳೆಗಳನ್ನು ಸಾಕುತ್ತದೆ.  ವಿವಿಧ ಭಕ್ಷ್ಯಗಳು ಮಾತ್ರವಲ್ಲದೆ ಜಿರಳೆಗಳನ್ನು ಪುಡಿಮಾಡಿ ಅವುಗಳ ಸಿರಪ್ ಅನ್ನು ಸಹ ಚೀನಾದ ಜನ ಸೇವನೆ ಮಾಡುತ್ತಾರೆ. ಈ ಜಿರಳೆ ಸಿರಪ್‌ ಅನ್ನು ಸಾಂಪ್ರದಾಯಿಕ ಚೀನೀ ಔಷಧವಾಗಿ ಸೇವಿಸಲಾಗುತ್ತದೆ. ಅಲ್ಲಿ ಇದನ್ನು ಅತಿಸಾರ, ವಾಂತಿ, ಹೊಟ್ಟೆಯ ಹುಣ್ಣು, ಉಸಿರಾಟದ ತೊಂದರೆಗಳು ಮತ್ತು ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ಒಟ್ಟಾರೆಯಾಗಿ ಜಿರಳೆಗಳು ಪ್ರೋಟೀನ್‌, ಕೊಬ್ಬು ಮತ್ತು ಕಬ್ಬಿಣ, ಸತು ಇತ್ಯಾದಿ ಖನಿಜಗಳಿಂದ ಸಮೃದ್ಧವಾಗಿದ್ದು, ಹಂದಿ, ಕೋಳಿ, ಇತ್ಯಾದಿ ಮಾಂಸಗಳಿಗೆ ಹೋಲಿಸಿದರೆ ಇವುಗಳನ್ನು ಬೆಳೆಸುವುದು ಕೂಡ ಅಗ್ಗ ಮತ್ತು ಸುಲಭವಾಗಿದೆ. ಹಾಗಾಗಿ ಜಿರಳೆಗಳನ್ನು ಪ್ರೋಟೀನ್‌, ಪೋಷಕಾಂಶಗಳ ಉತ್ತಮ ಮತ್ತು ಅಗ್ಗದ ಮೂಲವೆಂದು ಪರಿಗಣಿಸಲಾಗಿರುವುದರಿಂದ ಚೀನಾದ ಜನ ಜಿರಳೆಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತದೆ.

ಇದನ್ನೂ ಓದಿ: ಇದು ಹಲಸಿನ ಬೀಜದ ಕಾಫಿ; ತಯಾರಿಸೋದು ಬಲು ಸುಲಭ

ಅಲ್ಲದೆ ಚೀನಾದ ಹಲವು ಪ್ರದೇಶಗಳಲ್ಲಿ ನಾಯಿ ಮತ್ತು ಹಾವಿನ ಮಾಂಸವನ್ನು ಸೇವಿಸಲಾಗುತ್ತದೆ, ಒಂದು ವರದಿಯ ಪ್ರಕಾರ, ಚೀನಾದಲ್ಲಿ ಪ್ರತಿ ವರ್ಷ 10,000 ಟನ್‌ಗಳಿಗಿಂತ ಹೆಚ್ಚು ಹಾವುಗಳನ್ನು ತಿನ್ನಲಾಗುತ್ತಿತ್ತು ಮತ್ತು ಅನೇಕ ಪ್ರದೇಶಗಳಲ್ಲಿ, ನಾಯಿಗಳನ್ನು ಬೇಯಿಸಿ ತಿನ್ನಲಾಗುತ್ತಿತ್ತು. ಆದರೆ 2020 ರಲ್ಲಿ COVID-19 ಮಹಾಮಾರಿ ಏಕಾಏಕಿ ಹರಡಿದ ನಂತರ, ಅನೇಕ ಪ್ರಮುಖ ನಗರಗಳಲ್ಲಿ ನಾಯಿ ಮತ್ತು ಬೆಕ್ಕಿನ ಮಾಂಸ ಸೇವನೆಯನ್ನು ನಿಷೇಧಿಸಲಾಯಿತು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weather Forecast: ಉತ್ತರ ಮತ್ತು ದಕ್ಷಿಣ ಒಳನಾಡಿನ ಜನರೇ ಎಚ್ಚರ!: ಮುಂದಿನ 5 ದಿನ ರಾಜ್ಯದಲ್ಲಿ ವರುಣನ ಆರ್ಭಟ ಜೋರು – Kannada News | IMD Alert: Karnataka Braces for 5 Days of Rain, Storms; Bengaluru Cooler

ಬೆಂಗಳೂರು, ಮೇ.25: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ತೀವ್ರ ವೇಗದ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ. ಮೇ 25 ರಿಂದ ಮೇ 29ರ ವರೆಗಿನ ಪ್ರಸ್ತುತ ಪರಿಸ್ಥಿತಿಯ ಕಂಪ್ಲೀಟ್ ವಿವರ ಇಲ್ಲಿದೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮೇ 25, 26 ಮತ್ತು 29 ರಂದು ಉತ್ತರ ಒಳನಾಡಿನ (NIK) ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗಲಿದೆ. ಆದರೆ, ಮೇ 27 ಮತ್ತು 28 ರಂದು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅತ್ಯಂತ ಭೀಕರ ಪರಿಸ್ಥಿತಿ ಇರಲಿದ್ದು, ಗಂಟೆಗೆ ಭರೋಬ್ಬರಿ 50 ರಿಂದ 60 ಕಿ.ಮೀ ವೇಗದಲ್ಲಿ ಭೀಕರ ಬಿರುಗಾಳಿ (Gusty Wind) ಬೀಸುವ ಸಾಧ್ಯತೆ ಇದೆ. ಸಾರ್ವಜನಿಕರು ಹಳೆಯ ಕಟ್ಟಡ ಹಾಗೂ ಮರಗಳ ಬಳಿ ನಿಲ್ಲದಂತೆ ಸೂಚಿಸಲಾಗಿದೆ.

ಇತ್ತ ದಕ್ಷಿಣ ಒಳನಾಡಿನ (SIK) ಜಿಲ್ಲೆಗಳಲ್ಲಿಯೂ ಸಹ ಮೇ 25 ರಿಂದ ಮೇ 29 ರವರೆಗೆ ಕಠಿಣ ಹವಾಮಾನ ಇರಲಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಇದರೊಂದಿಗೆ ಕರಾವಳಿ ಕರ್ನಾಟಕದ (Coastal Karnataka) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೇ 26 ರಿಂದ ಮೇ 29 ರವರೆಗೆ ಸತತ ನಾಲ್ಕು ದಿನಗಳ ಕಾಲ ಭಾರಿ ಗುಡುಗು ಮತ್ತು ಸಿಡಿಲಿನ ಆರ್ಭಟ ಇರಲಿದೆ ಎಂದು ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶುಕ್ರವಾರದವರೆಗೆ ಗುಡುಗು ಸಹಿತ ಭಾರೀ ಮಳೆ

ಬೆಂಗಳೂರಿನಲ್ಲಿ ಮೇ 29 ರವರೆಗೆ ಗುಡುಗು ಸಹಿತ ಮಳೆ:

ತೀವ್ರ ಉಷ್ಣಾಂಶ ಹಾಗೂ ಸುಡುವ ಬಿಸಿಲಿನಿಂದ ಕಂಗಾಲಾಗಿದ್ದ ರಾಜಧಾನಿ ಬೆಂಗಳೂರಿನ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಅತ್ಯಂತ ತಂಪಾದ ಮುನ್ಸೂಚನೆಯೊಂದನ್ನು ನೀಡಿದೆ. ನಗರದಲ್ಲಿ ಮುಂದಿನ ಇಡೀ ವಾರ ಅಂದರೆ ಮೇ 29 ರವರೆಗೆ ವ್ಯಾಪಕ ಮಳೆಯಾಗುವ (Widespread Rains) ಬಲವಾದ ಸಾಧ್ಯತೆ ಇದ್ದು, ವರುಣನ ಆಗಮನದಿಂದ ತಾಪಮಾನ ಗಣನೀಯವಾಗಿ ಕುಸಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಐಎಂಡಿ ಭಾನುವಾರ ಹೊರಡಿಸಿರುವ ಇತ್ತೀಚಿನ ವರದಿಯ ಪ್ರಕಾರ, ಮೇ ಕೊನೆಯ ವಾರದಾದ್ಯಂತ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹವಾಮಾನ ಕಂಪ್ಲೀಟ್ ಬದಲಾಗಲಿದೆ. ನಗರದಾದ್ಯಂತ ನಿರಂತರವಾಗಿ ದಟ್ಟ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಮಳೆಯ ಮಾರುತಗಳು ಇಡೀ ನಗರದ ವಾತಾವರಣವನ್ನು ಕೂಲ್ ಮಾಡಲಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:39 pm, Mon, 25 May 26

Source link

ಭಟ್ಕಳದ ಮೂರಿನ್ ಕಟ್ಟೆಯ ಇತಿಹಾಸವೇನು? ಹಿಂದೂ-ಮುಸ್ಲಿಮರ ಸಂಘರ್ಷಕ್ಕೆ ಕಾರಣ ಏನು? – Kannada News | Bhatkal’s Moorin Katte Controversy: The History and Reason Behind the Communal Clash

ಕಾರವಾರ, ಮೇ 25: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (Bhatkal) ಐತಿಹಾಸಿಕ ಮೂರಿನ್​ ಕಟ್ಟೆ (Moorinakatte) ಕಿಚ್ಚು ಜೋರಾಗಿದೆ. ಕಟ್ಟೆ ಪುನರ್​ ನಿರ್ಮಾಣಕ್ಕೆ ಅನ್ಯ ಕೋಮಿನ ಸಮುದಾಯ ವಿರೋಧ ವ್ಯಕ್ತಪಡಿಸಿದ್ದು, ಕಟ್ಟೆಯನ್ನ ತೆರವುಗೊಳಿಸಲಾಗಿದೆ. ಇದು ಹಿಂದೂ ಸಂಘಟನೆಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ. ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹಾಗೂ ಭಕ್ತರ ಅಪಾರ ಶ್ರದ್ಧಾಕೇಂದ್ರವಾಗಿರುವ ಮೂರಿನ್ ಕಟ್ಟೆಯ ವಿವಾದ ಸದ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಾಂಶಗಳು

  • ಭಟ್ಕಳದ ಮೂರಿನ್ ಕಟ್ಟೆಗೆ ನೂರಾರು ವರ್ಷಗಳ ಇತಿಹಾಸ
  • ಮೂರಿನ್ ಕಟ್ಟೆಗೆ ಶಿರಸಿ ಮತ್ತು ಸಾಗರದ ಮಾರಿಕಾಂಬೆಯ ಸಂಬಂಧ
  • ಮುಸ್ಲಿಂರ ಆಕ್ರೋಶಕ್ಕೆ ಹಿಂದೂಗಳಿಂದ ಭಾರೀ ವಿರೋಧ

ಮೂರಿನ್ ಕಟ್ಟೆಯ ಇತಿಹಾಸವೇನು?

ಭಟ್ಕಳದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಐತಿಹಾಸಿಕ ಮೂರಿನ್ ಕಟ್ಟೆಗೆ ನೂರಾರು ವರ್ಷಗಳ ಇತಿಹಾಸವಿದೆ. ಭಟ್ಕಳದ ಈ ಮೂರಿನ್ ಕಟ್ಟೆಗೆ ಸುಪ್ರಸಿದ್ಧ ಶಿರಸಿ ಮತ್ತು ಸಾಗರದ ಮಾರಿಕಾಂಬಾ ದೇವಿಯ ಧಾರ್ಮಿಕ ಸಂಬಂಧವಿದೆ. ಸಾಗರದಿಂದ ಶಿರಸಿವರೆಗೆ ಮಾರಿಕಾಂಬಾ ದೇವಿಯ ‘ವಜ್ಜೆ’ (ದೇವಿಯ ನಿತ್ಯೋಪಯೋಗದ ವಸ್ತುಗಳು) ಇಡುವ ಪವಿತ್ರ ಸ್ಥಳಗಳಿದ್ದು, ಆ ಪೈಕಿ ಭಟ್ಕಳದ ಈ ಮೂರಿನ್ ಕಟ್ಟೆ ಕೂಡ ಒಂದಾಗಿದೆ.

ಇದನ್ನೂ ಓದಿ: ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸ ಬೆನ್ನಲ್ಲೇ ಹೈ ಅಲರ್ಟ್​: ಇಂದಿನಿಂದ 3 ದಿನ ಇಡೀ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ!

ದೇವಿಯ ಈ ಪವಿತ್ರ ವಜ್ಜೆಯನ್ನು ಕಾಲಕಾಲಕ್ಕೆ ಒಂದೂರಿಂದ ಇನ್ನೊಂದು ಊರಿಗೆ, ಅಂದರೆ ಸಾಗರದಿಂದ ಶಿರಸಿವರೆಗೆ ಸ್ಥಳಾಂತರಿಸಲಾಗುತ್ತಿರುತ್ತದೆ. ಈ ಕಟ್ಟೆಯ ಮೇಲೆ ದೇವಿಯ ವಜ್ಜೆಯನ್ನಿಟ್ಟು ಭಕ್ತರು ಹರಕೆ ಕೇಳಿಕೊಂಡರೆ, ತಾಯಿ ಮಾರಿಕಾಂಬೆಯು ಅದನ್ನು ಸಿದ್ಧಿ ಮಾಡಿಕೊಡುತ್ತಾಳೆ ಎಂಬ ಅಪಾರ ನಂಬಿಕೆ ಭಕ್ತರಲ್ಲಿದೆ.

ಹಿಂದೂ-ಮುಸ್ಲಿಮರ ಸಂಘರ್ಷಕ್ಕೆ ಕಾರಣ ಏನು?

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಹೆದ್ದಾರಿಗೆ ಅಡ್ಡಿಯಾಗುತ್ತಿದ್ದ ಈ ಕಟ್ಟೆಯನ್ನು ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ಅದರಂತೆ, ಮೂಲ ಮೂರಿನ್ ಕಟ್ಟೆಗೆ ಯಾವುದೇ ಧಕ್ಕೆ ಮಾಡದೆ, ಅದರ ಮೂಲ ಸ್ಥಾನದ ಪಕ್ಕದಲ್ಲೇ ಹೊಸದಾಗಿ ಮೂರಿನ್ ಕಟ್ಟೆ ನಿರ್ಮಿಸಲು ಇತ್ತೀಚೆಗೆ ಫೌಂಡೇಶನ್ ಹಾಕಲಾಗಿತ್ತು. ಆದರೆ, ಈ ಹೊಸ ಫೌಂಡೇಶನ್ ಕಲ್ಲನ್ನು ಕಿತ್ತೆಸೆದಿರುವ ಮುಸ್ಲಿಂ ಸಮುದಾಯದ ಕೆಲವರು, ಇಲ್ಲಿ ಕಟ್ಟೆ ನಿರ್ಮಾಣ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ. ಮುಸ್ಲಿಂ ಸಮುದಾಯದ ಈ ನಡೆಗೆ ಭಟ್ಕಳದ ಹಿಂದೂ ಮುಖಂಡರು ಹಾಗೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಭಟ್ಕಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ ಎಂ. ದೀಪನ್

ಇನ್ನು ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಒಟ್ಟಾರೆಯಾಗಿ, ಹೆದ್ದಾರಿ ಅಭಿವೃದ್ಧಿಯ ನಡುವೆ ಸೃಷ್ಟಿಯಾಗಿರುವ ಈ ಧಾರ್ಮಿಕ ಸಂಘರ್ಷ ಸದ್ಯ ಭಟ್ಕಳದಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿದ್ದರಾಮಯ್ಯ ದೆಹಲಿ ಭೇಟಿ ಹಿಂದೆಯೇ ಸತೀಶ್ ಜಾರಕಿಹೊಳಿ ಸೇರಿ 7 ಮಂದಿ ಸಚಿವರ ಪಟಲಾಂ ರಾಜಧಾನಿಗೆ ದೌಡು! – Kannada News | CM Siddaramaiah Delhi Visit: Satish Jarkiholi and 6 Other Karnataka Ministers Rush to Capital for High Command Meeting

ಬೆಂಗಳೂರು, ಮೇ 25: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹಲವು ಹಿರಿಯ ಸಚಿವರೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಹಾಗೂ ಸಚಿವರು ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ರಾಜ್ಯ ರಾಜಕೀಯದ ಕುರಿತು ಮಹತ್ವದ ಚರ್ಚೆ ನಡೆಸುವ ನಿರೀಕ್ಷೆಯಿದೆ. ಈ ಭೇಟಿಯು ಸಿಎಂ ಮತ್ತು ಡಿಸಿಎಂ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಐಟಿಬಿಟಿ ಪ್ರಿಯಾಂಕ್ ಖರ್ಗೆ ಅವರಂತಹ ಇತರ ಪ್ರಮುಖ ಸಚಿವರು ಕೂಡ ದೆಹಲಿಗೆ ತೆರಳುತ್ತಿರುವುದು ಕುತೂಹಲ ಹೆಚ್ಚಿಸಿದೆ.

ಸಿದ್ದರಾಮಯ್ಯ ಮಾತ್ರವಲ್ಲದೆ ಸಚಿವರಾದ ಹೆಚ್​ಕೆ ಪಾಟೀಲ್, ಹೆಚ್​ಸಿ ಮಹದೇವಪ್ಪ, ಬೈರತಿ ಸುರೇಶ್, ಕೆಜೆ ಜಾರ್ಜ್ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ ಸಹ ದೆಹಲಿಗೆ ತೆರಳುತ್ತಿದ್ದಾರೆ. ರಾಜ್ಯದ ಆರು ತಿಂಗಳಿನಿಂದ ನಡೆಯುತ್ತಿರುವ ಕೆಲ ವಿಷಯಗಳು ಈ ಸಭೆಯ ಪ್ರಮುಖ ಅಜೆಂಡಾ ಆಗುವ ಸಾಧ್ಯತೆಯಿದೆ. ರಾಜ್ಯಸಭೆ ಚುನಾವಣೆ ಹಾಗೂ ಎಂಎಲ್ಸಿಗಳ ಕುರಿತು ಚರ್ಚಿಸಲು ಹೈಕಮಾಂಡ್ ಈ ನಾಯಕರನ್ನು ದೆಹಲಿಗೆ ಕರೆದಿದೆ ಎಂದು ಹೇಳಲಾಗಿದೆ. ಆದರೆ, ಒಟ್ಟಾರೆಯಾಗಿ ಪ್ರಮುಖ ನಾಯಕರ ದೆಹಲಿ ಭೇಟಿ ವೇಳೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೂದಿ ಮುಚ್ಚಿದ ಕೆಂಡದಂತಾಗಿದೆ ಭಟ್ಕಳ, ಮೂರಿನ್ ಕಟ್ಟೆ ಧ್ವಂಸಗೊಳಿಸಿದ್ದಕ್ಕೆ ಸಮರ್ಥಿಸಿಕೊಂಡ ಮುಸ್ಲಿಂ ಮುಖಂಡ – Kannada News | Bhatkal Murin Katte Row: Muslim Leader Talks about Why opposed

ಕಾರವಾರ, (ಮೇ 25): ತಣ್ಣಗಾಗಿದ್ದ ಕರಾವಳಿಯ ಸೂಕ್ಷ್ಮ ಪ್ರದೇಶ ಭಟ್ಕಳದಲ್ಲಿ ಮೂರಿನಕಟ್ಟೆ ವಿವಾದ ಮತ್ತೆ ಕಿಚ್ಚು ಹೊತ್ತಿಸಿದೆ. ಭಟ್ಕಳದ ವೆಂಕಟಾಪುರದ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದ ಮೂರಿನಕಟ್ಟೆಯನ್ನು ಭಾನುವಾರ ರಾತ್ರಿ ಅನ್ಯಕೋಮಿನ ಯುವಕರು ಸೇರಿ ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಭಟ್ಕಳ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಿಷೇಧಾಜ್ಞೆ ಹೊರಡಿಸಲಾಗಿದೆ. ಇನ್ನು ಭಟ್ಕಳದಲ್ಲಿನ ಹಿಂದೂಗಳ ಮೂರಿನ್ ಕಟ್ಟೆ ಧ್ವಂಸಗೊಳಿಸಿರುವುದಕ್ಕೆ ಮುಸ್ಲಿಂ ಮುಖಂಡ ಸಮರ್ಥನೆ ಮಾಡಿಕೊಂಡಿದ್ದಾರೆ.

ಇನ್ನು ಈ ಬಗ್ಗೆ Tv9 ಜೊತೆ ಭಟ್ಕಳ ತಂಜೀಮ್ ಅಧ್ಯಕ್ಷ ಇನಾಯತವುಲ್ಲಾ ಶಾಂಬಾಂದ್ರಿ ಮಾತನಾಡಿದ್ದು, ಮೂರಿನ್ ಕಟ್ಟೆ ಇದ್ದಲ್ಲಿಯೇ ಇದ್ರೆ ನಮಗೆ ಸಮಸ್ಯೆ ಇಲ್ಲ. ಆದ್ರೆ ಹೊಸ ಮೂರಿನ್ ಕಟ್ಟೆ ನಿರ್ಮಾಣಕ್ಕೆ ನಮ್ಮ ವಿರೋಧ ಇದೆ. ಈ ಬಗ್ಗೆ ತಹಶೀಲ್ದಾರ್ ಹಾಗೂ ಪೊಲೀಸರ ಗಮನಕ್ಕೆ ತಂದಿದ್ವಿ. ಹೊಸ ಮೂರಿನ್ ಕಟ್ಟೆ ಮುಸ್ಲಿಂ ಮನೆ ಮುಂದೆ ನಿರ್ಮಾಣ ಮಾಡಲಾಗುತ್ತಿದೆ. ಮುಂದೆ ಮತ್ತೆ ಸಮಸ್ಯೆ ಆಗಬಾರದೆಂದು ನಾವು ವಿರೋಧ ಮಾಡಿದ್ವಿ. ನಮ್ಮ ಹುಡುಗರಿಗೆ ಕಂಟ್ರೋಲ್ ಆಗಲಿಲ್ಲ ನಿನ್ನೆ ಒಡೆದ ಹಾಕಿದ್ದಾರೆ. ಇನ್ಮೂಂದೆಯೂ ಯಾವುದೇ ಕಾರಣಕ್ಕೂ ಅಲ್ಲಿ ನಿರ್ಮಾಣ ಮಾಡಬಾರದು. ಸ್ವಲ್ಪ ಮುಂದೆ ಹಿಂದೂ ಮನೆಗಳಿವೆ ಅಲ್ಲಿ ನಿರ್ಮಾಣ ಮಾಡಲಿ. ಈ ಬಗ್ಗೆ ಈಗಾಗಲೇ ಡಿಸಿ ಹಾಗೂ ಎಸ್ಪಿ ಗಮನಕ್ಕೆ ತಂದಿದ್ದೆವೆ. ಅದೆ ಸ್ಥಳದಲ್ಲಿ ಮತ್ತೆ ನಿರ್ಮಾಣ ಮಾಡುವುದಾದ್ರೆ ನಮ್ಮ ವಿರೋಧ ಇದೆ. ಮುಂದೆ ನಾವು ಕಾನೂನು ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಯಿಬಾಬಾ ಸನ್ನಿಧಿಯಲ್ಲಿ ರಾಕೆಟ್ ಲಾಂಚರ್, ಡ್ರೋನ್ ಫ್ಯಾಕ್ಟರಿಗಳು; ಶಸ್ತ್ರಾಸ್ತ್ರ ರಫ್ತಿನಲ್ಲಿ ಭಾರತ ನಂ. 1 ಆಗಲಿದೆ ಎಂದ ರಾಜನಾಥ್ – Kannada News | Rajnath Singh inaugurates NIBE defence manufacturing complex in Shirdi

ಮುಂಬೈ, ಮೇ 25: ಪುಣೆ ಮೂಲದ ನೈಬ್ ಗ್ರೂಪ್​ನ (NIBE group) ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಮಹಾರಾಷ್ಟ್ರದ ಶಿರಡಿಯಲ್ಲಿ ಸ್ಥಾಪನೆಯಾಗಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಉದ್ಘಾಟನೆ ಮಾಡಿದ್ದಾರೆ. ನೈಬ್ ಘಟಕದಲ್ಲಿ ರಾಕೆಟ್ ಲಾಂಚರ್ ಸಿಸ್ಟಂಗಳು, ಕಾಮಿಕಾಜೆ ಡ್ರೋನ್ ಹಾಗೂ ಇತರ ದೇಶೀಯ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತದೆ. ಉದ್ಘಾಟನೆ ವೇಳೆ ರಾಜನಾಥ್ ಸಿಂಗ್ ಅವರ ಜೊತೆ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರೂ ಉಪಸ್ಥಿತರಿದ್ದರು.

ನೈಬ್ ಸಂಸ್ಥೆ ಬೆಂಗಳೂರು ಸೇರಿದಂತೆ ದೇಶದ ಕೆಲವೆಡೆ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿದೆ. ಭಾರತೀಯ ಸೇನೆಗೆ ಸಾಕಷ್ಟು ಮಿಲಿಟರಿ ಶಸ್ತ್ರಾಸ್ತ್ರಗಳ ಪೂರೈಕೆ ಮಾಡುತ್ತದೆ. ಇತ್ತೀಚೆಗೆ ಅದು ಸೂರ್ಯಾಸ್ತ್ರ ಎನ್ನುವ ರಾಕೆಟ್ ಲಾಂಚರ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದೆ. ಈ ಸೂರ್ಯಾಸ್ತ್ರ ಸಿಸ್ಟಂನಿಂದ 300 ಕಿಮೀ ದೂರದವರೆಗೆ ರಾಕೆಟ್​ಗಳನ್ನು ಹಾರಿಸಲು ಸಾಧ್ಯ. ಒಡಿಶಾದ ಚಂಡೀಪುರ್​ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ (ಐಟಿಆರ್) ರಾಕೆಟ್ ಲಾಂಚರ್ ಸಿಸ್ಟಂ ಅನ್ನು ಪರೀಕ್ಷಿಸಲಾಯಿತು.

ಇದನ್ನೂ ಓದಿ: ವಾಯುಸೇನೆಗೆ ಭರ್ಜರಿ ಬಲ; ಫ್ರಾನ್ಸ್​ನಿಂದ ಇನ್ನೂ 114 ರಫೇಲ್ ಜೆಟ್ ಖರೀದಿಗೆ ಸಜ್ಜು; 90 ವಿಮಾನಗಳು ಭಾರತದಲ್ಲೇ ಜೋಡಣೆ

ಅಹಿಲ್ಯಾ ನಗರ್ ಜಿಲ್ಲೆಯಲ್ಲಿರುವ ಈ ನೈಬ್ ಘಟಕದಲ್ಲಿ ಸಮಗ್ರ ಉತ್ಪಾದನಾ ವ್ಯವಸ್ಥೆಯನ್ನು ನಿರ್ಮಿಲಾಗುತ್ತಿದೆ. ಮದ್ದುಗುಂಡುಗಳು, ಮಿಸೈಲ್ ಸಿಸ್ಟಂಗಳು, ಸುಧಾರಿತ ಡಿಫೆನ್ಸ್ ಟೆಕ್ನಾಲಜಿ, ಕ್ಲೀನ್ ಎನರ್ಜಿ ಇತ್ಯಾದಿಯನ್ನು ಒಂದೇ ಕಡೆ ನೆಲೆಗೊಳಿಸಲಾಗಿದೆ.

ಭಾರತ 25-30 ವರ್ಷದಲ್ಲಿ ಅತಿದೊಡ್ಡ ಮಿಲಿಟರಿ ರಫ್ತುದಾರ ದೇಶವಾಗಲಿದೆ: ರಾಜನಾಥ್

ಭಾರತವನ್ನು ಮುಂದಿನ 25-30 ವರ್ಷದಲ್ಲಿ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತುದಾರ ದೇಶವಾಗಲು ಯಾವ ಶಕ್ತಿಗೂ ತಡೆಯಲು ಆಗದು ಎಂದು ಈ ವೇಳೆ ಡಿಫೆನ್ಸ್ ಮಿನಿಸ್ಟರ್ ರಾಜನಾಥ್ ಸಿಂಗ್ ಹೇಳಿದರು.

ಇದನ್ನೂ ಓದಿ: 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಪೈಲಟ್‌ಗೆ ಹೃದಯಾಘಾತ; ಪ್ರಯಾಣಿಕರ ಕತೆ ಏನಾಯ್ತು?

ಇದೇ ವೇಳೆ ಅವರು ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಹೆಚ್ಚುತ್ತಿರುವ ಕುರಿತು ಮಾತನಾಡಿದರು. ಕೆಲ ವರ್ಷಗಳ ಹಿಂದೆ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ತೊಡಗಿದ್ದ ಖಾಸಗಿ ಕಂಪನಿಗಳ ಸಂಖ್ಯೆ ಬಹಳ ಕಡಿಮೆ ಇತ್ತು. ಈಗ ಶೇ. 25-30ಕ್ಕೆ ಏರಿದೆ. ಮುಂದಿನ ವರ್ಷಗಳಲ್ಲಿ ಸಂಖ್ಯೆ ಶೇ. 50ಕ್ಕೆ ಏರುವ ಗುರಿ ಇದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರು: ಮಳೆಗಾಲದ ಮುಂಜಾಗ್ರತಾ ಕ್ರಮಗಳ ನಿರ್ಲಕ್ಷ್ಯ ಆರೋಪ, ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಶಾಸಕ ವೇದವ್ಯಾಸ್ ಕಾಮತ್ ಕಿಡಿ! – Kannada News | Mangaluru Monsoon Preparedness Row: Vedavyas Kamath Criticises Dinesh Gundu Rao Over Negligence in Flooding Precautions

Mangalore Politicsaಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಶಾಸಕ ವೇದವ್ಯಾಸ್ ಕಾಮತ್ ಕಿಡಿImage Credit source: tv9

ಮಂಗಳೂರು, ಮೇ 25: ಕರಾವಳಿ (Coastal Karnataka) ಭಾಗದಲ್ಲಿ ಮಳೆಗಾಲ ಆರಂಭವಾಯಿತೆಂದರೆ ಸಾಕು, ಇಲ್ಲಿನ ಸಾರ್ವಜನಿಕರಲ್ಲಿ ಆತಂಕದ ನೆರಳು ಆವರಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಮಳೆಗಾಲ ಸೃಷ್ಟಿಸಿದ ಭೀಕರ ಅವಾಂತರಗಳು ಮತ್ತು ಪ್ರಾಣಹಾನಿಯ ಕಹಿ ನೆನಪುಗಳು ಜನರನ್ನು ಇಂದಿಗೂ ಬೆಚ್ಚಿಬೀಳಿಸುತ್ತವೆ. ಆದರೆ, ಈ ಬಾರಿಯ ಮುಂಗಾರು (Monsoon) ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದ್ದರೂ, ಮಂಗಳೂರು ಮಹಾನಗರ ಪಾಲಿಕೆ (MCC) ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಹಾಗೂ ಪಾಲಿಕೆ ಮಳೆಗಾಲದ ಪೂರ್ವಸಿದ್ಧತೆಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮುಂಜಾಗ್ರತಾ ಸಿದ್ಧತೆಯ ವೈಫಲ್ಯದ ವಿಷಯ ಇದೀಗ ಕರಾವಳಿ ರಾಜಕಾರಣದಲ್ಲಿ ಭಾರಿ ಕೆಸರೆರಚಾಟಕ್ಕೂ ಕಾರಣವಾಗಿದೆ.

ಮುಖ್ಯಾಂಶಗಳು

  • ಮಳೆಗಾಲ ಸಮೀಪಿಸುತ್ತಿದ್ದರೂ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿದೆ.
  • ಪ್ರತಿ ವಾರ್ಡ್‌ಗೆ ಗ್ಯಾಂಗ್‌ಮ್ಯಾನ್ ನೇಮಿಸದ ಹಾಗೂ ಸಭೆ ನಡೆಸದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ತೀವ್ರವಾಗಿ ಕಿಡಿಕಾರಿದ್ದಾರೆ.
  • ಶಾಸಕರ ಆರೋಪಗಳನ್ನು ತಳ್ಳಿಹಾಕಿರುವ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಡಳಿತದೊಂದಿಗೆ ಈಗಾಗಲೇ ಸಭೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹೂಳೆತ್ತದ ರಾಜಕಾಲುವೆಗಳು, ಕೃತಕ ನೆರೆಯ ಭೀತಿ

ಪ್ರತಿ ವರ್ಷ ಭಾರಿ ಮಳೆಗೆ ಮಂಗಳೂರು ನಗರದ ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಕೆರೆಯಂತಾಗುವುದು ಸಾಮಾನ್ಯವಾಗಿದೆ. ರಾಜಕಾಲುವೆಗಳಲ್ಲಿ ಹೂಳು ತುಂಬಿರುವುದು ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಈ ಬಾರಿಯೂ ಪಾಲಿಕೆಯು ಕೇವಲ ಹೆಸರಿಗಷ್ಟೇ ಹೂಳೆತ್ತುವ ಕಾಮಗಾರಿ ನಡೆಸಿದ್ದು, ಜೆಸಿಬಿಗಳು ಹೋಗದ ಕಡೆಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ದೂರಿದ್ದಾರೆ.

ಇನ್ನೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಅಪಾಯವಿರುವ ಸ್ಥಳಗಳನ್ನು ಗುರುತಿಸಿರುವ ಜಿಲ್ಲಾಡಳಿತ, ಅಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಸೂಚನೆ ನೀಡಿದೆ.

ಇದನ್ನೂ ಓದಿ: ವೀಕೆಂಡ್, ಬೇಸಿಗೆ ರಜೆ ಎಫೆಕ್ಟ್​​: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತಸಾಗರ

ಅಲ್ಲದೆ ಮಳೆಗಾಲ ಮುಗಿಯುವವರೆಗೆ ಯಾವುದೇ ರಸ್ತೆ ಅಥವಾ ಮಣ್ಣು ಅಗೆಯುವ ಕಾಮಗಾರಿ ನಡೆಸದಂತೆ ಕಠಿಣ ಆದೇಶ ಹೊರಡಿಸಲಾಗಿದೆ. ಆದರೆ, ಕೇವಲ ಕಾಗದದ ಮೇಲಿರುವ ಈ ಆದೇಶಗಳು ತಳಮಟ್ಟದಲ್ಲಿ ಸರಿಯಾಗಿ ಜಾರಿಯಾಗದಿದ್ದರೆ, ಈ ಬಾರಿಯೂ ಕರಾವಳಿಯಲ್ಲಿ ಮನುಷ್ಯನ ಎಡವಟ್ಟುಗಳಿಂದಾಗಿ ಕೃತಕ ಪ್ರವಾಹದ ಅವಾಂತರಗಳು ಸೃಷ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾರ ಭವಿಷ್ಯ: ಸಿಗಬೇಕಿದ್ದ ಕೆಲಸಗಳು ಅನ್ಯರ ಪಾಲಾಗುವ ಆತಂಕ!: ಎಚ್ಚರಿಕೆಯಿಂದ ಇರಬೇಕಾದ ರಾಶಿಗಳು ಯಾವುವು? – Kannada News | Rashi Bhavishya May 24 30, 2026: Your Fortunes and Forecast for All 12 Zodiacs

2026ರ ಮೇ 24ರಿಂದ 30ರವರೆಗೆ ಕೊನೆಯ ವಾರದಲ್ಲಿ ಸಮಯದ ಕೊರತೆಯಿಂದ ಯೋಜನೆ ದಿಕ್ಕು ತಪ್ಪುವುದು, ಸಿಗಬೇಕಿದ್ದ ಕಾರ್ಯಗಳು ಅನ್ಯರ ಪಾಲಾಗುವುದು, ಹಣದ ಹೊಂದಾಣಿಕೆಗೆ ಓಡಾಟ ಇಂತಹ ನಕಾರಾತ್ಮಕ ಅಂಶಗಳು ಅಧಿಕವಾಗಿ ಈ ವಾರ ಇರಲಿದೆ. ಎಲ್ಲ ಕಡೆಯೂ ದೃಷ್ಟಿ ಇಟ್ಟು ಕಾರ್ಯ ಮಾಡಬೇಕು.

ಮೇಷ ರಾಶಿ :

​ಮಂಗಳನ ಶುಭ ಪ್ರಭಾವದಿಂದ ವಾರದ ಆರಂಭದಲ್ಲಿ ಧನಲಾಭವಾಗಲಿದೆ. ವೃತ್ತಿಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದ್ದು, ಹೊಸ ಜವಾಬ್ದಾರಿಗಳು ಸಿಗಲಿವೆ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಭರವಸೆಯಿಂದ ಮುನ್ನಡೆಯಿರಿ.


ವೃಷಭ ರಾಶಿ :

​ಸೂರ್ಯನ ಸ್ಥಿತಿಯಿಂದಾಗಿ ಆಸ್ತಿ ಅಥವಾ ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ದೂರದ ಪ್ರಯಾಣದಿಂದ ಲಾಭವಿದೆ. ವಾರದ ಮಧ್ಯಭಾಗದಲ್ಲಿ ಶುಭ ವಾರ್ತೆ ಕೇಳುವಿರಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ತಾಳ್ಮೆ ಮುಖ್ಯ.


ಮಿಥುನ ರಾಶಿ :

​ತ್ರಿಗ್ರಹ ಕೂಟದಿಂದ ಈ ವಾರ ನಿಮಗೆ ಅತ್ಯಂತ ಅದೃಷ್ಟ ತರಲಿದೆ. ಬಾಕಿ ಉಳಿದಿದ್ದ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಅಪೇಕ್ಷಿತ ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿತಿ ಭದ್ರವಾಗಲಿದೆ.

​ಕರ್ಕಾಟಕ ರಾಶಿ :

​ಚಂದ್ರನ ಸಂಚಾರದಿಂದ ವಾರದ ಆರಂಭದಲ್ಲಿ ಸ್ವಲ್ಪ ಮಾನಸಿಕ ಗೊಂದಲವಿರಬಹುದು. ಆದರೆ ದ್ವಿತೀಯಾರ್ಧದಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಕಠಿಣ ಶ್ರಮಕ್ಕೆ ತಕ್ಕಂತೆ ವೃತ್ತಿಯಲ್ಲಿ ಉತ್ತಮ ಗೌರವ, ಧನಲಾಭ ದೊರೆಯಲಿದೆ.


ಸಿಂಹ ರಾಶಿ :

​ಲಾಭಸ್ಥಾನದ ಪ್ರಭಾವದಿಂದ ಈ ವಾರ ಆದಾಯದ ಮೂಲಗಳು ಹೆಚ್ಚಲಿವೆ. ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ವ್ಯವಹಾರದಲ್ಲಿ ಪ್ರಗತಿಯಾಗಲಿದೆ. ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವ ಯೋಗವಿದೆ.


ಕನ್ಯಾ ರಾಶಿ :

​ಶನಿಯ ಶುಭ ಸ್ಥಿತಿಯಿಂದಾಗಿ ಕೋರ್ಟ್ ಕಚೇರಿ ಕೆಲಸಗಳು ಮತ್ತು ಸ್ಪರ್ಧೆಗಳಲ್ಲಿ ವಿಜಯ ನಿಮ್ಮದಾಗಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಆರೋಗ್ಯದ ಸಣ್ಣಪುಟ್ಟ ಏರುಪೇರುಗಳು ಸರಿಯಾಗಲಿವೆ. ನಿರೀಕ್ಷಿತ ಆರ್ಥಿಕ ಸಹಾಯ ಹಸ್ತ ದೊರೆಯಲಿದೆ.


ತುಲಾ ರಾಶಿ :

​ಇದು ಲಗ್ನ ರಾಶಿಯಾಗಿದ್ದು, ಮನಸ್ಸಿನಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಲೋಚನೆಗಳು ಹೆಚ್ಚಲಿವೆ. ಹೊಸ ಹೂಡಿಕೆಗೆ ವಾರ ಪೂರಕವಾಗಿದೆ. ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಮತ್ತು ಸಂತೋಷ ನೆಲೆಸಲಿದೆ.


ವೃಶ್ಚಿಕ ರಾಶಿ :

​ವಾರದ ಆರಂಭದಲ್ಲಿ ಚಂದ್ರನ ಪ್ರಭಾವದಿಂದ ಖರ್ಚುಗಳು ಹೆಚ್ಚಾಗಬಹುದು, ನಿಧಾನ ನಡೆ ಅಗತ್ಯ. ಆದರೆ ವಾರಾಂತ್ಯದ ವೇಳೆಗೆ ಮಂಗಳನ ಬಲದಿಂದ ಆಸ್ತಿ ಒಡಂಬಡಿಕೆಗಳು ಯಶಸ್ವಿಯಾಗಲಿವೆ. ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಲಿದ್ದು, ಉತ್ಸಾಹ ಮೂಡಲಿದೆ.


ಧನು ರಾಶಿ :

​ಗುರುವಿನ ಕೃಪೆಯಿಂದ ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ಆರ್ಥಿಕ ಮುಗ್ಗಟ್ಟುಗಳು ನಿವಾರಣೆಯಾಗಿ ಧನಹರಿವು ಸುಲಭವಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಸ್ನೇಹಿತರಿಂದ ನಿರೀಕ್ಷಿತ ಸಹಾಯ ಮತ್ತು ಮಾರ್ಗದರ್ಶನ ದೊರೆಯಲಿದೆ.

​ಮಕರ ರಾಶಿ :

​ವೃತ್ತಿ ರಂಗದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಶನಿಯ ಬಲದಿಂದ ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಿರಿ. ಆರೋಗ್ಯ ಉತ್ತಮವಾಗಿರುತ್ತದೆ. ನೂತನ ಗೃಹೋಪಯೋಗಿ ವಸ್ತುಗಳ ಖರೀದಿ ಅಥವಾ ಆಸ್ತಿ ವೃದ್ಧಿಯಾಗುವ ಶುಭ ಯೋಗವಿದೆ.

​ಕುಂಭ ರಾಶಿ :

​ಭಾಗ್ಯೋದಯದ ವಾರವಿದು. ಸುದೀರ್ಘ ಕಾಲದ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಉನ್ನತ ಶಿಕ್ಷಣದ ಪ್ರಯತ್ನಗಳಿಗೆ ವೇಗ ಸಿಗಲಿದೆ. ಆಕಸ್ಮಿಕ ಧನಲಾಭದ ಸಾಧ್ಯತೆ ಇದೆ. ಮಕ್ಕಳ ಕಡೆಯಿಂದ ನೆಮ್ಮದಿ ಮತ್ತು ಹೆಮ್ಮೆಯ ವಾರ್ತೆಗಳನ್ನು ಕೇಳುವಿರಿ.

ಇದನ್ನೂ ಓದಿ: ಕುಂಭ ರಾಶಿಯಲ್ಲಿ ರಾಹುವಿನ ಉಲ್ಟಾ ನಡೆ!: ಈ 3 ರಾಶಿಗಳಿಗೆ 18 ವರ್ಷಗಳ ಕಾಲ ಲಾಟರಿ ಹೊಡೆಯೋದು ಗ್ಯಾರಂಟಿ

​ಮೀನ ರಾಶಿ :

​ಕೆಲಸದ ಒತ್ತಡ ಹೆಚ್ಚಿದ್ದರೂ, ವಾರಾಂತ್ಯದಲ್ಲಿ ನಿಶ್ಚಿಂತೆ ಮೂಡಲಿದೆ. ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ಕಷ್ಟದ ಕೆಲಸಗಳು ನಿವಾರಣೆಯಾಗಲಿವೆ. ವಾಹನ ಚಾಲನೆಯಲ್ಲಿ ಜಾಗ್ರತೆ ಇರಲಿ. ಕುಟುಂಬ ಸದಸ್ಯರ ಸಲಹೆಗಳು ವೃತ್ತಿ ಬೆಳವಣಿಗೆಗೆ ಸಹಕಾರಿಯಾಗಲಿವೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:03 pm, Mon, 25 May 26

Source link

Skin Cancer: ಸ್ಮಾರ್ಟ್ ಟ್ಯಾಟೂ ಮೂಲಕ ಆರಂಭಿಕ ಹಂತದಲ್ಲೇ ಚರ್ಮದ ಕ್ಯಾನ್ಸರ್ ಪತ್ತೆ – Kannada News | Detection of skin cancer at the early stage through a smart tattoo is Possible

ನವದೆಹಲಿ, ಮೇ 25: ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ವೈದ್ಯಕೀಯ ಲೋಕದ ದೊಡ್ಡ ಸವಾಲುಗಳಲ್ಲಿ ಒಂದು. ಅದರಲ್ಲೂ ಚರ್ಮದ ಕ್ಯಾನ್ಸರ್ (Skin Cancer) ಕಣ್ಣಿಗೆ ಕಾಣಿಸುವಷ್ಟರ ಮಟ್ಟಿಗೆ ಬೆಳೆಯುವ ಮುನ್ನವೇ ಅದನ್ನು ಪತ್ತೆಹಚ್ಚಲು ವಿಜ್ಞಾನಿಗಳು ಈಗ ಒಂದು ಅತ್ಯಾಧುನಿಕ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಅದೇ ‘ಸ್ಮಾರ್ಟ್ ಟ್ಯಾಟೂ’ (Smart Tattoo). ಕೆನಡಾದ ಇನ್‌ಸ್ಟಿಟ್ಯೂಟ್ ನ್ಯಾಷನಲ್ ಡೆ ಲಾ ರೆಚೆರ್ಚೆ ಸೈಂಟಿಫಿಕ್ (INRS) ಮತ್ತು ಯೂನಿವರ್ಸಿಟಿ ಡಿ ಮಾಂಟ್ರಿಯಲ್‌ನ ಸಂಶೋಧಕರು ಜಂಟಿಯಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಏನಿದು ‘ಸ್ಮಾರ್ಟ್ ಟ್ಯಾಟೂ’ ತಂತ್ರಜ್ಞಾನ?:

ಇದು ನಾವು ಸಾಮಾನ್ಯವಾಗಿ ಚರ್ಮದ ಮೇಲೆ ಹಾಕಿಸಿಕೊಳ್ಳುವ ಮಾಮೂಲಿ ಟ್ಯಾಟೂ ಅಲ್ಲ. ಇದೊಂದು ತಾತ್ಕಾಲಿಕ ಪ್ಯಾಚ್ (Patch) ಆಗಿದ್ದು, ಚರ್ಮಕ್ಕೆ ಯಾವುದೇ ನೋವಾಗದಂತೆ ಅತ್ಯಂತ ಸೂಕ್ಷ್ಮವಾದ ಮೈಕ್ರೋನೀಡಲ್‌ಗಳನ್ನು ಒಳಗೊಂಡಿರುತ್ತದೆ. ಈ ಮೈಕ್ರೋನೀಡಲ್‌ಗಳ ಮೂಲಕ ಚರ್ಮದ ಅತ್ಯಂತ ಮೇಲ್ಪದರದ ಕೆಳಗೆ ವಿಶೇಷವಾದ ನ್ಯಾನೊಪಾರ್ಟಿಕಲ್‌ಗಳನ್ನು ಇಳಿಸಲಾಗುತ್ತದೆ. ಈ ನ್ಯಾನೊಪಾರ್ಟಿಕಲ್‌ಗಳು ಚರ್ಮದ ಒಳಗೆ ಸೇರಿದ ತಕ್ಷಣ ಒಂದು ಅತ್ಯಾಧುನಿಕ ಡಿಜಿಟಲ್ ಥರ್ಮಾಮೀಟರ್‌ನಂತೆ ಕೆಲಸ ಮಾಡಲು ಆರಂಭಿಸುತ್ತವೆ. ಇದನ್ನೇ ವಿಜ್ಞಾನಿಗಳು ‘ಸ್ಮಾರ್ಟ್ ಟ್ಯಾಟೂ’ ಎಂದು ಕರೆದಿದ್ದಾರೆ.

ಇದನ್ನೂ ಓದಿ: ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ನಿದ್ರೆಯ ಕೊರತೆಯೇ ಕ್ಯಾನ್ಸರ್ ಅಪಾಯ ಹೆಚ್ಚಳಕ್ಕೆ ಕಾರಣ; ತಜ್ಞರಿಂದ ಎಚ್ಚರಿಕೆ

ಇದು ಕ್ಯಾನ್ಸರ್ ಅನ್ನು ಹೇಗೆ ಪತ್ತೆಹಚ್ಚುತ್ತದೆ?:

ಕ್ಯಾನ್ಸರ್ ಕೋಶಗಳ ಮೂಲ ಸ್ವಭಾವವೆಂದರೆ, ಅವು ಸಾಮಾನ್ಯ ಜೀವಕೋಶಗಳಿಗಿಂತ ಹೆಚ್ಚಿನ ಪ್ರಮಾಣದ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಇದರಿಂದಾಗಿ ಆ ಭಾಗದಲ್ಲಿ ಚರ್ಮದ ತಾಪಮಾನವು ಅತ್ಯಂತ ಸೂಕ್ಷ್ಮವಾಗಿ ಹೆಚ್ಚಾಗುತ್ತದೆ.

ಈ ಸ್ಮಾರ್ಟ್ ಟ್ಯಾಟೂ ಇರುವ ಜಾಗಕ್ಕೆ ವಿಶೇಷ ಬೆಳಕನ್ನು ಹಾಯಿಸಿದಾಗ, ಒಳಗಿರುವ ನ್ಯಾನೊಪಾರ್ಟಿಕಲ್‌ಗಳು ಮರಳಿ ದೃಶ್ಯ ಬೆಳಕನ್ನು ಸೂಸುತ್ತವೆ. ಈ ಬೆಳಕಿನ ಅವಧಿಯನ್ನು ಸಂಶೋಧಕರು ವಿಶೇಷ ಹೈ-ಸ್ಪೀಡ್ ಕ್ಯಾಮೆರಾಗಳ ಮೂಲಕ ಸೆರೆಹಿಡಿಯುತ್ತಾರೆ. ಚರ್ಮದ ಯಾವ ಭಾಗದಲ್ಲಿ ಅತಿ ಸೂಕ್ಷ್ಮವಾಗಿ ಉಷ್ಣಾಂಶ ಹೆಚ್ಚಾಗಿದೆಯೋ, ಅಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುತ್ತಿವೆ ಎಂಬುದನ್ನು ಈ ತಂತ್ರಜ್ಞಾನ ನಿಖರವಾಗಿ ತೋರಿಸುತ್ತದೆ.

ಈ ಹೊಸ ತಂತ್ರಜ್ಞಾನದ ಪ್ರಮುಖ ಪ್ರಯೋಜನಗಳೇನು?:

ಪ್ರಸ್ತುತ ಇರುವ ಸ್ಕ್ಯಾನಿಂಗ್ ವಿಧಾನಗಳಲ್ಲಿ ಚರ್ಮದ ಮೇಲಿನ ಗಡ್ಡೆ ಅಥವಾ ಕ್ಯಾನ್ಸರ್ ಕಲೆ ಕನಿಷ್ಠ 5 ಮಿಲಿಮೀಟರ್ ಬೆಳೆದ ನಂತರವಷ್ಟೇ (ಕಣ್ಣಿಗೆ ಕಾಣಿಸುವ ಹಂತದಲ್ಲಿ) ಪತ್ತೆಯಾಗುತ್ತದೆ. ಆದರೆ, ಈ ಸ್ಮಾರ್ಟ್ ಟ್ಯಾಟೂ ತಂತ್ರಜ್ಞಾನವು ಚರ್ಮದ ಮೇಲೆ ಯಾವುದೇ ಕಲೆ ಮೂಡುವ ಮುನ್ನವೇ, ಅಂದರೆ ಕ್ಯಾನ್ಸರ್ ಕೋಶಗಳು ಸೃಷ್ಟಿಯಾದ ಕೇವಲ 4 ದಿನಗಳಲ್ಲೇ ಅದನ್ನು ಪತ್ತೆಹಚ್ಚಬಲ್ಲದು!

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಕಂಡುಬಂದರೆ ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?

ಸೂಜಿ ಚುಚ್ಚುವ ಯಾವುದೇ ನೋವಿಲ್ಲದೆ ಸುಲಭವಾಗಿ ಚರ್ಮದ ಮೇಲೆ ಈ ಟ್ಯಾಟೂ ಹಾಕಬಹುದು. ಸಾಂಪ್ರದಾಯಿಕ ಇನ್ಫ್ರಾರೆಡ್ ಕ್ಯಾಮೆರಾಗಳಿಗಿಂತ ಇದು ಅತ್ಯಂತ ನಿಖರವಾದ ಉಷ್ಣಾಂಶದ ಮ್ಯಾಪಿಂಗ್ ವಿವರಗಳನ್ನು ನೀಡುತ್ತದೆ. ಈಗಾಗಲೇ ಈ ಸಂಶೋಧನೆಯನ್ನು ಯಶಸ್ವಿಯಾಗಿ ಇಲಿಗಳ ಮೇಲೆ ಪ್ರಯೋಗಿಸಲಾಗಿದೆ. ಇಲಿಗಳಲ್ಲಿ ಕಂಡುಬರುವ ಹರಡುವಿಕೆಯು ಮಾನವನ ಚರ್ಮದ ಕ್ಯಾನ್ಸರ್ ತಳಿಗಳಿಗೇ (Melanoma) ಹೋಲುತ್ತಿರುವುದರಿಂದ ಶೀಘ್ರದಲ್ಲೇ ಮಾನವರ ಮೇಲಿನ ಕ್ಲಿನಿಕಲ್ ಪ್ರಯೋಗಗಳು ಆರಂಭವಾಗಲಿವೆ. ಭವಿಷ್ಯದಲ್ಲಿ ಈ ತಂತ್ರಜ್ಞಾನ ಯಶಸ್ವಿಯಾದರೆ, ಕೇವಲ ಚರ್ಮದ ಕ್ಯಾನ್ಸರ್ ಮಾತ್ರವಲ್ಲದೆ ದೇಹದ ಪಿಎಚ್ (pH) ಮಟ್ಟ ಹಾಗೂ ಇತರ ಗಂಭೀರ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆಹಚ್ಚಲು ಇದು ವೈದ್ಯಕೀಯ ಜಗತ್ತಿಗೆ ಹೊಸ ದಾರಿಯಾಗಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link