Category Archives: Blog

Your blog category

Chanakya Niti: ಪುರುಷರೇ…. ನಿಮ್ಮ ಹೆಂಡ್ತಿಯ ಈ ಸಂಗತಿಯನ್ನು ಯಾರ ಬಳಿಯೂ ಹೇಳಬೇಡಿ – Kannada News | Chanakya Niti: Chanakya says that husband should not tell these secrets of his wife to anyone

ಗಂಡ ಹೆಂಡತಿ ನಡುವಿನ ಸಂಬಂಧ ತುಂಬಾನೇ ಸುಂದರವಾದದ್ದು. ಈ ಸಂಬಂಧ ಶಾಶ್ವತವಾಗಿ ಸುಂದರವಾಗಿರಬೇಕೆಂದರೆ  ಗಂಡ ಹೆಂಡತಿ (husband-wife) ತಮ್ಮ ನಡುವಿನ ಸಂಬಂಧದ ಬಗ್ಗೆ ಯಾರೊಂದಿಗೂ ಚರ್ಚಿಸಬಾರದು. ಕೆಲವೊಂದು ರಹಸ್ಯಗಳನ್ನು ಯಾರಿಗೂ ಶೇರ್‌ ಮಾಡಬಾರದು. ಇಬ್ಬರ ನಡುವೆ ಮೂರನೇ ವ್ಯಕ್ತಿ ಬರಲು ಬಿಡಲೇಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹೀಗೆ ಗಂಡ ಹೆಂಡತಿ ನಡುವೆ ಮೂರನೇ ವ್ಯಕ್ತಿ ಬಂದರೆ ಸಂಬಂಧವೇ ಹಾಳಾಗುತ್ತದೆ. ಜೊತೆಗೆ ಗಂಡನಾದವನು ತನ್ನ ಹೆಂಡತಿಯ ಕೆಲವೊಂದು ವಿಚಾರಗಳನ್ನು ಇತರರ ಬಳಿ ಹಂಚಿಕೊಳ್ಳುವುದರಿಂದಲೂ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪತಿ ತನ್ನ ಪತ್ನಿಯ ಈ ವಿಚಾರಗಳನ್ನು ಯಾರಿಗೂ ಹೇಳಬಾರದು ಅದನ್ನು ಆದಷ್ಟು ಖಾಸಗಿಯಾಗಿರಿಸಬೇಕು ಎಂದು ಚಾಣಕ್ಯರು ಸಲಹೆ ನೀಡಿದ್ದಾರೆ. ಆ ವಿಚಾರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಗಂಡ ತನ್ನ ಹೆಂಡತಿಯ ಈ ವಿಷಯಗಳನ್ನು ಯಾರಿಗೂ ಹೇಳಬಾರದು:

ಮನಸ್ತಾಪ, ಜಗಳ: ಪ್ರತಿಯೊಂದು ಮನೆಯಲ್ಲೂ ಜಗಳಗಳು ನಡೆಯುತ್ತವೆ. ಅದರಲ್ಲೂ ಗಂಡ ಹೆಂಡತಿಯ ನಡುವೆ ಸಣ್ಣಪುಟ್ಟ ಮನಸ್ತಾಪ, ಜಗಳ ನಡೆಯುವುದು ಸಾಮಾನ್ಯ. ಕೆಲವು ಜನರು ತಮ್ಮ ಕುಟುಂಬ ವಿವಾದಗಳನ್ನು ಇತರರ ಮುಂದೆ ಹಂಚಿಕೊಳ್ಳುತ್ತಾರೆ. ಇದು  ಕೆಟ್ಟ ಅಭ್ಯಾಸ ಎಂದು ಚಾಣಕ್ಯ ಹೇಳುತ್ತಾರೆ. ಗಂಡನೇ ಆಗಿರಲಿ ಅಥವಾ ಹೆಂಡತಿಯೇ ಆಗಿರಲಿ ತಮ್ಮ ದಾಂಪತ್ಯ ಜೀವನದಲ್ಲಿ ನಡೆದ ಮನಸ್ತಾಪಗಳನ್ನು ಇತರರ ಬಳಿ ಹೇಳಿದಾಗ ಕೆಲವರು ಗೇಲಿ ಮಾಡುತ್ತಾರೆ, ನಿಮ್ಮ ಜಗಳದ ಲಾಭವನ್ನು ಪಡೆದು ಪತಿ ಪತ್ನಿಯ ನಡುವಿನ ಸುಂದರ ಬಂಧವನ್ನು ಹಾಳು ಮಾಡುತ್ತಾರೆ. ಹಾಗಾಗಿ ಗಂಡ ಹೆಂಡತಿ ತಮ್ಮ ನಡುವೆ ಜಗಳ ಏರ್ಪಟ್ಟರೆ ಅದನ್ನು ಯಾರ ಬಳಿಯೂ ಹೇಳಬಾರದು ಎನ್ನುತ್ತಾರೆ ಚಾಣಕ್ಯ.

ಪ್ರೀತಿ ವಿಚಾರ: ನಿಮ್ಮ ಹೆಂಡತಿ ನಿಮ್ಮನ್ನು ಎಷ್ಟು ಪ್ರೀತಿಸುತ್ತಿದ್ದಾಳೆ ಎಂಬುದನ್ನು ಯಾರಬಳಿಯೂ ಹಂಚಿಕೊಳ್ಳಲು ಹೋಗಬೇಡಿ. ಅಂತಹ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಸಂಬಂಧ ಹಾಳಾಗುವ ಅಪಾಯ ಹೆಚ್ಚಿರುತ್ತದೆ ಎನ್ನುತ್ತಾರೆ ಚಾಣಕ್ಯ.

ಹೆಂಡತಿಯ ನ್ಯೂನತೆಗಳನ್ನು ಯಾರಿಗೂ ಹೇಳಬೇಡಿ: ನಿಮ್ಮ ಹೆಂಡತಿಗೆ ಕೆಟ್ಟ ಅಭ್ಯಾಸವಿದ್ದರೆ ಅಥವಾ ಸಣ್ಣಪುಟ್ಟ ವಿಷಯಕ್ಕೂ ಕೋಪಮಾಡಿಕೊಳ್ಳುವಂತಹ ನ್ಯೂನತೆಗಳಿದ್ದರೆ  ನೀವು ಅದನ್ನು ಎಂದಿಗೂ ಇತರರೊಂದಿಗೆ ಹೇಳಬಾರದು. ನಿಮ್ಮ ಹೆಂಡತಿಯ ನ್ಯೂನತೆಗಳು ಅಥವಾ ಕೆಟ್ಟ ಅಭ್ಯಾಸಗಳ ಬಗ್ಗೆ ಉಲ್ಲೇಖಿಸುವುದು ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಅಲ್ಲದೆ ನಿಮ್ಮ ಸಂಬಂಧದ ಬಗ್ಗೆ ಇತರರು ಗೇಲಿ ಮಾಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಗುಣಗಳಿದ್ದರೆ ಜನ ನಿಮ್ಮನ್ನು ಸುಲಭವಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿಸುತ್ತಾರೆ ಎಚ್ಚರ…!

ಹೆಂಡತಿಯ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳು: ನಿಮ್ಮ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ದೈಹಿಕವಾಗಿ ಅಸ್ವಸ್ಥರಾಗಿದ್ದರೆ, ನೀವು ಅದನ್ನು ಯಾರಿಗೂ ಹೇಳಬಾರದು. ಇದು ಹೆಂಡತಿಯ ಮನಸ್ಸನ್ನು ಘಾಸಿಗೊಳಿಸುತ್ತದೆ ಜೊತೆಗೆ ಮೂರನೇ ವ್ಯಕ್ತಿ ಇಲ್ಲಸಲ್ಲದ ಮಾತುಗಳನ್ನಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಹೆಂಡತಿಗೆ ಆರೋಗ್ಯಕ ಸಮಸ್ಯೆಗಳಿದ್ದರೆ ನೀವು ಅವಳಿಗೆ ಬೆಂಬಲವಾಗಿ ನಿಲ್ಲಬೇಕು, ಆಕೆಯ ದೌರ್ಬಲ್ಯಗಳನ್ನು ಜಗತ್ತಿಗೆ ಬಹಿರಂಗಪಡಿಸಬಾರದು.

ಹೆಂಡತಿಯ ಹಿಂದಿನ ವಿಷಯಗಳ ಬಗ್ಗೆ ಮಾತನಾಡಬಾರದು: ಪ್ರತಿಯೊಬ್ಬರಿಗೂ ಪಾಸ್ಟ್‌ ಇದ್ದೇ ಇರುತ್ತದೆ. ನಿಮ್ಮ ಹೆಂಡತಿ ಮದುವೆಗೂ ಮುನ್ನ ಯಾರನ್ನೋ ಪ್ರೀತಿಸುತ್ತಿದ್ದರೆ ಅಥವಾ ಆಕೆಯ ಮನಸ್ಸಿಗೆ ಏನಾದ್ರೂ ನೋವಾಗಿದ್ದರೆ ಹೆಂಡತಿಯ ಈ ಭೂತಕಾಲದ ಸಂಗತಿಗಳನ್ನು ಗಂಡ ಯಾರ ಬಳಿಯೂ ಹಂಚಿಕೊಳ್ಳಬಾರದು. ಇದರಿಂದ ಹೆಂಡತಿ ಅಸಮಾಧಾನಗೊಳ್ಳಬಹುದು ಮತ್ತು ಇದರಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಬೋಲಾ ವೈರಸ್‌ಗೆ ಲಸಿಕೆ ಲಭ್ಯವಿದ್ದರೂ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವುದಕ್ಕೆ ಕಾರಣವೇನು? – Kannada News | Ervebo Vaccine Success vs Ebola Reality: What’s Missing In Outbreak Control?

ಎಬೋಲಾ (Ebola) ವೈರಸ್ ಮತ್ತೆ ಜಗತ್ತಿನ ಆತಂಕಕ್ಕೆ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಈ ವೈರಸ್ ಅನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಘೋಷಿಸಿದೆ. ಈಗಾಗಲೇ ಈ ಸೋಂಕಿನಿಂದ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ವಿಶೇಷವಾಗಿ ಆಫ್ರಿಕಾದ ಕೆಲವು ಭಾಗಗಳಲ್ಲಿ ವೈರಸ್ ವೇಗವಾಗಿ ಹರಡುತ್ತಿರುವುದು ಆರೋಗ್ಯ ತಜ್ಞರ ಚಿಂತೆಗೆ ಕಾರಣವಾಗಿದೆ. ಆದರೆ ಈ ಎಬೋಲಾ ವೈರಸ್‌ಗೆ ಲಸಿಕೆ ಲಭ್ಯವಿದ್ದರೂ ಅಪಾಯ ಏಕೆ ಕಡಿಮೆಯಾಗಿಲ್ಲ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಹಾಗಾದರೆ ಎಬೋಲಾ ವೈರಸ್ ಎಂದರೇನು, ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಲಸಿಕೆ ಇದ್ದರೂ ಈ ಮಹಾಮಾರಿಗೆ ಕಡಿವಾಣ ಹಾಕಲು ಆಗದಿರುವುದಕ್ಕೆ ಕಾರಣವೇನು ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿದುಕೊಳ್ಳಿ.

ಎಬೋಲಾ ವೈರಸ್ ಎಂದರೇನು?

ಸಾಮಾನ್ಯವಾಗಿ ಎಬೋಲಾ ಒಂದು ಗಂಭೀರ ವೈರಲ್ ಸೋಂಕು. ಸೋಂಕಿತ ವ್ಯಕ್ತಿಯ ರಕ್ತ, ದೇಹದ ದ್ರವಗಳು ಅಥವಾ ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಇದು ಹರಡುತ್ತದೆ. 1976ರಲ್ಲಿ ಕಾಂಗೋದಲ್ಲಿ ಮೊದಲ ಬಾರಿ ಈ ವೈರಸ್ ಪತ್ತೆಯಾಯಿತು. ಬಳಿಕ ಉಪ- ಸಹಾರಾ ಆಫ್ರಿಕಾದ ಹಲವು ಪ್ರದೇಶಗಳಲ್ಲಿ ಪ್ರಕರಣಗಳು ವರದಿಯಾಗಿವೆ. ತಜ್ಞರ ಪ್ರಕಾರ, ಎಬೋಲಾ ಸೋಂಕಿನ ಮರಣ ಪ್ರಮಾಣ ತುಂಬಾ ಹೆಚ್ಚು. ಕೆಲ ಸಂದರ್ಭಗಳಲ್ಲಿ ಸೋಂಕಿತ ವ್ಯಕ್ತಿಯ ದೇಹದ ಒಳಭಾಗದಲ್ಲಿ ರಕ್ತಸ್ರಾವ ಉಂಟಾಗಿ ಜೀವಕ್ಕೆ ಅಪಾಯವಾಗಬಹುದು. ಕೆಲವು ಅಧ್ಯಯನಗಳ ಪ್ರಕಾರ, ಈ ವೈರಸ್‌ನ ಮರಣ ಪ್ರಮಾಣ 80ರಿಂದ 90 ಶೇಕಡಾವರೆಗೆ ಇರಬಹುದು. ಹಾಗಾಗಿ ಎಚ್ಚರಿಕೆ ಅನುಸರಿಸುವುದು ಬಹಳ ಅನಿವಾರ್ಯವಾಗಿದೆ.

ಲಸಿಕೆ ಇದ್ದರೂ ಅಪಾಯಕಾರಿ ಏಕೆ?

ಮಹಾಮಾರಿ ತಜ್ಞ ಡಾ. ಜುಗಲ್ ಕಿಶೋರ್ ಅವರ ಪ್ರಕಾರ, ಇದಕ್ಕೆ ಪ್ರಮುಖ ಕಾರಣ ವೈರಸ್‌ನ ವಿಭಿನ್ನ ಸ್ಟ್ರೇನ್‌ಗಳು. ಎಬೋಲಾ ವೈರಸ್‌ ಹಲವು ರೂಪಗಳಲ್ಲಿ ಕಂಡುಬರುತ್ತದೆ. ಕೆಲವು ಸ್ಟ್ರೇನ್‌ಗಳ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದ್ದರೂ, ಎಲ್ಲ ರೂಪಗಳ ಮೇಲೂ ಅದು ಸಮಾನವಾಗಿ ಕೆಲಸ ಮಾಡುವುದಿಲ್ಲ. ಅದೇರೀತಿ ಎಬೋಲಾದ ಬುಂಡಿಬುಗ್ಯೊ (Bundibugyo) ಎಂಬ ಅಪಾಯಕಾರಿ ಸ್ಟ್ರೇನ್ ಈಗ ಹೆಚ್ಚು ಪ್ರಕರಣಗಳಿಗೆ ಕಾರಣವಾಗುತ್ತಿದೆ. ಈ ಸ್ಟ್ರೇನ್ ವಿರುದ್ಧ ಪರಿಣಾಮಕಾರಿ ಮತ್ತು ಪ್ರಮಾಣಿತ ಲಸಿಕೆ ಇನ್ನೂ ಲಭ್ಯವಿಲ್ಲ. ಇದೇ ಕಾರಣದಿಂದ ಸೋಂಕಿನ ಭೀತಿ ಹೆಚ್ಚುತ್ತಿದೆ. ಇದಕ್ಕೂ ಹೊರತು, ಆಫ್ರಿಕಾದ ದೂರದ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ, ಸಮಯಕ್ಕೆ ಚಿಕಿತ್ಸೆ ಸಿಗದಿರುವುದು ಹಾಗೂ ಲಸಿಕೆ ತಲುಪಿಸುವಲ್ಲಿ ಆಗುತ್ತಿರುವ ತೊಂದರೆಗಳು ಪರಿಸ್ಥಿತಿಯನ್ನು ಗಂಭೀರಗೊಳಿಸುತ್ತಿವೆ.

ಇದನ್ನೂ ಓದಿ: ಕಿಡ್ನಿ ವೈಫಲ್ಯಕ್ಕೆ ಟ್ರಾನ್ಸ್‌ಪ್ಲಾಂಟ್ ಯಾವಾಗ ಅಗತ್ಯ ಎಂಬುದನ್ನು ಡಾ. ರವಿಶಂಕರ್ ಅವರಿಂದ ತಿಳಿದುಕೊಳ್ಳಿ

ಎಬೋಲಾ ವೈರಸ್‌ನ ಲಕ್ಷಣಗಳು:

  • ತೀವ್ರ ಜ್ವರ
  • ದೇಹ ನೋವು ಮತ್ತು ದೌರ್ಬಲ್ಯ
  • ವಾಂತಿ
  • ತಲೆನೋವು
  • ದೇಹದ ಒಳ ಹಾಗೂ ಹೊರ ರಕ್ತಸ್ರಾವ

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

ತಜ್ಞರು ಹೇಳುವಂತೆ, ಸೋಂಕು ಹೆಚ್ಚಿರುವ ಪ್ರದೇಶಗಳಿಗೆ ಅನಗತ್ಯ ಪ್ರಯಾಣ ತಪ್ಪಿಸುವುದು ಉತ್ತಮ. ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದ ದೂರವಿರಬೇಕು. ಕೈಗಳ ಸ್ವಚ್ಛತೆ ಮತ್ತು ಆರೋಗ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅತಿಯಾದ ಕೋಪ ದೇಹದ ಎಷ್ಟೆಲ್ಲಾ ದುಷ್ಪರಿಣಾಮಗಳನ್ನು ಬೀರುತ್ತವೆ ಗೊತ್ತಾ? – Kannada News | Do you know how many negative effects anger has?

ನಗು, ಅಳುವಿನಿಂದ ಕೋಪ (anger) ಕೂಡ ಒಂದು ಭಾವನೆ. ದುಃಖಿತರಾದಾಗ, ಕಿರಿಕಿರಿ ಉಂಟಾದಾಗ ನಾವೆಲ್ಲರೂ ಕೋಪ ಮಾಡಿಕೊಳ್ಳುತ್ತೇವೆ. ಕೋಪ ಮನುಷ್ಯನ ಸಹಜ ಗುಣವಾಗಿದ್ದು, ಎಲ್ಲರಿಗೂ ಕೋಪ ಬಂದೇ ಬರುತ್ತದೆ. ಅದರಲ್ಲೂ ಕೆಲವರಂತೂ ಸಣ್ಣಪುಟ್ಟ ವಿಚಾರಗಳಿಗೂ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ. ಇದು ಮಾತು ಮತ್ತು ಕಾರ್ಯಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡಿ ಸಂಬಂಧವನ್ನೇ ಹಾಳು ಮಾಡುತ್ತದೆ. ಅಷ್ಟೇ ಅಲ್ಲದೆ ಈ ಕೋಪ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಕೋಪವು ಮನುಷ್ಯನ ಮೇಲೆ ಏನೆಲ್ಲಾ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ನೋಡೋಣ ಬನ್ನಿ.

ಕೋಪ ಮಾಡಿಕೊಳ್ಳುವುದರಿಂದ ಆಗುವ ಪರಿಣಾಮಗಳೇನು ಗೊತ್ತಾ?

ಹೃದಯಕ್ಕೆ ಹಾನಿಕಾರಕ: ಒಬ್ಬ ವ್ಯಕ್ತಿಯು ಅತಿಯಾಗಿ ಕೋಪಗೊಂಡಾಗ, ಅದು ಆತನ ಹೃದಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ಅಧ್ಯಯನವು ಕೋಪ, ದುಃಖ ಮತ್ತು ಆತಂಕದಂತಹ ದೈನಂದಿನ ನಕಾರಾತ್ಮಕ ಭಾವನೆಗಳು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಹೇಳಿದೆ. ಅತಿಯಾದ ಕೋಪವು ಎಂಡೋಥೀಲಿಯಲ್ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ, ಇದು ರಕ್ತದೊತ್ತಡ ಹೆಚ್ಚಾಗುವಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

 ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ಅತಿಯಾದ ಕೋಪವು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಜೀರ್ಣಾಂಗದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಒತ್ತಡವು ಹೆಚ್ಚಾಗಿ ಹೊಟ್ಟೆ ನೋವು, ಹಸಿವಿನ ಕೊರತೆ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಇದು ಪೌಷ್ಟಿಕಾಂಶದ ಕೊರತೆಗೆ ಕಾರಣವಾಗಬಹುದು.

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ: ಕೋಪವು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅಧ್ಯಯನಗಳು ಕೋಪವು ಹೆಚ್ಚಾಗಿ ಆತಂಕ ಮತ್ತು ಖಿನ್ನತೆಯಂತಹ ಭಾವನಾತ್ಮಕ ಅಸ್ವಸ್ಥತೆಗಳನ್ನು ಹೆಚ್ಚಿಸುತ್ತದೆ. ಕೋಪದ ಸ್ಥಿತಿಯಲ್ಲಿ ಮೆದುಳಿನ ತಾರ್ಕಿಕ ಶಕ್ತಿ ಕಡಿಮೆಯಾಗುತ್ತದೆ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಅತಿಯಾದ ಕೋಪವು ನಿಮ್ಮ ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಮಾನಸಿಕ ಆಯಾಸ ಮತ್ತು ಕಿರಿಕಿರಿಯನ್ನು ಹೆಚ್ಚಿಸುತ್ತದೆ.

ರಕ್ತದೊತ್ತಡ ಅಪಾಯವನ್ನು ಹೆಚ್ಚಿಸುತ್ತದೆ:  ಒಬ್ಬ ವ್ಯಕ್ತಿಯು ಕೋಪಗೊಂಡಾಗ, ದೇಹದಲ್ಲಿ ಅಡ್ರಿನಾಲಿನ್ ಮತ್ತು ನೊರಾಡ್ರಿನಾಲಿನ್ ಎಂಬ ಹಾರ್ಮೋನುಗಳು ವೇಗವಾಗಿ ಬಿಡುಗಡೆಯಾಗುತ್ತವೆ. ಇದು ಹೃದಯ ಬಡಿತವನ್ನು ವೇಗಗೊಳಿಸಲು ಮತ್ತು ರಕ್ತದೊತ್ತಡವನ್ನು ಹಠಾತ್ತನೆ ಹೆಚ್ಚಿಸಲು ಕಾರಣವಾಗಬಹುದು. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ, ಆಗಾಗ್ಗೆ ಕೋಪಗೊಳ್ಳುವುದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ.

ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತದೆ: ಅತಿಯಾದ ಕೋಪವು ನಿದ್ರಾಹೀನತೆಗೆ ಕಾರಣವಾಗಬಹುದು. ನೀವು ಕೋಪಗೊಂಡಾಗ, ನಿಮ್ಮ ಮನಸ್ಸು ಹೆಚ್ಚು ಸಕ್ರಿಯ ಮತ್ತು ಪ್ರಕ್ಷುಬ್ಧವಾಗುತ್ತದೆ. ಇದು ನಿದ್ದೆಗೆ ಅಡ್ಡಿಯನ್ನು ಉಂಟು ಮಾಡುತ್ತವೆ. ಅಲ್ಲದೆ ಅತಿಯಾದ ಕೋಪ ಮತ್ತು ನಿರಂತರ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ, ಇದು ದೇಹದ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಏನಾಗುತ್ತದೆ ಗೊತ್ತಾ?

ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ: ನಿರಂತರ ಕೋಪವು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಸ್ನಾಯು ಸೆಳೆತ: ನಿರಂತರವಾಗಿ ಕೋಪಗೊಳ್ಳುವುದರಿಂದ ಸ್ನಾಯು ನೋವು ಉಂಟಾಗುತ್ತದೆ. ಈ ಒತ್ತಡವು ಹೆಚ್ಚಾಗಿ ತಲೆನೋವು, ಬೆನ್ನು ನೋವು ಮತ್ತು ಇತರ ಸ್ನಾಯು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಕೋಪವನ್ನು ಹೇಗೆ ನಿಯಂತ್ರಿಸುವುದು?

  • ನಿಮಗೆ ತುಂಬಾ ಕೋಪ ಬಂದಾಗ, ಒಂದು ಲೋಟ ತಣ್ಣೀರು ಕುಡಿಯಿರಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ, ಒಂದು ಕ್ಷಣ ಕಣ್ಣು ಮುಚ್ಚಿ, ವಿಶ್ರಾಂತಿ ಪಡೆಯಲು ಪ್ರಯತ್ನಿಸಿ.
  • ನಿಮಗೆ ಅತಿಯಾದ ಕೋಪದ ಸಮಸ್ಯೆ ಇದ್ದರೆ, ಪ್ರತಿದಿನ ಧ್ಯಾನ, ಯೋಗ ಮತ್ತು ಪ್ರಾಣಾಯಾಮವನ್ನು ಅಭ್ಯಾಸ ಮಾಡಿ.
  • ನೀವು ಕೋಪಗೊಂಡಾಗ, ನಿಮ್ಮ ಕಣ್ಣುಗಳನ್ನು ಮುಚ್ಚಿ, ಆಳವಾದ ಉಸಿರನ್ನು ತೆಗೆದುಕೊಂಡು ಎಲ್ಲವೂ ಸರಿಯಾಗಿದೆ ಎಂದು ಭಾವಿಸಿ.
  • ನೀವು ಕೋಪಗೊಂಡಾಗ ಆ ಸ್ಥಳದಿಂದ ತಕ್ಷಣ ಎದ್ದು ಹೋಗಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:56 pm, Thu, 21 May 26

Source link

ಯುರೇನಿಯಂ ಇರಾನ್‌ನಲ್ಲಿಯೇ ಉಳಿಯಬೇಕು; ಅಮೆರಿಕದ ಪ್ರಮುಖ ಬೇಡಿಕೆ ತಿರಸ್ಕರಿಸಿದ ಮೊಜ್ತಾಬಾ ಖಮೇನಿ – Kannada News | Enriched uranium must remain in Iran Supreme Leader Mojtaba Khamenei rejects key US demand

ಟೆಹ್ರಾನ್, ಮೇ 21: ಇರಾನ್ ಮತ್ತು ಅಮೆರಿಕದ ನಡುವೆ ನಡೆಯುತ್ತಿರುವ ಸೂಕ್ಷ್ಮ ಕದನ ವಿರಾಮದ ಮಾತುಕತೆಗಳ ಮಧ್ಯೆ ಇರಾನ್‌ನ ಸುಪ್ರೀಂ ನಾಯಕ ಮೊಜ್ತಾಬಾ ಖಮೇನಿ (Mojtaba Khamenei) ಅವರು ಅಮೆರಿಕದ ಪ್ರಮುಖ ಬೇಡಿಕೆಯೊಂದನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಎನ್​ರಿಚ್ಡ್​ ಯುರೇನಿಯಂ ಇರಾನ್ ದೇಶದ ಒಳಗೇ ಇರಬೇಕು ಎಂದು ಮೊಜ್ತಬಾ ಖಮೇನಿ ಹೇಳಿದ್ದಾರೆ. ಇರಾನ್ ತನ್ನ ಪರಮಾಣು ದಾಸ್ತಾನನ್ನು ವಿದೇಶಕ್ಕೆ ಸಾಗಿಸಬೇಕು ಎಂಬ ಅಮೆರಿಕದ ಷರತ್ತನ್ನು ನಾವು ಒಪ್ಪಲು ಸಿದ್ಧರಿಲ್ಲ ಎಂದು ಅವರು ಹೇಳಿದ್ದಾರೆ.

ಇರಾನ್ ಅಣುಬಾಂಬ್ ತಯಾರಿಸುವುದನ್ನು ತಡೆಯುವ ನಿಟ್ಟಿನಲ್ಲಿ ಇರಾನ್ ಹೊಂದಿರುವ ಉನ್ನತ ಮಟ್ಟದ ಸಮೃದ್ಧ ಯುರೇನಿಯಂ ದಾಸ್ತಾನನ್ನು ದೇಶದಿಂದ ಹೊರಗೆ ಕಳುಹಿಸಬೇಕು ಎಂದು ಅಮೆರಿಕ ಕದನ ವಿರಾಮಕ್ಕೆ ಮುಖ್ಯ ಷರತ್ತನ್ನು ವಿಧಿಸಿತ್ತು.

ಇದನ್ನೂ ಓದಿ: ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್? ಹೊರ್ಮುಜ್ ಆಳದಲ್ಲಿರುವ ಅಂತರ್ಜಾಲ ಕೇಬಲ್​ಗೂ ಆಪತ್ತು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ಜೊತೆಗಿನ ಯುದ್ಧವನ್ನು ಕೊನೆಗಾಣಿಸಲು ಪ್ರಮುಖ ಷರತ್ತೊಂದನ್ನು ವಿಧಿಸಿದ್ದರು. ಇರಾನ್ ಅಣುಬಾಂಬ್ ತಯಾರಿಸುವುದನ್ನು ತಡೆಯಲು, ಅದು ಹೊಂದಿರುವ ಶೇ. 60ರಷ್ಟು ಶುದ್ಧತೆಯ ಇಂಧನ-ದರ್ಜೆಯ ಸಮೃದ್ಧ ಯುರೇನಿಯಂ ದಾಸ್ತಾನನ್ನು ಇರಾನ್‌ನಿಂದ ಹೊರಗೆ ಹಾಕಬೇಕು ಮತ್ತು ಬೇರೆ ದೇಶಕ್ಕೆ ವರ್ಗಾಯಿಸಬೇಕು ಎಂಬುದು ಅಮೆರಿಕದ ಮುಖ್ಯ ಬೇಡಿಕೆಯಾಗಿತ್ತು. ಈ ಷರತ್ತನ್ನು ಈಡೇರಿಸುವವರೆಗೂ ಯುದ್ಧ ಕೊನೆಗೊಳ್ಳುವುದಿಲ್ಲ ಎಂದು ಇಸ್ರೇಲ್ ಹೇಳಿತ್ತು.

ಆದರೆ, ಇದಕ್ಕೆ ಇರಾನ್ ಒಪ್ಪಿಗೆ ನೀಡಿಲ್ಲ. ಈ ಬೇಡಿಕೆಯನ್ನು ಒಪ್ಪಿಕೊಂಡರೆ ಇರಾನ್ ಜಾಗತಿಕವಾಗಿ ದುರ್ಬಲವಾಗುತ್ತದೆ. ಅಮೆರಿಕ ಅಥವಾ ಇಸ್ರೇಲ್ ಭವಿಷ್ಯದಲ್ಲಿ ಮತ್ತೆ ದಾಳಿ ನಡೆಸಲು ಇದು ದಾರಿ ಮಾಡಿಕೊಡುತ್ತದೆ ಎಂಬುದು ಇರಾನ್ ಆತಂಕ. ಪ್ರಸ್ತುತ ನಡೆಯುತ್ತಿರುವ ಕದನ ವಿರಾಮ ಮಾತುಕತೆಗಳು ಕೇವಲ ಅಮೆರಿಕದ ಒಂದು ‘ರಾಜತಾಂತ್ರಿಕ ತಂತ್ರ’ ಇರಬಹುದು ಎಂದು ಇರಾನ್ ಅನುಮಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಬರ್ಬರ ಹತ್ಯೆ

ಇದೆಲ್ಲದರ ನಡುವೆ, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಪ್ರಯತ್ನಗಳು ನಡೆಯುತ್ತಿವೆಯಾದರೂ ಇರಾನ್‌ನ ಈ ಕಠಿಣ ನಿಲುವಿನಿಂದಾಗಿ ಕದನ ವಿರಾಮದ ಮಾತುಕತೆಗಳು ಮತ್ತಷ್ಟು ಜಟಿಲಗೊಂಡಿವೆ. ಅಮೆರಿಕ ಕೂಡ ಎಲ್ಲ ರೀತಿಯಿಂದಲೂ ಕದನವಿರಾಮಕ್ಕೆ ಪ್ರಯತ್ನ ಮಾಡುತ್ತಿದೆ.

ಅಂತಾರಾಷ್ಟ್ರೀಯ ಸಂಸ್ಥೆಗಳ ಅಂದಾಜಿನ ಪ್ರಕಾರ, ಇರಾನ್ ಪ್ರಸ್ತುತ ಸುಮಾರು 440 ಕೆ.ಜಿ ಗಿಂತಲೂ ಹೆಚ್ಚು ಸಮೃದ್ಧ ಯುರೇನಿಯಂ ದಾಸ್ತಾನನ್ನು ಹೊಂದಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್‌ನ ಇಸ್ಫಹಾನ್ ಮತ್ತು ನಟಾಂಜ್ ಪರಮಾಣು ನೆಲೆಗಳ ಮೇಲೆ ನಡೆಸಿದ ಭೀಕರ ದಾಳಿಗಳ ನಂತರವೂ ಈ ದಾಸ್ತಾನುಗಳನ್ನು ಸುರಕ್ಷಿತ ಸುರಂಗಗಳಲ್ಲಿ ಸಂಗ್ರಹಿಸಲಾಗಿದೆ ಎನ್ನಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಗೃಹಲಕ್ಷ್ಮಿ ಹಣ ಬಾಕಿ: ಮಹಿಳೆಯರ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಮಹತ್ವದ ಆದೇಶ – Kannada News | Grihalakshmi Pending Payments: High Court Issues Key Order on Women’s Petition

ಗೃಹಲಕ್ಷ್ಮಿ, ಹೈಕೋರ್ಟ್ Image Credit source: google

ಬೆಂಗಳೂರು, ಮೇ 21: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ (Gruhalakshmi) ಯೋಜನೆಯ ಎರಡು ತಿಂಗಳ ಬಾಕಿ ಹಣ ಬಿಡುಗಡೆಗೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದ್ದು, ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಗುರುವಾರ ನೋಟಿಸ್ ಜಾರಿ ಮಾಡಿದೆ.

ಮುಖ್ಯಾಂಶಗಳು

  • ಗೃಹಲಕ್ಷ್ಮಿ ಬಾಕಿ ಹಣ ಬಿಡುಗಡೆಗೆ ನಿರ್ದೇಶನ ಕೋರಿ ಪಿಐಎಲ್​
  • 2 ತಿಂಗಳ ಬಾಕಿ ಗೃಹಲಕ್ಷ್ಮಿ ಹಣ ಪಾವತಿಗೆ ನಿರ್ದೇಶನ ಕೋರಿಕೆ
  • ಪಿಐಎಲ್ ಸಂಬಂಧ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

ಅರ್ಜಿದಾರರು ಯಾರು?

ಗೃಹಲಕ್ಷ್ಮಿ ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ನಿರ್ದೇಶನ ಕೋರುವಂತೆ ಬೆಂಗಳೂರಿನ ಕಮಲಾನಗರದ ನಿವಾಸಿ ಆರ್. ಗಂಗಾ ಹಾಗೂ ನಂದಿನಿ ಲೇಔಟ್‌ನ ಜಿ.ಡಿ. ಪವಿತ್ರಾ ಎಂಬುವರು ಹೈಕೋರ್ಟ್‌ ಮೊರೆಹೋಗಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಏನಿದೆ?

ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಈ ಬಾಕಿ ಇರುವ ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ತಕ್ಷಣವೇ ಪಾವತಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಹಣಕಾಸು, ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಗೆ ನೋಟಿಸ್

ಇನ್ನು ನ್ಯಾಯಮೂರ್ತಿಗಳಾದ ಡಾ. ಕೆ ಮನ್ಮಥ ರಾವ್‌ ಮತ್ತು ಸೂರಜ್ ಗೋವಿಂದರಾಜ್​​ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ಮಾಡಿದ್ದು, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಹಣಕಾಸು ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತುರ್ತು ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದ್ದು ವಿಚಾರಣೆಯನ್ನು ಮುಂದೂಡಿದೆ. ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ವಾದ ಮಂಡಿಸಿದರು.

ಇದನ್ನೂ ಓದಿ: ಗೃಹಲಕ್ಷ್ಮಿ ಬೇಡಯ್ಯ ಗೃಹವನ್ನ ನೀಡಯ್ಯ: ಹಾಡಿನ ಮೂಲಕ ಸಿಎಂಗೆ ಮುಸ್ಲಿಂ ಮಹಿಳೆ ಮನವಿ

2024ರ ಏಪ್ರಿಲ್‌ನಿಂದ 2025ರ ಜನವರಿವರೆಗೆ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಧನಸಹಾಯ ವಿತರಣೆ, ಫೆಬ್ರವರಿಯಲ್ಲಿ ದಿಢೀರ್ ಹಳಿ ತಪ್ಪಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಸ್ತುವಾರಿಯಲ್ಲಿದ್ದ ಈ ಪ್ರಕ್ರಿಯೆಯನ್ನು, ತಾಲೂಕು ಪಂಚಾಯಿತಿಗಳ ಮೂಲಕ ನಿರ್ವಹಿಸಲು ಸರ್ಕಾರ ಹೊಸ ನೀತಿ ರೂಪಿಸಿತ್ತು. ಆದರೆ, ಈ ತಾಂತ್ರಿಕ ಹಸ್ತಾಂತರದ ಗೊಂದಲದಿಂದಾಗಿ 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಕಂತುಗಳ ಹಣ ಫಲಾನುಭವಿಗಳ ಕೈಸೇರದೆ ಬಾಕಿ ಉಳಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

GT vs CSK IPL 2026 Live Score: ಟಾಸ್ ಗೆದ್ದ ಸಿಎಸ್​ಕೆ ಬೌಲಿಂಗ್ ಆಯ್ಕೆ – Kannada News | Gujarat Titans vs Chennai Super Kings IPL 2026 Live Cricket Score GT vs CSK Match on 21st May latest news in Kannada

ಐಪಿಎಲ್ 2026 ರ 66 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರಸ್ಪರ ಮುಖಾಮುಖಿಯಾಗಿವೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳ 14 ನೇ ಮತ್ತು ಕೊನೆಯ ಪಂದ್ಯ ಇದಾಗಿದೆ. ಈ ಸೀಸನ್​ನಲ್ಲಿ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಗುಜರಾತ್ ಪ್ಲೇಆಫ್ ಟಿಕೆಟ್ ಪಡೆದುಕೊಂಡಿದೆ. ಇತ್ತ ಸಿಎಸ್​ಕೆಗೆ ಪ್ಲೇಆಫ್‌ ಹಾದಿ ಭಾಗಶಃ ಮುಚ್ಚಿದ್ದರೂ ಅವಕಾಶವೆಂತು ಇದೆ.

Source link

ಎರಡನೇ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅವಧಿ 5 ವರ್ಷ ಅಲ್ಲ 12 ವರ್ಷ; ಯಾಕಿದು ಮಹತ್ವ ಗೊತ್ತಾ? – Kannada News | India Semiconductor Mission 2.0: 12 Year Plan to Boost Chip Manufacturing & MSMEs

ನವದೆಹಲಿ, ಮೇ 21: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ದೇಶದ ಮಹತ್ವಾಕಾಂಕ್ಷೆಯ ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ (ISM- India Semiconductor Mission)) ಯೋಜನೆಯ ಎರಡನೇ ಹಂತವನ್ನು (ISM 2.0) ಬರೋಬ್ಬರಿ 12 ವರ್ಷಗಳ ದೀರ್ಘಾವಧಿಗೆ ವಿಸ್ತರಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಈ ಹಿಂದೆ ಇಂತಹ ಯೋಜನೆಗಳ ಅವಧಿ ಕೇವಲ 5 ವರ್ಷಗಳಾಗಿರುತ್ತಿದ್ದವು. ಚಿಪ್ ಉತ್ಪಾದನಾ ವಲಯದಲ್ಲಿ ಹೂಡಿಕೆ ಮತ್ತು ಉತ್ಪಾದನೆಗೆ ದೀರ್ಘಾವಧಿ ಬೇಕಾಗುವುದರಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಬೃಹತ್ ಆರ್ಥಿಕ ವೆಚ್ಚಕ್ಕೆ ಸಜ್ಜು

ಸೆಮಿಕಂಡಕ್ಟರ್ ಮಿಷನ್‌ನ ಎರಡನೇ ಹಂತಕ್ಕಾಗಿ ಸರ್ಕಾರ ಸುಮಾರು 1.5 ಲಕ್ಷ ಕೋಟಿ ರೂ ಹಣವನ್ನು ಮೀಸಲಿಡುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ಕೇವಲ ಬೃಹತ್ ಚಿಪ್ ಉತ್ಪಾದನಾ ಘಟಕಗಳ (Fabs) ಸ್ಥಾಪನೆಗೆ ಆದ್ಯತೆ ನೀಡಲಾಗಿತ್ತು. ಆದರೆ, ISM 2.0 ಅಡಿಯಲ್ಲಿ ಚಿಪ್ ತಯಾರಿಕೆಗೆ ಬೇಕಾಗುವ ಅನಿಲಗಳು (gases), ಇಂಗುಗಳು (ingots) ಹಾಗೂ ಇತರ ಕಚ್ಚಾ ವಸ್ತುಗಳನ್ನು ಪೂರೈಸುವ ದೇಶೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSMEs) ಜಾಗತಿಕ ಮಟ್ಟಕ್ಕೆ ಬೆಳೆಸಲು ನಿರ್ಧರಿಸಲಾಗಿದೆ.

ಚಿಪ್ ವಿನ್ಯಾಸ (Chip Design): ಭಾರತದಲ್ಲೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು (Intellectual Property Rights) ಉಳಿಸಿಕೊಳ್ಳುವಂತಹ ದೇಶೀಯ ಚಿಪ್ ವಿನ್ಯಾಸ ಕಂಪನಿಗಳಿಗೆ ಸರ್ಕಾರ ವಿಶೇಷ ಪ್ರೋತ್ಸಾಹ ನೀಡಲಿದೆ.

ಸಬ್ಸಿಡಿ ದರದಲ್ಲಿ ಬದಲಾವಣೆ: ಮೊದಲ ಹಂತದಲ್ಲಿ (ISM 1.0) ಚಿಪ್ ಫ್ಯಾಬ್ರಿಕೇಶನ್ ಮತ್ತು ಪ್ಯಾಕೇಜಿಂಗ್ ಘಟಕಗಳಿಗೆ ಸರ್ಕಾರ ಶೇ. 50 ರಷ್ಟು ಧನಸಹಾಯ (Incentive) ನೀಡುತ್ತಿತ್ತು. ಆದರೆ, ಎರಡನೇ ಹಂತದಲ್ಲಿ ಇದನ್ನು ಶೇ. 30 ಕ್ಕೆ ಇಳಿಸಲು ಸರ್ಕಾರ ಯೋಜಿಸುತ್ತಿದೆ.

ಇದನ್ನೂ ಓದಿ: SpaceXAIಗೆ ಜನ ಬೇಕಿದ್ದಾರೆ; ಎಐ ಪರಿಣತಿ ಬೇಕಿಲ್ಲವಂತೆ; ಇಲಾನ್ ಮಸ್ಕ್ ಬಯಸುತ್ತಿರೋದು ಎಂಥವರನ್ನು?

ಡಿಸೆಂಬರ್ 2021 ರಲ್ಲಿ 76,000 ಕೋಟಿ ರೂ ವೆಚ್ಚದಲ್ಲಿ ಈ ಮಿಷನ್ ಪ್ರಾರಂಭವಾಗಿತ್ತು. ಇದುವರೆಗೆ ಗುಜರಾತ್‌ನ ಸಾನಂದ್‌ನಲ್ಲಿ ಮೈಕ್ರಾನ್ ತಂತ್ರಜ್ಞಾನದ 2.75 ಬಿಲಿಯನ್ ಡಾಲರ್ ವೆಚ್ಚದ ಘಟಕ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ತೈವಾನ್‌ನ PSMC ಜಂಟಿ ಸಹಭಾಗಿತ್ವದ ಧೋಲೇರಾ ಫ್ಯಾಬ್ ಸೇರಿದಂತೆ ಒಟ್ಟು 12 ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ.

12 ವರ್ಷದ ಸೆಮಿಕಂಡಕ್ಟರ್ ಮಿಷನ್​ನಿಂದ ಏನು ಪ್ರಯೋಜನ?

ಮೊದಲ ಸೆಮಿಕಂಡಕ್ಟರ್ ಮಿಷನ್ ಐದು ವರ್ಷದವರೆಗೆ ಮಾತ್ರ ಇರುವುದು. ಈಗ ಎರಡನೇ ಆವೃತ್ತಿಯು 12 ವರ್ಷದವರೆಗೆ ಇರಲಿದೆ. ಈ 12 ವರ್ಷಗಳ ದೀರ್ಘಾವಧಿಯ ನೀತಿಯು ಜಾಗತಿಕ ಚಿಪ್ ತಯಾರಕರಲ್ಲಿ ನಂಬಿಕೆಯನ್ನು ಮೂಡಿಸಲಿದ್ದು, ಭಾರತವು ವಾರ್ಷಿಕವಾಗಿ ಆಮದು ಮಾಡಿಕೊಳ್ಳುವ ಶತಕೋಟಿ ಡಾಲರ್ ಮೌಲ್ಯದ ಸೆಮಿಕಂಡಕ್ಟರ್‌ಗಳನ್ನು ದೇಶದಲ್ಲೇ ತಯಾರಿಸಲು ಮತ್ತು 2030 ರ ವೇಳೆಗೆ ಭಾರತೀಯ ಚಿಪ್ ಮಾರುಕಟ್ಟೆಯನ್ನು $100-$110 ಬಿಲಿಯನ್‌ಗೆ ಕೊಂಡೊಯ್ಯಲು ಇದು ದಾರಿಯಾಗಲಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಫೋನ್ ಖರೀದಿಸಿ, ಇಎಂಐ ಕಟ್ಟೋಕಾಗ್ತಿಲ್ವಾ? ಸಾಲಗಾರರು ನಿಮ್ಮ ಫೋನ್ ಲಾಕ್ ಮಾಡಬಹುದಾ? ಆರ್​ಬಿಐ ಬಳಿ ಪ್ರಸ್ತಾಪ

ಸೆಮಿಕಂಡಕ್ಟರ್ ಚಿಪ್ ಡಿಸೈನ್ ಹಂತದವರೆಗೆ ಭಾರತೀಯರು ಪರಿಣಿತಿ ಮತ್ತು ಕೌಶಲ್ಯ ಹೊಂದಿದ್ದಾರೆ. ಆದರೆ, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಆಳಕ್ಕೆ ಹೋದಂತೆಲ್ಲಾ ಭಾರತದ ಕೊರತೆ ಎದ್ದುಗಾಣುತ್ತಾ ಹೋಗುತ್ತದೆ. ಎಂಜಿನಿಯರಿಂಗ್ ಜೊತೆಗೆ ಹೆಚ್ಚುವರಿ ಕೌಶಲ್ಯ ನೀಡುವ ವ್ಯವಸ್ಥೆಯ ನಿರ್ಮಾಣ, ಫೋಟೋಮಾಸ್ಕ್, ಅಲ್ಟ್ರಾಪ್ಯೂರ್ ಪ್ರೋಸಸ್ ಕೆಮಿಕಲ್ ಫೋಟೋರೆಸಿಸ್ಟ್​ಗಳು, ಎಚೆಂಟ್​ಗಳು ಇತ್ಯಾದಿಗಳನ್ನು ಒದಗಿಸುವ ಒಂದೂ ಭಾರತೀಯ ಕಂಪನಿಗಳಿಲ್ಲ. ಅಲ್ಲದೇ, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಈಗಾಗಲೇ ಪೈಪೋಟಿ ಶುರುವಾಗಿದೆ. ಅಮೆರಿಕ, ಚೀನಾ ಮತ್ತು ತೈವಾನ್ ಪಾರಮ್ಯವೇ ಮುಂದುವರಿದಿದೆಯಾದರೂ, ಯೂರೋಪ್, ಜಪಾನ್, ಸೌತ್ ಕೊರಿಯಾ ದೇಶಗಳೂ ಕೂಡ ದೇಶೀಯವಾಗಿ ಚಿಪ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿವೆ. ಇವುಗಳೊಂದಿಗೆ ಭಾರತ ಪೈಪೋಟಿ ನಡೆಸಬೇಕಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

FIFA ವಿಶ್ವಕಪ್ 2026 ರ ಬಹುಮಾನ ಪ್ರಕಟ: ವಿಜೇತರಿಗೆ 481 ಕೋಟಿ..! ಉಳಿದವರಿಗೆ? – Kannada News | ಐಸಿಸಿ ಮಹಿಳಾ ಟಿ20 ವಿಶ್ವಕಪ್‌ 2026 FIFA World Cup 2026: New Format, Hosts, and Record Prize Money Revealed!

2026 ರ ಫಿಫಾ ವಿಶ್ವಕಪ್ (FIFA World Cup 2026) ಇದೇ ಜೂನ್ 11, 2026 ರಿಂದ ಜುಲೈ 19, 2026 ರವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಮೂರು ದೇಶಗಳು ಜಂಟಿಯಾಗಿ ಈ ಪಂದ್ಯಾವಳಿಯನ್ನು ಆಯೋಜಿಸುತ್ತಿವೆ. ಈ ಪಂದ್ಯಾವಳಿ ಕೆನಡಾ, ಮೆಕ್ಸಿಕೊ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿದೆ. ಅದರಂತೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ 11, ಮೆಕ್ಸಿಕೊದಲ್ಲಿ ಮೂರು ಮತ್ತು ಕೆನಡಾದಲ್ಲಿ ಎರಡು ಸೇರಿದಂತೆ ಒಟ್ಟು 16 ನಗರಗಳು ಪಂದ್ಯಗಳನ್ನು ಆಯೋಜಿಸುತ್ತವೆ. ಫೈನಲ್ ಪಂದ್ಯವು ಜುಲೈ 19, 2026 ರಂದು ನ್ಯೂಯಾರ್ಕ್-ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಬಾರಿಯ ವಿಶೇಷವೇನು?

ಈ ಬಾರಿಯ ಫಿಫಾ ವಿಶ್ವಕಪ್​ನ ವಿಶೇಷತೆ ಏನೆಂದರೆ, ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 32 ತಂಡಗಳು ಭಾಗವಹಿಸುತ್ತಿದ್ದ ಈ ಪಂದ್ಯಾವಳಿಯಲ್ಲಿ ಈ ಬಾರಿ 48 ತಂಡಗಳು ಕಣಕ್ಕಿಳಿಯಲಿವೆ. ಇದರ ಜೊತೆಗೆ ಸ್ವರೂಪವನ್ನು ಸಹ ಬದಲಾಯಿಸಲಾಗಿದೆ. 48 ತಂಡಗಳನ್ನು ತಲಾ 4 ತಂಡಗಳ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು, ಜೊತೆಗೆ ಮೂರನೇ ಸ್ಥಾನ ಪಡೆದ ಎಂಟು ಅತ್ಯುತ್ತಮ ತಂಡಗಳು 32 ರ ಸುತ್ತಿಗೆ ಮುನ್ನಡೆಯುತ್ತವೆ. ತಂಡಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಪಂದ್ಯಗಳ ಸಂಖ್ಯೆಯೂ ಹೆಚ್ಚಾಗಿದ್ದು, ಈ ಬಾರಿಯ ಪಂದ್ಯಾವಳಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ.

ಬಹುಮಾನದ ಮೊತ್ತದಲ್ಲಿ ದಾಖಲೆಯ ಏರಿಕೆ

ಈ ವರ್ಷ ಫಿಫಾ ಬಹುಮಾನದ ಹಣವನ್ನು ಗಣನೀಯವಾಗಿ ಹೆಚ್ಚಿಸಿದೆ. ಒಟ್ಟು US$655 ಮಿಲಿಯನ್ (ಸುಮಾರು 6300 ಕೋಟಿ ರೂ.) ಮೊತ್ತವನ್ನು 48 ತಂಡಗಳ ನಡುವೆ ಹಂಚಲಾಗುತ್ತದೆ. ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಬಹುಮಾನದ ಮೊತ್ತದಲ್ಲಿ ಸುಮಾರು 50% ಹೆಚ್ಚಳವಾಗಿದೆ.

ಯಾವ ತಂಡಕ್ಕೆ ಎಷ್ಟು ಹಣ ಸಿಗುತ್ತದೆ?

  • ಚಾಂಪಿಯನ್ ತಂಡ: ಸುಮಾರು 481 ಕೋಟಿ ರೂ.
  • ರನ್ನರ್ ಅಪ್: ಸುಮಾರು 317 ಕೋಟಿ ರೂ.
  • 3ನೇ ಸ್ಥಾನ: ಸುಮಾರು 279 ಕೋಟಿ ರೂ.
  • 4ನೇ ಸ್ಥಾನ: ಸುಮಾರು 259 ಕೋಟಿ ರೂ.
  • 5 ರಿಂದ 8 ನೇ ಶ್ರೇಯಾಂಕಿತ ತಂಡಗಳು: ಸುಮಾರು 182 ಕೋಟಿ ರೂ.
  • 9 ರಿಂದ 16 ನೇ ಸ್ಥಾನದಲ್ಲಿರುವ ತಂಡಗಳು: ಸುಮಾರು 144 ಕೋಟಿ ರೂ.
  • 17 ರಿಂದ 32 ನೇ ಸ್ಥಾನದಲ್ಲಿರುವ ತಂಡಗಳು: ಸುಮಾರು 105 ಕೋಟಿ ರೂ.
  • 33 ರಿಂದ 48 ನೇ ಸ್ಥಾನ: ಸುಮಾರು 86 ಕೋಟಿ ರೂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವರ್ಷವೇ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್ ಮದುವೆ? ಜೋರಾಗಿದೆ ಗಾಸಿಪ್ – Kannada News | Anirudh Ravichander Kavya Maran reportedly tying the knot later this year

ಸಿನಿಮಾ ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅನಿರುದ್ಧ್ ರವಿಚಂದರ್ (Anirudh Ravichander) ಮತ್ತು ಐಪಿಎಲ್ ಫ್ರಾಂಚೈಸ್ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ (Kavya Maran) ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಟಾಲಿವುಡ್, ಕಾಲಿವುಡ್ ಹಾಗೂ ಕ್ರಿಕೆಟ್ ವಲಯಗಳಲ್ಲಿ ವೈರಲ್ ಆಗಿದೆ. ಕಳೆದ ಕೆಲವು ದಿನಗಳಿಂದ ಅವರ ಸಂಬಂಧ ಮತ್ತು ವಿವಾಹದ ಬಗ್ಗೆ ಅನೇಕ ಅಂತೆ-ಕಂತೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈಗ ಮತ್ತೆ ಗಾಸಿಪ್ ಜೋರಾಗಿದೆ.

ಕಾಲಿವುಡ್ ಮಾಧ್ಯಮದ ಇತ್ತೀಚಿನ ವರದಿಗಳ ಪ್ರಕಾರ, ಇಬ್ಬರೂ ಈ ವರ್ಷದ ದ್ವಿತೀಯಾರ್ಧದಲ್ಲಿ ಮದುವೆಯಾಗಲು ಪ್ಲ್ಯಾನ್ ಮಾಡುತ್ತಿದ್ದಾರೆ. ಅಲ್ಲದೇ, ಶೀಘ್ರದಲ್ಲೇ ಎರಡೂ ಕುಟುಂಬಗಳಿಂದ ಅಧಿಕೃತ ಘೋಷಣೆ ಬರುವ ಸಾಧ್ಯತೆಯಿದೆ ಎಂಬ ಊಹಾಪೋಹಗಳು ಹರಡಿವೆ. ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹೊಸದೇನಲ್ಲ.

ಕಳೆದ ವರ್ಷ ಜೂನ್‌ನಿಂದ ಎಕ್ಸ್ ಮತ್ತು ರೆಡ್ಡಿಟ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇಬ್ಬರ ಡೇಟಿಂಗ್ ವದಂತಿಗಳು ಹರಿದಾಡುತ್ತಿವೆ. ಲಾಸ್ ವೇಗಸ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಅಲ್ಲಿ ಅವರು ಡಿನ್ನರ್ ಡೇಟ್‌ಗಳನ್ನು ಆನಂದಿಸುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಇದಲ್ಲದೇ, ಕಾವ್ಯಾ ಮಾರನ್ ಅವರ ತಂದೆ ಮತ್ತು ಮಾಧ್ಯಮ ದೊರೆ ಕಲಾನಿಧಿ ಮಾರನ್ ಒಡೆತನದ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅನಿರುದ್ಧ್ ಹಲವಾರು ದೊಡ್ಡ ಚಿತ್ರಗಳಿಗೆ ಸಂಗೀತ ನೀಡುತ್ತಿದ್ದಾರೆ. ವದಂತಿಗೆ ಇದು ಹೆಚ್ಚಿನ ಬಲವನ್ನು ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಸುದ್ದಿಯೆಂದರೆ ಅನಿರುದ್ಧ್ ರವಿಚಂದರ್ ಅವರ ಸಂಬಂಧಿ, ಸೂಪರ್‌ಸ್ಟಾರ್ ರಜನಿಕಾಂತ್ ಅವರು ಈ ಮದುವೆಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ. ರಜನಿಕಾಂತ್ ಅವರೇ ಕಲಾನಿಧಿ ಮಾರನ್ ಅವರೊಂದಿಗೆ ಮಾತನಾಡಿ ಈ ಜೋಡಿಯನ್ನು ಆಶೀರ್ವದಿಸುವಂತೆ ಕೇಳಿಕೊಂಡಿದ್ದಾರೆ ಮತ್ತು ಎರಡೂ ಕಡೆಯ ಹಿರಿಯರು ಮದುವೆಗೆ ಬಹುತೇಕ ಹಸಿರು ನಿಶಾನೆ ತೋರಿಸಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಆದಾಗ್ಯೂ, ಈ ಕುಟುಂಬಗಳ ಸದಸ್ಯರು ಈ ವಿಷಯಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: ಕನ್ನಡದಲ್ಲಿ ಯಾವ ಮ್ಯೂಸಿಕ್ ಡೈರೆಕ್ಟರ್​ಗಳೂ ಕೇಳದಷ್ಟು ಸಂಭಾವನೆ ಪಡೆದ ಅನಿರುದ್ಧ್ ರವಿಚಂದರ್

ಪ್ರಸ್ತುತ, ಕಾವ್ಯಾ ಮತ್ತು ಅನಿರುದ್ಧ್ ಅವರು ತಮ್ಮ ವೃತ್ತಿಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ. ಅನಿರುದ್ಧ್ ಅವರು ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಾರೆ. ‘ಜೈಲರ್ 2’, ‘ಜನ ನಾಯಗನ್’, ‘ಕಿಂಗ್’ ರೀತಿಯ ದೊಡ್ಡ ಚಿತ್ರಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ, ಕಾವ್ಯಾ ಮಾರನ್ ಅವರು ಉದ್ಯಮಿಯಾಗಿ ಬ್ಯುಸಿಯಾಗಿದ್ದಾರೆ. ಇವರ ಮದುವೆಯ ಗಾಸಿಪ್ ನಿಜವಾಗುತ್ತೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹುಡ್ಗಿ ಆಯಸ್ಸು ಗಟ್ಟಿ: ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯ ರಕ್ಷಣೆ, ಪೊಲೀಸ್- ಅಗ್ನಿ ಶಾಮಕ ಸಿಬ್ಬಂದಿಗೆ ಸೆಲ್ಯೂಟ್ – Kannada News | Fire service personnel and policemen saved a 16 year old girl who jump from building in NRI Layout bengaluru

ಬೆಂಗಳೂರು, (ಮೇ 21): ಹೊಯ್ಸಳ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಮಯ ಪ್ರಜ್ಞೆ ಬಾಲಕಿ (Girl) ಜೀವ ಉಳಿದಿದೆ. ಇನ್ನೇನು ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು 16 ವರ್ಷದ ಬಾಲಕಿ ರಕ್ಷಣೆಯನ್ನು ರಕ್ಷಣೆ ಮಾಡಿಲಾಗಿದೆ. ಹೌದು…ಬೆಂಗಳೂರಿನ (Bengaluru) NRI ಲೇಔಟ್​ನ ಅಪಾರ್ಟ್​ಮೆಂಟ್​ನ 5ನೇ ಮಹಡಿ ಹತ್ತಿದ್ದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಸ್ಥಳಕ್ಕೆ ಹೊಯ್ಸಳ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಅನಾಯಸವಾಗಿ ಹೋಗುತ್ತಿದ್ದ ಒಂದು ಜೀವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಐದನೇ ಮಹಡಿ ಮೇಲೆ ಬಾಲಕಿಯನ್ನು ರಕ್ಷಿಸುತ್ತಿದ್ದಂತಯೇ ಇತ್ತ ಕೆಳಗೆ ಏನಾಗುತ್ತೋ ಎಂದು ಆತಂಕದಲ್ಲಿದ್ದ ಸಾರ್ವಜನಿಕರು ಶಿಳ್ಳೆ, ಚಪ್ಪಾಳೆ ತಟ್ಟಿ ನಿಟ್ಟುಸಿರುಬಿಟ್ಟರು.

ಮಖ್ಯಾಂಶಗಳು

  • ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿ 16 ವರ್ಷದ ಬಾಲಕಿ ರಕ್ಷಣೆ
  • ಕಟ್ಟಡದ ಮೇಲಿಂದ ಜಂಪ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ
  • NRI ಲೇಔಟ್​ನ ಅಪಾರ್ಟ್​ಮೆಂಟ್​ನ 5ನೇ ಮಹಡಿ ಹತ್ತಿದ್ದ ಬಾಲಕಿ
  • ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಜೋರಾಗಿ ಕೂಗಿ ಹೇಳಿದ್ದ ಬಾಲಕಿ
  • ಕೂಡಲೇ 112ಗೆ ಕರೆ ಮಾಡಿದ್ದ ಮಾಹಿತಿ ನೀಡಿದ್ದ ಸಾರ್ವಜನಿಕರು
  • ಸ್ಥಳಕ್ಕೆ ಆಗಮಿಸಿದ ಹೊಯ್ಸಳ, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

16 ವರ್ಷದ ಬಾಲಕಿಯೋರ್ವಳು ಬೆಂಗಳೂರಿನ NRI ಲೇಔಟ್​ನ ಅಪಾರ್ಟ್​ಮೆಂಟ್​ನ 5ನೇ ಮಹಡಿ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಜೋರಾಗಿ ಕೂಗಿ ಹೇಳಿದ್ದಾಳೆ. ಬಾಲಕಿಯ ಧ್ವನಿ ಕೇಳುತ್ತಿದ್ದಂತೆಯೇ ಸ್ಥಳೀಯರು ಕೂಡಲೇ ಕೂಡಲೇ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಹೊಯ್ಸಳ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿ ಹರಸಹಾಸೊಟ್ಟು ಬಾಲಕಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Tv9 Kannada News Live: ನೆಲಕ್ಕಪ್ಪಳಿಸಿದ ವಿಮಾನದ ಹಿಂಭಾಗ; ರಾಜ್ಯದಲ್ಲಿ ಭಾರಿ ಮಳೆ; ಈ ಹೊತ್ತಿನ ಪ್ರಮುಖ ಸುದ್ದಿಗಳು

ರಕ್ಷಣೆಯ ರೋಚಕ ವಿಡಿಯೋ ಹಂಚಿಕೊಂಡ ಪೂರ್ವ ಡಿಸಿಪಿ

ಇನ್ನು ಈ ಬಗ್ಗೆ ಬೆಂಗಳೂರಿನ ಪೂರ್ವ ಡಿಸಿಪಿ ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿ ರಕ್ಷಣೆಯ ವಿಡಿಯೋ ಹಂಚಿಕೊಂಡಿದ್ದು, ಈ ದಿನ ಪೂರ್ವ ವಿಭಾಗದ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 16 ವರ್ಷದ ಯುವತಿಯೊಬ್ಬಳು 5 ಅಂತಸ್ತಿನ ಕಟ್ಟಡದ ಮೇಲಿನಿಂದ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ, ರಾಮಮೂರ್ತಿನಗರ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದಿಂದ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರ ಸಹಾಯದೊಂದಿಗೆ ಬಾಲಕಿಯನ್ನು ರಕ್ಷಿಸಿದ ಸಿಬ್ಬಂದಿ, ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಿದರು. ಆದ್ರೆ, ಬಾಲಕಿ ಏಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಇನ್ನು ಇಲ್ಲಿ  ಹೊಯ್ಸಳ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಮಯ ಪ್ರಜ್ಞೆಯನ್ನು ಮೆಚ್ಚಲೇಬೇಕು. ಯಾಕಂದ್ರೆ, ಇನ್ನೇನು ಸ್ವಲ್ಪ ತಡವಾಗಿದ್ದರೂ ಬಾಲಕಿ ಬಿದ್ದು ಜೀವ ಕಳೆದುಕೊಳ್ಳುತ್ತಿದ್ದಳು.

ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಬಾಲಕಿಯ ಜೀವ ಹೋಗಿಬಿಡೋದು. ಆದ್ರೆ, ಬಾಲಕಿಯ ಆಯಸ್ಸು ಗಟ್ಟಿ ಇದೆ ಅನ್ಸುತ್ತೆ.   ಸಾವಿನ ದವಡೆಯಿಂದ ಪಾರಾಗಿದ್ದಾಳೆ.

Published On – 6:35 pm, Thu, 21 May 26

Source link