Category Archives: Blog

Your blog category

ರೂಪ ಬದಲಿಸಿಕೊಂಡು ಭಾರತದಲ್ಲಿ ದಾಳಿಗೆ ಉಗ್ರರ ಸಂಚು, ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಕಾಸ್ಮೆಟಿಕ್ ಮೇಕ್ ಓವರ್ – Kannada News | Terror Surveillance Intensifies Over Reports of Identity Masking Tactics in India

ನವದೆಹಲಿ, ಮೇ 20: ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಮತ್ತು ಸ್ಲೀಪರ್ ಸೆಲ್ ಸ್ಥಾಪಿಸಲು ಪಾಕಿಸ್ತಾನದಿಂದ ನುಸುಳಿ ಬಂದಿದ್ದ ಲಷ್ಕರ್-ಎ-ತೊಯ್ಬಾ (LeT) ಉಗ್ರನೊಬ್ಬನ ಕರಾಳ ಮಿಷನ್ ಕೊನೆಗೂ ವಿಫಲಗೊಂಡಿದೆ. ಆದರೆ, ಆತನ ಮಿಷನ್ ವಿಫಲವಾಗಲು ಕಾರಣ ಭಾರತೀಯ ಸೇನೆಯಲ್ಲ, ಬದಲಿಗೆ ಆತನಿಗೆ ಕಾಡುತ್ತಿದ್ದ ಕೂದಲು ಉದುರುವಿಕೆ ಸಮಸ್ಯೆ ಮತ್ತು ಸುಂದರವಾಗಿ ಕಾಣಬೇಕೆಂಬ ಗೀಳು.

ಮಿಷನ್ ಬಿಟ್ಟು ಕೂದಲು ಕಸಿಗೆ ಮುಂದಾದ ಉಗ್ರ ಉಸ್ಮಾನ್ ಜಟ್
ಭಾರತದಲ್ಲಿ ಭೀಕರ ವಿಧ್ವಂಸಕ ಕೃತ್ಯಕ್ಕೆ ಸ್ಲೀಪರ್ ಸೆಲ್ ಸ್ಥಾಪಿಸುವ ದೊಡ್ಡ ಜವಾಬ್ದಾರಿಯೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಲಷ್ಕರ್ ಉಗ್ರ ಉಸ್ಮಾನ್ ಜಟ್ ಅಲಿಯಾಸ್ ಚೈನೀಸ್ ಯಶಸ್ವಿಯಾಗಿ ನುಸುಳಿದ್ದ. ಭಾರತದ ದೈನಂದಿನ ಶಾಂತಿಯುತ ಜೀವನವನ್ನು ಕಂಡ ತಕ್ಷಣ ಆತನ ಉತ್ಸಾಹ ಕುಸಿದುಹೋಗಿತ್ತು. ಇದೇ ಸಮಯದಲ್ಲಿ ಆತನಿಗೆ ತನ್ನ ತಲೆಯ ಕೂದಲು ಉದುರುತ್ತಿರುವುದು ದೊಡ್ಡ ಚಿಂತೆಯಾಗಿ ಕಾಡಲಾರಂಭಿಸಿತು.

ಕೂದಲು ಉದುರುವಿಕೆಯಿಂದ ತನ್ನ ವೈಯಕ್ತಿಕ ಆತ್ಮವಿಶ್ವಾಸ ಮತ್ತು ಸ್ವಾಭಿಮಾನಕ್ಕೆ ತೀವ್ರ ಹಾನಿಯಾಗಿದೆ ಎಂದು ಒಪ್ಪಿಕೊಂಡ ಆತ, ತನಗೆ ಒಪ್ಪಿಸಿದ್ದ ದೇಶದ್ರೋಹದ ಮಹಾ ಮಿಷನ್ ಅನ್ನೇ ಬದಿಗಿಟ್ಟು, ಕೂದಲು ಕಸಿ (Hair Transplantation) ಚಿಕಿತ್ಸೆಗಾಗಿ ಶ್ರೀನಗರದ ವೈದ್ಯಕೀಯ ಚಿಕಿತ್ಸಾಲಯಕ್ಕೆ ದಾಖಲಾಗಿದ್ದ. ಅಲ್ಲಿಯೇ ಈತನನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ದಂತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮತ್ತೊಬ್ಬ ಉಗ್ರ
ಬಾಂಗ್ಲಾದೇಶದಲ್ಲಿ ಲಷ್ಕರ್ ಸೆಲ್ ಸ್ಥಾಪಿಸುತ್ತಿದ್ದ ಶಬ್ಬೀರ್ ಅಹ್ಮದ್ ಲೋನ್ ಎಂಬಾತನನ್ನು ಮಾರ್ಚ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ಈತ ಎಐ (AI) ಶೃಂಗಸಭೆಗೆ ಮುಂಚಿತವಾಗಿ ದೆಹಲಿಯಲ್ಲಿ ಪ್ರಚೋದನಕಾರಿ ಪೋಸ್ಟರ್‌ಗಳನ್ನು ಅಂಟಿಸಲು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಿಂದ ಸದಸ್ಯರನ್ನು ನೇಮಕ ಮಾಡಿಕೊಂಡಿದ್ದ. ತನಿಖೆಯ ವೇಳೆ ಈತ ತನಿಖಾ ಸಂಸ್ಥೆಗಳ ಕಣ್ತಪ್ಪಿಸಲು ಗುರುಗ್ರಾಮದಲ್ಲಿ ಖಾಸಗಿ ಚಿಕಿತ್ಸಾಲಯದಲ್ಲಿ ದಂತ ಶಸ್ತ್ರಚಿಕಿತ್ಸೆಯನ್ನು (Dental Surgery) ಮಾಡಿಸಿಕೊಂಡಿದ್ದ ಎಂಬ ವಿವರಗಳು ಪೊಲೀಸರು ಶೀಘ್ರದಲ್ಲೇ ಸಲ್ಲಿಸಲಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಇದು ಕೇವಲ ಸೌಂದರ್ಯದ ಗೀಳಲ್ಲ, ಎಐ ಕಣ್ಣು ತಪ್ಪಿಸುವ ರಣತಂತ್ರ
ಭಯೋತ್ಪಾದಕರು ಈ ರೀತಿ ಮೇಕ್ ಓವರ್ ಮಾಡಿಕೊಳ್ಳುತ್ತಿರುವುದರ ಹಿಂದೆ ಕೇವಲ ಸೌಂದರ್ಯದ ಹಪಾಹಪಿ ಮಾತ್ರವಿಲ್ಲ, ಬದಲಿಗೆ ಜಾಗತಿಕ ವಿಮಾನ ನಿಲ್ದಾಣಗಳು ಮತ್ತು ಸಾರಿಗೆ ಕೇಂದ್ರಗಳಲ್ಲಿ ನಿಯೋಜಿಸಲಾದ ಕೃತಕ ಬುದ್ಧಿಮತ್ತೆ (AI) ಆಧಾರಿತ ಬಯೋಮೆಟ್ರಿಕ್ ಮುಖ ಗುರುತಿಸುವಿಕೆ ಸಾಫ್ಟ್‌ವೇರ್ ಅನ್ನು ವಿಫಲಗೊಳಿಸುವ ಉದ್ದೇಶಪೂರ್ವಕ ಪ್ರಯತ್ನವೂ ಅಡಗಿದೆ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಈ ಆಧುನಿಕ ಎಐ ಅಲ್ಗಾರಿದಮ್‌ಗಳು ಕೇವಲ ಫೋಟೋವನ್ನು ನೋಡುವುದಿಲ್ಲ, ಅವು ವ್ಯಕ್ತಿಯ ಕಣ್ಣುಗಳು, ಮೂಗಿನ ಸೇತುವೆ, ದವಡೆಯ ರೇಖೆ ಮತ್ತು ಹಣೆಯ ಗಡಿಯ ನಡುವಿನ ನಿಖರವಾದ, ಸ್ಥಿರ ಅಂತರವನ್ನು ನಕ್ಷೆ ಮಾಡುತ್ತವೆ.

26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಸಾಜಿದ್ ಮಿರ್​ನ ಹಾದಿಯನ್ನೇ ಈ ಉಗ್ರರು ಹಿಡಿದಿದ್ದಾರೆ. ವರ್ಷಗಳ ಹಿಂದೆ ಸಾಜಿದ್ ಮಿರ್ ಮತ್ತು ಕಾರ್ಲೋಸ್ ದಿ ಜಾಕಲ್ ಇಬ್ಬರೂ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗಳಿಗೆ (Plastic Surgery) ಒಳಗಾಗುವ ಮೂಲಕ ತಮ್ಮ ಗುರುತನ್ನೇ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Mosques: ವಿಶ್ವದ ಅತಿ ಹೆಚ್ಚು ಮಸೀದಿಗಳಿರುವ ದೇಶಗಳಲ್ಲಿ ಭಾರತಕ್ಕೆ 2ನೇ ಸ್ಥಾನ;ಪಾಕಿಸ್ತಾನ, ಬಾಂಗ್ಲಾಗಳಿಗಿಂತ ಭಾರತವೇ ಮುಂದು! – Kannada News | India Ranks 2nd Globally in Mosques: Celebrating Eid Al Adha with Rich Heritage and Diversity

ಜಾಗತಿಕ ಮಸೀದಿಗಳ ಗಣತಿImage Credit source: Pinterest

ಈದ್-ಉಲ್-ಅದ್ಹಾ (ಬಕ್ರೀದ್) ಹಬ್ಬದ ಸಂಭ್ರಮ ದೇಶಾದ್ಯಂತ ಕಳೆಗಟ್ಟುತ್ತಿದೆ. ಸಾಮಾನ್ಯವಾಗಿ ಇಸ್ಲಾಮಿಕ್ ಸಂಸ್ಕೃತಿ ಅಥವಾ ಮುಸ್ಲಿಂ ಜನಸಂಖ್ಯೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ಬಂದಾಗ, ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಮಧ್ಯಪ್ರಾಚ್ಯ (ಗಲ್ಫ್) ದೇಶಗಳ ಹೆಸರುಗಳು ಮುಂಚೂಣಿಗೆ ಬರುತ್ತವೆ. ಆದರೆ ಜಾಗತಿಕ ಅಂಕಿ-ಅಂಶಗಳು ಒಂದು ರೋಚಕ ಸತ್ಯವನ್ನು ಬಹಿರಂಗಪಡಿಸಿವೆ. ವಿಶ್ವದಲ್ಲೇ ಅತಿ ಹೆಚ್ಚು ಮಸೀದಿಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಅಚ್ಚರಿಯ ವಿಷಯವೆಂದರೆ, ಮುಸ್ಲಿಂ ಬಹುಸಂಖ್ಯಾತ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗಿಂತಲೂ ಭಾರತ ಈ ಪಟ್ಟಿಯಲ್ಲಿ ಸಾಕಷ್ಟು ಮುಂದಿದೆ.

ಜಾಗತಿಕ ಮಟ್ಟದಲ್ಲಿ ಇಂಡೋನೇಷ್ಯಾಕ್ಕೆ ಮೊದಲ ಸ್ಥಾನ:

ರಾಷ್ಟ್ರೀಯ ಮಸೀದಿ ಮಾಹಿತಿ ಪೋರ್ಟಲ್ (Simas) ಪ್ರಕಾರ, ಜಗತ್ತಿನಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಇಂಡೋನೇಷ್ಯಾ, ಮಸೀದಿಗಳ ಸಂಖ್ಯೆಯಲ್ಲೂ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಜುಲೈ 2025 ರ ಅಂಕಿ-ಅಂಶಗಳ ಪ್ರಕಾರ ಸರಿಸುಮಾರು 7,44,000 ಒಟ್ಟು ನೋಂದಾಯಿತ ಮಸೀದಿಗಳಿವೆ.

ಪ್ರಮುಖ ಆಕರ್ಷಣೆ:

ಜಕಾರ್ತಾದಲ್ಲಿರುವ ಭವ್ಯ ಇಸ್ತಿಕ್ಲಾಲ್ ಮಸೀದಿ. ಇದು ಇಂಡೋನೇಷ್ಯಾದ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಐಕ್ಯತೆಯ ಸಂಕೇತವಾಗಿದ್ದು, ಇದರ ಅದ್ಭುತ ವಾಸ್ತುಶಿಲ್ಪವನ್ನು ವೀಕ್ಷಿಸಲು ವಿಶ್ವದಾದ್ಯಂತ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ.

ಎರಡನೇ ಸ್ಥಾನದಲ್ಲಿ ಭಾರತ:

ಭಾರತವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಲ್ಲದಿದ್ದರೂ, ಇಲ್ಲಿ 20 ಕೋಟಿಗೂ ಹೆಚ್ಚು ಮುಸ್ಲಿಂ ಧರ್ಮೀಯರು ವಾಸಿಸುತ್ತಿದ್ದಾರೆ. ಈ ಆಳವಾದ ಸಾಂಸ್ಕೃತಿಕ ಪರಂಪರೆಯು ದೇಶದ ಧಾರ್ಮಿಕ ಮೂಲಸೌಕರ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಭಾರತದಲ್ಲಿ ಸುಮಾರು 3,00,000 ಸಕ್ರಿಯ ಮಸೀದಿಗಳಿವೆ. ಭಾರತದಲ್ಲಿರುವ ಮಸೀದಿಗಳು ತಮ್ಮ ವೈವಿಧ್ಯಮಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿವೆ. ಪ್ರಮುಖ ನಗರಗಳಲ್ಲಿರುವ ಮೊಘಲ್ ಕಾಲದ ಭವ್ಯ ಸ್ಮಾರಕಗಳಿಂದ ಹಿಡಿದು ಗ್ರಾಮೀಣ ಭಾಗದ ಸರಳ ಪ್ರಾರ್ಥನಾ ಮಂದಿರಗಳವರೆಗೆ, ಇವೆಲ್ಲವೂ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ಪ್ರದರ್ಶಿಸುತ್ತವೆ.

ಇದನ್ನೂ ಓದಿ: ಅನಂತ್ ಅಂಬಾನಿ ಕೈಯಲ್ಲಿದೆ 12 ಕೋಟಿಯ ‘ಶಿವ’ ವಾಚ್; ಈ ವಜ್ರಖಚಿತ ಗಡಿಯಾರದ ವಿಶೇಷತೆ ತಿಳಿದರೆ ಅಚ್ಚರಿ ಪಡುತ್ತೀರಿ!

ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಭಾರತಕ್ಕಿಂತ ಹಿಂದೆ ಇರಲು ಕಾರಣವೇನು?

ಅಧಿಕೃತವಾಗಿ ಮುಸ್ಲಿಂ ರಾಷ್ಟ್ರಗಳಾಗಿದ್ದರೂ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿರುವ ಒಟ್ಟು ಮಸೀದಿಗಳ ಸಂಖ್ಯೆ ಭಾರತಕ್ಕಿಂತ ಕಡಿಮೆಯಿದೆ. ಇದಕ್ಕೆ ತಜ್ಞರು ಪ್ರಮುಖವಾಗಿ ಮೂರು ಕಾರಣಗಳನ್ನು ನೀಡುತ್ತಾರೆ.

  • ವಿಶಾಲವಾದ ಭೌಗೋಳಿಕ ವಿಸ್ತೀರ್ಣ: ಭಾರತದ ಬೃಹತ್ ಭೂಭಾಗವು ವೈವಿಧ್ಯಮಯ ಪ್ರಾದೇಶಿಕ ಸಮುದಾಯಗಳಿಗೆ ಆಶ್ರಯ ನೀಡಿದೆ.
  • ಬೃಹತ್ ಜನಸಂಖ್ಯೆ: ಭಾರತದಲ್ಲಿರುವ ಮುಸ್ಲಿಂ ಜನಸಂಖ್ಯೆಯು ಜಾಗತಿಕವಾಗಿ ಅತಿ ದೊಡ್ಡ ಜನಸಂಖ್ಯಾ ಗುಂಪುಗಳಲ್ಲಿ ಒಂದಾಗಿದೆ.
  • ಐತಿಹಾಸಿಕ ನಿರಂತರತೆ: ಶತಮಾನಗಳ ಅವಧಿಯಲ್ಲಿ ವಿವಿಧ ರಾಜವಂಶಗಳು ನಿರ್ಮಿಸಿದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರಗಳು ಇಂದಿಗೂ ಸಕ್ರಿಯ ಪ್ರಾರ್ಥನಾ ಮಂದಿರಗಳಾಗಿ ಉಳಿದುಕೊಂಡು ಬಂದಿವೆ.

ಬಕ್ರೀದ್ ಹಬ್ಬದ ಸಂಭ್ರಮ:

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಭಾರತದಾದ್ಯಂತ ಇರುವ ಈ 3,00,000ಕ್ಕೂ ಹೆಚ್ಚು ಮಸೀದಿಗಳು ವಿಶೇಷ ಸಾಮೂಹಿಕ ಪ್ರಾರ್ಥನೆಗಾಗಿ ಸಜ್ಜಾಗುತ್ತಿವೆ. ತ್ಯಾಗ, ದಾನ ಮತ್ತು ಮಾನವೀಯತೆಯನ್ನು ಸಾರುವ ಈ ಹಬ್ಬದ ಸಂದರ್ಭದಲ್ಲಿ, ಭಾರತದ ಮಸೀದಿಗಳಲ್ಲಿ ಸೇರುವ ಭಕ್ತರ ಸಾಗರವು ದೇಶದ ವೈವಿಧ್ಯತೆಯಲ್ಲಿ ಏಕತೆಯ ಸಾಂಸ್ಕೃತಿಕ ಸೌಂದರ್ಯವನ್ನು ಜಗತ್ತಿಗೆ ಸಾರಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದು ಪಕ್ಕಾ ಸಿನಿಮೀಯ ವಂಚನೆ! ಡಿಸೈನ್ ಸೆಲೆಕ್ಟ್ ಮಾಡಿ ಫೋಟೋ ತೆಗೆಯೋ ನೆಪದಲ್ಲಿ 3 ಕೋಟಿ ರೂ. ಚಿನ್ನಾಭರಣ ದೋಚಿ ಖದೀಮರು ಪರಾರಿ – Kannada News | Bengaluru Gold Fraud: Cheats Rob Rs 3 Crore Worth 1.85 Kg Gold Jewellery From Mehta Jewellers Manager In Malleshwaram

ಬೆಂಗಳೂರು, ಮೇ 20: ಬೆಂಗಳೂರಿನಲ್ಲಿ (Bengaluru) ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಉದ್ಯಮಿಯೊಬ್ಬರಿಗೆ ಭಾರಿ ವಂಚನೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಈ ಹೈಟೆಕ್ ಕಳ್ಳತನ ನಡೆದಿದ್ದು, ವಂಚಕರು ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ 1 ಕೆಜಿ 850 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ನಗರತ್ ಪೇಟೆಯಲ್ಲಿರುವ ಪ್ರಸಿದ್ಧ ‘ಮೆಹ್ತಾ ಜ್ಯುವೆಲ್ಲರಿ’ ಶಾಪ್ ಮಾಲೀಕರು ಈ ಜಾಲದ ಕೈಗೆ ಸಿಲುಕಿ ಕೋಟಿ ಕೋಟಿ ಮೌಲ್ಯದ ಬಂಗಾರವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಮುಖ್ಯಾಂಶಗಳು

  • ಮಾಹಿ ಎಂಟರ್‌ಪ್ರೈಸಸ್ ಹೆಸರಲ್ಲಿ ವಂಚನೆ ಜಾಲ
  • 3 ಕೆಜಿ ಬಂಗಾರದೊಂದಿಗೆ ಹೋದ ಮ್ಯಾನೇಜರ್
  • ಫೋಟೋ ತೆಗೆಯುವ ನೆಪದಲ್ಲಿ ವಂಚನೆ

ಬೋರ್ಡ್ ಬದಲಾಯಿಸಿ ಖೆಡ್ಡಾಕ್ಕೆ ಕೆಡವಿದ ಖದೀಮರು

ಮೆಹ್ತಾ ಜ್ಯುವೆಲ್ಲರಿ ಮಾಲೀಕರಿಗೆ ಪರೇಶ್ ಸೋನಿ ಎಂಬಾತ ಕರೆ ಮಾಡಿ, ತಮಗೆ ‘ಮಾಹಿ ಎಂಟರ್‌ಪ್ರೈಸಸ್’ ಹೆಸರಿನ ಸಂಸ್ಥೆ ಇದ್ದು, ಹೋಲ್‌ಸೇಲ್ ದರದಲ್ಲಿ ಭಾರಿ ಪ್ರಮಾಣದ ಆಭರಣಗಳು ಬೇಕಾಗಿವೆ ಎಂದು ನಂಬಿಸಿ ಆಫೀಸ್‌ಗೆ ಕರೆಸಿಕೊಂಡಿದ್ದ. ಆತ ತನಗೂ ಮತ್ತು ತನ್ನ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲದ ಮಲ್ಲೇಶ್ವರಂನ ಕಚೇರಿಯೊಂದರ ಬಾಗಿಲಿನ ಮೇಲೆ ‘ಲೋಟಸ್ ಜ್ಯುವೆಲ್ಲರಿ’ ಮತ್ತು ‘ಮಾಹಿ ಎಂಟರ್‌ಪ್ರೈಸಸ್’ ಎಂದು ನಕಲಿ ಬೋರ್ಡ್ ಹಾಕಿ ಈ ವ್ಯವಸ್ಥಿತ ಸಂಚು ರೂಪಿಸಿದ್ದ. ವ್ಯಾಪಾರದ ಆರ್ಡರ್ ದೊಡ್ಡದಿದೆ ಎಂದು ನಂಬಿದ ಜ್ಯುವೆಲ್ಲರಿ ಮ್ಯಾನೇಜರ್, ಮಾಲೀಕರ ಸೂಚನೆಯಂತೆ ಬರೋಬ್ಬರಿ 3 ಕೆಜಿ ಚಿನ್ನಾಭರಣಗಳನ್ನು ತೆಗೆದುಕೊಂಡು ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿದ್ದ ಪರೇಶ್ ಸೋನಿ ಕಚೇರಿಗೆ ಹೋಗಿದ್ದರು. ಮ್ಯಾನೇಜರ್ ಆಭರಣ ತಂದಾಗ, ಅವುಗಳ ವಿನ್ಯಾಸವನ್ನು ಪರಿಶೀಲಿಸುವಂತೆ ನಟಿಸಿ, ಪಕ್ಕದ ಕ್ಯಾಬಿನ್‌ನಲ್ಲಿ ಕುಳಿತಿದ್ದ ತನ್ನ ಸಹಚರ ಚಂದ್ರಶೇಖರ್ ಎಂಬಾತನಿಗೆ ಒಪ್ಪಿಸಿ ಆಭರಣಗಳ ಪಟ್ಟಿ (List) ಸಿದ್ಧಪಡಿಸಲು ಹೇಳಿದ್ದ.

ಆಭರಣಗಳ ಫೋಟೋ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಹೋದ ಆರೋಪಿಗಳು ಅಲ್ಲಿಂದಲೇ ಚಿನ್ನದೊಂದಿಗೆ ನಾಪತ್ತೆಯಾಗಿದ್ದಾರೆ. ಒಳಗೆ ಹೋದವರು ಎಷ್ಟು ಹೊತ್ತಾದರೂ ಬಾರದೇ ಇದ್ದಾಗ ಅನುಮಾನಗೊಂಡು ಮ್ಯಾನೇಜರ್ ಪರಿಶೀಲಿಸಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಳ್ಳತನದ ಆರೋಪಿ 34 ವರ್ಷಗಳ ಬಳಿಕ ಅರೆಸ್ಟ್! ಮೆಡಿಕಲ್ ಬಂದ್ ಸೇರಿ ಈ ಹೊತ್ತಿನ ಪ್ರಮುಖ ಸುದ್ದಿಗಳು

ಸದ್ಯ ಈ ಭಾರಿ ಕಳ್ಳತನ ಕೇಸ್​​​ಗೆ ಸಂಬಂಧಿಸಿದಂತೆ ಶ್ಯಾಮ್, ರಾಮಚಂದ್ರ ಹಾಗೂ ಪರೇಶ್ ಸೋನಿ ಎಂಬುವವರ ವಿರುದ್ಧ ಸಂತ್ರಸ್ತ ಉದ್ಯಮಿ ದೂರು ನೀಡಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

3 ವರ್ಷಗಳ ಬಳಿಕ ಕನ್ನಡಿಗನಿಗೆ ಒಲಿದ ವೈಸ್ ಕ್ಯಾಪ್ಟನ್ ಪಟ್ಟ! – Kannada News | KL Rahul Reclaims Vice Captaincy After 3 Years

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More

Source link

ಅನಿಲ್ ಕಪೂರ್-ಶೋಭಿತಾ ನೋಡಿ ನೈಸ್ ಜೋಡಿ ಎಂದ ಫ್ಯಾನ್ಸ್; ನಟಿಯ ರಿಯಾಕ್ಷನ್ ಏನು?

ಶೋಭಿತಾ ಹಾಗೂ ಅನಿಲ್ ಕಪೂರ್ ಅವರು ಈ ಮೊದಲು ‘ದಿ ನೈಟ್ ಮ್ಯಾನೇಜರ್’ ವೆಬ್ ಸರಣಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅನಿಲ್ ಕಪೂರ್ ಲವರ್ ಆಗಿ ಶೋಭಿತಾ ಮಿಂಚಿದ್ದರು. ಈ ಸರಣಿ ಸಮಯದಲ್ಲಿ ಇಬ್ಬರೂ ಒಟ್ಟಾಗಿ ಪೋಸ್​ ಕೊಟ್ಟ ವಿಡಿಯೋನ ಈಗ ವೈರಲ್ ಮಾಡಲಾಗುತ್ತಿದೆ. ‘ನಿಮ್ಮದು ಬೆಸ್ಟ್ ಜೋಡಿ’ ಎಂದು ಹೇಳಿದ್ದಕ್ಕೆ ಅನಿಲ್ ಹಾಗೂ ಶೋಭಿತಾ ನಕ್ಕಿದ್ದರು. ಈ ಸಮಯದಲ್ಲಿ ಶೋಭಿತಾ ಸೊಂಟವನ್ನು ಅನಿಲ್ ಕಪೂರ್ ಬಿಗಿದಪ್ಪಿ ಹಿಡಿದಿದ್ದರು. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ಅನಿಲ್ ಅವರು ಶೋಭಿತಾನ ಆ ರೀತಿಯಲ್ಲಿ ಹಿಡಿದಿದ್ದು ಸರಿ ಅಲ್ಲ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಮಿಳುನಾಡು ಹೊಸ ಸರ್ಕಾರಕ್ಕೆ ಆಪತ್ತು, ಸಿಎಂ ವಿಜಯ್ ಸರ್ಕಾರ ಅಲುಗಾಡಿಸಿದ ಸಿಪಿಐಎಂ, ಬೆಂಬಲ ವಾಪಸ್ ಬೆದರಿಕೆ – Kannada News | Tamil Nadu: Coalition Uncertainty Grows After CPIM Warning to Vijay Led TVK Government

ಚೆನ್ನೈ, ಮೇ 20: ತಮಿಳುನಾಡಿ(Tamil Nadu)ನಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಸರ್ಕಾರಕ್ಕೆ ಆರಂಭದಲ್ಲೇ ಭಾರಿ ವಿಘ್ನ ಎದುರಾಗಿದೆ. ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತದ ಕೊರತೆಯಿಂದಾಗಿ ಮಿತ್ರಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದ ವಿಜಯ್ ಅವರಿಗೆ, ಈಗ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಳ್ಳುವ ನೇರ ಎಚ್ಚರಿಕೆ ನೀಡಿವೆ.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ ಸ್ಥಾನಗಳು ಕಡಿಮೆಯಿದ್ದ ಕಾರಣ ಕಾಂಗ್ರೆಸ್, ಎಡಪಕ್ಷಗಳು (CPIM), ವಿಸಿಕೆ (VCK) ಮತ್ತು ಐಯುಎಂಎಲ್ (IUML) ಪಕ್ಷಗಳು ವಿಜಯ್ ಅವರಿಗೆ ಹೊರಗಿನಿಂದ ಬೆಂಬಲ ನೀಡಿದ್ದವು.

ಆದರೆ, ತಮ್ಮ ಸರ್ಕಾರವನ್ನು ಮತ್ತಷ್ಟು ಸ್ಥಿರಗೊಳಿಸುವ ಮತ್ತು ಬಲಪಡಿಸುವ ಉದ್ದೇಶದಿಂದ ಸಿಎಂ ವಿಜಯ್ ಅವರು, ಪ್ರಮುಖ ಪ್ರತಿಪಕ್ಷವಾದ ಎಐಎಡಿಎಂಕೆ (AIADMK) ಪಕ್ಷದಿಂದ ಬಂಡಾಯವೆದ್ದು ವಿಶ್ವಾಸಮತದ ವೇಳೆ ತಮಗೆ ಅಡ್ಡ ಮತ ಚಲಾಯಿಸಿದ್ದ 25 ಶಾಸಕರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಈ ವಿಷಯವೇ ಈಗ ಮೈತ್ರಿಕೂಟದಲ್ಲಿ ಭಾರಿ ಸ್ಫೋಟಕ್ಕೆ ಕಾರಣವಾಗಿದೆ.

ಮತ್ತಷ್ಟು ಓದಿ: ತಮಿಳುನಾಡು ಚುನಾವಣೆಯಲ್ಲಿ ಮತ ಹಾಕಿದ ಸೆಲೆಬ್ರಿಟಿಸ್; ಇಲ್ಲಿವೆ ಫೋಟೋಸ್

ಈ ಬೆಳವಣಿಗೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ, ಸಿಎಂ ವಿಜಯ್ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ತಮಿಳುನಾಡು ಮತ್ತೊಂದು ಚುನಾವಣೆಯನ್ನು ಎದುರಿಸಲು ಸಿದ್ಧವಾಗಿಲ್ಲದ ಕಾರಣ ಮತ್ತು ರಾಷ್ಟ್ರಪತಿ ಆಳ್ವಿಕೆ ಹೇರಿ ಬಿಜೆಪಿಯು ಹಿಂಬಾಗಿಲಿನಿಂದ ರಾಜ್ಯವನ್ನು ಆಳಬಾರದು ಎಂಬ ಒಂದೇ ಉದ್ದೇಶದಿಂದ ನಾವು ಟಿವಿಕೆಯನ್ನು ಬೆಂಬಲಿಸಿದ್ದೆವು. ಈ ಬಾರಿಯ ಜನಾಭಿಪ್ರಾಯ ಡಿಎಂಕೆ ಮತ್ತು ಎಐಎಡಿಎಂಕೆ ವಿರುದ್ಧವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಜಯ್ ಅವರು ಸ್ವಚ್ಛ ಮತ್ತು ಉತ್ತಮ ಸರ್ಕಾರ ನಡೆಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಅವರೇನಾದರೂ ಎಐಎಡಿಎಂಕೆಯ ಯಾವುದೇ ಬಣ ಅಥವಾ ಬಂಡಾಯ ಶಾಸಕರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡರೆ, ಅದು ಜನಾದೇಶಕ್ಕೆ ಮಾಡುವ ದ್ರೋಹವಾಗುತ್ತದೆ. ಅಂತಹ ನಿರ್ಧಾರ ಕೈಗೊಂಡರೆ ನಾವು ಖಂಡಿತವಾಗಿಯೂ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮರುಪರಿಶೀಲಿಸಿ, ವಾಪಸ್ ಪಡೆಯುತ್ತೇವೆ ಎಂದು ಗುಡುಗಿದ್ದಾರೆ.

ಒಂದು ವೇಳೆ ಸಿಎಂ ವಿಜಯ್ ಅವರು ಎಐಎಡಿಎಂಕೆ ಬಂಡಾಯ ಶಾಸಕರಿಗೆ ಮಣೆ ಹಾಕಿದರೆ, ಮೈತ್ರಿಕೂಟದಲ್ಲಿ ಭಾರಿ ಬಿರುಕು ಮೂಡುವುದು ನಿಶ್ಚಿತ. ಸಿಪಿಐಎಂ ಬೆಂಬಲ ಹಿಂತೆಗೆದುಕೊಂಡರೆ, ಕಾಂಗ್ರೆಸ್‌ನ 5 ಶಾಸಕರನ್ನು ಹೊರತುಪಡಿಸಿ, ಉಳಿದ ನಾಲ್ಕು ಮಿತ್ರಪಕ್ಷಗಳ ಒಟ್ಟು 8 ಶಾಸಕರು ತಕ್ಷಣವೇ ಸರ್ಕಾರದಿಂದ ಹೊರಬರಲಿದ್ದಾರೆ.

ಈ ಪರಿಸ್ಥಿತಿಯಲ್ಲಿ ವಿಜಯ್ ಅವರು ಎಐಎಡಿಎಂಕೆಯ 25 ಬಂಡಾಯ ಶಾಸಕರು ಮತ್ತು ಎಎಂಎಂಕೆಯ (AMMK) ಒಬ್ಬ ಶಾಸಕರ ಬೆಂಬಲದೊಂದಿಗೆ ತಮ್ಮ ಸರ್ಕಾರವನ್ನು ತಾತ್ಕಾಲಿಕವಾಗಿ ಉಳಿಸಿಕೊಳ್ಳಬಹುದು.

ಆದರೆ, ಅಧಿಕಾರ ವಹಿಸಿಕೊಂಡ ಹತ್ತೇ ದಿನಗಳಲ್ಲಿ ವಿರೋಧ ಪಕ್ಷದ ಭ್ರಷ್ಟ ಶಾಸಕರನ್ನು ಸರ್ಕಾರಕ್ಕೆ ಸೇರಿಸಿಕೊಂಡರೆ, ಅದು ಸಾರ್ವಜನಿಕರಲ್ಲಿ ಸಿಎಂ ವಿಜಯ್ ಅವರ ಇಮೇಜ್‌ಗೆ ಭಾರಿ ದೊಡ್ಡ ನಕಾರಾತ್ಮಕ ಸಂದೇಶವನ್ನು ರವಾನಿಸಲಿದೆ. ಈ ಭೀಕರ ರಾಜಕೀಯ ಪೇಚಿನಿಂದ ಪಾರಾಗಲು ಮತ್ತು ಪರಿಸ್ಥಿತಿಯನ್ನು ಸಮತೋಲನಗೊಳಿಸಲು ಟಿವಿಕೆ ಪಕ್ಷದ ಕೋರ್ ಕಮಿಟಿ ಸದ್ಯ ತುರ್ತು ಸಭೆಗಳನ್ನು ನಡೆಸುತ್ತಿದ್ದು, ಇಡೀ ತಮಿಳುನಾಡು ರಾಜಕೀಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭಾರತ-ಅಮೆರಿಕದಲ್ಲಲ್ಲ, ಪ್ರಧಾನಿ ಮೋದಿ-ಟ್ರಂಪ್ ಐತಿಹಾಸಿಕ ಭೇಟಿಗೆ ಆತಿಥ್ಯ ವಹಿಸಲಿದೆ ಈ ರಾಷ್ಟ್ರ – Kannada News | Narendra Modi and Donald Trump May Hold Key Meeting in France

ನವದೆಹಲಿ, ಮೇ 20: ವಿಶ್ವದ ಇಬ್ಬರು ಪ್ರಭಾವಶಾಲಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ನಡುವೆ ಶೀಘ್ರದಲ್ಲೇ ಮತ್ತೊಂದು ಮಹತ್ವದ ಮಾತುಕತೆ ನಡೆಯಲಿದೆ. ಆದರೆ, ಈ ಸಭೆಯು ಭಾರತದಲ್ಲಾಗಲಿ ಅಥವಾ ಅಮೆರಿಕದಲ್ಲಾಗಲಿ ನಡೆಯುತ್ತಿಲ್ಲ. ಬದಲಿಗೆ ಫ್ರಾನ್ಸ್​ ದೇಶದಲ್ಲಿ ಉಭಯ ನಾಯಕರು ಒಟ್ಟಿಗೆ ಕುಳಿತು ಜಾಗತಿಕ ವಿದ್ಯಾಮಾನಗಳ ಚರ್ಚೆ ನಡೆಸಲಿದ್ದಾರೆ. ಮುಂದಿನ ತಿಂಗಳು ಅಂದರೆ ಜೂನ್​​ನಲ್ಲಿ ಫ್ರಾನ್ಸ್​ ಆಯೋಜಿಸಿರುವ ಜಿ-7 ಶೃಂಗಸಭೆಯಲ್ಲಿ ಈ ಇಬ್ಬರು ನಾಯಕರು ಭಾಗವಹಿಸಲಿದ್ದಾರೆ.

ಈ ವರ್ಷದ ಜಿ-7 ಶೃಂಗಸಭೆಯು ಫ್ರಾನ್ಸ್‌ನ ಪ್ರಸಿದ್ಧ ಪ್ರವಾಸಿ ತಾಣವಾದ ಫ್ರೆಂಚ್ ಆಲ್ಪ್ಸ್‌ನ ಏವಿಯನ್-ಲೆಸ್-ಬೈನ್ಸ್ನಲ್ಲಿ ಜೂನ್ 15 ರಿಂದ 17 ರವರೆಗೆ ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ 80 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೇವಲ ಒಂದು ದಿನದ ನಂತರ ಫ್ರಾನ್ಸ್‌ನಲ್ಲಿ ಈ ಜಿ-7 ಸಭೆ ನಡೆಯುತ್ತಿರುವುದು ವಿಶೇಷವಾಗಿದೆ. ಈ ಶೃಂಗಸಭೆಯಲ್ಲಿ ಟ್ರಂಪ್ ಅವರು ಪ್ರಮುಖವಾಗಿ ಕೃತಕ ಬುದ್ಧಿಮತ್ತೆ (AI), ಜಾಗತಿಕ ವ್ಯಾಪಾರ, ಭಯೋತ್ಪಾದನೆ ಹಾಗೂ ಅಪರಾಧದ ವಿರುದ್ಧದ ಹೋರಾಟದ ಬಗ್ಗೆ ಗಂಭೀರ ಚರ್ಚೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕಳೆದ ಫೆಬ್ರವರಿ 17 ರಿಂದ 19, 2026 ರವರೆಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಆತ್ಮೀಯವಾಗಿ ಆಹ್ವಾನಿಸಿದ್ದರು. ಈ ಆಹ್ವಾನವನ್ನು ಸ್ವೀಕರಿಸಿರುವ ಪ್ರಧಾನಿ ಮೋದಿ ಅವರ ಫ್ರಾನ್ಸ್ ಪ್ರವಾಸ ಮಾರ್ಚ್ ಆರಂಭದಲ್ಲೇ ದೃಢಪಟ್ಟಿದೆ ಎಂದು ಭಾರತದಲ್ಲಿರುವ ಫ್ರೆಂಚ್ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಇದರಿಂದಾಗಿ ಜೂನ್‌ನಲ್ಲಿ ಪ್ರಧಾನಿ ಮೋದಿ ಅವರು ಫ್ರಾನ್ಸ್‌ಗೆ ಪ್ರಯಾಣ ಬೆಳೆಸುವುದು ಖಚಿತವಾಗಿದೆ.

ಮತ್ತಷ್ಟು ಓದಿ: ಪ್ರಧಾನಿ ನರೇಂದ್ರ ಮೋದಿ ನೆದರ್‌ಲ್ಯಾಂಡ್ಸ್ ಭೇಟಿಯಿಂದ ಭಾರತಕ್ಕೆ ಏನೆಲ್ಲ ಲಾಭ? ಇಲ್ಲಿದೆ ಮಾಹಿತಿ

ಈ ಜಿ-7 ಶೃಂಗಸಭೆಯಲ್ಲಿ ಯಾವುದೇ ಔಪಚಾರಿಕ ಅಥವಾ ನಿಜವಾದ ಒಪ್ಪಂದಗಳಿಗೆ ಸಹಿ ಹಾಕಲಾಗುವುದಿಲ್ಲ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದರೆ, ಭವಿಷ್ಯದ ದ್ವಿಪಕ್ಷೀಯ ಒಪ್ಪಂದಗಳಿಗೆ ಭದ್ರ ಬುನಾದಿ ಹಾಕಬಲ್ಲ ಜಾಗತಿಕ ಒಮ್ಮತವನ್ನು ನಿರ್ಮಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಇರಾನ್ ಬಿಕ್ಕಟ್ಟನ್ನು ಶೃಂಗಸಭೆಯ ಕಾರ್ಯಸೂಚಿಯಲ್ಲಿ ಸೇರಿಸುವ ಸಾಧ್ಯತೆಯಿದ್ದರೂ, ಡೊನಾಲ್ಡ್ ಟ್ರಂಪ್ ಮಾತ್ರ ವ್ಯಾಪಾರ ಮತ್ತು ಆರ್ಥಿಕತೆಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯಿದೆ.

ಇದಕ್ಕೂ ಮುನ್ನ, ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 13, 2025 ರಂದು ಶ್ವೇತಭವನದಲ್ಲಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ಇದೀಗ ಜೂನ್ ತಿಂಗಳಲ್ಲಿ ಫ್ರಾನ್ಸ್‌ನ ಸುಂದರ ಪರಿಸರದಲ್ಲಿ ನಡೆಯಲಿರುವ ಇಬ್ಬರು ನಾಯಕರ ಈ ಮುಖಾಮುಖಿ ಭೇಟಿ, ಇಡೀ ವಿಶ್ವದ ರಾಜತಾಂತ್ರಿಕ ವಲಯದಲ್ಲಿ ಭಾರೀ ಕುತೂಹಲ ಹಾಗೂ ಹೊಸ ಸಂಚಲನವನ್ನು ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಾಲೆಗಳ ಆರಂಭಕ್ಕೂ ಮೊದಲೇ ಪೋಷಕರಿಗೆ ಸಾಲು ಸಾಲು ಬೆಲೆ ಏರಿಕೆಯ ಶಾಕ್: ನೋಟ್ಸ್, ವರ್ಕ್ ಬುಕ್, ಪೇಪರ್ ದರ ಹೆಚ್ಚಳ – Kannada News | Karnataka School Reopening: Parents Hit Hard as Notebook and Workbook Prices Hike by 20 25 percent

ಬೆಂಗಳೂರು, ಮೇ 20: ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭಕ್ಕೆ ಮುನ್ನವೇ ಪೋಷಕರು ಸಾಲು ಸಾಲು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಶಾಲಾ ಶುಲ್ಕ ಮತ್ತು ಶಾಲಾ ವಾಹನಗಳ ಬಾಡಿಗೆ ದರ ಈಗಾಗಲೇ ಹೆಚ್ಚಳವಾಗಿದ್ದು, ಇದೀಗ ನೋಟ್‌ಬುಕ್, ವರ್ಕ್‌ಬುಕ್ ಹಾಗೂ ಪೇಪರ್‌ಗಳ ಬೆಲೆಯು ಶೇಕಡ 20ರಿಂದ 25ರಷ್ಟು ಏರಿಕೆಯಾಗಿ ಡಬಲ್ ಶಾಕ್ ನೀಡಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಇಂಧನ ದರ ಹೆಚ್ಚಳವೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಗಲ್ಫ್ ರಾಷ್ಟ್ರಗಳ ಯುದ್ಧದಿಂದ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಪೇಪರ್ ತಯಾರಿಕೆಗೆ ಬೇಕಾದ ಕೆಮಿಕಲ್ಸ್ ಮತ್ತು ಕಲರ್ಸ್‌ಗಳು ಲಭ್ಯವಾಗುತ್ತಿಲ್ಲ. ಅಲ್ಲದೆ, ಇಂಧನ ದರ ಏರಿಕೆಯಿಂದಾಗಿ ನೋಟ್‌ಬುಕ್ಸ್, ವರ್ಕ್‌ಬುಕ್ ಹಾಗೂ ಪೇಪರ್‌ಗಳ ಮುದ್ರಣ ವೆಚ್ಚವೂ ಹೆಚ್ಚಾಗಿದೆ ಎಂದು ಉದ್ಯಮಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಸೂರ್ಯವಂಶಿ ‘A’ ಸೆಲೆಬ್ರೇಷನ್ ರಹಸ್ಯ ಬಯಲು! – Kannada News | Vaibhav sooryavanshi celebration meaning

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ ಇಡೀ ವಿಶ್ವ ಕ್ರಿಕೆಟ್ ಗಮನ ಸೆಳೆದಿರುವ ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ, ಈಗ ತಮ್ಮ ವಿಭಿನ್ನ ಆಟದ ಶೈಲಿ ಮತ್ತು ವಿಶಿಷ್ಟ ಬ್ಯಾಟಿಂಗ್ ಸಂಭ್ರಮಾಚರಣೆಗಳಿಂದಲೇ ಭಾರಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಅರ್ಧಶತಕ ಬಾರಿಸಿದ ನಂತರ, ಎರಡೂ ಕೈಗಳನ್ನು ಎತ್ತಿ ‘A’ ಆಕಾರದ ಸೈನ್ ತೋರಿಸುವ ಮೂಲಕ ಸಂಭ್ರಮಿಸಿದ್ದರು. ಈ ಆಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಮೈದಾನದಲ್ಲಿ ಮುಚ್ಚಿಟ್ಟಿದ್ದ ರಹಸ್ಯ!

ಪಂದ್ಯ ಮುಗಿದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಮೆಂಟೇಟರ್‌ಗಳು ಈ ‘A’ ಸೈನ್ ಆಚರಣೆಯ ಅರ್ಥವೇನು ಎಂದು ಕೇಳಿದಾಗ, ವೈಭವ್ ಅತ್ಯಂತ ಮುಗ್ಧತೆಯಿಂದ ನಕ್ಕು ಜಾರಿಕೊಂಡಿದ್ದರು. “ಇದಕ್ಕೆ ಯಾವುದೇ ವಿಶೇಷ ಅರ್ಥವಿಲ್ಲ. ಹಿಂದಿನ ಪಂದ್ಯದಲ್ಲೂ ನಾನು ಮಾಡಿದ ಸೆಲೆಬ್ರೇಷನ್‌ಗೆ ಯಾವುದೇ ಅರ್ಥವಿರಲಿಲ್ಲ. ನಾನು ಪ್ರತಿ ಪಂದ್ಯದಲ್ಲೂ ಏನಾದರೂ ಹೊಸದನ್ನು ಮಾಡಲು ಪ್ರಯತ್ನಿಸುತ್ತೇನೆ ಅಷ್ಟೇ” ಎಂದು ತಮಾಷೆಯಾಗಿ ಉತ್ತರಿಸಿ ರಹಸ್ಯವನ್ನು ಮುಚ್ಚಿಟ್ಟಿದ್ದರು.

ಕೊನೆಗೂ ಬಯಲಾಯ್ತು ಅಸಲಿ ಕಾರಣ!

ಪಂದ್ಯ ಮುಗಿದ ನಂತರ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ವೈಭವ್ ತಮ್ಮ ಈ ಸಂಭ್ರಮಾಚರಣೆಯ ಅಸಲಿ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ದೃಷ್ಟಿ ಬೀಳಬಾರದು (ಕಣ್ಣಾಗಬಾರದು) ಎಂಬ ಕಾರಣಕ್ಕೆ ಮೈದಾನದಲ್ಲಿ ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡ ಯುವ ಬ್ಯಾಟರ್, ಈ ‘A’ ಸೈನ್ ಅನ್ನು ತಮ್ಮ ಪ್ರೀತಿಯ ತಾಯಿಗೆ ಸಮರ್ಪಿಸಿದ್ದಾರೆ. ಅವರ ತಾಯಿಯ ಹೆಸರು ‘A’ ಅಕ್ಷರದಿಂದ ಪ್ರಾರಂಭವಾಗುವುದರಿಂದ, ಅಮ್ಮನ ಮೇಲಿನ ಪ್ರೀತಿಗಾಗಿ ಈ ವಿಶೇಷ ಆಚರಣೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 750 ಬ್ಯಾಟರ್​ಗಳಿಗೆ ಸಾಧ್ಯವಾಗಿಲ್ಲ… ಪ್ರಚಂಡ ದಾಖಲೆ ಬರೆದ ವೈಭವ್!

ಅಂದಹಾಗೆ ವೈಭವ್ ಸೂರ್ಯವಂಶಿ ಅವರ ತಾಯಿಯ ಹೆಸರು ಆರತಿ ಸೂರ್ಯವಂಶಿ. ತಾಯಿ ಹೆಸರಿನ ಮೊದಲ ಅಕ್ಷರವನ್ನು (A) ತೋರಿಸುವ ಮೂಲಕ ವೈಭವ್ ಸೂರ್ಯವಂಶಿ ಹೊಸ ಸ್ಟ್ರೈಲ್​ನಲ್ಲಿ ಸಂಭ್ರಮಿಸಿದ್ದಾರೆ.

ಪ್ರತಿ ಪಂದ್ಯದಲ್ಲೂ ಹೊಸ ಟ್ರೆಂಡ್:

ವೈಭವ್ ಕೇವಲ ‘A’ ಸೈನ್ ಮಾತ್ರವಲ್ಲದೆ, ಈ ಸೀಸನ್‌ನಲ್ಲಿ ತಮ್ಮ ವಿಭಿನ್ನ ಶೈಲಿಗಳಿಂದಲೇ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 36 ಎಸೆತಗಳಲ್ಲಿ ಐತಿಹಾಸಿಕ ಶತಕ ಸಿಡಿಸಿದಾಗ, ಅವರು ಮೈದಾನದಲ್ಲಿ ‘ಹಾರ್ಟ್ ಸೈನ್’ (ಹೃದಯದ ಆಕಾರ) ಮತ್ತು ‘ಮಿಲಿಟರಿ ಸಲ್ಯೂಟ್’ ಹೊಡೆಯುವ ಮೂಲಕ ಎಲ್ಲರ ಮನ ಗೆದ್ದಿದ್ದರು. ಇದೀಗ ತಾಯಿಗಾಗಿ ‘A’ ಸೈನ್​ನೊಂದಿಗೆ ಸಂಭ್ರಮಿಸಿದ್ದಾರೆ. ಈ ‘A’ ಸೈನ್ ಸಂಭ್ರಮ ಮುಂದಿನ ಪಂದ್ಯಗಳಲ್ಲೂ ಮುಂದುವರೆಸುವ ಸಾಧ್ಯತೆಯಿದೆ.

ಇನ್ನು ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನೀಡಿದ 221 ರನ್​ಗಳ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 93 ರನ್​ ಬಾರಿಸಿದ್ದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಆರ್​ಆರ್ ತಂಡ 19.1 ಓವರ್​ಗಳಲ್ಲಿ 225 ರನ್ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Published On – 9:20 am, Wed, 20 May 26

Source link

World Bee Day: ಮೇ 20 ‘ವಿಶ್ವ ಜೇನುನೊಣ ದಿನ’; ಜೇನುನೊಣ ಉಳಿದರೆ ಮಾತ್ರ ಮನುಕುಲದ ಉಳಿವು! – Kannada News | World Bee Day: India’s Fight Against Honey Adulteration and Bee Conservation

ಪ್ರತಿ ವರ್ಷ ಮೇ 20ರಂದು ವಿಶ್ವದಾದ್ಯಂತ ‘ವಿಶ್ವ ಜೇನುನೊಣ ದಿನ’ವನ್ನು (World Bee Day) ಆಚರಿಸಲಾಗುತ್ತದೆ. ಆಧುನಿಕ ಜೇನುಸಾಕಣೆಯ ಪ್ರವರ್ತಕರಾದ ಸ್ಲೊವೇನಿಯಾದ ಆಂಟನ್ ಜಾನ್ಸಾ (Anton Jansa) ಅವರ ಜನ್ಮ ದಿನದ ನೆನಪಿಗಾಗಿ ಈ ದಿನವನ್ನು ನಿಗದಿಪಡಿಸಲಾಗಿದೆ. ಆದರೆ, ಜೇನುಸಾಕಣೆಯ ಇತಿಹಾಸವನ್ನು ಗಮನಿಸಿದಾಗ ನಾವಿಲ್ಲಿ ಒಂದು ಮಹತ್ವದ ವಿಚಾರವನ್ನು ಮರೆಯಬಾರದು. ಅದೇನೆಂದರೆ, ಪಾಶ್ಚಾತ್ಯ ಜಗತ್ತು ಇದನ್ನು ಗುರುತಿಸುವ ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಜೇನುಸಾಕಣೆ ಮತ್ತು ಜೇನುತುಪ್ಪದ ಬಳಕೆ ಅತ್ಯಂತ ಪ್ರಚಲಿತದಲ್ಲಿತ್ತು. ನಮ್ಮ ಋಗ್ವೇದ, ಅಥರ್ವವೇದ, ಪುರಾಣಗಳು ಹಾಗೂ ಆಯುರ್ವೇದ ಗ್ರಂಥಗಳಲ್ಲಿ ಜೇನುನೊಣ ಮತ್ತು ಜೇನುತುಪ್ಪದ ಉಲ್ಲೇಖಗಳು ಯಥೇಚ್ಛವಾಗಿ ಸಿಗುತ್ತವೆ. ಭಾರತೀಯ ಪರಂಪರೆಯಲ್ಲಿ ಜೇನುತುಪ್ಪವನ್ನು ಕೇವಲ ಆಹಾರವಾಗಿ ನೋಡದೆ, ಒಂದು ಪವಿತ್ರ ದ್ರವ್ಯವಾಗಿ ಹಾಗೂ ಆರೋಗ್ಯ ನೀಡುವ ಅಮೃತ ಸದೃಶ ಔಷಧಿಯಾಗಿ ಬಳಸಲಾಗುತ್ತಿತ್ತು.

ನಮ್ಮ ಗ್ರಾಮೀಣ ಜೀವನದಲ್ಲಿ ಮತ್ತು ಕೃಷಿ ಸಂಸ್ಕೃತಿಯಲ್ಲಿ ಜೇನುನೊಣಗಳು ಅನಾದಿ ಕಾಲದಿಂದಲೂ ಪ್ರಕೃತಿಯ ಅವಿಭಾಜ್ಯ ಅಂಗವಾಗಿವೆ. ಭಾರತದ ರೈತರು ಇವುಗಳನ್ನು ಕೇವಲ ಜೇನುತುಪ್ಪ ಕೊಡುವ ಕೀಟಗಳಾಗಿ ನೋಡದೆ, ಕೃಷಿಯ ‘ಮೌನ ಸಹಾಯಕರು’ ಎಂದು ಗೌರವಿಸಿದ್ದಾರೆ. ಏಕೆಂದರೆ, ಜಗತ್ತಿನ ಬಹುತೇಕ ಬೆಳೆಗಳ ಪರಾಗಸ್ಪರ್ಶ ಕ್ರಿಯೆಗೆ (Pollination) ಜೇನುನೊಣಗಳೇ ಪ್ರಮುಖ ಆಧಾರ. ನಾವು ನಿತ್ಯ ಬಳಸುವ ಹಣ್ಣುಗಳು, ತರಕಾರಿಗಳು ಹಾಗೂ ಎಣ್ಣೆಕಾಳುಗಳು ಸೇರಿದಂತೆ ಹತ್ತಾರು ಬೆಳೆಗಳ ಯಶಸ್ವಿ ಉತ್ಪಾದನೆ ಮತ್ತು ವೈವಿಧ್ಯತೆ ಇವುಗಳ ಮೇಲೆಯೇ ಅವಲಂಬಿತವಾಗಿದೆ. ಸರಳವಾಗಿ ಹೇಳಬೇಕೆಂದರೆ, ಜೇನುನೊಣಗಳಿಲ್ಲದ ಜಗತ್ತಿನಲ್ಲಿ ಮಾನವನ ಆಹಾರ ಭದ್ರತೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಆದರೆ, ಇಂದಿನ ಆಧುನಿಕ ಯುಗದಲ್ಲಿ ಜೇನುನೊಣಗಳ ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ಮಿತಿಮೀರಿದ ಕೀಟನಾಶಕಗಳ ಬಳಕೆ, ನಗರೀಕರಣದಿಂದಾಗುತ್ತಿರುವ ಅರಣ್ಯ ನಾಶ, ಜಾಗತಿಕ ಹವಾಮಾನ ಬದಲಾವಣೆ ಹಾಗೂ ಅತಿಯಾದ ರಾಸಾಯನಿಕ ಕೃಷಿ ಪದ್ಧತಿಗಳ ಕಾರಣದಿಂದಾಗಿ ಜೇನುನೊಣಗಳ ಸಂಖ್ಯೆ ಜಗತ್ತಿನಾದ್ಯಂತ ಗಣನೀಯವಾಗಿ ಕುಸಿಯುತ್ತಿದೆ. ಇದು ಕೇವಲ ಜೇನುತುಪ್ಪದ ಕೊರತೆಯಲ್ಲ, ಬದಲಿಗೆ ಇಡೀ ಜೀವವೈವಿಧ್ಯತೆ, ಪರಿಸರ ಸಮತೋಲನ ಮತ್ತು ಒಟ್ಟಾರೆ ಕೃಷಿ ರಂಗದ ಭವಿಷ್ಯಕ್ಕೆ ಎದುರಾಗಿರುವ ಬೃಹತ್ ಅಪಾಯದ ಮುನ್ಸೂಚನೆಯಾಗಿದೆ.

ಪ್ರಕೃತಿಯ ಈ ಸಂಕಷ್ಟದ ಜೊತೆಗೆ, ಇಂದು ಭಾರತವನ್ನು ಮತ್ತೊಂದು ಗಂಭೀರ ಸಮಸ್ಯೆ ಕಾಡುತ್ತಿದೆ; ಅದೇ “ಜೇನುತುಪ್ಪದ ಕಲಬೆರಿಕೆ”.

ಇಂದು ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಜೇನುತುಪ್ಪಗಳಲ್ಲಿ ಸಕ್ಕರೆ ಸಿರಪ್, ಕೃತಕ ದ್ರವ್ಯಗಳು ಹಾಗೂ ಅಪಾಯಕಾರಿ ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗುತ್ತಿದೆ ಎಂಬ ಬಲವಾದ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ. ಈ ನಕಲಿ ಜೇನುತುಪ್ಪದ ಹಾವಳಿಯಿಂದಾಗಿ ಹಗಲಿರುಳು ಶ್ರಮಿಸುವ ನಿಜವಾದ ಜೇನುಸಾಕಾಣಿಕೆದಾರರು ಮತ್ತು ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ, ಕಲಬೆರಿಕೆ ಜೇನುತುಪ್ಪವನ್ನು ಅಮೃತವೆಂದು ಸೇವಿಸುತ್ತಿರುವ ಗ್ರಾಹಕರ ಆರೋಗ್ಯವೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದರ ನೇರ ಪರಿಣಾಮವಾಗಿ, ನೈಸರ್ಗಿಕ ಜೇನುತುಪ್ಪದ ಮೇಲಿದ್ದ ಜನರ ನಂಬಿಕೆ ಮತ್ತು ವಿಶ್ವಾಸವೇ ಇಂದು ಕುಸಿಯುವಂತಾಗಿದೆ.

ಇಲ್ಲಿ ನಾವು ಗಂಭೀರವಾಗಿ ಯೋಚಿಸಬೇಕಾದ ಪ್ರಶ್ನೆಯೆಂದರೆ— ಭಾರತದಲ್ಲಿ ನೈಸರ್ಗಿಕವಾಗಿ ಕಾಡು ಹಾಗೂ ಕೃಷಿ ಮೂಲಗಳಿಂದ ಸಂಗ್ರಹವಾಗುತ್ತಿರುವ ಒಟ್ಟು ಜೇನುತುಪ್ಪದ ಪ್ರಮಾಣ ಎಷ್ಟು? ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರಾಟವಾಗುತ್ತಿರುವ ಜೇನುತುಪ್ಪದ ಪ್ರಮಾಣ ಎಷ್ಟು? ಈ ಎರಡರ ಅಂಕಿ-ಅಂಶಗಳ ನಡುವೆ ಭಾರಿ ದೊಡ್ಡ ಅಂತರವಿದೆ ಎಂಬ ಸಂಶಯ ಸಾರ್ವಜನಿಕರಲ್ಲಿ ದಟ್ಟವಾಗಿದೆ.

ಇದನ್ನೂ ಓದಿ: ಹಾಲು ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಎಲ್ಲರಿಗೂ ಅಲ್ಲ! ಹಾಗಿದ್ರೆ ಯಾರು ಕುಡಿಯಬಾರದು?

ಆದ್ದರಿಂದ, ಕೇಂದ್ರ ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಿದೆ. ಆಹಾರ ಸುರಕ್ಷತಾ ಇಲಾಖೆ (FSSAI), ಅರಣ್ಯ ಇಲಾಖೆ, ಕೃಷಿ ಇಲಾಖೆ, ಜೇನುಸಾಕಣೆ ತಜ್ಞರು ಹಾಗೂ ಅಗತ್ಯವಿದ್ದರೆ ಸಿಬಿಐ (CBI) ಒಳಗೊಂಡ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ಮೂಲಕ ದೇಶವ್ಯಾಪಿ ಸಮಗ್ರ ಮತ್ತು ಪಾರದರ್ಶಕ ಅಧ್ಯಯನ ನಡೆಯಬೇಕು. ಆ ವರದಿಯಲ್ಲಿ ನೈಸರ್ಗಿಕ ಜೇನು ಉತ್ಪಾದನೆಯ ನೈಜ ಅಂಕಿ-ಅಂಶಗಳು, ಆಮದು-ರಫ್ತು ಪ್ರಮಾಣ, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕಲಬೆರಿಕೆ ತಂತ್ರಗಳು, ಪ್ರಸ್ತುತ ಇರುವ ಲ್ಯಾಬ್ ಪರೀಕ್ಷೆಗಳ ವಿಶ್ವಾಸಾರ್ಹತೆ ಹಾಗೂ ನಕಲಿ ಬ್ರ್ಯಾಂಡ್‌ಗಳ ಜಾಲದ ಕುರಿತು ಸಂಪೂರ್ಣ ವೈಜ್ಞಾನಿಕ ಸತ್ಯ ಹೊರಬರಬೇಕಾಗಿದೆ.

ವಿಶ್ವ ಜೇನುನೊಣ ದಿನ ಎಂಬುದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯದ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ದಿನವಾಗಬಾರದು. ಇದು ಪ್ರಕೃತಿ ಸಂರಕ್ಷಣೆ, ಆಹಾರ ಭದ್ರತೆ ಮತ್ತು ಕೃಷಿಯ ಭವಿಷ್ಯದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಂಭೀರ ಚಿಂತನೆ ಮತ್ತು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ದಿನವಾಗಬೇಕು. ಜೇನುನೊಣಗಳು ಉಳಿದರೆ ಮಾತ್ರ ಕೃಷಿ ಉಳಿಯುತ್ತದೆ, ಕೃಷಿ ಉಳಿದರೆ ಮಾತ್ರ ಮಾನವಕುಲ ಉಳಿಯಲು ಸಾಧ್ಯ.

ಆದ್ದರಿಂದ, ಈ ವಿಶ್ವ ಜೇನುನೊಣ ದಿನದಂದು ನಾವೆಲ್ಲರೂ ಒಟ್ಟಾಗಿ ಸಂಕಲ್ಪ ಮಾಡೋಣ:

  • ಜೇನುನೊಣಗಳನ್ನು ಮತ್ತು ಪ್ರಕೃತಿಯನ್ನು ಉಳಿಸೋಣ.
  • ಶುದ್ಧ ಹಾಗೂ ನೈಸರ್ಗಿಕ ಜೇನುತುಪ್ಪವನ್ನು ರಕ್ಷಿಸೋಣ.
  • ಮಾರುಕಟ್ಟೆಯಲ್ಲಿನ ಜೇನುತುಪ್ಪದ ಕಲಬೆರಿಕೆಗೆ ಕಠಿಣ ಕಟ್ಟೆ ಹಾಕೋಣ.
  • ಪ್ರಾಮಾಣಿಕವಾಗಿ ಜೇನುಸಾಕಣೆ ಮಾಡುವ ನಮ್ಮ ದೇಶದ ರೈತರನ್ನು ಬೆಂಬಲಿಸೋಣ.

ಲೇಖನ:  ಡಾ. ರವಿಕಿರಣ ಪಟವರ್ಧನ, ಶಿರಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link