Category Archives: Blog

Your blog category

‘ಜೈಲರ್ 2’ ಸೆಟ್​​​ನಲ್ಲಿ ಭೀಕರ ಅವಘಡ; ತಂಡದ ಸಿಬ್ಬಂದಿ ಸಾವು – Kannada News | Jailer 2 Set Tragedy: Crew Member Dies From Electrocution; Shivanna’s Role and Release Info

ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಸಿನಿಮಾ ಸೆಟ್​​​ನಲ್ಲಿ ಸಂಭವಿಸುವ ಅವಘಡಗಳು ಕಡಿಮೆ ಆಗೋದಿಲ್ಲ. ಈಗ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದ (Jailer 2 Movie) ಸೆಟ್‌ನಲ್ಲಿ ಭೀಕರ ಅವಘಡ ಸಂಭವಿಸಿದೆ. ಚಿತ್ರದ ಕಲಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಕಾರ್ತಿಕೇಯನ್ ಎಂಬ ಯುವಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಇದು ಇಡೀ ತಂಡವನ್ನು ಶಾಕ್​​ಗೆ ತಳ್ಳಿದೆ.

1. ಜೈಲರ್ 2 ಸೆಟ್​​​ನಲ್ಲಿ ಅವಘಢ

2. ಯುವ ಆರ್ಟ್ ಕಲಾವಿದನ ಸಾವು

3. ವಿದ್ಯುತ್ ತಂತಿ ತಾಗಿ ಸಾವು

ಚೆನ್ನೈನ ಪಣಯೂರ್‌ನಲ್ಲಿರುವ ಖಾಸಗಿ ಸ್ಟುಡಿಯೋವೊಂದರಲ್ಲಿ ಚಿತ್ರದ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದವು. ಮನೆಯ ಮಾದರಿಯ ಸೆಟ್ ನಿರ್ಮಿಸುತ್ತಿದ್ದ ವೇಳೆ ವಿದ್ಯುತ್ ತಂತಿ ತಾಗಿ ಕಾರ್ತಿಕೇಯನ್‌ಗೆ ತೀವ್ರವಾಗಿ ಶಾಕ್ ಹೊಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಈ ಕುರಿತು ಕಾನತ್ತೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕನ್ನಡಿಗರಿಗೆ ಈ ಸಿನಿಮಾ ಕೇವಲ ರಜನಿಕಾಂತ್ ಚಿತ್ರವಲ್ಲ, ಬದಲಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಸಿನಿಮಾ ಕೂಡ ಹೌದು. ‘ಜೈಲರ್’ ಮೊದಲ ಭಾಗದಲ್ಲಿ ಶಿವಣ್ಣ ಅವರ ಅತಿಥಿ ಪಾತ್ರ ಇಡೀ ಸಿನಿಮಾಕ್ಕೆ ಒಂದು ದೊಡ್ಡ ಮೈಲೇಜ್ ನೀಡಿತ್ತು. ಥಿಯೇಟರ್‌ನಲ್ಲಿ ಶಿವಣ್ಣನ ಎಂಟ್ರಿಗೆ ಸಿಕ್ಕ ರೆಸ್ಪಾನ್ಸ್ ನೋಡಿ ಚಿತ್ರತಂಡ ಬೆರಗಾಗಿತ್ತು. ಹೀಗಾಗಿ, ‘ಜೈಲರ್ 2’ ಚಿತ್ರದಲ್ಲೂ ಶಿವಣ್ಣ ಅವರ ಪಾತ್ರ ಮುಂದುವರಿಯಲಿದ್ದು, ಸೀಕ್ವೆಲ್‌ನಲ್ಲಿ ಅವರ ಪಾತ್ರ ಇನ್ನಷ್ಟು ಹೈಲೈಟ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗ ಸಂಭವಿಸಿದ ಈ ಸಾವು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಇದನ್ನೂ ಓದಿ: ‘ಜೈಲರ್ 2’ ಬಿಡುಗಡೆಗೂ ಮುನ್ನವೇ 160 ಕೋಟಿ ರೂಪಾಯಿ ಒಟಿಟಿ ಡೀಲ್?

ಇತ್ತೀಚಿನ ವರದಿಗಳ ಪ್ರಕಾರ ‘ಜೈಲರ್ 2’ ಸಿನಿಮಾ ಆಗಸ್ಟ್ ಅಥವಾ ಸೆಪ್ಟೆಂಬರ್​​ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆಯಂತೆ. ಸನ್ ಪಿಕ್ಚರ್ಸ್ ಸಂಸ್ಥೆಯು ಶೀಘ್ರದಲ್ಲೇ ರಿಲೀಸ್ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು ಮೊದಲಾದವರು ನಟಿಸುತ್ತಿದ್ದಾರೆ. ಮೊದಲ ಭಾಗವು ಜಾಗತಿಕವಾಗಿ 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಅಬ್ಬರಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿ.ಕೆ. ಶಿವಕುಮಾರ್ 64ನೇ ಜನ್ಮದಿನ: ವೇದಘೋಷದೊಂದಿಗೆ ಆಶೀರ್ವದಿಸಿದ ವಿದ್ವಾಂಸರು! – Kannada News | DCM DK Shivakumar Celebrates 64th Birthday: Vedic Chants and Celebrations at Sadashivanagar Residence

ಬೆಂಗಳೂರು, ಮೇ 15: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivkumar) ಇಂದು 64ನೇ ವಸಂತಕ್ಕೆ ಕಾಲಿಟ್ಟಿದ್ದು, ಸದಾಶಿವನಗರದ ನಿವಾಸದಲ್ಲಿ ಸಂಭ್ರಮ ಮನೆಮಾಡಿದೆ. ಮುಂಜಾನೆಯೇ ಡಿಸಿಎಂ ಮನೆ ಮುಂದೆ ಆಗಮಿಸಿದ ವೇದ ವಿದ್ವಾಂಸರು ಹಾಗೂ ಋತ್ವಿಕರು ಮನ್ಯುಸೂಕ್ತ ಮಂತ್ರಗಳ ಪಠಣದೊಂದಿಗೆ, ವೇದಘೋಷದೊಂದಿಗೆ ಡಿ ಕೆ ಶಿವಕುಮಾರ್ ಅವರಿಗೆ ಆಯುಷ್ಯ ಮತ್ತು ಅಧಿಕಾರ ಪ್ರಾಪ್ತಿಯಾಗಲೆಂದು ಹರಸಿದ್ದಾರೆ. ನೂರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿದ ಅವರು, ತಮಿಳುನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Darshan Thoogudeepa bail : ದರ್ಶನ್​​ಗೆ ಕನಿಷ್ಟ ಒಂದು ವರ್ಷ ಜೈಲು ಖಾಯಂ – Kannada News | Darshan Thoogudeepa’s bail application rejected by Supreme Court

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರು ಸುಪ್ರೀಂಕೋರ್ಟ್​​ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಸಾಕ್ಷ್ಯಗಳ ವಿಚಾರಣೆಯಲ್ಲಿ ವಿಳಂಬ, ಜೈಲಿನಲ್ಲಿ ಸೌಲಭ್ಯಗಳ ಕೊರತೆ, ಕುಟುಂಬವನ್ನು ಭೇಟಿ ಮಾಡಲು ಜೈಲಧಿಕಾರಿಗಳಿಂದ ಅವಕಾಶ ನಿರಾಕರಣೆ, ಆರೋಗ್ಯ ಸಮಸ್ಯೆ, ಸಹ ಕೈದಿಗಳಿಂದ ಕಿರುಕುಳ, ಬೆದರಿಕೆ, ಇನ್ನೂ ಕ್ವಾರಂಟೈನ್ ಸೆಲ್​​ನಲಿ ಇಟ್ಟಿರುವುದು ಹೀಗೆ ಹಲವು ಕಾರಣಗಳನ್ನು ನೀಡಿ ದರ್ಶನ್ ಅವರು ಜಾಮೀನಿಗಾಗಿ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ದರ್ಶನ್ ಪರ ವಕೀಲರು ಹಾಗೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಆಲಿಸಿದ ಸುಪ್ರೀಂ ಕೋರ್ಟ್ ದರ್ಶನ್​​ರ ಜಾಮೀನು ಅರ್ಜಿಯನ್ನು ಪುರಸ್ಕರಿಸಿಲ್ಲ. ಬದಲಿಗೆ ಒಂದು ವರ್ಷದ ಕಾಲಾವಕಾಶವನ್ನು ನೀಡಿದೆ.

ಜಾಮೀನು ಅರ್ಜಿಯ ವಿಚಾರಣೆ ಆಲಿಸಿದ ಸುಪ್ರೀಂಕೋರ್ಟ್, ಪ್ರಕರಣದ ವಿಚಾರಣೆಗೆ ಒಂದು ವರ್ಷದ ಕಾಲಾವಧಿ ನೀಡಿದ್ದು, ಅಷ್ಟರಲ್ಲಿ ಸಾಕ್ಷ್ಯಗಳ ವಿಚಾರಣೆ ಮುಗಿಯದಿದ್ದಲ್ಲಿ, ಜಾಮೀನು ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿದೆ. ಅಲ್ಲಿಗೆ, ದರ್ಶನ್​​ಗೆ ಕನಿಷ್ಟ ಒಂದು ವರ್ಷ ಜೈಲು ವಾಸ ಖಾಯಂ ಆದಂತಾಗಿದೆ. ಒಂದು ವರ್ಷದ ಬಳಿಕವಷ್ಟೆ ಅವರು ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಸುಳ್ಳು ಸಾಕ್ಷ್ಯ ಆರೋಪಕ್ಕೆ ಎಸ್​​ಪಿಪಿ ಪ್ರಸನ್ನ ತಿರುಗೇಟು

ಸುಪ್ರೀಂ ಕೋರ್ಟ್​​ನಲ್ಲಿ ಇಂದು ನಟ ದರ್ಶನ್ ಪರ ವಾದ ಮಂಡಿಸಿದ ಖ್ಯಾತ ವಕೀಲ ಮುಕುಲ್ ರೊಹ್ಟಗಿ, ‘272ಕ್ಕೂ ಹೆಚ್ಚು ಸಾಕ್ಷಿಗಳು ಪ್ರಕರಣದಲ್ಲಿದ್ದು, ಈ ವರೆಗೆ 10 ಸಾಕ್ಷ್ಯಗಳನ್ನು ಮಾತ್ರವೇ ವಿಚಾರಣೆ ಮಾಡಲಾಗಿದೆ. ಮುಖ್ಯ ಸಾಕ್ಷಿಗಳ ವಿಚಾರಣೆಯನ್ನಾದರೂ ಮುಗಿಸುವಂತೆ ನಾವು ಕೇಳಿದ್ದೆವು ಆದರೆ ಅದು ಸಹ ಸಾಧ್ಯವಾಗಿಲ್ಲ’ ಎಂದರು. ಆದರೆ ರೊಹ್ಟಗಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ಧಾರ್ಥ್ ಲೂತ್ರಾ, ‘ನೀವು (ಆರೋಪಿಗಳು) ಸಾಕ್ಷ್ಯಗಳಿಗೆ ಏನೇನು ಮಾಡಿದ್ದೀರೆಂದು ಹೇಳಿದರೆ ನಿಮ್ಮ ಜಾಮೀನು ಅರ್ಜಿಯೇ ರದ್ದಾಗಲಿದೆ’ ಎಂದರು. ಬಳಿಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಕೀಲರು, ‘ಮುಂದಿನ ಒಂದು ವರ್ಷದಲ್ಲಿ ಸಾಕ್ಷ್ಯಗಳ ವಿಚಾರಣೆ ಮುಗಿಸುವುದಾಗಿ ಮಾಹಿತಿ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:26 am, Fri, 15 May 26

Source link

Vasthu Tips: ಮನೆಯಲ್ಲಿ ಹಾವಿನ ಫೋಟೋ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Naga Devata Photo at Home: Vastu Tips, Benefits and Right Direction for Prosperity

ಮನೆಯಲ್ಲಿ ಹಾವಿನ ಫೋಟೋ ಇಡುವುದು ಶುಭವೇ?Image Credit source: Pinterest

ಅನೇಕರು ತಮ್ಮ ಮನೆಯ ಅಂದವನ್ನು ಹೆಚ್ಚಿಸಲು ಅಥವಾ ಧಾರ್ಮಿಕ ನಂಬಿಕೆಯಿಂದ ವಿವಿಧ ಫೋಟೋಗಳನ್ನು ಗೋಡೆಗೆ ನೇತುಹಾಕುತ್ತಾರೆ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಹಾವಿನ ಅಥವಾ ನಾಗದೇವತೆಯ ಫೋಟೋ ಇರಿಸುವ ಬಗ್ಗೆ ಅನೇಕರಲ್ಲಿ ಗೊಂದಲವಿದೆ. ಆದ್ದರಿಂದ ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಹಾವಿನ ಫೋಟೋ ಇಡಬಹುದೇ? ಇಟ್ಟರೆ ಯಾವ ದಿಕ್ಕಿನಲ್ಲಿಡಬೇಕು? ಎಂಬದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಸನಾತನ ಧರ್ಮದಲ್ಲಿ ಹಾವಿನ ಮಹತ್ವ:

ಹಿಂದೂ ಧರ್ಮದಲ್ಲಿ ಹಾವುಗಳನ್ನು ಕೇವಲ ಪ್ರಾಣಿಗಳಾಗಿ ನೋಡದೆ, ದೈವಿಕ ಶಕ್ತಿಯ ಸಂಕೇತವಾಗಿ ಪೂಜಿಸಲಾಗುತ್ತದೆ. ಶಿವನ ಆಭರಣ ಹಾಗೂ ಶ್ರೀಕೃಷ್ಣನು ಹಾವಿನ ಮೇಲೆ ನೃತ್ಯ ಮಾಡುವ ಮೂಲಕ ಅದರ ದೈವಿಕ ಸಂಬಂಧವನ್ನು ಸಾರಿದ್ದಾನೆ. ಹೀಗಾಗಿ, ಹಾವನ್ನು ದೇವತೆಯ ರೂಪದಲ್ಲಿ ಮನೆಯಲ್ಲಿ ಆರಾಧಿಸುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ.

ಯಾವ ದಿಕ್ಕಿನಲ್ಲಿ ಇರಿಸುವುದು ಉತ್ತಮ?

ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಫೋಟೋವನ್ನು ತಪ್ಪು ದಿಕ್ಕಿನಲ್ಲಿ ಇರಿಸಿದರೆ ಅದು ನಕಾರಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ ಮನೆಯ ಪೂರ್ವ ದಿಕ್ಕಿನಲ್ಲಿ ಹಾವಿನ ಫೋಟೋ ಇರಿಸುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಇದಲ್ಲದೇ ಉತ್ತರ ದಿಕ್ಕಿನಲ್ಲಿ ಇರಿಸುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದು ಜ್ಯೋತಿಷ್ಯ ತಜ್ಞರು ಅಭಿಪ್ರಾಯಪಡುತ್ತಾರೆ.

ಮನೆಯಲ್ಲಿ ಹಾವಿನ ಫೋಟೋ ಇರಿಸುವುದರಿಂದಾಗುವ ಪ್ರಯೋಜನಗಳು:

ಮನೆಯಲ್ಲಿ ನಾಗದೇವತೆಯ ಅಥವಾ ಹಾವಿನ ಫೋಟೋವನ್ನು ಸರಿಯಾದ ನಿಯಮದಂತೆ ಇರಿಸುವುದರಿಂದ ಹಲವು ಲಾಭಗಳಿವೆ. ಇದು ಮನೆಗೆ ಪ್ರವೇಶಿಸುವ ದುಷ್ಟ ಶಕ್ತಿಗಳನ್ನು ಮತ್ತು ನಕಾರಾತ್ಮಕ ಕಂಪನಗಳನ್ನು ತಡೆಯುತ್ತದೆ. ಕೆಟ್ಟ ದೃಷ್ಟಿಯಿಂದ (Evil Eye) ಮನೆಯನ್ನು ರಕ್ಷಿಸುವ ಕವಚದಂತೆ ಇದು ಕೆಲಸ ಮಾಡುತ್ತದೆ. ವೃತ್ತಿ ಜೀವನದಲ್ಲಿ ಏಳಿಗೆ, ಆರ್ಥಿಕ ಸುಧಾರಣೆ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಲು ಇದು ಪೂರಕವಾಗಿದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಗಮನಿಸಬೇಕಾದ ಎಚ್ಚರಿಕೆಗಳು ಮತ್ತು ನಿಯಮಗಳು:

ಹಾವಿನ ಫೋಟೋ ಇಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ. ಮನೆಯಲ್ಲಿ ತುಂಬಾ ದೊಡ್ಡದಾದ ಅಥವಾ ಭಯ ಹುಟ್ಟಿಸುವಂತಹ ಹಾವಿನ ಚಿತ್ರಗಳನ್ನು ಇಡಬಾರದು. ಇದು ಮನಸ್ಸಿನಲ್ಲಿ ಆತಂಕವನ್ನು ಮೂಡಿಸಬಹುದು. ಒಂದು ವೇಳೆ ಹಾವಿನ ಫೋಟೋವನ್ನು ತಪ್ಪು ದಿಕ್ಕಿನಲ್ಲಿ ಇರಿಸಿದರೆ, ಕನಸಿನಲ್ಲಿ ಹಾವು ಬೆನ್ನಟ್ಟುವಂತೆ ಭಾಸವಾಗುವುದು ಅಥವಾ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಶಾಂತವಾಗಿರುವ ಅಥವಾ ದೈವಿಕ ಕಳೆ ಇರುವ ನಾಗದೇವತೆಯ ಫೋಟೋ ಆಯ್ಕೆ ಮಾಡುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖೈಬರ್ ಪಖ್ತುಂಖ್ವಾದಲ್ಲಿ ಭಾರಿ ಉಗ್ರ ದಾಳಿ: ಪಾಕಿಸ್ತಾನದ 18 ಮಂದಿ ಭದ್ರತಾ ಸಿಬ್ಬಂದಿ ಸಾವು – Kannada News | 18 Pakistan Security Personnel Killed in Coordinated TTP Terror Attacks in Khyber Pakhtunkhwa

ಸಾಂದರ್ಭಿಕ ಚಿತ್ರ (ಎಐ)Image Credit source: MediaForge AI

ಇಸ್ಲಾಮಾಬಾದ್, ಮೇ 15: ಪಾಕಿಸ್ತಾನದ (Pakistan) ವಾಯವ್ಯ ಪ್ರಾಂತ್ಯವಾದ ಖೈಬರ್ ಪಖ್ತುಂಖ್ವಾದಲ್ಲಿ (Khyber Pakhtunkhwa) ಉಗ್ರರು ನಡೆಸಿದ ಸರಣಿ ದಾಳಿಯಲ್ಲಿ ಕನಿಷ್ಠ 18 ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ನಿಷೇಧಿತ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP) ಉಗ್ರರು ಸೇನಾ ಶಿಬಿರಗಳು ಮತ್ತು ಪೊಲೀಸ್ ಚೌಕಿಗಳನ್ನು ಗುರಿಯಾಗಿಸಿಕೊಂಡು ಈ ಭೀಕರ ದಾಳಿ ನಡೆಸಿದ್ದಾರೆ.

ಮುಖ್ಯಾಂಶಗಳು

  • ಬಜೌರ್ ಜಿಲ್ಲೆಯ ಸೇನಾ ಶಿಬಿರದ ಮೇಲೆ ಆತ್ಮಹತ್ಯಾ ದಾಳಿ.
  • ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಕನಿಷ್ಠ 9 ಉಗ್ರರ ಸಾವು.
  • ಪ್ರಾಂತ್ಯದ ಇತರ ಭಾಗಗಳಲ್ಲಿ ನಡೆದ ದಾಳಿಗಳಲ್ಲಿ ನಾಲ್ವರು ಪೊಲೀಸರ ಸಾವು.

ಘಟನೆಯ ವಿವರ

ಪಾಕಿಸ್ತಾನದ ಬಜೌರ್ ಜಿಲ್ಲೆಯ ದಮಂಗಿ ಸ್ಕೌಟ್ಸ್ ಕ್ಯಾಂಪ್‌ನ ಮುಖ್ಯ ದ್ವಾರದ ಬಳಿ ಉಗ್ರನೊಬ್ಬ ಆತ್ಮಹತ್ಯಾ ಸ್ಫೋಟ ನಡೆಸುವ ಮೂಲಕ ದಾಳಿಯನ್ನು ಆರಂಭಿಸಿದ್ದಾನೆ. ಸ್ಫೋಟದ ಬೆನ್ನಲ್ಲೇ ಸುಮಾರು 20ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಉಗ್ರರು ಶಿಬಿರಕ್ಕೆ ನುಗ್ಗಿ ಮನಬಂದಂತೆ ಗುಂಡಿನ ಮಳೆಗರೆದಿದ್ದಾರೆ. ಈ ಗುಂಡಿನ ಕಾಳಗದಲ್ಲಿ 14 ಸಿಬ್ಬಂದಿ ಹತರಾಗಿದ್ದಾರೆ. ಇದೇ ವೇಳೆ ಐನಾಯಿ ಕಿಲೆ ಮತ್ತು ಮಾಮಂಡ್ ಪ್ರದೇಶಗಳಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ನಾಲ್ವರು ಪೊಲೀಸರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಘಟನಾ ಸ್ಥಳವನ್ನು ಸೇನೆಯು ಸುತ್ತುವರೆದಿದೆ. ಅಡಗಿಕೊಂಡಿರುವ ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಪಾಕಿಸ್ತಾನದಲ್ಲಿ ಆಗಾಗ್ಗೆ ನಡೆಯುತ್ತಿರುವ ಈ ದಾಳಿಗಳು ಅಲ್ಲಿನ ಭದ್ರತಾ ಲೋಪಗಳನ್ನು ಬಹಿರಂಗಪಡಿಸಿವೆ. ಆಗಾಗ್ಗೆ ಸಂಭವಿಸುವ ಸ್ಫೋಟಗಳಿಂದಾಗಿ ಸೇನೆ ಮತ್ತು ನಾಗರಿಕರು ತೀವ್ರ ಆತಂಕದಲ್ಲಿ ದಿನಕಳೆಯುವಂತಾಗಿದೆ.

ಇದನ್ನೂ ಓದಿ: ಹಾರ್ಮುಜ್‌ ಸುತ್ತಲಿನ ಪ್ರದೇಶವೂ ಸುರಕ್ಷಿತವಲ್ಲ! ಮತ್ತೆ ಭಾರತದ ಹಡಗಿನ ಮೇಲೆ ದಾಳಿ

ಕಳೆದ ಮಂಗಳವಾರವಷ್ಟೇ ಖೈಬರ್ ಪಖ್ತುಂಖ್ವಾದ ನೌರಂಗ್ ಬಜಾರ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ಉಗ್ರರ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಸದ್ಯ ಘಟನಾ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hantavirus Cases: ಮನುಷ್ಯರಿಂದ ಮನುಷ್ಯರಿಗೆ ಹರಡುವ ‘ಆಂಡಿಸ್ ವೈರಸ್’ ಸೋಂಕು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ! – Kannada News | WHO Warns of Andes Virus Spread on MV Hondius: Hantavirus Transmits Human to Human

ಜಿನಿವಾ, ಮೇ.15: ಅಟ್ಲಾಂಟಿಕ್ ಸಾಗರದಲ್ಲಿ ಸಂಚರಿಸುತ್ತಿದ್ದ MV Hondius ಕ್ರೂಸ್ ಹಡಗಿನಲ್ಲಿ ಕಾಣಿಸಿಕೊಂಡಿದ್ದ ಹಂಟಾವೈರಸ್ ಸೋಂಕು ಈಗ ಹೊಸ ರೂಪ ಪಡೆದುಕೊಂಡಿದೆ. ಸೋಂಕಿತರಲ್ಲಿ ಎಂಟು ಮಂದಿಗೆ ‘ಆಂಡಿಸ್ ವೈರಸ್’ ತಗುಲಿರುವುದು ದೃಢಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದು ಹಂಟಾವೈರಸ್‌ನ ಅತ್ಯಂತ ಅಪಾಯಕಾರಿ ತಳಿಯಾಗಿದ್ದು, ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವ ಸಾಮರ್ಥ್ಯ ಹೊಂದಿದೆ.

ಏಪ್ರಿಲ್ 1 ರಂದು ಅರ್ಜೆಂಟೀನಾದಿಂದ ಹೊರಟಿದ್ದ ಈ ಹಡಗಿನಲ್ಲಿ ಇದುವರೆಗೆ ಮೂವರು ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರಿಗೆ ಆಂಡಿಸ್ ವೈರಸ್ ಇರುವುದು ದೃಢಪಟ್ಟಿದ್ದರೆ, ಮತ್ತೊಬ್ಬರ ಸಾವು ಕೂಡ ಇದೇ ಸೋಂಕಿನಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.ಎಂಟು ಮಂದಿಯಲ್ಲಿ ಸೋಂಕು ಖಚಿತವಾಗಿದ್ದು, ಇಬ್ಬರಲ್ಲಿ ಸೋಂಕಿನ ಲಕ್ಷಣಗಳು ಹೆಚ್ಚಿದೆ ಎಂದು ಹೇಳಲಾಗಿದೆ. ಇನ್ನು ಈ ಸೋಂಕಿಗೆ ಸಂಬಂಧಿಸಿದಂತೆ ಅಮೆರಿಕದ ಪ್ರಯಾಣಿಕರೊಬ್ಬರಿಗೆ ಈ ಬಗ್ಗೆ ಪರೀಕ್ಷೆ ಮಾಡಲಾಗಿತ್ತು. ಇದೀಗ ಆರೋಗ್ಯ ಇಲಾಖೆ ನೀಡಿದ ವರದಿಯಲ್ಲಿ ಹಲವು ಗೊಂದಲಗಳು ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ.

ಸಾಮಾನ್ಯವಾಗಿ ಹಂಟಾವೈರಸ್ ಸೋಂಕು ಇಲಿಗಳ ಮೂತ್ರ, ಮಲ ಮತ್ತು ಜೊಲ್ಲಿನ ಮೂಲಕ ಹರಡುತ್ತದೆ. ಆದರೆ ಆಂಡಿಸ್ ವೈರಸ್ ಮನುಷ್ಯರ ನಡುವಿನ ನಿಕಟ ಸಂಪರ್ಕದಿಂದಲೂ ಹರಡಬಲ್ಲದು. ತನಿಖೆಯ ಪ್ರಕಾರ, ಮೊದಲು ಸೋಂಕಿಗೆ ಒಳಗಾದ ಪ್ರಯಾಣಿಕರು ಅರ್ಜೆಂಟೀನಾ ಮತ್ತು ಚಿಲಿಯಲ್ಲಿ ಪ್ರವಾಸ ಮಾಡುವಾಗ ಸೋಂಕಿತ ಇಲಿಗಳ ಸಂಪರ್ಕಕ್ಕೆ ಬಂದಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ರಮ್ಮಿ ಆಟಗಾರರಿಗೆ ದೊಡ್ಡ ಶಾಕ್! ಗೇಮ್ಸ್‌ಕ್ರಾಫ್ಟ್‌ನಿಂದ 526 ಕೋಟಿ ರೂ. ವಂಚನೆ? ಇಡಿಯಿಂದ ಮೂವರು ಬಿಗ್ ಬಾಸ್‌ಗಳ ಬಂಧನ

ವಿಶ್ವ ಆರೋಗ್ಯ ಸಂಸ್ಥೆಯು ಈ ಸೋಂಕಿನ ಅಪಾಯದ ಮಟ್ಟವನ್ನು ಹಡಗಿನಲ್ಲಿದ್ದವರಿಗೆ ‘ಮಧ್ಯಮ’ (Moderate) ಮತ್ತು ಉಳಿದ ಜಗತ್ತಿಗೆ ‘ಕಡಿಮೆ’ (Low) ಎಂದು ವರ್ಗೀಕರಿಸಿದೆ. ಹಡಗು ಈಗ ನೆದರ್ಲ್ಯಾಂಡ್ಸ್‌ನತ್ತ ಸಾಗುತ್ತಿದ್ದು, ಸಂಪೂರ್ಣವಾಗಿ ಸೋಂಕುಮುಕ್ತಗೊಳಿಸುವ (Disinfection) ಪ್ರಕ್ರಿಯೆ ನಡೆಯಲಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:10 am, Fri, 15 May 26

Source link

ಪ್ರಧಾನಿ ಮೋದಿ ಪಂಚರಾಷ್ಟ್ರಗಳ ಪ್ರವಾಸ: ಯುದ್ಧದ ಭೀತಿಯ ನಡುವೆ ಭಾರತದ ಬಲಿಷ್ಠ ರಾಜತಾಂತ್ರಿಕ ನಡೆ! – Kannada News | PM Modi’s 5 Nation Tour: UAE Visit and India Nordic Summit to Boost Global Ties

ಪ್ರಧಾನಿ ಮೋದಿ ಪಂಚರಾಷ್ಟ್ರಗಳ ಪ್ರವಾಸ ಇಂದಿನಿಂದ ಆರಂಭ

ನವದೆಹಲಿ, ಮೇ 15: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದಿನಿಂದ ಐದು ದೇಶಗಳ ಐತಿಹಾಸಿಕ ರಾಜತಾಂತ್ರಿಕ ಪ್ರವಾಸವನ್ನು ಆರಂಭಿಸಲಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ ಮೋದಿಯ ಈ ಭೇಟಿ ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪ್ರವಾಸದ ಮೊದಲ ಹಂತವಾಗಿ ಇಂದು ಯುಎಇಗೆ (UAE) ಭೇಟಿ ನೀಡಲಿರುವ ಅವರು, ನಂತರ ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ತೆರಳಲಿದ್ದಾರೆ.

ಮುಖ್ಯಾಂಶಗಳು

  • ಪ್ರಧಾನಿ ಮೋದಿ ಅವರಿಂದ ಯುಎಇ ಮತ್ತು ನಾಲ್ಕು ಯುರೋಪ್ ರಾಷ್ಟ್ರಗಳ ಐತಿಹಾಸಿಕ ಪ್ರವಾಸ.
  •  ನಾರ್ವೆಯಲ್ಲಿ ನಡೆಯಲಿರುವ ಮೂರನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಮೋದಿ.
  • ಇಂಧನ ಭದ್ರತೆ, ರಕ್ಷಣೆ ಮತ್ತು ತಂತ್ರಜ್ಞಾನ ವಲಯದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಆದ್ಯತೆ.

ಯುಎಇ ಭೇಟಿ, ಯಾವುದರ ಕುರಿತು ಚರ್ಚೆ?

ಇಂದು ಯುಎಇ ತಲುಪಲಿರುವ ಮೋದಿ, ಯುಎಇಯ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಲಿದ್ದಾರೆ. ಇತ್ತೀಚೆಗೆ ಫುಜೈರಾದ ಪೆಟ್ರೋಲಿಯಂ ಸಂಕೀರ್ಣದ ಮೇಲೆ ನಡೆದ ದಾಳಿಯಲ್ಲಿ ಮೂವರು ಭಾರತೀಯರು ಗಾಯಗೊಂಡಿರುವ ಬೆನ್ನಲ್ಲೇ ಈ ಭೇಟಿ ಮಹತ್ವ ಪಡೆದಿದೆ. ಯುಎಇ ಒಪೆಕ್‌ನಿಂದ (OPEC) ಹೊರಬಂದಿರುವ ಹಿನ್ನೆಲೆಯಲ್ಲಿ, ಭಾರತಕ್ಕೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಸ್ಥಿರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಉಭಯ ನಾಯಕರು ಚರ್ಚಿಸಲಿದ್ದಾರೆ.

ಯುರೋಪ್ ರಾಷ್ಟ್ರಗಳ ಪ್ರವಾಸದ ಮುಖ್ಯಾಂಶಗಳು

  • ನೆದರ್ಲ್ಯಾಂಡ್ಸ್ (ಮೇ 15-17): ಪ್ರಧಾನಿ ರಾಬ್ ಜೆಟ್ಟನ್ ಅವರ ಆಹ್ವಾನದ ಮೇರೆಗೆ ಮೋದಿ ಅಲ್ಲಿನ ರಾಜ ವಿಲ್ಲೆಮ್-ಅಲೆಕ್ಸಾಂಡರ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಭಾರತ-ಯುರೋಪಿಯನ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದ (FTA) ಬಗ್ಗೆ ಚರ್ಚೆ ನಡೆಯಲಿದೆ.
  • ಸ್ವೀಡನ್ (ಮೇ 17): ಗೋಥೆನ್‌ಬರ್ಗ್‌ನಲ್ಲಿ ಸ್ವೀಡನ್ ಪ್ರಧಾನಿಯವರೊಂದಿಗೆ ವ್ಯಾಪಾರ, ಹಸಿರು ತಂತ್ರಜ್ಞಾನ ಮತ್ತು ಎಐ (AI) ಕುರಿತು ಮೋದಿ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ‘ಯುರೋಪಿಯನ್ ರೌಂಡ್‌ಟೇಬಲ್ ಫಾರ್ ಇಂಡಸ್ಟ್ರಿ’ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
  • ನಾರ್ವೆ (ಮೇ 18-19): ಕಳೆದ ನಾಲ್ಕು ದಶಕಗಳಲ್ಲಿ ನಾರ್ವೆಗೆ ಭೇಟಿ ನೀಡುತ್ತಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ. ಓಸ್ಲೋದಲ್ಲಿ ನಡೆಯಲಿರುವ 3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಬ್ಲೂ ಎಕಾನಮಿ (ಸಮುದ್ರ ಚಟುವಟಿಕೆಗಳ ಕುರಿತ ಆರ್ಥಿಕತೆ) ಮತ್ತು ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಇಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.
  • ಇಟಲಿ (ಮೇ 19-20): ಪ್ರವಾಸದ ಅಂತಿಮ ಹಂತವಾಗಿ ರೋಮ್‌ಗೆ ಭೇಟಿ ನೀಡಲಿರುವ ಮೋದಿ, ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಪ್ರಧಾನ ಕಚೇರಿಗೂ ಅವರು ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ ಮೋದಿ ಅವರ ಯುಎಇ-ಯೂರೋಪ್ ಪ್ರವಾಸ; 70 ಬಿಲಿಯನ್ ಡಾಲರ್ ವ್ಯಾಪಾರ ಪುಷ್ಟಿ ನಿರೀಕ್ಷೆ

ವ್ಯಾಪಾರ ಮತ್ತು ರಕ್ಷಣೆ

ಈ ಇಡೀ ಪ್ರವಾಸದ ಪ್ರಮುಖ ಉದ್ದೇಶ ರಕ್ಷಣೆ, ತಂತ್ರಜ್ಞಾನ ಮತ್ತು ಇಂಧನ ವಲಯದಲ್ಲಿ ಸಹಕಾರವನ್ನು ಹೆಚ್ಚಿಸುವುದಾಗಿದೆ. 2025ರಲ್ಲಿ ಸಹಿ ಹಾಕಲಾದ ಭಾರತ-EFTA TEPA ಒಪ್ಪಂದದ ನಂತರ ನಡೆಯುತ್ತಿರುವ ಈ ಭೇಟಿಯು ಭಾರತದ ಆರ್ಥಿಕತೆಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:57 am, Fri, 15 May 26

Source link

ನೀಟ್ ಆಕಾಂಕ್ಷಿಗಳಿಗೆ ಬಿಗ್ ಅಪ್‌ಡೇಟ್: ಜೂನ್ 21ಕ್ಕೆ ನೀಟ್-ಯುಜಿ ಮರು ಪರೀಕ್ಷೆ ನಿಗದಿ! – Kannada News | NEET UG 2026 Re Exam Date Announced: Medical Entrance Test to be Held on 21 June 2026

ದೆಹಲಿ, ಮೇ.15: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗುರುವಾರ (ಮೇ,14) ತಡರಾತ್ರಿ ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆಸಿದರು. ಸಿಬಿಐ (CBI) ತನಿಖೆಯು ಚುರುಕುಗೊಂಡಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಒಳಗಿನವರ ಕೈವಾಡದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇದೀಗ ಇದರ ಜತೆಗೆ ಮಹತ್ವದ ಘೋಷಣೆಯನ್ನು ಕೂಡ ಮಾಡಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿಗೆ ಹೊಸ ಪರೀಕ್ಷಾ ದಿನಾಂಕಗಳನ್ನು ಘೋಷಿಸಲಾಗಿದೆ.  ಜೂನ್ 21 ರಂದು ನಡೆಯಲಿದೆ.

ನಿನ್ನೆ (ಮೇ.14) ರಾತ್ರಿ ನೀಟ್​ ಪರೀಕ್ಷೆ ನಡೆಸುವ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯು ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸುದೀರ್ಘವಾಗಿ ಚರ್ಚಿಸಿತು. ಈ ಸಭೆಯಲ್ಲಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ಎನ್‌ಟಿಎ ಮಹಾನಿರ್ದೇಶಕರು ಮತ್ತು ಸಿಬಿಎಸ್‌ಇ ಅಧ್ಯಕ್ಷರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇಲ್ಲಿದೆ ನೋಡಿ ಪೋಸ್ಟ್​​:

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಐವರು ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದು, ಇನ್ನೂ ಇಬ್ಬರು ಶಂಕಿತರನ್ನು ಬಂಧಿಸಿದೆ. ಇದೊಂದು “ಸಂಘಟಿತ ಗ್ಯಾಂಗ್” ನಡೆಸುತ್ತಿರುವ ದಂಧೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ರಾಜಸ್ಥಾನದ ಸೀಕರ್ ಜಿಲ್ಲೆಯ ಕೋಚಿಂಗ್ ಸೆಂಟರ್‌ಗಳಿಗೆ ಈ ಸೋರಿಕೆಯಾದ ಪತ್ರಿಕೆ ತಲುಪಿದ್ದು, ಪ್ರತಿ ವಿದ್ಯಾರ್ಥಿಯಿಂದ 2 ರಿಂದ 5 ಲಕ್ಷ ರೂ. ಪಡೆಯಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.

ಇದನ್ನೂ ಓದಿ: ರಮ್ಮಿ ಆಟಗಾರರಿಗೆ ದೊಡ್ಡ ಶಾಕ್! ಗೇಮ್ಸ್‌ಕ್ರಾಫ್ಟ್‌ನಿಂದ 526 ಕೋಟಿ ರೂ. ವಂಚನೆ? ಇಡಿಯಿಂದ ಮೂವರು ಬಿಗ್ ಬಾಸ್‌ಗಳ ಬಂಧನ

ದೆಹಲಿ, ಅಹಮದಾಬಾದ್ ಸೇರಿದಂತೆ ಹಲವು ಕಡೆ ವಿದ್ಯಾರ್ಥಿ ಸಂಘಟನೆಗಳು ಎನ್‌ಟಿಎ ರದ್ದುಪಡಿಸಲು ಮತ್ತು ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ.ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ 21 ವರ್ಷದ ವಿದ್ಯಾರ್ಥಿಯೊಬ್ಬ ಪರೀಕ್ಷೆ ರದ್ದಾದ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಸತಿ ವೈದ್ಯರ ಸಂಘದ ಒಕ್ಕೂಟ (FORDA) ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದು, ನೀಟ್ ಪರೀಕ್ಷೆಯನ್ನು ಪೆನ್-ಪೇಪರ್ ಬದಲಿಗೆ ಐಐಟಿ-ಜೆಇಇ ಮಾದರಿಯಲ್ಲಿ ಕಂಪ್ಯೂಟರ್ ಆಧಾರಿತವಾಗಿ ನಡೆಸುವಂತೆ ಒತ್ತಾಯಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:49 am, Fri, 15 May 26

Source link

Gold Rate: ಸತತ ಇಳಿಕೆ ಕಂಡ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ದರಪಟ್ಟಿ – Kannada News | Gold Price Today on 15th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 15: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಇಳಿದಿವೆ. ನಿನ್ನೆ ಗುರುವಾರ ಗ್ರಾಮ್​ಗೆ 500 ರೂಗೂ ಅಧಿಕ ಇಳಿಕೆ ಕಂಡಿದ್ದ ಚಿನ್ನದ ಬೆಲೆ (Gold Rates) ಶುಕ್ರವಾರ 205 ರೂನಷ್ಟು ತಗ್ಗಿದೆ. ಎರಡು ದಿನದಲ್ಲಿ 700ಕ್ಕೂ ಹೆಚ್ಚು ರೂಗಳಷ್ಟು ಬೆಲೆ ಕಡಿಮೆಗೊಂಡಿದೆ. ವಿದೇಶಗಳಲ್ಲೂ ಬೆಲೆ ಅಲ್ಪ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯೂ ಸತತ ಎರಡನೇ ಬಾರಿ 10 ರೂ ಇಳಿದಿದೆ. ಎರಡು ದಿನದಲ್ಲಿ 20 ರೂ ಕಡಿಮೆಗೊಂಡಿದೆ. ಮತ್ತೊಮ್ಮೆ ಅದರ ಬೆಲೆ 300 ರೂ ಗಡಿಯೊಳಗೆ ಬಂದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,46,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,60,090 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,46,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 29,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 15ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,009 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,675 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,007 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,009 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,675 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,675 ರೂ
  • ಚೆನ್ನೈ: 14,950 ರೂ
  • ಮುಂಬೈ: 14,675 ರೂ
  • ದೆಹಲಿ: 14,690 ರೂ
  • ಕೋಲ್ಕತಾ: 14,675 ರೂ
  • ಕೇರಳ: 14,675 ರೂ
  • ಅಹ್ಮದಾಬಾದ್: 14,680 ರೂ
  • ಜೈಪುರ್: 14,690 ರೂ
  • ಲಕ್ನೋ: 14,690 ರೂ
  • ಭುವನೇಶ್ವರ್: 14,675 ರೂ

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ ಭರ್ಜರಿ ಏರಿಕೆ; ಜನಸಾಮಾನ್ಯರಿಗೆ ಬೆಲೆ ಏರಿಕೆಯ ಆಘಾತ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 560 ರಿಂಗಿಟ್ (13,612 ರುಪಾಯಿ)
  • ದುಬೈ: 522 ಡಿರಾಮ್ (13,634 ರುಪಾಯಿ)
  • ಅಮೆರಿಕ: 146.50 ಡಾಲರ್ (14,054 ರುಪಾಯಿ)
  • ಸಿಂಗಾಪುರ: 183.80 ಸಿಂಗಾಪುರ್ ಡಾಲರ್ (13,805 ರುಪಾಯಿ)
  • ಕತಾರ್: 519.50 ಕತಾರಿ ರಿಯಾಲ್ (13,672 ರೂ)
  • ಸೌದಿ ಅರೇಬಿಯಾ: 531 ಸೌದಿ ರಿಯಾಲ್ (13,574 ರುಪಾಯಿ)
  • ಓಮನ್: 55.30 ಒಮಾನಿ ರಿಯಾಲ್ (13,778 ರುಪಾಯಿ)
  • ಕುವೇತ್: 42.85 ಕುವೇತಿ ದಿನಾರ್ (13,418 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 290 ರೂ
  • ಚೆನ್ನೈ: 305 ರೂ
  • ಮುಂಬೈ: 290 ರೂ
  • ದೆಹಲಿ: 290 ರೂ
  • ಕೋಲ್ಕತಾ: 290 ರೂ
  • ಕೇರಳ: 305 ರೂ
  • ಅಹ್ಮದಾಬಾದ್: 290 ರೂ
  • ಜೈಪುರ್: 290 ರೂ
  • ಲಕ್ನೋ: 290 ರೂ
  • ಭುವನೇಶ್ವರ್: 305 ರೂ
  • ಪುಣೆ: 290

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

International Day of Families 2026: ಮೇ 15 ರಂದೇ ಅಂತಾರಾಷ್ಟ್ರೀಯ ಕುಟುಂಬ ದಿನ ಆಚರಿಸುವುದು ಏಕೆ? – Kannada News | International Day of Families 2026: What are the History and significance of International Day of Families

ಅಂತಾರಾಷ್ಟ್ರೀಯ ಕುಟುಂಬ ದಿನImage Credit source: Pinterest

ಮನೆಯೇ ಮೊದಲ ಪಾಠ ಶಾಲೆ. ಕುಟುಂಬವಿಲ್ಲದೇ ವ್ಯಕ್ತಿಯಿಲ್ಲ. ಕುಟುಂಬ’ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಮನೆ ಮಂದಿ ಹಾಗೂ ತನ್ನ ಕುಟುಂಬದಿಂದಲೇ ಜೀವನಕ್ಕೆ ಬೇಕಾದ ಪಾಠವನ್ನು ಕಲಿಯುತ್ತಾನೆ. ಇಲ್ಲಿ ನೋವಿರಲಿ, ನಲಿವಿರಲಿ ಕುಟುಂಬದ ಸದಸ್ಯರು ಸದಾ ಜತೆಗೆ ನಿಲ್ಲುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ವಿಭಿಕ್ತ ಕುಟುಂಬಗಳು ಹೆಚ್ಚಾಗುತ್ತಿದೆ. ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕುಟುಂಬದ ಮಹತ್ವವನ್ನು ಸಾರುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಕುಟುಂಬ ದಿನವನ್ನು (International Day of Families) ಮೇ 15 ರಂದು ಆಚರಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಕುಟುಂಬ ದಿನದ ಇತಿಹಾಸವೇನು?

ವಿಶ್ವ ಸಂಸ್ಥೆ 1993 ರ ಮೇ 15ರಂದು ಜನರಲ್ ಅಸೆಂಬ್ಲಿಯಲ್ಲಿ ಅಂತಾರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನು ಆಚರಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿತು. ಅಂದಿನಿಂದ ಪ್ರಪಂಚದಾದಂತ್ಯ ಮೇ 15 ರಂದು ವಿಶ್ವ ಕುಟುಂಬ ದಿನವನ್ನಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ: National Technology Day 2026: ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಪಾತ್ರ ಅಪಾರ

ಅಂತಾರಾಷ್ಟ್ರೀಯ ಕುಟುಂಬ ದಿನದ ಮಹತ್ವವೇನು?

ಕುಟುಂಬ ಹಾಗೂ ಸದಸ್ಯರಿಲ್ಲದೇ ಒಬ್ಬಂಟಿಯಾಗಿ ಬದುಕಲು ಅಸಾಧ್ಯ. ಕುಟುಂಬಗಳ ಮೌಲ್ಯ ಹಾಗೂ ಮಹತ್ವವನ್ನು ತಿಳಿಸುವ ದೃಷ್ಟಿಯಿಂದ ಈ ದಿನವು ಮಹತ್ವದ್ದಾಗಿದೆ. ಈ ದಿನದಂದು ಕಾರ್ಯಾಗಾರಗಳು, ವಿಚಾರಗೋಷ್ಠಿಗಳು, ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link