Category Archives: Blog

Your blog category

ರಾತ್ರಿ ಮಲಗೋ ಮುನ್ನ ಪಾದಗಳನ್ನು ತೊಳೆಯೋದು ಎಷ್ಟು ಮುಖ್ಯ ಗೊತ್ತಾ? – Kannada News | Benefits of washing feet before going to bed

ವೈಯಕ್ತಿಕ ನೈರ್ಮಲ್ಯದ (Hygiene) ಬಗ್ಗೆ ಪ್ರತಿಯೊಬ್ಬರೂ ಸಹ ಕಾಳಜಿ ವಹಿಸಬೇಕು. ಇದು ಸೋಂಕುಗಳನ್ನು ತಡೆಗಟ್ಟಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೈರ್ಮಲ್ಯದ ದೃಷ್ಟಿಯಿಂದ ನಾವು ಪ್ರತಿನಿತ್ಯ ಸ್ನಾನ ಮಾಡುತ್ತೇವೆ ಮತ್ತು ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುತ್ತೇವೆ. ಕಾಲುಗಳ ಆರೈಕೆಯ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಅದರಲ್ಲೂ ಮಲಗುವ ಮುನ್ನ ಕಡ್ಡಾಯವಾಗಿ ಪಾದಗಳನ್ನು ತೊಳೆದೇ ಮಲಗಬೇಕು ಎಂಬುದು ಅನೇಕರಿಗೆ ಗೊತ್ತೇ ಇಲ್ಲ. ತಜ್ಞರು ಹೇಳುವಂತೆ, ವಿಶೇಷವಾಗಿ ಮಲಗುವ ಮೊದಲು, ಪಾದಗಳನ್ನು ತೊಳೆಯದಿದ್ದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಿದ್ದರೆ ಪಾದಗಳನ್ನು ತೊಳೆಯುವುದು ಏಕೆ ಅಷ್ಟು ಮುಖ್ಯ ಎಂಬುದನ್ನು ನೋಡೋಣ ಬನ್ನಿ.

ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆಯುವುದು ಏಕೆ ಮುಖ್ಯ?

ತಜ್ಞರ ಪ್ರಕಾರ, ಪ್ರತಿಯೊಬ್ಬರೂ ಮಲಗುವ ಮೊದಲು ತಮ್ಮ ಪಾದಗಳನ್ನು ತೊಳೆಯಬೇಕು. ನಮ್ಮ ಪಾದಗಳು ಆಗಾಗ್ಗೆ ನೆಲವನ್ನು ಸ್ಪರ್ಶಿಸುವುದರಿಂದ, ಧೂಳು ಮತ್ತು ಸೂಕ್ಷ್ಮಜೀವಿಗಳು ಅವುಗಳಿಗೆ ಅಂಟಿಕೊಳ್ಳಬಹುದು. ಹಾಗಾಗಿ ಪಾದಗಳನ್ನು ತೊಳೆಯದೆ ಮಲಗುವುದರಿಂದ, ಈ ಧೂಳು ಮತ್ತು ಸೂಕ್ಷ್ಮಜೀವಿಗಳು  ಮೂಗು, ಬಾಯಿ ಮತ್ತು ಚರ್ಮವನ್ನು ಸುಲಭವಾಗಿ ತಲುಪಬಹುದು, ಇದರಿಂದಾಗಿ ಸೋಂಕು ಉಂಟಾಗುತ್ತದೆ. ಹೀಗಿರುವಾಗ ನಿಮ್ಮ ಪಾದಗಳನ್ನು ತೊಳೆಯುವುದರಿಂದ ಸೋಂಕಿನ ಅಪಾಯ ಕಡಿಮೆಯಾಗುತ್ತದೆ. ಅಲ್ಲದೆ ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆಯುವುದು ಕೊಳಕು ಮತ್ತು ಸೂಕ್ಷ್ಮಜೀವಿಗಳು ನಿಮ್ಮ ಹಾಸಿಗೆಯ ಮೇಲೆ ಬರದಂತೆ ತಡೆಯಲು ಇರುವಂತಹ  ಆರೋಗ್ಯಕರ ಮಾರ್ಗವಾಗಿದೆ.

ಮಲಗುವ ಮುನ್ನ ಪಾದಗಳನ್ನು ತೊಳೆಯದಿದ್ದರೆ ಏನೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ?

ಕಾಲು ತೊಳೆಯದೆ ಮಲಗುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು ಉಂಟಾಗುತ್ತದೆ. ಇದು ಪಾದಗಳ ಮೇಲೆ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು ಹೌದು ತುರಿಕೆ, ಕೆಂಪು, ಬಿರುಕು ಬಿಟ್ಟ ಹಿಮ್ಮಡಿಗಳು, ಗುಳ್ಳೆಗಳು ಮತ್ತು ಊತ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ವಿಶೇಷವಾಗಿ ಕ್ರೀಡಾಪಟುಗಳು ಮತ್ತು ವಿದ್ಯಾರ್ಥಿಗಳಲ್ಲಿ, ದೀರ್ಘಕಾಲದವರೆಗೆ ಬೂಟುಗಳನ್ನು ಧರಿಸುವಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಬೆವರಿನ ದುರ್ವಾಸನೆಯನ್ನು ಹೋಗಲಾಡಿಸಲು ಸ್ನಾನದ ನೀರಿಗೆ ವಸ್ತುವನ್ನು ಸೇರಿಸಿ

ಜನರು ಮಲಗುವ ಮೊದಲು ತಮ್ಮ ಪಾದಗಳನ್ನು ಕಡ್ಡಾಯವಾಗಿ ತೊಳೆಯಲೇಬೇಕು?

ವೈದ್ಯರ ಪ್ರಕಾರ, ಎಲ್ಲರೂ ಮಲಗುವ ಮುನ್ನ ತಮ್ಮ ಪಾದಗಳನ್ನು ತೊಳೆಯಬೇಕು, ಆದರೆ ಮಧುಮೇಹಿಗಳು ವಿಶೇಷವಾಗಿ ಜಾಗರೂಕರಾಗಿರಬೇಕು. ಅವರು ಪಾದಗಳ ನೈರ್ಮಲ್ಯದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕು. ಏಕೆಂದರೆ ಮಧುಮೇಹಿಗಳು ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ. ಆದ್ದರಿಂದ, ಅವರು ಜಾಗರೂಕರಾಗಿರಬೇಕು ಮತ್ತು ಮಲಗುವ ಮುನ್ನ ತಮ್ಮ ಪಾದಗಳನ್ನು ತೊಳೆಯಲೇಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:49 pm, Tue, 5 May 26

Source link

ಅಸ್ತಮಾ ರೋಗಿಗಳೇ ಹವಾಮಾನ ಬದಲಾವಣೆಯಿಂದ ಸಮಸ್ಯೆಗಳಾಗುತ್ತಿದ್ಯಾ? ಹಾಗಿದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಿ – Kannada News | Asthma Patients Beware: Seasonal Changes and Breathing Health Guide

Asthma Patients Beware: Seasonal Changes and Breathing Health GuideImage Credit source: Getty Images

ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಆಗುತ್ತಿರುವ ನಿರಂತರ ಬದಲಾವಣೆಗಳು ಅಸ್ತಮಾ (Asthma) ರೋಗಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ತಾಪಮಾನದಲ್ಲಿ ಏರುಪೇರು, ಗಾಳಿಯಲ್ಲಿನ ತೇವಾಂಶದ ಬದಲಾವಣೆ ಮತ್ತು ಧೂಳು, ಮಾಲಿನ್ಯದ ಪ್ರಮಾಣ ಹೆಚ್ಚಾಗಿರುವುದು ಸೇರಿದಂತೆ ನಾನಾ ರೀತಿಯ ಕಾರಣಗಳು ಉಸಿರಾಟ ಸಂಬಂಧಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಹವಾಮಾನ ಬದಲಾದಾಗ ದೇಹವು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಅಸ್ತಮಾ ಲಕ್ಷಣಗಳು ಸುಲಭವಾಗಿ ಟ್ರಿಗರ್ ಆಗುತ್ತವೆ. ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿನ ಗಾಳಿ ಉಸಿರಾಟದ ತೊಂದರೆಯನ್ನು ಹೆಚ್ಚಿಸಬಹುದು. ಇದರಿಂದ ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆ ಬಿಗಿತದ ಸಮಸ್ಯೆಗಳು ಕಾಣಿಸಬಹುದು. ಹಾಗಾದರೆ ಅಸ್ತಮಾ ರೋಗಿಗಳು ಈ ಸಮಯದಲ್ಲಿ ಯಾವ ರೀತಿ ಜಾಗ್ರತೆ ಮಾಡಬೇಕು, ಯಾವ ಲಕ್ಷಣಗಳನ್ನು ನಿರ್ಲಕ್ಸ್ಯ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಸ್ತಮಾ ರೋಗಿಗಳು ಹೇಗೆ ಜಾಗ್ರತೆ ವಹಿಸಬೇಕು?

ತಜ್ಞರ ಪ್ರಕಾರ, ವೈದ್ಯರು ಸೂಚಿಸಿದ ಔಷಧಿ ಮತ್ತು ಇನ್ಹೇಲರ್ ಅನ್ನು ನಿಯಮಿತವಾಗಿ ಬಳಸುವುದು ಅತ್ಯಂತ ಮುಖ್ಯ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಧೂಳು ಮತ್ತು ಮಾಲಿನ್ಯದಿಂದ ರಕ್ಷಣೆ ನೀಡುತ್ತದೆ. ಮನೆಯ ಒಳಗಡೆ ಸ್ವಚ್ಛತೆಯನ್ನು ಕಾಪಾಡಿ, ಧೂಳು ಜಮೆಯಾಗದಂತೆ ನೋಡಿಕೊಳ್ಳುವುದು ಅಗತ್ಯ. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಮತ್ತು ದೇಹವನ್ನು ಹೈಡ್ರೇಟ್ ಆಗಿಡುವುದು ಉಸಿರಾಟದ ತೊಂದರೆ ಕಡಿಮೆ ಮಾಡಲು ಸಹಕಾರಿ. ಜೊತೆಗೆ ಲಘು ವ್ಯಾಯಾಮ ಮತ್ತು ಪ್ರಾಣಾಯಾಮ ಫೆಫ್ಸುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಆದರೆ ಯಾವುದೇ ವ್ಯಾಯಾಮ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ಪದೇಪದೇ ಉಸಿರಾಟದ ತೊಂದರೆ, ಎದೆ ಬಿಗಿತ, ನಿರಂತರ ಕೆಮ್ಮು, ರಾತ್ರಿ ಸಮಯದಲ್ಲಿ ಉಸಿರಾಟ ಕಷ್ಟವಾಗುವುದು ಇತ್ಯಾದಿ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು. ಇನ್ಹೇಲರ್ ಬಳಕೆಯ ನಂತರವೂ ಲಕ್ಷಣಗಳು ಕಡಿಮೆಯಾಗದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ತೀವ್ರ ತಣ್ಣನೆಯ ಗಾಳಿ ಅಥವಾ ಧೂಳಿನ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸಿ. ಮನೆಗಳಲ್ಲಿ ಸರಿಯಾದ ಗಾಳಿಯ ಹರಿವು ಇರಲಿ. ಧೂಳು, ಧೂಮಪಾನ ಮತ್ತು ತೀವ್ರ ವಾಸನೆಗಳಿಂದ ದೂರವಿರಿ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯನ್ನು ಪಾಲಿಸುವುದು ಮುಖ್ಯ. ಹವಾಮಾನ ಬದಲಾವಣೆ ಅಸ್ತಮಾ ರೋಗಿಗಳಿಗೆ ಸವಾಲಾಗಿದ್ದರೂ, ಸರಿಯಾದ ಜಾಗ್ರತೆ ಮತ್ತು ನಿಯಮಿತ ಚಿಕಿತ್ಸೆ ಮೂಲಕ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

20ರ ಯುವತಿ-46ರ ಅಂಕಲ್ ಲವ್: ಪ್ರೇಯಸಿ ಬೇಕು ಹೆಂಡ್ತಿನೂ ಬೇಕೆಂದ ಟೇಲರ್ – Kannada News | A 46 Year Old Man Cheating to 20 old Young Woman in Love Name

ಚಿಕ್ಕಬಳ್ಳಾಪುರ, (ಮೇ 05): 46ರ ಅಂಕಲ್ 20 ವರ್ಷದ ಯುವತಿಯನ್ನು ಪ್ರೀತಿಸಿ  (Love) ಕೈಕೊಟ್ಟ ಆರೋಪ ಕೇಳಿಬಂದಿದೆ.  ಚಿಕ್ಕಬಳ್ಳಾಪುರದ (Chikkaballapur) ಬಾಗೇಪಲ್ಲಿ ಮೂಲದ ಟೈಲರ್ ರಮೇಶ ಎನ್ನುವಾತನಿಗೆ ಈಗಾಗಲೇ ಮದುವೆಯಾಗಿದೆ. ಆದರೂ ಸಹ ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ. ಸಾಲದಕ್ಕೆ ಮದುವೆ ಮಾಡಿಕೊಳ್ಳೊದಾಗಿ ನಂಬಿಸಿ ಆಕೆಯೊಂದಿಗೆ 2 ತಿಂಗಳ ಸಂಸಾರ ಸಹ ನಡೆಸಿದ್ದಾನೆ.

ಚಿಕ್ಕಮ್ಮನ ಮನೆಗೆ ಹೋಗಿ ಬರ್ತಿದ್ದಾಗ ಯುವತಿಯನ್ನು ರಮೇಶ್ ಪರಿಚಯ ಮಾಡಿಕೊಂಡಿದ್ದ. ಬಳಿಕ ಯುವತಿಯ ಪೋನ್ ನಂಬರ್ ಪಡೆದು ಚಿನ್ನ ರನ್ನ ಗಿನ್ನ ಅಂತ ಪುಸಲಾಯಿಸಿ ಲವ್ ಮಾಡಿದ್ದ. ಆದ್ರೆ, ಇದೀಗ ಕೈಕೊಟ್ಟಿದ್ದಾನೆ. ಇದರಿಂದ ಕಂಗಾಲಾದ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಗೆಲುವಿನ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದ ಪೂಜಾ ಹೆಗ್ಡೆ: ವಿಡಿಯೋ ವೈರಲ್ – Kannada News | Jana Nayagan actor Pooja Hegde prediction on TVK Thalapathy Vijay Election Win comes true

ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಫಲಿತಾಂಶ ಹೊರಬಿದ್ದಿದ್ದು, ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಯಾರೂ ಊಹಿಸದ ರೀತಿಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ವಿಜಯ್ (Thalapathy Vijay) ಅವರದ್ದೇ ಹವಾ. ಈ ನಡುವೆ, ವಿಜಯ್ ಅವರ ಈ ಭರ್ಜರಿ ಗೆಲುವಿನ ಬಗ್ಗೆ ನಟಿ ಪೂಜಾ ಹೆಗ್ಡೆ (Pooja Hegde) ಅವರು ಬಹಳ ಹಿಂದೆಯೇ ನುಡಿದಿದ್ದ ಭವಿಷ್ಯ ಈಗ ಅಕ್ಷರಶಃ ನಿಜವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

1. ವೈರಲ್ ಆದ ಹಳೆಯ ವಿಡಿಯೋದಲ್ಲಿದೆ ಪೂಜಾ ಹೆಗ್ಡೆ ಭವಿಷ್ಯವಾಣಿ.

2. ಯಾರು ಚುನಾವಣೆ ಗೆಲ್ತಾರೆ ಎನ್ನೋದನ್ನು ಮೊದಲೇ ಹೇಳಿದ್ದ ನಟಿ.

3. ವಿಜಯ್ ಜತೆ ‘ಬೀಸ್ಟ್’, ‘ಜನ ನಾಯಗನ್’ ಚಿತ್ರದಲ್ಲಿ ಪೂಜಾ ನಟನೆ.

ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ಜನ ನಾಯಗನ್’ ಚಿತ್ರದ ಶೂಟಿಂಗ್ ಸೆಟ್‌ನ ಹಳೆಯ ವಿಡಿಯೋವೊಂದನ್ನು ಪೂಜಾ ಅವರು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಅಲ್ಲಿನ ಬೋರ್ಡ್ ಒಂದರ ಮೇಲೆ ‘ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?’ ಎಂದು ಬರೆಯಲಾಗಿತ್ತು. ಆಗ ಪೂಜಾ ಹೆಗ್ಡೆ ಅವರು ತಮಾಷೆಯಾಗಿ ತಮ್ಮ ಪಕ್ಕದಲ್ಲೇ ನಿಂತಿದ್ದ ವಿಜಯ್ ಅವರತ್ತ ಬೆರಳು ಮಾಡಿ ತೋರಿಸಿದ್ದರು. ಪೂಜಾ ಅವರ ಈ ಮಾತಿಗೆ ವಿಜಯ್ ಅವರು ಮುಗುಳ್ನಗುತ್ತಾ ನಾಚಿಕೊಂಡಿದ್ದರು.

ಅಂದು ಪೂಜಾ ಹೆಗ್ಡೆ ತಮಾಷೆಯಾಗಿ ನುಡಿದಿದ್ದ ಈ ಭವಿಷ್ಯವಾಣಿ ಇಂದು ನಿಜವಾಗಿದೆ. ವಿಜಯ್ ಅವರ ಟಿವಿಕೆ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಸರ್ಕಾರ ರಚಿಸಲು ಸಜ್ಜಾಗಿದೆ. ವಿಜಯ್ ಅವರಿಗೆ ರಾಜಕೀಯದ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಅದಕ್ಕಾಗಿ ಅವರು ತೆರೆಮರೆಯಲ್ಲಿ ತಯಾರಿ ಮಾಡಿಕೊಂಡಿದ್ದರು. ಈಗ ಫಲ ಸಿಕ್ಕಿದೆ.

ಪೂಜಾ ಹೆಗ್ಡೆ ಹಂಚಿಕೊಂಡ ವಿಡಿಯೋ ಇಲ್ಲಿದೆ:

ತಮಿಳುನಾಡು ರಾಜಕೀಯದಲ್ಲಿ ದಶಕಗಳಿಂದ ಪ್ರಾಬಲ್ಯ ಹೊಂದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಭದ್ರಕೋಟೆಯನ್ನು ವಿಜಯ್ ಪುಡಿಪುಡಿ ಮಾಡಿದ್ದಾರೆ. ‘ಬೀಸ್ಟ್’ ಸಿನಿಮಾ ನಂತರ ಪೂಜಾ ಮತ್ತು ವಿಜಯ್ ಜೋಡಿಯಾಗಿ ನಟಿಸುತ್ತಿರುವ ಎರಡನೇ ಸಿನಿಮಾ ‘ಜನ ನಾಯಗನ್’. ಈ ಸಿನಿಮಾದ ಶೀರ್ಷಿಕೆಗೆ ತಕ್ಕಂತೆಯೇ ವಿಜಯ್ ಇಂದು ನಿಜವಾದ ಜನನಾಯಕನಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಟಿವಿಕೆ ಜಯಭೇರಿ: ದಳಪತಿ ವಿಜಯ್ ಗೆಲುವಿಗೆ ರಿಷಬ್ ಶೆಟ್ಟಿ ಅಭಿನಂದನೆ

ವಿಜಯ್ ಅವರ ಈ ಅಪ್ರತಿಮ ಸಾಧನೆಗೆ ಭಾರತೀಯ ಚಿತ್ರರಂಗದ ಘಟಾನುಘಟಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು, ನಯನತಾರಾ, ಹೇಮಾ ಮಾಲಿನಿ, ಟೈಗರ್ ಶ್ರಾಫ್, ನಾನಿ, ರಜನಿಕಾಂತ್, ರಿಷಬ್ ಶೆಟ್ಟಿ, ಶಿವರಾಜ್​ಕುಮಾರ್ ಸೇರಿದಂತೆ ಹಲವು ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ವಿಜಯ್ ಅವರ ರಾಜಕೀಯ ಯಶಸ್ಸನ್ನು ಕೊಂಡಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಯಾಣಿಕರ ಪವರ್ ಬ್ಯಾಂಕ್​ನಿಂದ ಬೆಂಕಿ; ಇಂಡಿಗೋ ವಿಮಾನದಲ್ಲಿ ತಪ್ಪಿದ ಭಾರೀ ದುರಂತ – Kannada News | IndiGo plane evacuated in Chandigarh Airport after passengers power bank catches fire

ಚಂಡೀಗಢ, ಮೇ 5: ಚಂಡೀಗಢಕ್ಕೆ ಬಂದಿಳಿದ ಇಂಡಿಗೋ (IndiGo) ವಿಮಾನದೊಳಗೆ ಹೊಗೆ ಕಾಣಿಸಿಕೊಂಡಿದೆ. ಇಂಡಿಗೋ ಪ್ರಯಾಣಿಕರೊಬ್ಬರು ತಮ್ಮ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಿಮಾನದ ಸಿಬ್ಬಂದಿಗೆ ತಿಳಿಸಿದ ನಂತರ ತುರ್ತು ಸ್ಥಳಾಂತರಕ್ಕೆ ಆದೇಶಿಸಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲು ತುರ್ತು ಸ್ಲೈಡ್‌ಗಳನ್ನು ಸಹ ನಿಯೋಜಿಸಲಾಯಿತು.

ಸ್ಥಳಾಂತರಿಸುವ ಪ್ರಕ್ರಿಯೆಯ ಸಮಯದಲ್ಲಿ ಪ್ರಯಾಣಿಕರಲ್ಲಿ ಒಬ್ಬರು ಗಾಯಗೊಂಡರು. 198 ಪ್ರಯಾಣಿಕರು ಮತ್ತು 6 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಹೈದರಾಬಾದ್‌ನಿಂದ ಹೊರಟು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸುಮಾರು ಮಧ್ಯಾಹ್ನ 3.29ಕ್ಕೆ ಇಳಿಯಿತು. ಈ ವೇಳೆ ಹೊಗೆ ಕಾಣಿಸಿತು.

ಇದನ್ನೂ ಓದಿ: ಬೆಂಗಳೂರು-ದೆಹಲಿ ಇಂಡಿಗೋ ಫ್ಲೈಟ್‌ನಲ್ಲಿ ಹುಸಿ ಬಾಂಬ್ ಬೆದರಿಕೆ!

ಪ್ರಯಾಣಿಕರ ಪವರ್ ಬ್ಯಾಂಕ್ ಬೆಂಕಿಗೆ ಆಹುತಿಯಾದ ನಂತರ ಇಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ತುರ್ತು ಸ್ಥಳಾಂತರವನ್ನು ಪ್ರಾರಂಭಿಸಲಾಯಿತು. ಅಧಿಕಾರಿಗಳ ಪ್ರಕಾರ, ಹೈದರಾಬಾದ್‌ನಿಂದ ಚಂಡೀಗಢಕ್ಕೆ ಹೋಗುವ ಇಂಡಿಗೋ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ.

“ಸುರಕ್ಷತೆಯ ಹಿತದೃಷ್ಟಿಯಿಂದ ತಕ್ಷಣದ ಸ್ಥಳಾಂತರಿಸುವಿಕೆಯನ್ನು ಕೈಗೊಳ್ಳಲಾಯಿತು. ಎಲ್ಲ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ತಿಳಿಸಲಾಯಿತು. ಎಲ್ಲಾ ಗ್ರಾಹಕರನ್ನು ಸುರಕ್ಷಿತವಾಗಿ ಟರ್ಮಿನಲ್‌ಗೆ ಸ್ಥಳಾಂತರಿಸಲಾಗಿದೆ. ಇಂಡಿಗೋ ವಿಮಾನವು ಕಾರ್ಯಾಚರಣೆಯನ್ನು ಪುನರಾರಂಭಿಸುವ ಮೊದಲು ಅಗತ್ಯ ತಪಾಸಣೆಗಳಿಗೆ ಒಳಗಾಗುತ್ತದೆ. ಇಂಡಿಗೋದಲ್ಲಿ ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ” ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿರುವ ವಿಮಾನದ ಎಕ್ಸಿಟ್ ಡೋರ್ ತೆರೆದು ಹಾರಿದ ಪ್ರಯಾಣಿಕ

ಬೆಂಕಿಯಿಂದಾಗಿ ವಿಮಾನದ ಕ್ಯಾಬಿನ್ ಹೊಗೆಯಿಂದ ತುಂಬಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಪವರ್ ಬ್ಯಾಂಕ್‌ಗಳನ್ನು ವಿಮಾನಗಳಲ್ಲಿ ಕ್ಯಾರಿ-ಆನ್ ಲಗೇಜ್‌ನಲ್ಲಿ ಮಾತ್ರ ಅನುಮತಿಸಲಾಗುತ್ತದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) 2026ರಲ್ಲಿ ಹೊರಡಿಸಿದ ಹೊಸ ನಿಯಮಗಳ ಆಧಾರದ ಮೇಲೆ ಪ್ರಯಾಣಿಕರು ಫೋನ್‌ಗಳು ಮತ್ತು ಇತರ ಸಾಧನಗಳನ್ನು ಚಾರ್ಜ್ ಮಾಡಲು ವಿಮಾನಗಳಲ್ಲಿ ಪವರ್ ಬ್ಯಾಂಕ್‌ಗಳನ್ನು ಬಳಸಲು ಅನುಮತಿ ಇರುವುದಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:31 pm, Tue, 5 May 26

Source link

ನಮ್ಮ ಮೆಟ್ರೋ ನೇರಳೆ ಮಾರ್ಗದ ಸೇವೆಯಲ್ಲಿ ವ್ಯತ್ಯಯ: 15 ನಿಮಿಷ ನಿಂತಲ್ಲೇ ನಿಂತ ರೈಲುಗಳು – Kannada News | Namma Metro Disruption: Purple Line Service Halts, Technical Issues Affect Commuters

ಬೆಂಗಳೂರು, ಮೇ 05: ಇವತ್ತೂ ಕೂಡ ನಮ್ಮ ಮೆಟ್ರೋ ನೇರಳೆ ಮಾರ್ಗದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಸುಮಾರು 15 ನಿಮಿಷಗಳ ಕಾಲ ನೇರಳೆ ಮಾರ್ಗದ ಕುಂದಲಹಳ್ಳಿ ಸ್ಟೇಷನ್​ನಲ್ಲಿ ಮೆಟ್ರೋ ರೈಲುಗಳು ನಿಂತಲ್ಲೇ ನಿಂತಿರುವ ಬಗ್ಗೆ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ ಈ ಬಗ್ಗೆ ಬಿಎಂಆರ್​​ಸಿಎಲ್​​ ಈವರೆಗೂ ಮೆಟ್ರೋ ಸೇವೆಯಲ್ಲಿನ ವ್ಯತ್ಯಯದ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.

  • ನಮ್ಮ ಮೆಟ್ರೋ ನೇರಳೆ ಮಾರ್ಗದ ಕಾರ್ಯಾಚರಣೆಯಲ್ಲಿ ವ್ಯತ್ಯಯ
  • 15 ನಿಮಿಷಗಳ ಕಾಲ ನಿಂತಲ್ಲೇ ನಿಂತ ಮೆಟ್ರೋ ರೈಲುಗಳು
  • ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡ ಪ್ರಯಾಣಿಕರು

ಇದನ್ನೂ ಓದಿ: ತಾಂತ್ರಿಕ ದೋಷದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಬಂದ್ ಆಗಿ ಪ್ರಯಾಣಿಕರ ಪರದಾಟ

ಪ್ರಯಾಣಿಕರ ಆಕ್ರೋಶ

ನಮ್ಮ ಮೆಟ್ರೋ ಸೇವೆಯಲ್ಲಿನ ವ್ಯತ್ಯಯದ ಬಗ್ಗೆ ಎಕ್ಸ್​​ ಪೋಸ್ಟ್​​ ಮಾಡಿ ಮಾಹಿತಿ ಹಂಚಿಕೊಂಡಿರುವ ಕೆಲ ಪ್ರಯಾಣಿಕರು ಈ ಬಗ್ಗೆ ಯಾವುದೇ ಮಾಹಿತಿಯನ್ನು ಸರಿಯಾಗಿ ನೀಡದ ಬಿಎಂಆರ್​​ಸಿಎಲ್​​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ವ್ಯತ್ಯಯ

ಸುಮಾರು 10-15 ನಿಮಿಷಗಳ ಕಾಲ ತಾಂತ್ರಿಕ ಕಾರಣದಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಆದರೆ
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲುಗಳ ಸಂಚಾರವೀಗ ಸಹಜಸ್ಥಿತಿಗೆ ಮರಳಿದೆ. ಸಮಸ್ಯೆ ಬಗೆಹರಿದಿರುವ ಕಾರಣ ಮೆಟ್ರೋ ರೈಲುಗಳ ಸಂಚಾರ ಪುನಾರಂಭ ಆಗಿದೆ.

ನಿನ್ನೆ ಕೆಲ ಕಾಲ ಬಂದ್​​ ಆಗಿದ್ದ ಕಬ್ಬನ್ ಪಾರ್ಕ್ ನಿಲ್ದಾಣ

ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿರುವ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ನಿನ್ನೆ (ಮೇ 4) ಬೆಳಿಗ್ಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.ವಿದ್ಯುತ್ ವ್ಯತ್ಯಯದಿಂದಾಗಿ ಮೆಟ್ರೋ ನಿಲ್ದಾಣದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು. ಆ ಬಳಿಕ ಬೆಳಿಗ್ಗೆ 11 ಗಂಟೆಯಿಂದ ಮೆಟ್ರೋ ಸೇವೆಗಳು ಪುರರಾರಂಭಗೊಂಡಿತ್ತು.

ವರದಿ: ಲಕ್ಷ್ಮೀ ನರಸಿಂಗ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:24 pm, Tue, 5 May 26

Source link

DC vs CSK Playing XI: ಧೋನಿ ಅಲಭ್ಯ: ಹೀಗಿದೆ ಉಭಯ ತಂಡಗಳ ಪ್ಲೇಯಿಂಗ್ 11 – Kannada News | DC vs CSK Playing XI Delhi Capitals vs Chennai Super Kings Today IPL 2026 match Confirmed playing 11 details with name in kannada

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಸಿಎಸ್​ಕೆ ತಂಡ ಮೊದಲು ಬೌಲಿಂಗ್ ಮಾಡಲಿದೆ.

ಇನ್ನು ಈ ಪಂದ್ಯಕ್ಕೂ ಮಹೇಂದ್ರ ಸಿಂಗ್ ಧೋನಿ ಅಲಭ್ಯರಾಗಿದ್ದಾರೆ. ಫಿಟ್​ನೆಸ್​ ಸಮಸ್ಯೆಯಿಂದ ಬಳಲುತ್ತಿರುವ ಈ ಬಾರಿ ಒಂದೇ ಒಂದು ಪಂದ್ಯವಾಡಿಲ್ಲ. ಅಂದರೆ ಈ ಬಾರಿ ಸಿಎಸ್​ಕೆ ಆಡಿದ 10 ಪಂದ್ಯಗಳಲ್ಲೂ ಎಂಎಸ್​ಡಿ ಕಾಣಿಸಿಕೊಂಡಿಲ್ಲ. ಅದರಂತೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್, ಪಾತುಮ್ ನಿಸ್ಸಾಂಕ, ಕರುಣ್ ನಾಯರ್, ಟ್ರಿಸ್ಟನ್ ಸ್ಟಬ್ಸ್, ನಿತೀಶ್ ರಾಣಾ, ಅಕ್ಷರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ಲುಂಗಿ ಎನ್‌ಗಿಡಿ, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ಟಿ ನಟರಾಜನ್.

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಜೇಮಿ ಓವರ್ಟನ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್.

ಹೆಡ್ ಟು ಹೆಡ್​:

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈವರೆಗೆ 32 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಸಿಎಸ್​ಕೆ ತಂಡ ಬರೋಬ್ಬರಿ 20 ಪಂದ್ಯಗಳಲ್ಲಿ ಜಯಗಳಿಸಿದ್ದಾರೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದಿರುವುದು ಕೇವಲ 12 ಪಂದ್ಯಗಳಲ್ಲಿ ಮಾತ್ರ.

ಇದಾಗ್ಯೂ ಈ ಬಾರಿಯ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಪ್ರದರ್ಶನ ನೀಡಿದೆ. ಇದಾಗ್ಯೂ ಅಕ್ಷರ್ ಪಟೇಲ್ ಪಡೆ ಗೆದ್ದಿರುವುದು ಕೇವಲ 4 ಪಂದ್ಯಗಳಲ್ಲಿ ಮಾತ್ರ. ಇತ್ತ ಸಿಎಸ್​ಕೆ ತಂಡ ಕೂಡ 4 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅಂದರೆ ಇಂದಿನ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಅಂಕ ಪಟ್ಟಿಯಲ್ಲಿ ಮೇಲೇರಲಿದೆ. ಹೀಗಾಗಿ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಅಕ್ಷರ್ ಪಟೇಲ್ (ನಾಯಕ) ನಿತೀಶ್ ರಾಣಾ, ಅಭಿಷೇಕ್ ಪೊರೆಲ್, ಅಜಯ್ ಮಂಡಲ್, ಅಶುತೋಷ್ ಶರ್ಮಾ, ದುಷ್ಮಂತ ಚಮೀರಾ, ಕರುಣ್ ನಾಯರ್, ಕೆಎಲ್ ರಾಹುಲ್, ಕುಲದೀಪ್ ಯಾದವ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ಸಮೀರ್ ರಿಝ್ವಿ, ಟಿ ನಟರಾಜನ್, ತ್ರಿಪುರಾಣ ವಿಜಯ್, ಟ್ರಿಸ್ಟನ್ ಸ್ಟಬ್ಸ್, ವಿಪ್ರಾಜ್ ನಿಗಮ್, ಡೇವಿಡ್ ಮಿಲ್ಲರ್, ಬೆನ್ ಡಕೆಟ್, ಆಖಿಬ್ ನಬಿ, ಪಾತುಮ್ ನಿಸ್ಸಾಂಕಾ, ಲುಂಗಿ ಎನ್‌ಗಿಡಿ, ಸಾಹಿಲ್ ಪರಾಖ್, ಪೃಥ್ವಿ ಶಾ, ಕೈಲ್ ಜೇಮಿಸನ್.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಸಿಸಿಐ ಕಡೆಯಿಂದ ಶೀಘ್ರದಲ್ಲೇ ಕಹಿ ಸುದ್ದಿ!

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್.

Published On – 7:15 pm, Tue, 5 May 26

Source link

ಮೇ 9ರಂದು ಚಿತ್ರದುರ್ಗದಲ್ಲಿ ಯಡಿಯೂರಪ್ಪೋತ್ಸವ, ಅಮಿತ್‌ ಶಾ ಭಾಗಿ ಸಾಧ್ಯತೆ – Kannada News | Bs yediyurappa utsava in chitradurga on may 9 for BSY Completed 50 Years In Politics

ಚಿತ್ರದುರ್ಗ, (ಮೇ 05): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  (bs yediyurappa ) ಅವರ 50 ವರ್ಷದ ರಾಜಕೀಯ ಜೀವನ ಪೂರ್ಣಗೊಂಡ ಹಿನ್ನೆಲೆ, ಮೇ 9ರಂದು ಚಿತ್ರದುರ್ಗದಲ್ಲಿ ಭವ್ಯ “ಯಡಿಯೂರಪ್ಪ ಅಭಿಮಾನೋತ್ಸವ” (yediyurappa utsava) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಾದಾರ ಚನ್ನಯ್ಯ ಮಠದ ಬಳಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

TV9 Kannada News Live: ಬಂಗಾಳದಲ್ಲಿ ‘ದೀದಿ’ ಹಠ; ನಾನು ರಾಜೀನಾಮೆ ನೀಡುವುದಿಲ್ಲ: ಡಿ.ಎನ್. ಜೀವರಾಜ್ ಎಫ್‌ಐಆರ್‌ಗೆ ಹೈಕೋರ್ಟ್ ತಡೆ! – Kannada News | India and Karnataka News: Mamata Uproar, HC Ruling, Viral Gold Ring Snake May 5 Recap

ಬೆಂಗಳೂರು, ಮೇ.5: ದೇಶ ಹಾಗೂ ರಾಜ್ಯದಲ್ಲಿ ಇಂದು ಆಗಿರುವ ಪ್ರಮುಖ ಸುದ್ದಿಗಳೇನು ಎಂಬುದನ್ನು ಇಲ್ಲಿ ನೋಡುವ ಬನ್ನಿ. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಅಸ್ಥಿರತೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದೀಗ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ರಾಜ್ಯದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವಿವಾದ ಕೂಡ ಭಾರೀ ಸುದ್ದಿಯಾಗುತ್ತಿದೆ. ಕಾಸರಗೋಡಿನ ಅಡೂರ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮನೆಯ ಡ್ರಾಯರ್‌ನಲ್ಲಿ ಸಿಕ್ಕಿದ ಕೇರೆ ಹಾವಿನ ಮೈಗೆ ಚಿನ್ನದ ಉಂಗುರ ಬಿಗಿಯಾಗಿ ಸಿಲುಕಿತ್ತು. ಇದು ಕೂಡ ಭಾರೀ ಸುದ್ದಿಯಾಗಿದೆ. ಇನ್ನು ಸಿನಿಮಾದಲ್ಲಿ ದಳಪತಿ ವಿಜಯ್ ಗೆಲುವಿಗೆ ರಿಷಬ್ ಶೆಟ್ಟಿ ಅಭಿನಂದನೆ ತಿಳಿಸಿದ್ದಾರೆ.

ನಾವು ಸೋತಿಲ್ಲ, ರಾಜೀನಾಮೆ ನೀಡೋ ಮಾತೇ ಇಲ್ಲ; ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಹೀನಾಯ ಸೋಲು ಅನುಭವಿಸಿ, ಬಿಜೆಪಿ ಭರ್ಜರಿ ದಿಗ್ವಿಜಯ ಸಾಧಿಸಿದೆ. ಆದರೆ, ಈ ಫಲಿತಾಂಶವನ್ನು ಒಪ್ಪದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸುವ ಮೂಲಕ ಹೊಸ ರಾಜಕೀಯ ಸಮರಕ್ಕೆ ನಾಂದಿ ಹಾಡಿದ್ದಾರೆ. ಫಲಿತಾಂಶದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಈ ಚುನಾವಣೆಯಲ್ಲಿ ಬಿಜೆಪಿ ಅಕ್ರಮವಾಗಿ 100 ಸ್ಥಾನಗಳನ್ನು ಕದ್ದಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. “ನಾವು ಚುನಾವಣೆಯಲ್ಲಿ ಸೋತಿಲ್ಲ, ಜನಾದೇಶವನ್ನು ಕದಿಯಲಾಗಿದೆ. ಹಾಗಾಗಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ” ಎಂದು ಮಮತಾ ಬ್ಯಾನರ್ಜಿ ಪಟ್ಟು ಹಿಡಿದಿದ್ದಾರೆ.

ಡಿ.ಎನ್. ಜೀವರಾಜ್ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ!:

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವೇಳೆ ನಡೆದಿದೆ ಎನ್ನಲಾದ ಗಲಾಟೆ ಮತ್ತು ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ಸಮಾಧಾನ ನೀಡಿದೆ. ಜೀವರಾಜ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ (FIR) ಪ್ರಕ್ರಿಯೆಗೆ ಕೋರ್ಟ್ ಈಗ ತಡೆ ನೀಡಿದೆ. ಡಿ.ಎನ್. ಜೀವರಾಜ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡುವ ಮೂಲಕ ಕಾನೂನು ಹೋರಾಟದಲ್ಲಿ ಅವರಿಗೆ ಮೊದಲ ಜಯ ಸಿಕ್ಕಂತಾಗಿದೆ. ಕೇವಲ ರಾಜಕೀಯ ಒತ್ತಡಗಳಿಗೆ ಮಣಿದು ಎಫ್‌ಐಆರ್ ದಾಖಲಿಸಬಾರದು. ಇದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯವು ಗಂಭೀರವಾಗಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಉಪಚುನಾವಣೆ ಗೆದ್ದರೂ ‘ಕೈ’ಗೆ ಹೊಸ ಚಿಂತೆ, ಟಿವಿಕೆ ಮೈತ್ರಿ ಬಗ್ಗೆ ಅಂತೆಕಂತೆ

ಕೇರೆ ಹಾವಿನ ಮೈಗೆ ಸಿಲುಕಿತು ಚಿನ್ನದ ಉಂಗುರ!:

ದೈನಂದಿನ ಜೀವನದಲ್ಲಿ ಅನಿರೀಕ್ಷಿತ ಎಂಬಂತೆ ಕಾಸರಗೋಡು ಜಿಲ್ಲೆಯ ಅಡೂರ್ ನಿವಾಸಿ ರವಿ ಎಂಬುವವರ ಮನೆಯಲ್ಲಿ ಮೈನವಿರೇಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯ ಡ್ರಾಯರ್ ಒಳಗೆ ಸೇರಿಕೊಂಡಿದ್ದ ಕೇರೆ ಹಾವಿನ ದೇಹಕ್ಕೆ ಚಿನ್ನದ ಉಂಗುರವೊಂದು ಬಿಗಿಯಾಗಿ ಸಿಲುಕಿಕೊಂಡಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮನೆಯ ಮಕ್ಕಳು ಆಟವಾಡುತ್ತಾ ಟೇಬಲ್‌ನ ಡ್ರಾಯರ್ ತೆರೆದಾಗ ಅದರೊಳಗೆ ಹಾವಿರುವುದನ್ನು ಕಂಡು ತಕ್ಷಣವೇ ದೊಡ್ಡವರಿಗೆ ವಿಷಯ ಮುಟ್ಟಿಸಿದ್ದಾರೆ. ಮಕ್ಕಳ ಈ ಸಮಯೋಚಿತ ನಿರ್ಧಾರದಿಂದ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ. ಹಾವನ್ನು ಗಮನಿಸಿದಾಗ ಅದರ ದೇಹದ ಮಧ್ಯಭಾಗದಲ್ಲಿ ಚಿನ್ನದ ಉಂಗುರವೊಂದು ಸಿಲುಕಿಕೊಂಡಿರುವುದು ಕಂಡುಬಂದಿದೆ. ಬಹುಶಃ ಆಹಾರಕ್ಕಾಗಿ ಹುಡುಕಾಟ ನಡೆಸುತ್ತಾ ಸಣ್ಣ ಸೀಳಿನ ಮೂಲಕ ಡ್ರಾಯರ್ ಒಳಗೆ ಹೋಗುವಾಗ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಹೊಸ ಅಧ್ಯಾಯ ಬರೆದ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆ: ರಿಷಬ್ ಶೆಟ್ಟಿ

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ. ವಿಜಯ್ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯಲಿ ಎಂದು ಅವರು ಹಾರೈಸಿದ್ದಾರೆ. ವಿಜಯ್ ಅವರ ಈ ಅಸಾಧಾರಣ ಸಾಧನೆಯು ಇನ್ನಷ್ಟು ಯುವ ಜನರಿಗೆ ಸ್ಫೂರ್ತಿಯಾಗಲಿ ಎಂದು ರಿಷಬ್ ಶೆಟ್ಟಿ ಅವರು ತಮ್ಮ ಪೋಸ್ಟ್‌ನಲ್ಲಿ ಆಶಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಲ್ಮಾನ್ ಖಾನ್ ಸೂಪರ್ ಹೀರೋ ಸಿನಿಮಾಗೆ ಸಮಂತಾ ಬದಲು ಕರೀನಾ ನಾಯಕಿ? – Kannada News | Salman Khan Raj DK superhero film Kareena Kapoor replaces Samantha

ಬಾಲಿವುಡ್‌ ನಟ ಸಲ್ಮಾನ್ ಖಾನ್ (Salman Khan) ಮತ್ತು ಖ್ಯಾತ ನಿರ್ದೇಶಕರಾದ ರಾಜ್-ಡಿಕೆ (Raj-DK) ಅವರ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಹೊಸ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಭಾರಿ ಕುತೂಹಲ ಮನೆ ಮಾಡಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರಿಗೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲಕ್ಕೆ ಈಗ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಇಷ್ಟ ದಿನ ಸಮಂತಾ ರುತ್ ಪ್ರಭು ಹೆಸರು ಕೇಳಿಬರುತ್ತಿತ್ತು. ಆದರೆ ಈಗ ಈಗ ಕರೀನಾ ಕಪೂರ್ ಖಾನ್ (Kareena Kapoor) ಬಗ್ಗೆ ಸುದ್ದಿ ಹಬ್ಬಿದೆ.

1. ಸಲ್ಮಾನ್ ಖಾನ್ ಹೊಸ ಸಿನಿಮಾದಲ್ಲಿ ಇರಲಿದೆ ಸೂಪರ್ ಹೀರೋ ಕಥೆ.

2. ನಾಯಕಿಯ ಆಯ್ಕೆಯ ಬಗ್ಗೆ ಕೇಳಿಬರುತ್ತಿವೆ ಇಂಟರೆಸ್ಟಿಂಗ್ ವಿಷಯಗಳು.

3. ಸಮಂತಾ ರುತ್ ಪ್ರಭು ಬದಲಿಗೆ ಕರೀನಾ ಎಂಟ್ರಿ ನೀಡಿರುವ ಸಾಧ್ಯತೆ ಇದೆ.

ಆರಂಭದಲ್ಲಿ ಈ ಸಿನಿಮಾಗೆ ಸೌತ್ ಸುಂದರಿ ಸಮಂತಾ ರುತ್ ಪ್ರಭು ನಾಯಕಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ರಾಜ್ ಮತ್ತು ಡಿಕೆ ಅವರ ಜೊತೆ ಸಮಂತಾ ಈಗಾಗಲೇ ‘ಸಿಟಾಡೆಲ್’, ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ ಕೆಲಸ ಮಾಡಿರುವುದರಿಂದ ಅವರೇ ಫೈನಲ್ ಎನ್ನಲಾಗಿತ್ತು. ಆದರೆ, ತಾಜಾ ವರದಿಗಳ ಪ್ರಕಾರ ಬಾಲಿವುಡ್ ನಟಿ ಕರೀನಾ ಕಪೂರ್ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಈ ಸಿನಿಮಾದ ಬಗ್ಗೆ ಸ್ವತಃ ಸಲ್ಮಾನ್ ಖಾನ್ ಅವರೇ ಕರೀನಾ ಕಪೂರ್ ಅವರಿಗೆ ಕರೆ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಕರೀನಾ ಕೂಡ ಈ ಪ್ರಾಜೆಕ್ಟ್ ಬಗ್ಗೆ ಆಸಕ್ತಿ ತೋರಿಸಿದ್ದು, ಮೌಖಿಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಇದು ಅಧಿಕೃತವಾದರೆ, ಸಲ್ಮಾನ್ ಮತ್ತು ಕರೀನಾ ಜೋಡಿ ಐದನೇ ಬಾರಿಗೆ ಪರದೆಯ ಮೇಲೆ ಒಂದಾದಂತಾಗುತ್ತದೆ. ಈ ಹಿಂದೆ ಅವರು ‘ಬಜರಂಗಿ ಭಾಯಿಜಾನ್’, ‘ಬಾಡಿಗಾರ್ಡ್’, ‘ಕ್ಯೂಂಕಿ’ ಮತ್ತು ‘ಮೈ ಔರ್ ಮಿಸಸ್ ಖನ್ನಾ’ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು.

ವಿಶೇಷವೆಂದರೆ ರಾಜ್-ಡಿಕೆ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಯಸ್ಸಾದ ಒಬ್ಬ ಸೂಪರ್ ಹೀರೋ, ಅನಿವಾರ್ಯ ಕಾರಣಗಳಿಂದಾಗಿ ಮತ್ತೆ ಅಖಾಡಕ್ಕೆ ಇಳಿಯುವ ವಿಭಿನ್ನ ಕಥಾಹಂದರವನ್ನು ಈ ಚಿತ್ರ ಹೊಂದಿರಲಿದೆ ಎನ್ನಲಾಗಿದೆ. ಆದ್ದರಿಂದ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಆಗಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಹೊಸ ಸಿನಿಮಾಗೆ ಸಂಕಷ್ಟ: ಕಥೆ ಬದಲಾದರೂ ತಪ್ಪದ ‘ಮಾತೃಭೂಮಿ’ ವಿವಾದ

ಈ ಬಿಗ್ ಬಜೆಟ್ ಸಿನಿಮಾವನ್ನು ಅತುಲ್ ಅಗ್ನಿಹೋತ್ರಿ ಮತ್ತು ಮೈತ್ರಿ ಮೂವೀ ಮೇಕರ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಸಲ್ಮಾನ್ ಖಾನ್ ಅವರನ್ನು ರಾಜ್-ಡಿಕೆ ಯಾವ ರೀತಿ ತೆರೆಯ ಮೇಲೆ ತೋರಿಸಲಿದ್ದಾರೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಸಮಂತಾ ಸದ್ಯಕ್ಕೆ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಲ್ಮಾನ್ ಚಿತ್ರದ ಆಫರ್ ಅವರಿಗೆ ನಿಜವಾಗಿಯೂ ಹೋಗಿತ್ತೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಸದ್ಯ ಅವರು ‘ಮಾ ಇಂಟಿ ಬಂಗಾರಂ’ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link