Category Archives: Blog

Your blog category

ಆಪರೇಷನ್ ಟೈಗರ್ ಅಂತಿಮ ಹಂತಕ್ಕೆ; ಶಿಂಧೆ ಬಣ ಸೇರಲಿದ್ದಾರಾ ಉದ್ಧವ್ ಠಾಕ್ರೆ ಬಣದ 7 ಸಂಸದರು? – Kannada News | Operation Tiger; 7 MPs from Uddhav Thackeray’s Shiv Sena camp may switch to Eknath Shinde faction

ಮುಂಬೈ, ಜೂನ್ 16: ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ರಾಜಕೀಯ ಬಿರುಗಾಳಿ ಎದ್ದಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಎದುರಿಸುತ್ತಿರುವ ಬಂಡಾಯದ ಬೆನ್ನಲ್ಲೇ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಬಣಕ್ಕೂ ದೊಡ್ಡ ಆಘಾತ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ‘ಆಪರೇಷನ್ ಟೈಗರ್’ (Operation Tiger) ಬಗ್ಗೆ ಚರ್ಚೆ ನಡೆಯುತ್ತಿತ್ತು. ಶಿವಸೇನೆ ಏಕನಾಥ್ ಶಿಂಧೆ ಬಣವು ಆಕ್ರಮಣ ಮುಂದುವರಿಸಿದ್ದರೂ ಉದ್ಧವ್ ಠಾಕ್ರೆ ಬಣದ ಕೆಲವು ಸಂಸದರು ಮತ್ತು ಶಾಸಕರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ, ಆಪರೇಷನ್ ಟೈಗರ್ ಬಗ್ಗೆ ಚರ್ಚೆ ತೀವ್ರಗೊಂಡಿದೆ.

ಉದ್ಧವ್ ಠಾಕ್ರೆ ಬಣ ಶೀಘ್ರದಲ್ಲೇ ಮತ್ತೊಂದು ದೊಡ್ಡ ಹಿನ್ನಡೆಯನ್ನು ಎದುರಿಸಬಹುದು ಎಂದು ಊಹಿಸಲಾಗುತ್ತಿದೆ. ಆಪರೇಷನ್ ಟೈಗರ್ ಯಾವಾಗ ನಡೆಯುತ್ತದೆ ಎಂಬುದರ ಕುರಿತು ಯಾವುದೇ ನಿರ್ದಿಷ್ಟ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ. ಇದರ ನಡುವೆ ಇದೀಗ ನಡೆಯುತ್ತಿರುವ ಚರ್ಚೆಗಳು ಠಾಕ್ರೆ ಬಣದ ಭಯವನ್ನು ಹೆಚ್ಚಿಸಿವೆ. ಇದಲ್ಲದೆ, ಭಾನುವಾರ ಮಾತೋಶ್ರೀಯಲ್ಲಿ ಉದ್ಧವ್ ಠಾಕ್ರೆ ಕರೆದಿದ್ದ ಸಭೆಯಲ್ಲಿ ಠಾಕ್ರೆ ಬಣದ 9 ಸಂಸದರಲ್ಲಿ ಕೇವಲ 4 ಮಂದಿ ಮಾತ್ರ ಭಾಗವಹಿಸಿದ್ದರು, 5 ಮಂದಿ ಗೈರುಹಾಜರಾಗಿದ್ದರು.

ಏನಿದು ಆಪರೇಷನ್ ಟೈಗರ್?:

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಾಯಕರು ‘ಆಪರೇಷನ್ ಟೈಗರ್’ ಕುರಿತು ಸಂಚಲನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಏಕನಾಥ್ ಶಿಂಧೆ ಬಣದ ವಿಧಾನಪರಿಷತ್ ಸದಸ್ಯ ಕೃಪಾಲ್ ತುಮಾನೆ ನೀಡಿರುವ ಹೇಳಿಕೆ ಉದ್ಧವ್ ಠಾಕ್ರೆ ಕ್ಯಾಂಪ್‌ನಲ್ಲಿ ನಡುಕ ಹುಟ್ಟಿಸಿದೆ. “ಆಸ್ಪತ್ರೆಯಲ್ಲಿ ಆಪರೇಷನ್‌ ಮಾಡುವ ಮುನ್ನ ರೋಗಿಗೆ ಎಲ್ಲ ರೀತಿಯ ತಪಾಸಣೆ ನಡೆಸಿ ವರದಿ ಸಿದ್ಧಪಡಿಸಿಕೊಳ್ಳುವಂತೆ, ನಮ್ಮ ‘ಆಪರೇಷನ್ ಟೈಗರ್’ ಪ್ರಕ್ರಿಯೆಯೂ ಸಂಪೂರ್ಣ ಮುಕ್ತಾಯವಾಗಿದೆ. ಕೇವಲ ವೈದ್ಯರೊಂದಿಗೆ ಶಸ್ತ್ರಚಿಕಿತ್ಸೆಯ ದಿನಾಂಕ ನಿಗದಿಪಡಿಸುವುದಷ್ಟೇ ಬಾಕಿ ಇದೆ. ಉದ್ಧವ್ ಬಣದ 7 ಸಂಸದರು ಮತ್ತು 16 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನವೇ ಈ ಆಪರೇಷನ್ ನಡೆಯಲಿದೆ” ಎಂದು ಶಿಂಧೆ ಬಣದ ನಾಯಕ ಕೃಪಾಲ್ ತುಮಾನೆ ಹೇಳಿದ್ದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಬಳಿಕ ಮಹಾರಾಷ್ಟ್ರದಲ್ಲೂ ರಾಜಕೀಯ ಹೈಡ್ರಾಮ, ಏಕನಾಥ್ ಶಿಂಧೆ ಬಣದ ಸಂಪರ್ಕದಲ್ಲಿದ್ದಾರಾ ಶಿವಸೇನೆಯ 7 ಸಂಸದರು

ಕೇಂದ್ರ ಸಚಿವ ಪ್ರತಾಪ್ ರಾವ್ ಜಾಧವ್ ಕೂಡ ಉದ್ಧವ್ ಬಣದ ಹಲವು ಸಂಸದರು ತಮ್ಮ ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದು, ನಮ್ಮೊಂದಿಗೆ ಬರಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಉದ್ಧವ್ ಠಾಕ್ರೆ ಬಣದ 9 ಸಂಸದರಿದ್ದಾರೆ. ಪಕ್ಷಾಂತರ ನಿರೋಧಕ ಕಾಯ್ದೆಯಡಿ ಅನರ್ಹತೆಯಿಂದ ಬಚಾವಾಗಬೇಕಾದರೆ ಕನಿಷ್ಠ 7 ಸಂಸದರು ಒಟ್ಟಿಗೆ ಪಕ್ಷ ತೊರೆದು ಹೋಗಬೇಕಾಗುತ್ತದೆ. ಈ 7 ಸಂಸದರು ಈಗಾಗಲೇ ದೆಹಲಿಯಲ್ಲಿ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಭೀತಿಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉದ್ಧವ್ ಠಾಕ್ರೆ, ಭಾನುವಾರ ತಮ್ಮ ಮುಂಬೈನ ನಿವಾಸ ‘ಮಾತೋಶ್ರೀ’ಯಲ್ಲಿ ಸಂಸದರ ತುರ್ತು ಸಭೆ ಕರೆದಿದ್ದರು. ಆದರೆ, ಒಟ್ಟು 9 ಸಂಸದರಲ್ಲಿ ಕೇವಲ 4 ಸಂಸದರು ಮಾತ್ರ ಖುದ್ದಾಗಿ ಹಾಜರಾಗಿದ್ದು, ಉಳಿದ 5 ಸಂಸದರು ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಉದ್ಧವ್ ಠಾಕ್ರೆ ಜೂನ್ 22ರಂದು ಶಾಸಕರ ಮತ್ತೊಂದು ಸಭೆಯನ್ನು ಕರೆದಿದ್ದಾರೆ. ಠಾಕ್ರೆ ಬಣದ ಶಿವಸೇನೆ (UBT) ನಾಯಕ ಸಂಜಯ್ ರಾವತ್ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಹಾಗೂ ಶಿಂಧೆ ಬಣದ ದಾವೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ನಮ್ಮ ಎಲ್ಲಾ 9 ಸಂಸದರು ಒಗ್ಗಟ್ಟಾಗಿದ್ದಾರೆ ಮತ್ತು ಉದ್ಧವ್ ಅವರ ಬೆನ್ನಿಗೆ ನಿಂತಿದ್ದಾರೆ. ಅವರು ನಮ್ಮ ಮೇಲೆ ‘ಆಪರೇಷನ್ ಟೈಗರ್’ ಮಾಡಲು ಬಂದರೆ, ನಾವು ಅವರ ವಿರುದ್ಧ ‘ಆಪರೇಷನ್ ವುಲ್ಫ್’ ಆರಂಭಿಸುತ್ತೇವೆ. ತೃಣಮೂಲ ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನೆಯನ್ನು ಒಡೆಯುವುದೇ ಬಿಜೆಪಿಯ ಏಕೈಕ ಕೆಲಸವಾಗಿದೆ,” ಎಂದು ಸಂಜಯ್ ರಾವತ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹಾ ಭೂಕಂಪ: ಟಿಎಂಸಿ ಬಂಡಾಯ ಸಂಸದರಿಂದ ಹೊಸ ಪಕ್ಷ ಸ್ಥಾಪನೆ, ಎನ್‌ಡಿಎ ಜೊತೆ ವಿಲೀನ ಸಾಧ್ಯತೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ನಂತರ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನಲ್ಲಿ 50ಕ್ಕೂ ಹೆಚ್ಚು ಶಾಸಕರು ಮತ್ತು 20ಕ್ಕೂ ಹೆಚ್ಚು ಸಂಸದರು ದೀದಿ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದಾರೆ. ಈ ಬಿಕ್ಕಟ್ಟಿನ ಬೆನ್ನಲ್ಲೇ ಮಹಾರಾಷ್ಟ್ರದಲ್ಲೂ ಉದ್ಧವ್ ಬಣಕ್ಕೆ ಕೈಕೊಟ್ಟು ಸಂಸದರು ಎನ್‌ಡಿಎ (NDA) ಒಕ್ಕೂಟದತ್ತ ಮುಖ ಮಾಡಿದರೆ, ಅದು ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ಇಂಡಿಯ ಒಕ್ಕೂಟಕ್ಕೆ ದೊಡ್ಡ ಪೆಟ್ಟು ನೀಡಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ರಿಲೀಸ್​​ಗೂ ಮೊದಲೇ ಸೇಫ್ ಆದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ – Kannada News | Samantha’s ‘Maa Inti Bangaram’ is a Pre Release Hit! Producers Already in Profit

ಸಮಂತಾ ರುತ್ ಪ್ರಭು (Samantha) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಜೂನ್ 19ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಈ ಸಿನಿಮಾ ಬಗ್ಗೆ ಈಗ ಒಂದು ಅಚ್ಚರಿಯ ಮಾಹಿತಿ ರಿವೀಲ್ ಆಗಿದೆ. ಈ ಸಿನಿಮಾ ರಿಲೀಸ್​​ಗೂ ಮೊದಲೇ ಸೇಫ್ ಆಗಿದೆಯಂತೆ. ಈ ಮೂಲಕ ಮುಂದೆ ಬರೋದೆಲ್ಲವೂ ಲಾಭದ ರೂಪದಲ್ಲಿ ನಿರ್ಮಾಪಕರ ಜೇಬಿಗೆ ಇಳಿಯಲಿದೆ. ಸಿನಿಮಾದ ನಿರ್ಮಾಪಕರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಮಾ ಇಂಟಿ ಬಂಗಾರಂ’ ಆ್ಯಕ್ಷನ್ ಕಾಮಿಡಿ ಸಿನಿಮಾ. ಈ ಸಿನಿಮಾದಲ್ಲಿ ಸಮಂತಾಗೆ ಎರಡು ಶೇಡ್​​ನ ಪಾತ್ರ ಇದೆ. ಮನೆಯ ಒಳಗೆ ಸಾಮಾನ್ಯ ಸಂಪ್ರದಾಯಸ್ಥ ಕುಟುಂಬದವರಂತೆ ಕಂಡರೂ ವಿಲನ್​​ಗಳಿಗೆ ವಿಲನ್ ಇವರು. ಕನ್ನಡದ ದಿಗಂತ್ ಮಂಚಾಲೆ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಥಿಯೇಟರಿಕಲ್ ಹಕ್ಕುಗಳು ಒಳ್ಳೆಯ ಬೆಲೆಗೆ ಮಾರಾಟ ಆಗಿವೆ ಎಂದು ವರದಿ ಆಗಿದೆ.

‘ಮಾ ಇಂಟಿ ಬಂಗಾರಂ’ ಸಿನಿಮಾ ಟ್ರೇಲರ್ ಮೂಲಕವೇ ಭರವಸೆ ಮೂಡಿಸಿದೆ. ಹೀಗಾಗಿ, ಇದರ ಹಕ್ಕನ್ನು ಪಡೆಯಲು ಸಾಕಷ್ಟು ಮಂದಿ ಸರತಿಸಾಲಿನಲ್ಲಿ ನಿಂತಿದ್ದರು. ಈ ಕಾರಣದಿಂದ ಚಿತ್ರದ ಹಕ್ಕು ಒಳ್ಳೆಯ ಬೆಲೆಗೆ ಮಾರಾಟ ಆಗಿವೆ. ಒಟಿಟಿ, ಸ್ಯಾಟಲೈಟ್​​ ಹಕ್ಕು ಮಾರಾಟದಿಂದಲೂ ಸಿನಿಮಾಗೆ ಭಾರೀ ಹಣ ಹರಿದು ಬಂದಿದೆ. ಹೀಗಾಗಿ, ಸಿನಿಮಾ ನಿರ್ಮಾಪಕರು ಈಗಲೇ ಲಾಭ ಕಾಣುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?

‘ಸಿನಿಮಾ ರಿಲೀಸ್ ಆಗುವ ಮುನ್ನವೇ ನಾವು ಹೂಡಿಕೆ ಮಾಡಿದ ಸಂಪೂರ್ಣ ಬಂಡವಾಳ ಮರಳಿ ಪಡೆದಿದ್ದೇವೆ. ನಮ್ಮ ಚಿತ್ರದ ಮೇಲೆ ಇಡೀ ಮಾರುಕಟ್ಟೆ ಇಟ್ಟಿರುವ ನಂಬಿಕೆಗೆ ಇದು ಸಾಕ್ಷಿ. ಮಹಿಳಾ ಪ್ರಧಾನ ತೆಲುಗು ಸಿನಿಮಾಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹಾಗೂ ವಿವಿಧ ಪ್ರಾಂತ್ಯಗಳ ವಿತರಕರಿಂದ ಇಷ್ಟೊಂದು ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವುದು ನಿಜಕ್ಕೂ ಹೆಮ್ಮೆ ತಂದಿದೆ’ ಎಂದಿದ್ದಾರೆ ಹಿಮಾಂಕ್ ದುವ್ವುರು.
‘ಪ್ರಸ್ತುತ ಮಾರುಕಟ್ಟೆಯಲ್ಲಿ ಮಹಿಳಾ ಪ್ರಧಾನ ಚಿತ್ರವೊಂದಕ್ಕೆ ಈ ಮಟ್ಟದ ಬೆಂಬಲ ಸಿಕ್ಕಿರುವುದು ಒಂದು ದೊಡ್ಡ ಕಮರ್ಷಿಯಲ್ ಸಿಗ್ನಲ್. ಚಿತ್ರದ ಹಕ್ಕುಗಳನ್ನು ಮಾರಲು ಆರಂಭದಲ್ಲೇ ಪ್ಯಾಕೇಜ್ ಮಾಡಲಾಗಿತ್ತು, ಖರೀದಿದಾರರನ್ನು ಮುಂಚಿತವಾಗಿಯೇ ಸಂಪರ್ಕಿಸಲಾಗಿತ್ತು’ ಎಂದಿದ್ದಾರೆ ಅವರು. ಸದ್ಯ ಈ ವಿಷಯ ಸಮಂತಾ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ಸರ್ವಂ ಎಐ ಈಗ ಯುನಿಕಾರ್ನ್ ಕಂಪನಿಗಳ ಸಾಲಿನಲ್ಲಿ; ಹೂಡಿಕೆ ಮಾಡಿದ ಎಚ್​ಸಿಎಲ್​ಗೂ ಷೇರುಪೇಟೆಯಲ್ಲಿ ಸುಗ್ಗಿ – Kannada News | Sarvam AI of Bengaluru becomes unicorn company after series B funding round led by HCLTech

ಬೆಂಗಳೂರು, ಜೂನ್ 16: ಸಿಲಿಕಾನ್ ಸಿಟಿ ಮೂಲದ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್‌ಅಪ್ ಕಂಪನಿಯಾದ ‘ಸರ್ವಮ್ ಐಐ’ (Sarvam AI) ಈಗ ಯೂನಿಕಾರ್ನ್ ಕಂಪನಿಗಳ ಸಾಲಿಗೆ ಸೇರ್ಪಡೆಯಾಗಿದೆ. ಐಟಿ ಕ್ಷೇತ್ರದ ಹೆಚ್‌ಸಿಎಲ್‌ಟೆಕ್ (HCLTech) ನೇತೃತ್ವದ ಸೀರೀಸ್-ಬಿ (Series B) ಫಂಡಿಂಗ್ ರೌಂಡ್‌ನಲ್ಲಿ ಬರೋಬ್ಬರಿ 234 ಮಿಲಿಯನ್ ಡಾಲರ್ (ಸುಮಾರು ₹1,950 ಕೋಟಿ) ಹೂಡಿಕೆಯನ್ನು ಗಳಿಸಿದೆ. ಈ ಭರ್ಜರಿ ಹೂಡಿಕೆಯೊಂದಿಗೆ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು 1.5 ಬಿಲಿಯನ್ ಡಾಲರ್ (ಸುಮಾರು ₹12,500 ಕೋಟಿ) ದಾಟಿದ್ದು, ಭಾರತದ ಹೊಚ್ಚಹೊಸ ‘ಯೂನಿಕಾರ್ನ್’ (Unicorn) ಸ್ಟಾರ್ಟ್‌ಅಪ್ ಆಗಿ ಹೊರಹೊಮ್ಮಿದೆ.

ಈ ಹೂಡಿಕೆ ಸುತ್ತಿನಲ್ಲಿ ಜಾಗತಿಕ ಐಟಿ ದೈತ್ಯ ಕಂಪನಿಯಾದ ಹೆಚ್‌ಸಿಎಲ್‌ಟೆಕ್​ನೊಂದೇ (HCLTech) 150 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಈ ಮೂಲಕ ಸರ್ವಮ್ AI ಕಂಪನಿಯಲ್ಲಿ ಶೇ. 10.46 ರಷ್ಟು ಪಾಲನ್ನು (Stake) ಪಡೆದುಕೊಂಡಿದೆ. ಈ ಸುತ್ತಿನಲ್ಲಿ ಬೆಸ್ಸೆಮರ್ ವೆಂಚರ್ ಪಾರ್ಟ್‌ನರ್ಸ್, ಖೋಸ್ಲಾ ವೆಂಚರ್ಸ್ ಮತ್ತು ಪೀಕ್ ಎಕ್ಸ್‌ವಿ ಪಾರ್ಟ್‌ನರ್ಸ್ (ಹಳೆಯ ಸಿಕ್ವೊಯಾ ಕ್ಯಾಪಿಟಲ್) ಕಂಪನಿಗಳು ಸಹ ಭಾಗವಹಿಸಿವೆ.

ಸರ್ವಂ ಕಂಪನಿಯ ಆದಾಯವು 2024-25ರ ಹಣಕಾಸು ವರ್ಷದಲ್ಲಿ ₹1.5 ಕೋಟಿಯಷ್ಟಿತ್ತು. ಒಂದು ವರ್ಷದಲ್ಲಿ (2025-26) ಭಾರಿ ಜಿಗಿತ ಕಂಡು ₹45.1 ಕೋಟಿಗೆ ತಲುಪಿದೆ. ಹೀಗಾಗಿ, ಈ ಕಂಪನಿ ಸುಸ್ಥಿರ ಬೆಳವಣಿಗೆ ಸಾಧಿಸುವ ವಿಶ್ವಾಸವು ಹೂಡಿಕೆದಾರರಲ್ಲಿ ಮೂಡಿಸಿದಂತಿದೆ. ಪರಿಣಾಮವಾಗಿ, ಬಹಳ ಕ್ಷಿಪ್ರ ವೇಗದಲ್ಲಿ ಸರ್ವಂ ಎಐ ಯೂನಿಕಾರ್ನ್ ಕಂಪನಿ ಮಟ್ಟಕ್ಕೆ ಬೆಳೆದಿದೆ.

ಇದನ್ನೂ ಓದಿ: ಎನ್​ಆರ್​ಐಗಳ ಡೆಪಾಸಿಟ್​ಗಳನ್ನು ಕೈಬೀಸಿ ಕರೆಯುತ್ತಿವೆ ಭಾರತದ ಹೊಸ FCNR(B) ದರಗಳು; ಅನಿವಾಸಿ ಭಾರತೀಯರಿಗೆ ಹೇಗೆ ಲಾಭ?

ಯೂನಿಕಾರ್ನ್ ಕಂಪನಿ ಎಂದರೆ ಏನು?

ಷೇರು ಮಾರುಕಟ್ಟೆಯಲ್ಲಿ ಇನ್ನೂ ಲಿಸ್ಟ್ ಆಗದ ಸ್ಟಾರ್ಟಪ್​ವೊಂದು ಮೌಲ್ಯದಲ್ಲಿ ಒಂದು ಬಿಲಿಯನ್ ಡಾಲರ್ ಮಟ್ಟ ದಾಟಿದಾಗ ಅದು ಯೂನಿಕಾರ್ನ್ ಎನಿಸುತ್ತದೆ. ಭಾರತದಲ್ಲಿ 130ಕ್ಕೂ ಹೆಚ್ಚು ಯೂನಿಕಾರ್ನ್ ಕಂಪನಿಗಳಿವೆ. ಅಮೆರಿಕ, ಚೀನಾ ಬಿಟ್ಟರೆ ಭಾರತವೇ ಅತಿಹೆಚ್ಚು ಯೂನಿಕಾರ್ನ್ ಕಂಪನಿಗಳನ್ನು ಹೊಂದಿರುವುದು.

‘ಸರ್ವಮ್ ಐಐ’ ವಿಶೇಷತೆ ಮತ್ತು ಸಾಧನೆ ಏನು?

ವಿವೇಕ್ ರಾಘವನ್ ಮತ್ತು ಪ್ರತ್ಯುಷ್ ಕುಮಾರ್ ಜಂಟಿಯಾಗಿ ಸ್ಥಾಪಿಸಿದ ಈ ಬೆಂಗಳೂರು ಮೂಲದ ಕಂಪನಿಯು ಕೇವಲ ಆ್ಯಪ್‌ಗಳನ್ನು ತಯಾರಿಸುವುದಿಲ್ಲ. ಬದಲಿಗೆ, ಭಾರತೀಯ ಭಾಷೆಗಳು ಮತ್ತು ಸ್ಥಳೀಯ ಸಂಸ್ಕೃತಿಗೆ ಹೊಂದಿಕೆಯಾಗುವಂತೆ ಮೊದಲಿನಿಂದಲೇ (From Scratch) AI ಮಾದರಿಗಳನ್ನು (Foundational Models) ಅಭಿವೃದ್ಧಿಪಡಿಸುತ್ತಿದೆ.

ಸದ್ಯ ಈ ಕಂಪನಿಯ AI ಪ್ಲಾಟ್‌ಫಾರ್ಮ್ ಪ್ರತಿದಿನ 20 ಲಕ್ಷಕ್ಕೂ ಹೆಚ್ಚು ಸಂಭಾಷಣೆಗಳನ್ನು (Interactions) ನಿಭಾಯಿಸುತ್ತಿದೆ ಮತ್ತು ದಿನಕ್ಕೆ 1 ಕೋಟಿಗೂ ಹೆಚ್ಚು ಎಪಿಐ (API) ಕರೆಗಳನ್ನು ಪ್ರೊಸೆಸ್ ಮಾಡುತ್ತಿದೆ.

ಕೇಂದ್ರ ಕೃಷಿ ಸಚಿವಾಲಯದ ಸಹಯೋಗದೊಂದಿಗೆ, ಈ ಕಂಪನಿಯ ಬಹುಭಾಷಾ ಧ್ವನಿ ತಂತ್ರಜ್ಞಾನವು (Multilingual Voice Agents) ದೇಶದ 1.7 ಕೋಟಿ ರೈತರಿಂದ ಯಶಸ್ವಿಯಾಗಿ ಮಾಹಿತಿ ಸಂಗ್ರಹಿಸಿದೆ.

ದೇಶದ ಪ್ರಮುಖ ವಿಮಾ ಕಂಪನಿಯೊಂದರ ಪಾಲಿಸಿ ನವೀಕರಣಕ್ಕಾಗಿ (Policy Renewal) ಈ AI ತಂತ್ರಜ್ಞಾನವು ದೇಶಾದ್ಯಂತ 4.5 ಕೋಟಿ ಗ್ರಾಹಕರನ್ನು ತಲುಪಿದೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ಧೂಳೆಬ್ಬಿಸುತ್ತಿರುವ ಸ್ಪೇಸ್​ಎಕ್ಸ್; ಇಲಾನ್ ಮಸ್ಕ್ ಒಂದು ದಿನದಲ್ಲಿ ಗಳಿಸಿದ ಸಂಪತ್ತು ವಾರನ್ ಬಫೆಟ್​ನ ಒಟ್ಟೂ ಸಂಪತ್ತಿಗೆ ಸಮ

ಈ ಹೊಸ ಹಣವನ್ನು ಕಂಪನಿ ಎಲ್ಲಿ ಬಳಸಲಿದೆ?

ಕಂಪನಿಯ ಸಹ-ಸ್ಥಾಪಕ ಪ್ರತ್ಯುಷ್ ಕುಮಾರ್ ಅವರ ಪ್ರಕಾರ, ಸೀರೀಸ್-ಬಿ ರೌಂಡ್​ನಲ್ಲಿ ಬಂದ ಈ ಹೊಸ ಬಂಡವಾಳವನ್ನು ಭಾರತಕ್ಕೆಂದೇ ಪ್ರತ್ಯೇಕವಾದ ಸಾರ್ವಭೌಮ AI (Sovereign AI) ವ್ಯವಸ್ಥೆಯನ್ನು ಬಲಪಡಿಸಲು ಬಳಸಲಾಗುತ್ತದೆ.

  • ಮುಂದಿನ ಪೀಳಿಗೆಯ AI ಮಾದರಿಗಳು: ಕೋಡಿಂಗ್ (AI-assisted coding), ಸೈಬರ್ ಸೆಕ್ಯೂರಿಟಿ (Cybersecurity) ಮತ್ತು ಏಜೆಂಟಿಕ್ ಐಐ (Agentic AI – ಸ್ವತಂತ್ರವಾಗಿ ಕೆಲಸ ನಿರ್ವಹಿಸುವ ಎಐ) ಕ್ಷೇತ್ರಗಳಲ್ಲಿ ಹೊಸ ಸಂಶೋಧನೆ ನಡೆಸುವುದು.
  • ಜಾಗತಿಕ ತಂತ್ರಜ್ಞಾನಗಳಿಗೆ ಪೈಪೋಟಿ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಕ್ಲೋಡ್ (Claude) ಮತ್ತು ಕೋಡೆಕ್ಸ್ (Codex) ನಂತಹ ಸಾಫ್ಟ್‌ವೇರ್ ಇಂಜಿನಿಯರಿಂಗ್ ಸಹಾಯಕ ತಂತ್ರಜ್ಞಾನಗಳಿಗೆ ಭಾರತದಲ್ಲೇ ಪರ್ಯಾಯವನ್ನು ಸೃಷ್ಟಿಸುವುದು.
  • ಕಂಪ್ಯೂಟಿಂಗ್ ಮೂಲಸೌಕರ್ಯ: ಭಾರತದ ಒಳಗಡೆಯೇ ಸೂಪರ್ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ವಿಸ್ತರಿಸಲು ಎನ್‌ವಿಡಿಯಾದ ಅತ್ಯಾಧುನಿಕ ‘ಬ್ಲ್ಯಾಕ್‌ವೆಲ್’ (Blackwell-based AI compute clusters) ತಂತ್ರಜ್ಞಾನದ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ.

“ನಮ್ಮ ಧ್ವನಿಯನ್ನು ಅರ್ಥಮಾಡಿಕೊಳ್ಳುವ, ನಮ್ಮ ದಾಖಲೆಗಳನ್ನು ಓದುವ ಮತ್ತು ಪ್ರತಿಯೊಂದು ಉದ್ಯಮ ಹಾಗೂ ಸರ್ಕಾರಕ್ಕೂ ಕೈಗೆಟುಕುವ ವೆಚ್ಚದಲ್ಲಿ ಬುದ್ಧಿವಂತಿಕೆ ಸೇವೆಯನ್ನು ನೀಡುವ AI ಮಾದರಿಗಳನ್ನು ಭಾರತೀಯ ಮಟ್ಟದಲ್ಲಿ ರೂಪಿಸುವುದೇ ನಮ್ಮ ಗುರಿ” ಎಂದು ಸರ್ವಂ ಎಐ ಕಂಪನಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪೋಕ್ಸೋ ಕೇಸ್​: ವಚನಾನಂದ ಶ್ರೀಗೆ ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿ ಎಂದ ಹೈಕೋರ್ಟ್ – Kannada News | Vachanananda Swamiji pocso case: Karnataka High Court Unhappy on Davanagere Court Bail

ಬೆಂಗಳೂರು, (ಜೂನ್ 16): ಮಕ್ಕಳ ದುರ್ಬಳಕೆ ಹಾಗೂ ದೌರ್ಜನ್ಯ ಎಸಗಿದ ಆರೋಪದಡಿ ದಾವಣಗೆರೆ (Davanagere) ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ (Vachanananda Swamiji) ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಆದ್ರೆ, ದೂರು ದಾಖಲಾಗುವ ಮುನ್ನವೇ ದಾವಣಗೆರೆ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದ್ದು, ಇದಕ್ಕೆ ಕರ್ನಾಟಕ ಹೈಕೋರ್ಟ್ (karnataka High Court) ಅಸಮಾಧನ ವ್ಯಕ್ತಪಡಿಸಿದೆ. ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಬಾಲಕನ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ದೂರು ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ಕೊಟ್ಟಿದ್ದಾರೆ. ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿಯಾಗಿದೆ. ಮೇಲ್ನೋಟಕ್ಕೆ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಮುಖ್ಯಾಂಶಗಳು

  • ಪೋಕ್ಸೋ ಕೇಸ್​ನಲ್ಲಿ ವಚನಾನಂದ ಶ್ರೀಗೆ ನಿರೀಕ್ಷಣಾ ಜಾಮೀನು ಹಿನ್ನೆಲೆ
  • ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಹೈಕೋರ್ಟ್​ಗೆ ಬಾಲಕನ ತಾಯಿ ಅರ್ಜಿ
  • ಸ್ವಾಮೀಜಿ ವಿರುದ್ಧ ಗಂಭೀರ ಸೆಕ್ಷನ್​​​ಗಳುಳ್ಳ ಪೋಕ್ಸೋ ಕೇಸ್ ದಾಖಲಾಗಿದೆ
  • ದೂರು ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ಕೊಟ್ಟಿದ್ದಾರೆ
  • ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿ ಎಂದ ಹೈಕೋರ್ಟ್
  • ಮೇಲ್ನೋಟಕ್ಕೆ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ
  • ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ
  • ಅರ್ಜಿ ಸಂಬಂಧ ವಚನಾನಂದ ಸ್ವಾಮೀಜಿಗೆ ಹೈಕೋರ್ಟ್ ನೋಟಿಸ್

ಸ್ವಾಮೀಜಿ ವಿರುದ್ಧ ಗಂಭೀರ ಸೆಕ್ಷನ್​​​ಗಳುಳ್ಳ ಪೋಕ್ಸೋ ಕೇಸ್ ದಾಖಲಾಗಿದೆ. ಆದರೂ ಮೇಲ್ನೋಟಕ್ಕೆ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವಚನಾನಂದ ಸ್ವಾಮೀಜಿಗೆ ನೋಟಿಸ್ ನೀಡಿ ಮುಂದಿನ ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿದೆ.

ಇದನ್ನೂ ಓದಿ: ವಚನಾನಂದಶ್ರೀ ವಿರುದ್ಧದ ಪೋಕ್ಸೋ ಪ್ರಕರಣದ ತನಿಖಾಧಿಕಾರಿ ವರ್ಗಾವಣೆ, ಕಾರಣವೇನು?

ಇನ್ನು ದಾವಣಗೆರೆ ಜಿಲ್ಲಾ ಕೋರ್ಟ್ ನೀಡಿರುವ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್​ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ಹೈಕೋರ್ಟ್, ಸ್ವಾಮೀಜಿಯ ಜಾಮೀನು ರದ್ದುಗೊಳಿಸುತ್ತಾ ಅಥವಾ ಏನು ತೀರ್ಪು ನೀಡುತ್ತೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಈ ಪ್ರಕರಣದ ಬೆಳವಣಿಗೆಗಳು ಹೀಗಿವೆ

ಪಂಚಮಸಾಲಿ ಪೀಠದಿಂದ ಸ್ವಾಮೀಜಿ ಉಚ್ಛಾಟನೆ: ಏಪ್ರಿಲ್​ ಆರಂಭದಲ್ಲಿ ಹರಿಹರದ ಹನಗವಾಡಿ ಬಳಿಯ ಪಂಚಮಸಾಲಿ ಪೀಠದಲ್ಲಿ ನಡೆದ ಸಭೆಯಲ್ಲಿ 15 ಟ್ರಸ್ಟಿಗಳ ಪೈಕಿ 13 ಟ್ರಸ್ಟಿಗಳು ಭಾಗವಹಿಸಿ ನಿರ್ಣಯ ತೆಗೆದುಕೊಂಡು ಸ್ವಾಮೀಜಿಗಳನ್ನು ಮಠದ ಪೀಠದಿಂದ ಉಚ್ಛಾಟನೆ ಮಾಡಿದ್ದರು. ಇದಕ್ಕೆ ಕಾರಣವಾಗಿದ್ದು 2 ಪೀಠಗಳ ನಿರ್ವಹಣೆಯ ವಿಚಾರ. 2018ರಲ್ಲಿ ಶ್ರೀ ಅವರನ್ನು ಇಲ್ಲಿನ ಟ್ರಸ್ಟಿಗಳು ಜಗದ್ಗುರು ಮಾಡಿದ್ದರು. ಬಳಿಕ ಹಲವಾರು ಬಾರಿ ಎರಡು ಪೀಠಗಳ ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದರು. ಆದರೆ ಇದನ್ನು ವಚನಾನಂದ ಸ್ವಾಮೀಜಿ ಪಾಲಿಸದ ಆರೋಪದಲ್ಲಿ ಟ್ರಸ್ಟಿಗಳು ಸರ್ವಾನುಮತವಾಗಿ ಪದಚ್ಯುತಗೊಳಿಸಿದ್ದರು.

ವಚನಾನಂದ ಶ್ರೀಗಳ ವಿರುದ್ಧ ಮಠದ ಮಕ್ಕಳಿಂದ ದೂರು: ವಚನಾನಂದ ಸ್ವಾಮೀಜಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ಹಿಂಸೆ ನೀಡುತ್ತಾರೆ ಎಂದು ಸ್ವತಃ ಮಕ್ಕಳು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯ ವಿಚಾರಣೆ ನಡೆಸಿದ್ದರು. ಅಲ್ಲದೇ ವಚನಾನಂದ ಸ್ವಾಮೀಜಿ ವಿರುದ್ಧ ಮಠದ ಬಾಲಕನೋರ್ವನ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಈಗಾಗಲೇ ಇದೇ ಪ್ರಕರಣದಲ್ಲಿ ಸ್ವಾಮೀಜಿಯ ವಿಚಾರಣೆ ನಡೆದು, ಮೆಡಿಕಲ್ ಟೆಸ್ಟ್ ಕೂಡ ನಡೆಸಲಾಗಿದೆ.

ನಿರೀಕ್ಷಣಾ ಜಾಮೀನು ಮಂಜೂರು: ಸ್ವಾಮೀಜಿ ವಿರುದ್ಧ ಮಕ್ಕಳ ದುರ್ಬಳಕೆ ಹಾಗೂ ದೌರ್ಜನ್ಯ ಎಸಗಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಸ್ವಾಮೀಜಿ, ಏಪ್ರಿಲ್ 21ರಂದು ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಜಿಲ್ಲಾ ನ್ಯಾಯಾಲಯ ಷರತ್ತುಗಳೊಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕ್ರಿಕೆಟ್ ಫ್ಯಾನ್ಸ್​ಗೆ ಡಬಲ್ ಧಮಾಕ; ಒಂದೇ ದಿನ ಕಣಕ್ಕಿಳಿಯಲಿವೆ ಭಾರತದ ಎರಡು ತಂಡಗಳು – Kannada News | Indian Cricket Teams Battle: Men’s ODI vs AFG, Women’s T20 World Cup on June 17

ಭಾರತದ ಕ್ರಿಕೆಟ್ ಫ್ಯಾನ್ಸ್​ಗೆ ಬುಧವಾರ ಅಂದರೆ ಜೂನ್ 17 ರಂದು ಡಬಲ್ ಮನರಂಜನೆ ಸಿಗಲಿದೆ. ಏಕೆಂದರೆ ಈ ದಿನದಂದು ಭಾರತದ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಪಂದ್ಯಗಳನ್ನಾಡಲಿವೆ. ಒಂದೆಡೆ ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ಪುರುಷ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳುವ ಇರಾದೆಯಲ್ಲಿ ಭಾರತದ ಪುರುಷರ ತಂಡವಿದೆ. ಮತ್ತೊಂದೆಡೆ ಭಾರತ ಮಹಿಳಾ ಕ್ರಿಕೆಟ್ ತಂಡ, 2026 ರ ಮಹಿಳಾ ಟಿ20 ವಿಶ್ವಕಪ್​ನಲ್ಲಿ (Women’s T20 World Cup) ತನ್ನ ಎರಡನೇ ಪಂದ್ಯವನ್ನು ಆಡಲು ಸಜ್ಜಾಗಿದೆ.

ಅಫ್ಘನ್ ವಿರುದ್ಧ ಏಕದಿನ ಪಂದ್ಯ

ಧರ್ಮಶಾಲಾದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಶುಭ್​ಮನ್ ಗಿಲ್ ಪಡೆ 7 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು. ಮಳೆ ಪೀಡಿತ ಈ ಪಂದ್ಯವನ್ನು ತಲಾ 25 ಓವರ್​ಗಳಿಗೆ ನಿಗದಿಪಡಿಸಲಾಗಿತ್ತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ್ದ ಅಫ್ಘಾನಿಸ್ತಾನ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನು 7 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.

ಇದೀಗ ಉಭಯ ತಂಡಗಳ ನಡುವೆ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಉತ್ತರ ಪ್ರದೇಶದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವನ್ನು ಭಾರತ ಗೆದ್ದರೆ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿ ಟೀಂ ಇಂಡಿಯಾ ಪಾಲಾಗಲಿದೆ. ಇತ್ತ ಅಫ್ಘಾನಿಸ್ತಾನ ಗೆದ್ದರೆ, ಸರಣಿ 1-1 ರಿಂದ ಸಮಬಲಗೊಳ್ಳಲಿದೆ. ಈ ಪಂದ್ಯ ಎಂದಿನಂತೆ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.

ಟಿ20 ವಿಶ್ವಕಪ್​ನಲ್ಲಿ 2ನೇ ಪಂದ್ಯ

ಇತ್ತ 2026 ರ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡ ಲೀಗ್ ಹಂತದಲ್ಲಿ ತನ್ನ ಎರಡನೇ ಪಂದ್ಯವನ್ನು ಆಡಲು ಸಜ್ಜಾಗಿದೆ. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಟೀಂ ಇಂಡಿಯಾ, ಮೊದಲು ಬ್ಯಾಟಿಂಗ್‌ ಮಾಡಿ 20 ಓವರ್​ಗಳಲ್ಲಿ 170 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 106 ರನ್​ಗಳಿಗೆ ಆಲೌಟ್ ಆಗುವ ಮೂಲಕ 64 ರನ್​ಗಳಿಂದ ಪಂದ್ಯವನ್ನು ಕಳೆದುಕೊಂಡಿತ್ತು. ಈ ಗೆಲುವಿನೊಂದಿಗೆ ಭಾರತ ತಂಡ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿತ್ತು.

IND vs PAK: ವಿಶ್ವಕಪ್​ ಅಂಗಳದಲ್ಲೂ ಕೈಕುಲುಕದ ಉಭಯ ನಾಯಕಿಯರು

ಇದೀಗ ಭಾರತ ವನಿತಾ ತಂಡ ತನ್ನ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ಉಭಯ ತಂಡಗಳಿಗೆ ಇದು ಎರಡನೇ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ ಬಾಂಗ್ಲಾದೇಶ ತಂಡವನ್ನು ಎದುರಿಸಿ ಸೋತಿತ್ತು. ಹೀಗಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಪ್ರಬಲ ಪೈಪೋಟಿ ನೀಡಲು ನೆದರ್ಲ್ಯಾಂಡ್ಸ್ ಪ್ರಯತ್ನಿಸಲಿದೆ. ಹೆಡ್ಡಿಂಗ್ಲಿ ಮೈದಾನದಲ್ಲಿ ನಡೆಯುವ ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:56 pm, Tue, 16 June 26

Source link

Nimma Doctor: ಯಾವ ಯಾವ ರೀತಿಯ ಕ್ಯಾನ್ಸರ್​ ಮಕ್ಕಳನ್ನ ಕಾಡುತ್ತೆ? ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ – Kannada News | Understanding Childrens Cancer Treatment: Insights from HCG Cancer Hospital

ಇಂದಿನ ಒತ್ತಡದ ಜೀವನಶೈಲಿ ಹಾಗೂ ಬದಲಾಗುತ್ತಿರುವ ಪರಿಸರದಿಂದಾಗಿ ಜನರಲ್ಲಿ ನೂರಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಯಾವ ಸಮಸ್ಯೆಗೆ ಯಾವ ಚಿಕಿತ್ಸೆ ಪಡೆಯಬೇಕು ಎಂಬುದು ಒಂದು ದೊಡ್ಡ ಚಿಂತೆಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ನಿಮ್ಮ ಡಾಕ್ಟರ್ ಕಾರ್ಯಕ್ರಮವು ಎಲ್ಲರಿಗೂ ಒಂದೇ ವೇದಿಕೆಯಲ್ಲಿ ಉತ್ತರಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತಿದೆ.

ಮನುಷ್ಯನನ್ನು ಮಾರಣಾಂತಿಕವಾಗಿ ಕಾಡುವ ರೋಗಗಳಲ್ಲಿ ಕ್ಯಾನ್ಸರ್ ಪ್ರಮುಖವಾಗಿದೆ. ಕ್ಯಾನ್ಸರ್ ಎಂಬ ಹೆಸರು ಕೇಳಿದ ಕೂಡಲೇ ಜನ ಚಿಕಿತ್ಸೆಯ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ ಭಯಭೀತರಾಗುತ್ತಾರೆ. ಇಂದಿನ ವೈದ್ಯಕೀಯ ಲೋಕದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಬಂದಿದ್ದರೂ ಸಹ, ಕ್ಯಾನ್ಸರ್ ಕುರಿತ ಭೀತಿ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಅದರಲ್ಲೂ ಮಕ್ಕಳಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಾಗ ಕುಟುಂಬಗಳಿಗೆ ದೊಡ್ಡ ಆತಂಕ ಎದುರಾಗುತ್ತದೆ. ಬೆಂಗಳೂರಿನ ಸಂಪಂಗಿರಾಮನಗರದಲ್ಲಿರುವ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯು ಮಕ್ಕಳಲ್ಲಿನ ಕ್ಯಾನ್ಸರ್ ಚಿಕಿತ್ಸೆಗೆ ಅತ್ಯಾಧುನಿಕ ವಿಧಾನಗಳನ್ನು ಒದಗಿಸುತ್ತಿದೆ. ಸರಿಯಾದ ಮಾಹಿತಿ ಮತ್ತು ಸಮಯೋಚಿತ ಚಿಕಿತ್ಸೆಯೊಂದಿಗೆ ಈ ಭಯವನ್ನು ನಿವಾರಿಸಬಹುದು ಮತ್ತು ಕ್ಯಾನ್ಸರ್ ಅನ್ನು ಗುಣಪಡಿಸಲು ಸಾಧ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ಮತ್ತಷ್ಟು ಓದಿ: 2 ವರ್ಷದೊಳಗಿನ ಮಕ್ಕಳಿಗೆ ಶೀತ, ಕೆಮ್ಮಿನ ಸಿರಪ್ ನೀಡಬೇಡಿ; 11 ಮಕ್ಕಳ ಸಾವಿನ ಬಳಿಕ ಕೇಂದ್ರ ಸರ್ಕಾರ ಎಚ್ಚರಿಕೆ

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

 

Source link

ಹೊಸ ತಂತ್ರ: ಟ್ರಂಪ್ ನಡವಳಿಕೆ ಅಧ್ಯಯನ ಮಾಡಲು ಮನಃಶಾಸ್ತ್ರಜ್ಞರ ನೇಮಿಸಿದ ಇರಾನ್ – Kannada News | Iran’s Diplomatic Breakthrough: Psychologists Analyze Trump for US Iran Peace Talks

ಟೆಹ್ರಾನ್, ಜೂನ್ 16: ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಸರ್ಕಾರವು ಅತ್ಯಂತ ವಿಭಿನ್ನ ಹಾಗೂ ರಹಸ್ಯ ರಾಜತಾಂತ್ರಿಕ ತಂತ್ರವೊಂದನ್ನು ಬಳಸಿರುವುದು ಬೆಳಕಿಗೆ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ವಿಶಿಷ್ಟ ನಿರ್ಧಾರಗಳು ಮತ್ತು ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅದಕ್ಕೆ ತಕ್ಕಂತೆ ಮಾತುಕತೆಯ ಕಾರ್ಯತಂತ್ರವನ್ನು ರೂಪಿಸಲು ಇರಾನ್ ತನ್ನ ರಾಜತಾಂತ್ರಿಕ ತಂಡಕ್ಕೆ ಇಬ್ಬರು ಹಿರಿಯ ಮನಶ್ಶಾಸ್ತ್ರಜ್ಞರನ್ನು (Psychologists) ಸೇರಿಸಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಮನಃಶಾಸ್ತ್ರಜ್ಞರ ಸಲಹೆಯಂತೆ ಬದಲಾದ ಸಂದೇಶ
ಇರಾನಿನ ಅಧಿಕಾರಿಯೊಬ್ಬರ ಪ್ರಕಾರ, ಏಪ್ರಿಲ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಪರೋಕ್ಷ ಮಾತುಕತೆಯ ನಂತರ ಈ ಇಬ್ಬರು ಹಿರಿಯ ಮನಃಶಾಸ್ತ್ರಜ್ಞರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಡೊನಾಲ್ಡ್ ಟ್ರಂಪ್ ಅವರ ವರ್ತನೆಯ ಮಾದರಿಯನ್ನು ಅಧ್ಯಯನ ಮಾಡಿ, ಅಮೆರಿಕಕ್ಕೆ ಕಳುಹಿಸುವ ಲಿಖಿತ ಪತ್ರಗಳು ಹಾಗೂ ಸಂದೇಶಗಳನ್ನು ಯಾವ ಶೈಲಿಯಲ್ಲಿ ರೂಪಿಸಬೇಕು ಎಂದು ಈ ತಜ್ಞರು ಇರಾನ್ ತಂಡಕ್ಕೆ ಮಾರ್ಗದರ್ಶನ ನೀಡಿದರು. ವಿಶೇಷವೆಂದರೆ, ಈ ಬದಲಾವಣೆಗಳನ್ನು ಜಾರಿಗೆ ತಂದ ನಂತರ ಟ್ರಂಪ್ ಅವರಿಂದ ಬಂದ ಪ್ರತಿಕ್ರಿಯೆಗಳು ಹೆಚ್ಚು ಸಕಾರಾತ್ಮಕ ಮತ್ತು ರಚನಾತ್ಮಕವಾಗಿದ್ದವು ಎಂದು ಮೂಲಗಳು ತಿಳಿಸಿವೆ.

ಮಾತುಕತೆಯ ವೇಳೆ ಉಭಯ ದೇಶಗಳ ನಡುವೆ ವಿನಿಮಯವಾಗುವ ಪ್ರತಿಯೊಂದು ಪಠ್ಯ ಮತ್ತು ಪತ್ರಗಳು ಭವಿಷ್ಯದಲ್ಲಿ ಐತಿಹಾಸಿಕ ದಾಖಲೆಗಳಾಗಲಿವೆ ಎಂಬುದನ್ನು ಇರಾನ್ ಗಮನದಲ್ಲಿಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಇವು ಸಾರ್ವಜನಿಕವಾಗಿ ಬಿಡುಗಡೆಯಾದಾಗ, ಇರಾನ್ ಎಷ್ಟು ಜಾಣ್ಮೆ ಮತ್ತು ಅತ್ಯಾಧುನಿಕ ರಾಜತಾಂತ್ರಿಕ ತಂತ್ರದಿಂದ ಮಾತುಕತೆ ನಡೆಸಿತ್ತು ಎಂಬುದು ಜಗತ್ತಿಗೆ ತಿಳಿಯಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಮತ್ತಷ್ಟು ಓದಿ: ನಾಳೆಯೇ ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ; ತಕ್ಷಣವೇ ಹಾರ್ಮುಜ್ ತೆರೆಯಲಾಗುವುದು ಎಂದ ಟ್ರಂಪ್

ಜೂನ್ 19 ರಂದು ಶಾಂತಿ ಒಪ್ಪಂದಕ್ಕೆ ಸಹಿ
ಈ ರಾಜತಾಂತ್ರಿಕ ಪ್ರಯತ್ನಗಳು ಈಗ ಯಶಸ್ಸಿನ ಹಾದಿಗೆ ಬಂದಿವೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಂಘರ್ಷವನ್ನು ಕೊನೆಗೊಳಿಸಲು ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ಅಧಿಕಾರಿಗಳು ಪ್ರಾಥಮಿಕ ತಿಳುವಳಿಕೆ ಒಪ್ಪಂದಕ್ಕೆ (MoU) ಒಪ್ಪಿಗೆ ಸೂಚಿಸಿದ್ದಾರೆ. ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಉಭಯ ದೇಶಗಳು ಅಧಿಕೃತವಾಗಿ ಸಹಿ ಹಾಕುವ ನಿರೀಕ್ಷೆಯಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ವೈದ್ಯಕೀಯ ತಪಾಸಣೆಯಲ್ಲಿ ಬರೋಬ್ಬರಿ 22 ವೈದ್ಯಕೀಯ ತಜ್ಞರು ಭಾಗವಹಿಸಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಇದು ಹಿಂದಿನ ತಪಾಸಣೆಗಳಿಗಿಂತ ದುಪ್ಪಟ್ಟು ಸಂಖ್ಯೆಯಾಗಿದ್ದು, ಅಮೆರಿಕ ಅಧ್ಯಕ್ಷರ ಆರೋಗ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲಿರುವ ಜಾಗತಿಕ ನಿಗಾವನ್ನು ತೋರಿಸುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶ್ರೀಮುರಳಿ, ವಿಜಯ್ ರಾಘವೇಂದ್ರ ತಾಯಿಯ ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್

ನಟರಾದ ವಿಜಯ್ ರಾಘವೇಂದ್ರ (Vijay Raghavendra) , ಶ್ರೀಮುರಳಿ ಅವರ ತಾಯಿ ಜಯಮ್ಮ ಇಂದು (ಜೂನ್ 16) ನಿಧನ ಹೊಂದಿದ್ದಾರೆ. ಜಯಮ್ಮನವರ ಅಂತಿಮ ದರ್ಶನ ನಡೆಯುತ್ತಿದ್ದು ಚಿತ್ರರಂಗದ ಕೆಲವು ಗಣ್ಯರು, ಶ್ರೀಮುರಳಿ ಮತ್ತು ವಿಜಯ್ ರಾಘವೇಂದ್ರ ಅವರ ಗೆಳೆಯರು ಜಯಮ್ಮನವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ದೊಡ್ಮನೆಯ ಸಂಬಂಧಿಕರೂ ಆಗಿರುವ ಕಾರಣ ದೊಡ್ಮನೆಯ ಸದಸ್ಯರು ಸಹ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಪುನೀತ್ ರಾಜ್​ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಸಹ ಆಗಮಿಸಿ ಜಯಮ್ಮನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಬ್ಬರು ಅಲಭ್ಯ: ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಸಾಧ್ಯತೆ – Kannada News | India playing 11 for 2nd odi against afghanistan

ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಬುಧವಾರ (ಜೂನ್ 17) ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿರುವ ಶುಭ್‌ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ, ಸದ್ಯ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ನಾಳೆಯ ಪಂದ್ಯವನ್ನು ಭಾರತ ತಂಡ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು.

ವಿರಾಟ್ ಕೊಹ್ಲಿ, ಹಾರ್ದಿಕ್ ಅಲಭ್ಯ:

ಗಾಯದ ಸಮಸ್ಯೆಯಿಂದಾಗಿ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಈ ಇಬ್ಬರು ಸ್ಟಾರ್ ಆಟಗಾರರು ದ್ವಿತೀಯ ಏಕದಿನ ಪಂದ್ಯದಲ್ಲೂ ಕಾಣಿಸಿಕೊಳ್ಳುವುದಿಲ್ಲ.

ಇತ್ತ ವಿರಾಟ್ ಕೊಹ್ಲಿ ತಂಡದಲ್ಲಿ ಇಲ್ಲದ ಕಾರಣ 2ನೇ ಏಕದಿನ ಪಂದ್ಯದಲ್ಲೂ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಆಲ್​ರೌಂಡರ್ ಆಗಿ ನಿತೀಶ್ ಕುಮಾರ್ ರೆಡ್ಡಿ ಈ ಮ್ಯಾಚ್​ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಹೀಗಿರಲಿದೆ ಪ್ಲೇಯಿಂಗ್ ಇಲೆವೆನ್:

ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಹೀಗಾಗಿ ಅವರನ್ನು ಆಡುವ ಬಳಗದಿಂದ ಕೈ ಬಿಡುವ ಸಾಧ್ಯತೆಯಿದೆ. ಅವರ ಬದಲಿಗೆ ಪ್ರಿನ್ಸ್​ ಯಾದವ್​ಗೆ ಚಾನ್ಸ್ ನೀಡಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ…

  1. ರೋಹಿತ್ ಶರ್ಮಾ
  2.  ಶುಭ್‌ಮನ್ ಗಿಲ್ (ನಾಯಕ)
  3. ಇಶಾನ್ ಕಿಶನ್
  4. ಶ್ರೇಯಸ್ ಅಯ್ಯರ್
  5.  ಕೆ.ಎಲ್. ರಾಹುಲ್ (ವಿಕೆಟ್ ಕೀಪರ್)
  6.  ನಿತೀಶ್ ಕುಮಾರ್ ರೆಡ್ಡಿ
  7.  ವಾಷಿಂಗ್ಟನ್ ಸುಂದರ್
  8.  ಹರ್ಷ್ ದುಬೆ
  9.  ಅರ್ಷದೀಪ್ ಸಿಂಗ್
  10.  ಗುರ್ನೂರ್ ಬ್ರಾರ್
  11.  ಪ್ರಿನ್ಸ್ ಯಾದವ್

ಪಂದ್ಯದ ವಿವರಗಳು:

  • ದಿನಾಂಕ: ಜೂನ್ 17, 2026 (ಬುಧವಾರ)
  •  ಸಮಯ: ಮಧ್ಯಾಹ್ನ 1:30 ಕ್ಕೆ (ಟಾಸ್ 1:00 ಗಂಟೆಗೆ)
  • ಮೈದಾನ: ಏಕನಾ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಲಕ್ನೋ.
  • ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಮತ್ತು ‘ಜಿಯೋಹಾಟ್‌ಸ್ಟಾರ್’ ಆ್ಯಪ್/ವೆಬ್.

ಇದನ್ನೂ ಓದಿ: 500, 1000, 2000 ಮತ್ತು 14000… ದಾಖಲೆಗಳ ಮೇಲೆ ಕಣ್ಣಿಟ್ಟಿರುವ ರೂಟ್

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ) , ಕೆಎಲ್ ರಾಹುಲ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ , ಯಶಸ್ವಿ ಜೈಸ್ವಾಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಹರ್ಷ್ ದುಬೆ , ಕುಲ್ದೀಪ್ ಯಾದವ್ , ಅರ್ಷದೀಪ್ ಸಿಂಗ್ , ಗುರ್ನೂರ್ ಬ್ರಾರ್ , ಪ್ರಸಿದ್ಧ್ ಕೃಷ್ಣ , ಪ್ರಿನ್ಸ್ ಯಾದವ್.

Published On – 2:29 pm, Tue, 16 June 26

Source link

ಟಿವಿ9 ವರದಿಯ ಇಂಪ್ಯಾಕ್ಟ್: ಮಾವಿನ ಹಣ್ಣು ತಿಂದು ಮೃತಪಟ್ಟ ಅಕ್ಕ-ತಂಗಿಯ ಮೂವರು ಸಹೋದರಿಯರನ್ನು ದತ್ತು ಪಡೆದ ಶಾಸಕ ಪ್ರಭು ಚೌಹಾಣ್ – Kannada News | TV9 Kannada Impact: MLA Prabhu Chauhan Adopts 3 Sisters of Two Girls Die of Suspected Food Poisoning after eating Mangos

ಮೃತ ಬಾಲಕಿಯರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಶಾಸಕ ಪ್ರಭು ಚೌಹಾಣ್Image Credit source: tv9

ಬೀದರ್, ಜೂನ್ 16: ಮಾವಿನ ಹಣ್ಣು ಸೇವಿಸಿದ ಬಳಿಕ ಒಂದೇ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಹಠಾತ್ ಮೃತಪಟ್ಟ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿದಂತೆ ‘ಟಿವಿ9’ ಕನ್ನಡ ಬಿತ್ತರಿಸಿದ ವರದಿ ದೊಡ್ಡ ಮಟ್ಟದ ಪ್ರಭಾವ ಬೀರಿದೆ. ವರದಿಗೆ ತಕ್ಷಣವೇ ಸ್ಪಂದಿಸಿರುವ ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌಹಾಣ್, ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸಂತ್ರಸ್ತ ಕುಟುಂಬದ ಮನೆಗೆ ಖುದ್ದಾಗಿ ಭೇಟಿ ನೀಡಿದ್ದಾರೆ. ಅಲ್ಲದೆ, ತಂಗಿಯರನ್ನು ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿರುವ ಕುಟುಂಬದ ಉಳಿದ ಮೂವರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಮುಖ್ಯಾಂಶಗಳು

  • ಟಿವಿ9 ಕನ್ನಡ ವಿಶೇಷ ವರದಿಯ ಇಂಪ್ಯಾಕ್ಟ್
  • ಮೂವರು ಹೆಣ್ಣು ಮಕ್ಕಳನ್ನು ದತ್ತು ಪಡೆದ ಶಾಸಕ
  • ಶಿಕ್ಷಣ, ಮದುವೆ ಹಾಗೂ ಉಚಿತ ಮನೆ ಭರವಸೆ

ಘಟನೆಯ ಹಿನ್ನೆಲೆ

ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದ ಒಂದೇ ಕುಟುಂಬದ ಆರು ಜನ ಸದಸ್ಯರು ಜೂನ್ 7 ರಂದು ಮಾವಿನ ಹಣ್ಣು ಸೇವಿಸಿದ ಬಳಿಕ ತೀವ್ರವಾಗಿ ಅಸ್ವಸ್ಥರಾಗಿದ್ದರು. ತಾಯಿ ಇಂದುಮತಿ ಸೇರಿದಂತೆ ಐವರು ಹೆಣ್ಣು ಮಕ್ಕಳು ತೀವ್ರ ವಾಂತಿ-ಭೇದಿಯಿಂದ ನರಳಾಡಿದ್ದರು. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ದಾಖಲಿಸಲಾಗಿತ್ತಾದರೂ, ಜೂನ್ 8 ರಂದು ಚಿಕಿತ್ಸೆ ಫಲಕಾರಿಯಾಗದೆ ಸಹೋದರಿಯರಾದ ಭವಾನಿ (17) ಮತ್ತು ಸಂಧ್ಯಾರಾಣಿ (14) ಸಾವನ್ನಪ್ಪಿದ್ದರು. ಮತ್ತೊಬ್ಬ ಸಹೋದರಿ ವಿಜಯಶ್ರೀ ಇಂದಿಗೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತದ ಕುರಿತು ಹೈದರಾಬಾದ್‌ನ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬದ ನೆರವಿಗೆ ಧಾವಿಸಿದ ಶಾಸಕರು

ದುರಂತ ಸಂಭವಿಸಿದ ಬಳಿಕ ದಯನೀಯ ಸ್ಥಿತಿಯಲ್ಲಿದ್ದ ಆ ಬಡ ಕುಟುಂಬದ ಬಗ್ಗೆ ‘ಟಿವಿ9’ ಕನ್ನಡ ಸವಿಸ್ತಾರವಾದ ವರದಿಯನ್ನು ಪ್ರಸಾರ ಮಾಡಿ ಸರ್ಕಾರದ ಗಮನ ಸೆಳೆದಿತ್ತು. ವರದಿಯನ್ನು ನೋಡಿ ತಕ್ಷಣವೇ ಶಾಸಕ ಪ್ರಭು ಚೌಹಾಣ್, ಶೆಂಬೆಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಷ್ಟೇ ಅಲ್ಲದೆ, ಕುಟುಂಬದ ಉಳಿದ ಮೂವರು ಹೆಣ್ಣು ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚು ಹಾಗೂ ಅವರ ಮದುವೆಯ ಜವಾಬ್ದಾರಿಯನ್ನು ತಾವೇ ವೈಯಕ್ತಿಕವಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದರ ಜೊತೆಗೆ, ಇದೇ ವರ್ಷದಲ್ಲಿ ಸರ್ಕಾರದ ವತಿಯಿಂದ ಆ ಕುಟುಂಬಕ್ಕೆ ಒಂದು ಸುಸಜ್ಜಿತವಾದ ನೂತನ ಮನೆಯನ್ನು ನಿರ್ಮಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದು, ಶಾಸಕರ ಈ ಮಾನವೀಯ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು: ತಾಯಿ ಸೇರಿ ಐವರು ಆಸ್ಪತ್ರೆಗೆ ದಾಖಲು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link