ಬೆಂಗಳೂರು, ಫೆಬ್ರವರಿ 17: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಇಂದು ರಾಹುಗ್ರಸ್ತ ಸೂರ್ಯಗ್ರಹಣ, ಏನೇನು ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಇದು 2026ರ ಮೊದಲ ಗ್ರಹಣವಾಗಿದ್ದು, ಕುಂಭ ರಾಶಿಯ ಧನಿಷ್ಠಾ ನಕ್ಷತ್ರದ ನಾಲ್ಕನೇ ಪಾದದಲ್ಲಿ ನಡೆಯಲಿದೆ. ಇದನ್ನು “ರಿಂಗ್ ಆಫ್ ಫೈರ್” ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಗೋಚರಿಸದಿದ್ದರೂ, ಅಂಟಾರ್ಟಿಕಾ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದಲ್ಲಿ ಗೋಚರಿಸಲಿದೆ.
ಈ ಗ್ರಹಣದ ಸಮಯದಲ್ಲಿ ಐದು ಗ್ರಹಗಳು (ರವಿ, ಬುಧ, ಶುಕ್ರ, ರಾಹು, ಚಂದ್ರ) ಒಂದೇ ಮನೆಯಲ್ಲಿ ಇರುವುದು ವಿಶೇಷ. ಕರ್ಕಾಟಕ, ಸಿಂಹ, ಮಕರ ಮತ್ತು ಕುಂಭ ರಾಶಿಯವರ ಮೇಲೆ ಇದು ಪ್ರಭಾವ ಬೀರಬಹುದು. ಗ್ರಹಣದ ಸ್ಪರ್ಶಕಾಲ ಮಧ್ಯಾಹ್ನ 3:26, ಮಧ್ಯಮ ಕಾಲ 5:43 ಮತ್ತು ಮೋಕ್ಷಕಾಲ ರಾತ್ರಿ 7:57. ಈ ಸಮಯದಲ್ಲಿ ಮಂತ್ರ ಜಪ, ದಾನ ಮತ್ತು ಧ್ಯಾನ ಮಾಡುವುದು ಶುಭಕರ. ಗೋಧಿ, ಉದ್ದಿನಬೇಳೆ, ತಾಮ್ರ ದಾನ, ಸೂರ್ಯನ ಜಪ ಹಾಗೂ ಆದಿತ್ಯ ಹೃದಯ ಪಠಣವು ಉತ್ತಮ ಫಲ ನೀಡುತ್ತದೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಜಾಗರೂಕರಾಗಿರುವುದು ಮುಖ್ಯ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.