Daily Devotional: ಶುಭ ಸಮಾರಂಭಗಳಲ್ಲಿ ಮುಯ್ಯಿ ಕೊಡುವುದರ ಅರ್ಥ ಮತ್ತು ಮಹತ್ವ

Daily Devotional: ಶುಭ ಸಮಾರಂಭಗಳಲ್ಲಿ ಮುಯ್ಯಿ ಕೊಡುವುದರ ಅರ್ಥ ಮತ್ತು ಮಹತ್ವ

ಹಿಂದೂ ಸನಾತನ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳಾದ ನಾಮಕರಣ, ವಿವಾಹ, ಅಥವಾ ಗೃಹಪ್ರವೇಶದಂತಹ ಸಂದರ್ಭಗಳಲ್ಲಿ ಮುಯ್ಯಿ ನೀಡುವ ಪದ್ಧತಿಯು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಇದು ಕೇವಲ ಒಂದು ಆಚರಣೆಯಾಗದೆ, ಆಳವಾದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಮಹತ್ವವನ್ನು ಹೊಂದಿದೆ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಮುಯ್ಯಿ ಎಂದರೆ ಕೇವಲ ಕೊಡುಗೆಯಲ್ಲ, ಬದಲಿಗೆ ಪ್ರೀತಿಪೂರ್ವಕವಾಗಿ, ಮನಸ್ಸಿನ ಉತ್ತಮ ಭಾವನೆಯಿಂದ ನೀಡುವ ಒಂದು ಕಾಣಿಕೆಯಾಗಿದೆ. ಅದು ಹಣದ ರೂಪದಲ್ಲಿರಬಹುದು, ವಸ್ತುವಿನ ರೂಪದಲ್ಲಿರಬಹುದು, ಯಾವುದೇ ರೀತಿಯಲ್ಲಿರಬಹುದು, ಆದರೆ ಅದರ ಹಿಂದಿರುವ ಭಾವನೆಯೇ ಪ್ರಮುಖವಾದುದು. “ಮುಯ್ಯಿ” ಎಂಬ ಪದವು ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಭಾಗವಾಗಿದೆ, ಇದು ಸಂಬಂಧಗಳನ್ನು ಬಲಪಡಿಸುವ ಮತ್ತು ಪರಸ್ಪರ ಸಹಕಾರವನ್ನು ಸೂಚಿಸುವ ಒಂದು ವಿಶಿಷ್ಟ ಪದ್ಧತಿಯಾಗಿದೆ.

ಹಿಂದಿನ ಕಾಲದಿಂದಲೂ, ಮದುವೆ ಅಥವಾ ಮನೆ ಕಟ್ಟುವಂತಹ ದೊಡ್ಡ ಕಾರ್ಯಗಳು ಕುಟುಂಬಗಳಿಗೆ ಅಪಾರ ಆರ್ಥಿಕ ಹೊರೆಯನ್ನು ತರುತ್ತಿದ್ದವು. “ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು” ಎಂಬ ನಾಣ್ಣುಡಿಯು ಈ ಕಷ್ಟಗಳನ್ನು ಎತ್ತಿ ತೋರಿಸುತ್ತದೆ. ಇಂತಹ ಸಂದರ್ಭಗಳಲ್ಲಿ, ನೆಂಟರು, ಸ್ನೇಹಿತರು ಅಥವಾ ಆತ್ಮೀಯರು ಬರಿಗೈಯಲ್ಲಿ ಹೋಗುವುದಿಲ್ಲ. ಒಂದು ಮುಯ್ಯಿ ಕವರ್‌ನಲ್ಲಿ ತಮ್ಮ ಕೈಲಾದ ಹಣವನ್ನು ಇರಿಸಿ, ಆತಿಥೇಯರ ಆರ್ಥಿಕ ಹೊರೆಗೆ ಒಂದು ಸಣ್ಣ ಸಹಾಯ ನೀಡುತ್ತಾರೆ. ಇದು ಕೇವಲ ಹಣಕಾಸಿನ ನೆರವಲ್ಲ, ಆತಿಥೇಯರ ಕಷ್ಟದಲ್ಲಿ ನಾವಿದ್ದೇವೆ ಎಂಬ ಮಾನಸಿಕ ಬೆಂಬಲವನ್ನೂ ಸೂಚಿಸುತ್ತದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಇತ್ತೀಚಿನ ದಿನಗಳಲ್ಲಿ, ಕೆಲವರು ಆಮಂತ್ರಣ ಪತ್ರಿಕೆಗಳಲ್ಲಿ “ಮುಯ್ಯಿ ಸ್ವೀಕರಿಸುವುದಿಲ್ಲ” ಎಂದು ನಮೂದಿಸುತ್ತಾರೆ. ಇದು ಅವರ ಸಂಪತ್ತನ್ನು ಸೂಚಿಸಬಹುದು, ಆದರೆ ಮುಯ್ಯಿಯ ನಿಜವಾದ ಅರ್ಥವನ್ನು ನಿರ್ಲಕ್ಷಿಸಿದಂತಾಗುತ್ತದೆ. ಮುಯ್ಯಿಯು ಕೇವಲ ಆರ್ಥಿಕ ಸಹಾಯವಲ್ಲ, ಬದಲಿಗೆ ಆಶೀರ್ವಾದ, ಶುಭ ಹಾರೈಕೆ ಮತ್ತು ಸಂಬಂಧಗಳ ಬಾಂಧವ್ಯವನ್ನು ಬಲಪಡಿಸುವ ಒಂದು ಸಂಕೇತವಾಗಿದೆ. ಆತಿಥೇಯರು ಎಷ್ಟೇ ಶ್ರೀಮಂತರಾಗಿದ್ದರೂ, ಅತಿಥಿಗಳು ನೀಡುವ ಮುಯ್ಯಿ ಕೇವಲ ಹಣವಲ್ಲ, ಅದು ಸದ್ಭಾವನೆ ಮತ್ತು ಆಶೀರ್ವಾದದ ರೂಪದಲ್ಲಿರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *