ಹಗಲು ರಾತ್ರಿ ಹಣದ ಚಿಂತೆ ಮಾಡಿದರೆ ಯಾವ ದೋಷ ಉಂಟಾಗುತ್ತೆ ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಣವು ಜೀವನಕ್ಕೆ ಅವಶ್ಯಕವಾದರೂ, ಅದರ ಅತಿಯಾದ ಚಿಂತೆ ವ್ಯಕ್ತಿಯ ಬದುಕಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಶಾಸ್ತ್ರಗಳು “ಅತಿ ಸರ್ವತ್ರ ವರ್ಜಯೇತ್” ಎಂದು ಹೇಳುತ್ತವೆ, ಅಂದರೆ ಯಾವುದೇ ವಿಷಯದಲ್ಲಿ ಅತಿರೇಕ ಸಲ್ಲದು. ಬೆಳಗ್ಗಿನಿಂದ ಸಾಯಂಕಾಲದವರೆಗೆ ಕೇವಲ ಹಣ, ಹಣ ಎಂದು ಚಿಂತಿಸುವುದು ಜ್ಯೋತಿಷ್ಯದ ಪ್ರಕಾರ ದೋಷಗಳಿಗೆ ಕಾರಣವಾಗುತ್ತದೆ.
ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ, ಅರ್ಥವು ಧರ್ಮದ ನಂತರ ಬರುತ್ತದೆ. ಧರ್ಮದಿಂದ ಹಣ ಸಂಪಾದಿಸಿ, ಆ ಆಸೆಯಿಂದ ಮೋಕ್ಷದೆಡೆ ಸಾಗಬೇಕು. ಆದರೆ, ಹಣದ ಅತಿಯಾದ ವ್ಯಾಮೋಹವು ಸುಖ ಸಂತೋಷಗಳಿಗೆ ದೂರ ಮಾಡಿ, ಸಂಬಂಧಗಳನ್ನು ಹಾಳು ಮಾಡುತ್ತದೆ ಮತ್ತು ದೈವಬಲವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ದೇಹದ ಅಂಗಾಂಗ ವೈಫಲ್ಯದಂತಹ ಆರೋಗ್ಯ ಸಮಸ್ಯೆಗಳಿಗೂ ಇದು ಕಾರಣವಾಗಬಹುದು ಎಂದು ಗುರೂಜಿ ವಿವರಿಸಿದ್ದಾರೆ.