
ಟಿವಿ9 ಕನ್ನಡ ಡಿಜಿಟಲ್ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಹುಟ್ಟು ಹಬ್ಬವನ್ನ ಹೇಗೆ ಆಚರಿಸಬೇಕು ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನ್ಮದಿನಾಚರಣೆಯು ಕೇಕ್ ಕತ್ತರಿಸುವುದು, ಮೇಣದಬತ್ತಿ ಆರಿಸುವುದು, ಬಲೂನ್ ಸಿಡಿಸುವುದು ಮುಂತಾದ ಹೊಸ ಪದ್ಧತಿಗಳಿಂದ ಕೂಡಿದೆ. ಆದರೆ, ಹಿಂದೂ ಸಂಪ್ರದಾಯದಲ್ಲಿ ಈ ರೀತಿಯ ಆಚರಣೆಗಳಿಗೆ ಹೆಚ್ಚು ಪ್ರಾಮುಖ್ಯತೆ ಇಲ್ಲ. ಜನ್ಮದಿನವು ಕೇವಲ ಮೋಜಿನ ದಿನವಲ್ಲ, ಬದಲಿಗೆ ಆತ್ಮಾವಲೋಕನ ಮತ್ತು ಸಾರ್ಥಕತೆಯ ದಿನ ಎಂದು ಪರಿಗಣಿಸಲಾಗುತ್ತದೆ.
ಸನಾತನ ಸಂಸ್ಕೃತಿಯ ಪ್ರಕಾರ, ಜನ್ಮದಿನವನ್ನು ತಿಥಿಯ ಆಧಾರದ ಮೇಲೆ ಆಚರಿಸುವುದು ಹೆಚ್ಚು ಶುಭಕರ. ಈ ದಿನ ಸ್ನಾನ ಮಾಡಿ ಹಿರಿಯರ ಆಶೀರ್ವಾದ ಪಡೆಯುವುದು, ಇಷ್ಟ ದೇವತಾ ಮತ್ತು ಕುಲ ದೇವತಾ ದರ್ಶನ ಮಾಡುವುದು ಮುಖ್ಯ. ದೀಪವು ಜ್ಞಾನ ಮತ್ತು ಶಕ್ತಿಯ ಪ್ರತೀಕವಾದ್ದರಿಂದ ಅದನ್ನು ಆರಿಸುವುದು ಅಶುಭಕರ. ಬದಲಿಗೆ, ದೀಪ ಹಚ್ಚಿ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಉತ್ತಮ ಎಂದು ಬಸವರಾಜ್ ಗುರೂಜಿ ತಿಳಿಸಿದ್ದಾರೆ.