ಭಾರತ ಮತ್ತು ಶ್ರೀಲಂಕಾ ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಎರಡನೇ ಸೆಷನ್ನಲ್ಲಿ ಶ್ರೀಲಂಕಾ ತಂಡ ಭರ್ಜರಿ ಪುನರಾಗಮನ ಮಾಡಿದೆ. ಹೀಗಾಗಿ ಚಹಾ ವಿರಾಮದ ವೇಳೆಗೆ ಶ್ರೀಲಂಕಾ 57 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿದೆ. ಆದಾಗ್ಯೂ ಟೀಂ ಇಂಡಿಯಾ 248 ರನ್ಗಳ ಮುನ್ನಡೆಯಲ್ಲಿದೆ. ಲಂಕಾ ಪರ ಸೋನಲ್ ದಿನುಷಾ 62 ರನ್ ಮತ್ತು ನಿರೋಷನ್ ಡಿಕ್ವೆಲ್ಲಾ 71 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಆರಂಭದಲ್ಲಿ ಭಾರತದ ಮೇಲುಗೈ
ಮೂರನೇ ದಿನದಂದು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾಕಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್ನ ಎರಡನೇ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಮೊದಲ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಿಸಿಕೊಟ್ಟರು. ಆ ಬಳಿಕ ಬಂದ ಮಾನವ್ ಸುತಾರ್ ಕೂಡ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಈ ಎರಡು ಸೆಷನ್ಗಳಲ್ಲಿ ಭಾರತ 5 ಬೌಲರ್ಗಳನ್ನು ಬಳಸಿಕೊಂಡಿತು. ಪ್ರಸಿದ್ಧ್ ಕೃಷ್ಣ ಹೊರತುಪಡಿಸಿ, ಎಲ್ಲರೂ ವಿಕೆಟ್ ಪಡೆದರು.
6ನೇ ವಿಕೆಟ್ಗೆ ಶತಕದ ಜೊತೆಯಾಟ
ಆದಾಗ್ಯೂ 6ನೇ ವಿಕೆಟ್ಗೆ ಸೋನಲ್ ದಿನುಷಾ ಮತ್ತು ನಿರೋಷನ್ ಡಿಕ್ವೆಲ್ಲಾ ಶತಕದ ಜೊತೆಯಾಟವನ್ನಾಡಿದ್ದಾರೆ. ಇವರಿಬ್ಬರ ಜೊತೆಯಾಟ ಟೀಂ ಇಂಡಿಯಾವನ್ನು ಒತ್ತಡಕ್ಕೆ ಸಿಲುಕಿಸಿದೆ. ಇವರಿಬ್ಬರ ಜೊತೆಯಾಟಕ್ಕೆ ರಾಹುಲ್ ಕೈಬಿಟ್ಟ ಕ್ಯಾಚ್ ಕೂಡ ಕಾರಣವಾಯಿತು. ನಿರೋಷನ್ ಡಿಕ್ವೆಲ್ಲಾ 20 ರನ್ ಬಾರಿಸಿ ಆಡುತ್ತಿದ್ದಾಗ, ಮಾನವ್ ಸುತಾರ್ ಬೌಲಿಂಗ್ನಲ್ಲಿ ಸ್ಲಿಪ್ನಲ್ಲಿ ನಿಂತಿದ್ದ ರಾಹುಲ್ಗೆ ಕ್ಯಾಚ್ ನೀಡಿದರು. ಆದರೆ ಸ್ವಲ್ಪ ಕಷ್ಟಕರವಾದ ಕ್ಯಾಚ್ ಅನ್ನು ಹಿಡಿಯುವಲ್ಲಿ ರಾಹುಲ್ ವಿಫಲರಾದರು. ಚೆಂಡು ರಾಹುಲ್ ಅವರ ಕೈಗೆ ತಾಗಿ ನೆಲಕ್ಕುರುಳಿತು. ಈ ಜೀವದಾನವನ್ನು ಸದುಪಯೋಗಪಡಿಸಿಕೊಂಡಿರುವ ನಿರೋಷನ್ ಡಿಕ್ವೆಲ್ಲಾ ಅರ್ಧಶತಕ ಬಾರಿಸಿ ಮುನ್ನಗ್ಗುತ್ತಿದ್ದಾರೆ.
ಇತ್ತ ಶ್ರೀಲಂಕಾ ಪರ ಆರಂಭಿಕ ನಿಶಾನ್ ಫೆರ್ನಾಂಡೊ ಖಾತೆ ತೆರೆಯದೆ ಔಟಾದರೆ, ಲಹಿರು ಉದಾರ 27, ದಿನೇಶ್ ಚಾಂಡಿಮಲ್ 4, ಕಾಮಿಂದು ಮೆಂಡಿಸ್ 14 ಮತ್ತು ಧನಂಜಯ್ ಡಿ ಸಿಲ್ವಾ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಭಾರತದ ಪರ ಮಾನವ್ ಸುತಾರ್ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
Published On – 3:34 pm, Mon, 17 August 26