Iran-Israel War: ಯುದ್ಧದ ಪರಿಣಾಮ ಯಾದಗಿರಿಯ 28 ರೈಸ್ ಮಿಲ್‌ಗಳಿಗೆ ಭಾರೀ ಹೊಡೆತ!

Iran-Israel War: ಯುದ್ಧದ ಪರಿಣಾಮ ಯಾದಗಿರಿಯ 28 ರೈಸ್ ಮಿಲ್‌ಗಳಿಗೆ ಭಾರೀ ಹೊಡೆತ!

ಯಾದಗಿರಿ, ಮಾರ್ಚ್​ 13: ಇರಾನ್–ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಇದೀಗ ಗಲ್ಫ್ ರಾಷ್ಟ್ರಗಳ ಮೇಲಷ್ಟೇ ಅಲ್ಲದೆ ಭಾರತದ ಕೆಲವು ಉದ್ಯಮಗಳ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಈಗಾಗಲೆ ಬೆಂಗಳೂರು ಸೇರಿ ದೇಶದ ಹಲವೆಡೆ ಎಲ್​ಪಿಜಿ ಗ್ಯಾಸ್ ಸಿಲಿಂಡರ್ (LPG cylinder crisis) ಕೊರತೆ ತಲೆಯಿತ್ತಿದೆ. ಅದಲ್ಲದೆ ಗಲ್ಫ್ ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದ ಅಕ್ಕಿ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ರೈಸ್ ಮಿಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಹಲವಾರು ಮಿಲ್‌ಗಳು ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಮಿಲ್ ಮಾಲೀಕರು

ಯಾದಗಿರಿ ಜಿಲ್ಲೆಯಲ್ಲಿ ಬೆಳೆಯುವ ಸೋನಾ ಮಸೂರಿ ಅಕ್ಕಿಗೆ ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯಿಂದ ವಿವಿಧ ಮಹಾನಗರಗಳ ಮೂಲಕ ಈ ಅಕ್ಕಿಯನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ವಿಶೇಷವಾಗಿ ಸೌದಿ ಅರೇಬಿಯಾ, ದುಬೈ, ಕುವೈತ್ ಸೇರಿದಂತೆ ಹಲವು ಗಲ್ಫ್ ರಾಷ್ಟ್ರಗಳಿಗೆ ಅಕ್ಕಿ ಸಾಗಾಟ ನಡೆಯುತ್ತಿತ್ತು. ಪ್ರತಿದಿನವೂ ಯಾದಗಿರಿಯಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಅಕ್ಕಿ ವಿದೇಶಗಳಿಗೆ ರಫ್ತು ಆಗುತ್ತಿತ್ತು. ಆದರೆ ಇತ್ತೀಚೆಗೆ ಇರಾನ್–ಇಸ್ರೇಲ್ ಯುದ್ಧದ ಪರಿಣಾಮ ಗಲ್ಫ್ ರಾಷ್ಟ್ರಗಳ ವ್ಯಾಪಾರ ಚಟುವಟಿಕೆಗಳು ಕುಂಠಿತಗೊಂಡಿದ್ದು, ಅಕ್ಕಿ ರಫ್ತು ಸಂಪೂರ್ಣವಾಗಿ ನಿಂತಿದೆ.

ಇದರಿಂದ ಮಿಲ್ ಮಾಲೀಕರಿಗೆ ಭಾರೀ ಹೊಡೆತ ಬಿದ್ದಿದೆ. ಎರಡು ತಿಂಗಳ ಹಿಂದೆ ರೈತರಿಂದ ಹೆಚ್ಚಿನ ದರಕ್ಕೆ ಭತ್ತ ಖರೀದಿ ಮಾಡಿದ್ದ ಮಿಲ್ ಮಾಲೀಕರು, ಅದನ್ನು ಅಕ್ಕಿಯಾಗಿಸಿ ವಿದೇಶಗಳಿಗೆ ರಫ್ತು ಮಾಡಲು ಯೋಜಿಸಿದ್ದರು. ಆದರೆ ಈಗ ರಫ್ತು ಸ್ಥಗಿತಗೊಂಡಿರುವುದರಿಂದ ಅಕ್ಕಿಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ ಮಧ್ಯಪ್ರಾಚ್ಯ ಯುದ್ಧದಿಂದ ಯಾದಗಿರಿಯ ಅಕ್ಕಿ ಉದ್ಯಮಕ್ಕೂ ಹೊಡೆತ!

ಜಿಲ್ಲೆಯಿಂದ ರಫ್ತಾಗುವ ಅಕ್ಕಿಯ ಪ್ರಮಾಣವೆಷ್ಟು?

ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 28 ರೈಸ್ ಮಿಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಒಂದೊಂದು ಮಿಲ್‌ನಿಂದ ದಿನಕ್ಕೆ ಸುಮಾರು 25 ಟನ್ ಅಕ್ಕಿ ಸಿದ್ಧಪಡಿಸಿ ರಫ್ತು ಮಾಡಲಾಗುತ್ತಿತ್ತು. ಆದರೆ ಈಗ ರಫ್ತು ನಿಂತಿರುವುದರಿಂದ ಹಲವಾರು ಮಿಲ್‌ಗಳು ಅಕ್ಕಿ ಉತ್ಪಾದನೆ ಕಾರ್ಯವನ್ನೇ ಸ್ಥಗಿತಗೊಳಿಸಿ ಬಂದ್ ಮಾಡುವ ಹಂತಕ್ಕೆ ತಲುಪಿವೆ. ಮಿಲ್‌ಗಳು ಬಂದ್ ಆಗಿರುವುದರಿಂದ ನೂರಾರು ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನೊಂದೆಡೆ ಮಿಲ್ ಮಾಲೀಕರು ಬ್ಯಾಂಕ್ ಸಾಲ, ವಿದ್ಯುತ್ ಬಿಲ್ ಸೇರಿದಂತೆ ಹಲವು ಖರ್ಚುಗಳನ್ನು ನಿರ್ವಹಿಸಲು ಪರದಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಅಕ್ಕಿ ಉದ್ಯಮವೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಮಿಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ದೂರದ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಯಾದಗಿರಿ ಜಿಲ್ಲೆಯ ಅಕ್ಕಿ ಉದ್ಯಮಕ್ಕೂ ಹೊಡೆತ ನೀಡಿದ್ದು, ರಫ್ತು ಮತ್ತೆ ಆರಂಭವಾಗುವವರೆಗೆ ಉದ್ಯಮಿಗಳು ಹಾಗೂ ಕಾರ್ಮಿಕರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *