Ishan Kishan: ಆ ಒಂದು ವಿಕೆಟ್ ಸಿಕ್ಕಿದಿದ್ರೆ ಏನಾದ್ರು ಮಾಡಬಹುದಿತ್ತು..!

Ishan Kishan: ಆ ಒಂದು ವಿಕೆಟ್ ಸಿಕ್ಕಿದಿದ್ರೆ ಏನಾದ್ರು ಮಾಡಬಹುದಿತ್ತು..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಗೆ ಚಾಲನೆ ದೊರೆತಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಎಸ್​ಆರ್​ಹೆಚ್ ಪಡೆ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 201 ರನ್​ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಗುರಿಯನ್ನು ಆರ್​ಸಿಬಿ ತಂಡ ಕೇವಲ 15.4 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡವು ಮೊದಲ ಪಂದ್ಯದಲ್ಲೇ ಹೀನಾಯವಾಗಿ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡದ ಹಂಗಾಮಿ ನಾಯಕ ಇಶಾನ್ ಕಿಶನ್, ನಾವು ಆರಂಭಿಕ ವಿಕೆಟ್​ಗಳನ್ನು ಬೇಗನೆ ಕಳೆದುಕೊಂಡಿದ್ದು ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊದಲ 3-4 ಓವರ್‌ಗಳವರೆಗೆ ಆರ್​ಸಿಬಿ ಬೌಲರ್​ಗಳು ಅತ್ಯುತ್ತಮ ದಾಳಿ ಸಂಘಟಿಸಿದ್ದರು.

ಈ ದಾಳಿ ನಡುವೆ ನಾವು ಆರಂಭಿಕ ವಿಕೆಟ್​ಗಳನ್ನು ಕಳೆದುಕೊಂಡಿದ್ದು ದುಬಾರಿಯಾಯಿತು. ಮುಂದಿನ ಬಾರಿ ನಾವು ಈ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದೆ. ನಾವು ಆರಂಭದಲ್ಲಿ ಎಚ್ಚರದಿಂದ ಆಡಿದ್ದರೆ ಉತ್ತಮ ಮೊತ್ತ ಪೇರಿಸಬಹುದಿತ್ತು. ಏಕೆಂದರೆ, ಎರಡನೇ ಇನ್ನಿಂಗ್ಸ್‌ ನೋಡಿದರೆ, ಬ್ಯಾಟಿಂಗ್ ಮಾಡುವುದು ತುಂಬಾ ಸುಲಭ ಮತ್ತು ಚೆಂಡು ಬ್ಯಾಟ್​ಗೆ ಚೆನ್ನಾಗಿ ಬರುತ್ತಿತ್ತು. ಆದ್ದರಿಂದ ನಮ್ಮ ಆಟಗಾರರು ಮುಂದಿನ ಬಾರಿ ಶಾಟ್ ಆಯ್ಕೆಯಲ್ಲಿ ನಾವು ಸ್ವಲ್ಪ ಬುದ್ಧಿವಂತರಾಗಿರಬೇಕು ಎಂದು ಇಶಾನ್ ಕಿಶನ್ ಹೇಳಿದ್ದಾರೆ.

ಇನ್ನು 202 ರನ್​ಗಳ ಗುರಿ ನೀಡಿರುವುದು ಪಾಸಿಟಿವ್ ವಿಷಯ ಎಂದಿರುವ ಇಶಾನ್ ಕಿಶನ್, ನಾವು ವಿರಾಟ್ ಕೊಹ್ಲಿಯ ವಿಕೆಟ್ ಬೇಗನೆ ಪಡೆದಿದ್ದರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಭಾಯ್‌ ಚೇಸಿಂಗ್ ವೇಳೆ ಬ್ಯಾಟಿಂಗ್ ಮಾಡಿದ ರೀತಿ ಮೆಚ್ಚಲೇಬೇಕು. ಇಂತಹ ಮ್ಯಾಚ್​ಗಳಲ್ಲಿ ಬೇಗನೇ ಅವರ ವಿಕೆಟ್ ಪಡೆಯುವುದು ಬಹಳ ಮುಖ್ಯ. ಇಲ್ಲದಿದ್ದರೆ, ಅವರು ಇಡೀ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿಬಿಡುತ್ತಾರೆ. ಹೀಗಾಗಿ ಆರಂಭದಲ್ಲೇ ಕೊಹ್ಲಿಯನ್ನು ತಡೆಯಬೇಕಾಗುತ್ತದೆ.

ಒಂದು ವೇಳೆ ವಿರಾಟ್ ಕೊಹ್ಲಿಯ ವಿಕೆಟ್ ಬೇಗನೆ ಸಿಕ್ಕಿದ್ದರೆ ನಮಗೂ ಪಂದ್ಯದಲ್ಲಿ ಚಾನ್ಸ್ ಇರುತ್ತಿತ್ತು. ಆದರೆ ಒಂದು ಬಾರಿ ಅವರು ನೆಲೆಯೂರಿದರೆ ಆ ಬಳಿಕ ಅವರನ್ನು ತಡೆಯುವುದು ಕಷ್ಟ. ಇದಾಗ್ಯೂ ಇದು ಮೊದಲ ಪಂದ್ಯ ಮತ್ತು ಈ ತಪ್ಪುಗಳು ಈಗ ಸ್ವೀಕಾರಾರ್ಹ.

ಇನ್ನೂ ಓದಿ: ಕಿಂಗ್ ಕೊಹ್ಲಿ ಸಿಡಿಲಬ್ಬರಕ್ಕೆ ಪಾಕ್ ದಾಂಡಿಗನ ವಿಶ್ವ ದಾಖಲೆ ಧೂಳೀಪಟ

ನಾವು ಬೌಲಿಂಗ್‌ನಲ್ಲಿ ಇನ್ನೂ ಸ್ವಲ್ಪ ಹೆಚ್ಚು ಜಾಗರೂಕರಾಗಬೇಕಿದೆ. ಈ ಪಂದ್ಯದ ತಪ್ಪುಗಳನ್ನು ತಿದ್ದಿದ್ರೆ ಮುಂದಿನ ಪಂದ್ಯದಿಂದ ನಾವು ಬಲಶಾಲಿಯಾಗಬಹುದು. ಅಲ್ಲದೆ ಮುಂಬರುವ ಪಂದ್ಯಗಳನ್ನು ನಾವು ಗೆದ್ದರೆ, ಪಂದ್ಯಾವಳಿಯಲ್ಲಿ ಮುಂದುವರಿಯುವುದು ನಮಗೆ ತುಂಬಾ ಸುಲಭವಾಗುತ್ತದೆ. ಹೀಗಾಗಿ ಮುಂದಿನ ಮ್ಯಾಚ್​ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡ ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ಇಶಾನ್ ಕಿಶನ್ ಹೇಳಿದ್ದಾರೆ.

 

Source link

Leave a Reply

Your email address will not be published. Required fields are marked *