Headlines

Jana Nayagan Movie Review: ದೇಶಭಕ್ತಿಯೋ? ರಾಜಕೀಯ ಲಾಭವೋ? – Kannada News | Jana Nayagan Movie Review: Is Vijay’s movie good or bad

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾನಲ್ಲಿ ಸಮಾಜಕ್ಕೆ ಮುಖ್ಯವಾದ, ಪ್ರಜಾಪ್ರಭುತ್ವಕ್ಕೆ ಅಗತ್ಯವಾದ, ಮಹಿಳಾ ಸಬಲೀಕರಣಕ್ಕೆ ಪೂರಕವಾದ ಸಾಕಷ್ಟು ವಿಷಯಗಳನ್ನು ಒತ್ತಿ-ಒತ್ತಿ ಹೇಳಲಾಗಿದೆ. ಸಂದೇಶಗಳಾಗಿ ಇವು ಮಹತ್ವವಾದುವು, ಇಂದಿನ ಕಮರ್ಶಿಯಲ್ ಸಿನಿಮಾಗಳಲ್ಲಿ ಬಹಳ ವಿರಳವಾಗಿ ಕಾಣಸಿಗುವಂಥಹವು. ಆದರೆ ವಿಜಯ್ ಕೇವಲ ನಟರಷ್ಟೆ ಅಲ್ಲ, ಅವರೊಬ್ಬ ಪಕ್ಷದ ಮುಖಂಡ, ರಾಜಕೀಯ ಮಹಾತ್ವಾಕಾಂಕ್ಷೆ ಹೊಂದಿರುವ ವ್ಯಕ್ತಿ, ಹಾಗಾಗಿ ಈ ಸಂದೇಶಗಳ ಹಿಂದೆ ರಾಜಕೀಯ ಲಾಭದ ಘಾಟು ‘ಜನ ನಾಯಗನ್’ ಸಿನಿಮಾ ನೋಡುವ ಪ್ರೇಕ್ಷಕರ ಮೂಗಿಗೆ ಬಡಿಯದೇ ಇರದು.

ಎಚ್ ವಿನೋದ್ ನಿರ್ದೇಶನ ಮಾಡಿರುವ ‘ಜನ ನಾಯಗನ್’ ಸಿನಿಮಾ, ವಿಜಯ್ ಅವರ ಇತ್ತೀಚೆಗಿನ ಕೆಲವು ಸಿನಿಮಾಗಳ ರೀತಿಯಲ್ಲಿಯೇ ‘ವಿಜಯ್ ವೈಭವೀಕರಣ’ಕ್ಕಾಗಿಯೇ ಮಾಡಿದ ಅಪ್ಪಟ ಕಮರ್ಶಿಯಲ್ ಸಿನಿಮಾ, ಆದರೆ ಈ ಸಿನಿಮಾನಲ್ಲಿ ವಿಜಯ್ ಅನ್ನು ಒಬ್ಬ ‘ಪ್ರಜಾ ರಕ್ಷಕ’, ಪ್ರಜಾಪ್ರಭುತ್ವ ರಕ್ಷಕ, ಮಹಿಳಾ ಸಬಲೀಕರಣದ ಚಾಂಪಿಯನ್, ಶಿಷ್ಟರ ರಕ್ಷಕ ಎಂದು ಪರದೆಯ ಮೇಲೆ ತೋರಿಸುವ ಜವಾಬ್ದಾರಿಯೂ ಇತ್ತು. ಅದರಲ್ಲಿ ಅವರು ಪೂರ್ಣ ಯಶಸ್ವಿ ಆಗಿಲ್ಲ. ಒಂದು ಒಳ್ಳೆ ಸಿನಿಮಾ ಚೌಕಟ್ಟಿನಲ್ಲಿ ವಿಜಯ್ ಅವರನ್ನು ‘ಜನ ನಾಯಕ’ನಂತೆ ಬಿಂಬಿಸುವುದರಲ್ಲಿ ಅವರು ಸೋತಿದ್ದಾರೆ.

ಸಿನಿಮಾ ಪ್ರಾರಂಭವಾಗುವುದು ಜೈಲಿನಿಂದ, ವಿಜಯ್ ಜೈಲಿನಲ್ಲಿರುತ್ತಾರೆ, ಆದರೆ ಅವರು ಜೈಲಿಗೆ ಹೋಗಿದ್ದೇಕೆ ಎಂಬುದಕ್ಕೆ ಉತ್ತರ ಸಿಗುವುದು ದ್ವಿತೀಯಾರ್ಧದಲ್ಲಿ. ಜೈಲಿನಲ್ಲಿರುವಾಗ ಅವರಿಗೆ ಪರಿಚಯವಾಗುವ ಜೈಲರ್​​ನ ಮಗಳನ್ನು ನಾಯಕ ಸಾಕುತ್ತಾನೆ. ಜೈಲರ್​​ನ ಪತ್ನಿಯ ಆಸೆಯಂತೆ ಆ ಮಗುವನ್ನು ಸೈನ್ಯಕ್ಕೆ ಸೇರಿಸಬೇಕೆನ್ನುವುದು ವಿಜಯ್ ಗುರಿ. ಸಿನಿಮಾದ ಈ ಎಳೆ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದಿಂದ ಎತ್ತಿಕೊಂಡಿರುವುದು, ಆದರೆ ಇದು ಸಂಪೂರ್ಣ ರೀಮೇಕ್ ಅಲ್ಲ. ನಿರ್ದೇಶಕರು ನಾಯಕನ ಇಮೇಜನ್ನು ಎತ್ತರಿಸಿ ತೋರಿಸಲು ಹಲವು ಸೀನುಗಳನ್ನು, ವಿಲನ್​​ಗಳನ್ನು ಸೃಷ್ಟಿಸಿದ್ದಾರೆ.

ಇದನ್ನೂ ಓದಿ:ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’

ನಾಯಕನಿಗೆ ಒಂದು ಫ್ಲ್ಯಾಷ್​ ಬ್ಯಾಕ್ ಸಹ ಇದೆ. ನಾಯಕನಿಗೆ ಮಾತ್ರವಲ್ಲ ವಿಲನ್​​ಗೂ ಫ್ಲ್ಯಾಷ್​​ ಬ್ಯಾಕ್ ಇದೆ. ಪೊಲೀಸ್ ಅಧಿಕಾರಿಗಳಾಗಿದ್ದ ನಾಯಕ ಮತ್ತು ವಿಲನ್ ಪರಸ್ಪರ ವಿರೋಧಿಗಳಾಗಿದ್ದು ಏಕೆ? ನಾಯಕ ಜೈಲು ಸೇರಿದ್ದೇಕೆ? ಸ್ನೇಹಿತರ ಪುತ್ರಿಯನ್ನು ಸೈನ್ಯಾಧಿಕಾರಿಯನ್ನಾಗಿ ಮಾಡಿದನಾ ನಾಯಕ? ಅದರ ಜೊತೆಗೆ ನಾಯಕ ಇನ್ನೂ ಏನೇನು ಸಾಹಸ ಮಾಡಿದ ಎಂಬುದ ತಿಳಿಯಲು ಸಿನಿಮಾ ನೋಡಬೇಕು.

ಸಿನಿಮಾ ಸಂಪೂರ್ಣ ವಿಜಯ್ ಮಯ. ಸಿನಿಮಾದ ಪ್ರತಿ ದೃಶ್ಯವೂ ನಾಯಕನ ಎಲಿವೇಷನ್​​ಗಾಗಿಯೇ ಇರುವುದು. ಸಿನಿಮಾದ ಪ್ರತಿ ಪಾತ್ರಗಳು ಒಂದೋ ನಾಯಕನ ಹೊಗುಳುತ್ತಿರುತ್ತಾರೆ, ಇಲ್ಲವೇ ನಾಯಕನ ಕೊಲ್ಲಲು ಯೋಜನೆ ಹಾಕುತ್ತಿರುತ್ತವೆ. ಇಲ್ಲ ಖುದ್ದು ನಾಯಕ ಹೊಡೆದಾಡುತ್ತಿರುತ್ತಾನೆ. ಇಲ್ಲವೇ ಭಾಷಣ ಮಾಡುತ್ತಿರುತ್ತಾನೆ. ಸಿನಿಮಾನಲ್ಲಿ ವಿಜಯ್​​ಗೆ ಕನಿಷ್ಟ ಹತ್ತಾರು ಎಂಟ್ರಿ ಸೀನ್​ಗಳು, ಒಂದು 30 ಆದರೂ ಎಲಿವೇಷನ್​​ ಸೀನ್​​ಗಳು ಇರಬಹುದು. ವಿಜಯ್ ಅವರ ಪ್ರತಿ ಕದಲಿಕೆಗೂ ಶಿಳ್ಳೆ-ಚಪ್ಪಾಳೆ ಹೊಡೆಯುವ ಅವರ ಅಭಿಮಾನಿಗಳಿಗಾಗಿಯೇ ಮಾಡಿರುವ ಸಿನಿಮಾ ಇದು.

ಸಿನಿಮಾನಲ್ಲಿ ಕೆಲವು ಒಳ್ಳೆಯ ಸಂದೇಶಗಳು ಸಹ ನಾಯಕ ನೀಡುತ್ತಾನೆ. ಅದರಲ್ಲೂ ಪ್ರಸ್ತುತ ನಡೆಯುತ್ತಿರುವ ಧರ್ಮ ರಾಜಕಾರಣ, ಸಾಮಾಜಿಕ ಜಾಲತಾಣಗಳ ಮೂಲಕ ಹರಡಲಾಗುತ್ತಿರುವ ದ್ವೇಷ, ಅದರಿಂದ ಭವಿಷ್ಯದಲ್ಲಿ ಆಗಬಹುದಾದ ತೊಂದರೆಗಳು, ಧರ್ಮ ದ್ವೇಷದ ಮೂಲಕ ರಾಜಕಾರಣಿಗಳು ಪಡೆಯುತ್ತಿರುವ ಲಾಭ. ಮಹಿಳಾ ಸಬಲೀಕರಣ, ಮತದಾನದ ಪ್ರಾಮುಖ್ಯತೆ, ಶಿಕ್ಷಣದ ಮಹತ್ವ ಇನ್ನೂ ಕೆಲವು ಅಗತ್ಯ ವಿಷಯಗಳ ಬಗ್ಗೆ ಮಾತನಾಡುತ್ತಾನೆ. ನಾಯಕ ಆಡುವ ಮಾತಿನ ಹಿಂದೆ ಸರ್ಕಾರಗಳನ್ನು ಟೀಕಿಸುವ ಧ್ವನಿಯೂ ಇಣುಕುತ್ತದೆ. ನಾಯಕನ ಎಷ್ಟೋ ಸಂಭಾಷಣೆಗಳು ಪಾತ್ರಗಳಿಗೆ ಹೇಳುವ ಬದಲಿಗೆ ನೇರವಾಗಿ ಪ್ರೇಕ್ಷಕನಿಗೆ ಹೇಳುತ್ತಿರುವಂತೆ ಭಾಸವಾಗುತ್ತವೆ, ನಿರ್ದೇಶಕರ ಉದ್ದೇಶವೂ ಅದೇ ಎಂಬುದು ಸ್ಪಷ್ಟ.

ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ, ಅವರಿಗೆ ಹೆಚ್ಚಿಗೇನೂ ಕೆಲಸವಿಲ್ಲ. ಮಮಿತಾ ಬಿಜು, ನಾಯಕನ ಸಾಕು ಪುತ್ರಿ. ಅವರು ಭಾವುಕ ಸನ್ನವೇಶಗಳು, ಆಕ್ಷನ್ ಮತ್ತು ತಮ್ಮ ಕ್ಯೂಟ್​​ನೆಸ್​​ನಿಂದ ಗಮನ ಸೆಳೆಯುತ್ತಾರೆ. ಸಿನಿಮಾನಲ್ಲಿ ಪ್ರಕಾಶ್ ರೈ ಮತ್ತು ಬಾಬಿ ಡಿಯೋಲ್ ವಿಲನ್​​ಗಳಾಗಿ ನಟಿಸಿದ್ದಾರೆ. ಬಾಬಿ ಅವರನ್ನು ಅತ್ಯಂತ ಕ್ರೂರ ವ್ಯಕ್ತಿಯಾಗಿ ತೋರಿಸಲಾಗಿದೆ. ಪ್ರಕಾಶ್ ರೈ ಅವರದ್ದು ಕೆಟ್ಟ ರಾಜಕಾರಣಿಯ ಪಾತ್ರ. ಪ್ರಿಯಾಮಣಿಯೂ ಸಿನಿಮಾನಲ್ಲಿದ್ದಾರೆ ಅವರಿಗೆ ಸಹ ಹೆಚ್ಚು ಕೆಲಸವಿಲ್ಲ.

ಸಿನಿಮಾದ ‘ಜನ ನಾಯಕ’ ಹಾಡು ಚೆನ್ನಾಗಿದೆ. ಇನ್ನೂ ಕೆಲವು ಹಾಡುಗಳು ಮತ್ತು ಆಕ್ಷನ್ ದೃಶ್ಯಗಳು ಚೆನ್ನಾಗಿವೆ. ಕೊನೆಯಲ್ಲಂತೂ ಸುಮಾರು ಅರ್ಧ ಗಂಟೆಯ ಕ್ಲೈಮ್ಯಾಕ್ಸ್ ಆಕ್ಷನ್ ದೃಶ್ಯವಿದೆ. ಅತಿಯಾದ ಗ್ರಾಫಿಕ್ಸ್ ಬಳಕೆ ಮಾಡಲಾಗಿದೆ. ಸಿನಿಮಾನಲ್ಲಿ ಹಲವು ಎಐ ಜನರೇಟೆಡ್ ದೃಶ್ಯಗಳು ಸಹ ಇವೆ. ಒಟ್ಟಾರೆ ವಿಜಯ್ ಅವರ ತಮ್ಮ ರಾಜಕೀಯ ಲಾಭದ ಜೊತೆಗೆ ಅವರ ಅಭಿಮಾನಿಗಳನ್ನು ಖುಷಿ ಪಡಿಸುವ ಉದ್ದೇಶದಿಂದ ನಿರ್ಮಿಸಲಾದ ಪಕ್ಕಾ ಮಾಸ್ ಎಂಟರ್ಟೈನರ್​​ ಸಿನಿಮಾ ಇದಾಗಿದೆ. ವಿಜಯ್ ಅಭಿಮಾನಿಗಳಾದವರಿಗೆ ಸಿನಿಮಾ ಬಲು ಇಷ್ಟವಾದರೆ ಸಾಮಾನ್ಯ ಪ್ರೇಕ್ಷಕ ಇಷ್ಟಪಡಲು ಕಷ್ಟಪಡಬೇಕಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *