ಕೋಲಾರ, ಫೆಬ್ರವರಿ 03: ಪಟಾಕಿ ಚೀಟಿ, ಯುಗಾದಿ ಚೀಟಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿರುವ ಆರೋಪ ಕೋಲಾರದ ಶಾಂತಿ ನಗರದಲ್ಲಿ ಕೇಳಿಬಂದಿದೆ. ವೆಂಕಟೇಶಪ್ಪ, ಗೌರಮ್ಮ ಹಾಗೂ ಪದ್ಮಾವತಿ ವಿರುದ್ಧ ದೂರು ಕೇಳಿಬಂದಿದ್ದು, ಕಳೆದ ಒಂದು ವರ್ಷದಿಂದ ಚೀಟಿ ಹಾಕಿದ್ದ ಜನರು ಕಂಗಾಲಾಗಿದ್ದಾರೆ. ಕೋಲಾರದ ಕಾರಂಜಿಕಟ್ಟೆಯ 500ಕ್ಕೂ ಹೆಚ್ಚು ನಿವಾಸಿಗಳಿಗೆ ಸುಮಾರು 4 ಕೋಟಿ ರೂಪಾಯಿಗಳಷ್ಟು ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಶಾಂತಿನಗರ ಒಂದರಲ್ಲೇ 94,52,000 ವಂಚನೆ ಮಾಡಲಾಗಿದೆ ಎಂದು ಹೇಳಲಾಗಿದೆ. ದೀಪಾವಳಿ, ಯುಗಾದಿ, ವರಮಹಾಲಕ್ಷ್ಮೀ ಹಬ್ಬದ ಹೆಸರಿನಲ್ಲಿ ಆರೋಪಿಗಳು ಚೀಟಿ ವ್ಯವಹಾರ ನಡೆಸಿದ್ದರು ಎನ್ನಲಾಗಿದ್ದು, ಕೋಲಾರ ನಗರ ಠಾಣೆ ಮುಂದೆ ಹಣ ಕಳೆದುಕೊಂಡವರು ಕಣ್ಣೀರು ಹಾಕಿದ್ದಾರೆ. ಪ್ರಕರಣ ಸಂಬಂಧ ಸದ್ಯ ವೆಂಕಟೇಶಪ್ಪನನ್ನು ವಶಕ್ಕೆ ಪಡೆದಿರುವ ಕೋಲಾರ ಠಾಣೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.