
ಗಂಟೆಗಟ್ಟಲೆ ಓದಿದರೂ ಪರೀಕ್ಷೆಯಲ್ಲಿ ನೆನಪಾಗದಿರುವುದು, ಆಫೀಸ್ ಕೆಲಸದಲ್ಲಿ ಪ್ರಮುಖ ಮಾಹಿತಿ ಮರೆಯುವುದು ಹಾಗೂ ಏಕಾಗ್ರತೆಯ ಕೊರತೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆಧುನಿಕ ಜೀವನಶೈಲಿ ಮತ್ತು ಒತ್ತಡವೇ ಇದಕ್ಕೆ ಪ್ರಮುಖ ಕಾರಣ. ಇಂತಹ ಸಮಯದಲ್ಲಿ ಸನಾತನ ಸಂಪ್ರದಾಯದಲ್ಲಿ ಜ್ಞಾನ, ಸ್ಮರಣಶಕ್ತಿ ಮತ್ತು ಬುದ್ಧಿವಂತಿಕೆಯ ಸಂಕೇತವಾದ ‘ಶ್ರೀ ಲಕ್ಷ್ಮಿ ಹಯಗ್ರೀವ ಸ್ವಾಮಿ’ ಆರಾಧನೆಗೆ ವಿಶೇಷ ಮಹತ್ವವಿದೆ.
ಹಯಗ್ರೀವ ಅವತಾರದ ಹಿನ್ನೆಲೆ:
ಪುರಾಣಗಳ ಪ್ರಕಾರ, ರಾಕ್ಷಸರು ವೇದಗಳನ್ನು ಕದ್ದು ಜಗತ್ತನ್ನು ಅಜ್ಞಾನಕ್ಕೆ ತಳ್ಳಿದಾಗ, ಶ್ರೀಮನ್ನಾರಾಯಣನು ಕುದುರೆಯ ಮುಖ ಮತ್ತು ಮಾನವ ದೇಹದ ‘ಹಯಗ್ರೀವ’ ರೂಪ ತಾಳಿ ರಾಕ್ಷಸರನ್ನು ಸಂಹರಿಸಿ ವೇದಗಳನ್ನು ಮರಳಿ ತಂದನು. ನಂತರ ಲಕ್ಷ್ಮಿ ದೇವಿಯು ಅವನನ್ನು ಸಮಾಧಾನಪಡಿಸಿದಳು. ಅಂದಿನಿಂದ ಜ್ಞಾನ ಮತ್ತು ಐಶ್ವರ್ಯವನ್ನು ಕರುಣಿಸುವ ‘ಶ್ರೀ ಲಕ್ಷ್ಮಿ ಹಯಗ್ರೀವ’ನನ್ನು ಪೂಜಿಸಲಾಗುತ್ತದೆ.
ಗುರುವಾರದ ಪೂಜಾ ವಿಧಾನ:
ಹಯಗ್ರೀವ ದೇವರ ಆರಾಧನೆಗೆ ಗುರುವಾರ ಅತ್ಯಂತ ಶುಭ ದಿನ. ಬೆಳಿಗ್ಗೆ ಸ್ನಾನ ಮಾಡಿ, ದೀಪ ಹಚ್ಚಿ, ಹಳದಿ ಅಥವಾ ಬಿಳಿ ಹೂವುಗಳಿಂದ ಪೂಜಿಸಬೇಕು. ಪುಸ್ತಕಗಳನ್ನು ಸ್ವಾಮಿಯ ಮುಂದಿಟ್ಟು ಆಶೀರ್ವಾದ ಪಡೆಯುವುದು ಶುಭ. ಏಲಕ್ಕಿ ಹಾರ ಅರ್ಪಿಸುವುದು ಹಾಗೂ ಸಿಹಿ ನೈವೇದ್ಯ ನೀಡುವುದು ವಿಶೇಷ ಫಲ ನೀಡುತ್ತದೆ.
ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ
ಪೂಜೆಯ ಪ್ರಮುಖ ಪ್ರಯೋಜನಗಳು:
- ಸ್ಮರಣಶಕ್ತಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ.
- ಮರೆವು ಕಡಿಮೆಯಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾಣಬಹುದು.
- ವಾಕ್ಚಾತುರ್ಯ (ಮಾತಿನ ನೈಪುಣ್ಯ) ಹಾಗೂ ಬುದ್ಧಿವಂತಿಕೆ ಬೆಳೆಯುತ್ತದೆ.
ಜಪಿಸಬೇಕಾದ ಮಂತ್ರಗಳು:
ಸರಳ ಮಂತ್ರ:
- “ಓಂ ಹ್ರೀಂ ಶ್ರೀಂ ಹಯಗ್ರೀವಾಯ ನಮಃ” (ಇದನ್ನು 11, 27 ಅಥವಾ 108 ಬಾರಿ ಜಪಿಸಿ)
ಹಯಗ್ರೀವ ಗಾಯತ್ರಿ ಮಂತ್ರ:
- “ಓಂ ವಾಗೀಶ್ವರಾಯ ವಿದ್ಮಹೇ ಹಯಗ್ರೀವಾಯ ಧೀಮಹಿ ತನ್ನೋ ಹಯಗ್ರೀವಃ ಪ್ರಚೋದಯಾತ್ ॥”
ನಿಯಮಿತವಾಗಿ ಈ ಮಂತ್ರಗಳನ್ನು ಜಪಿಸುವುದರಿಂದ ಜ್ಞಾನ, ಕಲೆ ಹಾಗೂ ಶೈಕ್ಷಣಿಕ ಕೌಶಲ್ಯಗಳಲ್ಲಿ ಅದ್ಭುತ ಪ್ರಗತಿ ಕಂಡುಬರುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ