Midday Naps: ಮಧ್ಯಾಹ್ನ ನಿದ್ರಿಸುವುದು ಗ್ರಹ ದೋಷಕ್ಕೆ ಕಾರಣವಾಗುತ್ತದೆಯೇ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Midday Naps: An Astrological and Spiritual Perspective on Daytime Sleep

ಮಧ್ಯಾಹ್ನದ ಹೊತ್ತು ನಿದ್ರಿಸುವುದು

ಪ್ರತಿಯೊಬ್ಬ ಮನುಷ್ಯನ ದೇಹಕ್ಕೆ ನಿದ್ರೆ ಅತ್ಯಗತ್ಯ. ನಿದ್ರೆಯು ದೇಹದ ಆರೋಗ್ಯ, ಆಯುಷ್ಯ ವೃದ್ಧಿ ಮತ್ತು ಮನಸ್ಸಿನ ಶಾಂತಿಗೆ ಅವಶ್ಯಕವಾಗಿದೆ. ಆದರೆ, ನಾವು ಮಾಡುವ ನಿದ್ರೆಯು ರಾತ್ರಿ ನಿದ್ರೆಯೇ ಅಥವಾ ಹಗಲು ನಿದ್ರೆಯೇ ಎಂಬುದನ್ನು ಅವಲಂಬಿಸಿ ಅದರ ಶುಭಾಶುಭ ಪರಿಣಾಮಗಳು ನಿರ್ಧಾರವಾಗುತ್ತವೆ. ಜ್ಯೋತಿಷ್ಯ ಮತ್ತು ಧರ್ಮಶಾಸ್ತ್ರಗಳ ಪ್ರಕಾರ, ಮಧ್ಯಾಹ್ನದ ಹೊತ್ತು ನಿದ್ರಿಸುವುದು ಒಳ್ಳೆಯದೇ, ಅಥವಾ ಕೆಟ್​ಟದೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ವೃದ್ಧರು, ರೋಗಿಗಳು, ಸಣ್ಣ ಮಕ್ಕಳು ಮತ್ತು ಮಕ್ಕಳನ್ನು ಹಡೆದಿರುವ ತಾಯಂದಿರು ಮಧ್ಯಾಹ್ನ ನಿದ್ರೆ ಮಾಡಬಹುದು. ಇವರು ತಮ್ಮ ಆರೋಗ್ಯ ಮತ್ತು ದೇಹದ ಅಗತ್ಯಗಳಿಗಾಗಿ ಹಗಲಿನಲ್ಲಿ ನಿದ್ರಿಸಬಹುದಾಗಿದೆ. ಆದರೆ, ದೇಹಪುಷ್ಟಿಯಿಂದ ಕೂಡಿದ್ದು, ಕರ್ಮನಿರತರಾಗಿ ತಮ್ಮ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳು, ಕಾಯಕವೇ ಕೈಲಾಸ ಎಂಬ ಮಾತನ್ನು ಅನುಸರಿಸುವವರು ಹಗಲಿನಲ್ಲಿ ಅಥವಾ ಮಧ್ಯಾಹ್ನದ ಸಮಯದಲ್ಲಿ ನಿದ್ರಿಸುವುದು ಸೂಕ್ತವಲ್ಲ ಎಂದು ಶಾಸ್ತ್ರಗಳು ತಿಳಿಸುತ್ತವೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಮಧ್ಯಭಾಗ, ನಿರ್ದಿಷ್ಟವಾಗಿ ಮಧ್ಯಾಹ್ನ 12 ರಿಂದ ಸಂಜೆ 3 ಗಂಟೆಯ ಅವಧಿಯಲ್ಲಿ ನಿದ್ರಿಸುವುದನ್ನು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ.

ಈ ಸಮಯದಲ್ಲಿ ನಿದ್ರಿಸುವುದರಿಂದ ಹಲವು ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಗ್ರಹಕಾಟ ಅಥವಾ ನವಗ್ರಹಗಳ ಅಶುಭ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದು ನಮ್ಮ ದೈನಂದಿನ ಕೆಲಸ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ, ಋಣಾತ್ಮಕ ಶಕ್ತಿಗಳು ಆವರಿಸಿಕೊಳ್ಳುವ ಸಾಧ್ಯತೆ, ದೈವಬಲ ಕಡಿಮೆಯಾಗುವುದು ಮತ್ತು ಮೆದುಳಿನ ಜಾಗರೂಕತೆ ಕುಗ್ಗುವ ಸಾಧ್ಯತೆ ಇರುತ್ತದೆ. ಇಂತಹ ನಿದ್ರೆಯಿಂದ ಪೂರ್ವಜರ ಅನುಗ್ರಹವೂ ದೊರೆಯುವುದಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಕೆಲವರು ಕಚೇರಿಗಳಲ್ಲಿ ತಮ್ಮ ಕುರ್ಚಿಯಲ್ಲಿ ಕುಳಿತು ನಿದ್ರೆಗೆ ಜಾರುವುದನ್ನು ನಾವು ನೋಡುತ್ತೇವೆ. ಇದು ಮಹಾದೋಷವೆಂದು ಪರಿಗಣಿಸಲಾಗುತ್ತದೆ. ಕಚೇರಿಯ ಕುರ್ಚಿ ಒಂದು ರೀತಿಯ ಸಿಂಹಾಸನವಿದ್ದಂತೆ; ರಾಜರು ಸಿಂಹಾಸನದ ಮೇಲೆ ನಿದ್ರಿಸುತ್ತಾರೆಯೇ? ಇಲ್ಲ. ಹಾಗೆಯೇ, ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ನಿದ್ರಿಸುವುದು ಸರಿಯಲ್ಲ. ಒಂದು ವೇಳೆ ನಿದ್ರೆ ಬಂದಲ್ಲಿ, ತಕ್ಷಣ ಎದ್ದು ಸ್ವಲ್ಪ ಓಡಾಡಿ, ಮುಖ ತೊಳೆದುಕೊಂಡು ಮತ್ತೆ ಕೆಲಸಕ್ಕೆ ಮರಳುವುದು ಉತ್ತಮ. ಕಚೇರಿಯಲ್ಲಿ ನಿದ್ರಿಸುವುದು ಅಶುಭ ಫಲಗಳನ್ನು ತರುತ್ತದೆ. ರಾಜಕೀಯ ನಾಯಕರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿದ್ರೆಗೆ ಜಾರುವುದೂ ಸಹ ಅಶಕ್ತತೆಯ ಸಂಕೇತವಾಗಿ ಅಶುಭ ಫಲಿತಾಂಶಗಳನ್ನು ತೋರಿಸುತ್ತದೆ. ಒಟ್ಟಾರೆ, ಮಧ್ಯಾಹ್ನದ ನಿದ್ರೆಯು ವೈಯಕ್ತಿಕ ನಂಬಿಕೆಗಳು ಮತ್ತು ಧರ್ಮಶಾಸ್ತ್ರಗಳ ದೃಷ್ಟಿಯಿಂದ ಶುಭವಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:54 am, Sat, 20 December 25

Source link

Leave a Reply

Your email address will not be published. Required fields are marked *