ಜಲ ಮಾಲಿನ್ಯದ ಆತಂಕ: ಗ್ರಾಮ ಪಂಚಾಯತ್​​ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿ ಸ್ಥಾಪನೆಗಿಲ್ಲ ಅವಕಾಶ – Kannada News | Eco Friendly Ganeshotsava: Karnataka Bans PoP Ganesha Idols in Gram Panchayats to Prevent Water Pollution

ಬೆಂಗಳೂರು, ಆಗಸ್ಟ್​​ 06: ಗ್ರಾಮ ಪಂಚಾಯತ್​​ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ನಿರಾಕರಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸಚಿವ ಈಶ್ವರ್​​ ಖಂಡ್ರೆ ನಿರ್ದೇಶನ ನೀಡಿದ್ದಾರೆ. ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು ಮತ್ತು ಸಾಗಾಟಕ್ಕೆ ತಡೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೆರವು ಪಡೆಯುವಂತೆಯೂ ಅವರು ತಿಳಿಸಿದ್ದಾರೆ. ಕೆರೆ, ನದಿಗಳಲ್ಲಿ ಪಿಒಪಿ ಮೂರ್ತಿ ವಿಸರ್ಜಿಸಿದರೆ ಜಲಚರಗಳಿಗೆ ಕಂಟಕವಾಗಲಿರುವ ಕಾರಣ ಜಲಮಾಲಿನ್ಯ ತಡೆ ಕಾಯ್ದೆ 1974ರ ಕಲಂ 33(ಎ)ರಡಿ ವಿಸರ್ಜನೆಗೆ ನಿಷೇಧ ವಿಧಿಸಲಾಗಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಒಪಿ ಬಳಕೆ ವಿರುದ್ಧ ಜಾಗೃತಿಗೂ ಸಚಿವರು ಸೂಚಿಸಿದ್ದು, 2023ರ ಸೆ.15ರ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತಿಳಿಸಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ಪಿಒಪಿ ಮೂರ್ತಿ ಸಾಗಾಟ, ಮಾರಾಟ ಬಂದ್ ಸಂಬಂಧ ಧಾರ್ಮಿಕ ಭಾವನೆಗೆ ನೋವಾಗದಂತೆ ಈಗಿನಿಂದಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಗ್ರಾಮೀಣ ಭಾಗದ ಜಲ ಮೂಲಗಳು ಹಾಗೂ ಪರಿಸರ ರಕ್ಷಣೆಗೆ ಇಲಾಖೆ ನಿರ್ಧರಿಸಿದೆ.

ಇದನ್ನೂ ಓದಿ: ಬೆಂಗಳೂರಿಗೆ ಪಿಒಪಿ ಗಣೇಶ ಮೂರ್ತಿಗಳ ಎಂಟ್ರಿ: ಪ್ರಧಾನಿ ಮೋದಿ ಕರೆಗೂ ಇಲ್ಲ ಬೆಲೆ!

ಸಚಿವರ ನಿರ್ದೇಶನ ಪತ್ರದಲ್ಲಿ ಏನಿದೆ?

ಸೆಪ್ಟೆಂಬರ್ 13 ಮತ್ತು 14ರಂದು ನಾಡಿನಾದ್ಯಂತ ಗೌರಿ ಮತ್ತು ಗಣೇಶ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕ್ಯಾಲ್ಸಿಯಂ, ಸಟ್, ಹೆಮಿಹೈಡ್ರೆಟ್ ಯುಕ್ತ ಪುಡಿಯಿಂದ ಕೂಡಿದ ಪ್ಲಾಸ್ಟರ್ ಆಫ್ ಪ್ಯಾರಿಸ್ -ಪಿಓಪಿಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನಿಷಿಯಂ ಸೇರಿದಂತೆ ಅನೇಕ ಅಪಾಯಕಾರಿ ಅಂಶಗಳಿರುವುದರ ಜೊತೆಗೆ ಈ ಮೂರ್ತಿಗಳಿಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲ ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸುವುದರಿಂದ ಪರಿಸರಕ್ಕೆ ಹಾನಿಕಾರಕವಾಗಿರುತ್ತದೆ. ಈ ಪಿಓಪಿ ಮೂರ್ತಿಗಳನ್ನು ಕೆರೆ, ಬಾವಿ, ನದಿ ಸೇರಿದಂತೆ ಜಲ ಮೂಲಗಳಲ್ಲಿ ವಿಸರ್ಜಿಸಿದಾಗ ಭಾರ ಲೋಹ ಕರಗಿ ಜನ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ)ಕಾಯಿದೆ 1974ರ ಕಲಂ 33(ಎ) ಅಡಿಯಲ್ಲಿ ರಾಜ್ಯದ ನದಿ, ಸರೋವರ, ಕೆರೆ, ಕಟ್ಟೆ, ಬಾವಿ ಸೇರಿದಂತೆ ಯಾವುದೇ ಜಲ ಮೂಲದಲ್ಲಿ ಪಿಓಪಿ ಮೂರ್ತಿಗಳ ವಿಸರ್ಜನೆ ನಿಷೇಧಿಸಲಾಗಿದೆ. ಪರಿಸರಕ್ಕೆ ಮಾರಕವಾದ ಪಿಓಪಿ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆ ನಿಷೇಧಿಸಿ 2023ರ ಸೆ.15ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ, ರಾಜ್ಯ ಘನ ಹೈಕೋರ್ಟ್ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ನಿರ್ದೇಶನ ನೀಡಿರುತ್ತದೆ.

ಗಣೇಶ ಪರಿಸರ (ಮಣ್ಣಿನಿಂದ)ದಿಂದಲೇ ಹುಟ್ಟಿದ ದೇವರಾಗಿದ್ದು, ಪರಿಸರ ಮತ್ತು ಜಲ ಮೂಲಗಳ ಸಂರಕ್ಷಣೆಯ ದೃಷ್ಟಿಯಿಂದ ಪರಿಸರ ಸ್ನೇಹಿ ಗೌರಿ, ಗಣೇಶ ಮೂರ್ತಿಗಳ ಪೂಜೆ ಹಾಗೂ ವಿಸರ್ಜನೆಗೆ ಮಾತ್ರ ಅವಕಾಶ ನೀಡುವುದು ಸೂಕ್ತವಾಗಿರುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಪಂಚಾಯತಿಗಳ ಮಟ್ಟದಲ್ಲಿ ಮಾಡುವ ಅಗತ್ಯವನ್ನು ಸರ್ಕಾರ ಮನಗಂಡಿದೆ. ಈ ನಿಟ್ಟಿನಲ್ಲಿ ಹಬ್ಬದ ಸಂಭ್ರಮದಲ್ಲಿ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವಾಗದ ರೀತಿಯಲ್ಲಿ ಈಗಿನಿಂದಲೇ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೆರವು ಪಡೆಯಲು ಹಾಗೂ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ, ವಿಸರ್ಜನೆಗೆ ಮಾತ್ರ ಅನುಮತಿ ನೀಡಲು ಈ ಮೂಲಕ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ವಾರಣಾಸಿ’ ಸಿನಿಮಾಕ್ಕೆ ಮೊದಲಿದ್ದ ಹೆಸರೇನು? ವಿಲನ್ ಪಾತ್ರದ ಹಿನ್ನೆಲೆ ಗೊತ್ತೆ? – Kannada News | Rajamouli planed to name Varanasi as Gen 63 why he changed it

ರಾಜಮೌಳಿ (Rajamouli) ನಿರ್ದೇಶನದ ‘ವಾರಣಾಸಿ’ ಸಿನಿಮಾ ಭಾರಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾವನ್ನು ಭಾರತ, ಆಫ್ರಿಕಾ, ಅಂಟಾರ್ಕಿಟಾ, ರೋಮ್, ಪ್ಯಾರಿಸ್ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಿಂದೆಂದೂ ನೋಡದ ರೀತಿಯ ಆಕ್ಷನ್ ದೃಶ್ಯಗಳನ್ನು ಈ ಸಿನಿಮಾಕ್ಕಾಗಿ ಚಿತ್ರೀಕರಣ ಮಾಡಲಾಗಿದೆಯಂತೆ. ಸಿನಿಮಾದ ಹೆಸರನ್ನು ‘ವಾರಣಾಸಿ’ ಎಂದು ಕಳೆದ ವರ್ಷ ರಾಜಮೌಳಿ ಘೋಷಣೆ ಮಾಡಿದರು. ಆದರೆ ಈ ಸಿನಿಮಾಕ್ಕೆ ಮೊದಲು ಇಡಬೇಕು ಎಂದುಕೊಂಡಿದ್ದ ಹೆಸರು ಬೇರೆಯದ್ದೇ ಆಗಿತ್ತು. ಆದರೆ ರಾಜಮೌಳಿ ಅದನ್ನು ಬದಲಾವಣೆ ಮಾಡಿದರಂತೆ.

‘ವಾರಣಾಸಿ’ ಸಿನಿಮಾಕ್ಕೆ ‘ಜೆನ್ 63’ ಎಂದು ಹೆಸರಿಡುವ ಆಲೋಚನೆಯನ್ನು ರಾಜಮೌಳಿ ಮಾಡಿದ್ದರಂತೆ. ಇದಕ್ಕೆ ಕಾರಣವೂ ಇದೆ. ಈ ಸಿನಿಮಾನಲ್ಲಿ ರಾಮಾಯಣ ಕತೆ ಬಹಳ ಪ್ರಮುಖವಾದ ಪಾತ್ರ ವಹಿಸಿದೆ. ಸಿನಿಮಾನಲ್ಲಿ ಮಹೇಶ್ ಬಾಬು ಶ್ರೀರಾಮನ ಅವತಾರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಟೈಟಲ್ ಟೀಸರ್​​ನಲ್ಲಿ ಹನುಮಂತನ ಬೃಹತ್ ಮೂರ್ತಿಯನ್ನು ಸಹ ತೋರಿಸಲಾಗಿದೆ. ಈ ಸಿನಿಮಾದ ಕತೆಗೂ ರಾಮಾಯಣದ ಕತೆಗೂ ಲಿಂಕ್ ಇದೆಯಂತೆ. ಇದೇ ಕಾರಣಕ್ಕೆ ಸಿನಿಮಾಕ್ಕೆ ‘ಜೆನ್ 63’ ಎಂದು ಹೆಸರಿಡಲು ನಿರ್ಧಾರ ಮಾಡಿದ್ದರಂತೆ ರಾಜಮೌಳಿ.

‘ಜೆನ್ 63’ ಎಂದರೆ 63ನೇ ಜನರೇಷನ್ ಎಂದರ್ಥ. ಅಂದರೆ ಸಿನಿಮಾನಲ್ಲಿ ಮಹೇಶ್ ಬಾಬು, ಶ್ರೀರಾಮನ ವಂಶಸ್ಥರಾಗಿದ್ದು, ಶ್ರೀರಾಮನ ಬಳಿಕ 63ನೇ ವಂಶಸ್ಥನಾಗಿರುತ್ತಾರೆ. ಹಾಗಾಗಿ ಸಿನಿಮಾಕ್ಕೆ ‘ಜೆನ್ 63’ ಎಂದು ಹೆಸರಿಡಲು ರಾಜಮೌಳಿ ಮುಂದಾಗಿದ್ದರಂತೆ. ಅದು ಮಾತ್ರವೇ ಅಲ್ಲದೆ, ಸಿನಿಮಾದ ವಿಲನ್ ಆಗಿರುವ ಪೃಥ್ವಿರಾಜ್ ಸುಕುಮಾರ್ ಹೆಸರು ಸಹ ‘ಕುಂಭ’ ಎಂದಿದೆ. ವಿಲನ್, ಕುಂಭಕರ್ಣನ ವಂಶಸ್ಥನಾಗಿರಲಿದ್ದಾನೆ ಎನ್ನಲಾಗುತ್ತಿದೆ. ರಾಮಾಯಣ ಕತೆಯಲ್ಲಿ ಕುಂಭಕರ್ಣನನ್ನು ರಾಮ ಕೊಲ್ಲುತ್ತಾನೆ, ಕೊಲ್ಲುವ ಮುಂಚೆ ಕುಂಭಕರ್ಣನ ಕೈಗಳು, ಕಾಲುಗಳನ್ನು ಕತ್ತರಿಸಿ ಆ ಬಳಿಕ ತಲೆ ಕತ್ತರಿಸುತ್ತಾನೆ.

ಇದನ್ನೂ ಓದಿ:‘ಈಗ’ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ

ಈಗ ‘ವಾರಣಾಸಿ’ ಸಿನಿಮಾದ ವಿಲನ್ ಕುಂಭನಿಗೂ ಕೈಗಳು, ಕಾಲುಗಳು ಇಲ್ಲ. ಆದರೆ ತಮ್ಮ ಬುದ್ಧಿಶಕ್ತಿಯಿಂದ ಆತ ನಾಯಕನನ್ನು ಎದುರಿಸುತ್ತಾನೆ. ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ಸಹ ಇದ್ದು, ಅವರ ಪಾತ್ರದ ಹೆಸರು ಮಂದಾಕಿನಿ.

‘ವಾರಣಾಸಿ’ ಸಿನಿಮಾವು ಆಕ್ಷನ್ ಅಡ್ವೇಂಚರ್ ಕತೆಯನ್ನು ಒಳಗೊಂಡಿದ್ದು, ಸಿನಿಮಾದ ಕತೆ ‘ವಾರಣಾಸಿ’ ಯಲ್ಲಿ ಪ್ರಾರಂಭವಾಗಿ ಪ್ಯಾರಿಸ್, ಆಫ್ರಿಕಾ, ಅಂಟಾರ್ಟಿಕಾ, ರೋಮ್ ಇನ್ನೂ ಕೆಲವು ದೇಶಗಳನ್ನು ಸುತ್ತಿಕೊಂಡು ಮತ್ತೆ ವಾರಣಾಸಿಗೆ ಬರುತ್ತದೆಯಂತೆ. ಸಿನಿಮಾದ 80% ಭಾಗ ಚಿತ್ರೀಕರಣ ಮುಗಿದಿದ್ದು, ಕೆಲವು ಸಣ್ಣ-ಪುಟ್ಟ ದೃಶ್ಯಗಳ ಚಿತ್ರೀಕರಣವಷ್ಟೆ ಬಾಕಿ ಇದೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಂದಿನಿಂದ ಆ. 17ರವರೆಗೆ ಲಾಲ್‌ಬಾಗ್ ಫ್ಲವರ್ ಶೋ: ಶ್ರವಣಬೆಳಗೊಳ ಬಾಹುಬಲಿ, ತಲಕಾಡು ದೇಗುಲಗಳ ಹೂವಿನ ಕಲಾಕೃತಿ ರೂಪಿಸಿದ ತೋಟಗಾರಿಕೆ ಇಲಾಖೆ – Kannada News | Bengaluru Lalbagh Flower Show: Independence Day, Attractions, Online Tickets

ಬೆಂಗಳೂರು,ಆ.6: ಸಿಲಿಕಾನ್ ಸಿಟಿ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show) ಇಂದಿನಿಂದ (ಆಗಸ್ಟ್ 6) ಅಧಿಕೃತ ಚಾಲನೆ ಸಿಕ್ಕಿದೆ. ತೋಟಗಾರಿಕೆ ಇಲಾಖೆ ಆಯೋಜಿಸಿರುವ ಈ 12 ದಿನಗಳ ಹೂಗಳ ಹಬ್ಬವು ಆಗಸ್ಟ್ 17ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನವು ‘ಗಂಗರ ಸಾಮ್ರಾಜ್ಯದ 1,000 ವರ್ಷಗಳ ವೈಭವ’ ಎಂಬ ವಿಶೇಷ ವಸ್ತುವಿಷಯದ (Theme) ಆಧಾರದ ಮೇಲೆ ಸಿದ್ಧಗೊಂಡಿದೆ.

ಲಾಲ್‌ಬಾಗ್‌ನ ಪ್ರಸಿದ್ಧ ಗ್ಲಾಸ್ ಹೌಸ್‌ನಲ್ಲಿ ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಸ್ವಾಮಿಯ ಬೃಹತ್ ವಿಗ್ರಹ ಹಾಗೂ ತಲಕಾಡಿನ ಐತಿಹಾಸಿಕ ದೇವಾಲಯಗಳ ಆಕರ್ಷಕ ಹೂವಿನ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. 2.75 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ ಈ ಪ್ರದರ್ಶನದಲ್ಲಿ ದೇಶ-ವಿದೇಶಗಳ 130ಕ್ಕೂ ಹೆಚ್ಚು ಅಪರೂಪದ ಹೂವಿನ ತಳಿಗಳನ್ನು ಬಳಸಲಾಗಿದೆ.

ಲಾಲ್‌ಬಾಗ್ ಕೆರೆಯ ಬಳಿ ನಯನಮನೋಹರ ಕೃತಕ ಜಲಪಾತ ಮತ್ತು ಪ್ರವಾಸಿಗರನ್ನು ಸೆಳೆಯಲು ಆಕರ್ಷಕ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರದರ್ಶನಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಸಾರ್ವಜನಿಕರ ಅನುಕೂಲಕ್ಕಾಗಿ ಈ ಬಾರಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಆನ್‌ಲೈನ್ ಟಿಕೆಟ್‌ಗಳ ವ್ಯವಸ್ಥೆ ಮಾಡಲಾಗಿದೆ. ವಾಹನ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಲಕ್ಷಾಂತರ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿರುವುದರಿಂದ 136 ಸಿಸಿಟಿವಿ ಕ್ಯಾಮೆರಾಗಳು ಮತ್ತು ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಅಡಿಕೆ ಉತ್ಪಾದನೆ, ಉತ್ಪಾದಕತೆ ಭಾರೀ ಕುಸಿತ! ಕಾರಣವೇನು?

ದರ್ಶನದ ಸಮಯ, ಟಿಕೆಟ್ ದರ ಮತ್ತು ಸೌಲಭ್ಯಗಳು:

ವಿವರಗಳು ಮಾಹಿತಿ
ದಿನಾಂಕ ಆಗಸ್ಟ್ 6 ರಿಂದ ಆಗಸ್ಟ್ 17, 2026 (12 ದಿನಗಳು)
ಸಮಯ ಪ್ರತಿದಿನ ಬೆಳಿಗ್ಗೆ 7:00 ರಿಂದ ಸಂಜೆ 7:00 ರವರೆಗೆ
ಸಾಮಾನ್ಯ ದಿನಗಳಲ್ಲಿ (Weekdays) ಟಿಕೆಟ್ ಮುಖಬೆಲೆ: ₹80 (ಹಿರಿಯರು/ಸಾಮಾನ್ಯರಿಗೆ)
ವಾರಾಂತ್ಯ ಮತ್ತು ರಜಾ ದಿನಗಳಲ್ಲಿ (Weekends) ಮುಖಬೆಲೆ: ₹100
ಮಕ್ಕಳ ಟಿಕೆಟ್ ದರ ₹30 (ಎಲ್ಲಾ ದಿನಗಳಲ್ಲಿ)
ಉಚಿತ ಪ್ರವೇಶ ಸಮವಸ್ತ್ರಧಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ

ಕ್ಯಾಮೆರಾ ಮತ್ತು ಸುರಕ್ಷತಾ ಮಾರ್ಗಸೂಚಿಗಳು:

ಮೊಬೈಲ್ ಕ್ಯಾಮೆರಾ: ಪ್ರವಾಸಿಗರು ಮೊಬೈಲ್ ಫೋನ್ ಮೂಲಕ ಉಚಿತವಾಗಿ ಫೋಟೋ ಹಾಗೂ ವೀಡಿಯೊ ಚಿತ್ರೀಕರಣ ಮಾಡಬಹುದು.

ಕ್ಯಾಮೆರಾ/ಡಿಎಸ್‌ಎಲ್‌ಆರ್ ಬಳಕೆಗೆ: ವೃತ್ತಿಪರ ಕ್ಯಾಮೆರಾ (DSLR/Prof. Camera) ತರಲು ತೋಟಗಾರಿಕೆ ಇಲಾಖೆಯ ಭದ್ರತಾ ಸಿಬ್ಬಂದಿಯಿಂದ ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಸೌಲಭ್ಯಗಳು: ಜನಸಂದಣಿ ನಿಯಂತ್ರಿಸಲು ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ, ಕೆರೆ ಬಳಿ ಕೃತಕ ಜಲಪಾತ, ಆಕರ್ಷಕ ಸೆಲ್ಫಿ ಪಾಯಿಂಟ್‌ಗಳು, ಸಿಸಿಟಿವಿ ಕಣ್ಗಾವಲು ಹಾಗೂ ಹೆಚ್ಚಿನ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ವರದಿ: ಅರುಣ್ ಮೆಟ್ರೋ 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಮ್ಮ ಕೈಲಾದ ಸಹಾಯ ಮಾಡೋಣ ಅಂತ ದರ್ಶನ್ ಹೇಳಿದ್ರು’; ‘ಬಾಸ್’ ಬಗ್ಗೆ ತನುಷ್ ಶಿವಣ್ಣ ಮಾತು – Kannada News | Tanush Shivanna Explain What Exactly Darshan Said about Movie

ತನುಷ್ ಶಿವಣ್ಣ ನಟನೆಯ ‘ಬಾಸ್’ ಸಿನಿಮಾ ಜುಲೈ 7ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ದರ್ಶನ್ ಅವರು ಭಾಗಿಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಕೊಲೆ ಕೇಸ್​ ಬಗ್ಗೆ ಇದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೇಸ್ ಹಾಕಿದ್ದರು ಆ ಬಳಿಕ ಸಿನಿಮಾ ರಿಲೀಸ್ ಮಾಡಲು ಅನುವು ಮಾಡಿಕೊಡಲಾಯಿತು. ಈ ಬಗ್ಗೆ ಮಾತನಾಡಿರೋ ಧನುಷ್ ಶಿವಣ್ಣ ‘ದರ್ಶನ್ ಅವರೇ ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಹೇಳಿದ್ದರು’ ಎಂಬುದಾಗಿ ಮಾಹಿತಿ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ ಮೇಲೆ ಮುನಿಸುಕೊಂಡ ಅಹಿಂದ ಶಾಸಕರು – Kannada News | Karnataka Cabinet Row: Ahinda MLAs Upset with Siddaramaiah, HC Mahadevappa Rushes to Delhi Amid Ministerial Snub

ಬೆಂಗಳೂರು, ಆಗಸ್ಟ್​​ 06: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಸಚಿವ ಸ್ಥಾನ ಸಿಗದ ಕಾರಣ ಅಹಿಂದ ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಮುನಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಅಹಿಂದ ಶಾಸಕರಿಗಾಗಿ ಪ್ರಬಲವಾಗಿ ವಾದ ಮಂಡಿಸಿಲ್ಲ. ಕೇವಲ ಕೆಲವರ ಹೆಸರನ್ನು ಮಾತ್ರ ಶಿಫಾರಸ್ಸು ಮಾಡಿದ್ದಾರೆ ಎಂಬ ಮಾಹಿತಿ ಆಪ್ತರಿಗೆ ತಲುಪಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಅಹಿಂದ ಶಾಸಕರು ಮುನಿಸಿಕೊಂಡಿದ್ದಾರೆ. ಈ ನಡುವೆ ಮಹದೇವಪ್ಪ ದೆಹಲಿಗೆ ಪ್ರಯಾಣ ಬೆಳೆಸಿದ್ದು,ಇದರಿಂದ ಕಾಂಗ್ರೆಸ್ ಪಾಳಯದಲ್ಲಿ ಗೊಂದಲಗಳು ಹೆಚ್ಚಾಗಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಿಯಾಲಿಟಿ ಶೋಗಾಗಿ ವಿಚ್ಛೇದನದ ಬಗ್ಗೆ ಸುಳ್ಳು ಹೇಳಿದ್ರಾ ಆಕಾಂಕ್ಷಾ? – Kannada News | Lock Upp 2: Akanksha Chamola Denies Divorce Publicity Stunt Allegations Involving Gaurav Khanna

‘ಲಾಕ್ ಅಪ್ 2’ ರಿಯಾಲಿಟಿ ಶೋನಿಂದ ಹೊರಬಿದ್ದ ನಂತರ ನಟಿ ಆಕಾಂಕ್ಷಾ ಚಮೋಲಾ ತಮ್ಮ ವಿವಾಹ ವಿಚ್ಛೇದನದ ಕುರಿತು ಮತ್ತೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಶೋನ ಟಿಆರ್‌ಪಿ ಹೆಚ್ಚಿಸಲು ವಿಚ್ಛೇದನದ ವಿಚಾರವನ್ನು ಬಳಸಿಕೊಂಡರು ಎಂಬ ಆರೋಪಕ್ಕೆ ಅವರು ಖಡಕ್ ಉತ್ತರ ನೀಡಿದ್ದಾರೆ. ಟಿಆರ್‌ಪಿಗಾಗಿ ಯಾವುದೇ ಮಹಿಳೆ ತಮ್ಮ ವೈಯಕ್ತಿಕ ಜೀವನದ ಇಂತಹ ಸೂಕ್ಷ್ಮ ವಿಚಾರವನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

ಟಿಆರ್‌ಪಿ ಆರೋಪಕ್ಕೆ ಖಡಕ್ ಉತ್ತರ

‘ರಿಯಾಲಿಟಿ ಶೋನಲ್ಲಿ ಟಿಆರ್‌ಪಿ ಪಡೆಯಲು ಯಾವ ಹೆಣ್ಣುಮಗಳೂ ಪತಿಯಿಂದ ವಿಚ್ಛೇದನ ಪಡೆಯುತ್ತಿದ್ದೇನೆ ಎಂದು ಹೇಳುವುದಿಲ್ಲ. ಇಂತಹ ಮಾತುಗಳನ್ನು ಆಡುವವರು ನಮ್ಮ ಮನೆಗೆ ಬರಬಹುದು. ನನ್ನ ಲೀಗಲ್ ಟೀಮ್ ಜೊತೆ ನೇರವಾಗಿ ಮಾತನಾಡಬಹುದು’ ಎಂದು ಆಕಾಂಕ್ಷಾ ತಿರುಗೇಟು ನೀಡಿದ್ದಾರೆ. ನಾವು ನಟರಾಗಿದ್ದೇವೆ ಎಂದ ಮಾತ್ರಕ್ಕೆ ಮಾಡುವ ಪ್ರತಿಯೊಂದನ್ನೂ ಪಬ್ಲಿಸಿಟಿಗಾಗಿ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಅಂತಿಮ ಹಂತದಲ್ಲಿ ಕಾನೂನು ಪ್ರಕ್ರಿಯೆ

ಗೌರವ್ ಖನ್ನಾ ಮತ್ತು ತಮ್ಮ ನಡುವಿನ ವಿಚ್ಛೇದನದ ಪ್ರಕ್ರಿಯೆ ಬಹಳ ದಿನಗಳಿಂದ ನಡೆಯುತ್ತಿದೆ. ‘ಲಾಕ್ ಅಪ್’ ಶೋಗೆ ಹೋಗುವ ಮುನ್ನವೇ ಲೀಗಲ್ ಟೀಮ್ ಈ ಬಗ್ಗೆ ವ್ಯವಹರಿಸುತ್ತಿತ್ತು. ಈಗ ಕಾನೂನುಬದ್ಧ ಪ್ರಕ್ರಿಯೆಗಳೆಲ್ಲವೂ ಪೂರ್ಣಗೊಂಡಿವೆ. ಪ್ರಸ್ತುತ ಕೇವಲ ಡಾಕ್ಯುಮೆಂಟ್‌ಗಳಿಗೆ ಸಹಿ ಹಾಕುವುದು ಮಾತ್ರ ಬಾಕಿ ಇದೆ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಲಾಕ್ ಅಪ್ ಸೀಸನ್ 2’: ಶೋನಿಂದ ಕಂಗನಾ ರಣಾವತ್​​ನ ಹೊರಗಿಟ್ಟಿದ್ದೇಕೆ?

ವಿಚ್ಛೇದನಕ್ಕೆ ಸೂಕ್ತ ಕಾರಣ ರಹಸ್ಯ

ನಟ ಗೌರವ್ ಖನ್ನಾ ಮತ್ತು ಆಕಾಂಕ್ಷಾ ಚಮೋಲಾ 2016ರ ನವೆಂಬರ್ 24ರಂದು ವಿವಾಹವಾಗಿದ್ದರು. ಕೆಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಈಗ ಬೇರೆಯಾಗುತ್ತಿರುವುದು ಅಭಿಮಾನಿಗಳಿಗೆ ತೀವ್ರ ಆಘಾತ ತಂದಿದೆ. ಗೌರವ್ ಮಗುವನ್ನು ಬಯಸಿದ್ದರು, ಆದರೆ ತಮಗೆ ಮಗು ಬೇಡವಾಗಿತ್ತು ಎಂದು ಆಕಾಂಕ್ಷಾ ಹಿಂದೆ ಹೇಳಿದ್ದರು. ಆದರೆ ಈ ವಿಚ್ಛೇದನಕ್ಕೆ ನಿಖರವಾದ ಕಾರಣವನ್ನು ನಟಿ ಎಲ್ಲೂ ಬಹಿರಂಗಪಡಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:31 am, Thu, 6 August 26

Source link

Tarun Tejpal: ತರುಣ್ ತೇಜ್‌ಪಾಲ್‌ಗೆ ಭಾರಿ ಆಘಾತ: 2013ರ ಅತ್ಯಾಚಾರ ಪ್ರಕರಣದಲ್ಲಿ ತೇಜ್‌ಪಾಲ್ ದೋಷಿ, ಹೈಕೋರ್ಟ್ ತೀರ್ಪು – Kannada News | Bombay High Court Overturns Acquittal, Holds Tarun Tejpal Guilty in 2013 Case

ಪಣಜಿ, ಆಗಸ್ಟ್ 06: ತೆಹಲ್ಕಾ  ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ (Tarun Tejpal) ವಿರುದ್ಧದ 2013ರ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌(High Court)ನ ಗೋವಾ ಪೀಠವು ಮಹತ್ವದ ಹಾಗೂ ಐತಿಹಾಸಿಕ ತೀರ್ಪು ಪ್ರಕಟಿಸಿದೆ. 2021ರಲ್ಲಿ ಗೋವಾ ವಿಚಾರಣಾ ನ್ಯಾಯಾಲಯ ನೀಡಿದ್ದ ಖುಲಾಸೆ ಆದೇಶವನ್ನು ಬದಿಗೊತ್ತಿರುವ ಹೈಕೋರ್ಟ್, ತರುಣ್ ತೇಜ್‌ಪಾಲ್ ಅವರನ್ನು ದೋಷಿ ಎಂದು ಘೋಷಿಸಿದೆ. ನ್ಯಾಯಮೂರ್ತಿ ನೀಲಾ ಗೋಖಲೆ ಮತ್ತು ನ್ಯಾಯಮೂರ್ತಿ ಅಮಿತ್ ಜಮ್ಸಂದೇಕರ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ.

ತೇಜ್‌ಪಾಲ್ ಪರ ಹಾಜರಿದ್ದ ಹಿರಿಯ ವಕೀಲ ಅಬಾದ್ ಪೋಂಡಾ, ಆರೋಪಿಗೆ ಈಗ 62 ವರ್ಷ ವಯಸ್ಸಾಗಿದೆ. ಇದು ಅವರ ಮೊದಲ ಅಪರಾಧ. ಈಗಾಗಲೇ 6 ತಿಂಗಳ ಜೈಲು ಶಿಕ್ಷೆ ಅನುಭವಿಸಿದ್ದು, ಕನಿಷ್ಠ ಶಿಕ್ಷೆ ವಿಧಿಸುವ ಮೂಲಕ ಸೌಮ್ಯತೆ ತೋರಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದರು. ನ್ಯಾಯಾಲಯಕ್ಕೆ ಸ್ವತಃ ಹೇಳಿಕೆ ನೀಡಿದ ತೇಜ್‌ಪಾಲ್, ಕಳೆದ 30 ವರ್ಷಗಳಿಂದ ನಾವು ಸತ್ಯ ಬಹಿರಂಗಪಡಿಸುವ
ಕೆಲಸ ಮಾಡಿದ್ದೇವೆ. ನಾನು ಇಬ್ಬರು ಹೆಣ್ಣುಮಕ್ಕಳ ತಂದೆ, ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದರು.

ಕೇಂದ್ರ ಮತ್ತು ಗೋವಾ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಆರೋಪಿಯಲ್ಲಿ ಯಾವುದೇ ಪಶ್ಚಾತ್ತಾಪ ಕಾಣುತ್ತಿಲ್ಲ. ಆತನ ವರ್ತನೆ ಅತ್ಯಂತ ನಿರ್ಲಜ್ಜತನದಿಂದ ಕೂಡಿದ್ದು, ಆತನಿಗೆ ಯಾವುದೇ ವಿನಾಯಿತಿ ನೀಡಬಾರದು ಎಂದು ಕಟ್ಟುನಿಟ್ಟಾಗಿ ವಾದಿಸಿದರು.

ಮತ್ತಷ್ಟು ಓದಿ:

ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ: ಸಿಂಗರ್ ಮೈಲಾರಿ ಅರೆಸ್ಟ್

2013ರ ನವೆಂಬರ್‌ನಲ್ಲಿ ಗೋವಾದ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಥಿಂಕ್ ಫೆಸ್ಟ್​ ಕಾರ್ಯಕ್ರಮದ ವೇಳೆ, ತಮ್ಮ ಉದ್ಯೋಗಿಯಾಗಿದ್ದ ಯುವ ಪತ್ರಕರ್ತೆಯ ಮೇಲೆ ಹೋಟೆಲ್ ಲಿಫ್ಟ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ತೇಜ್‌ಪಾಲ್ ಮೇಲಿತ್ತು.

2021 ರಲ್ಲಿ ಗೋವಾ ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆ ನೆಪವೊಡ್ಡಿ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿತ್ತು. ಆದರೆ ಈ ತೀರ್ಪನ್ನು “ರೇಪ್ ಸಂತ್ರಸ್ತರ ವರ್ತನೆಯ ಕೈಪಿಡಿಯಂತಿದೆ ಎಂದು ಟೀಕಿಸಿದ್ದ ಸರ್ಕಾರ, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಹೈಕೋರ್ಟ್‌ನ ದೋಷಾರೋಪಣೆಯ ತೀರ್ಪಿನ ನಂತರ ಆರೋಪಿಗೆ ನಿರೀಕ್ಷಣಾ ಜಾಮೀನು ಸಿಗುವುದು ಕಷ್ಟಕರವಾಗಿದ್ದು, ತೇಜ್‌ಪಾಲ್ ಪರ ವಕೀಲರು ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳುತ್ತಿದ್ದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ತಡೆ ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. 2012ರ ನಿರ್ಭಯಾ ದುರಂತದ ನಂತರ ಭಾರತದಲ್ಲಿ ಜಾರಿಗೆ ತರಲಾದ ಕಠಿಣ ಲೈಂಗಿಕ ಅಪರಾಧ ತಡೆ ಕಾನೂನುಗಳ (Criminal Law Amendment Act 2013) ಅಡಿಯಲ್ಲಿ ತನಿಖೆಗೊಳಪಟ್ಟ ಮೊದಲ ಉನ್ನತ ಮಟ್ಟದ ಪ್ರಕರಣ ಇದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: NIA ಮೋಸ್ಟ್ ವಾಂಟೆಡ್‌ ಆರೋಪಿ ಉಮ್ಮರ್ ಫಾರೂಕ್ ಬಂಧನ – Kannada News | Praveen Nettaru Murder Case: NIA Arrests Most Wanted Accused Umar Farooq in Kerala Kochi

ಪ್ರವೀಣ್ ನೆಟ್ಟಾರು ಹಾಗೂ ಒಳಚಿತ್ರದಲ್ಲಿ ಬಂಧಿತ ಆರೋಪಿ ಉಮ್ಮರ್ ಫಾರೂಕ್Image Credit source: tv9

ಮಂಗಳೂರು, ಆಗಸ್ಟ್ 6: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ (Praveen Nettaru Case) ತಲೆಮರೆಸಿಕೊಂಡಿದ್ದ ಎನ್‌ಐಎ ಮೋಸ್ಟ್ ವಾಂಟೆಡ್‌ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್.ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೇರಳದ ಕೊಚ್ಚಿಯಲ್ಲಿ ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಎನ್‌ಐಎ ಬಂಧಿಸಿರುವ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಉಮ್ಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ (NBW) ಜಾರಿಯಾಗಿತ್ತು. ಆತನ ಬಂಧನಕ್ಕೆ 4 ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.

ಆರೋಪಿಗೆ ನೆರವು ನೀಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಉಮ್ಮರ್ ಫಾರೂಕ್

ಎನ್‌ಐಎ ತನಿಖೆ ಪ್ರಕಾರ, ಉಮ್ಮರ್ ಫಾರೂಕ್ ಪಿಎಫ್‌ಐ ಕಚೇರಿಯಲ್ಲಿ ನಡೆದ ಸಂಚು ಸಭೆಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ. ಪ್ರವೀಣ್ ನೆಟ್ಟಾರು ಹತ್ಯೆಗೂ ಮುನ್ನ ಆರೋಪಿಗೆ ಬೈಕ್ ನೀಡಿದ್ದ ಆರೋಪವೂ ಆತನ ಮೇಲಿತ್ತು. ಬಳಿಕ ಸಾಕ್ಷಿದಾರನ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಭಾಗಿಯಾಗಿದ್ದ ಆರೋಪ ಇತ್ತು.

ಪಿಎಫ್​ಐ ನೆರವಿನಿಂದ ಅಡಗಿಕೊಂಡಿದ್ದ ಆರೋಪಿ

ಹತ್ಯೆಯ ಬಳಿಕ ಪ್ರಮುಖ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಉಮ್ಮರ್ ಫಾರೂಕ್ ಸಹಾಯ ಮಾಡಿದ್ದ ಎನ್ನಲಾಗಿದ್ದು, ನಂತರ ಕೇರಳದ ಕೊಚ್ಚಿಯಲ್ಲೇ ಅಡಗಿಕೊಂಡಿದ್ದ. ನಿಷೇಧಿತ ಪಿಎಫ್‌ಐ ಸಂಘಟನೆಯ ಪ್ರಮುಖರು ಆತನಿಗೆ ಕೊಚ್ಚಿಯಲ್ಲಿ ಆಶ್ರಯ ನೀಡಿದ್ದರು ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಹೊರಗಿನ ಪ್ರಪಂಚಕ್ಕೆ ಕಾಣಿಸಿಕೊಳ್ಳದಂತೆ ಆತನನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಉಮ್ಮರ್ ಕೊಚ್ಚಿಯಲ್ಲೇ ವಾಸ್ತವ್ಯ ಹೂಡಿದ್ದ ಎನ್ನಲಾಗಿದೆ.

ಬಂಧಿತ ಆರೋಪಿಗಳಿಂದ ಸಿಕ್ಕಿತ್ತು ಸುಳಿವು

ಕಳೆದ ಜುಲೈ 11ರಂದು ನೌಷಾದ್ ಮತ್ತು ನಸೀರ್ ಎಂಬ ಆರೋಪಿಗಳನ್ನು ಎನ್‌ಐಎ ಬಂಧಿಸಿತ್ತು. ಈ ವೇಳೆ ಕೊಚ್ಚಿಯಲ್ಲಿರುವ ಅಜ್ಞಾತ ಸ್ಥಳದ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಅದರ ಆಧಾರದ ಮೇಲೆ ಎನ್‌ಐಎ ಕಾರ್ಯಾಚರಣೆ ನಡೆಸಿ ಉಮ್ಮರ್ ಫಾರೂಕ್‌ನನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಎನ್‌ಐಎ ಶೋಧ ಕಾರ್ಯ ಮುಂದುವರಿಸಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಹಿನ್ನೆಲೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು (32) ಅವರನ್ನು 2022ರ ಜುಲೈ 26ರಂದು ರಾತ್ರಿ ತಮ್ಮ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದರು. ಘಟನೆಯ ಬಳಿಕ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ 2022ರ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವಾಲಯವು ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಹಸ್ತಾಂತರಿಸಿತ್ತು.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಪ್ರಕರಣ: ನಾಲ್ಕು ವರ್ಷಗಳ ಬಳಿಕ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ ಎನ್​ಐಎ

ಎನ್‌ಐಎ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯ ಪ್ರಕಾರ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಾಯಕರು ಹಾಗೂ ಅದರ ‘ಸರ್ವಿಸ್ ಟೀಮ್’ ಸದಸ್ಯರು ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಎನ್‌ಐಎ ಹಲವು ಹಂತಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಹತ್ಯೆಯಲ್ಲಿ ನೇರವಾಗಿ ಶಾಮೀಲಾದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರು ಸೇರಿದಂತೆ 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳ ಪತ್ತೆ ಕಾರ್ಯವೂ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಲಾಕಪ್ 2’ ಗೆದ್ದ ಶ್ರೆಯಾ ಕಾಲ್ರಾ, ಸಿಕ್ಕ ಬಹುಮಾಣವೆಷ್ಟು ಕೋಟಿ? – Kannada News | Shreya Kalra became Lock Up 2 winner, how much money did she won

ಬಿಗ್​​ಬಾಸ್​​ ರಿಯಾಲಿಟಿ ಶೋ (Bigg Boss) ಭಾರತದಲ್ಲಿ ದೊಡ್ಡ ಯಶಸ್ಸು ಗಳಿಸಿದ ಬೆನ್ನಲ್ಲೆ ಅದನ್ನೇ ಹೋಲುವ ಹಲವು ರಿಯಾಲಿಟಿ ಶೋಗಳು ಭಾರತದ ಟಿವಿ ಮತ್ತು ಒಟಿಟಿ ಸ್ಪೇಸ್​​ನಲ್ಲಿ ಬಹಳ ಹೆಚ್ಚಾಗಿವೆ. ಅವುಗಳಲ್ಲಿ ತುಸು ಜನಪ್ರಿಯತೆ ಪಡೆದಿರುವುದು ‘ಲಾಕಪ್’ ಶೋ. ಈ ರಿಯಾಲಿಟಿ ಶೋ ಸಹ ಬಹುತೇಕ ಬಿಗ್​​ಬಾಸ್ ಅನ್ನೇ ಹೋಲುತ್ತದೆಯಾದರೂ ಕೆಲವು ಭಿನ್ನತೆಗಳು ಇದೆ. ಇದೀಗ ಈ ರಿಯಾಲಿಟಿ ಶೋನ ಎರಡನೇ ಸೀಸನ್ ಫಿನಾಲೆ ನಿನ್ನೆಯಷ್ಟೆ ಮುಗಿದಿದ್ದು, ಶ್ರೆಯಾ ಕಾಲ್ರಾ ವಿಜೇತರಾಗಿದ್ದಾರೆ.

ಶ್ರೆಯಾ ಕಾಲ್ರಾ ವಿಜೇತರಾದರೆ, ನಟಿ ಶಿವಂಗಿ ಜೋಶಿ ಪ್ರಥಮ ರನ್ನರ್-ಅಪ್ ಆದರು, ಹಾಗೆಯೇ ರಿಯಾಲಿಟಿ ಶೋ ಸ್ಟಾರ್ ಯೋಗೇಶ್ ರಾವತ್ ಎರಡನೇ ರನ್ನರ್-ಅಪ್ ಆಗಿ ಹೊರಹೊಮ್ಮಿದರು. ಈ ಫಿನಾಲೆಯಲ್ಲಿ ಮಾಜಿ ಸ್ಪರ್ಧೆಗಳು ಮಾತ್ರವಲ್ಲದೆ, ಮಾಧ್ಯಮ ವೃತ್ತಿಪರರು ಮತ್ತು ನಟರನ್ನೊಳಗೊಂಡ ತೀರ್ಪುಗಾರರ ಮಂಡಳಿಯೂ ಇತ್ತು. ಅವರು ಸ್ಪರ್ಧಿಗಳನ್ನು ಪ್ರಶ್ನಿಸಿ, ವಿಜೇತರನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದುರದೃಷ್ಟವಶಾತ್, ರಾಮ್ ಕಪೂರ್ ಮತ್ತು ಶಿಲ್ಪಾ ಶಿಂಧೆ ಟಾಪ್ ಮೂರಕ್ಕೆ ಬರಲು ಸಾಧ್ಯವಾಗಲಿಲ್ಲ.

ವಿನ್ನರ್ ಆದ ಶ್ರೇಯಾ ಕಾಲ್ರಾ ಅವರಿಗೆ ಬಹುಮಾನದ ಟ್ರೋಫಿಯೊಂದಿಗೆ 1 ಕೋಟಿ ರೂ. ನಗದು ಬಹುಮಾನ ಸಹ ಪಡೆದುಕೊಂಡರು. ಇತರರಿಗೆ ಯಾವುದೇ ಬಹುಮಾನ ದೊರೆತ ಬಗ್ಗೆ ವರದಿಯಾಗಿಲ್ಲ. ರಾಮ್ ಕಪೂರ್ ಮತ್ತು ಶಿಲ್ಪಾ ಶಿಂಧೆ ಬಹಳ ಪ್ರಬಲ ಸ್ಪರ್ಧಿಗಳಾಗಿದ್ದರು, ಆದರೆ ಅವರು ಗೆಲುವಿನ ಸಮೀಪದಲ್ಲಿದ್ದಾಗ ಎಲಿಮಿನೇಟ್ ಆದರು. ಫಿನಾಲೆ ದಿನದ ಟಾಸ್ಕ್‌ನಲ್ಲಿ ಸೋತ ನಂತರ ರಾಮ್ ಮತ್ತು ಶಿಲ್ಪಾ ಅವರ ಪ್ರಯಾಣ ಅಂತ್ಯವಾಯಿತು. ಟಾಪ್ 5 ಸ್ಪರ್ಧಿಗಳಾದ ರಾಮ್, ಶಿಲ್ಪಾ, ಶ್ರೇಯಾ, ಶಿವಂಗಿ ಮತ್ತು ಯೋಗೇಶ್ ಅವರು ಒಂದು ಪಜಲ್ ಅನ್ನು ಜೋಡಿಸುವ ಟಾಸ್ಕ್ ಮಾಡಬೇಕಿತ್ತು; ಯಾರಲ್ಲಿ ಹೆಚ್ಚು ತಪ್ಪು ತುಣುಕುಗಳಿರುತ್ತವೆಯೋ ಅವರನ್ನು ಹೊರಹಾಕಲಾಗುತ್ತಿತ್ತು. ರಾಮ್ ಕಪೂರ್ ಈ ಟಾಸ್ಕ್‌ನಲ್ಲಿ ಸೋತು ಐದನೇ ಸ್ಥಾನದಲ್ಲಿ ಹೊರನಡೆದರು.

ಇದನ್ನೂ ಓದಿ:‘ಮತ್ತೆ ಶುರು ಮಾಡೋಣ್ವ’ ಬಿಗ್​​ಬಾಸ್ ಬಾಗಿಲು ತೆರೆದ ಸುದೀಪ್

ಇದರ ನಂತರ, ಶಿಲ್ಪಾ, ಶ್ರೇಯಾ, ಶಿವಂಗಿ ಮತ್ತು ಯೋಗೇಶ್ ಟಾಪ್ ಮೂರರಲ್ಲಿ ತಮ್ಮ ಸ್ಥಾನಕ್ಕಾಗಿ ಸ್ಪರ್ಧಿಸಬೇಕಾಯಿತು. ಯೋಗೇಶ್ ಅವರನ್ನು ಒಂದುಪೆಟ್ಟಿಗೆಯ ಮುಂದೆ ನಿಲ್ಲಿಸಲಾಯಿತು ಮತ್ತು ‘ಟರ್ಮಿನೇಟೆಡ್’ ಎಂದು ಬರೆದಿರುವ ಪೆಟ್ಟಿಗೆಯನ್ನು ಆಯ್ಕೆ ಮಾಡಲು ಅವರು ಇತರರನ್ನು ಮನವೊಲಿಸಬೇಕಿತ್ತು. ಚುರುಕಾಗಿ ಆಡಿ, ‘ಟರ್ಮಿನೇಟೆಡ್’ ಎಂದಿರುವ ಪೆಟ್ಟಿಗೆಯನ್ನು ಆಯ್ಕೆ ಮಾಡುವಂತೆ ಅವರು ಶಿಲ್ಪಾ ಅವರನ್ನು ಪ್ರಭಾವಿಸುವಲ್ಲಿ ಯಶಸ್ವಿಯಾದರು, ಇದು ನಾಲ್ಕನೇ ಸ್ಥಾನದಲ್ಲಿ ಅವರು ಹೊರಹೋಗಲು ಕಾರಣವಾಯಿತು.

ಇದರ ತಕ್ಷಣವೇ, ಟಾಪ್ 3 ಫೈನಲಿಸ್ಟ್‌ಗಳು ಮಾಧ್ಯಮಗಳು ಮತ್ತು ತೀರ್ಪುಗಾರರಿಂದ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಯೋಗೇಶ್ ರಾವತ್ ಅವರ ಅಹಂಕಾರ ಮತ್ತು ವರ್ತನೆಗಾಗಿ ತರಾಟೆಗೆ ತೆಗೆದುಕೊಳ್ಳಲ್ಪಟ್ಟರೆ, ಹರ್ಷದ್ ಚೋಪ್ರಾ ಅವರನ್ನು ದಾರಿ ತಪ್ಪಿಸಿ ಅವರ ಫೈನಲಿಸ್ಟ್ ಸ್ಥಾನವನ್ನು ಕಸಿದುಕೊಂಡಿದ್ದಕ್ಕಾಗಿ ಶಿವಾಂಗಿಯನ್ನು ಪ್ರಶ್ನಿಸಲಾಯಿತು. ಶ್ರೇಯಾ ಅವರ ಅದ್ಭುತ ಆಟದ ಶೈಲಿಯನ್ನು ಶ್ಲಾಘಿಸಲಾಯಿತಾದರೂ, ರಾಮ್ ಕಪೂರ್ ಅವರು ತಮಗೆ ಅನಾನುಕೂಲತೆಂಟು ಮಾಡಿದರು ಎಂದು ಆರೋಪಿಸಿದ್ದಕ್ಕಾಗಿ ಅವರನ್ನು ಪ್ರಶ್ನಿಸಲಾಯಿತು. ಜೊತೆಗೆ ಶೋನಲ್ಲಿ ಅವರ ಭಾಷೆ ಮತ್ತು ಅನುಚಿತ ಕಾಮೆಂಟ್‌ಗಳಿಗಾಗಿಯೂ ಟೀಕೆಗೆ ಗುರಿಯಾದರು.

ಇದರ ನಂತರ, ತೀರ್ಪುಗಾರರ ಮತಗಳ ಆಧಾರದ ಮೇಲೆ ಯೋಗೇಶ್ ರಾವತ್ ಹೊರಹಾಕಲ್ಪಟ್ಟರು. ಶ್ರೇಯಾ ಮತ್ತು ಶಿವಂಗಿ ನಡುವಿನ ವಿಜೇತರನ್ನು ಮಾಜಿ ಸ್ಪರ್ಧಿಗಳು, ತೀರ್ಪುಗಾರರು ಮತ್ತು ಜೈಲರ್ಸ್‌ಗಳ ಮತಗಳ ಆಧಾರದ ಮೇಲೆ ನಿರ್ಧರಿಸಲಾಯಿತು. ಗರಿಷ್ಠ ಸಂಖ್ಯೆಯ ಮತಗಳನ್ನು ಗಳಿಸಿದ ನಂತರ, ಏಕ್ತಾ ಕಪೂರ್ ಅವರು ಶ್ರೇಯಾ ಕಾಲ್ರಾ ಅವರನ್ನು ವಿಜೇತರೆಂದು ಘೋಷಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Hiroshima Day 2026: ಭೀಕರ ಪರಮಾಣು ದಾಳಿಗೆ ನಲುಗಿ ಹೋಗಿದ್ದ ಜಪಾನಿನ ಹಿರೋಷಿಮಾ ನಗರ ಇಂದು ಹೇಗಿದೆ? – Kannada News | Hiroshima Day 2026: The painful story of the atomic attack on Hiroshima

ಆಗಸ್ಟ್ 6, 1945 ಮಾನವ ಇತಿಹಾಸದಲ್ಲಿ ಒಂದು ಕರಾಳ ದಿನ. ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದಿನ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಜಪಾನಿನ ಹಿರೋಷಿಮಾ (Hiroshima) ನಗರದ  ಮೇಲೆ ಪರಮಾಣು ಬಾಂಬ್‌ ದಾಳಿಯನ್ನು ನಡೆಸಿತು. ಈ ಸ್ಫೋಟವು ಎಷ್ಟು ವಿನಾಶಕಾರಿಯಾಗಿತ್ತೆಂದರೆ, ಇಡೀ ನಗರವು ಕ್ಷಣಗಳಲ್ಲಿ ಬೆಂಕಿಯಲ್ಲಿ ಆವರಿಸಿತು. ಸರಿಸುಮಾರು 70,000 ಜನರು ಕ್ಷಣದಲ್ಲೇ ಸಾವನ್ನಪ್ಪಿದರು. ಈ ದಾಳಿ ನಡೆದ ಮೂರು ದಿನಗಳ ನಂತರ, ಅಮೆರಿಕ ಫ್ಯಾಟ್ ಮ್ಯಾನ್ ಎಂಬ ಪರಮಾಣು ಬಾಂಬ್‌ ಅನ್ನು ನಾಗಸಾಕಿಯ ಮೇಲೆ ಹಾಕಿತು. ಈ ದಾಳಿ ಎಷ್ಟ್ರು ತೀವ್ರವಾಗಿತ್ತೆಂದರೆ ಸಾವಿರಾರು ಕಟ್ಟಡಗಳು ಕ್ಷಣಾರ್ಧದಲ್ಲಿ ಬೂದಿಯಾದವು,  ಸುಮಾರು 74,000 ಜನರು ಸಾವನ್ನಪ್ಪಿದರು. ಈ ಕರಾಳ ಘಟನೆ ಹಾಗೂ ಆ ಸಮಯದಲ್ಲಿ ಸಾವನ್ನಪ್ಪಿದ್ದ ಮುಗ್ಧ ಜೀವಗಳ ನೆನಪಿಗಾಗಿ ಪ್ರತಿವರ್ಷ ಆಗಸ್ಟ್‌ 6 ರಂದು ಹಿರೋಷಿಮಾ ದಿನವನ್ನು ಆಚರಿಸಲಾಗುತ್ತದೆ. ಹಿರೋಷಿಮಾ ದಿನವು ಕೇವಲ ಇತಿಹಾಸವನ್ನು ನೆನಪಿಸಿಕೊಳ್ಳುವ ದಿನವಲ್ಲ, ಪರಮಾಣು ಶಸ್ತ್ರಾಸ್ತ್ರಗಳ ವಿನಾಶಕಾರಿ ಪರಿಣಾಮಗಳ ಬಗ್ಗೆ ಜಗತ್ತಿಗೆ ಸಂದೇಶವನ್ನು ಸಾರುವ ದಿನವಾಗಿದೆ.

ಹಿರೋಷಿಮಾ ಮೇಲೆ ಪರಮಾಣು ಬಾಂಬ್ ದಾಳಿ:

ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಆಗಸ್ಟ್ 6, 1945 ರಂದು ಅಮೆರಿಕ ಜಪಾನಿನ  ಹಿರೋಷಿಮಾ ನಗರದ ಮೇಲೆ ನಡೆದ ಪರಮಾಣು ಬಾಂಬ್ ದಾಳಿ ನಡೆಸಿತು. ಯುನೈಟೆಡ್ ಸ್ಟೇಟ್ಸ್ ಜಪಾನಿನ ಹಿರೋಷಿಮಾ ನಗರವನ್ನು ಗುರಿಯಾಗಿಸಿಕೊಂಡು ಎನೋಲಾ ಗೇ ವಿಮಾನದಿಂದ ಲಿಟಲ್ ಬಾಯ್ ಎಂಬ ಪರಮಾಣು ಬಾಂಬ್ ಅನ್ನು ಹಾಕಿತು. ಕೆಲವೇ ಸೆಕೆಂಡುಗಳಲ್ಲಿ, ಇಡೀ ಹಿರೋಷಿಮಾ ನಗರವೇ ನಾಶವಾದವು. ಸಾವಿರಾರು ಜನರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಲಕ್ಷಾಂತರ ಜನರು ಗಾಯಗೊಂಡರು. ಮನೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಪ್ರಮುಖ ಕಟ್ಟಡಗಳು ಭೀಕರವಾಗಿ ನಾಶವಾದವು. ಈ ದಾಳಿಯ ಮೂರು ದಿನಗಳ ನಂತರ, ನಾಗಸಾಕಿಯ ಮೇಲೆ ಎರಡನೇ ಪರಮಾಣು ಬಾಂಬ್ ದಾಳಿ ನಡೆಸಲಾಯಿತು.

ಲಿಟಲ್‌ ಬಾಯ್‌ಬಾಂಬ್‌ನ ಶಕ್ತಿ ಮತ್ತು ವಿನಾಶ:

ಲಿಟಲ್‌ ಬಾಯ್‌ ಎಂಬ ಹೆಸರು ಕೇಳಲು ಚಿಕ್ಕದಾಗಿದ್ದರೂ, ಇದರ ಶಕ್ತಿ ಮಾತ್ರ ವಿನಾಶಕಾರಿಯಾಗಿತ್ತು. ಈ ಪರಮಾಣು ಬಾಂಬ್‌ ಯುರೇನಿಯಂ-235 ಅನ್ನು ಆಧರಿಸಿದ ಬಾಂಬ್‌ ಆಗಿತ್ತು. ಇದು ಸರಿಸುಮಾರು 4,400 ಕಿಲೋಗ್ರಾಂಗಳಷ್ಟು ತೂಕವಿತ್ತು. ಈ ಪರಮಾಣು ಅಸ್ತ್ರವು 15 ಕಿಲೋಟನ್‌ಗಳಷ್ಟು ಟಿಎನ್‌ಟಿಗೆ ಸಮಾನವಾದ ಶಕ್ತಿಯನ್ನು ಹೊಂದಿತ್ತು. ಈ ಭಯಾನಕ ದಾಳಿಯು ತಕ್ಷಣವೇ ಇಡೀ ಹಿರೋಷಿಮಾ ನಗರಗಳನ್ನು ಬೂದಿ ಮಾಡಿತು. ಈ ಅಣುಬಾಂಬ್‌ನ ವಿಕಿರಣದಿಂದಾಗಿ ಗಾಳಿ ಮತ್ತು ನೀರು ಸಂಪೂರ್ಣವಾಗಿ ವಿಷಪೂರಿತವಾಗಿತ್ತು.‌ ಪರಮಾಣು ದಾಳಿಯ ನಂತರ, 30 ಕಿಲೋಮೀಟರ್ ಪ್ರದೇಶದಲ್ಲಿ ಕಪ್ಪು ಮಳೆ ಸುರಿಯಿತು.

ಹಿರೋಷಿಮಾ ದಾಳಿಯ ಪರಿಣಾಮಗಳು:

  • ಸ್ಫೋಟ ಮತ್ತು ಅದರ ತೀವ್ರ ಶಾಖದಿಂದಾಗಿ ಸ್ಥಳದಲ್ಲೇ ಸುಮಾರು 70,000 ರಿಂದ 80,000 ಜನರನ್ನು ಸಾವನ್ನಪ್ಪಿದರು. 1945 ರ ಅಂತ್ಯದ ವೇಳೆಗೆ, ಈ ಸಂಖ್ಯೆ ಸರಿಸುಮಾರು 140,000 ಕ್ಕೆ ಏರಿತು.
  • ಬದುಕುಳಿದ ಸಾವಿರಾರು ಜನರು ಅಣುಬಾಂಬ್‌ನ ವಿಕಿರಣಕ್ಕೆ ತುತ್ತಾಗಿ ಅವರು ವಾಂತಿ, ಜ್ವರ, ಕೂದಲು ಉದುರುವಿಕೆ, ರೋಗನಿರೋಧಕ ಶಕ್ತಿಯ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ತುತ್ತಾದರು. ಅಲ್ಲದೆ ಈ ದಾಳಿಯಲ್ಲಿ ಬದುಕಿಳಿದ ಅನೇಕ ಜನರು ತಮ್ಮ ನಂತರದ ಜೀವನದಲ್ಲಿ ಲ್ಯುಕೇಮಿಯಾ, ಥೈರಾಯ್ಡ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಕಣ್ಣಿನ ಪೊರೆಗಳಂತಹ ಗಂಭೀರ ಕಾಯಿಲೆಗಳಿಗೆ ಒಳಗಾಗಿದ್ದಾರೆ.
  • ದಾಳಿಯಿಂದ ಬದುಕುಳಿದವರು ಭಯ, ಒತ್ತಡ, ಖಿನ್ನತೆ ಮತ್ತು ತಮ್ಮ ಕುಟುಂಬವನ್ನು ಕಳೆದುಕೊಂಡ ದುಃಖದಿಂದ ದೀರ್ಘಕಾಲ ಹೋರಾಡಿದರು. ಈ ದಾಳಿಯಲ್ಲಿ ಅನೇಕ ಮಕ್ಕಳು ಅನಾಥರಾದರು, ಅನೇಕರು ವಿಕಿರಣಕ್ಕೆ ಸಂಬಂಧಿಸಿದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದರು.
  • ಈ ದಾಳಿಯಿಂದ ಬದುಕುಳಿದವರನ್ನು ಹಿಬಾಕುಶಾ ಎಂದು ಕರೆಯಲಾಗುತ್ತದೆ. ಅವರು ಇಂದಿಗೂ ದುರಂತದ ಜೀವಂತ ಸಾಕ್ಷಿಗಳಾಗಿದ್ದಾರೆ.
  • ಹಿರೋಷಿಮಾದ ಸುಮಾರು 90 ಪ್ರತಿಶತ ಕಟ್ಟಡಗಳು ನಾಶವಾದವು ಅಥವಾ ತೀವ್ರವಾಗಿ ಹಾನಿಗೊಳಗಾದವು. ಆ ಸಮಯದಲ್ಲಿ ಸಾವಿರಾರು ಜನರು ನಿರಾಶ್ರಿತರಾದರು ಮತ್ತು ಆಹಾರ, ಕುಡಿಯುವ ನೀರು ಮತ್ತು ವೈದ್ಯಕೀಯ ಆರೈಕೆಯಂತಹ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಹೆಣಗಾಡುವ ಪರಿಸ್ಥಿತಿ ಎದುರಾಯಿತು.
  • ಹಿರೋಷಿಮಾ ಮತ್ತು ನಾಗಸಾಕಿಯ ದುರಂತಗಳು ಕೇವಲ ಇತಿಹಾಸವಲ್ಲ, ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯು ಮಾನವಕುಲಕ್ಕೆ ಎಷ್ಟು ಅಪಾಯಕಾರಿ ಎಂಬುದರ ಎಚ್ಚರಿಕೆಯೂ ಆಗಿದೆ.

ಇದನ್ನೂ ಓದಿ: ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ

ಇಂದು ಹಿರೋಷಿಮಾ ನಗರ ಹೇಗಿದೆ?

ಅಂದು ಪರಮಾಣು ದಾಳಿಗೆ ತುತ್ತಾಗಿ ನಲುಗಿ ಹೋಗಿದ್ದ ಹಿರೋಷಿಮಾ ಮತ್ತು ನಾಗಸಾಕಿ ಎರಡೂ ಇಂದು ಅಭಿವೃದ್ಧಿ ಹೊಂದಿದ ನಗರಗಳಾಗಿ ಜಗತ್ತಿನ ಮುಂದೆ ತಲೆ ಎತ್ತಿ ನಿಂತಿವೆ. ಅಭಿವೃದ್ಧಿಯ ಮೂಲಕವೇ ಜಪಾನ್‌ ತನ್ನ ಶಕ್ತಿಯನ್ನು ಜಗತ್ತಿಗೆ ಸಾರಿದೆ. ಹಿರೋಷಿಮಾ ನಗರವು ಜಪಾನ್‌ನ ಅತಿದೊಡ್ಡ ದ್ವೀಪವಾದ ಹೊನ್ಶುನಲ್ಲಿದೆ. ಪರಮಾಣು ಬಾಂಬ್ ದಾಳಿಯಿಂದ ನಗರವು ಧ್ವಂಸಗೊಂಡಿತು. ಇಂದು, ಇದು ಸುಂದರವಾದ, ಉತ್ತಮವಾಗಿ ಅಭಿವೃದ್ಧಿ ಹೊಂದಿದ ನಗರವಾಗಿ ವಿಕಸನಗೊಂಡಿದೆ.  ನಗರವು ಅಸ್ಟ್ರಾಮ್ ಲೈನ್, ಸೀನೋ ಲೈನ್ ಮತ್ತು ರೈಲು ಸೇವೆಗಳನ್ನು ಹೊಂದಿದೆ. ಆಧುನಿಕ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಜೊತೆಗೆ ಪ್ರಮುಖ ಕಂಪನಿಗಳು ಅಲ್ಲಿ ನೆಲೆಗೊಂಡಿವೆ. ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಿರೋಷಿಮಾವು ಸುಂದರವಾದ ವಿಮಾನ ನಿಲ್ದಾಣವನ್ನು ಸಹ ಹೊಂದಿದೆ.ಶಾಂತಿ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಸಹ ನಿರ್ಮಿಸಲಾಗಿದ್ದು, ಇವು ಪರಮಾಣು ಬಾಂಬ್ ದಾಳಿಯಿಂದ ಉಂಟಾದ ವಿನಾಶವನ್ನು ಜನರಿಗೆ ನೆನಪಿಸುತ್ತಲೇ ಇದೆ. ಪ್ರತಿ ವರ್ಷ ಪ್ರಪಂಚದಾದ್ಯಂತದ ಲಕ್ಷಾಂತರ ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version