ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿಯಲ್ಲಿ ಶೋಧ ನಡೆಸುತ್ತಿರುವ ಕೇರಳ ಎಸ್ಐಟಿ – Kannada News | Roddam Jewellers Under Scrutiny in Sabarimala Temple Gold Theft Case

ಬಳ್ಳಾರಿ,ಡಿ.24: ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ನಡೆದ 4.5 ಕೆಜಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ವಿಶೇಷ ತನಿಖಾ ತಂಡ (ಎಸ್ಐಟಿ) ಬಳ್ಳಾರಿಯ ರೊದ್ದಂ ಜುವೆಲರ್ಸ್ ಮೇಲೆ ದಾಳಿ ನಡೆಸಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದೆ. ಕೇರಳದ ಐವರು ಅಧಿಕಾರಿಗಳು ಜುವೆಲರಿ ಅಂಗಡಿಯನ್ನು ಸಂಪೂರ್ಣವಾಗಿ ಮುಚ್ಚಿ ಪರಿಶೀಲನೆ ನಡೆಸಿದ್ದಾರೆ. ಈ ಅಂಗಡಿಯ ಮಾಲೀಕ ಗೋವರ್ಧನ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಲಾಗಿದೆ. ಗೋವರ್ಧನ್ ಅವರು ಕದ್ದ ಚಿನ್ನದಲ್ಲಿ ಸುಮಾರು 475 ಗ್ರಾಂ ಖರೀದಿಸಿದ್ದರು ಎಂಬ ಮಾಹಿತಿ ಎಸ್ಐಟಿಗೆ ಲಭ್ಯವಾಗಿದೆ. ಈ ಹಿಂದೆ 2019ರಲ್ಲಿ ಅಯ್ಯಪ್ಪ ದೇಗುಲದ ದ್ವಾರಪಾಲಕ ಮೂರ್ತಿಗಳಿಗೆ ಚಿನ್ನ ಲೇಪನ ಮಾಡುವ ಜವಾಬ್ದಾರಿಯನ್ನು ಉನ್ನಿಕೃಷ್ಣನ್ ಅವರಿಗೆ ವಹಿಸಲಾಗಿತ್ತು. ಆದರೆ ಹಿಂದಿರುಗಿಸುವಾಗ ಚಿನ್ನದ ತೂಕದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಈ ಪ್ರಕರಣದ ತನಿಖೆ ಇದೀಗ ತೀವ್ರಗೊಂಡಿದೆ. ಎಸ್ಐಟಿ ಅಧಿಕಾರಿಗಳು ಗೋವರ್ಧನ್ ಅವರ ಹೇಳಿಕೆಗಳು ಮತ್ತು ಜ್ಯುವೆಲರಿ ಅಂಗಡಿಯಲ್ಲಿ ಲಭ್ಯವಿರುವ ದಾಖಲೆಗಳನ್ನು ತಾಳೆ ಹಾಕಿ ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಅಂಗಡಿಯಲ್ಲಿ ಕೆಲಸ ಮಾಡುವ ಹತ್ತಕ್ಕೂ ಹೆಚ್ಚು ಸಿಬ್ಬಂದಿಯನ್ನೂ ವಿಚಾರಣೆಗೊಳಪಡಿಸಲಾಗಿದೆ. ರೊದ್ದಂ ಜುವೆಲರ್ಸ್ ಮೇಲೆ ಮಾತ್ರವಲ್ಲದೆ, ಗೋವರ್ಧನ್ ಅವರ ಮನೆ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ನ್ಯಾಯಾಲಯದ ಸೂಚನೆಯ ನಂತರ ಎಸ್ಐಟಿ ತಂಡವು ತನಿಖೆಯನ್ನು ಚುರುಕುಗೊಳಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮುದ್ದು ಕಂದನ ಬಾಯಲ್ಲಿ ಶ್ರೀ ಕೃಷ್ಣನ ಭಜನೆ ಹಾಡು, ವೈರಲ್ ಆಯ್ತು ದೃಶ್ಯ – Kannada News | A little boy sang a bhajan of Lord Krishna, video goes viral

ಮುದ್ದು ಮಕ್ಕಳ (little kids) ಆಟ-ತುಂಟಾಟಗಳನ್ನು ನೋಡುವುದೇ ಚಂದ. ಪುಟಾಣಿಗಳ ಬಾಯಲ್ಲಿ ತೊದಲು ನುಡಿ, ಹಾಡುಗಳನ್ನು ಕೇಳಿದರೆ ಮನಸ್ಸಿನ ನೋವೆಲ್ಲಾ ಮರೆಯಾಗುತ್ತದೆ. ಈ ಪುಟಾಣಿಗಳ ಮುದ್ದು ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಪುಟಾಣಿಯೊಂದು ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ ಸ್ತೋತ್ರವನ್ನು ಭಕ್ತಿಭಾವದಿಂದ ಹಾಡಿದೆ. ಮುದ್ದು ಕಂದನ ಕಂಠಸಿರಿಯಲ್ಲಿ ಮೂಡಿಬಂದ ಈ ಭಜನಾ ಹಾಡಿಗೆ ನೆಟ್ಟಿಗರು ಮನಸೋತಿದ್ದಾರೆ.

ಮಣಿಕರ್ಣಿಕ ಕಟೋಚ್ (Manikarnika Katoch) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟಾಣಿಯೊಂದು ದೇವರ ಕೋಣೆಯಲ್ಲಿ ಕುಳಿತುಕೊಂಡು ಕೈಯಲ್ಲಿ ಪೂಜಾ ತಟ್ಟೆ ಹಿಡಿದುಕೊಂಡು ಭಜನೆಯಲ್ಲಿ ಮುಳುಗಿದೆ. ಈ ಪುಟಾಣಿಯೂ “ಅಚ್ಯುತಂ ಕೇಶವಂ” ಎಂಬ ಪ್ರಸಿದ್ಧ ಸ್ತೋತ್ರವನ್ನು ಹಾಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಕಲಿಸುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ

ಈ ವಿಡಿಯೋ 6 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮತ್ತೆ ಮತ್ತೆ ನೋಡಬೇಕೇನಿಸುವ ದೃಶ್ಯ ಎಂದಿದ್ದಾರೆ. ಇನ್ನೊಬ್ಬರು, ವಿಡಿಯೋ ನನ್ನ ಹೃದಯ ಗೆದ್ದಿದೆ” ಎಂದು ಹೇಳಿದ್ದಾರೆ. ಮತ್ತೊಬ್ಬರು ಅಪ್ಪಟ ಕೃಷ್ಣ ಭಕ್ತ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:30 pm, Wed, 24 December 25

Source link

ರೋಹಿತ್ ಶರ್ಮಾ ಸ್ಫೋಟಕ ಸೆಂಚುರಿ: 183 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮುಂಬೈ – Kannada News | Rohit Sharma hits century on Vijay Hazare Trophy return

ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಕ್ಕಿಂ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಕ್ಕಿಂ ಪರ ವಿಕೆಟ್ ಕೀಪರ್ ಬ್ಯಾಟರ್ ಆಶಿಶ್ ಥಾಪಾ 79 ರನ್​ಗಳ ಇನಿಂಗ್ಸ್ ಆಡಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಸಿಕ್ಕಿಂ ತಂಡ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 236 ರನ್​ ಕಲೆಹಾಕಿತು.

ರೋಹಿತ್ ಶರ್ಮಾ ಸ್ಫೋಟಕ ಶತಕ:

237 ರನ್​ಗಳ ಸುಲಭ ಗುರಿ ಪಡೆದ ಮುಂಬೈ ಪರ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಹಿಟ್​ಮ್ಯಾನ್ ಸಿಕ್ಕಿಂ  ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದರು.

ಈ ಶತಕದ ಬಳಿಕ ಕೂಡ ಹೊಡಿಬಡಿ ಆಟ ಮುಂದುವರೆಸಿದ ಹಿಟ್​ಮ್ಯಾನ್ 9 ಭರ್ಜರಿ ಸಿಕ್ಸ್ ಹಾಗೂ 18 ಫೋರ್​ಗಳೊಂದಿಗೆ 94 ಎಸೆತಗಳಲ್ಲಿ 155 ರನ್ ಬಾರಿಸಿದರು. ಈ ಮೂಲಕ ಮುಂಬೈ ತಂಡವು 30.3 ಓವರ್​ಗಳಲ್ಲಿ 237 ರನ್​ಗಳಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಮುಂಬೈ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ಅಂಗ್ಕ್ರಿಶ್ ರಘುವಂಶಿ, ಸರ್ಫರಾಝ್ ಖಾನ್, ಸಿದ್ಧೇಶ್ ಲಾಡ್, ಮುಶೀರ್ ಖಾನ್, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್ (ನಾಯಕ), ತುಷಾರ್ ದೇಶಪಾಂಡೆ, ಸಿಲ್ವೆಸ್ಟರ್ ಡಿಸೋಝ.

ಇದನ್ನೂ ಓದಿ: ಬರೋಬ್ಬರಿ 15 ಸಿಕ್ಸ್… ವಿಶ್ವ ದಾಖಲೆಯ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ

ಸಿಕ್ಕಿಂ (ಪ್ಲೇಯಿಂಗ್ XI): ಲೀ ಯೋಂಗ್ ಲೆಪ್ಚಾ (ನಾಯಕ), ಆಶಿಶ್ ಥಾಪಾ (ವಿಕೆಟ್ ಕೀಪರ್), ಅಮಿತ್ ರಾಜೇರಾ, ರಾಬಿನ್ ಲಿಂಬೂ, ಗುರಿಂದರ್ ಸಿಂಗ್, ಕ್ರಾಂತಿ ಕುಮಾರ್, ಪಲ್ಜೋರ್ ತಮಾಂಗ್, ಅಂಕುರ್ ಮಲಿಕ್, ಕೆ ಸಾಯಿ ಸಾತ್ವಿಕ್, ಎಂಡಿ ಸಪ್ತುಲ್ಲಾ, ಅಭಿಷೇಕ್ ಶಾ.

Source link

Vasthu Shastra: ತುಳಸಿ ಗಿಡದ ಪಕ್ಕದಲ್ಲಿ ಈ ಸಸ್ಯ ಬೆಳೆದಿದ್ಯಾ? ಇದು ಕೌಟುಂಬಿಕ ಸಂತೋಷ ಮತ್ತು ಸಮೃದ್ಧಿಯ ಸಂಕೇತ – Kannada News | Tulasi Durva: Unveiling Spiritual Meanings and Prosperity Omens in Sanatana Dharma

ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ತುಳಸಿಗೆ ವೈಜ್ಞಾನಿಕ ಮತ್ತು ಧಾರ್ಮಿಕ ಮಹತ್ವವೂ ಇದೆ ಎಂದು ಪರಿಗಣಿಸಲಾಗಿದೆ. ತುಳಸಿ ಮಾತೆಯನ್ನು ಪೂಜಿಸುವ ಜನರಿಗೆ ತಮ್ಮ ಮನೆಗಳಲ್ಲಿ ಎಂದಿಗೂ ಸಂಪತ್ತು ಮತ್ತು ಸಮೃದ್ಧಿಯ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿ ಗಿಡದ ಸ್ಥಾನವು ಮನೆಯ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕುಟುಂಬ ಸದಸ್ಯರಿಗೆ ಶುಭ ಮತ್ತು ಅಶುಭ ಚಿಹ್ನೆಗಳನ್ನು ನೀಡುತ್ತದೆ.

ಮನೆಯಲ್ಲಿ ತುಳಸಿ ಗಿಡದಲ್ಲಿ ಆಗುವ ಬದಲಾವಣೆಗಳು ಕುಟುಂಬ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುವ ಅನೇಕ ಚಿಹ್ನೆಗಳನ್ನು ನೀಡುತ್ತವೆ ಎಂಬುದನ್ನು ಗಮನಿಸಬೇಕು. ಇದಲ್ಲದೆ, ತುಳಸಿ ಗಿಡದ ಬಳಿ ಗರಿಕೆ (ದೂರ್ವೆ) ಇದ್ದಕ್ಕಿದ್ದಂತೆ ಬೆಳೆದರೆ, ಅದಕ್ಕೂ ಗಮನಾರ್ಹ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗರಿಕೆ ಹುಲ್ಲು ಕೂಡ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ತುಳಸಿಯನ್ನು ಪೂಜಿಸುವಂತೆಯೇ, ಗರಿಕೆ ಹುಲ್ಲುಗೂ ವಿಶೇಷ ಮಹತ್ವವಿದೆ. ಗಣೇಶನಿಗೆ ಗರಿಕೆ ಅರ್ಪಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತುಳಸಿ ಗಿಡದ ಸುತ್ತಲೂ ಗರಿಕೆ ಹಠಾತ್ತನೆ ಬೆಳೆಯುವುದು ವಿಶೇಷ ಮಹತ್ವವನ್ನು ಹೊಂದಿದೆ.

ಶುಭ ಸುದ್ದಿಯ ಲಕ್ಷಣ:

ನಿಮ್ಮ ಮನೆಯಲ್ಲಿರುವ ತುಳಸಿ ಗಿಡದ ಸುತ್ತಲೂ ಗರಿಕೆ ಹುಲ್ಲು ಇದ್ದಕ್ಕಿದ್ದಂತೆ ಬೆಳೆಯಲು ಪ್ರಾರಂಭಿಸಿದರೆ, ಶೀಘ್ರದಲ್ಲೇ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಗರಿಕೆ ಹುಲ್ಲಿನ ಬೆಳವಣಿಗೆ ಬಹಳ ಶುಭವೆಂದು ಪರಿಗಣಿಸಲಾಗಿದೆ.

ಕೌಟುಂಬಿಕ ಸಂತೋಷ ಮತ್ತು ಸಮೃದ್ಧಿಯ ಸಂಕೇತ:

ಧಾರ್ಮಿಕ ನಂಬಿಕೆಗಳ ಪ್ರಕಾರ, ಗರಿಕೆ ಹುಲ್ಲನ್ನು ಗಣೇಶನಿಗೆ ಪ್ರಿಯವೆಂದು ಪರಿಗಣಿಸಲಾಗುತ್ತದೆ ಮತ್ತು ಗಣೇಶನನ್ನು ಸಮೃದ್ಧಿ, ಸಂತೋಷ ಮತ್ತು ಸಮೃದ್ಧಿಯ ಪೋಷಕ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ನಿಮ್ಮ ಮನೆಯಲ್ಲಿರುವ ತುಳಸಿ ಗಿಡದ ಬಳಿ ಗರಿಕೆ ಹುಲ್ಲು ಬೆಳೆದರೆ, ಅದನ್ನು ಹಲವು ವಿಧಗಳಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಶೀಘ್ರದಲ್ಲೇ ನಿಮ್ಮ ಮನೆಗೆ ಸಮೃದ್ಧಿ ಬರಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ:

ತುಳಸಿ ಗಿಡಗಳ ಬಳಿ ಗರಿಕೆ ನೆಡುವುದರಿಂದ ಆರ್ಥಿಕ ಯೋಗಕ್ಷೇಮ ಸುಧಾರಿಸುತ್ತದೆ. ಇದು ನಿಮಗೆ ಶೀಘ್ರದಲ್ಲೇ ಉತ್ತಮ ಕೊಡುಗೆ ಸಿಗಬಹುದು ಎಂಬುದನ್ನು ಸೂಚಿಸುತ್ತದೆ, ಇದು ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಗೆ ದಾರಿ ಮಾಡಿಕೊಡುತ್ತದೆ ಎಂದು ನಂಬಲಾಗಿದೆ.

ನಕಾರಾತ್ಮಕ ಶಕ್ತಿಯ ಅಂತ್ಯ:

ನಿಮ್ಮ ಮನೆಯಲ್ಲಿರುವ ತುಳಸಿ ಗಿಡದ ಬಳಿ ಗರಿಕೆ ಬೆಳೆಯಲು ಪ್ರಾರಂಭಿಸಿದಾಗ, ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಸಕಾರಾತ್ಮಕ ಶಕ್ತಿಯು ಪ್ರವೇಶಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಇದಲ್ಲದೆ, ಸಂಪತ್ತು ಶೀಘ್ರದಲ್ಲೇ ನಿಮ್ಮ ಮನೆಗೆ ಬರಲಿದೆ ಎಂಬುದರ ಸೂಚನೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಪ್ಪು ಹೆಚ್ಚಾಗಿ ಅಡುಗೆ ಕೆಟ್ಟು ಹೋದ್ರೆ, ರುಚಿ ಸರಿದೂಗಿಸಲು ಈ ಸರಳ ಸಲಹೆಯನ್ನು ಪಾಲಿಸಿ – Kannada News | If Dishes has too much salt, follow this tip to fix it

ಅಡುಗೆಯ ರುಚಿ ಹೆಚ್ಚಿಸುವಲ್ಲಿ ಉಪ್ಪಿನ (salt) ಪಾತ್ರ ಬಹಳ ದೊಡ್ಡದು. ಅದೇ ಒಂದು ವೇಳೆ ಸ್ವಲ್ಪ ಉಪ್ಪು ಜಾಸ್ತಿ ಆದ್ರೂ ಸಹ ಅಡುಗೆಯ ರುಚಿಯೇ ಕೆಟ್ಟು ಹೋಗುತ್ತದೆ. ಈ ರೀತಿ ಉಪ್ಪು ಜಾಸ್ತಿಯಾದಾಗ ಅಯ್ಯೋ ಕಷ್ಟಪಟ್ಟು ಮಾಡಿದ ಅಡುಗೆಯೆಲ್ಲಾ ವೇಸ್ಟ್‌ ಆಯ್ತಲ್ವಾ ಎಂದು ಹಲವರು ಟೆನ್ಷನ್‌ ಮಾಡ್ಕೊಳ್ಳುತ್ತಾರೆ. ಅಡುಗೆಗೆ ಉಪ್ಪು ಹೆಚ್ಚಾದ್ರೆ ಈ ರೀತಿ ಟೆನ್ಷನ್‌ ಮಾಡುವ ಯಾವುದೇ ಅವಶ್ಯಕತೆ ಇಲ್ಲ, ಜಸ್ಟ್‌ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ರುಚಿಯನ್ನು ಸರಿದೂಗಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಡುಗೆಗೆ ಉಪ್ಪು ಜಾಸ್ತಿ ಆದ್ರೆ ಏನು ಮಾಡಬೇಕು?

ಮೊಸರು ಸೇರಿಸಿ: ಉಪ್ಪು ಜಾಸ್ತಿಯಾಗಿ ಅಡುಗೆಯ ರುಚಿ ಕೆಟ್ಟು ಹೋದರೆ ರುಚಿಯನ್ನು ಸರಿದೂರಿಸಲು ನೀವು ಅಡುಗೆಗೆ ಮೊಸರನ್ನು ಸೇರಿಸಬಹುದು. ಅಡುಗೆಗೆ ಎರಡು ಚಮಚ ಮೊಸರು ಸೇರಿಸಿ ಎರಡು ನಿಮಿಷ ಬೇಯಿಸಿ. ಇದು ಉಪ್ಪಿನ ಅಂಶವನ್ನು ಸಮತೋಲನಗೊಳಿಸುತ್ತದೆ ಮತ್ತು ಅಡುಗೆಯ ರುಚಿಯನ್ನು ಸುಧಾರಿಸುತ್ತದೆ.

ಕಡಲೆ ಹಿಟ್ಟು: ನೀವು ಹುರಿದ ಕಡಲೆ ಹಿಟ್ಟನ್ನು ಸಹ ಬಳಸಬಹುದು. ನೀವು ಮಾಡಿದ ಅಡುಗೆಯಲ್ಲಿ ಉಪ್ಪು ಹೆಚ್ಚು ಇದ್ದರೆ, ಅದಕ್ಕೆ ಹುರಿದ ಕಡಲೆ ಹಿಟ್ಟನ್ನು ಸೇರಿಸಿ. ಇದು ಹೆಚ್ಚುವರಿ ಉಪ್ಪನ್ನು ಸಮತೋಲನಗೊಳಿಸುತ್ತದೆ ಮತ್ತು ಅಡುಗೆಯ ರುಚಿಯನ್ನು ಸುಧಾರಿಸುತ್ತದೆ.

ಬೇಯಿಸಿದ ಆಲೂಗಡ್ಡೆ: ಬೇಯಿಸಿದ ಆಲೂಗಡ್ಡೆಯನ್ನು ಬಳಸುವ ಮೂಲಕ ಅಡುಗೆಯಲ್ಲಿನ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಉಪ್ಪು ಹೆಚ್ಚಾಗಿ ರುಚಿ ಕೆಟ್ಟಿದ್ದರೆ ಬೇಯಿಸಿದ ಆಲೂಗಡ್ಡೆಯನ್ನು ಕಟ್‌ ಮಾಡಿ, ನೀವು ತಯಾರಿಸಿಟ್ಟ ಅಡುಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಉಪ್ಪಿನಾಂಶವನ್ನು ಹೀರಿಕೊಳ್ಳುತ್ತದೆ. ಹಸಿ ಆಲೂಗಡ್ಡೆಯ ತುಂಡನ್ನು ಸಹ ಸೇರಿಸಬಹುದು.

ಇದನ್ನೂ ಓದಿ: ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಸರಳ ಸಲಹೆಯನ್ನು ಪಾಲಿಸಿ

ನಿಂಬೆ ರಸ: ಅಡುಗೆಯಲ್ಲಿ ಉಪ್ಪು ಹೆಚ್ಚಾಗಿದ್ದರೆ ಅದನ್ನು ಸಮತೋಲನಗೊಳಿಸಲು ನಿಂಬೆ ರಸ ಕೂಡ ಸಹಕಾರಿಯಾಗಿದೆ. ಹೌದು ಉಪ್ಪು ಜಾಸ್ತಿಯಾದ್ರೆ ಅಡುಗೆಗೆ ಅರ್ಧ ನಿಂಬೆಹಣ್ಣನ್ನು ಹಿಂಡಿ ಚೆನ್ನಾಗಿ ವಿಶ್ರಣ ಮಾಡಿ. ಇದು ಹೆಚ್ಚಾದ ಉಪ್ಪಿನಾಂಶವನ್ನು ಸಮತೋಲನಗೊಳಿಸುತ್ತದೆ.

ತೆಂಗಿನ ಹಾಲು: ನೀವು ಮಾಡಿದ ಗ್ರೇವಿಯ ಉಪ್ಪು ಜಾಸ್ತಿ ಆದ್ರೆ ಅದಕ್ಕೆ ತೆಂಗಿನ ಹಾಲನ್ನು ಸೇರಿಸಬಹುದು. ತೆಂಗಿನ ಹಾಲಿನೊಂದಿಗೆ ಸ್ವಲ್ಪ ನೀರು ಬೆರೆಸಿ ಗ್ರೇವಿಗೆ ಸೇರಿಸಿ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚುವರಿ ಉಪ್ಪನ್ನು ಸಮತೋಲನಗೊಳಿಸುತ್ತದೆ.

ಸಕ್ಕರೆ: ಅಡುಗೆಗೆ ಉಪ್ಪು ಹೆಚ್ಚಾದರೆ ಅದಕ್ಕೆ ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ಸೇರಿಸಿ. ಸಕ್ಕರೆಯ ಸಿಹಿಯು ಉಪ್ಪಿನ ಪ್ರಮಾಣವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:11 pm, Wed, 24 December 25

Source link

‘ಮೈಸಾ’ ಫಸ್ಟ್ ಗ್ಲಿಂಪ್ಸ್: ಸಿಕ್ಕಾಪಟ್ಟೆ ಮಾಸ್ ಅವತಾರದಲ್ಲಿ ರಶ್ಮಿಕಾ ಮಂದಣ್ಣ – Kannada News | Rashmika Mandanna starrer Mysaa movie First Glimpse released

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಚಿತ್ರರಂಗದಲ್ಲಿ ದೊಡ್ಡ ಗೆಲುವು ಕಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಅವರು ಮಿಂಚಿದ್ದಾರೆ. ಹಾಗಂತ ಅವರು ಒಂದೇ ಬಗೆಯ ಸಿನಿಮಾಗಳನ್ನು ಮಾಡುತ್ತಿಲ್ಲ. ಬದಲಿಗೆ, ಬೇರೆ ಬೇರೆ ರೀತಿಯ ಸಿನಿಮಾ ಮತ್ತು ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ಅವರ ‘ದಿ ಗರ್ಲ್​ಫ್ರೆಂಡ್’ ಸಿನಿಮಾ ಗಮನ ಸೆಳೆದಿತ್ತು. ಈಗ ಅವರು ‘ಮೈಸಾ’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ. ಈ ಸಿನಿಮಾದಿಂದ ಫಸ್ಟ್ ಗ್ಲಿಂಪ್ಸ್ (Mysaa First Glimpse) ಬಿಡುಗಡೆ ಆಗಿದೆ.

ಸ್ಟಾರ್ ನಟರಿಗೆ ಜೋಡಿಯಾಗಿ ನಟಿಸಲು ರಶ್ಮಿಕಾ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅದರ ನಡುವೆಯೂ ಅವರು ಹೊಸ ಬಗೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ‘ಮೈಸಾ’ ಸಿನಿಮಾವೇ ಬೆಸ್ಟ್ ಉದಾಹರಣೆ. ಈ ಸಿನಿಮಾದಲ್ಲಿ ಅವರು ಹಿಂದೆಂದೂ ಕಾಣಿಸಿಕೊಳ್ಳದ ಗೆಟಪ್​​ನಲ್ಲಿ ಪ್ರೇಕ್ಷಕರ ಎದುರು ಬರಲಿದ್ದಾರೆ. ಆ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಸಲು ಈ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ.

ರವೀಂದ್ರ ಪುಲ್ಲೆ ಅವರು ‘ಮೈಸಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಾಗಿ ಇದು ಅವರ ಮೊದಲ ಸಿನಿಮಾ. ಹಾಗಿದ್ರೂ ಕೂಡ ಓರ್ವ ಅನುಭವಿ ನಿರ್ದೇಶಕನ ರೀತಿಯಲ್ಲಿ ಅವರು ಸಿನಿಮಾ ಮಾಡಿದ್ದಾರೆ ಎಂಬುದಕ್ಕೆ ಫಸ್ಟ್ ಗ್ಲಿಂಪ್ಸ್ ಟೀಸರ್​​ನಲ್ಲಿ ಸುಳಿವು ಸಿಕ್ಕಿದೆ. ‘ಅನ್‌ಫಾರ್ಮುಲಾ ಫಿಲ್ಮ್ಸ್’ ಸಂಸ್ಥೆಯ ಮೂಲಕ ‘ಮೈಸಾ’ ಸಿನಿಮಾ ನಿರ್ಮಾಣ ಆಗುತ್ತಿದೆ.

ಮೈಸಾ ಸಿನಿಮಾ ಫಸ್ಟ್ ಗ್ಲಿಂಪ್ಸ್:

ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ಹಿಂದೆ, ತಮಿಳು ಮುಂತಾದ ಭಾಷೆಗಳಲ್ಲಿ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಭಾರಿ ಬಜೆಟ್​​ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಕೈಯಲ್ಲಿ ಬೇಡಿ, ಬಂದೂಕು, ಮೈಯೆಲ್ಲಾ ರಕ್ತ, ಮುಖದಲ್ಲಿ ನೋವು, ಆಕ್ರೋಶ.. ಹೀಗೆ ಮೊದಲ ಲುಕ್​​ನಲ್ಲೇ ಕಥೆಯ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡಲಾಗಿದೆ. ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಈ ಫಸ್ಟ್ ಗ್ಲಿಂಪ್ಸ್ ಇಷ್ಟ ಆಗಿದೆ. ಸಿನಿಮಾ ನೋಡಲು ತಾವೆಲ್ಲ ಕಾಯುತ್ತಿರುವುದಾಗಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮದುವೆಗೆ ಮುನ್ನ ಗೆಳತಿಯರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿದ ರಶ್ಮಿಕಾ: ಚಿತ್ರಗಳು ಇಲ್ಲಿವೆ

‘ಮೈಸಾ’ ಸಿನಿಮಾದ ಈ ಪಾತ್ರಕ್ಕಾಗಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆ ಪಾತ್ರದ ಹಿನ್ನೆಲೆ ಹೇಗಿದೆ ಎಂಬುದನ್ನು ತಾಯಿಯ ಧ್ವನಿ ವಿವರಿಸುತ್ತದೆ. ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಶ್ರೀಯಾಸ್ ಪಿ. ಕೃಷ್ಣ ಅವರ ಛಾಯಾಗ್ರಹಣ, ಜೇಕ್ಸ್ ಬೆಜೋಯ್ ಅವರ ಸಂಗೀತ, ಆಂಡಿ ಲಾಂಗ್ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಶ್ಲೀಲ ಕಮೆಂಟ್ ಹಾಕಿದವರಿಗೆ ಸಂಕಷ್ಟ; ದೂರು ದಾಖಲಿಸಿ, ದಾಖಲೆ ಕೊಟ್ಟ ವಿಜಯಲಕ್ಷ್ಮೀ – Kannada News | Vijayalakshmi Files Cyber Complaint: Darshan Wife Battles Online Hate and Fan Wars

ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಹಾಕುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳು ಇದಕ್ಕೆ ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ. ಈಗ ವಿಜಯಲಕ್ಷ್ಮೀ ಕೂಡ ಇದರಿಂದ ತೊಂದರೆ ಅನುಭವಿಸಿದ್ದಾರೆ. ಈ ಸಂಬಂಧ ಅವರು ದೂರು ಕೂಡ ದಾಖಲು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಂದ ಹೇಟ್ ಕಮೆಂಟ್ ಹಾಗೂ ಮೆಸೇಜ್​​ಗಳ ಸ್ಕ್ರೀನ್​ಶಾಟ್​​ಗಳನ್ನು ಸೈಬರ್ ಪೊಲೀಸರಿಗೆ ನೀಡುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.

ಸುದೀಪ್ ಅವರು ಇತ್ತೀಚೆಗೆ ‘ಸಿನಿಮಾ ರಿಲೀಸ್ ವೇಳೆ ಒಂದು ಪಡೆ ಯುದ್ಧಕ್ಕೆ ರೆಡಿ ಇದೆ’ ಎಂದಿದ್ದರು. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ ಮಾತು ಎಂದು ಬಣ್ಣಿಸಲಾಯಿತು. ಆ ಬಳಿಕ ವಿಜಯಲಕ್ಷ್ಮೀ ಅವರು ನೇರವಾಗಿ ಅಖಾಡಕ್ಕೆ ಇಳಿದು, ಸುದೀಪ್​​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಆ ಬಳಿಕ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇದ್ದವು. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮೀ ಅವರಿಗೆ ಹೇಟ್ ಕಮೆಂಟ್ ಹೆಚ್ಚಿದೆ.

ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಜಯಲಕ್ಷ್ಮೀ ದೂರು ದಾಖಲು ಮಾಡಿದ್ದಾರೆ. ತಮಗೆ ಬಂದ ಹೇಟ್ ಕಮೆಂಟ್​ ಸ್ಕ್ರೀನ್​ಶಾಟ್ ಹಾಗೂ ಆಯಾ ಖಾತೆಗಳ ವಿವರಗಳನ್ನು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸೈಬರ್ ಅಪರಾಧ ವಿಭಾಗದ ಇನ್ಸ್​ಪೆಕ್ಟರ್​ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸುದೀಪ್ ಫ್ಯಾನ್ಸ್?

ವಿಜಯಲಕ್ಷ್ಮೀ ಖಾತೆಗೆ ಬಂದ ಕಾಮೆಂಟ್​​ಗಳು ಸುದೀಪ್ ಅಭಿಮಾನಿಗಳದ್ದೇ ಎಂಬ ಅನುಮಾನ ಮೂಡಿದೆ. ಏಕೆಂದರೆ ಕೆಲವು ಖಾತೆಗಳು ಸುದೀಪ್ ಅಭಿಮಾನಿಗಳ ಹೆಸರಲ್ಲಿ ಇದೆ. ಇನ್ನೂ ಕೆಲವರು ಸುದೀಪ್ ಹೆಸರು ಬಳಸಿದ್ದಾರೆ. ಇನ್ನೂ ಕೆಲವರು ಸುದೀಪ್ ಸ್ಟಿಕ್ಕರ್ ಬಳಸಿದ್ದಾರೆ. ಇವರ ಪೈಕಿ ಎಷ್ಟು ಮಂದಿ ನಿಜವಾದ ಸುದೀಪ್ ಅಭಿಮಾನಿಗಳು ಎಂಬುದು ತನಿಖೆ ಬಳಿಕವೇ ತಿಳಿಯಬೇಕಿದೆ.

ಇದನ್ನೂ ಓದಿ: ‘ಅವರು ಯಾವ ನೋವಲ್ಲಿದ್ದಾರೋ ಗೊತ್ತಿಲ್ಲ’; ವಿಜಯಲಕ್ಷ್ಮೀ ಬಗ್ಗೆ ಕಿಚ್ಚನ ಮಾತು

ಡಿ ಬಾಸ್ ಫ್ಯಾನ್ಸ್ ಅರೆಸ್ಟ್

ಈ ಮೊದಲು ರಮ್ಯಾ ಅವರು ಇದೇ ರೀತಿಯ ಕ್ರಮ ಕೈಗೊಂಡಿದ್ದರು. ತಮಗೆ ಬಂದ ಅಶ್ಲೀಲ ಕಮೆಂಟ್ ಹಾಗೂ ಮೆಸೇಜ್​​ಗಳನ್ನು ನೀಡಿ ದೂರು ದಾಖಲಿಸಿದ್ದರು. ಕೆಲ ದರ್ಶನ್ ಅಭಿಮಾನಿಗಳನ್ನು ಕೇಸ್​​ನಲ್ಲಿ ಅರೆಸ್ಟ್ ಮಾಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಣ್ಣೆ ನಗರಿ ಹುಡುಗಿಗೆ ಮನಸೋತ ನ್ಯೂಜಿಲೆಂಡ್‌ ಯುವಕ! ಅಪ್ಪಟ ಹಿಂದೂ ಸಂಪ್ರದಾಯದಂತೆ ದಾವಣಗೆರೆಯಲ್ಲಿ ನಡೀತು ಅದ್ದೂರಿ ವಿವಾಹ – Kannada News | New Zealand man marries Davanagere girl: Embraces Hindu Rituals

ಕ್ಯಾಂಬೆಲ್, ನ್ಯೂಜಿಲೆಂಡ್‌ನ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಇಷ್ಟಪಟ್ಟಿದ್ದಾರೆ. ಮದುವೆಗೆ ಒಂದು ವಾರದಿಂದ ಪೂರ್ವತಯಾರಿ ಆಗಿದ್ದು, ಕುಟುಂಬಸ್ಥರು ಶೇರ್ವಾನಿ, ಸೀರೆ ಧರಿಸಿ ತಯಾರಾದರು. ಅರ್ಚನಾ, ಶಾಸ್ತ್ರ ಪೂಜೆಗಳು, ಅರುಂಧತಿ ನಕ್ಷತ್ರ ಮತ್ತು ಎಲ್ಲಾ ಸಂಪ್ರದಾಯಿಕ ವಿಧಿಗಳನ್ನು ಪಾಲಿಸಿ ಮದುವೆ ನಡೆದಿದೆ. ಪ್ರತಿ ಕ್ಷಣವೂ ಸಾಂಸ್ಕೃತಿಕ ವೈಭವ ಮತ್ತು ಪವಿತ್ರತೆಯನ್ನು ತೋರಿಸುತ್ತಿದೆ.

Source link

Hubli: ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು; ಅಷ್ಟಕ್ಕೂ ಆಗಿದ್ದೇನು? – Kannada News | Four Shops Gutted in Massive Blaze at Hubballis Kundagola Cross

ಹುಬ್ಬಳ್ಳಿ, ಡಿಸೆಂಬರ್​​ 24: ಕುಂದಗೋಳ ಕ್ರಾಸ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ಕು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಮಾಹಿತಿಗಳ ಪ್ರಕಾರ, ಬೆಂಕಿಯು ಮೊದಲು ಒಂದು ಡಾಬಾದಲ್ಲಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ಹಬ್ಬಿದ ಪರಿಣಾಮ ನಾಲ್ಕು ಶಾಪ್​​ಗಳು ಅಗ್ನಿಗೆ ಆಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ; ಆರೋಪಿ ಅರೆಸ್ಟ್ – Kannada News | Instagram Love Ends in Street Attack: Bengaluru Man Assaults Woman, Arrested

ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ; ಆರೋಪಿ ಅರೆಸ್ಟ್

ಬೆಂಗಳೂರು, ಡಿಸೆಂಬರ್ 24: ಇನ್ಸ್ಟಾಗ್ರಾಮ್ ಸಿಕ್ಕ ಯುವಕನೊಬ್ಬ ಪ್ರೀತಿ ವಿಚಾರವಾಗಿ ನಡು ರಸ್ತೆಯಲ್ಲೇ ಯುವತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಿ.ಜಿ ಬಳಿ ಕಾರಿನಲ್ಲಿ ಬಂದ ಯುವಕ, ಯುವತಿಗೆ ಹಲವು ಬಾರಿ ಥಳಿಸಿದ್ದು, ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಯುವಕ

ಆರೋಪಿಯನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದ್ದು, ಸಂತ್ರಸ್ತ ಯುವತಿಯೊಂದಿಗೆ 2024ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು ಎನ್ನಲಾಗಿದೆ. ಪರಿಚಯದ ಬಳಿಕ ಇಬ್ಬರ ನಡುವೆ ಫೋನ್ ಕರೆ ಮತ್ತು ಮೆಸೇಜ್ ಮೂಲಕ ಸಂಪರ್ಕ ಮುಂದುವರಿದಿತ್ತು. ಆದರೆ ನವೀನ್ ಕುಮಾರ್ ಯುವತಿಯನ್ನು ಪ್ರೀತಿಸಬೇಕು ಎಂದು ಬಲವಂತ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಇದರಿಂದ ಇಬ್ಬರ ನಡುವೆ ಪ್ರೀತಿ ಹಾಗೂ ಹಣಕಾಸಿನ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

ಸಿಸಿ ಟಿವಿ ದೃಶ್ಯ ಇಲ್ಲಿದೆ

ಇದನ್ನೂ ಓದಿ ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!

ಪರಾರಿಯಾಗಿದ್ದ ಆರೋಪಿಯ ಬಂಧನ

ಸೋಮವಾರ ಜ್ಞಾನಭಾರತಿಯಲ್ಲಿರುವ ಯುವತಿಯ ಪಿ.ಜಿ ಬಳಿ ಕಾರಿನಲ್ಲಿ ಬಂದ ನವೀನ್, ಹಾರನ್ ಹೊಡೆದು ಯುವತಿಯನ್ನು ಕರೆಯಲು ಯತ್ನಿಸಿದ್ದಾನೆ. ಈ ವೇಳೆ ಯುವತಿಯ ಸ್ನೇಹಿತೆ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿದ್ದು, ಯುವತಿ ಹಿಂದಕ್ಕೆ ಸರಿಯಲು ಯತ್ನಿಸಿದ್ದಾಳೆ. ಆದರೆ ನವೀನ್ ಆಕೆಯ ವ್ಯಾನಿಟಿ ಬ್ಯಾಗ್ ಕಸಿದು ಅದರೊಳಗೆ ಹುಡುಕಾಟ ನಡೆಸಿ, ಯುವತಿಯ ಹಿಂದೆ ಓಡಿ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಎರಡು ಬಾರಿಗೂ ಹೆಚ್ಚು ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಘಟನೆಯ ನಂತರ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದರೂ, ಜ್ಞಾನಭಾರತಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಪ್ರದೀಪ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:48 pm, Wed, 24 December 25

Source link

Exit mobile version