ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ಗಿಲ್ಲ ಜಾಗ – Kannada News | No Darshan photo in Mahesh Babu’s AMB Cinemas Bengaluru

ಮಹೇಶ್ ಬಾಬು (Mahesh Babu) ಭಾರತೀಯ ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರು. ಸ್ಟಾರ್ ನಟರಾಗಿರುವ ಜೊತೆಗೆ ಮಹೇಶ್ ಬಾಬು ಒಳ್ಳೆಯ ಉದ್ಯಮಿಯೂ ಹೌದು. ಹಲವು ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಮಹೇಶ್ ಬಾಬು. ಅವುಗಳಲ್ಲಿ ಚಿತ್ರಮಂದಿರ ಪ್ರದರ್ಶನವೂ ಹೌದು. ಮಹೇಶ್ ಬಾಬು ಅವರು ಎಎಂಬಿ ಹೆಸರಿನಲ್ಲಿ ಮಲ್ಟಿಪ್ಲೆಕ್ಸ್​ ಚಿತ್ರಮಂದಿರಗಳನ್ನು ನಡೆಸುತ್ತಾರೆ. ಈಗಾಗಲೇ ಹೈದರಾಬಾದ್​​ನಲ್ಲಿ ಹಾಗೂ ಇನ್ನೂ ಕೆಲವೆಡೆ ಐಶಾರಾಮಿ ಮಲ್ಟಿಪ್ಲೆಕ್ಸ್​ಗಳನ್ನು ಮಹೇಶ್ ಬಾಬು ಹೊಂದಿದ್ದು, ಇದೀಗ ಬೆಂಗಳೂರಿನಲ್ಲೂ ಎಎಂಬಿಯನ್ನು ಪ್ರಾರಂಭಿಸಿದ್ದಾರೆ.

ಬೆಂಗಳೂರಿನ ಐಕಾನಿಕ್ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಕಪಾಲಿ ಚಿತ್ರಮಂದಿರ ಇದ್ದ ಸ್ಥಳದಲ್ಲಿಯೇ ಇದೀಗ ಮಹೇಶ್ ಬಾಬು ಅವರ ಎಎಂಬಿ ಪ್ರಾರಂಭ ಆಗಿದೆ. ಅತ್ಯುತ್ತಮ ಸೀಟಿಂಗ್ ವ್ಯವಸ್ಥೆ, ಸೌಂಡ್, ಸ್ಕ್ರೀನ್, ಗುಣಮಟ್ಟದ ಆಹಾರ, ಶುಚಿತ್ವ ಎಲ್ಲವನ್ನೂ ಸಹ ಎಎಂಬಿ ಒಳಗೊಂಡಿದೆ. ಇವುಗಳ ಜೊತೆಗೆ ಅತ್ಯುತ್ತಮ ಇಂಟೀರಿಯರ್ ಡೆಕೊರೇಷನ್ ಅನ್ನು ಸಹ ಎಎಂಬಿ ಒಳಗೊಂಡಿದೆ. ಕನ್ನಡದ ಸ್ಟಾರ್ ನಟರುಗಳ ಚಿತ್ರಗಳನ್ನು ಸಹ ಇಲ್ಲಿ ಪ್ರದರ್ಶನ ಮಾಡಲಾಗಿದೆ. ಆದರೆ ದರ್ಶನ್ ಅವರ ಚಿತ್ರವನ್ನು ಪ್ರದರ್ಶಿಸಲಾಗಿಲ್ಲ.

ಕನ್ನಡದ ಪ್ರಸ್ತುತ ಜನಪ್ರಿಯ ನಟರುಗಳ ಚಿತ್ರಗಳನ್ನು ಎಎಂಬಿಯ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ಪ್ರದರ್ಶಿಸಲಾಗಿದೆ. ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಯಶ್, ಗಣೇಶ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ, ರಕ್ಷಿತ್ ಶೆಟ್ಟಿ ಅವರುಗಳ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಆದರೆ ಇಲ್ಲಿ ದರ್ಶನ್ ಚಿತ್ರವನ್ನು ಪ್ರದರ್ಶಿಸಲಾಗಿಲ್ಲ. ಇದು ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ:‘ಅವತಾರ್ 3’ ಸಿನಿಮಾನಲ್ಲಿ ಮಹೇಶ್ ಬಾಬು? ಇದೆಂಥ ಅಚ್ಚರಿ

ಇತ್ತೀಚೆಗಷ್ಟೆ ನಿರ್ದೇಶಕ ರವಿ ಶ್ರೀವತ್ಸ ಅವರು ಎಎಂಬಿಗೆ ಭೇಟಿ ನೀಡಿದ್ದರು. ಅಲ್ಲಿ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ನಟ ದರ್ಶನ್ ಚಿತ್ರ ಇಲ್ಲದೇ ಇರುವುದನ್ನು ಗಮನಿಸಿ ಚಿತ್ರವನ್ನು ಟ್ವೀಟ್​ ಮಾಡಿದ್ದಾರೆ. ‘ಮಹೇಶ್ ಬಾಬು ಅವರೇ ಬೆಂಗಳೂರಿಗೆ ಸ್ವಾಗತ, ಎಎಂಬಿ ಸ್ಕ್ರೀನ್ಸ್​​ಗೆ ಭೇಟಿ ನೀಡಿದ್ದೆ. ಅದ್ಭುತವಾಗಿದೆ. ಗುಣಮಟ್ಟದ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದಕ್ಕೆ ಧನ್ಯವಾದಗಳು, ಒಳ್ಳೆಯದಾಗಲಿ. ಆದರೆ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ದರ್ಶನ್ ಅವರ ಫೋಟೊ ಮಿಸ್ ಆಗಿದೆ, ಇದು ನೋಡಿ ಬೇಸರವಾಯ್ತು’ ಎಂದಿದ್ದಾರೆ.

ನಟ ದರ್ಶನ್ ಪ್ರಸ್ತುತ ರೇಣುಕಾ ಸ್ವಾಮಿ ಕೊಲೆ ಕೇಸಿನ ಆರೋಪಿ ಆಗಿದ್ದು, ಕೊಲೆ ಕೇಸೊಂದರ ಆರೋಪಿಯ ಚಿತ್ರ ಕಲಾವಿದರ ಗ್ಯಾಲೆರಿಯಲ್ಲಿ ಹಾಕುವುದು ಬೇಡವೆಂದು ಎಎಂಬಿ ವ್ಯವಸ್ಥಾಪನ ಮಂಡಳಿ ನಿರ್ಣಯಿಸಿರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

U19 World Cup 2026: ಅಚ್ಚರಿಯ ಫಲಿತಾಂಶ; ಅಫ್ಘಾನಿಸ್ತಾನ ವಿರುದ್ಧ ಸೋತ ದಕ್ಷಿಣ ಆಫ್ರಿಕಾ – Kannada News | U19 World Cup: Afghanistan Stuns South Africa by 28 Runs in Group D Upset

ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ 2026 ರ ಅಂಡರ್-19 ವಿಶ್ವಕಪ್ (U19 World Cup) ಪ್ರಾರಂಭವಾಗಿದೆ. ಅದರಂತೆ ಪಂದ್ಯಾವಳಿಯ 6ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ದಕ್ಷಿಣ ಆಫ್ರಿಕಾ ಹೀನಾಯ ಸೋಲನ್ನು ಅನುಭವಿಸಿದೆ. ಗ್ರೂಪ್ ಡಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 28 ರನ್‌ಗಳಿಂದ ಸೋಲಿಸುವ ಮೂಲಕ ಅಫ್ಘಾನಿಸ್ತಾನ (Afghanistan vs South Africa) ಎಲ್ಲರನ್ನೂ ಅಚ್ಚರಿಗೊಳಿಸಿ ಗೆಲುವಿನ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 266 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 238 ರನ್​ಗಳಿಗೆ ಆಲೌಟ್ ಆಗುವ ಮೂಲಕ 28 ರನ್​ಗಳಿಂದ ಸೋಲೊಪ್ಪಿಕೊಂಡಿತು.

266 ರನ್​ ಕಲೆಹಾಕಿದ ಅಫ್ಘಾನಿಸ್ತಾನ

ವಿಶ್ವಕಪ್‌ನ ಈ ಆರನೇ ಪಂದ್ಯವು ನಮೀಬಿಯಾದ ವಿಂಡ್‌ಹೋಕ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 8 ವಿಕೆಟ್‌ಗೆ 266 ರನ್ ಗಳಿಸಿತು. ಮೊದಲ ವಿಕೆಟ್ ಬೇಗನೆ ಕಳೆದುಕೊಂಡ ನಂತರ, ಖಾಲಿದ್ ಅಹ್ಮದ್‌ಜೈ ಮತ್ತು ಫೈಸಲ್ ಶಿನೋಜಾಡಾ 152 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ನೀಡಿದರು. ಇಬ್ಬರೂ ಅರ್ಧಶತಕ ಬಾರಿಸಿದರಾದರೂ ಶತಕದ ಗಡಿ ತಲುಪುವ ಮೊದಲೇ ಔಟಾದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೇವಲ ನಾಲ್ಕು ಎಸೆತಗಳ ಅಂತರದಲ್ಲಿ ಔಟಾದರು. ನಂತರ ಉಜೈರುಲ್ಲಾ ನಿಯಾಜೈ 51 ಎಸೆತಗಳಲ್ಲಿ 51 ರನ್ ಗಳಿಸಿ ತಂಡವನ್ನು 266 ರನ್​ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

4 ಆಟಗಾರರು ರನೌಟ್​ಗೆ ಬಲಿ

ಮತ್ತೊಂದೆಡೆ ಕಳಪೆ ಆರಂಭ ಪಡೆದ ದಕ್ಷಿಣ ಆಫ್ರಿಕಾ ಕೇವಲ 49 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಹತ್ತು ವಿಕೆಟ್‌ಗಳಲ್ಲಿ ನಾಲ್ಕು ವಿಕೆಟ್‌ಗಳು ರನ್ ಔಟ್‌ಗಳ ಮೂಲಕ ಬಿದ್ದಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಜೇಸನ್ ರೋಲ್ಯಾಂಡ್ಸ್ 98 ರನ್ ಬಾರಿಸಿ ರನೌಟ್​ಗೆ ಬಲಿಯಾದರು. ಉಳಿದಂತೆ ಯಾವ ಬ್ಯಾಟ್ಸ್​ಮನ್​ಗೂ 30 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಮೂವರು ಬ್ಯಾಟ್ಸ್​ಮನ್​ಗಳು 20 ರನ್​ಗಳ ಗಡಿ ದಾಟಿದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲಿಲ್ಲ. ಇದು ಮಾತ್ರವಲ್ಲದೆ ದಕ್ಷಿಣ ಆಫ್ರಿಕಾ ನಿಯಮಿತ ಅಂತರದಲ್ಲಿ ವಿಕೆಟ್​ ಕಳೆದುಕೊಂಡಿದ್ದರಿಂದ ಗೆಲುವು ಕಷ್ಟಕರವಾಯಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡವು 47.4 ಓವರ್‌ಗಳಲ್ಲಿ 238 ರನ್‌ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:59 pm, Sat, 17 January 26

Source link

ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ? ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ – Kannada News | No New Power Tariff Hike Proposal to KERC: BESCOM MD Clarifie

ಬೆಂಗಳೂರು, ಜನವರಿ 17: ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ನಾವು ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಬೆಸ್ಕಾಂ ಎಂಡಿ ಶಿವಶಂಕರ್ ಸ್ಪಷ್ಟನೆ ನೀಡಿದ್ದಾರೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ಅವರು, 2025-26, 2026-27, 2027-28ರ ದರ ನಿಗದಿ ಆಗಿ ಹೋಗಿದೆ. 2024-25ರಲ್ಲಿ ಬೆಸ್ಕಾಂಗೆ 2,800 ಕೋಟಿ ರೂ ಆದಾಯ ಕೊರತೆ ಉಂಟಾಗಿತ್ತು. ಆ ವರ್ಷದಲ್ಲಿ ಆದಾಯ ಕೊರತೆಯ ಬಗ್ಗೆ KERC ಗಮನಕ್ಕೆ ತಂದಿದ್ದೇವೆ. ನಷ್ಟ ಸರಿದೂಗಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಸದ್ಯ 2024-25ನೇ ಆರ್ಥಿಕ ವರ್ಷದ ವರದಿಯನ್ನು KERCಗೆ ಸಲ್ಲಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ಯೋಜನೆಗೆ ನಮ್ಮ ಒಪ್ಪಿಗೆ ಇಲ್ಲ, ಏನ್‌ ಆಗುತ್ತೋ ಆಗಲಿ: ಶಾಸಕ ಬಾಲಕೃಷ್ಣ ಮುಂದೆ ಅಬ್ಬರಿಸಿದ ರೈತ ಮಹಿಳೆ – Kannada News | MLA Balakrishna Addresses Farmer Concerns Amidst Bidadi Township Project Meeting

ರಾಮನಗರ, ಜ.17: ಜಿಲ್ಲೆಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬಿಡದಿ ಬಳಿಯ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಯೋಜನೆ ಕುರಿತು ನಡೆದ ಸಭೆಯಲ್ಲಿ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ರೈತರೊಂದಿಗೆ ಮಾತುಕತೆ ನಡೆಸಿದರು. ಸಭೆಯು 9 ಕಂದಾಯ ಗ್ರಾಮಗಳ 26 ಹಳ್ಳಿಗಳ ರೈತರ ಅರ್ಜಿ ಸ್ವೀಕಾರಕ್ಕೂ ಅವಕಾಶ ನೀಡಿತ್ತು. ಸಭೆಯ ಆರಂಭದಲ್ಲಿ ಶಾಸಕ ಬಾಲಕೃಷ್ಣ ಅವರು, ಭೂಸ್ವಾಧೀನ ಪ್ರಕ್ರಿಯೆಯು 15-20 ವರ್ಷಗಳ ಹಿಂದೆ ಆಗಿದ್ದು, ಈಗ ದಾಖಲಾತಿಗಳನ್ನು ಸರಿಪಡಿಸುವ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಡೆಯುವ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ಸರಕಾರವು ಈ ದರವನ್ನು ನಿಗದಿಪಡಿಸಿಲ್ಲ. ಎಂದು ಹೇಳಿದ್ದಾರೆ. ಈ ವೇಳೆ ಸಭೆಯಲ್ಲಿದ್ದ ರೈತ ಮಹಿಳೆಯರು, ಭೂಸ್ವಾಧೀನ ಪ್ರಕ್ರಿಯೆ ಮತ್ತು ಸರಕಾರ ನಿಗದಿಪಡಿಸಿದ ಪರಿಹಾರ ದರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಾವು ನಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ, ಈ ಯೋಜನೆಗೆ ನಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿದರು. “ಸರ್ಕಾರಕ್ಕೆ ಧಿಕ್ಕಾರ”, “ನ್ಯಾಯ ಬೇಕು, ಇದು ನಮ್ಮ ಹಕ್ಕು”, “ರೈತರಿಗೆ ಜಯವಾಗಲಿ” ಎಂಬ ಘೋಷಣೆಗಳನ್ನು ಕೂಗಿದರು. ಭೂಮಿ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಪ್ರಶ್ನಿಸಿ, ತಮ್ಮ ಅರ್ಜಿಯನ್ನು ಅಂಗೀಕರಿಸಬೇಕು ಮತ್ತು ತಮ್ಮ ಬೇಡಿಕೆಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

‘ಇಲ್ಲೇ ನಿನ್ನ ಹೆಣ ಬೀಳತ್ತೆ!’ ಸಿಎಂ ತವರಲ್ಲೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ! – Kannada News | Mysuru: Female Officer Threatened During NIMHANS Land Survey in CM’s Home land

‘ಇಲ್ಲೇ ನಿನ್ನ ಹೆಣ ಬೀಳತ್ತೆ’ ಸಿಎಂ ತವರಲ್ಲೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ!

ಮೈಸೂರು, ಜನವರಿ 17: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲೇ ಮಹಿಳಾ ಸರ್ಕಾರಿ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ (Mysore) ಗುಡಮಾದನಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 31ರಂದು ನಡೆದ ಈ ಪ್ರಕರಣದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಜಮೀನು ಪರಿಶೀಲನೆಗೆ ತೆರಳಿದ ಅಧಿಕಾರಿಗಳಿಗೆ ನಿಂದನೆ

ಗುಡಮಾದನಹಳ್ಳಿಯಲ್ಲಿ ನಿಮ್ಹಾನ್ಸ್ ಮಾದರಿಯ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ವೆ ನಂ. 8ರಲ್ಲಿ 5 ಎಕರೆ 5 ಗುಂಟೆ, ಸರ್ವೆ ನಂ. 60ರಲ್ಲಿ 6 ಎಕರೆ 10 ಗುಂಟೆ ಹಾಗೂ ಸರ್ವೆ ನಂ. 68ರಲ್ಲಿ 8 ಎಕರೆ 25 ಗುಂಟೆ ಸೇರಿ ಒಟ್ಟು 20 ಎಕರೆ ಭೂಮಿಯನ್ನು ಆಸ್ಪತ್ರೆಗಾಗಿ ಮೀಸಲಿಡಲಾಗಿದೆ. ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆಯಾಗಿರುವ ಆಸ್ಪತ್ರೆಯ ಜಾಗ ಗುರುತಿಸುವ ಮತ್ತು ಸ್ವಾಧೀನ ಪ್ರಕ್ರಿಯೆಯ ಹಿನ್ನೆಲೆಯಲ್ಲಿ, ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಜಿ. ಭವ್ಯಾ ಮತ್ತು ಗ್ರಾಮ ಸಹಾಯಕ ನವೀನ್ ಕುಮಾರ್ ಸೇರಿ ಜಮೀನು ಪರಿಶೀಲನೆಗೆ ತೆರಳಿದ್ದರು.

ನಿಂದನೆಯ ದೃಶ್ಯ ಮೊಬೈಲ್​ನಲ್ಲಿ ಸೆರೆ

ಪರಿಶೀಲನೆ ವೇಳೆ ಅನಧಿಕೃತವಾಗಿ ಅಡಕೆ ತೋಟ ನಿರ್ಮಿಸಿಕೊಂಡಿದ್ದ ಜಿ.ಎಂ. ಪುಟ್ಟಸ್ವಾಮಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ? ಮೊದಲು ತಹಶೀಲ್ದಾರ್ ತಲೆ ತೆಗೆಯಬೇಕು ಎಂದು ಧಮ್ಕಿ ಹಾಕಿರುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ. ಬಳಿಕ ಪುಟ್ಟಸ್ವಾಮಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿಂತಿದ್ದ ಪಿಕಪ್​​ ಟ್ರಕ್​​​ಗೆ ಶಾಲಾ ಮಕ್ಕಳಿದ್ದ ಓಮಿನಿ ಡಿಕ್ಕಿ: ನಡು ರಸ್ತೆಯಲ್ಲಿ ಒದ್ದಾಡಿದ ಮಕ್ಕಳು

ಕಾರವಾರ, ಜ.17: ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಓಮಿನಿ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹಳೆ ಬಸ್ ನಿಲ್ಧಾಣದ ಬಳಿ ನಡೆದಿದೆ. ಅಪಘಾತದಲ್ಲಿ ಚಾಲಕ ಸೇರಿ ನಾಲ್ವರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಕುಮಟಾದ ಡಾ.ಎ.ವಿ.ಬಾಳಿಗಾ ಆಂಗ್ಮ ಮಾಧ್ಯಮ ಶಾಲೆಯ ವಾಹನ ಎಂದು ಹೇಳಲಾಗಿದೆ. ತನಿಷ್ಕ (15), ಅದ್ವಿತ್ (12), ಅರ್ಜುನ್ (13), ಆಯಿರಾ (10) ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಇದೀಗ ಗಾಯಾಳುಗಳಿಗೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುವ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಕುಮಟಾ ಪೊಲೀಸರಿಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ಮಗನ ದಾಖಲೆ ಮುರಿದ ಅಪ್ಪ: ‘RRR’ ಹಿಂದಿಕ್ಕಿದ ‘MSVPG’ – Kannada News | Megastar Chiranjeevi movie breaks RRR record in fifth day collection

ಸಂಕ್ರಾಂತಿಗೆ ತೆಲುಗಿನ ಹಲವು ಸಿನಿಮಾಗಳು ಬಿಡುಗಡೆ ಆಗಿವೆ. ಪ್ರಭಾಸ್ (Prabhas) ಸಿನಿಮಾ ಸೇರಿದಂತೆ, ಒಟ್ಟು ಐದು ದೊಡ್ಡ ಸಿನಿಮಾಗಳೇ ಬಿಡುಗಡೆ ಆಗಿವೆ. ಆದರೆ ಗೆದ್ದಿರುವುದು ಮೆಗಾಸ್ಟಾರ್ ಚಿರಂಜೀವಿ ಮಾತ್ರ. ಚಿರಂಜೀವಿ ನಟಿಸಿರುವ ‘ಮನ ಶಂಕರ ವರ ಪ್ರಸಾದ್ ಗಾರು’ (MSVPG) ಸಿನಿಮಾ ಇತರೆ ಸಿನಿಮಾಗಳನ್ನು ಬಾಕ್ಸ್ ಆಫೀಸ್​​ನಲ್ಲಿ ಹಿಂದಿಕ್ಕಿದೆ. ಅದು ಮಾತ್ರವೇ ಅಲ್ಲದೆ ಈ ಸಿನಿಮಾ ತೆಲುಗು ಚಿತ್ರರಂಗದ ಇತ್ತೀಚೆಗಿನ ಟಾಪ್ ಸಿನಿಮಾಗಳಲ್ಲಿ ಒಂದಾಗಿರುವ ‘ಆರ್​​ಆರ್​​ಆರ್’ ಸಿನಿಮಾದ ಒಂದು ದಾಖಲೆಯನ್ನೇ ಮುರಿದು ಹಾಕಿದೆ.

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಜನವರಿ 12 ರಂದು ಬಿಡುಗಡೆ ಆಗಿದ್ದು, ಬಿಡುಗಡೆ ಆದ ಮೊದಲ ದಿನ ಸುಮಾರು 84 ಕೋಟಿ ಹಣ ಗಳಿಸಿತ್ತು. ಅದಾದ ಬಳಿಕವೂ ಸಹ ಸಿನಿಮಾ ಕಲೆಕ್ಷನ್​​ನಲ್ಲಿ ಇಳಿಕೆ ಆಗಿಲ್ಲ. ಅದರಲ್ಲೂ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲೆಕ್ಷನ್ ಗಮನಾರ್ಹ ಮಟ್ಟದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಸಿನಿಮಾ ಬಿಡುಗಡೆ ಆಗಿ ವಾರವಾಗುತ್ತಾ ಬರುತ್ತಿದ್ದರೂ ಸಿನಿಮಾ ಈಗಲೂ ಡಬಲ್ ಡಿಜಿಟ್ ಗಳಿಕೆ ಮಾಡುತ್ತಿದೆ.

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಬಿಡುಗಡೆ ಆದ ಐದನೇ ದಿನ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ 14.50 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಇದು ಕಡಿಮೆ ಮೊತ್ತವಲ್ಲ. ‘ಆರ್​​ಆರ್​​ಆರ್​ಆರ್’ ಸಿನಿಮಾ ಸಹ ಬಿಡುಗಡೆ ಆದ ಐದನೇ ದಿನ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರಲಿಲ್ಲ. ‘ಆರ್​​ಆರ್​​ಆರ್’ ಸಿನಿಮಾ ಐದನೇ ದಿನ ಗಳಿಸಿದ್ದಿದ್ದು 13 ಕೋಟಿ ರೂಪಾಯಿಗಳು ಆದರೆ ‘ಶಂಕರ ವರ ಪ್ರಸಾದ್’ ಗಳಿಸಿರುವುದು 14.50 ಕೋಟಿ. ಆ ಮೂಲಕ ‘ಆರ್​​ಆರ್​​ಆರ್’ ಸಿನಿಮಾದ ದಾಖಲೆಯನ್ನೇ ಮುರಿದಿದೆ ಚಿರಂಜೀವಿ ಸಿನಿಮಾ. ಆ ಮೂಲಕ ತಮ್ಮ ಪುತ್ರ ರಾಮ್ ಚರಣ್ ಅವರ ದಾಖಲೆಯನ್ನೇ ಮುರಿದಂತಾಗಿದೆ ಚಿರಂಜೀವಿ.

ಇದನ್ನೂ ಓದಿ:ಒಂದೇ ದಿನ ರಚಿತಾ ರಾಮ್ ಎರಡು ಸಿನಿಮಾಗಳು ರಿಲೀಸ್; ಫ್ಯಾನ್ಸ್​​ಗೆ ಹಬ್ಬ

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಐದು ದಿನಗಳಲ್ಲಿ 200 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿದೆ. ಚಿರಂಜೀವಿ ಅವರ ಸಿನಿಮಾ ಒಂದು ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತ ಗಳಿಸಿರುವುದು ಇದೇ ಮೊದಲು. 2019 ರಲ್ಲಿ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಾಗಿನಿಂದಲೂ ಸಹ ಚಿರಂಜೀವಿಗೆ ಇಷ್ಟು ದೊಡ್ಡ ಜಯ ಲಭಿಸಿರಲಿಲ್ಲ. ಚಿರಂಜೀವಿ ನಟಿಸಿದ ಸಿನಿಮಾಗಳು ಸತತವಾಗಿ ಬಾಕ್ಸ್ ಆಫೀಸ್​​ನಲ್ಲಿ ಸೋಲುತ್ತಲೇ ಇದ್ದವು. ಆದರೆ ಇದೀಗ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೂಲಕ ಚಿರಂಜೀವಿಗೆ ಮತ್ತೆ ಗೆಲುವು ಲಭಿಸಿದೆ.

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಯನತಾರಾ ನಾಯಕಿ. ವಿಕ್ಟರಿ ವೆಂಕಟೇಶ್ ಸಹ ಸಿನಿಮಾನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯದ ಜೊತೆಗೆ ಸಖತ್ ಆಕ್ಷನ್ ಸಹ ಸಿನಿಮಾನಲ್ಲಿದೆ. ಈ ಸಿನಿಮಾನಲ್ಲಿ ವಿಂಟೇಜ್ ಚಿರಂಜೀವಿ ಕಾಣಿಸುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

U19 World Cup 2026: ಅತಿ ವೇಗದ, ಅತಿ ಕಿರಿಯ; ವಿಶ್ವದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ

Source link

ಬೆಂಗಳೂರು: 88 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರೇ ಭಾಗಿಯಾಗಿರುವುದು ನಾಚಿಗೇಡಿನ ವಿಷಯ; ಸಿಎಂ ಸಿದ್ದರಾಮಯ್ಯ – Kannada News | Bengaluru: It Is Shameful That Police Are Involved in 88 Criminal Cases, Says CM Siddaramaiah

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಭೆ

ಬೆಂಗಳೂರು, ಜನವರಿ 17: ಅಪರಾಧವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ, ಅಪರಾಧ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಕಳೆದ ಸಾಲಿನಲ್ಲಿ 88 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರೇ (police) ಭಾಗಿಯಾಗಿರುವುದು ನಾಚಿಗೇಡಿನ ವಿಷಯ. ಇದು ಸರ್ಕಾರಕ್ಕೆ ಮಾತ್ರವಲ್ಲ, ಪೊಲೀಸ್ ಇಲಾಖೆಗೂ ಕೆಟ್ಟ ಹೆಸರು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಿಡಿಸಿದ್ದಾರೆ.

ಇಂದು ಬೆಂಗಳೂರಿನ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರ ಕಚೇರಿಯಲ್ಲಿ ಆಯೋಜಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಕೆಲವು ಪೊಲೀಸ್​​ ಠಾಣೆಗಳು ಉತ್ತಮ ಕೆಲಸ ಮಾಡುತ್ತಿವೆ. ಇನ್ನೂ ಕೆಲವು ಠಾಣೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪೊಲೀಸ್​​ ಅಧಿಕಾರಿಗಳಿಗೆ ಗೊತ್ತಾಗದೇ ಕ್ರೈಂ ನಡೆಯಲು ಸಾಧ್ಯವಿಲ್ಲ, ಪೊಲೀಸರು ಬಲಾಢ್ಯರ ಕೈಗೊಂಬೆಯಂತೆ ಕೆಲಸ ಮಾಡಬಾರದು. ರಾಯಚೂರಿನ ಕವಿತಾಳ ಠಾಣೆ ದೇಶದಲ್ಲೇ 3ನೇ ಸ್ಥಾನ ಪಡೆದುಕೊಂಡಿದೆ‌ ಎಂದರು.

ಸಿಎಂ ಸಿದ್ದರಾಮಯ್ಯ ಟ್ವೀಟ್​

ನಮ್ಮಲ್ಲಿ ಕಳ್ಳತನ, ಸುಲಿಗೆ, ದರೋಡೆ ಪ್ರಕರಣ ಕಡಿಮೆ ಆಗುತ್ತಿದೆ. ಆದರೆ ಸೈಬರ್ ಕ್ರೈಂ ಮತ್ತು ಡ್ರಗ್ಸ್ ಪೆಡ್ಲಿಂಗ್ ಜಾಸ್ತಿ‌ ಆಗುತ್ತಿದೆ. ಡ್ರಗ್ಸ್ ಮುಕ್ತ ರಾಜ್ಯ ಮಾಡಬೇಕೆಂದು ನಮ್ಮ ಸರ್ಕಾರದಿಂದ ಹೋರಾಟ ಮಾಡಲಾಗುತ್ತಿದೆ. ಪೊಲೀಸರು ಸರಿಯಾಗಿ ಕೆಲಸ ಮಾಡಿದರೆ ಎಲ್ಲವನ್ನೂ ಮಟ್ಟಹಾಕಬಹುದು ಎಂದಿದ್ದಾರೆ.

ಕರ್ನಾಟಕ ಪೊಲೀಸರು ಏಕೆ ಮಾಡುತ್ತಿಲ್ಲ: ಸಿಎಂ ಪ್ರಶ್ನೆ

ಡ್ರಗ್ಸ್ ಮುಕ್ತಮಾಡಲು ವ್ಯಸನಿ ವಿಚಾರಣೆ ಮಾಡಿದರೆ ಮೂಲ ಮಾಹಿತಿ ಸಿಗುತ್ತದೆ. ಪೆಡ್ಲರ್​ ವಿಚಾರಣೆ ‌ಮಾಡಿದರೆ ಎಲ್ಲಿಂದ ಡ್ರಗ್ಸ್​ ಬಂತು ಅಂತಾ ಗೊತ್ತಾಗುತ್ತೆ‌. ಅಪರಾಧದಲ್ಲಿ ಭಾಗಿಯಾದ ವಿದೇಶಿಯರನ್ನು ಅವರ ದೇಶಕ್ಕೆ ವಾಪಸ್ ಕಳಿಸುವ ಕೆಲಸ ಮಾಡುತ್ತೇವೆ. ಪಿಐ, ಪಿಎಸ್​​ಐ ಸೇರಿ ಎಲ್ಲರ ಮೇಲೂ ಹಿರಿಯ ಅಧಿಕಾರಿಗಳು ನಿಗಾ ವಹಿಸಬೇಕು. ಮಹಾರಾಷ್ಟ್ರದ ಪೊಲೀಸರು ಬಂದು ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಮಾಡಿದ್ದಾರೆ. ಅದನ್ನು ಕರ್ನಾಟಕ ಪೊಲೀಸರು ಏಕೆ ಮಾಡುತ್ತಿಲ್ಲ. ಈ ರೀತಿ ಇನ್ಮುಂದೆ ಆಗಬಾರದು ಅಂತಾ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮನೆ ಮನೆಗೆ ಪೊಲೀಸ್ ಕಾರ್ಯಕ್ಕೆ ಮೂರನೇ ಸ್ಥಾನ

ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಸೈಬರ್ ಕ್ರೈಂ ತಡೆಗೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಮನೆ ಮನೆಗೆ ಪೊಲೀಸ್ ಕಾರ್ಯಕ್ಕೆ ನಮಗೆ ದೇಶದಲ್ಲಿ ಮೂರನೇ ಸ್ಥಾನ ಬಂದಿದೆ ಎಂದು ಹೇಳಿದರು.

ವರದಿ: ವಿಕಾಸ್​ ಕ್ರೈಂ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Weekly Career Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ – Kannada News | Weekly Career Horoscope Jan 18 25, 2026: Navigate Job Challenges and Achieve Success

18 ರಿಂದ 25 ರವರೆಗೆ ಉದ್ಯೋಗದಲ್ಲಿ ಹಲವಾರು ತಿರುವುಗಳು ಬರಲಿವೆ. ಸಮಸ್ಯೆಗಳನ್ನು ಬೆನ್ನೇರಿ ಹೊರಟರೆ ನಿಮ್ಮನ್ನು ಪ್ರಪಾತಕ್ಕೆ ಬೀಳಿಸಬಹುದು‌. ಎಷ್ಟು ಬೇಕೋ ಅಷ್ಟಕ್ಕೆ ಸ್ಪಂದಿಸಿ, ನಿಮ್ಮ ಗುರಿಯತ್ತ ಇರಿ.

ಮೇಷ ರಾಶಿ :

ಈ ವಾರ ಕೆಲಸದಲ್ಲಿ ಚಟುವಟಿಕೆ ಹೆಚ್ಚಾಗುತ್ತದೆ. ಹೊಸ ಜವಾಬ್ದಾರಿಗಳು ನಿಮ್ಮ ಸಾಮರ್ಥ್ಯ ಪರೀಕ್ಷಿಸಬಹುದು. ಆತುರದ ನಿರ್ಧಾರ ತಪ್ಪಿಸಿ. ಹಿರಿಯರ ಮಾರ್ಗದರ್ಶನ ಲಾಭಕರ. ಸ್ವಂತ ಪ್ರಯತ್ನದಿಂದ ಅವಕಾಶಗಳನ್ನು ರೂಪಿಸಬಹುದು. ಅಧಿಕಾರಿಗಳ ಗಮನ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ.

ವೃಷಭ ರಾಶಿ:

ಮೂರನೇ ವಾರದಲ್ಲಿ ವೃತ್ತಿಯಲ್ಲಿ ನಿಧಾನವಾದರೂ ಸ್ಥಿರ ಪ್ರಗತಿ ಕಾಣುತ್ತದೆ. ಹಣಕಾಸು ಸಂಬಂಧಿತ ವಿಚಾರಗಳಲ್ಲಿ ಜಾಗ್ರತೆ ಅಗತ್ಯ. ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಶ್ರಮಕ್ಕೆ ತಕ್ಷಣ ಫಲ ಕಾಣಿಸದಿದ್ದರೂ ನಿರಾಶರಾಗಬೇಡಿ. ವಾರಾಂತ್ಯಕ್ಕೆ ಒತ್ತಡ ಕಡಿಮೆಯಾಗುತ್ತದೆ. ಸ್ಥಿರತೆ ನಿಮ್ಮ ಬಲ.

ಮಿಥುನ ರಾಶಿ:

ನಿಮಗೆ ಈ ವಾರ ಸಂವಹನ, ಸಭೆ, ಬರವಣಿಗೆ, ಮಾರ್ಕೆಟಿಂಗ್ ಕೆಲಸಗಳಲ್ಲಿ ಯಶಸ್ಸು. ಹೊಸ ಸಂಪರ್ಕಗಳು ಭವಿಷ್ಯಕ್ಕೆ ಉಪಯುಕ್ತ. ಕೆಲಸದ ಒತ್ತಡ ಇದ್ದರೂ ಬುದ್ಧಿಚಾತುರ್ಯದಿಂದ ನಿಭಾಯಿಸುತ್ತೀರಿ. ಸಂದರ್ಶನ ಅಥವಾ ಪ್ರಸ್ತಾವನೆಗೆ ಉತ್ತಮ ಸಮಯ. ಏಕಾಗ್ರತೆ ಕಾಪಾಡಿಕೊಳ್ಳಿ.

ಕರ್ಕಟಕ ರಾಶಿ:

ನಾಲ್ಕನೇ ರಾಶಿಗೆ ಈ ವಾರ ಕೆಲಸದ ಸ್ಥಳದಲ್ಲಿ ಭಾವನಾತ್ಮಕತೆ ಹೆಚ್ಚಾಗಬಹುದು. ಸಹೋದ್ಯೋಗಿಗಳ ಮಾತುಗಳಿಂದ ಬೇಸರವಾಗುವ ಸಾಧ್ಯತೆ. ಶಾಂತವಾಗಿ ಕಾರ್ಯನಿರ್ವಹಿಸಿದರೆ ಸಮಸ್ಯೆ ತೀರಿಕೊಳ್ಳುತ್ತದೆ. ಕುಟುಂಬ ಬೆಂಬಲ ಮನೋಬಲ ನೀಡುತ್ತದೆ. ಹೊಣೆಗಾರಿಕೆ ಹೆಚ್ಚಾದರೂ ನಿಮ್ಮ ಶ್ರಮ ಗುರುತಿಸಲಾಗುತ್ತದೆ.

ಸಿಂಹ ರಾಶಿ:

ನಿಮ್ಮ ನೇತೃತ್ವದ ಗುಣ ಮೆಚ್ಚುಗೆ ಪಡೆಯುವ ವಾರ. ಗೌರವ, ಪ್ರಶಂಸೆ ದೊರೆಯಬಹುದು. ಅಧಿಕಾರ ಸಂಬಂಧಿತ ಕೆಲಸಗಳಲ್ಲಿ ಮುನ್ನಡೆ. ಆದರೆ ಅಹಂಕಾರ ಮತ್ತು ತ್ವರಿತ ನಿರ್ಧಾರ ತಪ್ಪಿಸಿ. ತಂಡದ ಸಹಕಾರದಿಂದ ದೊಡ್ಡ ಗುರಿ ಸಾಧಿಸುವ ಅವಕಾಶ ಇದೆ. ವೃತ್ತಿಯಲ್ಲಿ ಹೆಸರು ಹೆಚ್ಚಾಗುತ್ತದೆ.

ಕನ್ಯಾ ರಾಶಿ:

ನೀವು ಈ ವಾರ ಯೋಜನೆ, ಲೆಕ್ಕಪತ್ರ, ದಾಖಲೆ ಕೆಲಸಗಳಲ್ಲಿ ಒತ್ತಡದಿಂದ ಇರುವಿರಿ. ಸೂಕ್ಷ್ಮ ಪರಿಶೀಲನೆ ನಿಮ್ಮ ಶಕ್ತಿಯಾಗುತ್ತದೆ. ಕೆಲಸದ ಒತ್ತಡ ಇದ್ದರೂ ಫಲ ತೃಪ್ತಿದಾಯಕ. ಆರೋಗ್ಯದ ಕಡೆ ಸ್ವಲ್ಪ ಗಮನ ಅಗತ್ಯ. ಶಿಸ್ತು ಮತ್ತು ಸಮಯಪಾಲನೆ ನಿಮಗೆ ಪ್ರಗತಿಯ ದಾರಿ ತೋರಿಸುತ್ತದೆ.

ತುಲಾ ರಾಶಿ:

ಇದು ನಿಮಗೆ ಪಾಲುದಾರಿಕೆ ಮತ್ತು ಸಾಮೂಹಿಕ ಕಾರ್ಯದಲ್ಲಿ ಲಾಭ ನೀಡುವ ವಾರ. ಮಾತುಕತೆ, ಒಪ್ಪಂದಗಳಲ್ಲಿ ಜಯ. ನಿರ್ಧಾರಗಳಲ್ಲಿ ಸ್ಪಷ್ಟತೆ ಇರಲಿ. ವಿಳಂಬ ಮಾಡಿದರೆ ಅವಕಾಶ ಕೈತಪ್ಪಬಹುದು. ಸಮತೋಲನದ ನಿಲುವು ವೃತ್ತಿಯಲ್ಲಿ ಗೌರವ ತರುತ್ತದೆ. ಕಾನೂನು ಅಥವಾ ಕಲಾತ್ಮಕ ಕ್ಷೇತ್ರಗಳಲ್ಲಿ ಬೆಳವಣಿಗೆ.

ವೃಶ್ಚಿಕ ರಾಶಿ:

ನಿಮ್ಮ ಅತಿಯಾದ ಒಳಗಿನ ಒತ್ತಡ ಕೆಲಸದಲ್ಲಿ ಪ್ರತಿಫಲಿಸಬಹುದು. ಮೌನವಾಗಿ ಮಾಡಿದ ಶ್ರಮ ಫಲ ನೀಡುತ್ತದೆ. ಆಂತರಿಕ ರಾಜಕೀಯದಿಂದ ದೂರವಿರುವುದು ಒಳಿತು. ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಸಂಶೋಧನೆ, ತನಿಖೆ ಅಥವಾ ತಾಂತ್ರಿಕ ಕೆಲಸಗಳಲ್ಲಿ ಮುನ್ನಡೆ ಸಾಧ್ಯ.

ಧನು ರಾಶಿ:

ಈ ವಾರ ಯಾರದೋ ಮೂಲಕ ಹೊಸ ಅವಕಾಶಗಳ ಸೂಚನೆ ಸಿಗುತ್ತದೆ. ತರಬೇತಿ, ಪ್ರಯಾಣ ಅಥವಾ ವಿದೇಶಿ ಸಂಪರ್ಕ ಲಾಭಕರ. ಭವಿಷ್ಯದ ವೃತ್ತಿಗೆ ಸ್ಪಷ್ಟ ದಿಕ್ಕು ದೊರೆಯುತ್ತದೆ. ಉತ್ಸಾಹ ಹೆಚ್ಚಾಗುತ್ತದೆ. ಆದರೆ ಅತಿಯಾದ ನಿರೀಕ್ಷೆ ತಪ್ಪಿಸಿ. ಕಲಿಕೆ ಮತ್ತು ಜ್ಞಾನ ವೃದ್ಧಿಗೆ ಉತ್ತಮ ವಾರ.

ಮಕರ ರಾಶಿ:

ಬೇಸರದಿಂದ ಇರುವ ನಿಮಗೆ ಈ ವಾರ ಶ್ರಮಕ್ಕೆ ಫಲ ದೊರೆಯುವ ಸಮಯ. ಹಿರಿಯರ ವಿಶ್ವಾಸ ಮತ್ತು ಬೆಂಬಲ ಸಿಗುತ್ತದೆ. ಹುದ್ದೆ ಅಥವಾ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ. ಕೆಲಸದ ಒತ್ತಡ ಇದ್ದರೂ ಸಹನೆ ನಿಮ್ಮ ಗೆಲುವು. ಸರ್ಕಾರಿ ಅಥವಾ ಆಡಳಿತ ಕ್ಷೇತ್ರದಲ್ಲಿ ಪ್ರಗತಿ ಕಾಣಿಸುತ್ತದೆ.

ಕುಂಭ ರಾಶಿ:

ನಿಮ್ಮ ಹೊಸ ಆಲೋಚನೆಗಳು ಮತ್ತು ವಿಭಿನ್ನ ಪ್ರಯತ್ನಗಳು ಮೆಚ್ಚುಗೆ ಪಡೆಯುತ್ತವೆ. ತಂತ್ರಜ್ಞಾನ, ವಿಜ್ಞಾನ, ಇನೋವೇಶನ್ ಕ್ಷೇತ್ರದಲ್ಲಿ ಮುನ್ನಡೆ. ತಂಡದಲ್ಲಿ ನಿಮ್ಮ ಪಾತ್ರ ಮಹತ್ವ ಪಡೆಯುತ್ತದೆ. ದೊಡ್ಡ ಪ್ರಯಾಣದ ಭಂಗ ತಪ್ಪಿಸಿದರೆ ದೊಡ್ಡ ಸಾಧನೆ ಸಾಧ್ಯ. ಸಾಮಾಜಿಕ ಕಾರ್ಯಗಳಿಂದ ಹೆಸರು ಬರುತ್ತದೆ.

ಮೀನ ರಾಶಿ:

ಈ ವಾರ ಸೃಜನಶೀಲತೆ ಮತ್ತು ಕಲ್ಪನೆ ಕೆಲಸಕ್ಕೆ ಹೊಸ ರೂಪ ನೀಡುತ್ತದೆ. ಕಲೆ ಅಥವಾ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತೃಪ್ತಿ. ನಿರ್ಧಾರಗಳಲ್ಲಿ ಗೊಂದಲ ಸಾಧ್ಯ, ಸ್ಪಷ್ಟ ಗುರಿ ಹಿಡಿಯಿರಿ. ಶಾಂತ ಮನಸ್ಸಿನಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ.

– ಲೋಹಿತ ಹೆಬ್ಬಾರ್ – 8762924271 (what’s app only)

Source link

Exit mobile version